Thursday, October 28, 2010

ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ





ಏನು ಜೀವನಾರ್ಥ? ಏನು ಪ್ರಪಂಚಾರ್ಥ?||
ಏನು ಜೀವ ಪ್ರಪಂಚಗಳ ಸಂಬಂಧ?||
ಕಾಣದಿಲ್ಲಿರ್ಪುದು ಏನಾನುಮುಂಟೆ? ಅದೇನು?||
ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ|| ೪||

(ಕಾಣದೆ+ಇಲ್ಲಿ+ಇರ್ಪುದು+ಏನಾನುಂ+ಉಂಟೆ)

ಈ ನಮ್ಮ ಜೀವನಕ್ಕೆ ಏನಾದರು ಅರ್ಥವಿದೆಯೆ? ಈ ಪ್ರಪಂಚಕ್ಕೆ ಏನಾದರು ಅರ್ಥವಿದೆಯೇ? ಈ ಜೀವಿಗಳ ಮತ್ತು ಪ್ರಪಂಚಗಳ ಸಂಬಂಧವೇನು?
ನಮಗೆ ಗೋಚರವಾಗದೆ ಇರುವುದು ಇಲ್ಲಿ ಏನಾದರು ಇದೆಯೆ? ಹಾಗಿದ್ದರೆ ಏನದು?
ಅದು ನಮ್ಮ ಜ್ಞಾನಶಕ್ತಿಗೆ ಮೀರಿದ್ದುದೋ? ಏನು?


ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ?|
ನಾವರಿಯಲಾರದೆಲ್ಲದರೊಟ್ಟು ಹೆಸರೆ?||
ಕಾವಿನೋರ್ವ್ನಿರಲ್ಕೆ ಜಗದ ಕಥೆಯೇಕಿಂತು?||
ಸಾವು ಹುಟ್ಟುಗಳೇನು? - ಮಂಕುತಿಮ್ಮ|| ೫

(ದೇವರು+ಎಂಬುದು+ಅದು+ಏನು) (ನಾವು+ಅರಿಯಲಾರದ+ಎಲ್ಲದರ+ಒಟ್ಟು)
(ಕಾವಂ+ಓರ್ವನ್+ಇರಲ್ಕೆ) (ಜಗದ+ಕಥೆ+ಏಕೆ+ಇಂತು)

ದೇವರು ಎನ್ನುವುದು ಏನು? ಅದು ಒಂದು ಕಗ್ಗತ್ತಲೆಯಿಂದ ತುಂಬಿದ ಗುಹೆಯೋ? ಅಥವ ನಮಗೆ ತಿಳಿಯದೆ ಇರುವ ಎಲ್ಲವನ್ನು ಕೂಡಿ, ಅದಕ್ಕೆ ನಾವು ಒಂದು ಹೆಸರಿಟ್ಟು,
'ದೇವರು' ಎಂದು ಕರೆಯುತ್ತಿದ್ದೇವೆಯೋ? ಈ ಜಗತ್ತುನ್ನು ಕಾಪಾಡುವನೊಬ್ಬನಿದ್ದರು ಈ ಜಗತ್ತಿನ ಕಥೆ ಹೀಗೇಕಿದೆ? ಈ ಹುಟ್ಟು ಮತ್ತು ಸಾವುಗಳ ಅರ್ಥವೇನು?
ಈ ರೀತಿಯ ಪ್ರಶ್ನೆಗಳು ಪ್ರತಿಯೊಬ್ಬ ಮನುಷ್ಯನನ್ನು ಒಂದಲ್ಲ ಒಂದು ಸಲ ಕಾಡಿರುವುವಂತಹವೇ.

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು!
ಬಗೆದು ಬಿಡಿಸುವರಾರು ಸೋಜಿಗವನಿದನು?||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು?|
ಬಗೆ ಬಗೆಯ ಜೀವಗತಿ - ಮಂಕುತಿಮ್ಮ|| ೬

(ಒಗಟೆ+ಏನು+ಈ) ( ಬಾಳಿನ+ಅರ್ಥವದು+ಏನು) (ಬಿಡಿಸುವರು+ಆರು)(ಸೋಜಿಗವನು+ಇದನು) (ಕೈ+ಒಂದು+ಆದೊಡೆ+ಏಕೆ+ಇಂತು)

ಈ ಸೃಷ್ಟಿ ಎನ್ನುವುದು ಕಗ್ಗಂಟೋ ಏನು? ಈ ಬಾಳಿಗೆ ಏನಾದರು ಅರ್ಥವಿದೆಯೇ? ಈ ಆಶ್ಚರ್ಯಕಗ್ಗಂಟನ್ನು ಯೋಚಿಸಿ, ಯಾರು ಬಿಡಿಸಬಲ್ಲರು?
ಈ ಜಗತ್ತನ್ನು ಒಂದು ಕಾಣದ ಕೈ ನಿರ್ಮಿಸಿದೆ(ನಿರವಿಸಿದೆ) ಎಂದರೆ, ಈ ವಿಧ ವಿಧವಾದ ಜೀವಗತಿಗಳು ಏಕೆ?



ಇದೇನು ಒಣರಗಳೆ

ಗಾಳಿ ಮಣ್ಣುಂಡೇಯೊಳಹೊಕ್ಕು ಹೊರಹರಳಲದು|
ಆಳನಿಪುದಂತಾಗದರೆ ಬರಿಯ ಹೆಂಟೆ||
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ|
ಕ್ಷ್ವೇಳವೇನಮೃತವೇಂ? - ಮಂಕುತಿಮ್ಮ|| ೧೯

(ಮಣ್ಣು+ಉಂಡೇ+ಒಳಹೊಕ್ಕು) (ಆಳು+ಎನಿಪುದು+ಅಂತು+ಆಗದಿರೆ) (ತಿಕ್ಕದ+ಉರಿಯ) (ಕ್ಷ್ವೇಳವೇನು+ಅಮೃತವೇಂ)

ಮಣ್ಣಿನ ಉಂಡೆಯ ಒಳಗಡೆ ಗಾಳಿ ಹೋದರೆ, ಅದು ಹೊರಗಡೆ ಬರುವುದಕ್ಕೆ ಆಗುವುದಿಲ್ಲ.
ಮನುಷ್ಯನಲ್ಲು(ಆಳ್) ಸಹ ಈ ಗಾಳಿ ಇರದಿದ್ದರೆ, ಅವನು ಕೇವಲ ಮಣ್ಣಿನ ಉಂಡೆಯೇ ಸರಿ.
ಈ ಬಾಳು ಬರಿ ಧೂಳು, ಸುಳಿ ಮತ್ತು ಮರ ತಿಕ್ಕಿದರೆ ಬರುವ ಉರಿಯ ಹೊಗೆ, ಹೀಗಿರುವಾಗ ವಿಷವೇನು? (ಕ್ಷ್ವೇಳ) ಅಮೃತವೇನು? ಎರಡು ಒಂದೆ.

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು?|
ಚಂಡಚತುರೋಪಾಯದಿಂದಲೇನಹುದು?||
ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು|
ಅಂಡಲೆತವಿದೇಕೇನೋ? - ಮಂಕುತಿಮ್ಮ|| ೨೦

ಕೈ+ಮುಗಿದು+ಏನಹುದು) (ಚಂಡ+ಚತುರ+ಉಪಾಯದಿಂದಲಿ+ಏನು+ಅಹುದು) (ಹಿಡಿ+ಒಂದು) (ಅಂಡಲೆತವು+ಇದಕೆ+ಏನೋ)

ನಮ್ಮ ಮನೋಭಿಲಾಷೆಗಳನ್ನು ಈಡೇರಿಸಿಕೊಳ್ಳುವುದಕ್ಕೋಸ್ಕರ, ನಾವು ಕಂಡ ಕಂಡ ದೇವರಿಗೆಲ್ಲ ಕೈ ಮುಗಿಯುತ್ತೇವೆ.
ಇಷ್ಟಕ್ಕೆ ಸುಮನಾಗದೆ, ನಾಲ್ಕು ಉಪಯಗಳನು(ಸಾಮ, ದಾನ, ಬೇದ, ದಂಡ) ಅನುಸೈಸುತ್ತೇವೆ.
ನಮಗೆ ಬೇಕಾಗಿರುವುದು ತಿನ್ನುವುದಕ್ಕೆ ಒಂದು ಹಿಡಿ ಅಕ್ಕಿ(ತಂಡುಲ) ಮತ್ತು ಸುತ್ತಿಕೊಳ್ಳುವುದಕ್ಕೆ ಒಂದು ತುಂಡು
ಬಟ್ಟೆ ಮಾತ್ರ, ಈ ಪರದಾಟ(ಅಂಡಲೆತ)ಗಳೆಲ್ಲಾ, ಹೊಟ್ಟೆ ಮತ್ತು ಬಟ್ಟೆಗಾಗಿ ಮಾತ್ರ ಎಂದು ತಿಳಿದರೆ,
ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಹೊನ್ನೊಂದು ಜಗದಿ ನೀಂ ಕೈಗೆ ಕೋಂಡುದನು ವಿಧಿ |
ಮಣ್ಣೆನುವನ್; ಅವನ ವರ ಮಣ್ಣೆನುವೆ ನೀನು||
ಭಿನ್ನವಂತಿರೆ ವಸ್ತುಮೌಲ್ಯಗಳ ಗಣನೆಯೀ|
ಪಣ್ಯಕ್ಕೆ ಗತಿಯೆಂತೊ? - ಮಂಕುತಿಮ್ಮ|| ೨೧

(ಬಿನ್ನಂ+ಇಂತು+ಇರೆ)

ಹಲವಾರು ಸಲ, ನಾವು ಅಂದುಕೊಳ್ಳುವುದೊಂದು, ಆಗುವುದು ಇನ್ನೊಂದು.
ನಾವು ಚಿನ್ನವೆಂದು ಭಾವಿಸಿದ ವಸ್ತು ಮಣ್ಣಾಗಿ, ಏನು ಬೆಲೆ ಇಲ್ಲದ ವಸ್ತು ಆಗಿಹೋಗುತ್ತದೆ.
ಆದರೆ ವಿಧಿ ನಮಗೆ ಇತ್ತ ವರ ಚಿನ್ನವಾಗಿದ್ದರೂ ಕೂಡ, ನಮಗೆ ಮಣ್ಣಿನಂತೆ ಗೋಚರಿಸುತ್ತದೆ.
ವಸ್ತುಗಳ ಬೆಲೆ(ಮೌಲ್ಯ) ವ್ಯ್ತ್ಯಾಸವಾಗುತ್ತಿರುವ ಈ ವ್ಯಾಪರದ(ಪಣ್ಯ) ಗತಿಏನು?

ಕೃತ್ರಿಮವೊ ಜಗವೆಲ್ಲ| ಸತ್ಯತೆಯದೆಲ್ಲಿಹುದೋ?|
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು||
ಚತ್ರವೀ ಜಗವಿದರೊಳಾರ ಗುಣವೆಂತಹುದೊ!|
ಯಾತ್ರಿಕನೆ, ಜಾಗರಿರೊ - ಮಂಕುತಿಮ್ಮ|| ೨೨

(ಸತ್ಯತೆ+ಅದು+ಎಲ್ಲಿಹುದೋ) (ಜಗವು+ಇದರೊಳು+ಆರ) (ಗುಣ+ಎಂತಹುದೋ)

ಕಳೆದ ಐದು ಪದ್ಯಗಳಲಿ ನ ವೇದಂತವನ್ನು ಬಿಟ್ಟೂ, ಈ ಪದ್ಯದಲ್ಲಿ, ಜಗತ್ತಿನ ಬಗ್ಗೆ ಜಾಗರೂಕರಾಗಿರಿ ಎಂದು ಇಲ್ಲಿ ಎಚ್ಚರಿಸುತ್ತರೆ.
ಈ ಜಗತ್ತೆಲ್ಲ ಮೋಸದಿಂದ ತುಂಬಿಕೊಂಡಿದೆ. ಸತ್ಯವೆಂಬುದು ಎಲ್ಲಿಯು ಇಲ್ಲವೇ ಇಲ್ಲ.
ಈ ಸೃಷ್ಟಿಯ ಕಾರಣಕರ್ತ, ಕಾಣಿಸಿಕೊಳ್ಳದೆ ಅವಿತುಕೊಂಡಿದ್ದನೆ.
ಒಂದು ಚಿತ್ರದಂತಿರುವ ಜಗತ್ತಿನಲ್ಲಿ, ಯಾರ ಸ್ವಭಾವ ಹ್ಯಾಗಿದೆಯೊ ನೀನೇನು ಬಲ್ಲೆ!
ನಿನ್ನ ಜಾಗರೂಕತೆಯಲ್ಲಿ ನೀನಿರು. ಎಲ್ಲರನ್ನು ನಂಬಿದೆಯೊ, ಮೋಸ ಹೋಗುವುದು ಖಚಿತ.

ತಿರು ತಿರುಗಿ ತೊಳಲುವುದು ತಿರಿದನ್ನಣ್ಣುವುದು|
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು||
ಮರಲಿ ಕೊರಗಾಡುವುದು ಕೆರಳುವುದು ನರಳುವುದು|
ಇರವಿದೇನೊಣರಗಳೆ? - ಮಂಕುತಿಮ್ಮ|| ೨೩

(ತಿರಿದು+ಅನ್ನ+ಉಣ್ಣುವುದು) (ಇರವು+ಇದು+ಏನು+ಒಣರಗಳೆ)

ಎಲ್ಲೆಲ್ಲಿಯೋ ಓಡಾಡಿ ಸುಸ್ತಾಗುವುದು. ಭಿಕ್ಷೆಬೇಡೀ ಅನ್ನವನ್ನು ತಿನ್ನುವುದು.
ಇಷ್ಟೆಲ್ಲಾ ಮಾಡಿಯು, ವೈಭವದ ಪ್ರದರ್ಶನ ಮಾಡಿ ಮೈಮರ್ಯುವುದು.
ಇನ್ನೊಬ್ಬರ ಹತ್ತಿರ ಹಲ್ಲು ಗಿಂಜುವುದು. ಪುನಹ ವ್ಯಥೆ ಪಡುವುದು, ಕೋಪಿಸಿಕೊಳ್ಳುವುದು,
ಇನ್ನೊಬ್ಬರ ಮೇಲೆ ರೇಗಾಟ. ಮೇಲಿನದೆಲವನ್ನು ಮಾಡಿದರು, ನಾವು ಎಣಿಸಿದಂತಾಗದಾಗ
ಸಂಕಟ ಪಡುವುದು. ನಾವಿರುವುದು ಈ ರೀತಿಯ ಕೆಲಸಕ್ಕೆಬಾರದ ಸಮಸ್ಯೆಗಳ ಒಳಗೆ.
[
ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ

ಬಾಳಿನ ನಕಾಸೆ

ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೋ? |
ಸುರರಟ್ಟಹಾಸದಿನೆ ನರಭಕ್ತಿಯೆರಲೋ? ||
ಪರಿಕಿಸುವರೇನವರ್ಗೆಳನ್ಯೋನ್ಯಶಕ್ತಿಗಳ? |
ಧರುಮವೆಲ್ಲಿದರಲ್ಲಿ? - ಮಂಕುತಿಮ್ಮ || ೨೪

(ಸುರರ+ಅಟ್ಟಹಾಸದಿನೆ) (ಪರಕಿಸುವರು+ಏನು+ಅವರುಗಳ+ಅನ್ಯೋನ್ಯ) (ಧರುಮವು+ಎಲ್ಲಿ+ಇದರಲ್ಲಿ)

ಮನುಷ್ಯರಲ್ಲಿರುವ ಭಯ ಮತ್ತು ಬಯಕೆಗಳು, ದೇವತೆಗಳ ತಾಯಿ ಮತ್ತು ತಂದೆಗಳೋ?
ಮನುಷ್ಯರ ಭಕ್ತಿಯಿಂದ ಕೂಡಿದ ಕೂಗು(ಓರಲು), ಆ ದೇವತೆಗಳ ಜಂಬದ ನಗುವಿಗೆ(ಸುರರ ಅಟ್ಟಹಾಸದಿನೆ)
ಹೆದರಿದೆಯೋ? ಅವರ ಪರಸ್ಪರ ಬಲಾಬಲಗಳನ್ನು ಇವರು ಪರೀಕ್ಷಿಸುತ್ತಿರುವರೋ? ಹಾಗಿದ್ದಲ್ಲಿ ಇದರಲ್ಲಿ ಧರ್ಮದ ಪ್ರಶ್ನೆ ಎಲ್ಲಿಂದ ಬಂತು?

ಜೀವಗತಿಗೊಂದು ರೇಖಲೇಖವಿರಬೇಕು |
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ||
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? |
ಆವುದೀ ಜಗಕಾದಿ? - ಮಂಕುತಿಮ್ಮ || ೨೫

(ಭಾವಿಸುವುದು+ಎಂತು+ಅದನು) (ಜಗಕೆ+ಆದಿ)
ರೇಖಲೇಖ - ಅಕ್ಷಾಂಶಗಳನ್ನು ರೇಖಾಂಶಗಳನ್ನು ಗುರುತಿಸುವ ಒಂದು ಪಟ; ಮತ್ತು ದಿಕ್ಕುಗಳನ್ನು ಸೂಚಿಸುವ ದಿಕ್ಸೂಚಿ
ಹಡಗು ಮತ್ತು ದೋಣಿಗಳನ್ನು ನಡೆಸುವವನಿಗೆ ದಿಕ್ಕು ಮತ್ತು ದಿನ ತೋರಿಸಲು, ಒಂದು ದಿಕ್ಸೂಚಿ ಇರುವಂತೆ,
ಈ ಬಾಳನ್ನು ನಡೆಸಲು ಸಹ ಒಂದು ಸರಿಯಾದ ದಾರಿಯಿರಬೇಕು. ಈ ದಾರಿಗೆ ಇರುವ ಮೊದಲು ಮತ್ತು ಕೊನೆ ಎರಡು
ಕಾಣಿಸದಿದ್ದಲ್ಲಿ, ಇದನು ಊಹಿಸುವುದು ಹೇಗೆ? ಈ ಜಗತ್ತಿಗೆ ಮೊದಲು ಯಾವುದು? ಯಾರಿಗಾದರು ತಿಳಿದಿದೆಯೆ?

ಸೄಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ |
ಇಷ್ಟ ಮೋಹಕ ದಿವ್ಯಗುಣಗಳೊಂದು ಕಡೆ ||
ಕಷ್ಟ ಬೀಭತ್ಸ ಘೋರಂಗಳಿನ್ನೊಂದು ಕಡೆ |
ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ || ೨೬

(ಸೃಷ್ಟಿ+ಆಶಯವು+ಅದು+ಏನು+ಅಸ್ಪಷ್ಟ) (ದಿವ್ಯ+ಗುಣಗಳು+ಒಂದು) (ಘೋರಂಗಗಳು+ಇನ್ನೊಂದು)

ಈ ಸೃಷ್ಟಿಯ ಉದ್ದೇಶವಾದರು ಏನು? ಅದು ಸ್ಪಷ್ಟವಾಗಿಲ್ಲ. ಸರಿಯಾಗಿ ತಿಳಿಯಲಾಗುವುದಿಲ್ಲ.
ಅದರ ಜೊತೆಗೆ, ಬಹಳ ತೊಡಕಾದದ್ದೂ(ಸಂಶ್ಲಿಷ್ಟ) ಹೌದು. ಒಂದು ಕಡೆ, ನಮಗೆ
ಪ್ರೀತಿಪಾತ್ರವಾಗಿರುವ ಮತ್ತು ಮರುಳುಗೊಳಿಸುವ, ಸುಂದರ ಸ್ವ್ಭಾವಗಳು. ಇನ್ನೊಂದು ಕಡೆ
ಕಠಿಣ ಹಾಗು ಅಸಹ್ಯವಾಗಿರುವ(ಬೀಬತ್ಸ) ಭಯಂಕರಗಳು. ಈ ರೀತಿಯಾಗಿ,
ಈ ಬ್ರಹ್ಮಸೃಷ್ಟಿ ಅರ್ಥ ಮಾಡಿಕೊಳ್ಳುವುದಕ್ಕೆ ಬಹಳ ಕಷ್ಟವಾದದ್ದು(ಕ್ಲಿಷ್ಟ).

ಧರೆಯ ಬದುಕೇನದರ ಗುರಿಯೇನು ಫಲವೇನು? |
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಕಗಕಿಂತ |
ನರನು ಸಾಧಿಪುದೇನು? - ಮಂಕುತಿಮ್ಮ|| ೨೭

(ಬದುಕು+ಏನು+ಅದರ)

ಈ ಪ್ರಪಂಚದ ಬದುಕಿನ ಉದ್ದೆಶ ಮತ್ತು ಅದರ ಪ್ರಯೋಜನಗಳೇನು? ಇವು ವ್ಯರ್ಥವಾದ ಕೇವಲ ಓಡಾಟ,
ಹೊಡೆದಾಟ ಮತ್ತು ತೊಳಲಾಟ ಮಾತ್ರವೇ? ಸುತ್ತಿ ಸುತ್ತಿ ತನ್ನ ಹೊಟ್ಟೆಯನ್ನು ತುಂಬಿಕೊಳ್ಳುವ ಪ್ರಾಣಿ ಮತ್ತು
ಪಕ್ಷಿಗಳಿಗಿಂತ ಹೆಚ್ಚಿನದೇನನ್ನಾದರೂ ಮನುಷ್ಯನು ಸಾಧಿಸುತ್ತಾನೆಯೋ?

ಕಾರುಣ್ಯ ಸರಸ ಸೌಂದರ್ಯ ರುಚಿಗಳೆ ಸೃಷ್ಟಿ |
ಕಾರಣಮೆನಿಪ್ಪವೊಲು ತೋರ್ಪುದೊಂದು ಚಣ ||
ಕಾರ್ಪಣ್ಯ ಕಟುಕತೆಗಳೆನಿಪುದಿನ್ನೊಂದು ಚಣ |
ತೋರುವುದಾವುದು ದಿಟವೊ - ಮಂಕುತಿಮ್ಮ || ೨೮

(ಕಾರಣಂ+ಏನಿಪ್ಪವೊಲು) (ತೊರ್ಪುದು+ಒಂದು) (ಕಟುಕಥೆಗಳು+ಏನಿಪುದು+ಇನ್ನೊಂದು) (ತೋರದು+ಆವುದು)

ಮರುಕ, ವಿನೋದ, ಹಾಸ್ಯ ಮತ್ತು ಸೌಂದರ್ಯಗಳೇ, ಈ ಸೃಷ್ಟಿಗೆ ಕಾರಣವೆಂದು ಕೆಲವು ಸಲ ಅನ್ನಿಸುತ್ತದೆ.
ಇನ್ನೊಂದು ಸಲ ಬಡತನ, ಜಿಪುಣತನ ಕೃರತನಗಳೇ, ಈ ಸೃಷ್ಟಿಯ ಉದ್ದೇಷವೆಂದೆನುಸುತ್ತದೆ.
ಈ ಎರಡರಲ್ಲಿ ನಿಜ ಯಾವುದು ಎನ್ನುವುದು ನಮ್ಮ ಮನಸ್ಸಿಗೆ ಗೋಚರವಾಗುವುದಿಲ್ಲ.

ಸಮಸ್ಯೆಗೆಲ್ಲಿ ಪೂರಣ

ಎರಡುಮಿರಬೊಹುದು ದಿಟ; ಶಿವರುದ್ರನಲೆ ಬೊಮ್ಮ |
ಕರವೊಂದರಲಿ ವೇಣು, ಶಂಖವೊಂದರಲಿ ||
ಬೆರಳ್ಗಳೆರಡನುಮಿರೆ ಕೈ ಚಿಟಿಕೆಯಾಡುವುದು |
ಓರುವನಾಡುವುದೆಂತು? - ಮಂಕುತಿಮ್ಮ || ೨೯

(ಎರಡು+ಇರಬೊಹುದು) (ಬೆರಳುಗಳು+ಎರಡು+ಇರೆ) (ಓರುವನು+ಆಡುವುದು+ಎಂತು)

ಎರಡು ನಿಜವಿರಬೊಹುದು. ದೇವರು ಶಿವ ಮತ್ತು ರುದ್ರನೂ ಅಹುದು. ಒಂದು ಕೈಯಲ್ಲಿ ಕೊಳಲು,
ಇನ್ನೊಂದು ಕೈಯಲ್ಲಿ ಶಂಖವನ್ನಿಟ್ಟುಕೊಂಡು, ಎರಡು ಬೆರಳುಗಳ ಹೊಂದಾಣಿಕೆಇಂದ ಕೈಚಿಟಿಕೆ ಆಡಬೊಹುದಾದರೂ,
ಒಬ್ಬನೇ ಹೇಗೆ ಆಟ ಆಡುವುದು?

ಬ್ರಹ್ಮವೇ ಸತ್ಯ ಸೃಷ್ಟಿಯೆ ಮಿತ್ಯ ಎನ್ನುವೊಡೆ |
ಸಂಬಂಧವಿಲ್ಲವೇನಾ ವಿಷಯುಗಕೆ? ||
ನಮ್ಮ ಕಣ್ಮನಸುಗಳೆ ನಮಗೆ ಸೆಟೆ ಪೇಳುವೊಡೆ |
ನಮ್ಮುವುದದಾರನೋ? - ಮಂಕುತಿಮ್ಮ || ೩೦

(ಮಿಥ್ಯೆ+ಎನ್ನುವೊಡೆ) (ಸಂಬಂಧ+ಇಲ್ಲ+ಏನು) (ಕಣ್+ಮನಸುಗಳು) (ನೆಮ್ಮುವುದು+ಅದು+ಆರನೋ)

ಹೌದು ಬ್ರಹ್ಮವೇ ಸತ್ಯ. ನಿಜವಾದುದ್ದು. ಈ ಸೃಷ್ಟಿಯೆಲ್ಲಾ ಒಂದು ಮಾಯೆ! ಇದು ಸುಳ್ಳು(ಮಿಥ್ಯೆ)
ಎನ್ನುವುದಾದರೆ, ಈ ಎರಡಕ್ಕು(ಯುಗ) ಏನು ಸಂಬಂಧವೇ ಇಲ್ಲವೇ? ಬ್ರಹ್ಮನೇ ತಾನೆ ಈ ಸೃಷ್ಟಿ ಮಾಡಿದ್ದು.
ಹಾಗಿದ್ದರೆ, ಇವೆರಡಕ್ಕು ಸಂಬಂಧವಿಲ್ಲವೆಂದು ಹೇಗೆ ಹೇಳುವುದಕ್ಕಗುತ್ತದೆ? ನಮ್ಮ ಕಣ್ಣು ಮತ್ತು ಮನಸ್ಸುಗಳೆ ಸುಳ್ಳನ್ನು(ಸೆಟೆ)
ಹೇಳುವುದಾದರೆ, ನಾವು ಇನ್ನು ಯಾರನ್ನು ತಾನೆ ನಂಬುವುದು?

ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? |
ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು? ||
ಅಚ್ಚರಿಯ ತಂತ್ರವಿದು; ಬ್ರಹ್ಮ ಸೃಷ್ಟಿಗಳೇಕೊ |
ಮುಚ್ಚಿಹವು ಸಾಜತೆಯ - ಮಂಕುತಿಮ್ಮ || ೩೧

(ಮರೆಯೊಳು+ಇಹುದನೆ)

ಸುಳ್ಳಿನ ಹಿಂದೆ, ನಿಜ ಎನ್ನುವುದು ಏನಾದರು ಅವಿತುಕೊಂಡಿದೆಯೋ? ಈ ಮರೆಯಲ್ಲಿರುವುದನ್ನೇ ನಾವು
ನಿಜವೆಂದು ನಂಬಬೊಹುದೇ? ಇದು ಆಶ್ಚರ್ಯಕರವಾದ(ಅಚ್ಚರಿಯ) ಉಪಾಯವಿದ್ದಹಾಗೆ ಕಾಣುತದಲ್ಲ?
ಈ ಬ್ರಹ್ಮನ ಸೃಷ್ಟಿ, ಸಹಜತೆಯನ್ನು ಮರೆಮಾಡಿ, ಒಂದು ಮುಸುಕನ್ನು ಹಾಕಿಕೊಂಡಂತಿದೆ.
ಈ ಮುಸುಕನ್ನು ತೆರೆದರೆ ಸಹಜತೆಯ(ಸಾಜತೆ) ಅರಿವು ನಮಗುಂಟಾಗುತ್ತದೆ.

ಪರಬೊಮ್ಮನೀ ಜಗವ ರಚಿಸಿದವನಾದೊಡದು |
ಬರಿಯಾಟವೋ ಕನಸೋ ನಿದ್ದೆ ಕಲವರವೋ? ||
ಮರಳನವನಲ್ಲದೊಡೆ ನಿಯಮವೊಂದಿರಬೇಕು |
ಗುರಿಗೊತ್ತದೇನಿಹುದೋ? - ಮಂಕುತಿಮ್ಮ || ೩೨

(ರಚಿಸಿದವನು+ಆದೊಡೆ+ಅದು) (ಮರುಳನು+ಅವನು+ಅಲ್ಲದೊಡೆ) (ನಿಯಮ+ಒಂದು+ಇರಬೇಕು) (ಗುರಿ+ಗೊತ್ತು+ಅದು+ಏನು+ಇಹುದೋ)

ಈ ಜಗವನ್ನು ಬ್ರಹ್ಮ ರಚಿಸಿದರು, ಇದೇನು ಬರೀ ಆಟವೋ ಅಥವ ನಾವುಗಳೆಲ್ಲ ಕನಸಿನಲ್ಲಿ ಬಡಬಡಿಸುತ್ತಿರುವೆವೋ?
(ಕಲವರ)? ಈ ಸೃಷ್ಟಿಕರ್ತ ಒಬ್ಬ ದಡ್ಡ ಅಥವಾ ಹುಚ್ಚನಲ್ಲ ನೆಂದುಕೊಂಡರೆ, ಈ ಸೃಷ್ಟಿಗೆ ಒಂದು ನಿಯಮವಿರಬೇಕು.
ಅಂತೆಯೆ ಒಂದು ಉದ್ದೇಶ ಮತ್ತು ನೆಲೆ. ಇವು ಯಾವುದು ನಮಗ ಗೋಚರವಾಗುತಿಲ್ಲವಲ್ಲ!

ನರಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್ |
ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ? ||
ಸುರಿದು ಪ್ರಷ್ನೆಗಳನ್ನುತ್ತರವ ಕುಡೆ ಬಾರದನ |
ಗುರುವೆಂದು ಕರೆಯುವೆಯ? - ಮಂಕುತಿಮ್ಮ || ೩೩

(ಬೊಮ್ಮನ+ಆಶಯವೆ) (ಪ್ರಷ್ನೆಗಳನು+ಉತ್ತರವ)

ಈ ಮನುಷ್ಯರನ್ನು ನಾನ ರೀತಿಯ ಪ್ರಈಕ್ಷೆಗಳಿ ಗುರಿಪಡಿಸಬೇಕು ಎನ್ನುವುದೆ ಬರಹ್ಮನ ಇಷ್ಟವೇ?
ನಮ್ಮ ಬಾಳೆಲ್ಲಾ, ಬರೀ ಸಮಸ್ಯೆಗಳೆ ಹೌದೆ? ಇದರ ಮುಗಿವು(ಪೂರಣ) ಎಲ್ಲಿ? ಈ ರೀತಿಯಾಗಿ
ಬಗೆ ಬಗೆಯ ಪ್ರಷ್ನೆಗಳನ್ನು ಕೇಳಿಸಿಕೊಂಡು, ಅದಕ್ಕುತ್ತರವನ್ನು ಕೊಡದಿರುವವನನ್ನು ನಾವು ಗುರುವೆಂದು ಹೇಗೆ ಕರೆಯೋಣ?


ಬ್ರಹ್ಮವಸ್ತು ಊಸರವಳ್ಳಿಯೇ?

ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ |
ಸೃಷ್ಟಿಯಲಿ ತತ್ವವೆಲ್ಲಿಯೊ ಬೆದಕಿ ನರನು ||
ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೋ! |
ಅಷ್ಟೆ ನಮ್ಮಯ ಪಾಡು? - ಮಂಕುತಿಮ್ಮ || ೩೪

(ಲಷ್ಟಪಡುತಿರಲು+ಎನ್ನುವುದೇ)

ಈ ಸೃಷ್ಟಿಯ ಬಗ್ಗೆ ನಾವೆಷ್ಟು ಯೋಚಿಸಿದರು ಸಹ, ನಮ್ಮಲ್ಲಿ ಒಂದು ವಿಧವಾದ, ಸಂದೇಹ ಮತ್ತು ಅಳುಕು ಬೆಳೆಯುತ್ತ ಹೋಗುತ್ತದೆ.
ಇದರಲ್ಲಿ ಏನಾದರು ಸಿದ್ಧಾಂತವಿದೆಯೆಂದು ಹುಡುಕುತ್ತ ಹೋದರೆ, ಈ ಬ್ರಹ್ಮ ವಿಧಿಯ ಪ್ರಕಾರ ನಾವು ಕಷ್ಟಪಡುತ್ತಲೇ ಇರಬೇಕು. ಇಷ್ಟೇ ನಮ್ಮ ಅವಸ್ಥೆಯೆಂದೆನಿಸುತ್ತದೆ.

ಇರಬೊಹುದು; ಚಿರಕಾಲ ಬೊಮ್ಮ ಚಿಂತಿಸಿ ದುಡಿದು |
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು ||
ಅರಿತೆನಾನೆನ್ನುವಂತಾಗೆ ಕೃತಿಕೌಶಲದ |
ಹಿರಿಮೆಗದು ಕುಂದಲ್ತೆ? - ಮಂಕುತಿಮ್ಮ || ೩೫

ಬಹಳಷ್ಟು ಕಾಲ ಯೋಚನೆ ಮಾಡಿ, ಕೆಲಸವನ್ನೂ ಮಾಡಿ, ಬ್ರಹ್ಮ ಈ ಜಗತ್ತನ್ನು ಸೃಷ್ಟಿ ಮಾಡಿದ.
ಅವನು ಅಷ್ಟು ಕಾಲ ಕಳೆದು ಕಷ್ಟಪಟ್ಟು ರಚಿಸಿ(ನಿರವಿಸು) ದ್ದುದನ್ನು, ಒಬ್ಬ ಮೃತಿ ಹೊಂದುವ ಮನುಷ್ಯ(ಮರ್ತ್ಯನರನು),
ಅರ್ಥಮಾಡಿಕೊಂಡು ಬಿಟ್ಟರೆ, ಇದನ್ನು ರೂಪಿಸಿದ ಅವನ ಹೆಚ್ಚುಗಾರಿಕೆಗೆ, ಒಂದು ಕೊರತೆ ಉಂಟಾಗುತ್ತದಲ್ವೆ? ಆದುದರಿಂದಲೇ
ಈ ಸೃಷ್ಟಿಯ ರಹಸ್ಯವನ್ನು ಪರಿಪೂರ್ನವಾಗಿ ಅರ್ಥಮಾಡಿಕೊಳ್ಳುವ ಶಕ್ತಿಯನ್ನು, ಅವನು ನಮಗೆ ಕೊಡಲಿಲ್ಲ.

ಎಲ್ಲೆಲ್ಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಸಿ ||
ಗೆಲ್ಲಲಿಲ್ಲವನಾ ಪರೀಕ್ಷೆಯೊಳಗೆಂದು ವಿಧಿ |
ಸೊಲ್ಲಿಪುದು ಸರಿಯೇನೋ? - ಮಂಕುತಿಮ್ಮ || ೩೬

(ಗೆಲ್ಲಲಿಲ್ಲ+ಇವನು+ಆ) (ಪರೀಕ್ಷೆ+ಓಳಗೆ+ಎಂದು)

ಈ ಜಗತ್ತಿನ ಸುತ್ತ ಮುಟ್ಟಲೂ ಆಡಂಬರ ಮತ್ತು ವೈಭವಗಳನ್ನು ಮುಚ್ಚಿಟ್ಟು (ಕವಿಸಿ).
ಯೋಗ್ಯವಲ್ಲದ ಕೆಟ್ಟ ದಾರಿಗಳಲ್ಲಿ(ಸಲ್ಲದ ಕುಮಾರ್ಗದೊಳು). ಮನುಷ್ಯನನ್ನು ನಡೆಸಿ, ನಂತರ, ಈ ಪ್ರೀಕ್ಷೆಯಲ್ಲಿ ನೀನು ಗೆಲ್ಲಲಿಲ್ಲವೆಂದು ಹೇಳುವುದು(ಸೊಲ್ಲಿಪುದು) ಸರಿಯೇನು?

ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ |
ಅವನ ವೇಷಗಳೇಕೆ ಮಾರ್ಪಡುತಲಿಹವು? ||
ತವಕಪಡನೇತಕೋ ಕುರುಹ ತೋರಲು ನಮಗೆ |
ಅವಿತುಕೊಂಡಿಹುದೇಕೋ? - ಮಂಕುತಿಮ್ಮ || ೩೭

(ವಿಷ್ವ+ದೇಹದ+ಒಳು+ಎನ್ನ) (ಮಾರ್ಪಡುತಲು+ಇಹವು) (ತವಕಪಡನು+ಏತಕೊ) (ಅವಿತುಕೊಂಡು+ಇಹುದು+ಏಕೋ)

ಈ ಸ್ರೂಷ್ಟಿಅಯ್ ಪ್ರತಿಯೊಂದರಲ್ಲೂ ಬ್ರಹ್ಮ ತಳೆದು ಬಂದಿದ್ದನ್ನೆಉವುದಾದರೆ, ಅವನ ವೇಷಗಳೇತಕ್ಕೋಸ್ಕರ ಬದಲಾವಣೆಯಾಗುತ್ತಿವೆ?
ತನ್ನ ಗುರುತನ್ನು(ಕುರುಹ) ನಮಗೆ ತೋರಿಸಲು ಆತುರಪಡದೆ, ಏತಕ್ಕಾಗಿ ಬಚ್ಚಿಟ್ಟುಕೊಂಡಿದ್ದಾನೇಯೋ, ನಮಗ ಅರ್ಥವಾಗುತಿಲ್ಲ.

ಬೇರೆಯಿಸಿ ನಿಮಿಷನಿಮಿಷಕಮೋಡಲಬಣ್ಣಗಳ |
ತೋರಿಪೂಸರವಳ್ಳಿಯಂತೇನು ಬೊಮ್ಮಂ? ||
ಪೂರ ಮೈದೋರೆನೆಂಬಾ ಕಪಟಿಯಂಶಾವ |
ತಾರದಿಂದಾರ್ಗೇನು? - ಮಂಕುತಿಮ್ಮ || ೩೮

(ನಿಮಿಷ+ನಿಮಿಷಕಂ+ಒಡಲ+ಬಣ್ಣಗಳ) (ಕಪಟಿಯ+ಅಂಶಾವತಾರದಿಂದ+ಆರ್ಗೆ+ಏನು)

ಪ್ರತಿಯೋಮ್ದು ನಿಮಿಷಕ್ಕು ಬಣ್ಣ ಬದಲಾಯಿಸುವ ಊಸರವಳ್ಳಿಯ ತರಹವೇನು ಈ ಪರಬ್ರಹ್ಮ?
ಈ ರೀತಿಯಾಗಿ ತನ್ನ ಪೂರ್ತಿದೇಹವನ್ನು ತೋರಿಸದಿರುವ, ಮೋಸದವನ ಒಂದು ಭಾಗ ಮಾತ್ರ ಕಾಣಿಸಿಕೊಳ್ಳುವಿಕೆಯಿಂದ(ಅಂಶಾವತಾರ), ನಮಗ ಆಗಬೇಕಾದುದ್ದೇನಿಲ್ಲ.


ವಿದ್ಯುಲ್ಲಹರಿಯೇ?

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |
ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||
ಓಸೆದೇತಕವನೀಯನೆಮಗೊಂದು ನಿಜಕುರುಹ |
ನಿಶೆಯೊಳುಡಕರದವೊಲು? - ಮಂಕುತಿಮ್ಮ || ೩೯

(ಕಾಣ್ಬ+ಒಲ್+ಎಸಗೆ) (ಪರಬೊಮ್ಮ+ಎನ್ನುವೊಡೆ) (ಒಸೆದು+ಏತಕೆ+ಅವನು+ಈಯನ್+ಎಮಗೆ+ಒಂದು) (ನಿಶೆಯ+ಒಳು+ಉಡುಕರದ+ಒಲು)

ಸುಳ್ಳುಗಳನ್ನೆ ಹೇಳಿಕೊಂಡು, ನಿಜವನ್ನು ಕಾಣುತ್ತೇನೆನ್ನುವಂತೆ, ಪರಮಾತ್ಮ ಮುಸುಕು ಹಾಖಿಕೊಂಡಿರುವುದಾದರೆ,
ಅವನು ನಮ್ಮ ಮೇಲೆ ಪ್ರಸನ್ನನಾಗಿ(ಒಸೆದು), ರಾತ್ರಿ ಹೊತ್ತುನಕ್ಷತ್ರದ ಕಿರಣಗಳು(ಉಡುಕರ), ನಮಗೆ ದಾರಿ ತೋರುವಂತೆ
ಒಂದು ಗುರುತನ್ನು ಅವನ ಇರುವಿಕೆಯ ಕುರುಹಾಗಿ ತೋರಿಸಬಾರದೇನು?

ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ? |
ಶಶಿರವಿಗಳವನ ಮನೆಕಿಟಕಿಯಾಗಿರರೇಂ? ||
ಮುಸುಕುಬೆಳಕೊಂದಾದ ಸಂಜೆಮಂಜೇನವನು |
ಮಿಸುಕಿ ಸುಳಿಯುವ ಸಮಯ? - ಮಂಕುತಿಮ್ಮ || ೪೦

(ನಿಶೆಯೊಳು+ಏಂ) (ಹಗಲನು+ಒಲ್ಲದೊಡೆ) (ಶಶಿರವಿಗಳು(ಅವನ)

ಹಗಲು ಹೊತ್ತು ಅವನು ನಮಗೆ ಕಾಣಿಸಿಕೊಳ್ಳಬಾರದು ಎಂದು ಅವನ ನಿಯಮವಿದ್ದರೆ, ರಾತ್ರಿ (ನಿಶೆ)
ಹೊತ್ತದರು ಅವನು ನಮಗೆ ಕಾಣೀಸಿಕೊಳ್ಳಬೊಹುದಲ್ಲ? ಚಂದ್ರ ಮತ್ತು ಸೂರ್ಯರುಗಳು ಅವನ ಮನೆಯ ಕಿಟಕಿಗಳೋ?
ಸಯಂಕಾಲ ಮಬ್ಬು ಬೆಳಕಿನಲ್ಲಿ ಅವನು ಮಿಂಚಿನಂತೆ (ಮಿಸುಕು) ಓಡಡುತ್ತನೋ?

ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ |
ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು ||
ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟೂ |
ಓದವಿಪರು ದಿಟದರಿವ - ಮಂಕುತಿಮ್ಮ || ೪೧

(ಕದಕೆ+ಅಗಳಿಯನು)

ದೇವಸ್ತಾನದ ಬಾಗಿಲುಗಳನ್ನು ಭದ್ರವಾಗಿ ಬೀಗ ಹಾಕಿ, ಅದರ ಬೀಗದ ಕೈಗೊಂಚಲನ್ನು(ಕೀಲ್ಕುಂಚಿಕೆ) ದುರಕ್ಕೆಸೆದರೆ,
ಅವಾಗ ನಾನ ಶಸ್ತ್ರಗಳನ್ನು ಬಲ್ಲವರು (ಪದವಾಕ್ಯವಿದರ್) ಶಬ್ದಗಳ ಆಡಂಬರವನ್ನು (ಗಡಣೆ) ಬಿಟ್ಟು ಸತ್ಯದ ಜ್ಞಾನವನ್ನು (ದಿಟದ ಅರಿವು)
ಒದಗಿಸುತ್ತಾರೆ. ಇದು ಆದಿಶಂಕರರ ಭಜಗೋವಿಂದಮ್ನಲ್ಲಿ ಬರುವ "ಭಜಗೋವಿಂದಂ ಭಜಗೋವಿಂದಂ, ಗೋವಿಂದಂ ಭಜ ಮೂಡಮತೇ,
ಸಂಪ್ರಾಪ್ತೇ ಸನ್ನಿಹಿತೇ ಕಾಳೆ ನಹಿ ನಹಿ ರಕ್ಶತಿ ಡುಕೃಇಂಕರಣೇ" ಅಂದಹಾಗೆ, ಅವನನ್ನು ಭಜಿಸು, ಅವನಿಗೆ ಮೊರೆಹೋಗು. ಈ ವ್ಯಾಕರಣ,
ತರ್ಕಗಳೆಲ್ಲಾ ಕೊನೆಗಾಲದಲ್ಲಿ ನಿನಗೆ ನೆರವಾಗುವುದಿಲ್ಲ, ಎನ್ನುವುದು ಈ ಮೇಲಿನ ಪದ್ಯದ ಸಾರಂಶ.

ಆಹ | ಈ ಮೋಹಗಳೊ ನೇಹಗಳೊ ದಾಹಗಳೊ |
ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? ||
ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ |
ಈ ಹರಿಬದೊಳಗುಟ್ಟೊ? - ಮಂಕುತಿಮ್ಮ || ೪೨

ಈ ಜಗತ್ತಿನಲ್ಲಿರುವವರು ಹೃದಯವಂತರೆಂದು ನಮ್ಮ ಭಾವನೆ, ಈ ಮೋಹ, ಸ್ನೇಹ (ನೇಹ)
ಮತ್ತು ದಾಹಗಳಲ್ಲಿ ಮುಳುಗಿ ನಾವು ಹೃದಯವಂತಿಕೆಯನ್ನು ಕಾಣಲು ಕಾತರಿಸುತ್ತಿರುತ್ತೇವೆ. ಆದರೆ ಅದು ಎಲ್ಲು ಕಾಣಬರುವುದಿಲ್ಲ.
ಇದೊಂದು ವ್ಯವಹಾರ, (ಹರಿಬ) ಮತ್ತು ಈ ವ್ಯವಹಾರದ ಒಳಗುಟ್ಟು 'ಹೋಹೋ ಹಾಹಾ' ಎಂದು ನಮ್ಮ ಬಾಯನ್ನು ಬಿಡಿಸುವುದೇ ಆಗಿದೆ.

ಮೇಲೆ ಕೆಳಗೊಳಗೆ ಬಿಳಿಸುತ್ತಲೆತ್ತೆತ್ತಲುಂ |
ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು ||
ಧುಲಿಕಣ ಭೂಗೋಳ ರವಿ ಚಂದ್ರ ತಾರೆಗಳ |
ಚಾಲಿಪುದು ಬಿಡುಕೊಡದೆ - ಮಂಕುತಿಮ್ಮ || ೪೩

(ಕೆಳಗೆ+ಒಳಗೆ) (ಸುತ್ತಲು+ಎತ್ತೆತ್ತಲುಂ)

ನಾವಿರುವ ಈ ಪ್ರಪಂಚದ ಎಲ್ಲ ಭಾಗಗಳ ಮೇಲೆ, ಕೆಳಗೆ, ಒಳಗೆ, ಹತ್ತಿರ, ಸುತ್ತಮುತ್ತಲು ಮತ್ತು ಮೂಲೆ ಮೂಲೆಗಳಲು
ಒಂದು ಮಿಂಚಿನ ಹರಿದಾಟ(ವಿದ್ಯುಲ್ಲಹರಿ), ಆವರಿಸಿಕೊಂಡು, ಈ ಭೂಮಿಯ ಒಂದು ಕಣ, ಚಂದ್ರ ಮತ್ತು ನಕ್ಷತ್ರಗಳನು ಬಿಡುವಿಲದೆ ಚಲಿಸುವಂತೆ
(ಚಾಲಿಪುದು) ಮಾಡುತ್ತಿದೆ. ಯಾವುದು ಈ ಶಕ್ತಿ? ಇದನ್ನು ಮಾಡಿದವರು ಯಾರು?--Neelanjan

No comments:

Post a Comment