Friday, October 29, 2010

ಅಕ್ಕನ ವಚನಗಳು - 301 ರಿಂದ 368 ರವರೆಗೆ

೩೦೧.
ಕಾಮನ ತಲೆಯ ಕೊರೆದು, ಕಾಲನ ಕಣ್ಣ ಕಳೆದು
ಸೋಮಸೂರ್ಯರ ಹರಿದು ಹುಡಿಮಾಡಿ ತಿಂಬವಳಿಂಗೆ
ನಾಮವನಿಡಬಲ್ಲವರಾರು ಹೇಳಿರೆ!
ನೀ ಮದುವಳಿಗನಾಗಿ
ನಾ ಮದುವಳಿಗಿತಿಯಾಗಿ
ಯವನ(=ಆನಲನ?) ಕೂಡುವ ಮರುತನಂತೆ (?) ನೋಡಾ,
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

೩೦೨.
ಬಸವನ ಭಕ್ತಿ ಕೊಟ್ಟಣದ ಮನೆ
ಸಿರಿಯಾಳನ ಭಕ್ತಿ ಕಸಬಗೇರಿ
ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ
ಉಳಿದಾದ[+ಟ}ಮಟ ಉದಾಸೀನ ದಾಸೋಹ
ಮಾಡುವವರ ದೈನ್ಯವೆಂಬ ಭೂತ ಸೋಂಕಿತು
ಮಣ್ಣಿನ ಮನೆಯ ಕಟ್ಟಿ
ಮಾಯಾಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ
ಮಾಡುವ ಮಾಟ
ಭಕ್ತನಲ್ಲಿ ಉಂಡು ಉದ್ದಂಡ ವೃತ್ತಿಯಲ್ಲಿ
ನಡೆದವರು ಶಿವನಲ್ಲ
ಇವರು ದೇವಲೋಕ ಮರ್ತ್ಯಲೋಕಕ್ಕೆ ಹೊರಗು
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ,
ನನ್ನ ಭಕ್ತಿ ನಿನ್ನೊಳಗೈಕ್ಯವಾಯಿತಾಗಿ
ನಿರ್ವಯಲಾದೆ ಕಾಣಾ!

೩೦೩.
ಅನ್ನವ ನೀಡುವವರಿಗೆ ಧಾನ್ಯವೆ [ಶಿವ]ಲೋಕ
ಅರ್ಥವ ಕೊಡುವವರಿಂಗೆ ಪಾಷಾಣವೆ [ಶಿವ]ಲೋಕ
ಹೆಣ್ಣು-ಹೊನ್ನು-ಮಣ್ಣು ಮೂರನೂ
ಕಣ್ಣಿನಲ್ಲಿ ನೋಡಿ, ಕಿವಿಯಲಿ ಕೇಳಿ
ಕೈ[ಯಲಿ] ಮುಟ್ಟಿ ಮಾಡುವ ಭಕ್ತಿ
ಸಣ್ಣವರ ಸಮಾರಾಧನೆಯಾಯಿತು
ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

೩೦೪.
ನಿತ್ಯ ತೃಪ್ತಂಗೆ ನೈವೇದ್ಯದ ಮಜ್ಜನದ ಹಂಗೇತಕ್ಕೆ?
ಸುರಾಳ-ನಿರಾಳಂಗೆ ಮಜ್ಜನದ ಹಂಗೇತಕ್ಕೆ?
ಸ್ವಯಂಜ್ಯೋತಿರ್ಮಯಂಗೆ ದೀಪಾರಾಧನೆಯ ಹಂಗೇತಕ್ಕೆ?
ಸುವಾಸನಸೂಕ್ಷ್ಮಗಂಧಕರ್ಪೂರಗೌರಂಗೆ
ಪುಷ್ಪದ ಹಂಗೇತಕ್ಕೆ?
ಮಾಟದಲಿ ಮನನಂಬುಗೆ ಇಲ್ಲದ
ಅಹಂಕಾರಕೀಡಾದ, ಭಕ್ತಿಯೆಂಬ ಪ್ರಸಾರವನಿಕ್ಕಿ
ಹೊಲೆ ಹದಿನೆಂಟು ಜನ್ಮವ ಹೊರೆವುದರಿಂದ
ಅಂಗೈಯಲೊರಿಸಿ ಮುಕ್ತಿಯ
ಮೂಲ ಶಿಖಿರಂಧ್ರದ (?) ಕಾಮನ ಸುಟ್ಟು
ಶುದ್ಧ ಸ್ಪಟಿಕ ಸ್ವಯಂಜ್ಯೋತಿಯನು
ಸುನ್ನಾಳ[=ಸುಷುಮ್ನಾನಾಳ?]ದಿಂದ
ಹರಿಕ್ಷಾಯ[=ಹಕ್ಷ?]ವೆಂಬೆರಡಕ್ಷರವ
ಸ್ವಯಾನುಭಾವ ಭಕ್ತಿನಿರ್ವಾಣವಾದ[+ವರ]ನೆನಗೊಮ್ಮೆ
ತೋರಿದೆ ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

೩೦೫.
ಮಾಟ ಮದುವೆಯ ಮನೆ
ದಾನ-ಧರ್ಮ ಸಂತೆಯ ಪಸಾರ
ಸಾಜ ಸಾಜೇಶ್ವರಿ ಸೂಳೆಗೇರಿಯ ಸೊಬಗು
ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ
ಭಕ್ತಿಯೆಂ[ಬುದು?] ಬಾಜಗಾರರಾಟ
ಬಸವಣಗೆ ತರ ನಾನರಿಯದೆ ಹುಟ್ಟಿದೆ (?)
ಹುಟ್ಟಿ ಹುಸಿಗೀಡಾದೆ
ಹುಸಿ ವಿಷಯದೊಳಡಗಿತ್ತು
ವಿಷಯ ಮಸಿಮಣ್ಣಾಯಿತ್ತು
ನಿನ್ನ ಗಸಣೆಯನೊಲ್ಲೆ
ಹೋಗಾ ಚೆನ್ನಮಲ್ಲಿಕಾರ್ಜುನ

೩೦೬.
ಚಿನ್ನದ ಸಂಕೋಲೆಯಾದಡೇನು, ಬಂಧನವಲ್ಲವೆ?
ಮುತ್ತಿನ ಬಲೆಯಾದಡೇನು, ತೊಡರಲ್ಲವೆ?
ನಚ್ಚುಮಚ್ಚಿನ ಭಕ್ತಿಯಲ್ಲಿ ಸಿಕ್ಕಿಕೊಂಡಿದ್ದರೆ
ಭವ ಹಿಂಗುವುದೇ ಚೆನ್ನಮಲ್ಲಿಕಾರ್ಜುನ?

೩೦೭.
ಕುಲಗಿರಿ ಶಿಖರದ ಮೇಲೆ ಬಾಳೆ [ಬೆಳೆವುದಯ್ಯ] ಎಂದಡೆ
ಬಾಳೆ [ಬೆಳೆವುದಯ್ಯ] ಎನ್ನಬೇಕು
ಓಲೆಕಲ[=ಓಲೆಕಲ್ಲ] ನುಗ್ಗುಕುಟ್ಟಿ ಮೆಲಬಹುದಯ್ಯ ಎಂದಡೆ
ಅದು ಅತ್ಯಂತ ಮೃದು
ಮೆಲಬಹುದಯ್ಯ ಎನಬೇಕು
ಸಿಕ್ಕಿದ ಠಾವಿನಲ್ಲಿ ಉಚಿತವೆ ನುಡಿವುದೆ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ,
ಮರ್ತ್ಯಕ್ಕೆ ಬಂದುದಕ್ಕಿದೇ ಗೆಲುವು

೩೦೮.
ಅಯ್ಯ ವಿರಕ್ತರೆಂದರೇನೋ?
ವಿರಕ್ತಿಯ ಮಾತಾಡುವರಲ್ಲದೆ,
ವಿರಕ್ತಿ ಎಲ್ಲರಿಗೆಲ್ಲಿಯದೋ?
ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ
ಬಾಯೊಳಗಣ ಮಾತು
ಪುಣ್ಯವಿಲ್ಲ; ಪಾಪವಿಲ್ಲ;
ಕರ್ಮವಿಲ್ಲ; ಧರ್ಮವಿಲ್ಲ,
ಸತ್ಯವಿಲ್ಲ, ಅಸತ್ಯವಿಲ್ಲವೆಂದು ಮಾತನಾಡುತ್ತಿಪ್ಪರು
ಅದೆಂತೆಂದಡೆ-
ಕಂಗಳ ನೋಟ ಹಿಂಗದನ್ನಕ
ಕೈಯೊಳಗಣ ಬೆರಟು ನಿಲ್ಲದನ್ನಕ
ಹೃದಯದ ಕಾಮ ಉಡುಗದೆನ್ನಕ
ವಿರಕ್ತಿಕೆ ಎಲ್ಲರಿಗೆಲ್ಲಿಯದೋ?
ಬಲ್ಲ ವಿರಕ್ತನ ಹೃದಯವು ಕಾಡೊಳಗಣ್ಣ
ಗುಂಡಿನಲ್ಲಿ ಮಾಣಿಕ್ಯದ ಪ್ರಭೆಯ ಕಂಡವರಾರೋ
[ಲಿಂಗವ] ಕಂಡಾತಂಗೆ
ಕಂಗಳಲ್ಲಿ ನೋಡಿದ ಸರ್ವವಸ್ತುಗಳು ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ಕರ್ಣದಲ್ಲಿ ಕೇಳಿದಾಗಮಪುರಾಣಂಗಳು ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ನಾಸಿಕದಲ್ಲಿ ಸೋಂಕಿದ ಪರಿಮಳದ್ರವ್ಯಂಗಳು ಆ ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ಜಿಹ್ವೆಯಲ್ಲಿ ರುಚಿಸಿದ ರುಚಿಪದಾರ್ಥಂಗಳು ಆ ಲಿಂಗಕರ್ಪಿತ
ಅದೆಂತೆಂದಡೆ-
ಅಂಗವು-ಲಿಂಗವು ಏಕೀಭವಿಸಿದಡೆ
ಅವಂಗೆ ಪುಣ್ಯವಿಲ್ಲ ಪಾಪವಿಲ್ಲ
ಕರ್ಮವಿಲ್ಲ ಧರ್ಮವಿಲ್ಲ
ಅದೆಂತೆಂದಡೆ-
ಬಂದುದ ಲಿಂಗಕ್ಕೆ ಕೊಟ್ಟನಾಗಿ, ಬಾರದುದ ಬಯಸನಾಗಿ
ಆಂಗನೆಯರು ಬಂದು ಕಾಮಿತಾರ್ಥದಿಂದ ತನ್ನನಪ್ಪಿದಡೆ
ತಾ ಮಹಾಲಿಂಗವನಪ್ಪುವನಾಗಿ
ಅವಂಗೆ ಮುಖ ಬೇರಲ್ಲದೆ ಆತ್ಮನೆಲ್ಲ ಒಂದೆ
ಅದಕ್ಕೆ ಜಗವು ಪಾಪ-ಪುಣ್ಯವೆಂದು ಮಾತಾಡುತ್ತಿಪ್ಪರು
ಅದೆಂತೆಂದಡೆ;
ಶಿವಂಗೆ ತಾಯಿಲ್ಲ
ಭುವನಕ್ಕೆ ಬೆಲೆ[=ನೆಲೆ?]ಯಿಲ್ಲ
ತರು-ಗಿರಿ-ಗಹ್ವರಕ್ಕೆ ಮನೆಯಿಲ್ಲ
ಲಿಂಗವನೊಡಗೂಡಿದ ವಿರಕ್ತಂಗೆ
ಪುಣ್ಯಪಾಪವಿಲ್ಲ ಕಾಣಾ ಚೆನ್ನಮಲ್ಲಿಕಾರ್ಜುನ

೩೦೯.
ವಿರಕ್ತಿ ವಿರಕ್ತಿಯೆಂಬರು
ವಿರಕ್ತಿ ಪರಿಯೆಂತುಂಟು ಹೇಳಿರಯ್ಯ
ಕಟ್ಟದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ?
ಹುಟ್ಟು ಕೆತ್ತುವ ಡೊಂಬನಂತೆ
ಬಿಟ್ಟ ಮಂಡೆಯ ಕೇಶವ ನುಣ್ಣಿಸಿ
ಎಣ್ಣೆಗಂಟ ಹಾಕಿದಡೆ ವಿರಕ್ತನೆ?
ಕಟ್ಟುಹರಿದಿಹ ಪಂಜಿನಂತೆ
ಬಿಟ್ಟ ಮಂಡೆಯ ಕಟ್ಟದಿದ್ದಡೆ ವಿರಕ್ತನೆ?
ಹರ[+ದ?]ನಂತೆ ಹೇಸಿಯಾಗಿದ್ದರೆ ವಿರಕ್ತನೆ?
ಮೂಗನಂತೆ ಮಾತಾಡದಿದ್ದರೆ ವಿರಕ್ತನೆ?
ಹೊನ್ನು-ಹೆಣ್ಣು-ಮಣ್ಣ ಬಿಟ್ಟು
ಅಡವಿ-ಅರಣ್ಯದಲ್ಲಿದ್ದರೆ ವಿರಕ್ತನೆ?
ಅಲ್ಲ!
ವಿರಕ್ತನಾ ಪರಿಯೆಂತೆಂದಡೆ-
ಒಡಲ ಹುಡಿಗುಟ್ಟಿ
ಮೃಡನೊಳು ಎಡೆದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪ
ಅಲ್ಲದಿರ್ದಡೆ ಮೈಲಾರಿಯ ಮಲ್ಲಿಗೊರವಿತಿಯಲ್ಲವೆ
ಮಲ್ಲಿಕಾರ್ಜುನ?

೩೧೦.
ಎಮ್ಮೆಗೊಂದು ಚಿಂತೆ! ಸಮ್ಮಗಾರನಿಗೊಂದು ಚಿಂತೆ!
ನನಗೆ ನನ್ನ ಚಿಂತೆ! ತನಗೆ ತನ್ನ ಕಾಮದ ಚಿಂತೆ!
ಒಲ್ಲೆ ಹೋಗು, ಸೆರಗ ಬಿಡು ಮರುಳೆ!
ನನಗೆ ಚೆನ್ನಮಲ್ಲಿಕಾಜುನದೇವರು
ಒಲಿವನೋ ಒಲಿಯನೋ ಎಂಬ ಚಿಂತೆ!

೩೧೧.
ನಾಳೆ ಬರುವುದು ನಮಗಿಂದೇ ಬರಲಿ
ಇಂದು ಬರುವುದು ನಮಗೀಗಲೇ ಬರಲಿ
ಆಗೀಗ ಎನ್ನದಿರು ಚೆನ್ನಮಲ್ಲಿಕಾರ್ಜುನ

೩೧೨.
ಕಿಡಿಕಿಡಿ ಕಾರಿದರೆನಗೆ
ಹಸಿವು ತೃಷೆ ಅಡಗಿತ್ತೆಂಬೆ
ಸಮುದ್ರ ಮೇರೆದಪ್ಪಿದರೆ
ಎನಗೆ ಮಜ್ಜನವ ನೀಡಿದರೆಂಬೆ
ಮುಗಿಲು ಹರಿದುಬಿದ್ದರೆ
ಎನಗೆ ಪುಷ್ಪದ ಅರಳೆಂಬೆ
ಶಿರ ಹೋದರೆ ಚೆನ್ನಮಲ್ಲಿಕಾರ್ಜುನದೇವಂಗೆ
ಅರ್ಪಿತವೆಂಬೆ

೩೧೩.
ಹಿಂಡನಗಲಿ ಹಿಡಿವಡೆದ ಕುಂಜರ
ತನ್ನ ವಿಂಧ್ಯವ ನೆನೆವಂತೆ ನೆನೆವೆನೆಯ್ಯ !
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನೆಯ್ಯ !
ಕಂದ, ನೀನಿತ್ತ ಬಾ ಎಂದು
ನೀವು ನಿಮ್ಮಂದವ ತೋರಯ್ಯ ಚೆನ್ನಮಲ್ಲಿಕಾರ್ಜುನ

೩೧೪.
ಉದಯದಲೆದ್ದು ನಿಮ್ಮ ನೆನೆವೆನಯ್ಯ
ನಿಮ್ಮ ಬರವ ಹಾರುತಿರ್ಪೆನಯ್ಯ
ಹಸೆ ಹಂದರವನಿಕ್ಕಿ ನಿಮ್ಮಡಿಗಳಿಗೆಡೆಮಾಡಿಕೊಂಡಿಪ್ಪೆನಯ್ಯಾ
ಚೆನ್ನಮಲ್ಲಿಕಾರ್ಜುನ, ನೀನಾವಾಗ ಬಂದಹೆಯೆಂದು

೩೧೫.
ಗಿರಿಯಲಲ್ಲದೆ
ಹುಲುಮೊರಡಿಯಲಾಡುವುದೇ ನವಿಲು?
[ಕೊಳನನಲ್ಲದೆ] ಕಿರುವಳ್ಳಕೆಳಸುವುದೇ ಹಂಸ?
ಮಾಮರ ತಳಿತಲ್ಲದೇ ಸ್ವರಗೈಯುವುದೇ ಕೋಗಿಲೆ?
ಪರಿಮಳವಿಲ್ಲದ ಪುಷ್ಪಕೆಳಸುವುದೇ ಭ್ರಮರ?
ಎನ್ನ ಜೀವ ಚೆನ್ನಮಲ್ಲಿಕಾರ್ಜುನಗಲ್ಲದೆ
ಅನ್ಯಕೆಳಸುವುದೇ ಎನ್ನ ಮನ ಕೇಳಿರೆ ಕೇಳದಿಯರಿರಾ!

೩೧೬.
ಪಂಚೇಂದ್ರಿಯದ ಉರುವಣೆಯಹುದು
ಮದಭರದ ಜವ್ವನದೊಡಲು ವೃಥಾ ಹೋಯಿತಲ್ಲ
ತುಂಬಿ ಪರಿಮಳವನೆ ಕೊಂಡು ಲಂಬಿಸುವ ತೆರನಂತೆ
ಎನ್ನೆಂದಿಗೆ ಒಳಗೊಂಬೆಯೋ ಅಯ್ಯ ಚೆನ್ನಮಲ್ಲಿಕಾರ್ಜುನಯ್ಯ?

೩೧೭.
ಇಂದ್ರನೀಲದ ಗಿರಿಯನೇರಿಕೊಂಡು
[ಚಂದ್ರಕಾಂತದ ಶಿಲೆಯ] ಮೆಟ್ಟಿಕೊಂಡು
ಕೊಂಬ ಬಾರಿಸುತ, ಹರನೇ
ಎನ್ನ ಕುಂಭಕುಚದ ಮೇಲೆ ನಿಮ್ಮನೆಂದಪ್ಪಿಕೊಂಬೆನಯ್ಯ?
ಅಂಗಭಂಗ-ಮನಭಂಗವಳಿದು
ನಿಮ್ಮನೆಂದಿಂಗೊಮ್ಮೆ ನೆರೆವೆನೋ ಚೆನ್ನಮಲ್ಲಿಕಾರ್ಜುನ?

೩೧೮.
ತಾನು ದಂಡಮಂಡಲಕ್ಕೆ ಹೋದನೆಂದರೆ
ನಾನು ಸುಮ್ಮನಿಹೆನು
ತಾನೆನ್ನ ಕೈಯೊಳಗಿದ್ದು, ಎನ್ನ ಮನದೊಳಗಿದ್ದು
ನುಡಿಯದಿದ್ದರಾನು ಎಂತು ಸೈರಿಸುವೆನವ್ವ?
ನೇಹವೆಂಬ ಕುಂಟಣಿ
ಚೆನ್ನಮಲ್ಲಿಕಾರ್ಜುನನ ನೆರಹದಿರ್ದಡೆ
ನಾನೇವೆ ಸಖಿಯೆ?

೩೧೯.
ಬಂಜೆ ಬೇನೆಯನರಿವಳೇ?
ಬಲದಾಯಿ ಮುದ್ದ ಬಲ್ಲಳೇ?
ನೊಂದ ನೋವ ನೋಯದವರೆತ್ತ ಬಲ್ಲರು?
[ಚೆನ್ನಮಲ್ಲಿಕಾರ್ಜುನನಿರಿದಲಗು] ಒಡಲಲ್ಲಿ ಮುರಿದು
ಹೊರಳುವೆನ್ನಳಲನು ನೀವೆತ್ತ ಬಲ್ಲಿರೇ, ಎಲೆ ತಾಯಿಗಳಿರಾ!

೩೨೦.
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು
ದೇವಾಂಗವನುಟ್ಟು ಪುರುಷ ಬಾರಾ, ಪುಣ್ಯರತ್ನವೇ ನೀ ಬಾ
ನಿನ್ನ ಬರವೆನ್ನಸುವಿನ ಬರವು ಬಾರಯ್ಯ
ಚೆನ್ನಮಲ್ಲಿಕಾರ್ಜುನಯ್ಯ ಬಂದಾನೆಂದು
ಬಟ್ಟೆಗಳ ನೋಡಿ ಬಾಯಾರುತ್ತಿಹೆನು

೩೨೧.
ಕಳವಳದ ಮನವು ತಲೆಕೆಳಗಾದುದವ್ವ
ಸುಳಿದು ಬೀಸುವ ಗಾಳಿ ಉರಿಯಾಯಿತವ್ವ
ಬೆಳದಿಂಗಳು ಬಿಸಿಲಾಯಿತ್ತು ಕೆಳದಿ
ಹೊಳಲ ಸುಂಕಿಗನಂತೆ ತೊಳಲುತಿದ್ದೆನವ್ವ
ತಿಳುಹೌ ಬುದ್ಧಿಯ ಹೇಳಿ ಕರೆತಾರೆಲೆಗವ್ವ
ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವ

೩೨೨.
ಇಂದೆನ್ನ ಮನೆಗೆ ಗಂಡ ಬಂದಹನೆಲೆಗವ್ವ
ನಿಮನಿಮಗೆಲ್ಲ ಶೃಂಗಾರವ ಮಾಡಿಕೊಳ್ಳಿ
ಚೆನ್ನಮಲ್ಲಿಕಾರ್ಜುನನೀಗಳೇ ಬಂದಹನು
ಇದಿರುಗೊಳ್ಳ ಬನ್ನಿರೇ ಅವ್ವಗಳಿರಾ!

೩೨೩.
ಬಂದಹನೆಂದು ಬಟ್ಟೆಯ ನೋಡಿ
ಬಾರದಿದ್ದರೆ ಕರಗಿ ಕೊರಗಿದೆನವ್ವ
ತಡವಾದರೆ ಬಡವಾದೆ ತಾಯೆ
ಚೆನ್ನಮಲ್ಲಿಕಾರ್ಜುನ ಒಂದಿರುಳಗಲಿದರೆ
ತೆಕ್ಕೆ ಸಡಿಲಿದ ಜಕ್ಕವಕ್ಕಿಯಂತಾದೆನವ್ವ

೩೨೪.
ಕೂಡಿ ಕೂಡುವ ಸುಖದಿಂದ
ಒಪ್ಪಚ್ಚಿ ಅಗಲಿ ಕೂಡುವ ಸುಖ ಲೇಸು ಕೆಳದಿ!
ಒಚ್ಚತ ಅಗಲಿರೆ, ಕಾಣದೆ ಇರಲಾರೆ,
ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಅಗಲಿ
ಅಗಲದ ಸುಖವೆಂದಪ್ಪುದೋ!

೩೨೫.
ಉರಿಯ [ಪಳಿಯನೆ] ಉಡಿಸಿ, ಊರಿಂದ ಹೊರಗಿರಿಸಿ
ಕರೆಯಲಟ್ಟಿದ ಸಖಿಯ ನೆರೆದ ನೋಡೆಲೆಗವ್ವ
ತುರ್ಯಾವಸ್ಥೆಯಲ್ಲಿ ತೂಗಿ ತೂಗಿ ನೋಡಿ
ಕರೆ ನೊಂದೆ ನೋಡವ್ವ
ಅವಸ್ಥೆಯಿಂದ ಹಿರಿದು ದುಃಖದಲ್ಲಿ ಬೆಂದೆ
ಕರಿ ಬೆಂದು, ಗಿರಿ ಬೆಂದು
ಹೊನ್ನರಳಿಯ ಮರವನುಳಿದು
ಹಿರಿಯತನಗೆಡಿಸಿ ನೆರೆವೆನು ಚೆನ್ನಮಲ್ಲಿಕಾರ್ಜುನ

೩೨೬.
ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು
ಕನಸಿನಲಿ ಕಳವಳಿಸಿ ಆನು ಬೆರಗಾದೆ
ಆವಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ
ಆಪತ್ತಿಗೆ ಸಖಿಯರ ನಾನಾರುವನು ಕಾಣೆ
ಅರಸಿ ಕಾಣದ ತನುವ, ಬೆರೆಸಿ ಕೂಡದ ಸುಖವ
ಎನಗೆ ನೀ ಕರುಣಿಸು ಚೆನ್ನಮಲ್ಲಿಕಾರ್ಜುನ

೩೨೭.
ಸಾವಿಲ್ಲದ ಸಹಜಂಗೆ, ರೂಹಿಲ್ಲದ ಚೆಲುವಂಗೆ
ಭವವಿಲ್ಲದ ಅಭವಂಗೆ, ಭಯವಿಲ್ಲದ ನಿರ್ಭಯ ಚೆಲುವಂಗೆ
ನಾನೊಲಿದೆನಯ್ಯ ಚೆನ್ನಮಲ್ಲಿಕಾರ್ಜುನ ಗಂಡನೆನಗೆ
ಮಿಕ್ಕಿದ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯ

೩೨೮.
ಅತ್ತೆ ಮಾಯೆ, ಮಾವ ಸಂಸಾರಿ
ಮೂವರು ಮೈದುನರು ಹುಲಿಯಂಥಾ ಅವದಿರು
ನಾಲುವರು ನಗೆವೆಣ್ಣು ಕೇಳು ಕೆಳದಿ
ಐವರು ಭಾವದಿರನೊಯ್ವ ದೈವವಿಲ್ಲ
ಆರು ಪ್ರಜೆಯತ್ತಿಗೆಯರ ಮೀರಲಾರೆನು ತಾಯೆ
ಹೇಳುವಡೆ ಏಳು ಪ್ರಜೆ ತೊತ್ತಿರ ಕಾವಲು
ಕರ್ಮವೆಂಬ ಗಂಡನ ಬಾಯ ಟೊಣೆದು
ಹಾದರವನಾಡುವೆನು ಹರನ ಕೂಡೆ
ಮನವೆಂಬ ಸಖಿಯ ಪ್ರಸಾದದಿಂದ
ಅನುಭಾವವ ಕಲಿತೆನು ಶಿವನೊಡನೆ
ಕರೆ ಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನ
ಸಜ್ಜನದ ಗಂಡನ ಮಾಡಿಕೊಂಬೆನು

೩೨೯.
ಕರಣ ಮೀಸಲಾಗಿ ನಿನಗರ್ಪಿತವಾಯಿತ್ತು
ಆನೊಂದರಿಯೆನಯ್ಯ
ಎನ್ನ ಗತಿ ನೀನಾಗಿ ಎನ್ನ ಮತಿ ನೀನಾಗಿ
ಪ್ರಾಣ ನಿಮಗರ್ಪಿತವಾಯಿತ್ತು
ನೀನಲ್ಲದ ಪೆರತೊಂದ ನೆನೆದೊಡೆ
ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ

೩೩೦.
ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ?
ಮನ ನಿಮ್ಮ ರೂಪಾದ ಬಳಿಕ ನಾನಾರ ನೆನೆವೆ?
ಪ್ರಾಣ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ?
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ನಾನಾರನರಿವೆ?
ಚೆನ್ನಮಲ್ಲಿಕಾರ್ಜುನಯ್ಯ,
[ನಿಮ್ಮಿಂದ ನೀವೆಯಾಗಿ ನಿಮ್ಮನೇ ಮರೆದೆ]

೩೩೧.
ಶಿವಗಣಂಗಳ ಮನೆಯಂಗಳ
ವಾರಣಾಸಿಯೆಂಬುದು ಹುಸಿಯೇ
ಪುರಾತನರ ಮನೆಯ ಅಂಗಳದಲ್ಲಿ
ಅಷ್ಟಾಷಷ್ಟಿತೀರ್ಥಂಗಳು ನೆಲೆಸಿಪ್ಪವಾಗಿ?
ಅದೆಂತೆಂದಡೆ:
ಕೇದಾರಸ್ಯೋದಕೇ ಪೀತೇ
ವಾರಣಸ್ಯಾಂ ಮೃತೇ ಸತಿ
ಶೀಶೈಲ ಶಿಖರೇ ದೃಷ್ಟೇ
ಪುನರ್ಜನ್ಮ ನ ವಿದ್ಯತೇ
ಎಂಬ ಶಬ್ದಕ್ಕಧಿಕವು
ಸುತ್ತಿಬರಲು ಶ್ರೀಶೈಲ, ಕೆಲಬಲದಲ್ಲಿ ಕೇದಾರ
ಅಲ್ಲಿಂದ ಹೊರಗೆ ವಾರಣಾಸಿ
ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ
ಎನ್ನ ದೇವ ಚೆನ್ನಮಲ್ಲಿಕಾರ್ಜುನ
ನಿಮ್ಮ ಭಕ್ತರ ಮನೆಯಂಗಳ ವಾರಣಾಸಿಯಿಂದ
ಗುಂಜಿಯಧಿಕ ನೋಡಾ!

೩೩೨.
ನಿನ್ನ ಅಂಗದಾಚಾರವ ಕಂಡು
ಎನಗೆ ಲಿಂಗಸಂಗವಾಯಿತ್ತಯ್ಯ, ಬಸವಣ್ಣ
ನಿನ್ನ ಮನದ ಸುಜ್ಞಾನವ ಕಂಡು
ಎನಗೆ ಜಂಗಮಸಂಬಂಧವಾಯಿತ್ತಯ್ಯ, ಬಸವಣ್ಣ
ನಿನ್ನ ಸದ್ಭಕ್ತಿಯ ತಿಳಿದು
ಎನಗೆ ನಿಜಸಾಧ್ಯವಾಯಿತ್ತಯ್ಯ, ಬಸವಣ್ಣ
ಚೆನ್ನಮಲ್ಲಿಕಾರ್ಜುನನ ಹೆಸರಿಟ್ಟ
ಗುರು ನೀನಾದ ಕಾರಣ
ನಾನೆಂಬುದಿಲ್ಲವಯ್ಯ ಬಸವಣ್ಣ

೩೩೩.
ಅಯ್ಯ, ನಿಮ್ಮಾನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು!
ಅಯ್ಯ, ನಿಮ್ಮ ಅನುಭಾವಿಗಳು
ಎನ್ನನೊರೆದೊರೆದು, ಕಡಿಕಡಿದು, ಅರೆದರೆದು
ಅನುಮಾಡಿದ ಕಾರಣ
ಎನ್ನ ಮನ ಶುದ್ಧವಾಯಿತ್ತು!
ಎನ್ನ ಸರ್ವಭೋಗಾದಿ ಭೋಗಂಗಳೆಲ್ಲ
ನಿಮ್ಮ ಶರಣರಿಗರ್ಪಿತವಾಗಿ
ಎನ್ನ ಪ್ರಾಣ ಶುದ್ಧವಾಯಿತ್ತು!
ಎನ್ನ ಸರ್ವೇಂದ್ರಿಯಗಳೆಲ್ಲವು
ನಿಮ್ಮ ಶರಣರ ಪ್ರಸಾದವ ಕೊಂಡ ಕಾರಣ
ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯ!
ನಿಮ್ಮ ಶರಣರಿಂತು ಎನ್ನನಾಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರಿಗೆ ತೊಡಿಗೆಯಾದೆನಯ್ಯ ಪ್ರಭುವೆ!

೩೩೪.
ಬಸವಣ್ಣನ ಮನೆಯ ಮಗಳಾಗಿ ಬದುಕಿದೆನಾಗಿ
ತನ್ನ ಕರುಣ ಭಕ್ತಿ ಪ್ರಸಾದವ ಕೊಟ್ಟನು
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕ ಪ್ರಸಾದವ ಕೊಟ್ಟನು
ಪ್ರಭುದೇವರ ತೊತ್ತಿನ ಮಗಳಾದ ಕಾರಣ
ಜ್ಞಾನಪ್ರಸಾದವ ಕೊಟ್ಟನು
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣಪ್ರಸಾದವ ಸಾಧಿಸಿ ಕೊಟ್ಟನು
ಮಡಿವಾಳ ಮಾಚಿ ತಂದೆಯ ಮನೆಯ ಮಗಳಾದ ಕಾರಣ
ನಿರ್ಮಳ ಪ್ರಸಾದವ ನಿಶ್ಚಯಿಸಿ ಕೊಟ್ಟನು
ಇಂತೀ ಅಸಂಖ್ಯಾತಗಣಂಗಳೆಲ್ಲರೂ ತಮ್ಮ ಕರುಣದ ಕಂದನೆಂದು
ತಲೆದಡಹಿ ರಕ್ಷಿಸಿದ ಕಾರಣ
ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ಯೋಗ್ಯಳಾದೆನು

೩೩೫.
ತನು ಮೀಸಲಾಗೆ ಭಾವವಚ್ಚುಗೊಂಡಿಪ್ಪುವುದವ್ವ
ಅಚ್ಚುಗದ ಸ್ನೇಹ, ನಿಚ್ಚಟದ ಮೆಚ್ಚುಗೆ,
ಬೆಚ್ಚು ಬೇರಾಗದ ಭಾವವಾಗೆ
ಚೆನ್ನಮಲ್ಲಿಕಾರ್ಜುನಯ್ಯ ಒಳಗೆ ಗಟ್ಟಿಗೊಂಡನವ್ವ

೩೩೬. ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ
ಎಚ್ಚರೆ ಗರಿದೋರದಂತೆ ನಡಬೇಕು
ಅಪ್ಪಿದರೆ ಅಸ್ಠಿಗಳು ನುಗ್ಗುನುರಿಯಾಗಬೇಕು
ಬೆಚ್ಚರೆ ಬೆಸುಗೆಯರಿಯದಂತಿರಬೇಜು
ಮಚ್ಚು ಒಪ್ಪಿತ್ತು ಚೆನ್ನಮಲ್ಲಿಕಾರ್ಜುನಯ್ಯನ ಸ್ನೇಹ

೩೩೭.
ನಡೆಯದ ನುಡಿಗಡಣ, ಮಾಡದ ಕಲಿತನ
ಚಿತ್ರದ ಸತಿಯ ಶೃಂಗಾರವದೇತಕ್ಕೆ ಪ್ರಯೋಜನ?
ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು,
ಗುಣಿಯಲ್ಲದವಗುಣಿಯ ಸಂಗವದೇತಕ್ಕೆ ಪ್ರಯೋಜನ?
ದಯವಿಲ್ಲದ ಧರ್ಮವು, ಭಯವಿಲ್ಲದ ಭಕ್ತಿಯು,
ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ?
ಎನ್ನ ದೇವ ಚೆನ್ನಮಲ್ಲಿಕಾರ್ಜುನ, ಲಿಂಗೈಕ್ಯವು
ಪ್ರಾಣಗುಣವರಿಯದವರ ಕೂಡೆ ಪ್ರಸಂಗವೇತಕ್ಕೆ?

೩೩೮.
ಪ್ರಾಣ ಹೊಲಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ
ದೇವದಾನವಮಾನವರೆಲ್ಲಾ ಜೋಳವಾಳಿಯಲೈದಾರೆ
ಜಾಣ ಕಲುಕುಟಿಕನನಗಲದೆ ಹೂವನೆ ಕೊಯ್ದು
ಕಲಿಯುಗ ಕರಸ್ಥಲದೇವಪೂಜೆ ಘನ
ಮೇರುವಿನ ಕುದುರೆ ನಲಿದಾಡಲದು
ಭೂತರಾಜ ರಾಜರಂಗಳಿಗಳ[?] ಜಗಳ ಮೇಳಾವ
ಮರುಪತ್ತದ ಮಾತು ನಗೆ ಹಗರಣ
ಕ್ಷೀರಸಾಗರದಲ್ಲಿ ದಾರಿಯಳವಡದಯ್ಯ
ನೀ ಹೇಳಬೇಕು ಭಕ್ತರೆಂತಪ್ಪರೋ
ಪಂಚವರ್ಣದ ಬಣ್ಣ ಸಂಧೆವರದಾಟವು[?]
ಚೆನ್ನಮಲ್ಲಿಕಾರ್ಜುನಯ್ಯ,

ತ್ರಿಭುವನದ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು

೩೩೯.
ಹಸಿದ ಹಸುಳೆಗೆರೆದೆಯಾಹ
ವಿಷವ, ರಾಜಹಂಸೆಗುಕ್ಕು
ರಸವನೀಂಟಿಸಿದೆ, ಮಹೇಶ, ನೋಳ್ಪ ಕಣ್ಣೊಳು
ಕಸವ ಕವಿದೆ, ಕರ್ಣಗಳಿಗೆ
ದಸಿಯ ಬಡಿದೆ; ಕರುಣವಿಲ್ಲ-
ದಸಮಪಾತಕವನು ಎನಗೆ ಕೇಳಿಸಿಂದು ನೀ ||೧||
ಹರನೆ, ಕಣ್ಣೊಳುರಿಯನ್ನಿಟ್ಟ
ದುರುಳ, ನಂಜುಗೊರಲ, ಸರ್ಪ
ಧರ ತ್ರಿಶೂಲಿ! ನಿನ್ನ ನಂಬಿದವರನಸಿಯೊಳು
ಅರೆದು ಸಣ್ಣಿಸುವುದೆ ನಿನ್ನ
ಕರುಣವಲ್ಲದದೆಲ್ಲರಂತೆ
ಕರುಣಿಯೆಂಬ ಮರುಳನಾವ ?! ಮಗನ ಕೊಲಿಸಿರೇ? ||೨||
ಯತಿಯ ರಸಿಕನೆನಿಸಿ, ಪತಿ-
ವ್ರತೆಯ ಸಿತಗೆಯೆನಿಸಿ, ದಿವ್ಯ-
ಮತಿಗೆ ಸಟೆಯ ಬಿತ್ತಿ, ದಾನಿ-
ಗತಿದರಿದ್ರದೆಡರನೀವ
ಮತವೆ ನಿನ್ನದುತ್ತಮಿಕೆಯ ನೆರೆವ ತಪ್ಪೆಯ? ||೩||
ಅರಗಿಲೆರೆದ ಬೊಂಬೆಗುರಿಯ
ಭರಣವನ್ನು ತೊಡಿಸಲಹುದೆ?!
ಹರನೆ ನಿನ್ನ ಸ್ತೋತ್ರವಲ್ಲದನ್ಯವರಿಯದ
ತರಳೆಯೆನ್ನ ಕಿವಿಯೊಳೆನ್ನ
ಪುರುಷವಚನವನ್ನು ತುಂಬೆ
ಕರುಣವಿಲ್ಲಲಾ ಕಪರ್ದಿ... ||೪||
ಗಂಡನುಳ್ಳ ಹೆಣ್ಣನಾವ
ಗಂಡು ಬಯಸಿ ಕೇಳ್ದಡವನ
ತುಂಡುಗಡಿಯದಿಹನೆಯವಳ ಗಂಡನೆನ್ನಯ
ಗಂಡ ನೀನಿರಲ್ಕೆ ಕೇಳ್ದೊ
ಡಂಡುಗೊಂಡು ಸುಮ್ಮನಿಹೆ! ಶಿ-
ಖಂಡಿಯೆಂಬ ನಾಮ ಸಾಮ್ಯವಾದುದಿಂದಲಿ ||೫||

೩೪೦.
ಪತಿಯೆ ಗತಿಯೆನಿಪ್ಪ ಸತಿಗೆ
ಪತಿವ್ರತಾಭಿಧಾನ ಸೆಲ್ವು
ದಿತರ ಪತಿಯ ರತಿಯೊಳಿರ್ಪ ಸತಿಯ ಕ್ಷಿತಿಯೊಳು
ಸಿತಗೆಯೆನ್ನದಿಹರೆ? ದಿಟದ
ಪತಿಯದೊರ್ವ, ಸತಿಗೆ ಸಟೆಯ
ಪತಿಯದೊರ್ವನುಂಟೆ ತಳರಿ ತಳುವದೆ?!

೩೪೧.
ಮದನನೆಸುಗೆಯಿಂದ ಮುನ್ನ ಚೆನ್ನಮಲ್ಲನ
ಮದನಗಿತ್ತಿಯಾದೆ! ಮಿಕ್ಕಿ
ನಧಮರೇತಕವ್ವಗಳಿರ?
ಮದುವೆಯಹರೆ ಮಗುಳೆ ಕಂಡ ಕಂಡ ಗಂಡರ? ||೧||
ಸಾವು ಸಂಕಟಳಿವುಪಳಿವು
ನೋವು ದುಃಖ ದುರಿತರಕ್ತ
ಮಾವುಸಸ್ಠಿ ಬಾಲಜಾಡ್ಯ ಜರೆ ರುಜಾನಿಶಂ
ಬೇವಸಂಗಳಿಲ್ಲದುರೆ ಸ-
ದಾ ವಯಸ್ಸಿನಿಂದಲೆಸವ
ಕೋವಿದಂಗೆ ಪೆತ್ತರಿತ್ತರೆನ್ನ ||೨||
ಮಾತೆ ಮುಕುತಿದೆರಹನಾಂತು,
ರೀತಿಗೊಲ್ಲು ತಂದೆ, ಬಂಧು-
ವ್ರಾತವವನ ಕುಲವನೊಪ್ಪಿ ಕೊಟ್ಟರೆನ್ನನು
ಆತಗೊಲ್ಲು ಮದುವೆಯಾದೆ
ನಾ ತಳೋದರಿಯರಿರೆಲೆಲೆ
ಆತನರಸುತನದ ಘನದ ಬಿನದವೆಂತೆನೆ ||೩||
ಆಳುವವನಿಯವನಿಗಿದೀ
ರೇಳು ಲೋಕ, ದುರ್ಗ-ರಜತ
ಶೈಳ, ಹರಿವಿರಿಂಚಿ ಸುರಪ ಮುಖವಜೀರರು,
ಆಳು ದುನುಜ ಮನುಜ ದಿವಿಜ
ವ್ಯಾಳರುಗ್ಘಡಿಸುವ ಭಟ್ಟ
ಜಾಳಿ ಚಂಡಕೀರ್ತಿಗಳ್, ಪ್ರಧಾನಿ ಸುರಗುರು ||೪||
ಮಿತ್ರ ಧನದರಾಪ್ತರೇ
ಮಿತ್ರ ಗಾತ್ರ ಪ್ರಮಥರತಿ ಕ-
ಳತ್ರವೇ ಭವಾನಿ, ರಾಜವಾಜಿ ನಿಗಮವು
ಪತ್ರಿರಥ-ಗಣೇಶರೆಸೆವ
ಪುತ್ರರಧಿಕಶೈವಧರ್ಮ
ಗಾತ್ರ ಲಿಂಗವೀವನಾವ ಪದವನೆಳಸಲು ||೫||
ದಶಭುಜಂಗಳೈದು ವಕ್ತ್ರ
ವಸವವಖಿಳ ಕಕುಭ, ಮುಡಿವ
ಕುಸುಮ ತಾರೆ, ತುಂಬುರಾದಿಗಳ್ ಸುಗಾಯಕರ್,
ಎಸೆವ ಜಗದ ವಾರ್ತೆಗಳನು
ಬೆಸಸುವಾತ ನಾರದ ಶ್ರಿ-
ದಶವಧೂಕದಂಬ ಓಲಯಿಸುವರಾತನ ||೬||
ಹಸನಿಸುವನೆ ಭೃಂಗಿಯೂರು-
ವಸಿ ತಿಲೋತ್ತಮಾದಿ ದಿವಿಜ
ಕುಸುಮಗಂಧಿನಿಯರೆ ನಚ್ಚಣಿಯರು, ಪಿಡಿವಡೆ
ತಿಸುಳ ಸಬಳ, ಚಾಪ ತ್ರಿದಶ
ರೆಸವ ನಿಳಯ, ನಾರಿ ಭುಜಗ,
ವಿಶಿಖ ವಿಷ್ಣುವಿಂದು ಭಾಸ್ಕರಾಗ್ನಿ ನೇತ್ರವೂ ||೭||
ಮಲೆವ ಕಾಲ ಕಾಮದನುಜ
ಕುಲವನಟ್ಟಿ ಕುಟ್ಟಿ ಭಕ್ತ
ರೊಲವನೀವ ಸಕಲದೇವ ಚಕ್ರವರ್ತಿಗೆ
ಒಳಿದೆನೊಲಿವೆನೆಂತು ಪೇಳಿ
ರೆಲೆಲೆಯಕ್ಕಗಳಿರ ಬದ್ಧ
ಮಲಮಯಾಂಗಿಯಾದ ಹೀನಮಾನಸಾತ್ಮಗೆ? ||೮||
ಗಿರಿಯ ತೊರೆದು ಬಱಿ ಪುಲ್ಲ
ಮೊರಡಿಗೆಳಸಿ ಬಹುದೆ? ಅಂಚೆ
ಸರಸಿಯನ್ನು ಸಡಿಲಿ ಪಲ್ವಲಕ್ಕೆ ಪಾಯ್ವುದೇ?
ಎರಪದೇ ಪರಾಗವಿಲ್ಲ-
ದರಳಿಗಲಿ? ಮಹೇಶಗೊಲ್ದು
ನರಕಿಗೊಲಿಯ ಬಲ್ಲುದೇ ಮದೀಯ ಚಿತ್ತವು? ||೯||
ಮೇರುಗಿರಿಯಿರಲ್ಕೆ ರಜವ[=ಜರಗ?]
ತೂರಲೇಕೆ? ಕ್ಷ್ರೀರವಾರ್ಧಿ
ಸಾರಿರಲ್ಕೆ [ಓರೆಪಶುವದೇಕೆ]? ತತ್ತದ
ದಾರಿಗಳಲಲೇಕೆ ಗುರುವ
ಸಾರಿ ಸುಪ್ರಸಿದ್ಧವಿದ್ದು?
ಹಾರಲೇಕೆ ಪದವೆ ಲಿಂಗ ಕರದೊಳಿರುತಿರೆ? ||೧೦||
ಆವ ಚಿಂತೆಯೇಕೆ ಮನದ
ದಾವತಿಯನು ತೀರ್ಚುವೆನ್ನ
ಜೀವದೆರೆಯ ಚೆನ್ನಮಲ್ಲಿಕಾರ್ಜುನಯ್ಯನ
ಭಾವೆಯಾನು! ಬಳಿಕ ನರಕಿ
ಜೀವಿಗೆನ್ನ ಕೇಳ್ದರಿನ್ನು
ನೋವಿರಿ.... ||೧೧||

೩೪೨.
ಎನಗೆ ಬಂದ ಬವರಕೇಕೆ ನಿಮಗೆ ಬಂಧನ? ||ಪಲ್ಲವ||
ಆರಿಗಿಟ್ಟ ಬಡಿಣದನ್ನ | ವಾರು ಕೊಂಬರೆನಗೆ ಬಂದ
ಮಾರಿಗಾಗಿ ಶಿವನ ಭಕ್ತರಳಲಲೆನ್ನಸು
ಹಾರುತಿದೆ-ಮದೀಯ ತನುವ | ನೂರುನುಚ್ಚುಮಾಡೆ ನಿಮಗಿ
ದೂರ ಪೇಳ್ದೊಡಾಣೆ ಚೆನ್ನಮಲ್ಲಿಕಾಜುನ ||೧||
ಇಹದೆ ಶರಣರೊಲಿಯದಲ್ಲ | ದಹುದೆ ಮುಕ್ತಿಯವರ ಭಂಗಿ
ಸಹಿತರಿಂದಲಾವ ಗತಿಯ ಪಡೆವೆನಿನಿತಕೆ
ದಹನನೇತ್ರನಿಟ್ಟ ನೆಲೆಯೊಳಿಹೆ[ನೆನ್ನುತ್ತ ಗೀತವನ್ನು
ಸಹಜಭರಿತೆ ಪಾಡಿದಳ್ ಮನೋನುರಾಗದಿ] ||೨||
ವಾತ-ವಹ್ನಿ-ಸಲಿಲ-ಸುರ | ಭೂತಳಾದಿ ತತ್ವವನಿಶ
ರೀತಿದಪ್ಪದಿಪ್ಪವಯ್ಯ ನಿನನುಜ್ಞೆಯ-
ನಾತು; ಮಿಕ್ಕಡೆನ್ನನೊಪ್ಪ | ನಾತ ಮಲ್ಲಿನಾಥ
..................................... ||೩||

೩೪೩.
ಬೇನೆಯಿಂ ಬೇವ ಬೇವದಸದಳ ಬಲ್ಲರೆ
ಬೇನೆಯಿಲ್ಲದರಂತೆ ನೀವೆಂತರಿವಿರೆನ್ನ
ಬೇನೆಯ ಬಗೆಯವನ್ನಗಳಿರಾ ಮಚ್ಚೆನ್ನ ಮಲ್ಲೇಶನಿರಿದಲಗು ಮುರಿದ
ಬೇನೆಯಿಂ ಬೇವಳಾನೇ ಬಲ್ಲೆನೀ ನೋವು
ಬೇನೆ ಮಚ್ಚಿತ್ತದೆರೆಯನ ತಾಗದಿರದು

೩೪೪.
ವಿಷಯಸುಖ ವಿಷವೆಂದು ತಿಳಿಯದಜ್ಞಾನಿ ಬಿಡು
ವಿಷಯಸುಖ ನಿರವಯವೆಂದರಿಯದರಿಮರುಳೆ ಬಿಡು
ವಿಷಯಸುಖ ಭವದ ಬಿತ್ತೆಂದು ಭಾವಿಸದಧಮಜೀವಿ ಬಿಡು ಬಿಡು ಸೆರಗನು
ವಿಷಯದಣು ಮಾತ್ರ ಬಿಂದುಗಳಲ್ ಭೂಧರದೊ
ಲೆಸೆವುದೆಂದೋದುವಾಗಮವ ಕೇಳ್ದೆಚ್ಚರದ
ಪಶುವೆ ಕೇಳ್ದರಿಯ ವಿಷಯದೊಳು ಮುಂಗೆಟ್ಟ ನರಸುರರ ವಿಧಿಗಳ ||೧||
ಪುಲ್ಲಶರನೆಸುಗೆಗಳವಳಿದಳುಪಿದಂಗನೆಯ
ನೊಲ್ಲದೊಲ್ಲದ ಪೆಣ್ಣನೊಲಿಸುವವನತ್ಯಧಮ
ನಲ್ಲವೆ? ಪೆರತೊರ್ವಗೊಲ್ದವಳನಪ್ಪಲಳ್ತಿಯೆ ಮನಕ್ಕಾನು ಚೆನ್ನ
ಮಲ್ಲಿಕಾರ್ಜುನಗೊಲ್ದಳೆನ್ನನಪ್ಪಿದಡೆ ಕ
ಗ್ಗಲ್ಲನಪ್ಪಿದ ಮಾಳ್ಕೆಯಂತಿರದೆ ಹೋಗೆಲವೊ
ಖುಲ್ಲ ||೨||

೩೪೫.
[ತೊಡರಿ ಬಿಡದಂಡೆಲೆವ ಮಾಯೆಯ
ತೊಡಕನಾರೈದಲಿಸಿ ಗೀತವ
ತೊಡಗಿದಳ್] ಅಸಂಖ್ಯಾತಲಕ್ಷಭವಾಂಬುರಾಶಿಯೊಳು
ಕಡೆದು ಮನುಜತ್ವಂಬಡೆಯೆ ಬೆಂ-
ಬಿಡದು ನಿಮ್ಮಯ ಮಾಯೆ, ಮಾಯೆಯ
ಬಿಡುಗಡೆಗೆ ತೆರಪಿಲ್ಲಾ ಗುರುಚೆನ್ನಮಲ್ಲೇಶ ||೧||
ಒಡಲಿನೊಳ್ ಮಲಮಾಸಿನುಬ್ಬಸ
ವಡೆದುದಿಸಲಜ್ಞಾನ ರುಜೆಗಳ
ತೊಡಕು, ಕಾವನ ಕಾಟ ಜವ್ವನದೊಳ್, ಜರೆಗಶಕ್ತಿಯ
ಜಡತೆಯಲ್ಲದೆ ಜಗಕೆ ನಿಮ್ಮಡಿ
ವಿಡಿಯಲೆಲ್ಲಿಯ ಬಿಡೆಯ ಮಾಯೆಯ ಸೆಡಕಿನೊಳು ಸಿಲುಕಿ ||೨||
ಹರಿಯಜೇಂದ್ರಾದ್ಯಖಿಳ ದಿವಿಜರ
ಶಿರವನರಿದಹಿದನುಜಮನುಜರ
ನರೆದು ಸಣ್ಣಿಸಿ ನುಂಗಿ, ನುಸುಳುವ ಮನುಮುನಿಗಳಧಟ
ಪರಿದು ಸಚರಾಚರವ ನೆರೆ ನಿ
ಟ್ಟೊರಸುವುದು ಗಡ ಮಾಯೆ ನಿಮ್ಮಯ
ಶರಣರಡಿವಿಡಿದಾಂ ಬದುಕಿರ್ದೆನೆಂದು ಪಾಡಿದಳು ||೩||

೩೪೬.
ತನುವು ಕಟ್ಟನೆ ಕರಗೆರೆದು ಮ
ಜ್ಜನವ, ನಿಜಮನವಲರ್ದು ಕುಸುಮವ,
ವಿನುತ ಹದುಳಿಗತನದಿ ಗಂಧಾಕ್ಷತೆಯನರು ಹಿಂದೆ
ಮಿನುಗುವಾರ್ತಿಯ, ನೆನಹುಶುದ್ಧದಿ
ಘನಸುಧೂಪವ, ಹರುಷರಸ ಸಂ
ಜನಿತ ನೈವೇದ್ಯವ ಸಮರ್ಪಿಸಿ, ಜ್ಞಾನಸತ್ಕ್ರಿಯದಿ ||೧||
ತಾಂ ಬೆಳೆರ್ವೆತ್ತಲೆಯನಿತ್ತು ಕ-
ರಾಂಜುಜದ ಬೊಮ್ಮವನು ನಿಜ ಹರು
ಷಾಂಬುಕಣ ಸಂಪಾತದೊಡನಿಟ್ಟಿಸುತೆ ಕ್ರಿಯೆಗಳವು
ಬೆಂಬಳಿಯೊಳಿರ್ದರಿಯದರ್ಚಿಪೆ
ನೆಂಬೆನೆಂತಾ ನಾದ ಬಿಂದುಗ
ಳೆಂಬರಿಯವು ನಿಮ್ಮ ನುತಿಸುವೆನೆಂತು ಶಶಿಮೌಳಿ ||೨||

೩೪೭.
ಅನುಭವವೆ ಭವಬಂಧಮೋಚನ
ವನುಭವವೆ ದುರಿತಾಚಲಶನಿ
ಯನುಭವವೆ ತನುಗುಣಾಭ್ರ ಪ್ರಕರಪವಮಾನ
ಅನುಭವವೆ ಭಕ್ತಿಯೆ ಸುಧಾನಿಧಿ
ಅನುಭವವೆ ಮುಕ್ತಿಯ ತವರ್ಮನೆ ಶರಣಸಂತತಿಯ ||೧||

೩೪೮.
ಭಾಷೆಯ ಮೀಸಲ್ಗೆಡಿಸಿ ಬಳಿಯಲಿ-
ನ್ನೇಸೊಂದಾಚರಣೆಯನಾಚರಿಸಲ್
ದೋಷಂ ಪರಿಯದವಂಗವನೊಳ್ ಪುದುವಾಳ್ವರ್ ತದ್ದೋಷಾ
ವಾಸಿಗಳೆನಿಪರ್, ತೊಲತೊಲಗಿನ್ನೆ
ನ್ನಾಸೆಯನುಳಿದು

೩೪೯.
ಪೂತ ಶ್ರೀಗುರುವರ ಪೇಳ್ದೊಲ್ ದು
ರ್ನೀತಿಯ, ಭೀತರ ಕಾಯ್ವಂ ತಾನೆ
ಬೂತಾದೊಲ್, ಪತಿಪತ್ನೀತ್ವವನರಹುವಳಭಿಸಾರಿಕೆಯ
ರೀತಿಯನೊರೆವೊಲ್, ಪೇಳ್ದಿರಿ ನೀವೆ
ನ್ನಾತುಮದಜ್ಞನತೆಯಂ ತೆವರದೆ ದು
ರ್ನೀತಿಯನಾ ಶಿವಭಕ್ತರ್ ಸಹಭವಗುರುತಂದೆಗಳೆನಗೆ ||೧||
ಮದ್ಗುರು ತಂದೆ ಮಹಾವೈಭವದೊಳ್
ಚಿದ್ಘನಲಿಂಗಕ್ಕೊಲಿದೆನ್ನುವನೆಸೆ
ದುದ್ಗಮ ಶರನೆಸೆಯದ ಬಳಿಕುದ್ವಾಹವೆನೆಸಗಿದ ಬಳಿಕ
ತದ್ ಘನಲಿಂಗದ ಸತಿಯಂ ಪಡೆದು ವಿ
ಯದ್ ಗಂಗಾಮೌಲಿಯ ಭಕ್ತಂಗಿ
ತ್ತುದ್ಗಮ ಶರನ ವಿಕಾರದೋಳಿಹುದಂ ನೋಳ್ದಪೆವೆಂಬರಕೆ ||೨||
ಈ ಪಾಪವನೊಂದಿಸಲೆಳಸುವರೇಂ
ಕೂಪರೆ ಪೆರದೊಲಗು

೩೫೦.
ಕ್ಷಿತಿಯ ಚರಿತ್ರವನತಿಗಳೆದೆನ್ನುವನೆಳಸಿದಿರೆಂತೆನಲು
ಹುತಹವನುಂಡ ಹಿಮಂ ಬೆರೆವುದೆ? ಸ
ನ್ನುತ ಸೌರಭ್ಯಕದಂಬವನಂಬರ
ಗತಿವೇಗದಿನಡರಿದ ಹೊಗೆ ಮನೆಗಳ್ತಪ್ಪುದೆ ಮಡಮುರಿದು?
ಓಡೊಡೆ ಗಾಜುಗಳುಂ ಮೃತ್ತಿಕೆಯೊಳ್
ಮೂಡಿ ಗಡಾ ಮೃತ್ತಿಕೆಯೊಳ್ ಮಗುಳೊಡ
ಗೂಡವೆನಲ್ಕವರಿಂದಿಳಿಕೆಯೆ ಶಿವಶರಣರ ಚಾರಿತ್ರ?
ರೂಢಿಯೊಳೆಗೆದಾ ರೂಢಿಯೆ ಜಡದೊಳ್
ಕೂಡದ ವೃಷಭಾರೂಢನೊಳೊಡನೊಡ
ಗೂಡಿದ ಶರಣರ ಕೂಡಿದಳಾನೆನ್ನಾಸೆಯ ಮಾಣು

೩೫೧.
.....ಲಾಲಿಸೆ
ನ್ನೊಡೆಯ ಬಸವೇಶನರ್ಧಾಂಗಿ ಸನ್ನುತ ಕೃಪಾಂಗಿ ಸರ್ವಾಂಗಲಿಂಗಿ ನೀನು
ಮೃಡಶರಣರಾದವರ ಮನೆಯ ದಾಸಿಯು ಮೆಟ್ಟು
ವಡಿಗೆರ್ಪನಾಂತವಳ್ಗೊರೆಯಲ್ಲವಾನೆನ್ನ
ನಡಿಗಡಿಗೆ ನೀವಿಂತು ಬಣ್ಣಿಸಲ್ ತಕ್ಕಳಲ್ಲದಳ ನುತಿಗೆ ||೧||
ಚಿರಭಕ್ತಿ ಭಿಕ್ಷಮಂ ನಿಮ್ಮಲ್ಲಿ, ಸತತ ಸ
ದ್ಗುರುಭಕ್ತಿ ಭಿಕ್ಷಮಂ ವೀರಮ್ಮನಲಿ, ಲಿಂಗ
ದುರುಭಕ್ತಿ ಭಿಕ್ಷಮಂ ಕಮಳವ್ವೆಯಲಿ, ಶಿವಧ್ಯಾನದಮಂತ್ರದ ಭಿಕ್ಷವ
ಪರಮಗುರುತಾಯಿ ಶಿವನಮ್ಮನಲಿ, ಸುಜ್ಞಾನ
ದರುಹಿನ ಸುಭಿಕ್ಷಮಂ ವಿಮಳವ್ವೆಯಲ್ಲೆಲ್ಲ
ಶರಣ ಸತಿಯರೊಳು ವೈರಾಗ್ಯಭಿಕ್ಷವ ಬೇಡಿ ಬಂದ ಭಿಕ್ಷಾಂದೇಹಿಯಾಂ ||೨||
ಕಾರುಣ್ಯದಿಂದೆನ್ನ ಮನದರಕೆಯನ್ನಿತ್ತು
ಪಾರವೈದಿಸುವುದು.......

೩೫೨.
ಇಕ್ಕದಿರ್ ತಂದೆ ಬ[=ಮ]ನ್ನಣೆಯ ಬಸಿಶೂಲಕ್ಕೆ,
ತಕ್ಕಳಲ್ಲಾ ನುತಿಗೆ; ಗುರುಶಿಷ್ಯರಂ, ಪೆತ್ತ
ಮಕ್ಕಳಂ ಪೆತ್ತರೊರೆದೊರೆದು ನೋಡದೆ ನೋಳ್ಪರಾರ್?
ಕುಂದೆಯವರು ನೋಡೆ? ||೧||
ತೂಕದಿಂದೊರೆಯಿಂದೆ ನೋಟದಿಂ ಚೆಂಬೊನ್ನ
ಜೋಕೆಗೈದರಮನೆಗೆ ಸಲಿಸುವನೊಲೆನ್ನುವಂ
ನೀ ಕರುಣದಿಂ ನೋಡಿ ರುದ್ರಂಗೆ ಸಲ್ವೊಲೆಸಗಿರ್ದು ಸಂದೆಯವದೇಕೆ
ಮೇಕೆಯೊಂದರ ದೆಸೆಯೊಳಳಿದ ಭಟನಸುವ ಧರ
ಣೀಕಾಂತ ಪ್ರಮುಖ ಭೂಭುಜರ ಹರಣವ ಹರನ
ವಾಕಿನಿಂ ಮುನ್ನ ಉಳುಹಿದ ದುಷ್ಟನಿಗ್ರಹ ಶಿಷ್ಟಪ್ರತಿಷ್ಠೆಯೆಂದೆ ||೨||
ಎನ್ನ ಸೋದರವೆ ಎನ್ನ ತಂದೆ ಮದ್ಗುರುವೆ
ಕಿನ್ನರಿಯ ಬ್ರಹ್ಮಯ್ಯ ಬಿಡು ಮನದ
ಖಿನ್ನತೆಯ ಬಿಡದೊಡಾಂ ನಿನ್ನ ಸೋದರಿಯಲ್ಲ ||೩||

೩೫೩.
ಪರಮಗುರು ತಂದೆ ಕಿನ್ನರಿಯ ಬ್ರಹ್ಮಯ್ಯ, ತವ
ಕರುಣಾಂಜನದಿ ಬಗ್ಗನಗ್ಗಳದ ಬಗ್ಗೆನಿಪ
ಶರಣಾಳಿಯಂ ಕಂಡು ಗೆಲುವಾದೆ, ಬಲವಾದೆ,
ಛಲವಂತೆಯಾದೆ ಮದದ
ಕರುವಾದೆ, ಕರುಣಗುಣಕಾರಿಯಾದೆ, ಭವವಲ್ಲರಿ
ಗರಿಗಿತ್ತಿಯಾದೆ, ಸನ್ಮೂರ್ತಿ ಸಾಮ್ರಾಜ್ಯಕ್ಕೆ
ಸಿರಿದೇವಿಯಾದೆ, ನನ್ನೊಲು ಧನ್ಯರಾರ್

೩೫೪.
ಹಂಬುಹರಿದುರುಳ್ವ ನರಗಿರದೆ ತಿಂಥಿಣಿಯ ಪೆ
ರ್ಗೊಂಬು ಕೈಬಸಮಾದೊಲಂಬುಧಿಯೊಳಾಳ್ವಗೊದ
ಗಿಂ ಬೈತುರಂ ಬಂದೊಲರಿಗಳರೆಯುಟ್ಟಿ ಬಪ್ಪಡೆಗಭಯಕರದೊಳೆಸೆವ
ಬೆಂಬಲಂಗೂಡಿದೊಲ್, ದಿಕ್ಕಿಲ್ಲದಳುವೆಳಕ
ಗಂ ಬೆಸಲೆಯಾದಳಳ್ತಂದೆತ್ತಿದಂದಾದು
ದಂಬಕತ್ರಯ ನಿಮ್ಮ ಶರಣರಡಿಗಾಣುತೆನಗೆ ||೧||
ಇನ್ನು ನೋಡೆದೆನ್ನಧಟ ಕಾಮಾದಿವರ್ಗಗಳ
ಬೆನ್ನ ಬಾರಂಗಳೆವೆನೆಂಟು ಮದಗಳ ಗಂಟ
ಲಂ ನಿಟಿಲೆನಲ್ ಮುರಿವೆಕರಣೇಂದ್ರಿಯಗಳ ಕಲಕುವೆನುಳಿದ ದುಃಖಕರ್ಮವ
ಛಿನ್ನ ಭಿನ್ನಂಗಡಿವೆ ||೨||

೩೫೫.
ತಂದೆತಾಯೆನಗೆ ಶ್ರೀಗುರುನಾಥ, ತೆತ್ತಿಗರ್
ಕಂದುಗೊರಲನ ಶರಣಸಂದೋಹ, ಗಂಡನಾ
ನಂಡಿವಾಹನ ಚೆನ್ನಮಲ್ಲಿಕಾರ್ಜುನನಿದಕ್ಕಿಲ್ಲ ಸಂದೆಯ ತಿಲಾಂಶ
ಎಂದೆಂದು ಪ್ರಭುವೆ ನಿಮ್ಮಯ ಮನೆಯೊಳೆನ್ನ ನಡೆ
ವಂದಮಂ ನೆಗಳಿದನುಮತದಿಂದ ಮುಳಿಯಲೇಕೆ? ||೧||

೩೫೬.
....ಅಯ್ಯ ತನು-ಜೀವ-ಭಾವಂಗೆಳೆನಗಿರ್ದೊಡೇಂ
ತತ್ತ್ರಿವಿಧವು |
ಇಲ್ಲದಾ ಘನವೆ ಮನವಾದ ದೂಸರ್ನೀವೆ
ಬಲ್ಲಿರಲ್ಲದೆಯಿತರಾರ್ ಬಲ್ಲರಹುದು ಮರ
ಹಿಲ್ಲದಿರ್ಪೆನ್ನನುವನು....

೩೫೭.
....ಬಸವಬ್ಬ ನಿಮ್ಮೊಲ್ಮೆಯಿಂ ಕಾಮಾರಿಯ |
ಅಪ್ಪಿ ಪೆರತರಿಯೆ | ನೋಟಕ್ಕೆ ನಾಮದಲ್ಲಿ ಪೆ
ಣ್ಣಪ್ಪೆನಲ್ಲದೆ ಭಾವಿಸಲ್ಗಂಡುರೂಪು ಬಿಡ
ದರ್ಪಿರ್ಪುನ್ನನೆಂಬುದ ನಿಮ್ಮ ಲಿಂಗವೆ ಬಲ್ಲುದು

೩೫೮.
ಎನ್ನ ಭಕ್ತಿಯು ನಿಮ್ಮ ಧರ್ಮ ಪ್ರಭುವಿನ ಧರ್ಮ
ವೆನ್ನ ಸುಜ್ಞಾನವೆನ್ನ ಪರಿಣಾಮವೇ
ಚೆನ್ನಬಸವೇಶ್ವರನ ಧರ್ಮವೆಲ್ಲಾ ಪುರಾತನರ ಧರ್ಮವೆನ್ನ ವಿರತಿ |
ಎನ್ನಳವದೇಂ ದೇವ ನಿಮ್ಮ ಸೊಮ್ಮ ನಿಮ್ಮ
ಪನ್ನಳಿನಕಪ್ಪೈಸಿ ಪರಿಶುದ್ಧಳಪ್ಪವ
ಳ್ಗಿಂನ್ನುಂಟೆ ಪರಮಸ್ವತಂತ್ರತ್ವ

೩೫೯.
ನಂಬಿದೆ ಗುರುವೇ ನಂಬಿದೆ, ನಂಬಿದೆ ಸ್ವಾಮಿ
ನಂಬಿದೆ ಅಂಬಿಕಾರಮಣ ನೀನಂಬಿಗ ||೧||
ಹೊಳೆಯ ಬರವ ನೋಡಂಬಿಗ
ಸೆಳಹು ಬಹಳ ಕಾಣಂಬಿಗ
ಸುಳುಹಿನೊಳಗೆ ಬಿದ್ದೆನಂಬಿಗ
ಸೆಳೆದುಕೊಳ್ಳೋ ನೀನಂಬಿಗ ||೧||
ಆರು ತೆರೆಯ ನೋಡಂಬಿಗ! ಬಲು
ಮೀರಿ ಬರುತಲಿವೆ ಅಂಬಿಗ!
ಹಾರಲೊದೆದು, ಎನ್ನ ತಡಿಗೆ ಶೆರಿಸು, ನೀ
ದೂರ ಮಾಡದಿರು ಅಂಬಿಗ ||೨||
ತುಂಬಿದ ಹರಿಗೋಲಂಬಿಗ ಅದ
ಕೊಂಬತ್ತು ಛಿದ್ರ ನೋಡಂಬಿಗ
ಸಂಭ್ರಮವನು ನೋಡಂಬಿಗ ಇದ
ರಿಂಬನರಿದು ತೆಗೆಯಂಬಿಗ ||೩||
ಹತ್ತು ಹತ್ತು ನೋಡಂಬಿಗ
ಹತ್ತಿದರೈವರು ಅಂಬಿಗ
ಮುತ್ತಿಗೆಗೊಳಗಾದೆನಂಬಿಗ, ಎನ್ನ
ನೆತ್ತಿಕೊಳ್ಳೋ ನೀನಂಬಿಗ ||೪||
ಸತ್ಯವೆಂಬ ಹುಟ್ಟಂಬಿಗ ಸದ್
ಭಕ್ತಿಯೆಂಬ ಪಥವಂಬಿಗ
ನಿತ್ಯಮುಕ್ತ ನಮ್ಮ ಚೆನ್ನಮಲ್ಲಿಕಾರ್ಜುನನ
ಮುಕ್ತಿಮಂಟಪಕೊಯ್ಯೋ ಅಂಬಿಗ ||೫||

೫೬೦.
ಕರಕರೆ ಕರಕರೆ ಘನವಯ್ಯೋ
ಕರೆದು ಹೇಳಿ ಎಮ್ಮವರಿಗೆ ಸುದ್ದಿಯ ||ಪಲ್ಲವ||
ಅತ್ತೆಯ ಮಾತುಗಳೆ ಚಿತ್ತವ ಕಲಕಿವೆ
ಮತ್ತೆ ಮಾವನೊಳ್ಳಿದನಲ್ಲ; ಎನ್ನ
ಚಿತ್ತವಲ್ಲಭನಿಂದಾದ ಭಂಡ ನಾ
ವಿಸ್ತರಿಸಲಾರೆ, ಹೇಳಿ, ಎಮ್ಮವರಿಗೆ ||೧||
ಮುನ್ನ ಹುಟ್ಟಿದ ಮೂರು ಮಕ್ಕಳ ಕಾಟ
ಕನ್ನೆಯರೈವರ ಕೂಡಿಕೊಂಡು
ಮನ್ನಣೆಯನಿತಿಲ್ಲ ಮೈದುನರೈವರ
ಇನ್ನಿರಲಾರೆ ಹೇಳಿ ಎಮ್ಮವರಿಗೆ ||೨||
ನಾರಿಯರೈವರ ಕೂಡಿಕೊಂಡು ನಾ
ದಾರಿ ಸಂಗಡವಾಗಿ ಬರುತಿರಲು
ಭೋರನೆ ಶ್ರೀಶೈಲ ಚೆನ್ನಮಲ್ಲೇಶಂಗೆ
ಓರಂತೆ ಮನಸೋತೆ ಸಾರಿತ್ತ ಬಾರೆನೆ ತಾಯಿ ||೩||

೫೬೧.
ಒಲ್ಲೆನೊಕತನವ ಒಲ್ಲೆ, ನಾನಾರೆ
ಕೊಲ್ಲ ಬಂದಾನೆನೆ ಕೋಪದಲಿ ನಲ್ಲ ||ಪಲ್ಲವ||
ಮಾವನೆಂಬುವ ನನ ಮನವ ನೋಯಿಸಿದನೆ
ಆವಾಗ ನಮ್ಮತ್ತೆ ಅಣಕವಾಡುವಳು
ಭಾವನೆಂಬವ ಕೆಂಡ, ಬಲು ಬಾಧಿಸುತಿಹ
ಬೇವುತಲಿರ್ದೆನು ಮತ್ತಿನ್ನಾರಿಗೆ ಹೇಳುವೆ ||೧||
ಮನೆಯಾತನ ಕೊಂದು, ಮಾವನ ಹಳ್ಳವ ಕೂಡಿ
ಬಿನುಗು ಭಾವದಿರನು ಬೀದಿಪಾಲು ಮಾಡಿ
ನನಗೆ ವೈರಿಯಾದ ಅತ್ತೆನೆ ಕೊಂದು
ಮನಸು ಬಂದಲ್ಲಿ ನಾನಿಪ್ಪೆನೆಲೆ ತಾಯಿ ||೨||
ಮುನ್ನಿನ ಪ್ರಮಥಗಣಂಗಳೆನ್ನ ಬಂಧುಬಳಗ
ಉನ್ಮನಿಯ ಜ್ಯೋತಿ ಬ್ರಹ್ಮರಂಧ್ರದ ಮೇಲಿಪ್ಪ
ಚೆನ್ನಮಲ್ಲಿಕಾರ್ಜುನನೆನ್ನನೊಲಿದಡೆ
ಇನ್ನಿತ್ತ ಬಾರೆ ನಾನೆಲೆ ತಾಯೆ ||೩||

೩೬೨.
ನಿಬ್ಬಣಕ್ಕೆ ಹೋಗುತೈದೇನೆ, ನೋಡಕ್ಕಯ್ಯ!
ನಿಬ್ಬಣಕೆ ಹೋದಡೆ, ಮರಳಿ ಬಾರನಕ್ಕಯ್ಯ! ||ಪಲ್ಲವ||
ಧನವು ಧಾನ್ಯ ಮನೆಯೊಳುಂಟು;
ಘನವು ಎನ್ನ ಮನೆಯೊಳಿಲ್ಲ
ಮನೆಯ ಗಂಡ ಮುನಿಯಲೆನ್ನ ಮಂಡೆ ಬೋಳಾಗದು ||೧||
ಮಂಡೆದುರುಬ-ಮಿಂಡತನದಿ
ದಿಬ್ಬಣಕ್ಕೆ ನಾ ಹೋದಡೆ
ಮಂಡೆ ಬೋಳಾಗದನಕವಪ್ಪುದೆನಗೆ ನಿಬ್ಬಣ? ||೨||
ಗಂಡನುಳ್ಳ ಗರತಿ ನಾನು
ರಂಡೆಯಾದನಯ್ಯೊ; ಇನ್ನು
ಕೊಂಡೊಯ್ಯೊ, ಶಿವನೆ, ಎನ್ನ ಹುಟ್ಟಿದೈವರು ಮಕ್ಕಳ ||೩||
ಕಾಮವೆಂಬ ಹೊಲನ ದಾಂಟಿ
ಸೀಮೆಯೆಂಬ ಹೊಲಬನರಿದು
ಹೇಮಗಿರಿಯ ಹೊಕ್ಕ ಬಳಿಕ ಮರಳಿ ಬಾರೆನಕ್ಕಯ್ಯ ||೪||
ಸಾಗಿ ಬೇಗದಿಂದ
ಹೋಗಿ ನೆರೆಯದಿದ್ದರೆ,
ಚೆನ್ನಮಲ್ಲಿಕಾರ್ಜುನಯ್ಯ ಮುನಿವ ಕಾಣಕ್ಕಯ್ಯ ||೫||

೩೬೩.
ಮುಕುತಿ ಹೋಯಿತು ಮುರುಕಿಸುವನಕ
ಮೂಕುತಿ ಹೋಯಿತು ||ಪಲ್ಲವ||
ಅಣಕವನಾಡುತ್ತ ಐವರ ಕೂಡೆ
ಸೆಣಸುತ ನಾಲ್ವರ ಕೈವಿಡಿದು,
ಮಣಕದಿಂದಲಿ ಆರು ಮಂದಿಯ ಕೂಡೆ,
ಉಣ ಕುಳಿತಲ್ಲಿ ಮೈಮರೆದೆನಕ್ಕ ||೧||
ಅಕ್ಕರಿಂದಲಿ ಹತ್ತು ಮಂದಿಯ ಕೂಡಿ
ನಕ್ಕರು, ಕೆಲೆದರು ತಮತಮಗೆ
ಮಕ್ಕಳಾಟಿಕೆಯ ನಾನಾಡುವ ಹೊತ್ತಿಗೆ
ಇಕ್ಕುತಲಿ ಮೈಮರೆದೆನಕ್ಕ ||೨||
ಅತ್ತ ಮಾರುದ್ದರುವೆಯ ಕೂಡಲಾಗಿ
ಸುತ್ತೇಳು ಕೇರಿಯರು ಸೆಣಸುವರು
ಚಿತ್ತವಲ್ಲಭ ಚೆನ್ನಮಲ್ಲೇಶ ಕೂಡಿ
ಮುತ್ತೈದೆಯಾಗೆನ್ನನಿರಗೊಡಕ್ಕ ||೩||

೩೬೪.
ಕಣ್ಣಾರೆ ನಾ ಕಂಡೆ ಕನಸಿನ ಸುಖವ
ಉಣ್ಣದೂಟವನುಂಡು ಊರ ಸುಡುವುದ ||ಪಲ್ಲವ||
ಮಾಣದಚ್ಚ ಜಲದೊಳೆಂದು ಆಣಿಯಾದ ಮುತ್ತು ಹುಟ್ಟಿ
ಕೋಣೆಯೆಂಟರೊಳಗೆ ತಾನೆ ತಿರುಗುವುದು
ಆಣಿಕಾರರು ಹಂಡು, ಆ ಮುತ್ತ ಬೆಲೆ ಮಾಡಿ,
ಜಾಣತನದಲ್ಲಿ ಕೊಂಡೊಯ್ದರದನು ||೧||
ಇಂಬಪ್ಪ ಗಿರಿಯಲಿ ಕೊಂಭೆರಡನೆ ಕಂಡು
ಶಂಭುನಾರಿಯ ನೋಡಿ ಮಾತಾಡೆ
ಮುಂಬರಿದಾಡುವ ಮಾವತಿಗನ ಕೊಂದು
ಸಂಭ್ರಮಿಸಿ ಉಂಬ ಶಿವಶರಣರೆಲ್ಲರನು ||೨||
ಮುಪ್ಪಿಲ್ಲದ ಸರ್ಪನೊಪ್ಪವಿಲ್ಲದೆ ಕೊಂದು
ಒಪ್ಪುವ ಆತ್ಮಕನ ನೋಟಕರ
ಉಪ್ಪರಿಗೆಯ ಮೇಲೆ ಉರಿವ ಲಿಂಗವನು ಕಂಡು
ಒಪ್ಪದ ಚೀಟಿ ಸುಟ್ಟುಹಿದ ಮಹಿಮರ ||೩||
ಜಗಕೆ ಎಚ್ಚರುವಾಗಿ ಅಘಹರರೂಪಾಗಿ
ಅಗಣಿತವಹ ಘನಮಹಿಮರನು
ಬೆಗೆಗೊಳ್ಳದೆ ಭಾವೆನ್ನರ ಸಂಗವ
ನೊಗೆದು ಈಡಾಡುವ ಓಜೆವಂತರನು ||೪||
ಮನಕ್ಕೆ ಗೋಚರವಾಗಿ ತನುಮನ ರೂಪಾಗಿ
ಅನುವಿನ ವಿವರವ ಬಲ್ಲವರ
ನೆನೆವರಿಗೆ ಸಿಲ್ಕಿ ನೇಮವ ಕೋರುವ
ಘನ ಚೆನ್ನಮಲ್ಲನೆಂಬಿನಿಯನನು ||೫||

೩೬೫.
ಕೈಯ ತೋರೆಯಮ್ಮ, ಕೈಯ ನೋಡುವೆನು
ಬಯ್ಯಾಪುರದಿಂದಲಿಳಿದು ಬಂದೆ ನಾನು
ಮೈಯೊಳಗಿರ್ದ ವಸ್ತುವ ಹೇಳುವೆನು ||ಪಲ್ಲವ||
ವಚನ:
ಚೆಲುವೆತ್ತ ಭಾವದ ಲಕ್ಷಣವ ಹೇಳುವೆ ತೋರೆಯಮ್ಮ
ಅರಿವಿನ ಬಗೆ ಯಾವುದೆ ಕೊರವಿ? ನಿನ್ನ ನಾಮ ಸೀಮೆ ಯಾವುದು! ಎಲ್ಲಿಂದ ಬಂದೆಯಮ್ಮ?
ಉತ್ತರೋತ್ತರ ಬಯ್ಯಾಪುರದ ಮಾಹಾದೇವಿಯ ವರವೆ; ಮಹಾದೇವನ ಒಲವೆ;
ಅಲ್ಲಿಂದ ಇಳಿದು ಬಂದೆನಮ್ಮ! ನಿನ್ನ ತನುವಿನೊಳಗಿರ್ದ ನಿತ್ಯಾನಿತ್ಯವ ವಿವರಿಸಿ
ಹೇಳುವೆ ನಂಬು ನಂಬೆಯಮ್ಮ

ಪದ:
ಎಂಟು ಮಂದಿ ನಂಟರು ನಿಮಗಮ್ಮ
ಉಂಟಾದ ಹತ್ತು ದಿಕ್ಕಿನಲ್ಲಿ ಬಳಗವಮ್ಮ
ಗಂಟಲ ಮೆಟ್ಟಿಕೊಂಡೈದರೆ ನಿಮ್ಮ,
ಸುಂಟರಗಾಳಿಯಂತೆ ತಿರುಗುವೆಯಮ್ಮ
ಕಂಟಕ ಬಿಡಿಸುವೆ ಕರುಣದಿ ನಿಮ್ಮ, ನೀಲ
ಕಂಠನಂಘ್ರಿಯ ಬಿಡದೆ ಪಿಡಿಯಮ್ಮ ||೧||

ವಚನ:
ನಂಬುವುದಕೊಂದು ಕುರುಹುಂಟೆ ತಾಯಿ?
ಭೂದೇವಿ ಮೊದಲಾದ ಅಷ್ಟತತ್ವಾಧಿಕರು ನಿನ್ನ ಸಾಕ್ಷಿಬಂಧುಗಳಮ್ಮ, ದಶಮುಖ
ಪವನಸಂಕುಳವೆ ನಿನ್ನ ಇಷ್ಟರುಗಳಮ್ಮ! ಅನ್ಯರು ಸೇರರು; ನಿನ್ನವರು ನಿನಗೆ ವೈರಿಗಳಮ್ಮ
ಕಂಟಕವಾಗಿ ಕಾಡುವುದಮ್ಮ

ಅಹುದಹುದು ಅದೆಂಥ ಕಂಟಕವೆ ತಾಯಿ!

ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳಲ್ಲಿ ಸತ್ತು ಸತ್ತು ಹುಟ್ಟಿದೆಯಮ್ಮ. ಬಾರದ
ಭವದಲ್ಲಿ ಬಂದೆಯಮ್ಮ. ತೊಡದ ಚೋಹವ ತೊಟ್ಟೆಯಮ್ಮ. ಕಾಣದ ಕರ್ಮವ
ಕಂಡೆಯಮ್ಮ. ಉಣ್ಣದಾಹಾರವನುಂಡೆಯಮ್ಮ. ಇಲ್ಲಿಗೆ ಈ ಮನೆಗೆ ಬಂದೆಯಮ್ಮ.
ಇದು ನಿನ್ನ ಪುಣ್ಯದ ಫಲವಮ್ಮ. ಈ ಕಂಟಕಕ್ಕಂಜಿ ಕಳವಳಿಸದಿರಮ್ಮ. ನಿರಂಜನನ
ಪಾದವ ಭಕ್ತಿಯಿಂ ಧೃಡವಿಡಿಯಮ್ಮ

ಪದ:
ಒಡನೆ ಹುಟ್ಟಿದೈವರು ನಿನಗಮ್ಮ;
ಕೆಡಹಿಯಾರು ಮಂದಿ ಕೊಲುತಿಹರಮ್ಮ;
ಪಿಡಿದರೆ ತಾಯಿ-ಮಕ್ಕಳು ಬಯ್ವರಮ್ಮ;
ತೊಡರಿಕೆ ನಾಲ್ವರು ಹೆದರಿದಿರಮ್ಮ
ಪೊಡವೀಶನಡಿಯ ಬಿಡದೆ ಪಿಡಿಯಮ್ಮ;
ಒಡಲ ಕಿಚ್ಚಿನ ಕೊರವಿಯು ನಾನಲ್ಲಮ್ಮ ||೨||

ವಚನ:
ಚಿಂತೆಯ ಬಿಡಿಸುವ ನಿಶ್ಚಿಂತ ಪದವಾವುದೆ ತಾಯಿ?
ನಿನ್ನೊಡನೆ ಜನಿಸಿದ ಪಂಚಭೂತಂಗಳು ನಿನಗೆ ಸಂಗವಾಗಿ ಹಿತಶತ್ರುತನದಿ ಭವ
ದತ್ತ ಕೆಡಹುವರಮ್ಮ, ಅವರೊಡೆಯರು ನಿನ್ನನಾಳಿಗೊಂಡು ಕಾಡುವರಮ್ಮ
ಇದ ವಿವರಿಸಿ ಪೇಳೆ ತಾಯಿ!

ಚತುರ್ಮುಖಬ್ರಹ್ಮ ಹೊಡೆದಾಳುತೈದಾನೆಯಮ್ಮ ವಿಷ್ಣು ವಿಧಿಪಾಶದಿಂ ಬಿಗಿಯೆ
ರುದ್ರನ ಹೊಡೆ ನಿಚ್ಚ ಹೊಯ್ಯುತಿದೆಯಮ್ಮ. ಈಶ್ವರನಂತುರದಲ್ಲಿ ಸದಾಶಿವ ಸೈಗೆಡೆದನಮ್ಮ.
ಒಳಹೊರಗೆ ನಿನಗೈವರ ಕಟ್ಟು-ಕಾವಲು ಘನವಮ್ಮ. ಮತ್ತೊಮ್ಮೆ ಕಾಮ
ಕಾತರಿಸಿ, ಕ್ರೋಧವಿರೋಧಿಸಿ, ಮದವಹಂಕರಿಸಿ ಮಚ್ಚರ ಕೆಚ್ಚು ಬಲಿದು, ಹೊಯ್ದು-
ಬಯ್ದು-ಕೊಯ್ದು-ಕೊರೆದು, ಚಿತ್ರಿಸಿ, ಚಿರಣಿಸುವರಮ್ಮ. ಮತ್ತೊಮ್ಮೆ ಏಳು ಮಕ್ಕಳ
ತಾಯಿ ಹಿಡಿದು ಹೀರಿಹಿಪ್ಪೆಯ ಮಾಡುವಳಮ್ಮ. ಆ ಮಕ್ಕಳ ಜನನ ಏಳಕೇಳು ದಿನವಮ್ಮ.
ಅಳುಕಿಸಿ-ನಡುಕಿಸಿ ಕಳವಳಿಸಿ-ಹೆದರಿಸಿ, ಎತ್ತರತತ್ತರ ಮರುಳು ಮಾಡಿ ಕನಸು-
ಕಳವಳ-ಒತ್ತರಮಂ ಒತ್ತರಿಸಿ ನಡೆದು ಬುದ್ಧಿಯರಿದಂತೆ ಕಂಪಿಸಿ ಕಳವಳಿಸಿ ನುಡಿವ
ರಮ್ಮ. ಮತ್ತೊಮ್ಮೆ ಮನಬಂದಂತೆ ನಡೆದು ಬುದ್ಧಿಯರಿಯದಂತೆ ಸ್ಥಿರಕರಿಸಿ ಚಿತ್ತಬಂದಂತೆ
ಅವಧರಿಸಿ, ಅಹಂಕಾರ ತೋರಿದಂತೆ ಬಿರಿಪಿಡಿದಲೆವುತ್ತಿಪುದಮ್ಮ. ಒಮ್ಮೆ ಮರನಾಗುವೆಯಮ್ಮ,
ಒಮ್ಮೆ ಮನುಷ್ಯಳಾಗುವೆಯಮ್ಮ. ಇದರೊಳು ಸಿಲ್ಕಿದೆನೆಂದು ಚಿಂತಿಸದಿರಮ್ಮ.
ಈ ಚಿಂತನೆಯ ಮಂತ್ರದಿಂ ಕಳೆದು ನಿಶ್ಚಿಂತದೋರಿಸುವೆ. ಎನ್ನೊಡೆಯ
ಜಗದೀಶ ಆದಿಲಿಂಗನ ಪಾದವನನುದಿನ ಅಗಲದೆ ನಂಬಿ ನಚ್ಚಿ ಭಜಿಸಮ್ಮ.

ಅದು ಎಂಥ ಉಪದೇಶದ ನೋಂಪಿಯಮ್ಮ?

ಮಂಗಳವಾರದ ದಿನ ಮನೆಯ ಸಾರಿಸೆಯಮ್ಮ, ಕಟ್ಟುಮುಟ್ಟು ಹೊರಯಿಕೆ ಬಿಸಾಡೆಯಮ್ಮ.
ರಂಗಮಂಟಪವ ರಚಿಸಿ ಚೌಕವಲಂಕರಿಸೆಯಮ್ಮ. ರಂಗದಕ್ಕಿಯಮೇಲೆ ಕಳಶವನ್ನಿಟ್ಟು
ಐವರು ಅಚ್ಚ ಮುತ್ತೈದೆಯರ ಕುಳ್ಳಿರಿಸೆಯಮ್ಮ. ತೂ[=ತಾ]ಳಮೇಳದವರ ಕರೆ
ತಂದು ಶುಭವಾದ್ಯವ ಮೊಳಗಿಸೆಯಮ್ಮ. ಮನೆಯ ದೇವರ ಜ್ಯೋತಿಯ ತುಂಬಿ, ಕಪ್ಪುರದ
ಮಂಗಳಾರತಿಯ ತಂದಿಸಿಸೆಯಮ್ಮ, ಸುಚಿತ್ತೆಯಾಗಿ ಸಮ್ಮುಖದಲ್ಲಿ ಕುಳ್ಳಿರೆಯಮ್ಮ.
ತಲೆಗೈಯನಿಕ್ಕಿ, ವಿಭೂತಿಯ ಹಣೆಗಿಟ್ಟು, ಕಿವಿಯೊಳು ಮಂತ್ರವನುಸುರಿದನಮ್ಮ;
ನೆತ್ತಿಯ ಲಿಂಗವ ಹಸ್ತಕೆ ಕೊಟ್ಟು, ಕರ್ತೃ ಅಲ್ಲಯ್ಯ ಸಾಕ್ಷಿಯಾಗಿ! ಉಪಾಯದಿಂ
ಉದರವ ಹೊರೆವ ಉಪಾಧಿ ಕೊರವಿಯಲ್ಲ. ಪರವ ತೋರುವ ಪರಮದೀಕ್ಷಾ ಕೊರವಿ ನಾನಮ್ಮ.

ಪದ:
ಈಶಮಹೇಶನೆ ಮನೆದೈವವಮ್ಮ
ಬೇಸರು ಮಾಡಿ, ರಾಶಿದೈವವ ಹಿಡಿಯೆ
ಕಾಸಿಂಗೆ ಬಾರದ ಕಸನಪ್ಪೆಯಮ್ಮ,
ಹೇಸಿ ದೈವವ ಬಿಡು, ಪಿಡಿಯೀಶನಡಿಯ,
ಮೀಸಲ ಹಿಡಿಯಮ್ಮ ಸೂಸದ ಮನವ
ನಾಸಿಕಾಗ್ರದೊಳು ಗಮಿಸಿ ನಿಲ್ಲಮ್ಮ! ||೩||

ವಚನ:
ಇಂತೀ ದೇವರಿಗೆ ನಿಷ್ಠೆಯಿಂದ ನೇಮವ ಮಾಡಬೇಕಮ್ಮ!
ಅದೆಂಥಾ ನೇಮವೇ ತಾಯಿ?

ಪೊಡವಿಗೊಡೆಯ ಮೃಡನೊಬ್ಬನೆ ನಿಮ್ಮ ಮನದ ದೈವವಮ್ಮ. ಈ ದೇವರ ನೋತು
ಫಲವೇನೂ ಕಾಣೆಂದಲಸದಿರಮ್ಮ. ನಾಡ ಹಿಡಿದಾಡುವ ಕೇಡಿಗ ದೈವವ ಬಗೆಯದಿರಮ್ಮ.
ಅವು ನಿಮ್ಮ ಕಾಡುವವಮ್ಮ. ಕರಕಷ್ಟಬದ್ಧಭವಿಯಾಗುವೆಯಮ್ಮ. ಲಜ್ಜೆಗೆಟ್ಟು
ಕಿರುಕುಳ ನೀಚದೈವಂಗಳ ಸಂಗ ಬೇಡಮ್ಮ. ಎಲ್ಲ ದೇವರೊಡೆಯ ಲಿಂಗದೇವನೆ
ನಿನ್ನ ಮನದೈವ ಕುಲದೈವವಮ್ಮ. ಮನದಲ್ಲಿ ನಂಬಿ ನಚ್ಚಿ ಗುಡಿಗಟ್ಟೆಯಮ್ಮ. ಏಳು ಮಂದಿ
ಅಚ್ಚಮುತ್ತೈದೆಯರನೊಂದು ಹೊತ್ತನಿರಿಸೆಯಮ್ಮ. ಶುದ್ಧಪದ್ಮಾಸನವನಿಕ್ಕೆಯಮ್ಮ.
ನಾಭಿ ಪವನವನೆತ್ತೆಯಮ್ಮ. ನಾಸಿಕಾಗ್ರದಿ ನಿಲ್ಲೆಯಮ್ಮ. ರವಿಶಶಿಗಳಾಟವ
ನೋಡೆಯಮ್ಮ. ತಾಳಮದ್ದಲೆಯ ಬಾರಿಸೆಯಮ್ಮ. ಓಂ ನಮಶ್ಶಿವಾಯವೆಂದು ಓಲಗವ ಮಾಡೆಯಮ್ಮ

ಪದ:
ಕುಂಭಿನಿದೈವವ ಹಿಡಿಯೆ ನೀ ಕೆಟ್ಟೆ!
ಶಂಭುಲಿಂಗನ ಕೈಯ ಬಿಡಲು ನೀ ಭ್ರಷ್ಟೆ!
ಇಂಬುಗೊಡಲು ಬೇಡ, ಇದಿರಿಟ್ಟವೆಲ್ಲ!
ಹಂಬಲು ಬಿಡು ಭ್ರಷ್ಟದೈವವನೆಲ್ಲ
ನಂಬಿ ಶುದ್ಧವಾಗೆ ನಿಜಲಿಂಗದಲಿ
ಮುಂಬಾಗಿಲೊಳು ಪೊಕ್ಕು ಲಾಲಿಸು ಸೊಲ್ಲ! ||೪||

ವಚನ:
ಇಂತೀ ನಿಷ್ಠೆ ನಿರ್ಧರವಾಗಬೇಕೆಯಮ್ಮ!
ಅದೆಂಥಾ ಧೃಢಭಾವವೆ ತಾಯಿ?

ನಾಡಾಡಿ ದೈವವ ನೋತಡೆ ಕೇಡಲ್ಲದೆ ಸುಖವಿಲ್ಲವಮ್ಮ. ಏಕಲಿಂಗನಿಷ್ಠೆ ಇಲ್ಲದಡೆ
ಕಾಕಪ್ಪೆಯಮ್ಮ. ಕಂಡಕಂಡ ದೈವಂಗಳ ಕೊಂಡೆಸಗಲು ಮುಡುಹಂ ಸುಟ್ಟು ನೀರು
ಮುಳುಗಿ, ಸುತ್ತಿ, ತಲೆಯಂ ತರಿದು, ಬತ್ತಲೆ ಬಳಸಿ, ಕುರುಳು ಬೆರಳು ಮುಂಬಲ್ಲು
ಹೋಗಿ, ಕೆಟ್ಟು, ಡೊಣೆಯಲಿ ತಿಂದು, ನಾಯಾಗಿ ಬೊಗುಳಿ, ಲಜ್ಜೆಗೆಟ್ಟು ಚೀಮಾರಿಯಪ್ಪೆಯಮ್ಮ.
ನೆನೆದು-ಬಿರಿದು-ಉಲಿದು, ಕರಗಿ ಕರಿಮುರುಯಪ್ಪೆ. ಬಿನುಗುಭಿಕಾರ
ದೈವಂಗಳ ನೆನೆಯದಿರಮ್ಮ. ಪ್ತತಿಪೂಜೆ ಮಾಡದೆ ಆಚಾರದಲ್ಲಿ ನಿಂದುದೆ ನಿಷ್ಠೆಯಮ್ಮ.
ನಿಷ್ಠೆಯಿಲ್ಲದ ಪೂಜೆ ಎಷ್ಟು ಕಾಲ ಮಾಡಿದರೂ ನಷ್ಟವಲ್ಲದೆ ದೃಷ್ಟವುಂಟೆ? ಆದಿಲಿಂಗನ
ಭಜಿಸೆಯಮ್ಮ. ಆತ್ಮಲಿಂಗವ ಧ್ಯಾನಿಸಮ್ಮ. ಚಿತ್ತ ಶುದ್ಧವಾಗಿರಲಮ್ಮ.

ಅದೆಂಥಾ ಸುಯಿಧಾನವೆ ತಾಯಿ?

ಒಂಬತ್ತು ಬಾಗಿಲ ಕದವನಿಕ್ಕಿ ಒಳಯಿಕೆ ಒಬ್ಬ್ರನು ಬಿಡದಿರೆ, ಸುಮ್ಮನೆ ಕಳುಹೆ.
ಒಮ್ಮನವ ಮಾಡೆ, ಗಮ್ಮನೆ ನಡೆಯೆ, ಘಳಿಲೆಂದು ಪೋಗೆ, ದಿಗಿಲೆಂದು ಹತ್ತೆ, ಎಡ
ಬಲನಂ ಮುರಿಯೆ, ಬೀಗವಂ ಕೊಳ್ಳೆ, ಕುಂಭಿನಿಯ ಬಾಗಿಲ ಕದವ ತಳ್ಳೆ, ಒಳಪೊಕ್ಕು
ಒಂದಾಗಿ ನೋಡೆ, ಸೋಹವೆಂಬ ಬ್ರಹ್ಮನಾದವನಾಲಿಸಮ್ಮ. ಪರತತ್ವದೊಳು ಉರಿ
ಕರ್ಪೂರದಂತಾಗಮ್ಮ. ಇಂತೀ ನಿಷ್ಠೆಗೆ ನಮೋ ನಮೋ ಎಂಬೆನಮ್ಮ ಬೋಸರಿಗತನದ
ಲೇಸಿನವಳು ನಾನಲ್ಲಮ್ಮ.

ಪದ:
ಆದಿಯನರಿಯೆನಮ್ಮ ಭೇದಿಸಿ ಮುನ್ನ!
ಮೇದಿನಿಯೊಳು ಬಂದು ಮರೆದೆಯಲ್ಲಮ್ಮ!
ತಂದೆ ಹಬ್ಬೆಯನೆತ್ತಿ ಹೇಳುವೆ ನಿಮ್ಮ
ಬಂದ ಮಾರ್ಗದಲ್ಲಿ ಗಮಿಸಿ ನಿಲ್ಲಮ್ಮ
ಭ್ರೂಮಧ್ಯದ ಮನೆಯೊಳಗಿರ್ದು ಕಾಣಮ್ಮ
ಮುಂದಣ ಕೋಣೆಯೊಳೆ ಜೀವಿಸು ನೀನಮ್ಮ ||೫||

ವಚನ:
ಮುನ್ನೊಮ್ಮೆ ಆದಿಯ ಲೀಲೆಯಿಂದ ಮೇದಿನಿಗಿಳಿದು ಆಗುಚೇಗೆಗೊಳಗಾಗಿ ನಿನ್ನ
ನಿಜವನರಿಯದ ಪರಿಯ ತಿಳಿದು ನೋಡಮ್ಮ.

ಅದೆಂಥ ದೇವರ ಲೀಲೆಯೆ ತಾಯಿ?

ನಾದ-ಬಿಂದು-ಕಳೆ-ಆದಿಯನಾಗಿ ತತ್ವಂಗಳಾವುವುವಿಲ್ಲದಂದು, ತಂದೆ ತಾನೆ
ತಾನಾಗಿರ್ದನಮ್ಮ. ಆತನ ಸತಿಯಾನೆಯಮ್ಮ. ತನಗೆ ಮಖ್ಖಳು ಬೇಕಾಗಿ ನೆನೆದಡೆ
ನಾದ-ಬಿಂದು-ಕಳಾಯುಕ್ತವಾದ ಓಂಕಾರವಾಯಿತಮ್ಮ. ಆ ಓಂಕಾರವೆ ಆದಿಯ ಶರಣನಮ್ಮ.
ಆ ಶರಣನ ಶಕ್ತಿಯ ಹೆಸರು ನೀನೆಯಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಪರಸತಿಯೆಂದು ಸದಾಶಿವಂಗೆ ಕೈಗೂಡಿಸಿದನಮ್ಮಾ. ನಿನ್ನೊಡನೊಬ್ಬಳು ಹುಟ್ಟಿದಳು.
ಆದಿಶಕ್ತಿಯೆಂದು ಈಶ್ವರಂಗೆ ಸಂಬಂಧಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಇಚ್ಛಾಶಕ್ತಿಯೆಂದು ರುದ್ರಂಗೆ ಪಟ್ಟವ ಕಟ್ಟಿದೆನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಜ್ಞಾನಶಕ್ತಿಯೆಂದು ವಿಷ್ಣುವಿಂಗೆ ಕೈಗೂಡಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಕ್ರಿಯಾಶಕ್ತಿಯೆಂದು ಬ್ರಹ್ಮಂಗೆ ಧಾರೆಯನೆರೆದನಮ್ಮ. ಇವರು ನಿನ್ನಿಂದ ಹುಟ್ಟಿದ ಪಂಚ
ಕೃತ್ಯಂಗಳಿಗೊಳಗಾದರು. ಇದರೊಳು ಪೊಕ್ಕು ಬಳಸಿದೆಯಾಗಿ ನನ್ನ ನೀ ಮರೆದೆಯಮ್ಮ;
ಇನ್ನಾದರೂ ಎಚ್ಚೆತ್ತು ನಡೆಯೆ.

ನಡೆವ ಗತಿ ಪಥವಾವುದೆ ತಾಯಿ?

ಇವರು ನಿನ್ನೊಳಗಿರ್ಪರಮ್ಮ. ಪಂಚಭೂತಂಗಳಿಗೊಡೆಯರಮ್ಮ. ಪಂಚ ಚಕ್ರಗಳಧಿಕಾರಿಗಳಮ್ಮ.
ಮೊದಲಿವರ ನಿನ್ನ ವಶವ ಮಾಡಿಕೊಳ್ಳಮ್ಮ. ಇವರ ಸಂಗವನಗಲಿ,
ಹುಟ್ಟಿದ ಮಾರ್ಗವೆರಸಿ ಹುಬ್ಬಳ್ಳಿಗೆ ನಡೆಯಮ್ಮ. ಅಲ್ಲಿ ನಿರ್ಮಲ ಲಿಂಗ ಉಂಟಮ್ಮ.
ಪತಿಭಕ್ತಿಯ ಮಾಡಮ್ಮ ನಿನ್ನ ಗಂಡನೊಲಿವನಮ್ಮ. ಮೂಮ್ದಣ ಬಾಗಿಲ ತೆಗೆಯಮ್ಮ.
ಮೇಲಣ ಕೋಣೆಯ ಪೌಳಿಯ ಬಳಸಿ ನೋಡೆಯಮ್ಮ. ಥಳಥಳಿಸುವ ಪರುಷದ ಪೀಠದಲ್ಲಿ
ಪರಂಜ್ಯೋತಿ ಲಿಂಗವಿಪ್ಪುದಮ್ಮ. ನಿನ್ನ ಹೆಯ್ಯತ್ತನೆಂದು, ಹತ್ತಿರ ಬಂದು ನಮಿಸಮ್ಮ.
ಅಮೃತಕೂಪವ ಮೊಗೆಯಮ್ಮ. ತುಂಬಿದ ಕೊಡನ ಘೃತವಂ ಶಂಭುಲಿಂಗನ
ಮಂಡೆಗೆರೆಯಮ್ಮ. ಕೂಪದೊಳಗಣ ಕಮಲವ ಪಿಡಿಯಮ್ಮ. ಮಸ್ತಕದೊಳು ಮಡಗಮ್ಮ.
ಧೂಪಾರತಿಯ ಬೆಳಗಮ್ಮ. ಅಮೃತಾರೋಗಣೆಯ ಮಾಡಿಸಮ್ಮ. ಕರ್ಪೂರ
ವೀಳ್ಯವ ಸಲಿಸಮ್ಮ. ಗೀತವಾದ್ಯ ನೃತ್ಯಂಗಳಿಂ ಮೆಚ್ಚಿಸಮ್ಮ. ಸಂಭ್ರಮದ ಪೂಜೆಯೊಳು
ಸೈವೆರಗಾಗಮ್ಮ. ಇಂತೀ ಅವಿರಳ ಭಾವಪೂಜೆ ನಮೋ ನಮೋ ಎಂಬೆಯಮ್ಮ.

ಪದ:
ನಾಗರ ಕಾಟಕ್ಕೆ ನವೆದೆಯಲ್ಲಮ್ಮ
ನಾಗಲೋಕದಿಂ ಹಿಡಿಯಿತು ನಿಮ್ಮ.
ಜಗವನೆಲ್ಲವ ನುಂಗಿ ಜಾಳಿಸುತೈತೆ.
ಗಂಗಾಧರನ ಕಾಟದ ಸರ್ಪವಮ್ಮ.
ಬೇಗದಿಂದ ತ್ರಿಗಗನಕೊಗೆಯಮ್ಮ
ಈಗಲೆ ಪರಶಿವನೊಲವಿದೆಯಮ್ಮ ||೬||

ವಚನ:
ಆಧಾರಕುಂಡಲಿಯ ಸರ್ಪನ ವೇದನೆಯಿಂ ಭವರುಜೆಯಕ್ಕೀಡಾಗಿ ಬಳಲುತಿರ್ದೆಯಮ್ಮ.

ಅದು ಎಂಥ ಶೇಷನೆ ತಾಯಿ?

ಒಂಬತ್ತು ಹೋರಿನ ಹುತ್ತದಲ್ಲಿ ಸ್ಥಾನವಾಗಿರ್ಪುದಮ್ಮ, ಐದು ಮುಖದ ಅಜ್ಞಾನ ಸರ್ಪ!
ಪೂರ್ವಕ್ಕೊಂದು ಮುಖ, ಪಶ್ಚಿಮಕ್ಕೊಂದು ಮುಖ; ಉತ್ತರಕ್ಕೊಂದು ಮುಖ;
ದಕ್ಷಿಣಕ್ಕೊಂದು ಮುಖ; ಅಧೋದ್ವಾರಕ್ಕೊಂದು ಮುಖ; ಪಂಚವರ್ಣದ ಪ್ರಳಯ
ಕಾಳೋರಗನೆಯಮ್ಮ. ಅಲ್ಲಿಂದ ಬಂದು ನಿನ್ನನಲೆವುತ್ತಿದೆಯಮ್ಮ. ಅದರ ವಿಷದ ಹೊಗೆ
ತಾಗಿ ಅಜನ ಸೃಷ್ಟಿಯಲಿ ಅಲಿಪರಿದೆಯಮ್ಮ ನಿನ್ನ ಮಾತೇನು, ಈರೇಳು ಲೋಕವನೆಲ್ಲವ
ಕಚ್ಚಿ ಕೆಡವುತ್ತಿದೆಯಮ್ಮ. ಅದು ಪರಮೇಶ್ವರನ ಆಜ್ಞಾಶಕ್ತಿ ತಾನೆಯಮ್ಮ.

ಇಂಥಾ ಶೇಷನ ಹಿಡಿದುಕೊಂಡು ಪ್ರಸಾದವ ಕೊಂಬ ಪರಿಯಾವುದೆ ತಾಯಿ?

ಅಡಿಯ ಮಡದಿಂದೊತ್ತೆಯಮ್ಮ. ಹುತ್ತದ ಒಂಭತ್ತು ಹೋರನೆ ಮುಚ್ಚೆಯಮ್ಮ.
ಅಧೋಪವನವನೂರ್ಧ್ವಕೆತ್ತೆಯಮ್ಮ. ಮೂಲಾಗ್ನಿಯ ಪಟುವ ಮಾಡೆಯಮ್ಮ. ಆಧಾರ
ಕುಂಡಲಿಯನಂಡಲೆದಭಿಮುಖವ ಮಾಡೆಯಮ್ಮ. ನಾಗಸ್ವರದ ಶೃತಿಯ ನಖದ ಕೊನೆಯಲ್ಲಿ
ಹೆಚ್ಚಿಸೆಯಮ್ಮ. ಕಂಠಝೇಂಕಾರ ಸಪ್ತಸ್ವರದಂತಿರುಹೆಯಮ್ಮ. ಅದು ನಾದದ
ನಾದವ ಕೇಳುತ್ತ ನಾಭಿಮಂಡಲದಿಂದೆದ್ದು ಉಸುರ ಉನ್ಮನಿಯಲ್ಲಿ ಬಿಡುತ್ತ ಒಂದೆ ನಾಳದಲ್ಲಿ
ಗಮನಿಸುವುದಮ್ಮ ಮೇಲಣ ಕೋಣೆಯೊಳಗಿರ್ಪ ಕಪ್ಪೆ ಒತ್ತೆಯ ನುಂಗುವುದಮ್ಮ.
ಅಲ್ಲಿ ಸತ್ತ ಸರ್ಪನ ನೆತ್ತಿಯಲ್ಲಿ ಮಾಣಿಕವಿಪ್ಪುದಮ್ಮ, ಅದ ಸೆಳೆದುಕೊಳ್ಳಮ್ಮ.
ಅಪ್ರಶಿಖಾಮಂಡಲದ ಅಮೃತಾಹಾರವ ಸವಿಯಮ್ಮ. ಗಗನಾಂಬರ ಆತ್ಮನಿರತೆಯಾಗಿರಮ್ಮ,
ಪರಮೇಶ್ವರನಲ್ಲಿ ಪ್ರಸನ್ನಮುಖ ತಪ್ಪದಮ್ಮ. ಇಂಥ ಶೇಷನ ಪ್ರಸಾದಕ್ಕೆ ನಮೋ
ನಮೋ ಎಂಬೆನಮ್ಮ.

ಪದ:
ಎಲ್ಲವ ಹೇಳುವೆ ಎಲ್ಲಿಪ್ಪೆ ಕೊರವಿ?
ಕಲ್ಯಾಣದ ಚೆಲುವೈಕುಂಠವಮ್ಮ.
ಅಲ್ಲಿಂದನೆಲ್ಲವ ಪೇಳಿದೆ ನಿಮ್ಮ
ವೇಳೆಯನರಿತು ಹೋಗೆ ಎಡೆಮಾಡಿ ತಾರೆ
ಮೊದಲಾದ ಪಂಚಭಿಕ್ಷವ ಕೊಂಡುಬಾರೆ
ಚೆನ್ನಮಲ್ಲಿಕಾರ್ಜುನನ ವರವೆನಗುಂಟೆ ||೭||

ವಚನ:
ಮನಸಿನ ಕನಸಿನ ಕೋರಿಕೆಯೆಲ್ಲವ ಕಂಡಂತೆ ಪೇಳಿದೆ ನಿನ್ನ ಸ್ಥಲ-ನೆಲೆ ಯಾವುದೆ ತಾಯಿ?

ಕಲ್ಯಾಣವೆನ್ನ ತವರೂರಮ್ಮ. ವೈಕುಂಠವೆನ್ನ ಗಂಡನೂರೆಯಮ್ಮ. ಅಲ್ಲಿಂದ
ಬಂದು ನಿನ್ನ ಮನಕ್ಕೆ ಮಂಗಳವಪ್ಪಂತೆ ಪೇಳಿದೆನಮ್ಮ. ಅರಿವಿನ ಅಚ್ಚಕೊರವಿತಿ
ನಾನಮ್ಮ. ಎನಗೆ ದೇವರ ಒಲವರವುಂಟಮ್ಮ.

ಅದೆಂಥ ದೇವರುಗಳ ವರದಿಂದ ಪೇಳಿದೆಯಮ್ಮ?

ನೆಲದುರ್ಗದ ಭ್ರಾಂತದೇವಿ, ಸೊನ್ನಲಪುರದ ಲಕ್ಷ್ಮಿದೇವಿ, ಅನಲಾಪುರದ ಕ್ರಿಯ
ಮಹಂಕಾಳಿ, ಅಮೃತಾಪುರದ ಈಶಮಹೇಶ್ವರಿ, ಗಗನಾಪುರದ ನಾನಾ ಮಹಂತಿ, ಅಂಬಾಪುರದ
ಕ್ರಿಯಾಮಹೇಶ್ವರಿಯ ವರವೆಯಮ್ಮ ಮತ್ತು ಭೂಮಿಯೊಳಗಿರ್ಪ ಬ್ರಹ್ಮ
ದೇವರು, ಸಲಿಲದೊಳಗಿರ್ಪ ವಿಷ್ಣುದೇವರು, ಅಗ್ನಿಯೊಳಗಿರ್ಪ ರುದ್ರದೇವರು, ಪವನದೊಳಗಿರ್ಪ
ಈಶ್ವರದೇವರು, ಗಗನದೊಳಗಿರ್ಪ ಸದಾಶಿವರು, ಅಂಬರದೊಳಗಿರ್ಪ ಪರಶಿವದೇವರ
ವರವೆಯಮ್ಮ. ಮತ್ತಂ ಸದ್ಯೋಜಾತಮುಖದ ಆಚಾರಲಿಂಗ ದೇವರು ವಾಮದೇವಮುಖದ ಶಿವಲಿಂಗದೇವರು,
ತತ್ಪುರುಷಮುಖದ ಚರಲಿಂಗದೇವರು, ಈಶಾನಮುಖದ ಪ್ರಸಾದಲಿಂಗದೇವರು,
ಗಂಭೀರಮುಖದ ಘನಲಿಂಗದೇವರ ವರವೆಯಮ್ಮ. ಇಂತಿ ಒಂದೆ, ಎರಡೆ, ಮೂರೆ, ನಾಲ್ಕೆ,
ಐದೆ, ಆರೆ! ಮೀರೆ ಏಕನಾದವೆಂಬ ಎಕ್ಕೆಯ ಬೆನವನ ವರದಿಂ ಎಡೆದೆರಹಿಲ್ಲದೆ ಪರಿಪೂರ್ಣವಾದ
ಸಂದ ಶಂಕೆಯಳಿದು ಪೇಳಿದೆಯಮ್ಮ. ಇನ್ನೀತತ್ವ-ಸ್ಥಳ-ಕುಳಭೇದವನರಿದು ಅರ್ಪಿತಾವಧಾನ
ಮುಖಂಗಳ ವಿವರಿಸಿ ಸಕಲಪದಾರ್ಥಂಗಳ ನನಗೆಯು ದೇವರಿಗೆಯುಣಬಡಿಸಬೇಕಮ್ಮ.

ಅರ್ಪಿಸುವ ಸಾವಧಾನವಾವುದಮ್ಮ?

ಸದ್ಭಕ್ತಿಯಿಂದ ಭಕ್ತನನರಿದು, ಸುಚಿತ್ತಹಸ್ತದಿಂ ಸುಗಂಧವ ಆಚಾರಲಿಂಗದೇವರಿ
ಗರ್ಪಿಸಬೇಕಮ್ಮ. ನೈಷ್ಠಿಕ ಭಕ್ತಿಯಿಂ ಮಾಹೇಶ್ವರನನರಿದು ಸುಬುದ್ಧಿ ಹಸ್ತದಿಂ ಸುರಸವ
ಗುರುಲಿಂಗದೇವರಿಗರ್ಪಿಸಬೇಕಮ್ಮ. ಅವಧಾನ ಭಕ್ತಿಯಿಂ ಪ್ರಸಾದವನರಿದು ನಿರಹಂಕಾರ
ಹಸ್ತದಿಂ ಸ್ವರೂಪವ ಶಿವಲಿಂಗದೇವರಿಗರ್ಪಿಸಬೇಕಮ್ಮ. ಅನುಭಾವ ಭಕ್ತಿಯಿಂ
ಪ್ರಾಣಲಿಂಗಿಯನರಿದು ಸುಮನ ಹಸ್ತದಿಂ ಸುಸ್ಪರ್ಶನವ ಚರಲಿಂಗದೇವರಿಗರ್ಪಿಸಬೇಕಮ್ಮ.
ಆನಂದಭಕ್ತಿಯಿಂ ಶರಣರನರಿದು ಸುಜ್ಞಾನದಿಂದ ಸುಶಬ್ದವ ಪ್ರಸಾದ
ಲಿಂಗದೇವರಿಗರ್ಪಿಸಬೇಕಮ್ಮ. ಸಮರಸ ಭಕ್ತಿಯಿಂ ಐಕ್ಯನನರಿದು ಸದ್ಭಾವ ಹಸ್ತದಿಂ
ಸಂತೃಪ್ತಿಯ ಮಹಾಲಿಂಗದೇವರಿಗರ್ಪಿಸಬೇಕಮ್ಮ. ಮೀರಿದ ಸುಖವ ಪರತತ್ವದೊಳೊಡಗೂಡಿ
ಪ್ರಸಾದವ ಪಡೆದು ಪರಿಣಾಮಿಯಾಗಿರಮ್ಮ. ಇದು ನಿನಗೆ ಪರಾಪರಮುಕ್ತಿ
ಪರಶಿವಲಿಂಗದೊಲವಮ್ಮ.

೩೬೬.
ತೂಗಿದೆನು ನಿಜದುಯ್ಯಾಲೆ ನಾ
ಬೀಗಿದೆನು ನೆನವು ನಿಶ್ಚಲದಲ್ಲಿಗೆ ||ಪಲ್ಲವ||
ನಿಲ್ಲದೆ ಧರೆಯ ಮೇಲೆ ನೆಟ್ಟವರ
ಡಾಲಿಕಲ್ಲಿನ ಕಂಭವು
ಮೇಲೆ ಮಾಣಿಕದ ತೊಲೆ
ಕೀಲಿಟ್ಟು ಜಾಣನಾಡಿದೆನುಯ್ಯಲ ||೧||
ಸರವು ನಾಲ್ವರ ಹತಿಯೊಳು ಭರದಿಂದ
ಅರಿತ ಮಣೆಯಾರ ನಿಲಿಸಿ
ಅರಿದ ತೊಲೆಯ ಕಟ್ಟಲು ಆ ಉಯ್ಯಾಲೆ
ಹರಿಯುತೊದೆಯಿತು ಮುಂದಕ್ಕೆ ||೨||
ನಾದದ ಕಲ್ಲ ಕಟ್ಟಿಯದರೊಳಗೆ
ಭೇದಿಸುವ ಬಿಂದುಜಲವು
ಆಧಾರದ ಕಳೆಮೊಳೆಯೊಳು ಕೊಳವನದ
ಆದಿಲಿಂಗನ ಪಾಡುತ ||೩||
ಮುತ್ತುಮಾಣಿಕ್ಯದ ರತ್ನದ ತೊಡಿಗೆಯನು
ಸತ್ಯಮುಖಿಯರು ತೊಟ್ಟರು
ಅರ್ತಿಯಿಂ ರಾಗ ಮಾಡಿ ಪಾಡಿದರು
ಸತ್ಯಜ್ಞಾನದ ಶೃತಿಯೊಳು ||೪||
ಕೊಳಲು ಕಹಳೆಯ ಡೋಲಿನ ರವಸಕ್ಕೆ
ನಲಿದು ಒಡೆಯಿತು ಮುಂದಕ್ಕೆ
ಹೊಳೆವ ವಜ್ರದ ಕಂಭದ ಬೆಳಗಿನ
ಒಳಗೆ ಆಡಿದೆನುಯ್ಯಲ ||೫||
ಈಡಾಪಿಂಗಳನಾಳದ ಬೆಳಗಿನೊಳ
ಗಾಡಲೊದೆಯಿತು ಮುಂದಕ್ಕೆ
ನಾಡು-ದೇಶವು ನೋಡಲಾ ಉಯ್ಯಾಲೆ
ಗಾಡಿ ಸುಷುಮ್ನೆಯ ಕೂಡಿತು ||೬||
ಆರು ಚಕ್ರವನು ದಾಂಟಿ ಆರು ಉಯ್ಯಾಲೆ
ಹೋರ ಒದೆಯಿತು ಮುಂದಕ್ಕೆ
ಮೀರಿದ ಸ್ಥಲದಿ ನಿಂದು ಚೆನ್ನಮಲ್ಲನೊಳು
ಬೆರೆದು ಆಡಿದೆನುಯ್ಯಾಲೆ ||೭||

೩೬೭.
ಅರುಹಿಂದ ಆಚರಿಸಬೇಕು
ಮರಹಿಲ್ಲದೆ ತಾನಿರಬೇಕು
ರೆತೆಯ ಮರೆಯ ಕುರುಹರಿಯಬೇಕು
ಪರಬ್ರಹ್ಮದೊಳಗೆ ತಾ ನೆರೆಯಬೇಕು ||ಪಲ್ಲವ||
ಪಟ್ಟಣವನೆಲ್ಲ ಸುಟ್ಟು ಮಡಿಯಬೇಕು | ದೊಡ್ಡ
ಸೆಟ್ಟಿಕಾತಿಯ ಪಟ್ಟವಳಿಯಬೇಕು
ಪಟ್ಟದ ರಾಣೀಯೊಳು ನುಡಿಯಬೇಕು | ಅಲ್ಲಿ
ಬಿಟ್ಟ ಮಂಡೆಯೊಳು ತಾ ನಡೆಯಬೇಕು ||೧||
ಚಿಕ್ಕತಂಗಿಯೊಳೊಪ್ಪಿಯಾಡಬೇಕು | ತ
ಮ್ಮಕ್ಕನ ಬಿಗಿಬಿಗಿದಪ್ಪಬೇಕು
ಕುಕ್ಕುಟ ದನಿದೋರಿ ಕೂಗಬೇಕು | ನೆರೆ
ಸೊಕ್ಕಿದವರು ಮುರಿದೋಡಬೇಕು ||೨||
ಚಿಕ್ಕುಟು ಕಣ್ಣೆರೆದುಕ್ಕಬೇಕು |
ಬೆಕ್ಕಿನ ದೃಕ್ಕನು ಕುಕ್ಕಬೇಕು
ಹಕ್ಕಿಯ ಪಕ್ಕವ ಹಿಕ್ಕಬೇಕು | ಬಹು
ರಕ್ಕಸರುಗಳೊಕ್ಕಲಿಕ್ಕಬೇಕು ||೩||
ತಂದೆಯಂಗನೆಯೊಳಗಾಡಬೇಕು | ತನ್ನ
ಕಂದನ ತಾ ಬಂದು ಕೂಡಬೇಕು
ಹಿಂದುಮುಂದಾಗಿ ಮತ್ತೆ ನಡೆಯಬೇಕು | ನಿಜ
ಮಂದಿರದಿಂದುವ ಸುಡಬೇಕು ||೪||
ಹರಿಯ ಮನೆಯ ಮೆಟ್ಟಿ ಮರೆಯಬೇಕು
ಕರಿಗಳೆಲ್ಲವ ಕೊಂದುರಿಯಬೇಕು
ಕರಿಯ ಬೇದನ ಶಿರವನರಿಯಬೇಕು | ತನ್ನ
ಬರಿಯ ಮನೆಯ ಹೊಕ್ಕು ನೆರೆಯಬೇಕು ||೫||
ಮಂಜಿನ ಕೊಡನೊಡೆರೆದರಿಯಬೇಕು | ಅದ
ರಂಜಿಪ ಬಂಜೆಯು ಪರಿಯಬೇಕು
ಮುಂಜೂರಲಮೃತ ಕರೆಯಬೇಕು | ಬೇಗ
ನಂಜದೆ ಸುರಿದು ಮೈಮರೆಯಬೇಕು ||೬||
ಹುಲ್ಲೆಯ ತಲ್ಲಣವಡಗಬೇಕು | ಅಲ್ಲಿ
ಮೆಲ್ಲನೆ ಬಿಲ್ಲುಗಾರ ಸೋಲಬೇಕು
ಸೊ(ಬಿ?)ಲ್ಲುಗಾರನ ಬಿಲ್ಲು ಮೆಲ್ಲಬೇಕು | ಚೆನ್ನ
ಮಲ್ಲಿಕಾರ್ಜುನನಲ್ಲಿ ನಿಲ್ಲಬೇಕು ||೭||

೩೬೮.
ಏನೋ ನಮ್ಮ ನಲ್ಲ ನೀ ಮನೆಗೇಕೆ ಬಾರೆ
ನಾನೇನು ತಪ್ಪನು ಮಾಡಿದುದಿಲ್ಲ ||ಪಲ್ಲವ||
ಕೂಸಿನ ತಾಯಿಗೆ ಹೇಸದೊತ್ತೆಯ ಕೊಟ್ಟು
ಕೂಸತ್ತೆನ್ನಯ ನಲ್ಲ ಬೇಸತ್ತು ಹೋದೆ ||ಅನುಪಲ್ಲವ||
ಮನವುಳ್ಳ ಭಾವಕಿಗನುವಾಗಿ ನಮ್ಮ ನಲ್ಲ
ಮನ ಸಂಚಲವಾಗಲನುವಾದುದಿಲ್ಲ ||೧||
ಒತ್ತೆಯ ನಲ್ಲನ ತೋಳ ಮೇಲೊರಗಿದೆ
ಚಿತ್ತದ ನಲ್ಲನ ಕನಸಿನಲಿ ಕಂಡೆ ||೨||
ಕೇಳಯ್ಯ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನೀನು ಮಾತಾಡಿದುದುಂಟು ಕೂಡಿದುದಿಲ್ಲ ||೩||

 

No comments:

Post a Comment