Friday, October 29, 2010

WORK IS WORSHIP (ಕಾಯಕದ ಮಹತ್ವ ಬದುಕಿನ ಪರಾಕಾಷ್ಠೆ---)




" ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು."

ಕಾಯಕವು ನಮ್ಮ ದೈಹಿಕ ಮತ್ತು ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವುದು. ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡುವುದು. ಮಾನಸಿಕ ಒತ್ತಡಗಳಿಂದ ರಕ್ಷಿಸುವುದು. ಪರಾವಲಂಬಿಗಳಾಗದಂತೆ ನೋಡಿಕೊಳ್ಳುವುದು. ಕೊನೆಗೆ ನಮ್ಮನ್ನು ಸ್ವತಂತ್ರಧೀರರನ್ನಾಗಿ ಮಾಡುವುದು. "ಕೂಡಲಸಂಗನ ಶರಣರು ಸ್ವತಂತ್ರ ಧೀರರು" ಎಂದು ಬಸವಣ್ಣನವರು ಹೇಳುತ್ತಾರೆ. ಕಾಯಕ ಮಾಡದವನಿಗೆ ಹಸಿವು, ರುಚಿ, ವಿಶ್ರಾಂತಿ ಮತ್ತು ನಿದ್ರೆಯ ಮಹತ್ವ ಗೊತ್ತಾಗುವುದಿಲ್ಲ. ಕಾಯಕ ಜೀವಿಯ ಹಸಿವು ಎಲ್ಲ ಆಹಾರ ಪದಾರ್ಥಗಳನ್ನು ಪ್ರಸಾದವಾಗಿಸುತ್ತದೆ. ರುಚಿಕರವಾಗಿಸುತ್ತದೆ. ಆತನಿಗೆ ವಿಶ್ರಾಂತಿ ಮತ್ತು ನಿದ್ರೆಯ ಸುಖ ಸಹಜವಾಗಿಯೇ ಸಿಗುತ್ತದೆ. ಸತ್ಯಶುದ್ಧ ಕಾಯಕದಿಂದ ಮನಸ್ಸು ಪವಿತ್ರವಾಗಿರುತ್ತದೆ. ಆದ್ದರಿಂದ ಕಾಯಕ ತತ್ತ್ವವು ವಿಶ್ವಮಾನ್ಯವಾಗಿದೆ.
ಬಲ್ಗೇರಿಯದ ಮಹಾನ್ ಕಲಾವಿದ ಜಾರ್ಜಿ ದಿಮಿತ್ರೊವ್ ಒಂದು ಬೃಹತ್ ಗಾತ್ರದ ತೈಲಚಿತ್ರ "ಕಾಯಕದಿಂದ ವಿಶ್ರಾಂತಿಯ ಆನಂದ ಲಭಿಸುತ್ತದೆ" ಎಂಬುದನ್ನು ಸೂಚಿಸುತ್ತದೆ. ರೈತ ತನ್ನ ಹೆಂಡಿರು ಮಕ್ಕಳೊಡನೆ ರಾಶಿ ಮಾಡಿದ್ದಾನೆ. ರಾತ್ರಿ ರಾಶಿಯ ಸುತ್ತ ಎಲ್ಲರೂ ಮಲಗಿದ್ದಾರೆ. ದುಡಿದ ದೇಹ ವಿಶ್ರಾಂತಿ ಬಯಸಿದಾಗ ಮಾತ್ರ ಚೆನ್ನಾಗಿ ನಿದ್ರೆ ಬರುವುದು ಎಂದು ಸಾರುವ ಆ ತೈಲ ಚಿತ್ರಕ್ಕೆ ದಿಮಿತ್ರೊವ್ "ವಿಶ್ರಾಂತಿ" ಎಂದು ಹೆಸರಿಟ್ಟಿದ್ದಾನೆ. ಆ ರೈತ ಕುಟುಂಬ ಗಾಢ ನಿದ್ರೆಯಲ್ಲೂ ರಾಶಿ ಕಾಯುವ ಕಾಯಕ ಮಾಡುತ್ತಿದೆ!
"ಕಾಯಕದ ಮೂಲಕ ಗಳಿಸಿದ ಒಂಡು ಡಾಲರಿನ ಮೌಲ್ಯ ಪುಕ್ಕಟೆ ಸಿಕ್ಕ ಐದು ಡಾಲರಿಗಿಂತ ಬಹಳಷ್ಟು ಹೆಚ್ಚಿಗೆ ಇರುತ್ತದೆ ಎಂಬುದನ್ನು ನನ್ನ ಮಗನಿಗೆ ಕಲಿಸಿರಿ" ಎಂದು ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ .
 "ರಾಟೆ ತಿರುಗಿಸಲು ನನಗೆ ಶಕ್ತಿ ಇದ್ದು, ಜಪಮಣಿಗಳನ್ನು ಎಣಿಸುವುದು ಅಥವಾ ರಾಟೆ ತಿರುಗಿಸುವುದು ಇವುಗಳ ನಡುವೆ ಆಯ್ಕೆ ಮಾಡಬೇಕಾದಲ್ಲಿ ನಾನು ಬಡತನ ಮತ್ತು ಉಪವಾಸ ದೇಶವನ್ನು ಗುಪ್ತವಾಗಿ ಬೆನ್ನಟ್ಟಿರುವುದನ್ನು ಕಾಣುತ್ತಿರುವವರೆಗೆ ಖಂಡಿತವಾಗಿಯೂ ರಾಟೆಯ ಪರವಾಗಿ ತೀರ್ಮಾನಿಸುತ್ತೇನೆ ಮತ್ತು ಅದನ್ನೇ ನಾನು ನನ್ನ ಜಪಸರವನ್ನಾಗಿ ಮಾಡಿಕೊಳ್ಳುತ್ತೇನೆ." ಎಂದು ಗಾಂಧೀಜಿ
ತಮ್ಮ ಕೈಯಿಂದ ಸಂಪಾದಿಸಿದುದಕ್ಕಿಂತ ಉತ್ತಮ ಆಹಾರವನ್ನು ಎಂದೂ ಯಾರೂ ತಿಂದಿಲ್ಲ" ಎಂದು ಮುಹಮ್ಮದ್ ಪೈಗಂಬರರು ಹೇಳುತ್ತಾರೆ.
"ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ"ಎಂದು ಆಯ್ದಕ್ಕಿ ಲಕ್ಕಮ್ಮ
ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾಳೆ.
ಬಡ ವಚನಕಾರರ ಆತ್ಮವಿಶ್ವಾಸ ಶ್ರೀಮಂತರನ್ನು ದಂಗುಬಡಿಸುತ್ತದೆ.
"ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು."

ಎಂದು ಬಸವಣ್ಣನವರು ಕಾಯಕಜೀವಿಗಳ ವ್ಯಕ್ತಿತ್ವದ ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಅವರು ಘನಮನದವರೂ ಪರಿಶುದ್ಧರೂ ಸ್ವತಂತ್ರ ಧೀರರೂ ಆಗಿದ್ದಾರೆ.
ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು"
ಎಂದು ನುಲಿಯ ಚಂದಯ್ಯನವರು ಕಾಯಕದ ಮಹತ್ವವನ್ನು ಸಾರಿದ್ದಾರೆ.
ಗುರು-ಲಿಂಗ-ಜಂಗಮಕ್ಕೆ ಕಾಯಕವೇ ಆಧಾರವಾಗಿದೆ ಎಂದು ಮನಂಬುಗುವಂತೆ ಹೇಳಿದ್ದಾರೆ.
"ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು."
ಎಂದು ಆಯ್ದಕ್ಕಿ ಮಾರಯ್ಯ
ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ.
"ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ."

ಹುಲ್ಲಿನ ಹೊರೆ ಹೊರುವ ಕಾಯಕದ ಸೋಮಯ್ಯ ಬದುಕೆಂಬುದು ಜೈವಿಕ ಪ್ರಕ್ರಿಯೆ ಎಂದು ಹೀಗೆ ಸೂಚಿಸುತ್ತಾನೆ.
"ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ."
ಆ ಮೂಲಕ ಸಾವನ್ನು ಗೆಲ್ಲುತ್ತಾನೆ. ದೇವರ ಹಂಗಿಗೆ ಒಳಗಾಗದೆ ದೇವರನ್ನು ಆರಾಧಿಸುವ ಕ್ರಮವನ್ನು ನಮಗೆ ಕಲಿಸಿಕೊಟ್ಟಿದ್ದಾನೆ. ಜನಸಾಮಾನ್ಯರು ಶರಣಸಂಕುಲ ಸೇರಿ ಹೀಗೆ ಆತ್ಮಸ್ಥೈರ್ಯ ಪಡೆದು ಅಸಾಮಾನ್ಯರಾಗುವಲ್ಲಿ ಬಸವಣ್ಣನವರ ಶ್ರಮ ಅಡಗಿದೆ. ಅಂತೆಯೆ ಶರಣರಿಗೆ ಬದುಕೆಂಬುದು ದುಃಖದ ಆಗರವೆಂದು ಅನಿಸುವುದಿಲ್ಲ. ಶರಣರು ಸವಾಲನ್ನು ಎದುರಿಸುತ್ತ ಆನಂದವನ್ನು ಅನುಭವಿಸುವವರು.ಎಂದು ಉರಿಲಿಂಗಪೆದ್ದಿಗಳ ಮುಣ್ಯಸ್ತ್ರೀ ಕಾಳವ್ವೆ ಹೇಳುತ್ತಾಳೆ.
ಕಾಯಕದಲ್ಲಿ ಮುಕ್ತಿ ಕಾಣುವ ಪರಿ ಇದು. ಒಬ್ಬ ದಲಿತ ಮಹಿಳೆ ಶರಣಸಂಕುಲದೊಳಗೆ ಬಂದು ಇಷ್ಟೊಂದು ಮಹತ್ತರವಾದ ವಿಚಾರವನ್ನೊಳಗೊಂಡ ವಚನರಚನೆ ಮಾಡಿದ್ದಾಳೆಂದರೆ ಬಸವಣ್ಣನವರು ಜಗತ್ತಿನಲ್ಲಿ ಮೊದಲಬಾರಿಗೆ ಯಾವರೀತಿ ವಯಸ್ಕರ ಶಿಕ್ಷಣದ ವ್ಯವಸ್ಥೆ ಮಾಡಿರಬಹುದು ಎಂಬುದರ ಕುರಿತು ಸಂಶೋಧನೆಯಾಗಬೇಕಿದೆ. ಶರಣರ ವಚನಗಳು ಮತ್ತು ತತ್ತ್ವ ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂಬುದನ್ನು ಮರೆಯಬಾರದು. ವಚನಗಳು ಅನನ್ಯವಾಗಿರುವುದು ಇದೇ ಕಾರಣದಿಂದ. ಅನೇಕ ವಚನಕಾರರು ತಮ್ಮ ಕಾಯಕಗಳ ಅನುಭದ ಮೂಲಕವೇ ಅನುಭಾವಿಯಾಗಿದ್ದಾರೆ. ಅವರ ವಚನಗಳಲ್ಲಿನ ಪ್ರತಿಮೆ, ಪ್ರತೀಕ ಮತ್ತು ಸಂಕೇತಗಳು ಅವರವರ ಕಾಯಕಗಳ ಅನುಭವದ ಮೂಲಕವೇ ಸೃಷ್ಟಿಯಾಗಿವೆ. ಕಾಯಕದ ವಸ್ತುಗಳು ಹೀಗೆ ಕಾವ್ಯ ಪ್ರತಿಮೆಗಳಾಗುತ್ತಲೇ ತತ್ತ್ವವನ್ನು ಸ್ಫುರಿಸತೊಡಗುತ್ತವೆ.
"ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ? ಎಂದು ಕನ್ನಡಿ ಕಾಯಕದ ರೇವಮ್ಮ ಹೇಳುತ್ತಾಳೆ.
 "ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ" ಎಂದು ಕದಿರ ರೆಮ್ಮವ್ವೆ ತಿಳಿಸುತ್ತಾಳೆ.
"ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ" ಎಂದು ಕೊಟ್ಟಣದ ಸೋಮಮ್ಮನ ವಚನ ತಿಳಿಸುತ್ತದೆ.
 "ಹದ ಮಣ್ಣಲ್ಲದೆ ಮಡಕೆಯಾಗಲಾರದು" ಎಂದು ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ ತಿಳಿಸುತ್ತಾಳೆ
. "ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ, ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ" ಎಂದು ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಎಚ್ಚರಿಸುತ್ತಾಳೆ.
 "ಲಂಚವಂಚನಕ್ಕೆ ಕೈಯಾನದ ಭಾಷೆ! ಬಟ್ಟೆ (ಬೀದಿ)ಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದಡೆ ಕೈ ಮುಟ್ಟಿ ಎತ್ತಿದೆನಾದಡೆ, ಅಯ್ಯಾ ನಿಮ್ಮಾಣೆ! ಎಂದು ಕಸಗುಡಿಸುವ ಸತ್ಯಕ್ಕ ಕಾಯಕನಿಷ್ಠೆಯನ್ನು ಸೂಚಿಸುತ್ತಾಳೆ.
ಸ್ವಾವಲಂಬಿಯಾಗಿಸುವ ಕಾಯಕವು ಪ್ರಶ್ನಿಸುವ ಶಕ್ತಿಯನ್ನು ಕೊಡುತ್ತದೆ.
 "ನಿಮ್ಮ ಗುರುತನಕ್ಕಿದು ಪಥವೆ, ನಾರಿಯರಿಬ್ಬರೊಡನೆ ಇಪ್ಪುದು? ಶಿವಶಿವಾ ನಿಮ್ಮ ನಡವಳಿ!" ಎಂದು ಸತ್ಯಕ್ಕ ಶಿವನನ್ನೇ ಪ್ರಶ್ನಿಸುತ್ತಾಳೆ.
 "ಅಂಗ ವಿಕಾರ ಸಾಕೇಳಿ" ಎಂದು ಎಚ್ಚರಿಕೆಯ ಕಾಯಕದ ಮುಕ್ತಿನಾಥಯ್ಯ ಎಚ್ಚರಿಸುತ್ತಾನೆ.
 "ಈ ಸೀರೆಯ ನೆಯ್ದವ ನಾನೊ ನೀನೋ ರಾಮನಾಥ" ಎಂದು ಜೇಡರ ದಾಸಿಮಯ್ಯ ಕೇಳುತ್ತಾರೆ.
"ಕಾಯವೆಂಬ ಡಕ್ಕೆಯ ಮೇಲೆ ಜೀವವೆಂಬ ಹೊಡೆಚೆಂಡು ಬೀಳೆ ತ್ರಿವಿಧವ ತಾ ತಾಯೆಂಬ ಆಸೆ ಹಿಂಡಿ ಡಿಂಡಿಯೆನುತ್ತಿದೆ" ಎಂದು ಡಕ್ಕೆಯ ಬೊಮ್ಮಣ್ಣ ಹಾಡುತ್ತಾನೆ.
"ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ" ಏಕಚಿತ್ತನಾಗಿರಬೇಕು ಎಂಬುದು ತುರುಗಾಹಿ ರಾಮಣ್ಣನ ಆಶಯವಾಗಿದೆ.
"ನಾದ ಹರಿದು ಸ್ವರವು ಸೂಸಿದ ಬಳಿಕ ಈ ಬಹುರೂಪ ಬಲ್ಲವರಾರೋ" ಎಂದು ಬಹುರೂಪಿ ಚೌಡಯ್ಯ ಬದುಕಿನ ನಿಗೂಢತೆಯನ್ನು ವ್ಯಕ್ತಪಡಿಸುತ್ತಾನೆ.
 "ಆರು ದರ್ಶನವೆಲ್ಲ ಎನ್ನ ಬಾಚಿಯ ಕಲೆ ಮಿಕ್ಕಾದ ಮೀರಿದ ಅವಧೂತರುಗಳೆಲ್ಲ ಎನ್ನ ಉಳಿಯೊಳಗಣ ಒಡಪು" ಎಂದು ಹೇಳುವ ಬಾಚಿ ಕಾಯಕದ ಬಸವಣ್ಣನಿಗೆ ಕಾಯಕದ ಮೂಲಕವೇ ದರ್ಶನವಾಗಿದೆ.
"ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷವಾದ ಪರಮೇಶ್ವರನ ಕಂಡು, ಇತ್ತಲೇಕಯ್ಯಾ ಕಾಯದ ತಿತ್ತಿಯ ಹೊತ್ತಾಡುವನ ಮುಂದೆ, ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು" ಎಂದು ಮಾದಾರ ಧೂಳಯ್ಯ ಶಿವನನ್ನೇ ಗದರಿಸುತ್ತಾನೆ.
ಆನೆ ಕುದುರೆ ಭಂಡಾರವಿರ್ದಡೇನೊ ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು ಮಲಗುವುದರ್ಧ ಮಂಚ. ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ" ಎಂದು ಕಾಶ್ಮೀರದಿಂದ ಬಂದ ದೊರೆ ಮಹಾದೇವ ಭೂಪಾಲ (ಮೋಳಿಗೆ ಮಾರಯ್ಯ) .ಸಂಪತ್ತಿನ ಆನಂದಕ್ಕಿಂತ ಕಾಯಕದ ಆನಂದ ಮಹತ್ವದ್ದು ಎಂಬುದನ್ನು ಸೂಚಿಸುತ್ತಾರೆ.
 "ಸಕಲೇಂದ್ರಿಯವೆಂಬ ಹಿಂಡು ಮಂದೆಯಾಗಿವೇಕೊ. ಇದರ ಸಂಗವ ಬಿಡಿಸು ನಿಮ್ಮ ನಿಜದಂಗವ ತೋರಿ." ಎಂಬುದು ವೀರಗೊಲ್ಲಾಳನ ಬಯಕೆಯಾಗಿದೆ.
 "ನೆಲ್ಲು ನೆಲದಲ್ಲಿಯೆ ಅಳಿದು ಹುಲ್ಲಿನ ಒಡಲಲ್ಲಿಯೆ ಜನಿಸಿ ಆ ಹುಲ್ಲ ತನ್ನೊಳಗಿರಿಸಿದ ಭೇದವ ನೋಡ" ಎಂದು ಹೊಡೆಹುಲ್ಲ ಬಂಕಣ್ಣ ತನ್ನ ಕಾಯಕದ ಮೂಲಕ ಬಂದ ಜ್ಞಾನದಿಂದಲೇ ತತ್ತ್ವಜ್ಞಾನವನ್ನು ಉಸುರುತ್ತಾನೆ.


"ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ
ವ್ಯವಹರಿಸುವುದಕ್ಕೆ ವೈಶ್ಯನಲ್ಲ
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ
ಕಾಮಭೀಮಜೀವಧನದೊಡೆಯ ನೀನೆ ಬಲ್ಲೆ."

ಕಾಯಕವು ಮಾನವ ಏಕತೆಯನ್ನು ಸಾಧಿಸುವ ಮೂಲಮಂತ್ರವಾಗಿದೆ. ಕಾಯಕವು ಭೂಲೋಕದ ಮಹತ್ವವನ್ನು ತಿಳಿಸುತ್ತದೆ. ಈ ಭೂಮಿಯನ್ನು ಬದುಕಲು ಹೆಚ್ಚು ಯೋಗ್ಯವಾಗುವಂತೆ ಮಾಡುತ್ತದೆ. ಕಾಯಕವು ಮಾನವರ ಮಧ್ಯದ ಅಂತಸ್ತುಗಳನ್ನು ಒಡೆದು ಹಾಕುತ್ತದೆ. ಕಂದಕಗಳನ್ನು ತುಂಬುತ್ತದೆ. ಕಾಯಕ ಮಾಡುವುದೆಂದರೆ ಬದುಕನ್ನು ಪ್ರೀತಿಸುವುದು.


"ದೇವ ಸಹಿತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡಡೆ
ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ
ನಿಮ್ಮ ರಾಣಿವಾಸದಾಣೆ."

ಹೀಗೆ ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ.
"ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ
ಹರದ ಕುಳಿತಿರ್ದ ನಮ್ಮ ಮಹಾದೇವ ಸೆಟ್ಟಿ.
ಒಮ್ಮನವಾದಡೆ ಒಡನೆ ನುಡಿವನು,
ಇಮ್ಮನವಾದಡೆ ನುಡಿಯನು,
ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ,
ಜಾಣ ನೋಡವ್ವ ನಮ್ಮ ಕೂಡಲಸಂಗಮದೇವ."


ಲೋಕ ತಾನಾದ ಬಳಿಕ
ಲೋಕದ ಸೊಮ್ಮು ತನಗೇಕಯ್ಯಾ.
ಪರುಷ ತಾನಾದ ಬಳಿಕ
ಸುವರ್ಣದ ಸೊಮ್ಮು ತನಗೇಕಯ್ಯಾ.
ಧೇನು ತಾನಾದ ಬಳಿಕ
ಅನ್ಯ ಗೋವಿನ ಸೊಮ್ಮು ತನಗೇಕಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನ."

ಹೀಗೆ ಸಿದ್ಧರಾಮ ಹೇಳುವ ಹಾಗೆ ದಾಸೋಹಂಭಾವವು ಸಹಜವಾಗಿಯೆ ನಮ್ಮನ್ನು ವಿಶ್ವಮಾನವರನ್ನಾಗಿ ಮಾಡುತ್ತದೆ. ಎಲ್ಲ ಐಹಿಕ ದುರಾಸೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಆದರೆ ಜಂಗಮ (ಸಾಮಾಜಿಕ) ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಇದೇ ಬಸವಧರ್ಮದ ವೈಶಿಷ್ಟ್ಯ.

"ಶಿವಭಕ್ತರೇ ಅಧಿಕರು ನೋಡಯ್ಯಾ
ಇದಕ್ಕೆ ಅಧಿಕವಾಗಿ ಜಂಗಮವ ಕಂಡೆ.
ಈ ದ್ವಿವಿಧವನೊಂದೆ ಎಂದು ನಂಬಿದೆಕೂಡಲಸಂಗಮದೇವಾ."


ಕಾಲಿಲ್ಲದವಂಗೆ ಕಾಲು ಕೊಟ್ಟೆ ಬಸವಾ,
ಕಣ್ಣಿಲ್ಲದವಂಗೆ ಕಣ್ಣ ಕೊಟ್ಟೆ ಬಸವಾ,
ಎನ್ನ ಕಣ್ಣು ಕಾಲಿಂಗೆ ನೀನೆಯಯ್ಯ ಬಸವಾ,
ಕಪಿಲಸಿದ್ಧಮಲ್ಲಿನಾಥಯ್ಯಾ.-ಸಿದ್ಧರಾಮ


ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕಡೆದಡೆ, ದೇವರೆತ್ತ ಹೋದರೊ?
ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರಾ.-ಅಲ್ಲಮಪ್ರಭುದೇವರು

ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ.
ನುಡಿ ಲೇಸು ನಡೆಯಧಮವಾದಲ್ಲಿ,
ಅದು ಬಿಡುಗಡೆಯಿಲ್ಲದ ಹೊಲೆ.
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೆ ಕುಲ, ಅನಾಚರವೆ ಹೊಲೆ.
ಇಂತೀ ಉಭಯವ ತಿಳಿದರಿಯಬೇಕು.
ಕೈಯುಳಿಕತ್ತಿ ಅಡಿಗೂಂಟಕ್ಕೆ ಅಡಿಯಾಗಬೇಡ,
ಅರಿ ನಿಜಾತ್ಮಾರಾಮನಾ.-ಮಾದಾರ ಚೆನ್ನಯ್ಯ

ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ;
ಇರಿದು ಮೆರೆಯುವುದಕ್ಕೆ ಕ್ಷತ್ರಿಯನಲ್ಲ;
ವ್ಯವಹರಿಸುವುದಕ್ಕೆ ವೈಶ್ಯನಲ್ಲ;
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ
ಕಾಮಭೀಮಜೀವಧನದೊಡೆಯ ನೀನೆ ಬಲ್ಲೆ.-ಒಕ್ಕಲಿಗ ಮುದ್ದಣ್ಣ


ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು? ಫಲವೇನು?
ಅವರ ದುಃಖವೆನ್ನ ದುಃಖ ಅವರ ಸುಖವೆನ್ನ ಸುಖ
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯಾ.-ಬಸವಣ್ಣ

“ನೋಟದ ಭಕ್ತಿ ಬಸವಣ್ಣನಿಂದಾಯಿತ್ತು,
ಕೂಟದ ಜ್ಞಾನ ಬಸವಣ್ಣನಿಂದಾಯಿತ್ತು ಕಾಣಾ.
ಎಲ್ಲಿಯ ಶಿವಜ್ಞಾನ ಎಲ್ಲಿಯ ಮಟ ಕೂಟ ಬಸವನಲ್ಲದೆ
ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಧರ್ಮವಯ-ಕಪಿಲಸಿದ್ಧಮಲ್ಲಿನಾಥಯ.

ಎನ್ನ ತನು-ಮನ-ಪ್ರಾಣಂಗಳು
ಶುದ್ಧವಾದವು ಬಸವಣ್ಣಾ ನಿಮ್ಮ ಧರ್ಮದಿಂದ.
ಇಂತಿವೆಲ್ಲವೂ ಶುದ್ಧವಾದವು ಕಲಿದೇವಾ
ನಿಮ್ಮ ಶರಣ ಸಂಗನಬಸವಣ್ಣನಾ ಧರ್ಮದಿಂದ.”

ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಯಲನಾ ಬಣ್ಣ ಶೃಂಗರಿಸಲು ಬಯಲು ಸ್ವರೂಪುಗೊಂಡಿತ್ತು.
ಅಂತಪ್ಪ ಸ್ವರೂಪಿನ ಬೆಡಗು ತಾನೆ
ನಮ್ಮ ಗುಹೇಶ್ವರ ಲಿಂಗದ ಪ್ರಥಮಭಿತ್ತಿ."



ಹೀಗೆ ವಚನ ಸಾಹಿತ್ಯ ಈ ಜಗತ್ತಿನ ಗೌರವ ಕಾಪಾಡುತ್ತದೆ. ಭೂಮಿಯ ಮಹತ್ವ ಸಾರುತ್ತದೆ. ಲೋಕದ ಜನರ ಹಿತಚಿಂತನೆ ಮಾಡುತ್ತದೆ.

ಮಾನವರ ಹಿತ ಕಾಪಾಡುವುದೇ ಸಾಹಿತ್ಯದ ಮುಖ್ಯ ಉದ್ದೇಶವಾಗಿದೆ,ಎಲ್ಲ ಜನಸಮುದಾಯಗಳ ಆಸ್ತಿಯಾಗಿವೆ. ಈ ಆಸ್ತಿಯನ್ನು ಜಗತ್ತಿಗೆ ಹಂಚುವುದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯ ಎ೦ದು ತಿಳಿಯೊಣ----ನೀಲಾ೦ಜನ

.

No comments:

Post a Comment