Friday, October 29, 2010

ಸರ್ವಜ್ಞನ ವಚನಗಳು

 ಸರ್ವಜ್ಞನ ವಚನಗಳು - ನೂರೊಂದರಿಂದ ಇನ್ನೂರು

೧೦೧.
ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ
ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ

೧೦೨.
ಹೊಲಸು ಮಾಂಸದ ಹುತ್ತು | ಎಲುವಿನ ಹಂಜರವು
ಹೊಲೆ ಬಲಿದ ತನುವಿನೊಳಗಿರ್ದು - ಮತ್ತದರ
ಕುಲವನೆಣಿಸುವರೆ ಸರ್ವಜ್ಞ

೧೦೩.
ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ
ಕುಟಿಲ ವಂಚನೆಯ ಪೊಗದಿರು - ನಿಜವ ಪಿಡಿ
ಘಟವ ನೆಚ್ಚದಿರು ಸರ್ವಜ್ಞ

೧೦೪.
ಸುರತರು ಮರನಲ್ಲ | ಸುರಭಿಯೊಂದಾವಲ್ಲ
ಪರುಷ ಪಾಷಾಣದೊಳಗಲ್ಲ - ಗುರುವು ತಾ
ನರರೊಳಗಲ್ಲ ಸರ್ವಜ್ಞ

೧೦೫.
ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ
ಸೂತ್ರದಲಿ ಧಾತನರಿವಂತೆ - ಶಿವನ ಗುರು
ನಾಥನಿಂದರಿಗು ಸರ್ವಜ್ಞ

೧೦೬.
ಮಂಡೆ ಬೋಳಾದೊಡಂ | ದಂಡು ಕೋಲ್ವಿಡಿದೊಡಂ
ಹೆಂಡತಿಯ ಬಿಟ್ಟು ನಡೆದೊಡಂ - ಗುರುಮುಖವ
ಕಂಡಲ್ಲದಿಲ್ಲ ಸರ್ವಜ್ಞ

೧೦೭. ಬ್ರಹ್ಮವೆಂಬುದು ತಾನು | ಒಮ್ಮಾರು ನೀಳವೇ
ಒಮ್ಮೆ ಸದ್ಗುರುವಿನುಪದೇಶ - ವಾಲಿಸಲು
ಗಮ್ಮನೆ ಮುಕ್ತಿ ಸರ್ವಜ್ಞ

೧೦೮.
ಊರಿಂಗೆ ದಾರಿಯ | ನಾರು ತೋರಿದರೇನು
ಸಾರಾಯಮಪ್ಪ ಮತವನರುಹಿಸುವ ಗುರು
ಆರಾದೊಡೇನು ಸರ್ವಜ್ಞ

೧೦೯.
ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ
ನಿಃಪತ್ತಿಯಾದ ಗುರುವಿನುಪದೇಶದಿಂ
ತಪ್ಪದೇ ಮುಕ್ತಿ ಸರ್ವಜ್ಞ

೧೧೦.
ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ
ಪರುಷವೆಂತಂತೆ ಶಿಷ್ಯಂಗೆ - ಗುರುವಿನ
ಸ್ಪರುಶನವೆ ಮೋಕ್ಷ ಸರ್ವಜ್ಞ

೧೧೧.
ಮೊಸರ ಕಡೆಯಲು ಬೆಣ್ಣೆ | ಒಸೆದು ತೋರುವ ತೆರದಿ
ಹಸನುಳ್ಳ ಗುರುವಿನುಪದೇಶ - ದಿಂ ಮುಕ್ತಿ
ವಶವಾಗದಿಹುದೆ ಸರ್ವಜ್ಞ

೧೧೨.
ಗುರುಪಾದ ಸೇವೆ ತಾ ದೊರಕೊಂಡಿತಾದೊಡೆ
ಹಿರಿದಪ್ಪ ಪಾಪ ಹರೆವುದು - ಕರ್ಪುರದ
ಗಿರಿಯ ಸುಟ್ಟಂತೆ ಸರ್ವಜ್ಞ

೧೧೩.
ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ
ಮತ್ತೆ ಪಾದದ ಕೆರವಾಗಿ - ಗುರುವಿನ
ಹತ್ತಿಲಿರು ಎಂದ ಸರ್ವಜ್ಞ

೧೧೪.
ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ
ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ
ಕಾಣಿಸುತಿಹುದು ಸರ್ವಜ್ಞ

೧೧೫.
ಬೆಟ್ಟ ಕರ್ಪುರ ಉರಿದು | ಬೊಟ್ಟಿಡಲು ಬೂದಿಲ್ಲ
ನೆಟ್ಟನೆ ಗುರುವಿನರಿದನ - ಕರ್ಮವು
ಮುಟ್ಟಲಂಜುವವು ಸರ್ವಜ್ಞ

೧೧೬.
ವಿಷಯಕ್ಕೆ ಕುದಿಯದಿರು | ಅಶನಕ್ಕೆ ಹದೆಯದಿರು
ಅಸಮಾಕ್ಷನಡಿಯನಗಲದಿರು - ಗುರುಕರುಣ
ವಶವರ್ತಿಯಹುದು ಸರ್ವಜ್ಞ

೧೧೭.
ತಂದೆಗೆ ಗುರುವಿಗೆ | ಒಂದು ಅಂತರವುಂಟು
ತಂದೆ ತೋರುವನು ಶ್ರೀಗುರುವ - ಗುರುರಾಯ
ಬಂಧನವ ಕಳೆವ ಸರ್ವಜ್ಞ

೧೧೮.
ಹಸಿಯ ಸೌದೆಯ ತಂದು | ಹೊಸೆದರುಂಟೇ ಕಿಚ್ಚು
ವಿಷಯಂಗಳುಳ್ಳ ಮನುಜರಿಗೆ - ಗುರುಕರುಣ
ವಶವರ್ತಿಯಹುದೆ ಸರ್ವಜ್ಞ

೧೧೯.
ಒಂದೂರ ಗುರುವಿರ್ದು | ವಂದನೆಯ ಮಾಡದೆ
ಸಂಧಿಸಿ ಕೂಳ ತಿನುತಿರ್ಪವನ - ಇರವು
ಹಂದಿಯ ಇರವು ಸರ್ವಜ್ಞ

೧೨೦.
ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೆ ಜಗವು ಅಡಗಿಹುದು - ಲಿಂಗವನು
ಹಿಂಗಿ ಪರ ಉಂಟೆ ಸರ್ವಜ್ಞ

೧೨೧.
ಓರ್ವನಲ್ಲದೆ ಮತ್ತೆ | ಈರ್ವರುಂಟೇ ಮರುಳೆ
ಸರ್ವಜ್ಞನೋರ್ವ ಜಗಕೆಲ್ಲ - ಕರ್ತಾರ
ನೋರ್ವನೇ ದೇವ ಸರ್ವಜ್ಞ

೧೨೨.
ಎಂಜಲು ಶೌಚವು | ಸಂಜೆಯೆಂದೆನ ಬೇಡ
ಕುಂಜರ ವನವ ನೆನೆವಂತೆ - ಬಿಡದೆ ನಿ
ರಂಜನನ ನೆನೆಯ ಸರ್ವಜ್ಞ

೧೨೩.
ಭೂತೇಶ ಶರಣೆಂಬ | ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಭೂತೇಶ - ಶರಣೆನ್ನ
ದಾತ ಮಾದಿಗನು ಸರ್ವಜ್ಞ

೧೨೪.
ಯಾತರ ಹೂವಾದರು | ನಾತರೆ ಸಾಲದೆ
ಜಾತಿ-ವಿಜಾತಿ ಯೆನಬೇಡ - ಶಿವನೊಲಿ
ದಾತನೇ ಜಾತಿ ಸರ್ವಜ್ಞ

೧೨೫.
ಮಾಯಾಮೋಹವ ನೆಚ್ಚಿ | ಕಾಯವನು ಕರಗಿಸುತೆ
ಆಯಾಸಗೊಳುತ ಇರಬೇಡ - ಓಂ ನಮಶ್ಯಿ
ವಾಯವೆಂದೆನ್ನಿ ಸರ್ವಜ್ಞ

೧೨೬.
ಮುನಿವಂಗೆ ಮುನಿಯದಿರು | ಕನೆವಂಗೆ ಕನೆಯದಿರು
ಮನಸಿಜಾರಿಯನು ಮರೆಯದಿರು - ಶಿವನ ಕೃಪೆ
ಘನಕೆ ಘನವಕ್ಕು ಸರ್ವಜ್ಞ

೧೨೭.
ನರರ ಬೇಡುವ ದೈವ | ವರವೀಯ ಬಲ್ಲುದೇ
ತಿರಿವವರನಡರಿ ತಿರಿವಂತೆ - ಅದನರಿ
ಹರನನೆ ಬೇಡು ಸರ್ವಜ್ಞ

೧೨೮.
ಲಿಂಗವ ಪೂಜಿಸುವಾತ | ಜಂಗಮಕೆ ನೀಡದೊಡೆ
ಲಿಂಗದ ಕ್ಷೋಭೆ ಘನವಕ್ಕು - ಮಹಲಿಂಗ
ಹಿಂಗುವುದು ಅವನ ಸರ್ವಜ್ಞ

೧೨೯.
ಉಣ ಬಂದ ಲಿಂಗಕ್ಕೆ | ಉಣಲಿಕ್ಕದಂತಿರಿಸಿ
ಉಣದಿರ್ಪ ಲಿಂಗಕ್ಕುಣ ಬಡಿಸಿ - ಕೈ ಮುಗಿವ
ಬಣಗುಗಳ ನೋಡ ಸರ್ವಜ್ಞ

೧೩೦.
ಒಮ್ಮನದಲ್ಲಿ ಶಿವಪೂಜೆಯ | ಗಮ್ಮನೆ ಮಾಡುವುದು
ಇಮ್ಮನವಿಡಿದು ಕೆಡಬೇಡ - ವಿಧಿವಶವು
ಸುಮ್ಮನೆ ಕೆಡಗು ಸರ್ವಜ್ಞ

೧೩೧.
ಅಂಗವನು ಲಿಂಗವನು | ಸಂಗೊಳಿಸಲೆಂತಕ್ಕು ?
ಲಿಂಗದೆ ನೆನಹು ಘನವಾಗೆ - ಆ ಅಂಗ
ಲಿಂಗವಾಗಿಕ್ಕು ಸರ್ವಜ್ಞ

೧೩೨. ಕಂಗಳಿಚ್ಛೆಗೆ ಪರಿದು | ಭಂಗಗೊಳದಿರು ಮನುಜ
ಲಿಂಗದಲಿ ಮನವ ನಿಲ್ಲಿಸಿ - ಸತ್ಯದಿ ನಿಲೆ
ಲಿಂಗವೇಯಹೆಯೊ ಸರ್ವಜ್ಞ

೧೩೩.
ಓದುವಾದಗಳೇಕೆ | ಗಾದೆಯ ಮಾತೇಕೆ
ವೇದ-ಪುರಾಣ ನಿನಗೇಕೆ - ಲಿಂಗದ
ಹಾದಿಯನರಿದವಗೆ ಸರ್ವಜ್ಞ

೧೩೪.
ನೋಟ ಶಿವಲಿಂಗದಲಿ | ಕೂಟ ಜಂಗಮದಲ್ಲಿ
ನಾಟಿ ತನು ಗುರುವಿನಲಿ ಕೂಡೆ - ಭಕ್ತನ ಸ
ಘಾಟವದು ನೋಡ ಸರ್ವಜ್ಞ

೧೩೫.
ನಾನು-ನೀನುಗಳಳಿದು | ತಾನೆ ಲಿಂಗದಿ ನಿಂದು
ನಾನಾ ಭ್ರಮೆಗಳ ನೆರೆ ಹಿಂಗಿ - ನಿಂದವನು
ತಾನೈಕ್ಯ ನೋಡ ಸರ್ವಜ್ಞ

೧೩೬.
ತನ್ನ ನೋಡಲಿಯೆಂದು | ಕನ್ನಡಿ ಕರೆವುದೇ
ತನ್ನಲ್ಲಿ ಜ್ಞಾನ ಉದಿಸಿದ - ಮಹತುಮನು
ಕನ್ನಡಿಯಂತೆ ಸರ್ವಜ್ಞ

೧೩೭.
ಹೆಣ್ಣನು ಹೊನ್ನನು | ಹಣ್ಣಾದ ಮರವನು
ಕಣ್ಣಲಿ ಕಂಡು - ಮನದಲಿ ಬಯಸದ
ಅಣ್ಣಗಳಾರು ಸರ್ವಜ್ಞ

೧೩೮.
ತಿರಿದು ತಂದಾದೊಡಂ | ಕರೆದು ಜಂಗಮಕಿಕ್ಕು
ಪರಿಣಾಮವಕ್ಕು ಪದವಕ್ಕು - ಕೈಲಾಸ
ನೆರೆಮನೆಯಕ್ಕು ಸರ್ವಜ್ಞ

೧೩೯.
ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು - ಅಧಮ
ತಾನಾಡಿಯೂ ಕೊಡದವನು ಸರ್ವಜ್ಞ

೧೪೦.
ಮಾನವನ ದುರ್ಗುಣವ | ನೇನೆಂದು ಬಣ್ಣಿಸುವೆ
ದಾನಗೈಯಲು ಕನಲುವ - ದಂಡವನು
ಮೋನದಿಂ ತೆರುವ ಸರ್ವಜ್ಞ

೧೪೧.
ಅಂತಕ್ಕು ಇಂತಕ್ಕು | ಎಂತಕ್ಕು ಎನಬೇಡ
ಚಿಂತಿಸಿ ಸುಯ್ವುತಿರಬೇಡ ಶಿವನಿರಿಸಿ
ದಂತಿಹುದೆ ಲೇಸು ಸರ್ವಜ್ಞ

೧೪೨.
ಸಿರಿಯು ಸಂಸಾರವು | ಸ್ಥಿರವೆಂದು ನಂಬದಿರು
ಹಿರಿದೊಂದು ಸಂತೆ ನೆರೆದೊಂದು - ಜಾವಕ್ಕೆ
ಹರೆದು ಹೋಹಂತೆ ಸರ್ವಜ್ಞ

೧೪೩.
ದಂತಪಂಕ್ತಿಗಳೊಳಗೆ | ಎಂತಿಕ್ಕು ನಾಲಗೆಯು
ಸಂತತ ಖಳರ ಒಡನಿರ್ದು - ಬಾಳುವು
ದಂತೆ ಕಂಡಯ್ಯ ಸರ್ವಜ್ಞ

೧೪೪.
ಹಸಿಯದಿರೆ ಕಡುಗಾದ | ಬಿಸಿನೀರ ಕೊಂಬುದು
ಹಸಿವಕ್ಕು ಸಿಕ್ಕ ಮಲ ಬಿಡುಗು - ದೇಹ ತಾ
ಸಸಿನವಾಗುವುದು ಸರ್ವಜ್ಞ

೧೪೫.
ಹಸಿವಿಲ್ಲದುಣಬೇಡ | ಹಸಿದು ಮತ್ತಿರಬೇಡ
ಬಿಸಿ ಬೇಡ ತಂಗುಳವು ಬೇಡ - ವೈದ್ಯನ
ಗಸಣಿಸಿಯೇ ಬೇಡ ಸರ್ವಜ್ಞ
೧೪೬.
ಜಾತಿ ಹೀನನ ಮನೆಯ | ಜ್ಯೋತಿ ತಾ ಹೀನವೇ
ಜಾತಿ-ವಿಜಾತಿಯೆನಬೇಡ - ದೇವನೊಲಿ
ದಾತನೇ ಜಾತ ಸರ್ವಜ್ಞ

೧೪೭.
ಕ್ಷಣಮಾತ್ರವಾದರೂ | ಗುಣಿಗಳೊಡನಾಡುವುದು
ಗುಣಹೀನರುಗಳ ಒಡನಾಟ - ಬಹುದುಃಖ
ದಣಲೊಳಿರ್ದಂತೆ ಸರ್ವಜ್ಞ

೧೪೮.
ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ
ಪುಸಿಮಾತನಾಡಿ ಕೆಡದಿರಿ - ಲೋಕಕ್ಕೆ
ಬಸವನೇ ಕರ್ತ ಸರ್ವಜ್ಞ

೧೪೯.
ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು
ಬಸುರಲ್ಲಿ ಬಂದ ಶಿಶು ಮುದ್ದು - ಲೋಕಕ್ಕೆ
ಬಸವಣ್ಣನೇ ಮುದ್ದು ಸರ್ವಜ್ಞ

೧೫೦.
ಕತ್ತೆ ಬೂದಿಯ ಹೊರಳಿ | ಭಕ್ತನಂತಾಗುವುದೆ
ತತ್ವವರಿಯದಲೆ ಭಸಿತವಿಟ್ಟರೆ ಶುದ್ಧ
ಕತ್ತೆಯಂತಕ್ಕು ಸರ್ವಜ್ಞ

೧೫೧.
ಬಲ್ಲವರ ಒಡನಾಡೆ | ಬೆಲ್ಲವನು ಸವಿದಂತೆ
ಅಲ್ಲದಜ್ಞಾನಿಯೊಡನಾಡೆ - ಮೊಳಕೈಗೆ
ಕಲ್ಲು ಹೊಡೆದಂತೆ ಸರ್ವಜ್ಞ

೧೫೨.
ಬಂದುದನೆ ತಾ ಹಾಸಿ | ಬಂದುದನೆ ತಾ ಹೊದೆದು
ಬಂದುದನೆ ಮೆಟ್ಟಿ ನಿಂತರೆ - ವಿಧಿ ಬಂದು
ಮುಂದೇನ ಮಾಳ್ಕು ಸರ್ವಜ್ಞ

೧೫೩.
ಸಿರಿ ಬಂದ ಕಾಲದಲಿ | ಕರೆದು ದಾನವ ಮಾಡು
ಪರಿಣಾಮವಕ್ಕು ಪದವಕ್ಕು - ಕೈಲಾಸ
ನೆರೆಮನೆಯಕ್ಕು ಸರ್ವಜ್ಞ

೧೫೪.
ಏನ ಬೇಡುವಡೊಬ್ಬ | ದಾನಿಯನೆ ಬೇಡುವುದು
ದೀನನ ಬೇಡಿ ಬಳಲಿದಡೆ - ಆ ದೀನ
ನೇನ ಕೊಟ್ಟಾನು ಸರ್ವಜ್ಞ

೧೫೫.
ಕೋಡಿಯನು ಕಟ್ಟಿದರೆ | ಕೇಡಿಲ್ಲವಾ ಕೆರೆಗೆ
ಮಾಡು ಧರ್ಮಗಳ ಮನಮುಟ್ಟಿ - ಕಾಲನಿಗೆ
ಈಡಾಗದ ಮುನ್ನ ಸರ್ವಜ್ಞ

೧೫೬.
ಅನ್ನದಾನಗಳಿಗಿಂತ | ಇನ್ನು ದಾನಗಳಿಲ್ಲ
ಅನ್ನಕ್ಕೆ ಮೇಲು ಹಿರಿದಿಲ್ಲ - ಲೋಕಕ್ಕೆ
ಅನ್ನವೇ ಪ್ರಾಣ ಸರ್ವಜ್ಞ

೧೫೭.
ಉಣ್ಣದೊಡವೆಯ ಗಳಿಸಿ | ಮಣ್ಣಾಗೆ ಬಚ್ಚಿಟ್ಟು
ಚೆನ್ನಾಗಿ ಬಳಿದು ಮೆತ್ತಿದನ - ಬಾಯೊಳಗೆ
ಮಣ್ಣು ಕಂಡಯ್ಯ ಸರ್ವಜ್ಞ

೧೫೮.
ಕೊಟ್ಟಿರ್ದ ಕಾಲದಲಿ | ಅಟ್ಟುಣ್ಣಲರಿಯದೆ
ಹುಟ್ಟಿಕ್ಕಿ ಜೇನು ಅನುಮಾಡಿ - ಪರರಿಗೆ
ಕೊಟ್ಟು ಹೋದಂತೆ ಸರ್ವಜ್ಞ

೧೫೯.
ಹೆಣ್ಣಿಂದ ಇಹವುಂಟು | ಹೆಣ್ಣಿಂದ ಪರವುಂಟು
ಹೆಣ್ಣಿಂದ ಸಕಲ ಫಲವುಂಟು - ಮರೆದರೆ
ಹೆಣ್ಣಿಂದ ಮರಣ ಸರ್ವಜ್ಞ

೧೬೦.
ಮಜ್ಜಿಗೂಟಕೆ ಲೇಸು | ಮಜ್ಜನಕೆ ಮಡಿ ಲೇಸು
ಕಜ್ಜಾಯ ತುಪ್ಪ ಉಣ ಲೇಸು - ಮನೆಗೊಬ್ಬ
ಅಜ್ಜಿಯೇ ಲೇಸು ಸರ್ವಜ್ಞ

೧೬೧.
ಸಿರಿ ಬಲ ಉಳ್ಳಾಗ | ಮರೆಯದವನೇ ಜಾಣ
ಕೊರತೆಯಾದಾಗ ಕೊಡುವೆನಿದ್ದರೆ ಎಂದು
ಅರಚುವವನೆ ಹೆಡ್ಡ ಸರ್ವಜ್ಞ

೧೬೨.
ನಿತ್ಯ ನೀರೊಳು ಮುಳುಗಿ | ಹತ್ಯಾನೆ ಸ್ವರ್ಗಕ್ಕೆ
ಹತ್ತೆಂಟು ಕಾಲ ಜಲದೊಳಗಿಹ ಕಪ್ಪೆ
ಹತ್ತವ್ಯಾಕಯ್ಯ ಸರ್ವಜ್ಞ

೧೬೩.
ಅನ್ನ ದೇವರ ಮುಂದೆ | ಇನ್ನು ದೇವರು ಉಂಟೆ
ಅನ್ನವಿರುವನಕ ಪ್ರಾಣವು - ಜಗದೊಳ
ಗನ್ನವೇ ದೈವ ಸರ್ವಜ್ಞ

೧೬೪.
ನಂಬು ಪರಶಿವನೆಂದು | ನಂಬು ಗುರುಚರಣವನು
ನಂಬಲಗಸ್ತ್ಯ ಕುಡಿದನು - ಶರಧಿಯನು
ನಂಬು ಗುರುಪದವ ಸರ್ವಜ್ಞ

೧೬೫.
ಬಂಧುಗಳಾದವರು ಮಿಂದುಂಡು ಹೋಹರು
ಬಂಧನವ ಕಳೆಯಲರಿಯರು - ಗುರುವಿಂದ
ಬಂಧನವಳಿಗು ಸರ್ವಜ್ಞ

೧೬೬.
ಮೆಟ್ಟಿಪ್ಪುದಾಶೆಯನು | ಕಟ್ಟಿಪ್ಪುದಿಂದ್ರಿಯವ
ತೊಟ್ಟಿಪ್ಪುದುಳ್ಳ ಸಮತೆಯನು - ಶಿವಪದವ
ಮುಟ್ಟಿಪ್ಪುದಯ್ಯ ಸರ್ವಜ್ಞ

೧೬೭.
ಚಿತ್ತೆಯ ಮಳೆ ಹೊಯ್ದು | ಮುತ್ತಾಗಬಲ್ಲುದೆ
ಚಿತ್ತದ ನೆಲೆಯನರಿಯದೆ - ಬೋಳಾದ
ರೆತ್ತಣ ಯೋಗ ಸರ್ವಜ್ಞ

೧೬೮.
ಇಂದ್ರಿಯವ ತೊರೆದಾತ | ವಂದ್ಯನು ಜಗಕೆಲ್ಲ
ಬಿಂದುವಿನ ಬೇಧವರಿದ ಮಹಾತ್ಮನು
ಬೆಂದ ನುಲಿಯಂತೆ ಸರ್ವಜ್ಞ

೧೬೯.
ಜ್ಞಾನಿ ಸಂಸಾರದೊಳು | ತಾನಿರಬಲ್ಲನು
ಭಾನು ಮಂಡಲದಿ ಹೊಳೆವಂತೆ - ನಿರ್ಲೇಪ
ಏನಾದಡೇನು ಸರ್ವಜ್ಞ

೧೭೦.
ಸತ್ಯವ ನುಡಿವಾತ | ಸತ್ತವನೆನಬೇಡ
ಹೆತ್ತ ತಾಯ್ ಮಗನ ಕರೆವಂತೆ - ಸ್ವರ್ಗದವ
ರಿತ್ತ ಬಾಯೆಂಬ ಸರ್ವಜ್ಞ

೧೭೧.
ಜ್ಞಾನಿಯನಜ್ಞಾನಿಯೆಂದು | ಹೀನ ತಾ ನುಡಿದರೆ
ಆನೆಯನೇರಿ ಸುಖದಿಂದಲಿ - ಹೋಹಂಗೆ
ಶ್ವಾನ ಬೊಗಳ್ದೇನು ಸರ್ವಜ್ಞ

೧೭೨.
ತುಂಬಿದಾ ಕೆರೆಭಾವಿ | ತುಂಬಿಹುದೆನಬೇಡ
ನಂಬಿರಬೇಡ ಲಕ್ಶ್ಮಿಯನು - ಬಡತನವು
ಬೆಂಬಳಿಯೊಳಿಹುದು ಸರ್ವಜ್ಞ

೧೭೩.
ಕೇಡನೊಬ್ಬನಿಗೆ ಬಯಸೆ | ಕೇಡು ತಪ್ಪದು ತನಗೆ
ಕೂಡಿ ಕೆಂಡವನು ತೆಗೆದೊಡೆ - ತನ್ನ ಕೈ
ಕೂಡೆ ಬೇವಂತೆ ಸರ್ವಜ್ಞ

೧೭೪.
ಅರಸು ಮುನಿದೂರೊಳಗೆ | ಇರುವುದೇ ಕರ ಕಷ್ಟ
ಅರಸು ಮನ್ನಣೆಯು ಕರಗಿದ - ಠಾವಿಂದ
ಸರಿವುದೇ ಲೇಸು ಸರ್ವಜ್ಞ

೧೭೫.
ಆಶೆಯುಳ್ಳನ್ನಕ್ಕರ - ದಾಸನಾಗಿರುತಿಪ್ಪ
ಆಶೆಯ ತಲೆಯನಳಿದರೆ - ಕೈಲಾಸ
ದಾಚೆಯಲಿಪ್ಪ ಸರ್ವಜ್ಞ

೧೭೬.
ಧಾರುಣಿ ನಡುಗುವುದು | ಮೇರುವಲ್ಲಾಡುವುದು
ವಾರಿಧಿ ಬತ್ತಿ ಬರೆವುದು - ಶಿವಭಕ್ತಿ
ಯೋರೆಯಾದಂದು ಸರ್ವಜ್ಞ

೧೭೭.
ಮಂದಿಯಿಲ್ಲದರಸು | ತಂದೆ ಇಲ್ಲದ ಕಂದ
ಬಂಧುಗಳಿಲ್ಲದಿಹ ಬಡತನ - ಇವು ತಾನು
ಎಂದಿಗೂ ಬೇಡ ಸರ್ವಜ್ಞ

೧೭೮.
ಅನ್ನವಿಕ್ಕದನಿಂದ | ಕುನ್ನಿ ತಾ ಕರ ಲೇಸು
ಉನ್ನತವಪ್ಪತಿಥಿಗಿಕ್ಕದ ಬದುಕು - ನಾಯ
ಕುನ್ನಿಯಿಂ ಕಷ್ಟ ಸರ್ವಜ್ಞ

೧೭೯.
ಉರಿಯುದಕ ಶೀತವು | ಉರಗಪತಿ ಭೀಕರವು
ಗುರುವಾಜ್ಞೆಗಂಜಿ ಕೆಡುವವು - ಇದ ನರ
ರರಿಯದೆ ಕೆಡುಗು ಸರ್ವಜ್ಞ

೧೮೦.
ಶೇಷನಿಂ ಹಿರಿದಿಲ್ಲ | ಆಸೆಯಿಂ ಕೀಳಿಲ್ಲ
ರೋಷದಿಂದಧಮಗತಿಯಿಲ್ಲ - ಪರದೈವ
ಈಶನಿಂದಿಲ್ಲ ಸರ್ವಜ್ಞ

೧೮೧.
ಕೊಟ್ಟು ಹುಟ್ಟಲಿಲ್ಲ | ಮುಟ್ಟಿ ಪೂಜಿಸಲಿಲ್ಲ
ಸಿಟ್ಟಿನಲಿ ಶಿವನ ಬೈದರೆ - ಶಿವ ತಾನು
ರೊಟ್ಟಿ ಕೊಡುವನೆ ಸರ್ವಜ್ಞ

೧೮೨.
ಹಸಿವರಿತು ಉಂಬುದು | ಬಿಸಿನೀರ ಕುಡಿವುದು
ಹಸಿವಕ್ಕು ವಿಷಯ ಘನವಕ್ಕು - ವೈದ್ಯಗೆ
ಬೆಸಸ ಬೇಡೆಂದ ಸರ್ವಜ್ಞ

೧೮೩.
ಲಿಂಗಕೆ ತೋರಿಸುತ | ನುಂಗುವಾತನೆ ಕೇಳು
ಲಿಂಗ ಉಂಬುವುದೆ ? ಪೊಡಮಡು - ತೆಲೊ ಪಾಪಿ
ಜಂಗಮಕೆ ನೀಡು ಸರ್ವಜ್ಞ

೧೮೪.
ಹೆಂಡಿರು ಮಕ್ಕಳಿಗೆಂದು | ದಂಡಿಸದಿರು ದೇಹವನು
ಭಂಡ ವಸ್ತುವನು ಕೊಡದುಣದೆ - ಬೈಚಿಡಲು
ಕಂಡವರಿಗಹುದು ಸರ್ವಜ್ಞ

೧೮೫.
ಮಾತು ಬಂದಲ್ಲಿ ತಾ | ಸೋತು ಬರುವುದು ಲೇಸು
ಮಾತಿಂಗೆ ಮಾತು ಮಥಿಸೆ - ವಿಧಿ ಬಂದು
ಆತುಕೊಂಡಿಹುದು ಸರ್ವಜ್ಞ

೧೮೬.
ಕಣ್ಣು ನಾಲಗೆ ಮನವು | ತನ್ನವೆಂದೆನ ಬೇಡ
ಅನ್ಯರು ಕೊಂದರೆನ ಬೇಡ - ಇವು ಮೂರು
ತನ್ನನೇ ಕೊಲುಗು ಸರ್ವಜ್ಞ

೧೮೭.
ನುಡಿಸುವುದಸತ್ಯವನು | ಕೆಡಿಸುವುದು ಧರ್ಮವನು
ಒಡಲನೆ ಕಟ್ಟಿ ಹಿಡಿಸುವುದು - ಲೋಭದ
ಗಡಣ ಕಾಣಯ್ಯ ಸರ್ವಜ್ಞ

೧೮೮.
ಸೊಡರಿಂಗೆ ಎಣ್ಣೆಯ | ಕೊಡನೆತ್ತಿ ಹೊಯಿವರೆ
ಬಡವನೆಂದು ಕೊಡದೆ ಇರಬೇಡ - ಇರವರಿದು
ಕೊಡುವುದೇ ಲೇಸು ಸರ್ವಜ್ಞ

೧೮೯.
ಒಡಲೆಂಬ ಹುತ್ತಕ್ಕೆ | ನುಡಿವ ನಾಲಗೆ ಸರ್ಪ
ಕಡುರೋಷವೆಂಬ ವಿಷವೇರೆ - ಸಮತೆ ಗಾ
ರುಡಿಗನಂತಕ್ಕು ಸರ್ವಜ್ಞ

೧೯೦.
ಅಪಮಾನದೂಟದಿಂ | ದುಪವಾಸ ಕರ ಲೇಸು
ನೃಪನೆದ್ದು ಬಡಿವ ಅರಸನೋಲಗದಿಂದ
ತಪವಿಹುದೆ ಲೇಸು ಸರ್ವಜ್ಞ

೧೯೧.
ಹಿರಿದು ಪಾಪವ ಮಾಡಿ - ಹರಿವರು ಗಂಗೆಗೆ
ಹರಿವ ನೀರಲ್ಲಿ ಕರಗುವೊಡೆ - ಯಾ ಪಾಪ
ಎರೆಯ ಮಣ್ಣಲ್ಲ ಸರ್ವಜ್ಞ

೧೯೨.
ಅಂತಿರ್ದರಿಂತಿರ್ದ | ರೆಂತಿರ್ದರೆನಬೇಡ
ಕುಂತಿಯಣುಗರು ತಿರಿದರು - ಮಿಕ್ಕವರು
ಎಂತಿರ್ದರೇನು ಸರ್ವಜ್ಞ

೧೯೩.
ಉಳ್ಳಲ್ಲಿ ಉಣಲೊಲ್ಲ | ಉಳ್ಳಲ್ಲಿ ಉಡಲೊಲ್ಲ
ಉಳ್ಳಲ್ಲಿ ದಾನಗೊಡಲೊಲ್ಲ - ನವನೊಡವೆ
ಕಳ್ಳಗೆ ನೃಪಗೆ ಸರ್ವಜ್ಞ

೧೯೪.
ಕೊಡುವಾತನೇ ಮೃಢನು | ಪಡೆವಾತನೇ ನರನು
ಒಡಲು-ಒಡವೆಗಳು ಕೆಡೆದು ಹೋಗದ ಮುನ್ನ
ಕೊಡು ಪಾತ್ರವನರಿದು ಸರ್ವಜ್ಞ

೧೯೫.
ಅನ್ನವನಿಕ್ಕುವುದು | ನನ್ನಿಯನು ನುಡಿವುದು
ತನ್ನಂತೆ ಪರರ ಬಗೆದೊಡೆ - ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ

೧೯೬.
ಆನೆ ಮುಕುರದೊಳಡಗಿ | ಭಾನು ಸರಸಿಯೊಳಡಗಿ
ನಾನೆನ್ನ ಗುರುವಿನೊಳಡಗಿ - ಸಂಸಾರ
ತಾನದೆತ್ತಣದು ಸರ್ವಜ್ಞ

೧೯೭.
ಎಂಜಲು ಹೊಲೆಯಿಲ್ಲ | ಸಂಜೆಗತ್ತಲೆಯಿಲ್ಲ
ಅಂಜಿಕೆಯಿಲ್ಲ ಭಯವಿಲ್ಲ - ಜ್ಞಾನವೆಂ
ಬಂಜನವಿರಲು ಸರ್ವಜ್ಞ

೧೯೮.
ಬಲ್ಲೆನೆಂಬಾ ಮಾತು | ಎಲ್ಲವೂ ಹುಸಿ ನೋಡಾ
ಬಲ್ಲರೆ ಬಲ್ಲೆನೆನಬೇಡ - ಸುಮ್ಮನಿರ
ಬಲ್ಲರೆ ಬಲ್ಲ ಸರ್ವಜ್ಞ

೧೯೯.
ಏನಾದಡೇನಯ್ಯ | ತಾನಾಗದನ್ನಕ್ಕ
ತಾನಾಗಿ ತನ್ನನರಿದಡೆ - ಲೋಕ ತಾ
ನೇನಾದಡೇನು ಸರ್ವಜ್ಞ

೨೦೦.
ಆನೆ ನೀರಾಟದಲಿ | ಮೀನ ಕಂಡಂಜುವುದೇ
ಹೀನಮಾನವರ ಬಿರುನುಡಿಗೆ - ತತ್ವದ
ಜ್ಞಾನಿ ಅಂಜುವನೆ ಸರ್ವಜ್ಞ

 

ಸರ್ವಜ್ಞನ ವಚನಗಳು - ಒಂದರಿಂದ ನೂರು


೧.
ನಂದಿಯನು ಏರಿದನ
ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ
ಮುಂದೆ ಹೇಳುವೆನು ಸರ್ವಜ್ಞ

೨.
ಮುನ್ನ ಕಾಲದಲಿ ಪನ್ನಗಧರನಾಳು
ಎನ್ನೆಯ ಪೆಸರು, ಪುಷ್ಪದತ್ತನು ಎಂದು
ಮನಿಪರು ದಯದಿ ಸರ್ವಜ್ಞ

೩.
ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ
ಮುದವ ಸಾರೆ, ಸರ್ವಜ್ಞನೆಂದೆನಿಸಿ
ನಿಂದವನು ನಾನೆ ಸರ್ವಜ್ಞ

೪.
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣೆಸಿಬರೆದ ಪಟದೊಳಗೆಯಿರುವಾತ
ತಣ್ಣೊಳಗೆ ಇರನೇ ಸರ್ವಜ್ಞ

೫.
ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು
ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ
ಕುಲವನರಸುವರೆ ಸರ್ವಜ್ಞ

೬.
ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ

೭.
ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ

೮.
ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗೆ
ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ

೯.
ಊರಿಂಗೆ ದಾರಿಯನು ಆರು ತೋರಿದರೇನು?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು? ಸರ್ವಜ್ಞ

೧೦.
ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು
ಪರದೇಶಿಯಂತೆ ಇರುತಿರ್ಪಯೋಗಿಯನು
ಪರಮಗುರುವೆಂಬೆ ಸರ್ವಜ್ಞ

೧೧.
ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ
ಹರಭಕ್ತಿಯುಳ್ಳ ಗುರುವರನು ಓರ್ವನೇ
ನರ ದೈವವೆಂಬೆ ಸರ್ವಜ್ಞ

೧೨.
ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರಾ ಗುರುವಿಗಿಂತ
ಬಂಧುಗಳುಂಟೆ ಸರ್ವಜ್ಞ

೧೩.
ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ
ಮಾಯನಾಶವನು ಹರಿಸುತ್ತ ಶಿಷ್ಯಂಗೆ
ತಾಯಿಯಂತಾದ ಸರ್ವಜ್ಞ

೧೪.
ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ. ಗುರುರಾಯ
ಬಂಧನವ ಕಳೆವ ಸರ್ವಜ್ಞ

೧೫.
ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು
ಗುರುತೋರ್ವ ದೈವದೆಡೆಯನು ದೈವತಾ
ಗುರುವ ತೋರುವನೇ? ಸರ್ವಜ್ಞ

೧೬.
ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರಮನೆಯಕ್ಕು ಸರ್ವಜ್ಞ

೧೭.
ಒಂದರೊಳಗೆಲ್ಲವು ಸಂದಿಸುವದನು ಗುರು
ಚಂದದಿಂ ತೋರಿಕೊಡದಿರಲು ಶೊಷ್ಯನವ
ಕೊಂದನೆಂದರಿಗು ಸರ್ವಜ್ಞ

೧೮.
ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ
ಲಿಂಗದೊಳು ಜಗವು ಅಡಗಿಹುದು ಲಿಂಗವನು
ಹಿಂಗಿದವರುಂಟೆ? ಸರ್ವಜ್ಞ

೧೯.
ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ
ಕೇಶವನು ಭಕ್ತರೊಳಗೆಲ್ಲ ಮೂರು ಕ
ಣ್ಣೇಶನೆ ದೈವ ಸರ್ವಜ್ಞ

೨೦.
ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ?
ಶಂಭುವಿರಲಿಕ್ಕೆ ಮತ್ತೊಂದು ದೈವವ
ನಂಬುವನೇ ಹೆಡ್ಡ ಸರ್ವಜ್ಞ

೨೧.
ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು
ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು
ನಂಜಿನಂತಕ್ಕು ಸರ್ವಜ್ಞ

೨೨.
ಎಂಜಲೂ ಅಶೌಚ
ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ
ರಂಜನನ ನೆನೆಯೊ ಸರ್ವಜ್ಞ

೨೩.
ಭೂತೇಶಗೆರಗುವನು ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ
ದಾತ ಮಾದಿಗನು ಸರ್ವಜ್ಞ

೨೪.
ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ
ಕುಲಗೋತ್ರವುಂಟೆ? ಸರ್ವಜ್ಞ

೨೫.
ಜಾತಿಹೀನನ ಮನೆಯ ಜ್ಯೊತಿ ತಾ ಹೀನವೆ?
ಜಾತಂಗೆ ಜಾತನೆನಲೇಕೆ? ಅರುವಿಡಿ
ದಾತನೇ ಜಾತ ಸರ್ವಜ್ಞ

೨೬.
ಯಾತರ ಹೂವೇನು ? ನಾತವಿದ್ದರೆ ಸಾಕು
ಜಾತಿಯಲಿ ಜಾತಿಯೆನಬೇಡ ಶಿವನೊಲಿ
ದಾತನೆ ಜಾತ ಸರ್ವಜ್ಞ

೨೭.
ಅಕ್ಕರವು ತರ್ಕಕ್ಕೆ ಲೆಕ್ಕವು ಗಣಿತಕ್ಕೆ
ಮಿಕ್ಕವೋದುಗಳು ತಿರುಪೆಗೆ ಮೋಕ್ಷಕಾ
ರಕ್ಕರವೇ ಸಾಕು ಸರ್ವಜ್ಞ

೨೮.
ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ?
ಬಲ್ಲಿದಾ ಶಿವನ ಭಜಿಸಿದರೆ ಶಿವ ತಾನು
ಇಲ್ಲೆನ್ನಲರಿಯನು ಸರ್ವಜ್ಞ

೨೯.
ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚಂದ್ರಶೇಖರನು ಮುದಿ ಎತ್ತನೇರಿ ಬೇ
ಕೆಂದುದನು ಕೊಡುವ ಸರ್ವಜ್ಞ

೩೦.
ಸಾರವನು ಬಯಸುವರೆ, ಕ್ಷಾರವನು ಬೆರಿಸುವುದು
ಮಾರಸಂಹರನ ನೆನೆದರೆ ಮೃತ್ಯುವು
ದೂರಕ್ಕೆ ದೂರ ಸರ್ವಜ್ಞ

೩೧.
ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ
ಭವ ಪುಶ್ಪದಿಂ ಶಿವಪೂಜೆ ಮಾಡುವರ
ದೇವರೆಂದೆಂಬೆ ಸರ್ವಜ್ಞ

೩೨.
ಓದು ವಾದಗಳೇಕೆ, ಗಾದಿಯ ಮಾತೇಕೆ
ವೇದ ಪುರಾಣ ನಿನಗೇಕೆ? ಲಿಂಗದಾ
ಹಾದಿಯರಿದವಗೆ ಸರ್ವಜ್ಞ

೩೩.
ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ?
ಅರ್ಪಿತನ ಗೊಡವೆ ತನಗೇಕೆ? ಲಿಂಗದ
ನೆಪ್ಪನರಿದವಗೆ ಸರ್ವಜ್ಞ

೩೪.
ಗಂಗೆ ಗೋದಾವರಿಯು, ತುಂಗಭದ್ರೆಯು ಮತ್ತೆ
ಹಿಂಗದೆ ಮುಳುಗಿ ಫಲವೇನು? ನಿನ್ನಲ್ಲೆ
ಲಿಂಗದರುವಿಲ್ಲ ಸರ್ವಜ್ಞ

೩೫.
ಮೆಟ್ಟಿದಾ ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ
ಕಟ್ಟಿದಾ ಲಿಂಗ ಅಡಿಮಾಡಿ ಶರಣೆಂಬ
ಭ್ರಷ್ಟನ ಕಂಡ್ಯಾ ? ಸರ್ವಜ್ಞ

೩೬.
ಗುರುವಿಂದ ಬಂಧುಗಳು, ಗುರುವಿಂದ ದೈವಗಳು
ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ
ಗುರುವಿಂದ ಮುಕ್ತಿ ಸರ್ವಜ್ಞ

೩೭.
ಶಿವಪೂಜೆ ಮಾಡಿದಡೆ, ಶಿವನ ಕೊಂಡಾಡಿದಡೆ
ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋಕ
ವವಗೆ ಕಾಣಯ್ಯ ಸರ್ವಜ್ಞ

೩೮.
ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ
ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ
ಬಿಟ್ಟು ಬಯಲಪ್ಪ ಸರ್ವಜ್ಞ

೩೯.
ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು
ಇಟ್ಟಾವಿಭೂತಿಯರಿಯದಿರೆ ಸೀಳಿದಾ
ಬಟ್ಟೆಯಂತಕ್ಕು ಸರ್ವಜ್ಞ

೪೦.
ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ
ಲಿಂಗದಲಿ ನೋಟ, ನುಡಿಕೂಟವಾದವನು
ಲಿಂಗವೇ ಅಕ್ಕು ಸರ್ವಜ್ಞ

೪೧.
ದೇಹಿಯನಬೇಡ, ನಿರ್ದೇಹಿ ಜಂಗಮಲಿಂಗ
ದೇಹ ಗುಣದಾಸೆಯಳಿದೊಡೆ ಆತ ನೀರ್ದೇಹಿ
ಕಾಣಯ್ಯ ಸರ್ವಜ್ಞ

೪೨.
ವಂಶವನು ಪುಗನೆಂದಿ, ಗಾಶಿಸನು ಪರಧನವ
ಸಂಶಯವನಳಿದ ನಿಜಸುಖಿ ಮಹಾತ್ಮನು
ಹಿಂಸೆಗೊಡಬಡನು ಸರ್ವಜ್ಞ

೪೩.
ಅರ್ಪಿತದ ಭೇದವನು
ತಪ್ಪದೆಲೆ ತಿಳಿದಾತ ಸರ್ಪಭುಷಣನ ಸಮನಹನು ನಿಜಸುಖದೋ
ಳೊಪ್ಪುತ್ತಲಿಹನು ಸರ್ವಜ್ಞ

೪೪.
ಭೋಗಿಸುವ ವಸ್ತುಗಳ ಭೋಗಿಸು ಶಿವಗಿತ್ತು
ರಾಗದಿಂ ಸತ್ಯವೆರಸಿಹ ಪ್ರಸಾದಿಯ
ಶ್ರಿ ಗುರುವು ಎಂಬೆ ಸರ್ವಜ್ಞ

೪೫.
ಲಿಂಗವಿರಹಿತನಾಗಿ ನುಂಗದಿರು ಏನುವನು
ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು
ನುಂಗಿದೆಂತಕ್ಕು ಸರ್ವಜ್ಞ

೪೬.
ಅಂಜದಲೆ ಕೊಂಡಿಹರೆ, ನಂಜು ಅಮೃತವದಕ್ಕು
ಅಂಜಿ, ಅಳುಕುತಲಿ ಕೊಂಡಿಹರೆ ಅಮೃತವು
ನಂಜಿನಂತಕ್ಕು ಸರ್ವಜ್ಞ

೪೭.
ಸಿರಿಯು ಬಂದರೆ ಲೇಸು, ತೀರದ ಜವ್ವನ ಲೇಸು
ಮರಣವಿಲ್ಲದಾ ಮಗಲೇಸು ಲಿಂಗಕ್ಕೆ
ಶರಣುವೆ ಲೇಸು ಸರ್ವಜ್ಞ

೪೮.
ಸೋಕಿಡಾ ಸುಖಂಗಳ
ನೇಕವನು ಶಿವಗಿತ್ತು
ತಾ ಕಿಂಕರತೆಯ ಕೈಕೊಂಡ ಮನುಜನೇ ಲೋಕಕ್ಕೆ ಶರಣ ಸರ್ವಜ್ಞ

೪೯.
ಮಲಯಜದ ಮರದೊಳಗೆ ಸಲೆ ಗಂಧವಿಪ್ಪಂತೆ
ಸುಲಲಿತವು ಆದ ಶರಣರಾಹೃದಯದಲಿ
ನೆಲಸಿಹನು ಶಿವನು ಸರ್ವಜ್ಞ

೫೦.
ಕಿಚ್ಚಿನೊಳು ಸುಘೃತವು, ಒಚ್ಚತದಿ ಕರ್ಪುರವು
ಅಚ್ಚಳಿದು ನಿಜದಿ ನಿಂದಂತೆ, ಭೇದವನು
ಮುಚ್ಚುವನೆ ಶರಣ ಸರ್ವಜ್ಞ

೫೧.
ಗಂಗೆಯಾ ತಡೆ ಲೇಸು, ಮಂಗಳನ ಬಲ ಲೇಸು
ಜಂಗಮ ಭಕ್ತನಾ ನಡೆ ಲೇಸು, ಶರಣರಾ
ಸಂಗವೇ ಲೇಸು ಸರ್ವಜ್ಞ

೫೨.
ಆಕಾಶಪಥ ಮೀರಿ, ದೇಕವಸ್ತುವ ತಿಳಿದು
ಸಾಕಾರವಳಿದು ನಿಜವಾದ ಐಕ್ಯಂಗೆ
ಏಕತ್ರ ನೋಡು ಸರ್ವಜ್ಞ

೫೩.
ನಾನು-ನೀನುಗಳದು, ತಾನು ಲಿಂಗದಿ ಉಳಿದು
ನಾನಾ ಭ್ರಮೆಗಳ ಅತಿಗಳೆದು ನಿಂದಾತ
ತಾನೈಕ್ಯ ನೋಡು ಸರ್ವಜ್ಞ

೫೪.
ಹೀನಂಗೆ ಗತಿಯಿಲ್ಲ, ದೀನಗನುಚಿತವಲ್ಲ
ಏನು ಇಲ್ಲದವಗೆ ಭಯವಿಲ್ಲ ಐಕ್ಯಂಗೆ
ತಾನೆಂಬುದಿಲ್ಲ ಸರ್ವಜ್ಞ

೫೫.
ಆಗಿಲ್ಲ ಹೋಗಿಲ್ಲ, ಮೇಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ
ದೇಗುಲವೆ ಇಲ್ಲ ಸರ್ವಜ್ಞ

೫೬.
ಅಲಸದಾ ಶಿವಪೂಜೆ ಹುಲುಸುಂಟು ಕೇಳಯ್ಯ
ಬಲುಕವಲು ಒಡೆದು ಬೇರಿಂದ ತುದಿತನಕ
ಹಲಸು ಕಾತಂತೆ ಸರ್ವಜ್ಞ

೫೭.
ಉಂಡುಂಡು ತಿರುಗುವಾ ಭಂಡರಾ ಕಳೆ ಬೇಡ
ಕಂಡು ಲಿಂಗವನು ಪೂಜಿಸಿದವಗೆ ಯಮ
ದಂಡ ಕಾಣಯ್ಯ ಸರ್ವಜ್ಞ

೫೮.
ಆತುಮದ ಲಿಂಗವನು
ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ ಭಯವಿಲ್ಲ
ದಶವಿಧದ ಪಾತಕಗಳಿಲ್ಲ ಸರ್ವಜ್ಞ

೫೯.
ಲಿಂಗವನು ಅಂದವನ ಅಂಗ ಹಿಂಗಿರಬೇಕು
ತೆಂಗಿನಕಾಯಿ ಪರಿಪೂರ್ಣ ಬಲಿದು ಜಲ
ಹಿಂಗಿದಪ್ಪಂದ ಸರ್ವಜ್ಞ

೬೦.
ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು
ಲಿಂಗದಾ ನೆನಹು ಘನವಾಗೆ ಶಿವಲಿಂಗ
ಹಿಂಗಿರದು ಅವನ ಸರ್ವಜ್ಞ

೬೧.
ಒಮ್ಮನದ ಶಿವಪೂಜೆ ಗಮ್ಮನೆ ಮಾಡುವದು
ಇಮ್ಮನವ ಪಿಡಿದು ಕೆಡಬೇಡ ವಿಧಿವಶವು
ಸರಿಮ್ಮನೇ ಕೆಡಗು ಸರ್ವಜ್ಞ

೬೨.
ಅಷ್ಟವಿಧದರ್ಚನೆಯ ನೆಷ್ಟು ಮಾಡಿದರೇನು?
ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆ ತಾ
ನಷ್ಟ ಕಾಣಯ್ಯ ಸರ್ವಜ್ಞ

೬೩.
ಇಷ್ಟಲಿಂಗದಿ ಮನವ ನೆಟ್ಟನೆಯ ನಿಲಿಸದಲೆ
ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ
ಬಟ್ಟೆಗೆ ಹೋಹ ಸರ್ವಜ್ಞ

೬೪.
ಎಷ್ಟು ಬಗೆಯಾರತಿಯ ಮುಟ್ಟಿಸಿದ ಫಲವೇನು?
ನಿಷ್ಠೆಯಿಲ್ಲದವನ ಶಿವಪೂಜೆ ಹಾಳೂರ
ಕೊಟ್ಟಗುರಿದಂತೆ ಸರ್ವಜ್ಞ

೬೫.
ಒಸೆದೆಂಟು ದಿಕ್ಕಿನಲ್ಲಿ ಮಿಸುನಿ ಗಿಣ್ಣಲು ಗಿಂಡಿ
ಹಸಿದು ಮಾಡುವನ ಪೂಜೆಯದು ಬೋಗಾರ
ಪಸರ ವಿಟ್ಟಂತೆ ಸರ್ವಜ್ಞ

೬೬.
ಬತ್ತಿ ಹೆತ್ತುಪ್ಪವನು ಹತ್ತಿಸಿದ ಫಲವೇನು?
ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ
ಹತ್ತಿಗೇಡೆಂದ ಸರ್ವಜ್ಞ

೬೭.
ಎಣಿಸುತಿರ್ಪುದು ಬಾಯಿ ಪೊಣರುತಿರ್ಪುದು ಬೆರಳು
ಕ್ಷಣಕ್ಕೊಮ್ಮೆ ಒಂದನೆಣಿಸುವಾ ಜಪಕೊಂದು
ಕುಣಿಕೆಯುಂಟೆಂದ ಸರ್ವಜ್ಞ

೬೮.
ಎಣಿಸುತಿರ್ಪುದು ಬೆರಳು
ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ
ಶುನಕನಂತಕ್ಕು ಸರ್ವಜ್ಞ

೬೯.
ಕೊಲುವ ಕೈಯೊಳು ಪೂಜೆ, ಮೆಲುವ ಬಾಯೊಳು ಮಂತ್ರ
ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ
ಹೊಲೆಯ ಕಾಣಯ್ಯ ಸರ್ವಜ್ಞ

೭೦.
ಲಿಂಗಪೂಜಿಸುವಾತ ಜಂಗಮಕ್ಕೆ ನೀಡಿದೊಡೆ
ಲಿಂಗದಾ ಕ್ಷೇಮ ಘನವಾಗಿ ಆ ಲಿಂಗ
ಹಿಂಗದಿರುತಿಹುದು ಸರ್ವಜ್ಞ

೭೧.
ಲಿಂಗಕ್ಕೆ ತೋರಿಸುತ ನುಂಗುವಾತನೇ ಕೇಳು
ಲಿಂಗವುಂಬುವದೆ ? ಇದನರಿದು ಕಪಿಯೆ ನೀ
ಜಂಗಮಕೆ ನೀಡು ಸರ್ವಜ್ಞ

೭೨.
ಲಿಂಗಪ್ರಸಾದವನು ಅಂಗಕ್ಕೆ ಕೊಂಬುವರು
ಗಂಗಾಳದೊಳಗೆ ಕೈ ತೊಳೆದು ಚಲ್ಲುವಾ
ಮಂಗಗಳ ನೋಡು ಸರ್ವಜ್ಞ

೭೩.
ಹಲವನೋದಿದಡೇನು? ಚೆಲುವನಾದದಡೇನು ?
ಕುಲವೀರನೆನೆಸಿ ಫಲವೇನು? ಲಿಂಗದಾ
ಒಲುಮೆ ಇಲ್ಲದಲೆ ಸರ್ವಜ್ಞ

೭೪.
ಓದುವಾದಗಳೇಕೆ ? ಗಾದೆಯ ಮಾತೇಕೆ?
ವೇದ ಪುರಾಣವು ನಿನಗೇಕೆ ಲಿಂಗದಾ
ಹಾದಿಯರಿಯದಲೆ ಸರ್ವಜ್ಞ

೭೫.
ಕಂಡವರ ಕಂಡು ತಾ ಕೊಂಡ ಲಿಂಗವ ಕಟ್ಟಿ
ಕೊಂಡಾಡಲರಿಯದಧಮಂಗೆ ಲಿಂಗವದು
ಕೆಂಡದಂತಿಹುದು ಸರ್ವಜ್ಞ

೭೬.
ಕಟ್ಟಲೂ ಬಿಡಲು ಶಿವ ಬಟ್ಟಲವ ಕದ್ದನೇ
ಕಟ್ಟಲೂ ಬೇಡ ಬಿಡಲೂ ಬೇಡ
ಕಣ್ಣು ಮನ ನಟ್ಟರೆ ಸಾಕು ಸರ್ವಜ್ಞ

೭೭.
ಆ ದೇವ ಈ ದೇವ ಮಹಾದೇವನೆನಬೇಡ
ಆ ದೇವರ ದೇವ ಭುವನದಾ ಪ್ರಾಣಿಗಳಿ
ಗಾದವನೇ ದೇವ ಸರ್ವಜ್ಞ

೭೮.
ಚಿತ್ರವನು ನವಿಲೊಳು ವಿ ಚಿತ್ರವನು ಗಗನದೊಳು
ಪತ್ರ ಪುಷ್ಪಗಳ ವಿವಿಧವರ್ಣಗಳಿಂದ
ಚಿತ್ರಿಸಿದರಾರು ಸರ್ವಜ್ಞ

೭೯.
ಇಂಗಿನನೊಳು ನಾತವನು ತೆಂಗಿನೊಳಗೆಳೆ ನೀರು
ಭ್ರಂಗ ಕೋಗಿಲೆಯ ಕಂಠದೊಳು ಗಾಯನವ
ತುಂಬಿದವರಾರು ಸರ್ವಜ್ಞ

೮೦.
ಕಳ್ಳಿಯೊಳು ಹಾಲು, ಮುಳು ಗಳ್ಳಿಯೊಳು ಹೆಜ್ಜೇನು
ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ
ಸುಳ್ಳೆನ್ನಬಹುದೆ? ಸರ್ವಜ್ಞ

೮೧.
ಎಲ್ಲ ದೈವವ ಬೇಡಿ ಹುಲ್ಲು ಬಾಯ್ತೆರೆಯದೆಲೆ
ಬಲ್ಲ ದಾಶಿವನ ಭಜಿಸಿ ಬೇಡಿದಾತ
ಇಲ್ಲೆನಲಿಕರಿಯ ಸರ್ವಜ್ಞ

೮೨.
ಆದಿ ದೈವವನು ತಾ ಭೇದಿಸಲಿ ಕರಿಯದಲೆ
ಹಾದಿಯಾಕಲ್ಲಿಗೆಡೆಮಾಡಿ ನಮಿಸುವಾ
ಮಾದಿಗರ ನೋಡು ಸರ್ವಜ್ಞ

೮೩.
ತನ್ನಲಿಹ ಲಿಂಗವನು ಮನ್ನಿ ಸಲಿಕರಿಯದಲೆ
ಬಿನ್ನಣದಿ ಕಟಿದ ಪ್ರತಿಮೆಗಳಿಗೆರಗುವಾ
ಅನ್ಯಾಯ ನೋಡು ಸರ್ವಜ್ಞ

೮೪.
ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ
ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ
ಬಣಗುಗಳ ನೋಡ ಸರ್ವಜ್ಞ

೮೫.
ಕಲ್ಲು ಕಲ್ಲೆಂಬುವಿರಿ ಕಲ್ಲೊಳಗಿರ್ಪುದೇ ದೈವ
ಕಲ್ಲಲ್ಲಿ ಕಳೆಯನಿಲಿಸಿದಾ ಗುರುವಿನಾ
ಸೊಲ್ಲೇದೈವ ಸರ್ವಜ್ಞ

೮೬.
ಗುಡಿಯ ಬೋದಿಗೆ ಕಲ್ಲು
ನಡುರಂಗ ತಾ ಕಲ್ಲು ಕಡೆಮೂಲೆ ಸೆರಗು ತಾ ಕಲ್ಲು ವರವನ್ನು
ಕೊಡುವಾತ ಬೇರೆ ಸರ್ವಜ್ಞ

೮೭.
ಪ್ರಾಣನೂ ಪರಮಮನು ಕಾಣದಲೆ ಒಳಗಿರಲು
ಮಾಣದೇ ಸಿಲೆಯ ಹಿಡಿದದಕೆ ಮೂರ್ಖ ತಾ
ಪ್ರಾಣಾತ್ಮನೆಂಬ ಸರ್ವಜ್ಞ

೮೮.
ಕಲ್ಲು ಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ
ನಿಲ್ಲದಲೆ ಹಣೆಯ ಬಡಿವರ್ಗೆ ಬುಗುಟಿಲ್ಲ
ದಿಲ್ಲ ಕಾಣಯ್ಯ ಸರ್ವಜ್ಞ

೮೯.
ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ವಿಷ್ಣುಗಡ
ಹತವ ಗೈವುದಕ್ಕೆ ರುದ್ರಗಣ, ಇವರುಗಳ
ಸ್ಥಿತಿಯನರಿಯೆಂದ ಸರ್ವಜ್ಞ

೯೦.
ಬೊಮ್ಮನಿರ್ಮಿಪನೆಂಬ ಮರ್ಮತಿಯ ನೀ ಕೇಳು
ಬೊಮ್ಮನಾ ಸತಿಗೆ ಮೂಗಿಲ್ಲವಾಮೂಗ
ನಿರ್ಮಿಸನದೇಕೆ ಸರ್ವಜ್ಞ

೯೧.
ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ
ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು
ಹುಟ್ಟಿಸನದೇಕೆ ಸರ್ವಜ್ಞ

೯೨.
ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು
ಮತ್ತೆ ಪಾಂಡವರಿಗಾಳಾದ ಹರಿಯು ತಾ
ನೆತ್ತಣಾ ದೈವ ಸರ್ವಜ್ಞ

೯೩.
ನರಸಿಂಹನವತಾರ
ಹಿರಿದಾದ ಅದ್ಭುತವು
ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ

೯೪.
ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ
ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ
ಪಾಲಿಸದೆ ಹೋದ ಸರ್ವಜ್ಞ

೯೫.
ಹರನವನ ಕೊಲುವಂದು, ಎರಳೆಯನು ಎಸೆವಂದು
ಮರಳಿ ವರಗಳನು ಕೊಡುವಂದು ಪುರಹರಗೆ
ಸರಿಯಾದ ಕಾಣೆ ಸರ್ವಜ್ಞ

೯೬.
ಹರಿ ಬೊಮ್ಮನೆಂಬವರು, ಹರನಿಂದಲಾದವರು
ಅರಸಿಗೆ ಆಳು ಸರಿಯಹನೆ ಶಿವನಿಂದ
ಮೆರೆವರಿನ್ನಾರು ಸರ್ವಜ್ಞ

೯೭.
ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ
ನೆರೆಹತ್ತು ಜನನವಾಹರಿಗೆ ಇವರುಗಳು
ಸರಿಯಹರೆ ಸರ್ವಜ್ಞ

೯೮.
ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ
ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ
ಸರಿಯಾರು ಹೇಳಿ ಸರ್ವಜ್ಞ

೯೯.
ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚ್ಂದ್ರಶೇಖರನು ಮುದಿಯೆತ್ತನೇರಿ
ಬೇಕೆಂದುದನು ಕೊಡುವ ಸರ್ವಜ್ಞ

೧೦೦.
ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ
ಶಂಭುವಿದ್ದಂತೆ ಮತ್ತೊಂದು ದೈವವನು
ನಂಬುವನೆ ಹೆಡ್ಡ ಸರ್ವಜ್ಞ

    *

ಅಲ್ಲಮಪ್ರಭುವಿನ ವಚನಗಳು : ಒಂದರಿಂದ ನೂರಿಪ್ಪತ್ತೈದು



೧.
ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಯಬ್ದದಂತೆ
ಗುಹೇಶ್ವರ, ನಿಮ್ಮ ಶರಣಸಂಬಂಧ.

೨.
ಜಲದೊಳಗಿದ್ದ ಕಿಚ್ಚು
ಜಲವ ಸುಡದೆ, ಜಲವು ತಾನಾಗಿದ್ದಿತು ನೋಡಾ!
ನೆಲೆಯನಱದು ನೋಡಿಹೆನೆಂದಡೆ
ಅದು ಜಲವು ತಾನಲ್ಲ !
ಕುಲದೊಳಗಿದ್ದು, ಕುಲವ ಬೆರಸದೆ,
ನೆಲೆಗೆಟ್ಟುನಿಂದುದನಾರುಬಲ್ಲರು !
ಹೊಱಗೊಳಗೆ ತಾನಾಗಿದ್ದು ಮತ್ತೆ
ತಲೆದೋಱದಿಪ್ಪುದು, ಗುಹೇಶ್ವರ, ನಿಮ್ಮ ನಿಲುವು ನೋಡಾ !

೩.
ಆದಿಯಾಧಾರವಿಲ್ಲದಂದು
ಹಮ್ಮು ಬಿಮ್ಮುಗಳಿಲ್ಲದಂದು
ಸುರಾಳನಿರಾಳವಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು
ಗುಹೇಶ್ವರ, ನಿಮ್ಮ ಶರಣನುದಯಿಸಿದನಂದು

೪.
ಅಯ್ಯ,
ಜಲ-ಕೂರ್ಮ-ಗಜ-ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು,
ಗಗನವಿಲ್ಲದಂದು, ಪವನನ ಸುಳುಹಿಲ್ಲದಂದು,
ಅಗ್ನಿಗೆ ಕಳೆದೋಱದಂದು,
ಯುಗ-ಜುಗಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು,
ನಿಜವನಱಿದಿಹೆನೆಂಬ ತ್ರಿಜಗದಧಿಪತಿಗಳಿಲ್ಲದಂದು :
ತೋಱುವ ಬೀಱುವ ಪರಿಭಾವದಲ್ಲಿ ಭರಿತ
ಅಗಮ್ಯ ಗುಹೇಶ್ವರಲಿಂಗವು.

೫.
ಎನ್ನ ನಾನಱಿಯದ ಮುನ್ನ
ನೀನೇನಾಗಿದ್ದೆ ಹೇಳಾ ?
ಮುನ್ನ ನೀ ಬಾಯಿ ಮುಚ್ಚಿಕೊಂಡಿದ್ದೆಯೆಂಬುದ
ನಾ ನಿನ್ನ ಕಣ್ಣಿಂದ ಕಂಡೆನು !
ಎನ್ನ ನಾನಱಿದ ಬಳಿಕ
ಇನ್ನು ನೀ ಬಾಯ್ದೆಱೆದು ಮಾತನಾಡಿದರೆ
ಅದನೆನ್ನ ಕಣ್ಣಿಂದ ನೀ ಕಂಡು ನಾಚಿದೆ ನೋಡಾ !
ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ
ಸಂಚದ ನೋಟ ಒಂದೆ ನೋಡಾ !
ಗುಹೇಶ್ವರ, ನಿನ್ನ ಬೆಡಗಿನ ಬಿನಾಣವನಱಿದೆ ನೋಡಾ !

೬.
ಮಾಯದ ಬಲೆಯಲ್ಲಿ ಸಿಲುಕಿದ
ಮರುಳ ನಾನೆಂದಱಿದ ಪರಿಯ ನೋಡಾ !
ತನ್ನ ವಿನೋದಕ್ಕೆ ಬಂದು
ನಿಶ್ಚಿಂತ ನಿರಾಳ ಗುಹೇಶ್ವರನೆಂದಱಿಯದ ಪರಿಯ ನೋಡಾ !

ಮಾಯಾವಿಲಾಸ ವಿಡಂಬನ ಸ್ಥಲ

೭.
ಕಾಯದ ಮೊದಲಿಂಗೆ ಬೀಜವಾವುದೆಂದಱಿಯದೀ ಲೋಕ !
ಇಂದ್ರಿಯಂಗಳು ಬೀಜವಲ್ಲ !
ಆ ಕಳಾಭೇದ ಬೀಜವಲ್ಲ !
ಸ್ವಪ್ನ ಬಂದೆಱಗಿತ್ತಲ್ಲಾ !
ಇದಾವಂಗೂ ಶುದ್ಧ ಸುಯಿಧಾನವಲ್ಲ ಕಾಣಾ ಗುಹೇಶ್ವರ.

೮.
ಗಗನದ ಮೇಲೊಂದಭಿನವ ಗಿಳಿ ಹುಟ್ಟಿ
ಸಯಸಂಭ್ರಮದಲ್ಲಿ ಮನೆಯ ಮಾಡಿತ್ತು !
ಒಂದು ದಿನ ಗಿಳಿ ಇಪ್ಪತೈದು ಗಿಳಿಯಾಯಿತ್ತು !
ಬ್ರಹ್ಮನಾ ಗಿಳಿಗೆ ಹಂಜರವಾದ
ವಿಷ್ಣುವಾ ಗಿಳಿಗೆ ಕೊಱೆಕೂಳಾದ
ರುದ್ರನಾ ಗಿಳಿಗೆ ತಾ ಕೋಲಾದ !
ಇಂತೀ ಮೂವರ ಮುಂದಣ ಕಂದನ ನುಂಗಿ
ದೃಷ್ಟನಾಮ ನಷ್ಟವಾಯಿತ್ತು-ಇದೆಂತೋ ಗುಹೇಶ್ವರ ?!

೯.
ನೆಲದ ಬೊಂಬೆಯ ಮಾಡಿ
ಜಲವ ಬಣ್ಣವನುಡಿಸಿ
ಹಲವು ಪರಿಯಾಶ್ರಮದಲ್ಲಿ ಉಲಿವ ಗೆಜ್ಜೆಯ ಕಟ್ಟಿ
ವಾಯುವನಲಸಂಚಕ್ಕೆ ಅರಳೆಲೆಯ ಶೃಂಗಾರವ ಮಾಡಿ
ಆಡಿಸುವ ಯಂತ್ರವಾಹಕನಾರೋ ?
ಬಯಲ ಕಂಭಕ್ಕೆ ತಂದು
ಸಯವೆಂದು ಪರವ ಕಟ್ಟಿದೆಡೆ
ಸಯವದ್ವಯವಾಯಿತ್ತು-ಏನೆಂಬೆ ಗುಹೇಶ್ವರ.

೧೦.
ಜಂಬೂದ್ವೀಪದ ವ್ಯವಹಾರಿ
ಖಂಡಭಂಡವ ತುಂಬಿ
ಕುಂಭಿನಿಯುದರದ ಮೇಲೆ ಪಸರವನಿಕ್ಕಿದ.
ಉಷ್ಣ-ತೃಷ್ಣೆ ಘನವಾಗಿ
ಕಡಲೇಳು ಸಮುದ್ರವ ಕುಡಿದು
ನೀರಡಸಿ, ಅಱಲುಗೊಂಡು ಬೆಱಗಾದ !
ಶಿಶು ತಾಯ ಹೆಣನ ಹೊತ್ತುಕೊಂದು ಹೆಸರು ಹೇಳುತ್ತೈದಾನೆ
ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು.

೧೧.
ದೇವರೆಲ್ಲರ ಹೊಡೆತಂದು
ದೇವಿಯರೊಳಗೆ ಕೂಡಿತ್ತು-ಮಾಯೆ !
ಹರಹರಾ, ಮಾಯೆಯಿಯ್ದೆಡೆಯ ನೋಡಾ !
ಎರಡೆಂಬತ್ತು ಕೋಟಿ ಪ್ರಮಥಗಣಂಗಳು
ಅಂಗಾಲ ಕಣ್ಣವರು, ಮೈಯೆಲ್ಲ ಕಣ್ಣವರು
ನಂದಿವಾಹನ-ರುದ್ರರು
ಇವರೆಲ್ಲರೂ
ಮಾಯೆಯ ಕಾಲುಗಾಹಿನ ಸರಮಾಲೆ ಕಾಣ ಗುಹೇಸ್ವರ !

೧೨.
ಊರ ಮಧ್ಯದ ಕಣ್ಣ ಕಾಡಿನೊಳಗೆ
ಬಿದ್ದೈದಾವೆ ಐದು ಹೆಣನು.
ಅಂದು ಬಂದು ಅಳುವರು ಬಳಗ ಘನವಾದ ಕಾರಣ,
ಹೆಣನೂ ಬೇಯದು, ಕಾಡೂ ನಂದದು
ಮಾಡ ಉರಿಯಿತ್ತು ಗುಹೇಶ್ವರ !

೧೩.
ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ
ಮೇದು ಬಂದೆನೆಂದರೆ-ಅದ ಕಂಡು ಬೆಱಗಾದೆ !
ರಕ್ಕಸಿಯ ಮನೆಗೆ ಹೋಗಿ
ನಿದ್ರೆಗೆಯ್ದು ಬಂದೆನೆಂದರೆ-ಅದ ಕಂಡು ಬೆಱಗಾದೆ !
ಜವನ ಮನೆಗೆ ಹೋಗಿ
ಸಾಯದೆ ಬದುಕಿ ಬಂದೆನೆಂದರೆ-ಅದ ಕಂಡು ಬೆಱಗಾದೆ !
ಗುಹೇಶ್ವರ.

೧೪.
ಹೃದಯಕಂದದ ಮೇಲೆ ಹುಟ್ಟಿತ್ತು
ಹರಿದು-ಹಬ್ಬಿ-ಕೊಬ್ಬಿ ಹಲವು ಫಲವಾಯಿತ್ತು ನೋಡಿರೇ
ಪರಿಪರಿಯ ಫಲಂಗಳನು-ಬೇಡಿದವರಿಗಿತ್ತು -
ಆ ಫಲವ ಬಯಸಿದವರು ಜಲದೊಳಗೆ ಬಿದ್ದರೆ
ನೋಡಿ ನಗುತ್ತಿದ್ದೆನ್ತು - ಗುಹೇಶ್ವರ.

೧೫.
ಅರಗಿನ ಪುತ್ಥಳಿಯನುರಿ ಕೊಂಡಡೆ
ಉದಕ ಬಾಯಾಱಿ ಬಳಲುತ್ತಿದೆ !
ಅಗೆಯಿಂ ಭೋ! ಭಾವಿಯನಗೆಯಿಂ ಭೋ !
ಅಗೆದಾತ ಸತ್ತ-ಭಾವಿ ಬತ್ತಿತ್ತು.
ಇದು ಕಾರಣ ನೆಱೆ ಮೂಱು ಲೋಕ
ಬಱುಸೂಱೆವೋಯಿತ್ತು-ಗುಹೇಶ್ವರ.

೧೬.
ಅಂಗದ ಕೊನೆಯ ಮೇಲಣ ಕೋಡಗ
ಕೊಂಬು-ಕೊಂಬಿಗೆ ಹಾರಿತ್ತು ಅಯ್ಯ.
ಒಂದು ಸೋಜಿಗ-
ಕೈಯ ನೀಡಲು ಮೈಯೆಲ್ಲವ ನುಂಗಿತ್ತು !
ಒಯ್ಯನೆ ಕರೆದಡೆ ಮುಂದೆ ನಿಂದಿತ್ತು !
ಮು(ಮೆ)ಯ್ಯಾಂತಡೆ ಬಯಲಾಯಿತ್ತು ಗುಹೇಶ್ವರ !!

೧೭.
ಭೂತ ಭೂತವ ಕೂಡಿ ಅದ್ಭುತವಾಗಿತ್ತು :
ಕಿಚ್ಚು ಕೋಡಿತ್ತು, ನೀರು ನೀರಡಸಿತ್ತು ;
ಉರಿಪವನದೋಷದೊಳಗಿದ್ದು ವಾಯುವಿಮ್ಮಡಿಸಿತ್ತ ಕಂಡೆ
ಗುಹೇಶ್ವರ.

೧೮.
ಅಡವಿಯೊಳಗೆ ಕಳ್ಳರು
ಕಡವಸದ ಸ್ವಾಮಿಯನು ಹುಡುಕಿ ಹುಡುಕಿ
ಅರಸುತ್ತೈದಾರೆ !
ಸೊಡರು ನಂದಿ ಕಾಣದೆ
ಅನ್ನಪಾನದ ಹಿರಿಯರೆಲ್ಲರೂ ತಮ್ಮ ತಾವಱಿಯದೆ
ಅಧರಪಾನವನುಂಡು ತೇಗಿ
ಸುರಾಪಾನವ ಬೇಡುತ್ತೈದಾರೆ.
ಅಱಿದ ಹಾರುವನೊಬ್ಬನು
ಅರಿದ ತಲೆಯ ಹಿಡಿದುಕೊಂಡು
ಅಧ್ಯಾತ್ಮವಿಕಾರದ ನೆತ್ತರ ಕುಡಿದನು
ನೋಡಾ-ಗುಹೇಸ್ವರ.

೧೯.
ಮಾಯದ ಕೈಯಲ್ಲಿ ಓಲೆಕಂಠವ ಕೊಟ್ಟರೆ
ಲಗುನ-ಮಿಗುನವ ಬರೆಯಿತ್ತು ನೋಡಾ !
ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದರೆ
ಅದು ಸಿರಿಯ ಸಿಂಗಾರವಾಯಿತ್ತು ನೋಡಾ !
ಅಂಬರದೊಳಗಾಡುವ ಗಿಳಿ
ಪಂಜರದೊಳಗಣ ಬೆಕ್ಕ ನುಂಗಿ
ರಂಭೆಯ ತೋಳಿಂದಗಲಿತ್ತು ನೋಡಾ-ಗುಹೇಶ್ವರ.

೨೦.
ಕೋಣನ ಕೊಂಬಿನ ತುದಿಯಲ್ಲಿ
ಏಳುನೂರೆಪ್ಪತ್ತು ಸೇದೆಯ ಭಾವಿ.
ಭಾವಿಯೊಳಗೊಂದು ಬಗರಿಗೆ
ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯ !
ಆ ಸೂಳೆಯ ಕೊರಳಲ್ಲಿ
ಏಳುನೂರೆಪ್ಪತ್ತಾನೆ ನೀಱಿತ್ತ ಕಂಡೆ-ಗುಹೇಶ್ವರ.

೨೧.
ಹುಲಿಯ ತಲೆಯ ಹುಲ್ಲೆ
ಹುಲ್ಲೆಯ ತಲೆಯ ಹುಲಿ-
ಈ ಎರಡರ ನಡು ಒಂದಾಯಿತ್ತು !
ಹುಲಿಯಲ್ಲ - ಹುಲ್ಲೆಯಲ್ಲ
ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.
ತಲೆಯಿಲ್ಲದ ಮುಂಡ
ತಱಗೆಲೆಯ ಮೇದರೆ
ಎಲೆಮಱೆಯಾಯಿತ್ತು ಗುಹೇಶ್ವರ.

೨೨.
ತೋಟವ ಬಿತ್ತಿದರೆಮ್ಮವರು
ಕಾಹ ಕೊಟ್ಟರು ಜವನವರು
ನಿತ್ಯವಿಲ್ಲದ ಸಂಸಾರ ವೃಥಾ ಹೋಯಿತ್ತಲ್ಲಾ !
ಗುಹೇಶ್ವರನಿಕ್ಕಿದ ಕಿಚ್ಚು
ಹೊತ್ತಿಕ್ಕಲುಂಟು, ಅಟ್ಟುಣ್ಣಲಿಲ್ಲ.

೨೩.
ನಿರ್ಣಯವನಱಿಯದ ಮನವೇ
ದುಗುಡವನಾಹಾರಂಗೊಂಡೆಯಲ್ಲಾ !
ಮಾಯಾಸೂತ್ರವಿದೇನೋ !
ಕಂಗಳೊಳಗಣ ಕತ್ತರೆ ತಿಳಿಯದಲ್ಲಾ !
ಬೆಳಗಿನೊಳಗಣ ಶೃಂಗಾರ ಬಳಲುತ್ತಿದೆ ಗುಹೇಶ್ವರ !

ಸಂಸಾರಹೇಯ ಸ್ಥಲ

೨೪.
ಸಂಸಾರವೆಂಬ ಹೆಣ ಬಿದ್ದಿರೆ
ತಿನಬಂದ ನಾಯ ಜಗಳವ ನೋಡಿರೇ !
ನಾಯ ಜಗಳವ ನೋಡಿ
ಹೆಣನೆದ್ದು ನಗುತ್ತಿದೆ
ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೇ !

೨೫.
ಹಳ್ಳದೊಳಗೊಂದು ಹುಳ್ಳಿ ಬರುತ್ತಿರಲು
ನೊರೆತೆರೆಗಳು ತಾಗಿದವಲ್ಲಾ !
ಸಂಸಾರವೆಂಬ ಸಾಗರದೊಳಗೆ
ಸುಖ-ದು:ಖಂಗಳು ತಾಗಿದವಲ್ಲಾ !
ಇದು ಕಾರಣ
ರೂಪಾದ ಜಗಕ್ಕೆ ಪ್ರಳಯವಾಯಿತ್ತು ಗುಹೇಶ್ವರ.

೨೬.
ಕರೆಯದೇ ಬಂದುದ
ಹೇಳದೆ ಹೋದುದ-ಆರೂ ಅಱಿಯರಲ್ಲಾ !
ಅಂದಂದಿಗೆ ಬಂದ ಪ್ರಾಣಿಗಳು-ಆರೂ ಅಱಿಯರಲ್ಲಾ !
ಗುಹೇಶ್ವರಲಿಂಗ ಉಣ್ಣದೇ ಹೋದುದ-ಆರೂ ಅಱಿಯರಲ್ಲ !

೨೭.
ಆಯಿತ್ತೆ ಉದಯಮಾನ
ಹೋಯಿತ್ತೆ ಅಸ್ತಮಾನ
ಉಳಿದವಲ್ಲಾ ನೀರಲಾದ ನಿರ್ಮಿತಂಗಳೆಲ್ಲವೂ !
ಕತ್ತಲೆಗವಿಯಿತ್ತು
ಮೂಱು ಲೋಕದೊಳಗೆ
ಇದಱಚ್ಚುಗವೇನು ಹೇಳಾ ಗುಹೇಶ್ವರ ? !

೨೮.
ಕಾಲುಗಳೆರಡೂ ಗಾಲಿ ಕಂಡಯ್ಯ
ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ
ಬಂಡಿಯ ಹೊಡೆವರೈವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಅದಱಿಚ್ಛೆಯನಱಿದು ಹೊಡೆಯದಿದ್ದರೆ
ಅದುಱಚ್ಚು ಮುಱಿಯಿತ್ತು ಗುಹೇಶ್ವರ.

೨೯.
ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು !
ಆರಕ್ಕೆಯ ಬಡತನಕ್ಕೆ ಆರಕ್ಕೆ ಮುಱುಗುವರು !
ಇದಾರಕ್ಕೆ ಆರಕ್ಕೆ ?
ಇದೇನಕ್ಕೆ ಏನಕ್ಕೆ ?
ಮಾಯದ ಬೇಳುವೆ ಹುರುಳಿಲ್ಲ
ಕೊಂದು ಕೂಗಿತ್ತು ನೋಡಾ ಗುಹೇಶ್ವರ.

೩೦.
ಮಾನದ ತೋರಿಹ ಆವಿಂಗೆ
ಕೊಳಗದ ತೋರಿಹ ಕೆಚ್ಚಲು
ತಾಳಮರದುದ್ದವೆರಡು ಕೋಡು ನೋಡಾ !
ಅದುನಱಸ ಹೋಗಿ ಆಱು ದಿನ
ಅದು ಕೆಟ್ಟು ಮೂಱು ದಿನ !
ಅಘಟಿತಘಟಿತ ಗುಹೇಶ್ವರ,
ಅಱಸುವ ಬಾರೈ ತಲೆಹೊಲದಲ್ಲಿ !

೩೧.
ಕುಲದಲಧಿಕನು ಹೋಗಿ
ಹೊಲೆಗೇರಿಯಲ್ಲಿ ಮನೆಯ ಕಟ್ಟಿದರೆ
ಕುಲಗೆಡದಿಪ್ಪ ಪರಿಯ ನೋಡಾ !
ಆತನ ಕುಲದವರೆಲ್ಲರೂ ಮುಖವ ನೋಡಲೊಲ್ಲದೈದಾರೆ.
ಕುಲವುಳ್ಳವರೆಲ್ಲರು ಕೈವಿಡಿದರು
ಕುಲಗೆಟ್ಟವನೆಂದು ತಿಳಿದು
ವಿಚಾರಿಸಲು ಹೊಲೆಗೆಟ್ಟು ಹೋಯಿತ್ತು
ಕಾಣಾ ಗುಹೇಶ್ವರ.

ಗುರುಕರುಣ ಸ್ಥಲ

೩೨.
ಕಂಡುದ ಹಿಡಿಯಲೊಲ್ಲದೆ
ಕಾಣದುದನಱಸಿ ಹಿಡಿದಹೆನೆಂದರೆ
ಸಿಕ್ಕದೆಂಬ ಬಳಲಿಕೆ ನೋಡಾ !
ಕಂಡುದನೆ ಕಂಡು
ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರ.

೩೩.
ಕಾಣದುದನಱಸುವರಲ್ಲದೆ ಕಂಡುದನಱಸುವರೇ ?!
ಘನಕ್ಕೆ ಘನವಾದ ವಸ್ತು
ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ
ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೆ ಯಂತ್ರವಾದ
ತಾನೆ ಸಕಲವಿದ್ಯಾಸ್ವರೂಪನಾದ:
ಇಂತಿವೆಲ್ಲವನೊಳಕೊಂಡು
ಎನ್ನ ಕರಸ್ಥಲಕ್ಕೆ ಬಂದ ಬಳಿಕ
ಇನ್ನು ನಿರ್ವಿಕಾರ-ಗುಹೇಶ್ವರ.

೩೪.
ಕೃತಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಬಡಿದು
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ತ್ರೇತಾಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಬೈದು
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ದ್ವಾಪರ ಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಝಂಕಿಸಿ
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ಕಲಿಯುಗದಲ್ಲಿ
ಶ್ರೀಗುರು ಶಿಷ್ಯಂಗೆ ವಂದಿಸಿ
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ಗುಹೇಶ್ವರ,
ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆಱಗಾದೆನು.

೩೫.
ಅಯ್ಯ, ನೀನೆನಗೆ ಗುರುವಪ್ಪಡೆ
ನಾ ನಿನಗೆ ಶಿಷ್ಯನಪ್ಪಡೆ,
ಎನ್ನ ಕರಣಾದಿ ಗುಣಂಗಳ ಕಳೆದು
ಎನ್ನ ಕಾಯದ ಕರ್ಮವ ತೊಡೆದು
ಎನ್ನ ಪ್ರಾಣದ ಧರ್ಮವ ತೊಡೆದು
ಎನ್ನ ಪ್ರಾಣದ ಧರ್ಮವ ನಿಲಿಸಿ,
ನೀನೆನ್ನ ಕಾಯದಲಡಗಿ
ನೀನೆನ್ನ ಪ್ರಾಣದಲಡಗಿ
ನೀನೆನ್ನ ಭಾವದಲಡಗಿ,
ನೀನೆನ್ನ ಕರಸ್ಥಲಕ್ಕೆ ಬಂದು
ಕಾರುಣ್ಯವ ಮಾಡು ಗುಹೇಶ್ವರ.

೩೬.
ಕಸ್ತುರಿಯ ಮೃಗ ಬಂದು ಸುಳಿಯಿತ್ತಯ್ಯ
ಸಕಲವಿಸ್ತಾರದ ರೂಹು ಬಂದು ನಿಂದಿತ್ತಯ್ಯ.
ಆವ ಗ್ರಹ ಬಂದು ಸೋಕಿತ್ತೆಂದಱಿಯೆನಯ್ಯ
ಆವ ಗ್ರಹ ಬಂದು ಹಿಡಿಯಿತ್ತೆಂದಱಿಯೆನಯ್ಯ.
ಹೃದಯಕಮಲಮಧ್ಯದಲ್ಲಿ
ಗುರುವನಱಿದು, ಪೂಜಿಸಿ,
ಗುರು ವಿಖ್ಯಾತನೆಂಬುದ ನಾನಱಿದೆನಯ್ಯ
ಗುರುಗುಹೇಶ್ವರನಲ್ಲಿ ಹಿಂದಣ ಹುಟ್ಟಱತು ಹೋದುದ ಕಂಡೆನಯ್ಯ.

೩೭.
ಎಣ್ಣೆ-ಬತ್ತಿ-ಪ್ರಣಿತೆ ಕೂಡಿ
ಜ್ಯೋತಿಯ ಬೆಳಗಯ್ಯ !
ಅಸ್ಥಿ-ಮಾಂಸ-ದೇಹ
ಪ್ರಾಣನಿ:ಪ್ರಾಣವಾಯಿತ್ತು !!
ದೃಷ್ಟಿವರಿದು ಮನ ಮುಟ್ಟಿದ ಪರಿ ಇನ್ನೆಂತೋ ?
ಮುಟ್ಟಿ ಲಿಂಗವ ಕೊಂಡಡೆ
ಕೆಟ್ಟಿತ್ತು ಜ್ಯೋತಿಯ ಬೆಳಗು !
ಇದು ಕಷ್ಟಕರವೆಂದಱಿದೆನು ಗುಹೇಶ್ವರ.

೩೮.
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ
ಗಗನದಿಂದ ಮೇಲೆ ಅನುಭಾವ ತಾನಿಲ್ಲ
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ
ಹೊಱಗಣ ಹೊಱಗನು ಅಱಿಯಬಲ್ಲವರಿಲ್ಲ
ಹಿಂದಣ ಹಿಂದನು
ಮುಂದಣ ಮುಂದನು
ತಂದೆ ತೋಱಿದನು ನಮ್ಮ ಗುಹೇಶ್ವರನು.

೩೯.
ಎತ್ತಣ ಮಾಮರ
ಎತ್ತಣ ಕೋಗಿಲೆ ?
ಎತ್ತಣಿಂದೆತ್ತ ಸಂಬಂಧವಯ್ಯ ?!
ಬೆಟ್ಟದ ನೆಲ್ಲಿಯ ಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ ?!
ಗುಹೇಶ್ವರಲಿಂಗಕ್ಕೆಯೂ
ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯ ?!

೪೦.
ಕಾಣಬಾರದ ಲಿಂಗವು
ಕರಸ್ಥಲಕ್ಕೆ ಬಂದರೆ
ಎನಗಿದು ಸೋಜಿಗ ! ಎನಗಿದು ಸೋಜಿಗ !
ಅಹುದೆನಲಮ್ಮೆನು ಅಲ್ಲೆನಲಮ್ಮೆನು,
ಗುಹೇಶ್ವರಲಿಂಗ ನಿರಾಳ !
ನಿರಾಕಾರ ಸಾಕಾರವಾಗಿ
ಎನ್ನ ಕರಸ್ಥಲಕ್ಕೆ ಬಂದರೆ
ಹೇಳಲಮ್ಮೆ ಕೇಳಲಮ್ಮೆ.

೪೧.
ಜ್ಯೋತಿಯೊಳಗಣ ಕರ್ಪುರಕ್ಕೆ
ಅಪ್ಪುವಿನೊಳಗಿಪ್ಪ ಉಪ್ಪಿಂಗೆ
ಶ್ರೀ ಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ-
ಈ ಮೂಱಕ್ಕೆಯೂ
ಬೇಱೆ ಕ್ರಿಯಾವರ್ತನೆಯುಂಟೆ ಗುಹೇಶ್ವರ ?

೪೨.
ಗುರುಶಿಷ್ಯ ಸಂಬಂಧವನಱಸಲೆಂದು ಹೋದರೆ
ತಾನೆ ಗುರುವಾದ
ತಾನೆ ಶಿಷ್ಯನಾದ
ತಾನೆ ಲಿಂಗವಾದ.
ಗುಹೇಶ್ವರ,
ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟರೆ
ಭಾವ ಬತ್ತಲೆಯಾಯಿತ್ತು !

ಭಕ್ತ ಸ್ಥಲ

೪೩.
ಭವಿಯ ತಂದು ಭಕ್ತನ ಮಾಡಿ
ಪೂರ್ವಾಶ್ರಯವ ಕಳೆದ ಬಳಿಕ ಮರಳಿ ಪೂರ್ವವನೆತ್ತಿ ನುಡಿವ
ಗುರುದ್ರೋಹಿಯ ಮಾತ ಕೇಳಲಾಗದು,
ಹೆಸರಿಲ್ಲದ ಲಿಂಗಕ್ಕೆ ಹೆಸರಿಡುವ
ಲಿಂಗದ್ರೋಹಿಯ ಮಾತ ಕೇಳಲಾಗದು.
ಪೂರ್ವದಲ್ಲಿ ನಾಮವಿಲ್ಲದ ಗುರು
ಹೆಸರಿಲ್ಲದ ಲಿಂಗ, ಹೆಸರಿಲ್ಲದ ಶಿಷ್ಯ
ಇಂತೀ ತ್ರಿವಿಧಸ್ಥಲವನಱಿಯದೆ ಕೆಟ್ಟರು ಗುಹೇಶ್ವರ.

೪೪.
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಭತ್ತವಿಲ್ಲದಿದ್ದರೆ
ಆ ಬೆವಸಾಯದ ಗೊರ[=ಡ]ವೇತಕಯ್ಯ ?
ಕ್ರಯವಿಕ್ರಯವ ಮಾಡಿ ಮನೆಯ ಸಂಚು ನಡೆಯದನ್ನಕ್ಕ
ಆ ಕ್ರಯವಿಕ್ರಯದ ಗೊರ[=ಡ]ವೇತಕಯ್ಯ ?
ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿದ್ದರೆ
ಆ ಓಲಗದ ಗೊರ[=ಡ]ವೇತಕಯ್ಯ ?
ಭಕ್ತನಾಗಿ ಭವಂನಾಸ್ತಿಯಾಗದಿದ್ದರೆ
ಆ ಉಪದೇಶವ ಕೊಟ್ಟ ಗುರು
ಕೊಂಡ ಶಿಷ್ಯ
ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ
ಗುಹೇಶ್ವರಲಿಂಗವತ್ತಲೆ ಹೊಗಲಿ.

೪೫.
ಮೇರುವ ಸಾರಿಗೆ ಕಾಗೆ ಹೊಂಬಣ್ಣವಾಗದಿದ್ದರೆ
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೇ ?
ದೇವ, ನಿಮ್ಮ ಪೂಜಿಸಿ ಧಾವತಿಗೊಂಬಡೆ
ಆ ಧಾವತಿಯಿಂದ ಮುನ್ನಿನ ವಿಧಿಯೇ ಸಾಲದೇ?
ಗುಹೇಶ್ವರ, ನಿಮ್ಮ ಪೂಜಿಸಿ ಸಾವಡೆ
ನಿಮ್ಮಿಂದ ಹೊಱಗಣ ಜವನೆ ಸಾಲದೆ!

೪೬.
ಕಾಳರಕ್ಕಸಿಗೊಬ್ಬ ಮಗ ಹುಟ್ಟಿ
ಕಾಯದ ರಾಶಿಯ ಮೊಗೆವುತ್ತ ಸುರಿವುತ್ತಲಿದ್ದನಯ್ಯ !
ಕಾಳರಕ್ಕಸಿಯ ಮೂಗು ಮೊಲೆಯ ಕೊಯ್ದು
ದೇವಕನ್ನಿಕೆಯ ಮಱೆಹೊಕ್ಕು
ಬಾಯ ತುತ್ತೆಲ್ಲವನು ಉಣಲೊಲ್ಲದೆ ಕಾಱಿದಡೆ
ಆತನೆ ಭಕ್ತನೆಂಬೆ !

೪೭.
ಅಕ್ಷರವ ಬಲ್ಲೆವೆಂದು
ಅಹಂಕಾರವಡೆಗೊಂದು ಲೆಕ್ಕಗೊಳ್ಳರಯ್ಯ,
ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು, ವಾದಿಪರಲ್ಲದೆ
ಆಗು-ಹೋಗೆಂಬುದನಱಿಯರು,
ಭಕ್ತಿಯನಱಿಯರು-ಯುಕ್ತಿಯನಱಿಯರು-ಮುಕ್ತಿಯನಱಿಯರು
ಮತ್ತೂ ವಾದಿಗಳೆನಿಸುವರು
ಹೋದರು, ಗುಹೇಶ್ವರ, ಸಲೆ ಕೊಂಡ ಮಾಱಿಂಗೆ !

೪೮.
ಐದು ಮುಖದಂಗನೆಗೆ ಹದಿನೈದು ದೇಹ ನೋಡ ;
ಆ ಅಂಗನೆಯ ಮನೆಯೊಳಗಿದ್ದು
ತಾವಾರೆಂಬುದನಱಿಯದೆ
ಬಾಯಿಗೆ ಬಂದಂತೆ ನುಡಿವರು,
ಗುಹೇಶ್ವರ, ನಿಮ್ಮನಱಿಯದ ಜಡರುಗಳು.

೪೯.
ಎಣ್ಣೆ ಬೇಱೆ, ಬತ್ತಿ ಬೇಱೆ
ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇಱೆ, ಪಾಪ ಬೇಱೆ
ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು, ಮಿಗದಿರಬಾರದು,
ಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು,
ಕಾಯಗುಣವಳಿದು,
(ಮಾಯ ಜ್ಯೋತಿ ವಾಯುವ ಕೂಡದ ಮುನ್ನ)
ಭಕ್ತಿಯ ಮಾಡಬಲ್ಲಾತನೇ ದೇವ, ಗುಹೇಶ್ವರ.

೫೦.
ಹೊನ್ನು ಮಾಯೆಯೆಂಬರು
ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆಯೆಂಬರು
ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು
ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ
ಗುಹೇಶ್ವರ !

೫೧.
ಕಳ್ಳಗಂಜಿ ಕಾಡ ಹೊಕ್ಕಡೆ
ಹುಲಿ ತಿನ್ನದೆ ಮಾಬುದೇ ?
ಹುಲಿಗಂಜಿ ಹುತ್ತವ ಹೊಕ್ಕಡೆ
ಸರ್ಪ ತಿನ್ನದೆ ಮಾಬುದೇ ?
ಕಾಲಕ್ಕಂಜಿ ಭಕ್ತನಾದಡೆ ಕರ್ಮ ತಿನ್ನದೆ ಮಾಬುದೇ ?
ಇಂತೀ ಮೃತ್ಯುವಿನ ಬಾಯ ತುತ್ತಾದ
ವೇಷಡಂಬಕರನೇನೆಂಬೆ - ಗುಹೇಶ್ವರ !

೫೨.
ಐದು ಸರ್ಪಂಗಳಿಗೆ
ತನುವೊಂದು, ದಂತವೆರಡು !
ಸರ್ಪ ಕಡಿದು ಸತ್ತ ಹೆಣನು ಸುಳಿದಾಡುವುದ ಕಂಡೆ !
ಈ ನಿತ್ಯವನಱಿಯದ ಠಾವಿನಲ್ಲಿ
ಭಕ್ತಿಯೆಲ್ಲಿಯದೊ ಗುಹೇಶ್ವರ ?!

೫೩.
ಆರೂ ಇಲ್ಲದಾರಣ್ಯದೊಳಗೆ ಮನೆಯ ಕಟ್ಟಿದರೆ
ಕಾಡುಗಿಚ್ಚು ಎದ್ದು ಬಂದು ಹತ್ತಿತಲ್ಲ !
ಆ ಉರಿಯೊಳಗೆ ಮನೆ ಬೇವಲ್ಲಿ
ಮನೆಯೊಡೆಯನೆತ್ತ ಹೋದನೋ ?!
ಆ ಉರಿಯೊಳಗೆ ಬೆಂದ ಮನೆ
ಚೇಗೆಯಾಗದುದ ಕಂಡು
ಮನೆಯೊಡೆಯನಳಲುತ್ತ ಬಳಲುತ್ತೈದಾನೆ.
ಗುಹೇಶ್ವರ.
ನಿಮ್ಮ ಒಲವಿಲ್ಲದ ಠಾವ ಕಂಡು
ಹೇಸಿ ತೊಲಗಿದೆನಯ್ಯ !

೫೪.
ಪ್ರಣಿತೆಯೂ ಇದೆ
ಬತ್ತಿಯೂ ಇದೆ -
ಜ್ಯೋತಿಯ ಬೆಳಗುವಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ ?!
ಗುರುವಿದೆ
ಲಿಂಗವಿದೆ -
ಶಿಷ್ಯನ ಸುಜ್ಞಾನವಂಕುರಿಸದನ್ನಕ್ಕರ ಭಕ್ತಿಯೆಲ್ಲಿಯದೋ ?!
ಸೋಹಮೆಂಬುದ ಕೇಳಿ, ದಾಸೋಹವ ಮಾಡದಿದ್ದರೆ
ಅತಿಗಳೆದನು ಗುಹೇಶ್ವರ.

೫೫.
ಘನತರಚಿತ್ರದ ರೂಹ ಬರೆಯಬಹುದಲ್ಲದೆ
ಪ್ರಾಣವ ಬರೆಯಬಹುದೇ ?
ಅಯ್ಯ,
ದಿವ್ಯಾಗಮಂಗಳು ಹೇಳಿದ ಕ್ರೀಯಲು ದೀಕ್ಷೆಯ ಮಾಡಬಹುದಲ್ಲದೆ
ಭಕ್ತಿಯ ಮಾಡಬಹುದೇ ?
ಅಯ್ಯ,
ಪ್ರಾಣವಹ ಭಕ್ತಿಯ ತನ್ಮಯ ನೀನು !
ಈ ಗುಣವುಳ್ಳಲ್ಲಿ ನೀನಿಹೆ
ಇಲ್ಲದಲ್ಲಿ ನೀನಿಲ್ಲ, ಗುಹೇಶ್ವರ.

೫೬.
ಕಾಯಕ್ಕೆ ಮಜ್ಜನ
ಪ್ರಾಣಕ್ಕೆ ಓಗರ
ಇವ ಮಾಡಲೆ ಬೇಕು,
ಸುಳಿವ ಸುಳುಹುಳ್ಳನ್ನಕ್ಕರ
ಇವ ಮಾಡಲೆ ಬೇಕು
ಗುಹೇಶ್ವರನೆಂಬ ಲಿಂಗಕ್ಕೆ
ಆತ್ಮನುಳ್ಳಕ್ಕರ ಭಕ್ತಿಯ ಮಾಡಲೆ ಬೇಕು.

೫೭.
ಅದ್ವೈತವ ನುಡಿದು ಅಹಂಕಾರಿಯಾದೆನಯ್ಯ
ಬ್ರಹ್ಮವ ನುಡಿದು ಭ್ರಮಿತನಾದೆನಯ್ಯ
ಶೂನ್ಯವ ನುಡಿದು ಸುಖದು:ಖಕ್ಕೆ ಗುರಿಯಾದೆನಯ್ಯ
ಗುಹೇಶ್ವರ, ನಿಮ್ಮ ಶರಣ ಸಂಗನ ಬಸವಣ್ಣನ ಸಾನ್ನಿಧ್ಯದಿಂದ
ನಾನು ಸದ್ಭಕ್ತನಾದೆನಯ್ಯ.

೫೮.
'ದೇವ' ಕಂಡಾ.
'ಭಕ್ತ' ಕಂಡಾ
ವಕರಳಿ ಮರಳಿ ಶರಣೆಂಬ ಕಂಡಾ !
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
ಸಾವನ್ನಕ್ಕರ ಸರ ಉಂಟೇ, ಗುಹೇಶ್ವರ.

೫೯.
ಮುಂದು ಜಾವದಲೆದ್ದು
ಲಿಂಗದಂಘ್ರಿಯ ಮುಟ್ಟಿ,
ಸುಪ್ರಭಾತ ಸಮಯದಲ್ಲಿ
ಶಿವಭಕ್ತರ ಮುಖವ ನೋಡುವುದು,
ಹುಟ್ಟಿದುದಕ್ಕಿದೆ ಸಫಲ ನೋಡಾ !
ಸತ್ಯವಚನವಿಂತೆಂದುದು ;
"ಇವಿಲ್ಲದವರ ನಾನೊಲ್ಲೆ"
ಗುಹೇಶ್ವರ.

೬೦.
ಆಚಾರವಱಿಯದೆ
ವಿಭವವಳಿಯದೆ ;
ಕೋಪವಡಗದೆ
ತಾಪ ಮುಱಿಯದೆ-
ಬಱಿದೆ ಭಕ್ತರಾದೆವೆಂದು
ಬೆಬ್ಬನೆ ಬೆಱೆವವರ ಕೇಡಿಂಗೆ ನಾನು ಮಱುಗುವೆನು ಕಾಣಾ
ಗುಹೇಶ್ವರ.

೬೧.
ಆಸೆಗೆ ಸತ್ತುದು ಕೋಟಿ !
ಆಮಿಷಕ್ಕೆ ಸತ್ತುದು ಕೋಟಿ !
ಹೊನ್ನು-ಹೆಣ್ಣು-ಮಣ್ಣಿಂದು ಸತ್ತುದು ಕೋಟಿ !
ಗುಹೇಶ್ವರ,
ನಿಮಗಾಗಿ ಸತ್ತವರನಾರನೂ ಕಾಣೆ !!

೬೨.
ಹೃದಯಕಮಲದೊಳಗೊಂದು
ಮಱಿದುಂಬಿ ಹುಟ್ಟಿತ್ತು !
ಹಾರಿ ಹೋಗಿ ಆಕಾಶವ ನುಂಗಿತ್ತಯ್ಯಾ !!
ಆ ತುಂಬಿಯ ಗಱಿಯ ಗಾಳಿಯಲ್ಲಿ
ಮೂಱು ಲೋಕವೆಲ್ಲವೂ ತಲೆಕೆಳಗಾಯಿತ್ತು !!!
ಪಂಚವರ್ಣದ ಹಂಸೆಯ ಪಂಜರವ ಖಂಡಿಸಿದರೆ
ಗಱಿ ಮುಱಿದು, ತುಂಬಿ ನೆಲಕ್ಕುರುಳಿತ್ತು !
ನಿಜದುದಯದ ಬೆಡಗಿನ ಕೀಲ -
ಗುಹೇಶ್ವರ,
ನಿಮ್ಮ ಶರಣರನುಭಾವಸಂಗದಲ್ಲಿದ್ದು ಕಂಡೆನಯ್ಯ.

೬೩.
ಕಬ್ಬಿನಲ್ಲಿ ಬಿಲ್ಲ ಮಾಡಿ
ಪರಿಮಳದಲ್ಲಿ ಅಂಬ ಮಾಡಿ
ನಲ್ಲೋ ಬಿಲ್ಲಾಳೇ,
ಎನ್ನ ಮನದಲ್ಲಿ ಎಸೆಯ ಬಲ್ಲೆಯಲ್ಲಾ
ಗುಹೇಶ್ವರನೆಂಬ ಲಿಂಗವನು ?!

೬೪.
ಅಮರಾವತಿಯ ಪಟ್ಟಣದೊಳಗೆ
ದೇವೇಂದ್ರನಾಳುವ ನಂದನವನವಯ್ಯ !
ಅತ್ತ ಸಾರೆಲೆ ಕಾಮ, ಮೋಹವೆ ನಿನಗೆ ?
ಲೋಕಾದಿಲೋಕವನೆಲ್ಲವ ಮರುಳುಮಾಡಿದೆ-
ಕಾಮ, ಗುಹೇಶ್ವರಲಿಂಗವನಱಿ ಭೋ!

೬೫.
ಎಸೆಯದಿರು, ಎಸೆಯದಿರು
ಕಾಮ, ನಿನ್ನ ಬಾಣ ಹುಸಿಯಲೇಕೋ ?
ಲೋಭ-ಮೋಹ-ಮದ-ಮತ್ಸರ
ಇವು ಸಾಲದೇ ನಿನಗೆ ?
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೇ ಮರುಳು ಕಾಮ ?!

೬೬.
ಬಿಸುವಂತೆ ! ಜವಳಿಗಂಭ !!
ಲೇಸಾಯಿತ್ತು ಮನೆ
ಲೇಸಾಯಿತ್ತು ಮೇಲುವೊದಿಕೆ
ಮಗುಳೆ ಆ ಅಂಗಕ್ಕೆ ಕಿಚ್ಚನಿಕ್ಕಿ
ಮನೆಯನಿಂಬುಮಾಡಿದೆ ಲಿಂಗಜಂಗಮಕ್ಕೆ !
ಹುಟ್ಟುಗೆಟ್ಟು ಬಟ್ಟಬಯಲಲ್ಲಿ ನಾನಿದೇನೆ ಗುಹೇಶ್ವರ.

೬೭.
ತನು ತರತರಂಬೋಗಿ
ಮನವು ನಿಮ್ಮಲ್ಲಿ ಸಿಲುಕಿತ್ತಯ್ಯ.
ನೋಟವೇ ಪ್ರಾಣವಾಗಿ
ಆಪ್ಯಾಯನ ನಿಮ್ಮಲ್ಲಿ ಅಱಿತುದಯ್ಯ
ಸಿಲುಕಿತ್ತು ಶೂನ್ಯದೊಳಗೆ
ಗುಹೇಶ್ವರ ನಿರಾಳವಯ್ಯ.

೬೮.
ಮನ ಬಸುಱಾದರೆ ಕೈ ಬೆಸಲಾಯಿತ್ತ ಕಂಡೆ !
ಕರ್ಪುರದ ಕಂಪ ಕಿವಿ ಕುಡಿಯಿತ್ತ ಕಂಡೆ !
ಮುತ್ತಿನ ಢಾಳವ ಮೂಗು ನುಂಗಿತ್ತ ಕಂಡೆ !
ಕಂಗಳು ಹಸಿದು ವಜ್ರವ ನುಂಗಿತ್ತ ಕಂಡೆ !
ಒಂದು ನೀಲದೊಳಗೆ ಮೂಱು ಲೋಕವಡಗಿತ್ತ ಕಂಡೆ !
ಗುಹೇಶ್ವರ.

೬೯.
ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ
ಅಚ್ಚಿಗವಾಯಿತ್ತವ್ವಾ, ನಮ್ಮ ನಲ್ಲಂಗೆ
ಕಿಚ್ಚನೆ ಹೊತ್ತುಕೊಂಡು
ಅಚ್ಚನೆಯಾಡಲು
ಅಚ್ಚುಗವಾಯಿತ್ತವ್ವಾ, ನಮ್ಮ ನಲ್ಲಂಗೆ !
ಅಚ್ಚನೆಯ ಗಳಿಹವನಿಳುಹಿದರೆ
ಬಳಿಕ ನಿಶ್ಚಿಂತವಾಯಿತ್ತು, ಗುಹೇಶ್ವರ !!!

೭೦.
ಆಸೆಯೆಂಬ ಕೂಸನೆತ್ತಲು
ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ !
ಇಂತೆರಡಿಲ್ಲದ ಕೂಸನೆತ್ತಬಲ್ಲಡೆ
ಅವ ಅಚ್ಚ ಶೀಲವಂತನೆಂಬೆ ಕಾಣಾ ಗುಹೇಶ್ವರ.

೭೧.
ತಾಯಿ ಬಂಜೆಯಾದಲ್ಲದೆ ಶಿಶು ಗತವಾಗದು.
ಬೀಜ ನಷ್ಟವಾದಲ್ಲದೆ ಸಸಿ ಗತವಾಗದು
ನಾಮ ನಷ್ಟವಿಲ್ಲದೆ ನೇಮ ನಷ್ಟವಾಗದು
ಮೊದಲುಗೆಟ್ಟಲ್ಲದೆ ಲಾಭದಾಸೆ ಬಿಡದು
ಗುಹೇಶ್ವರಲಿಂಗದ ನಿಜವನೆಯ್ದುವಡೆ
ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು.

೭೨.
ಬೆಟ್ಟಕ್ಕೆ ಚಳಿಯಾದಡೆ
ಏನ ಹೊದಿಸುವಿರಯ್ಯ !
ಬಯಲು ಬತ್ತಲೆಯಾದಡೆ
ಏನ ನುಡಿಸುವರಯ್ಯ ?
ಭಕ್ತನು ಭವಿಯಾದಡೆ
ಏನನುಪಮಿಸುವೆನಯ್ಯ - ಗುಹೇಶ್ವರ ?

೭೩.
ಸತ್ತ ಬಳಿಕ ಮುಕ್ತಿಯ ಹಡೆದಹೆನೆಂದು
ಪೂಜಿಸ ಹೋದರೆ
ಆ ದೇವರೇನ ಕೊಡುವರೋ ?
ಸಾಯದೆ-ನೋಯದೆ-ಸ್ವತಂತ್ರನಾಗಿ
ಸಂದು-ಭೇದವಿಲ್ಲದಿಪ್ಪ, ಗುಹೇಶ್ವರ, ನಿಮ್ಮ ಶರಣ.

ಮಾಹೇಶ್ವರ ಸ್ಥಲ

೭೪.
ಕುರೂಪಿ
ಸುರೂಪಿಯ ನೆನೆದಡೆ
ಸುರೂಪಿಯಪ್ಪನೆ ?
ಆ ಸುರೂಪಿ
ಕುರೂಪಿಯ ನೆನದಡೆ
ಕುರೂಪಿಯಪ್ಪನೆ ?
ಧನವುಳ್ಳವರ ನೆನೆದಡೆ ದರಿದ್ರ ಹೋಹುದೇ ?
ಪುರಾತರ ನೆನೆದು ಕೃತಾರ್ಥರಾದೆವೆಂಬರು !
ತಮ್ಮಲ್ಲಿ ಭಕ್ತಿನಿಷ್ಠೆಯಿಲ್ಲದವರ ಕಂಡಡೆ
ಮೆಚ್ಚನು ಗುಹೇಶ್ವರನು.

೭೫.
ಕಾರಣವಿಲ್ಲ, ಕಾರ್ಯವಿಲ್ಲ.
ಏತಕ್ಕೆ ಭಕ್ತರಾದೆವೆಂಬಿರೋ ?
ಐವರ ಬಾಯ ಎಂಜಲನುಂಬಿರಿ !
ಐವರು ಸ್ತ್ರೀಯರ ಮುಖವನಱಿಯಿರಿ !
ಮೂಱು ಸಂಕಲೆಯ ಕಳೆಯಲಱಿಯಿರಿ !
ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ
ಭ್ರಮೆಯ ನೋಡಾ, ಗುಹೇಶ್ವರ.

೭೬.
ಉದಯವಾಯಿತ್ತ ಕಂಡು
ಉದರಕ್ಕೆ ಕುದಿವರಯ್ಯ !
ಕತ್ತಲೆಯಾಯಿತ್ತ ಕಂಡು
ಮಜ್ಜನಕ್ಕೆಱೆವರಯ್ಯ ! ಲಿಂಗಕ್ಕೆ ನೇಮವಿಲ್ಲ !
ಇರುಳಿಗೊಂದು ನೇಮ !
ಹಗಲಿಗೊಂದು ನೇಮ ! ಲಿಂಗಕ್ಕೆ ನೇಮವಿಲ್ಲ !
ಕಾಯ ಒಂದೆಸೆ
ಜೀವ ಒಂದೆಸೆ
ಗುಹೇಶ್ವರನೆಂಬ ಲಿಂಗವು ತಾನೊಂದೆಸೆ !

೭೭.
ಅಗ್ರವಣಿ-ಪತ್ರೆ-ಧೂಪ-ದೀಪನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ !
ಏನೆಂದಱಿಯರು ! ಎಂತೆಂದಱಿಯರು !
ಜನಮರುಳೋ ಜಾತ್ರೆ ಮರುಳೋ-
ಎಂಬಂತೆ ಎಲ್ಲರೂ ಪೂಜಿಸಿ
ಏನನೂ ಕಾಣದೆ
ಲಯವಾಗಿ ಹೋದರು, ಗುಹೇಶ್ವರ.

೭೮.
ಮಜ್ಜನಕ್ಕೆಱೆದು ಫಲವ ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಸೀತಾಳಕ್ಕಲ್ಲದೆ ?
ಪತ್ರೆ-ಪುಷ್ಪದಲ್ಲಿ ಪೂಜಿಸಿ ಫಲವು ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಗಿಡುಗಳಿಗಲ್ಲದೆ ?
ಸಯಿಧಾನವರ್ಪಿಸಿ ಪ್ರಸಾದದ ಫಲವ ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ ?
ಲಿಂಗದೊಡೆಯ ಲಿಂಗಕ್ಕೆ ಕೊಟ್ಟು
ಫಲವ ಬೇಡುವ ಸರ್ವಾನ್ಯಾಯಿಗಳನೇನೆಂಬೆ ಗುಹೇಶ್ವರ.

೭೯.
ಜಾಲಗಾಱನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ
ಸೂನೆಗಾಱನ ಮನೆಯಲ್ಲಿ ಹೆಣ ಹೋಗಿ ಅಳುವಂತೆ
ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮಱುಗುವಂತೆ
ಠಕ್ಕನ ಪೂಜೆಗೆ ಮೆಚ್ಚುವನೇ ನಮ್ಮ ಗುಹೇಶ್ವರನು ?

೮೦.
ಸಾಸವೆಯಷ್ಟು ಸುಖಕ್ಕೆ
ಸಾಗರದಷ್ಟು ದುಃಖ ನೋಡಾ !
ಘಳಿಗೆಯ ಬೇಟವ ಮಾಡಿಹೆನೆಂಬ
ಪರಿಯ ನೋಡಾ !
ತನ್ನನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ
ಬಿನ್ನಾಣ ತಪ್ಪಿತ್ತು ಗುಹೇಶ್ವರ.

೮೧.
ಮಜ್ಜನಕ್ಕೆಱೆವರೆಲ್ಲಾ ಇದ್ದಲ್ಲಿ ಫಲವೇನು ?
ಮುದ್ರೆಧಾರಿಗಳಪ್ಪರಯ್ಯ !
ಲಿಂಗದಲ್ಲಿ ನಿಷ್ಠೆಯಿಲ್ಲ
ಜಂಗಮದಲ್ಲಿ ಪ್ರೇಮಿಗಳಲ್ಲ
ವೇಷಲಾಂಛನಧಾರಿಗಳಪ್ಪರಯ್ಯ !
ನೋಡಿ ಮಾಡುವ ಭಕ್ತಿ ಸಜ್ಜನಸಾರಾಯವಲ್ಲ
ಗುಹೇಶ್ವರ ಮೆಚ್ಚನಯ್ಯ !

೮೨.
ಕೊಟ್ಟ ಕುದುರೆಯನೇಱಲಱಿಯದೆ
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ ! ಧೀರರೂ ಅಲ್ಲ !!
ಇದು ಕಾರಣ
ನೆಱೆ ಮೂಱು ಲೋಕವೆಲ್ಲವೂ
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತಬಲ್ಲರೋ ?

೮೩.
ಜೀವವಿಲ್ಲದ ಹೆಣನ ಹಿಡಿದಾರುವರಯ್ಯ
ಪ್ರತಿಯಿಲ್ಲದ ಪ್ರತಿಗೆ ಪ್ರತಿಯ ಮಾಡುವರಯ್ಯ
ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರು ಗುಹೇಶ್ವರ !

೮೪.
ಆದ್ಯರಲ್ಲ ! ವೇದ್ಯರಲ್ಲ !
ಸಾಧ್ಯರಲ್ಲದ ಹಿರಿಯರ ನೋಡಾ !
ತನುವಿಕಾರ ! ಮನವಿಕಾರ !
ಇಂದ್ರಿಯವಿಕಾರದ ಹಿರಿಯರ ನೋಡಾ !
ಶಿವಚಿಂತೆ ಶಿವಜ್ಞಾನಿಗಳ ಕಂಡರೆ
ಅಳವಾಡಿ ನುಡಿವರು
ಗುಹೇಶ್ವರನಱಿಯದ ಕರ್ಮಿಗಳಯ್ಯ !

೮೫.
ಆಳವಱಿಯದ ಭಾಷೆ
ಬಹುಕುಳವಾದ ನುಡಿ
ಇಂತೆರಡಱ ನುಡಿ ಹುಸಿಯಯ್ಯ !
ಬಹುಭಾಷಿತರು, ಸುಭಾಷಿತವರ್ಜಿತರು
"ಶರಣಸತಿ ಲಿಂಗಪತಿ" ಎಂಬರು
ಹುಸಿಯಯ್ಯ !
ಇಂತಪ್ಪವರ ಕಂಡು ನಾಚಿದೆನಯ್ಯ ಗುಹೇಶ್ವರ.

೮೬.
ದೇಶ ಗುಱಿಯಾಗಿ
ಲಯವಾಗಿ ಹೋದವರ ಕಂಡೆ !
ತಮಂಧ ಗುಱಿಯಾಗಿ
ಲಯವಾಗಿ ಹೋದವರ ಕಂಡೆ !
ಕಾಮ ಗುಱಿಯಾಗಿ
ಬೆಂದುಹೋದವರ ಕಂಡೆ !
ನೀ ಗುಱಿಯಾಗಿ
ಲಯವಾಗಿ ಹೋದವರನಾರನೂ ಕಾಣೆ ಗುಹೇಶ್ವರ.

೮೭.
ಮರನೊಳಗಣ ಪತ್ರೆ ಫಲಂಗಳು
ಮರ ಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿಸ್ವಭಾವಂಗಳು
ಹರಭಾವದಿಚ್ಚೆಗೆ ತೋಱುವವು !
ಲೀಲೆಯಾದಡುಮಾಪತಿ
ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರ.

೮೮.
ಓಡಿನೊಳಗುಂಟೆ ಕನ್ನಡಿಯ ನೋಟ ?
ಮರುಳಿನ ಕೂಟ ವಿಪರೀತಚರಿತ್ರ !
ನೋಟದ ಸುಖ ತಾಗಿ ಕೋಟಲೆಗೊಂಡೆನು
ಗುಹೇಶ್ವರನೊಬ್ಬನೆ ಅಚಳ
ಉಳಿದವರೆಲ್ಲರೂ ಸೂತಕಿಗಳು.

೮೯.
ಸತಿ ಭಕ್ತೆಯಾದಡೆ ಹೊಲೆಗಂಜಲಾಗದು.
ಪತಿ ಭಕ್ತನಾದಡೆ ಕುಲಕಂಜಲಾಗದು.
ಸತಿ-ಪತಿಯೆಂಬ ಅಂಗಸುಖ ಹಿಂಗಿ
ಲಿಂಗವೆ ಪತಿಯಾದ ಬಳಿಕ
ಸತಿಗೆ ಪತಿಯುಂಟೆ?
ಪತಿಗೆ ಸತಿಯುಂಟೆ?
ಪಾಲುಂಡು ಮೇಲುಂಬರೇ ಗುಹೇಶ್ವರ ?!

೯೦.
ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ
ಘನವೇನೋ ?
ಕಾಮ-ಕ್ರೋಧ-ಲೋಭ-ಮೋಹ-
ಮದ-ಮತ್ಸರವಿಷಯವನತಿಗಳೆದಲ್ಲಿ
ಫಲವೇನೋ ?
ಇವೆಲ್ಲವ ಕೊಂದ ಪಾಪ ನಿಮ್ಮ ತಾಗುವುದು,
ಗುಹೇಶ್ವರ.

೯೧.
ಲಿಂಗ ಒಳಗೋ ಹೊಱಗೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಎಡನೋ ಬಲನೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಮುಂದೋ ಹಿಂದೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಸ್ಥೂಲವೋ ಸೂಕ್ಷ್ಮವೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಪ್ರಾಣವೋ, ಪ್ರಾಣ ಲಿಂಗವೋ ?
ಬಲ್ಲಡೆ ನೀವು ಹೇಳಿರೇ ? ಗುಹೇಶ್ವರ.

೯೨.
ತನುವಿಂಗೆ ತನುವಾಗಿ
ಮನಕ್ಕೆ ಮನವಾಗಿ
ಜೀವಕ್ಕೆ ಜೀವವಾಗಿ ಇದ್ದುದನಾರು ಬಲ್ಲರೋ ?!
ಅದು ದೂರವೆಂದು
ಸಮೀಪವೆಂದು
ಮಹಂತ ಗುಹೇಶ್ವರನೊಳಗೆಂದು
ಹೊಱಗೆಂದು
ಬಱುಸೂಱೆವೋದರು !

ಪ್ರಸಾದಿ ಸ್ಥಲ

೯೩.
ಲಿಂಗಾರ್ಚನೆಯಿಲ್ಲದ ಮುನ್ನ
ಸಿಂಗಿಯಾನಾರೋಗಿಸಿದಿರಿ
ಸಂಜೆ ಸಮಾಧಿಗಳಿಲ್ಲದ ಮುನ್ನ ಉಂಡಿರಿ ಚೆನ್ನನ ಮನೆಯಲ್ಲಿ
ಚಿತ್ರಗುಪ್ತರಱಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ
ಬೈಚಿಟ್ಟಿರಿ ಕೈಲಾಸವ ನಿಮ್ಮ ಚಿಕ್ಕುಟಾಧಾರದಲ್ಲಿ
ಈರೇಳು ಭುವನಂಗಳೆಲ್ಲವೂ ನಿಮ್ಮ ರೋಮಕೂಪದಲ್ಲಡಗಿದವು
ಪ್ರಾಣಾಪಾನ ವ್ಯಾನೋದಾನ ಸಮಾನರಹಿತ ಗುಹೇಶ್ವರ.

೯೪.
ತ್ರಿವಿಧ ನಿತ್ಯವ
ತ್ರಿವಿಧ ಅನಿತ್ಯವ ಬಲ್ಲವರಾರೋ ?
ತ್ರಿವಿಧಕ್ಕೆ ತ್ರಿವಿಧವನಿತ್ತು
ತ್ರಿವಿಧಪ್ರಸಾದದ ಕೊಳಬಲ್ಲಡೆ
ಆತನ ಧೀರನೆಂಬೆ !
ಆತನ
ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆ !

೯೫.
ಬೇಡದ ಮುನ್ನ ಮಾಡಬಲ್ಲಡೆ ಭಕ್ತ
ಬೇಡುವನೆ ಲಿಂಗಜಂಗಮ ?
ಬೇಡುವರಿಗೆಯೂ
ಬೇಡಿಸಿಕೊಂಬವರಿಗೆಯೂ
ಪ್ರಸಾದವಿಲ್ಲ ಗುಹೇಶ್ವರ.

೯೬.
ಒಳಗ ತೊಳೆಯಲಱಿಯದೇ
ಹೊಱಗ ತೊಳೆದು ಕುಡಿಯುತ್ತಿದ್ದರಯ್ಯ !
ಪಾದೋದಕ-ಪ್ರಸಾದವನಱಿಯದೆ
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರ.

೯೭.
ಮಾಡಿದ ಓಗರ ಮಾಡಿದಂತೆ ಇದ್ದಿತು
ನೀಡುವ ಕೈಗಳೆಡೆಯಾಡುತ್ತಿದ್ದವು.
ಲಿಂಗಕ್ಕರ್ಪಿತವ ಮಾಡಿದೆನೆಂಬರು.
ಒಂದಱಲೊಂದು ಸವೆಯದು ನೋಡಾ
ಲಿಂಗನಾರೋಗಣೆಯ ಮಾಡಿದನೆಂಬರು
ತಾವುಂಡು ನಿಮ್ಮ ದೂಱುವರು ಗುಹೇಶ್ವರ.

೯೮.
ತನ್ನ ಮುಟ್ಟಿ ನೀಡಿದುದೇ ಪ್ರಸಾದ.
ತನ್ನ ಮುಟ್ಟದೇ ನೀಡಿದುದೇ ಓಗರ.
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ.
ಇದುಕಾರಣ-
ಇಂತಪ್ಪ ಭೃತ್ಯಾಚಾರಿಗಲ್ಲದೆ ಪ್ರಸಾದವಿಲ್ಲ ಗುಹೇಶ್ವರ.

೯೯.
ಆಧಿಯಿಲ್ಲದಿದ್ದಡೆ
ಲಿಂಗಪ್ರಸಾದಿಯೆಂಬೆ !
ವ್ಯಾಧಿಯಿಲ್ಲದಿದ್ದಡೆ
ಜಂಗಮಪ್ರಸಾದಿಯೆಂಬೆ !
ಲೌಕಿಕ ಸೋಂಕದಿದ್ದಡೆ
ಸಮಯಪ್ರಸಾದಿಯೆಂಬೆ !
ಇಂತೀ ತ್ರಿವಿಧಪ್ರಸಾದಸಂಬಂಧಿಯಾದಾತನ
ಅಚ್ಚಪ್ರಸಾದಿಯೆಂಬೆನು ಕಾಣಾ ಗುಹೇಶ್ವರ.

೧೦೦.
ಪದವನರ್ಪಿಸಬಹುದಲ್ಲದೆ
ಪದಾರ್ಥವನರ್ಪಿಸಬಾರದು !
ಓಗರವನರ್ಪಿಸಬಹುದಲ್ಲದೆ
ಪ್ರಸಾದವನರ್ಪಿಸಬಾರದು !
ಗುಹೇಶ್ವರ, ನಿಮ್ಮ ಶರಣರು
ಹಿಂದ ನೋಡಿ ಮುಂದನರ್ಪಿಸಿದರು !

ಪ್ರಾಣಲಿಂಗಿ ಸ್ಥಲ

೧೦೧.
ಪ್ರಣವಮಂತ್ರವ ಕರ್ಣದಲಿ ಹೇಳಿ
ಶ್ರೀಗುರು ಶಿಷ್ಯನ ಅಂಗದ ಮೇಲೆ
ಲಿಂಗಪ್ರತಿಷ್ಠೆಯ ಮಾಡಿದ ಬಳಿಕ
ಪ್ರಾಣದಲಿ ಲಿಂಗವಿಪ್ಪುದೆಂಬ
ವ್ರತಗೇಡಿಗಳ ಮಾತ ಕೇಳಲಾಗದು.
ಒಳಗಿಪ್ಪನೇ ಲಿಂಗದೇವನು
ಮಲ-ಮೂತ್ರ-ಮಾಂಸದ ಹೇಸಿಕೆಯೊಳಗೆ ?
ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೇ ?
ಆ ಪ್ರಾಣವ ತಂದು
ತನ್ನ ಇಷ್ಟಲಿಂಗದಲ್ಲಿರಿಸಿ ನೆರೆಯ ಬಲ್ಲಡೆ
ಆತನೆ ಪ್ರಾಣಲಿಂಗಸಂಬಂಧಿ !
ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?

೧೦೨.
ಕದಳಿಯ ಬನವ ಹೊಕ್ಕು
ಹೊಲಬ ತಿಳಿಯದನ್ನಕ್ಕ,
ಬಯಲ ಗಾಳಿಯ ಹಿಡಿದು
ಘಟ್ಟಿ ಮಾಡದನ್ನಕ್ಕ,
ಬಱಿದೆ ಬಹುದೇ ಶಿವಜ್ಞಾನ ?
ಷಡುವರ್ಗವಳಿಯದನ್ನಕ್ಕ
ಅಷ್ಟಮದವಳಿಯದನ್ನಕ್ಕ
ಬಱಿದೆ ಬಹುದೇ ಶಿವಸಂಪದ ?
ಮದಮತ್ಸರವ ಮಾಡಲಿಲ್ಲ !
ಹೊದಕುಳಿಗೊಳಲಿಲ್ಲ
ಗುಹೇಶ್ವರಲಿಂಗ ಕಲ್ಪಿತದೊಳಗಲ್ಲ !

೧೦೩.
ಶಬ್ದ ಸ್ಪರ್ಶ ರೂಪ ರಸ ಗಂಧ
ಪಂಚೇಂದ್ರಿಯ ಸಪ್ತಧಾತು ಅಷ್ಟಮದದಿಂದ
ಮುಂದುಗಾಣದವರು ನೀವು ಕೇಳಿರೇ !
ಲಿಂಗವಾರ್ತೆಯ ವಚನರಚನೆಯ
ಮಾತನಾಡುವಿರಯ್ಯ !
ಸಂಸಾರದ ಮುಚ್ಚು ಬಿಡದನ್ನಕ್ಕರ
ಸೂಕ್ಷ್ಮಶಿವಪಥವು ಸಾಧ್ಯವಾಗದು.
ಗುಹೇಶ್ವರಲಿಂಗದಲಿ
ವಾಕು ಪಾಕವಾದಡೇನು ?
ಮನ ಪಾಕವಾಗದನ್ನಕ್ಕರ ?!

೧೦೪.
ಮರ್ತ್ಯಲೋಕದ ಮಾನವರು
ದೇಗುಲದೊಳಗೊಂದು ದೇವರ ಮಾಡಿದಡೆ
ಆನು ಬೆಱಗಾದೆನಯ್ಯ !
ನಿಚ್ಚಕ್ಕೆ ನಿಚ್ಚ ಅರ್ಚನೆಪೂಜನೆಯ ಮಾಡಿಸಿ
ಭೋಗವ ಮಾಡುವರ ಕಂಡು ನಾನು ಬೆಱಗಾದೆನು
ಗುಹೇಶ್ವರ,
ನಿಮ್ಮ ಶರಣರು ಹಿಂದೆ ಲಿಂಗವನಿರಿಸಿ ಹೋದರು.

೧೦೫.
ಭಾವದಲೊಬ್ಬ ದೇವರ ಮಾಡಿ
ಮನದಲೊಂದು ಭಕ್ತಿಯ ಮಾಡಿ
ಕಾಯದ ಕೈಯಲ್ಲಿ ಕಾರ್ಯವುಂಟೆ ?
ವಾಯಕ್ಕೆ ಬಳಲುವರು ನೋಡಾ !
ಎತ್ತನೇಱಿ ಎತ್ತನಱಸುವರು ಎತ್ತ ಹೋದರೈ
ಗುಹೇಶ್ವರ ?

೧೦೬.
ಹೊಟ್ಟೆಯ ಮೇಲೆ
ಕಟ್ಟೋಗರದ ಮೊಟ್ಟೆಯ ಕಟ್ಟಿದರೇನು?
ಹಸಿವು ಹೋಹುದೇ ?
ಅಂಗದ ಮೇಲೆ ಲಿಂಗ ಸ್ವಾಯತವಾದರೇನು ?
ಭಕ್ತನಾಗಬಲ್ಲನೆ ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ
ಆ ಕಲ್ಲು ಲಿಂಗವೆ ?
ಆ ಮೆಳೆ ಭಕ್ತನೆ ?
ಇಟ್ಟಾತ ಗುರುವೆ ?
ಇಂತಪ್ಪನವರ ಕಂಡರೆ ನಾಚುವೆನಯ್ಯ ಗುಹೇಶ್ವರ.

೧೦೭.
ಇಷ್ಟಲಿಂಗವನು ಪ್ರಾಣಲಿಂಗವೆಂಬ
ಕಷ್ಟವೆಲ್ಲಿಯದೋ ?
ಇಷ್ಟಲಿಂಗ ಹೋದರೆ ಪ್ರಾಣಲಿಂಗ ಹೋಗದು ನೋಡಾ !
ಇಷ್ಟಲಿಂಗ-ಪ್ರಾಣಲಿಂಗವೆಂಬ ಬೇಧವನು
ಗುಹೇಶ್ವರ, ನಿಮ್ಮ ಶರಣ ಬಲ್ಲ.

೧೦೮.
ವ್ರತಗೇಡಿ, ವ್ರತಗೇಡಿ ಎಂಬವ ತಾನೆ ವ್ರತಗೇಡಿ,
ವ್ರತಗೆಡಲಿಕೇನು ಹಾಲಂಬಿಲವೆ ?
ವ್ರತಗೆಟ್ಟ ಬಳಿಕ ಘಟ ಉಳಿಯಬಲ್ಲುದೇ ?
ಕಾಯದೊಳಗೆ ಜೀವ ಉಳ್ಳನ್ನಕ್ಕರ
ಅದೇ ಪ್ರಾಣಲಿಂಗವು ಕಾಣಾ ಗುಹೇಶ್ವರ.

೧೦೯.
ಅಂಗದ ಕಳೆಯಲೊಂದು ಲಿಂಗವ ಕಂಡೆ
ಲಿಂಗದ ಕಳೆಯಲೊಂದು ಅಂಗವ ಕಂಡೆ !
ಅಂಗದ ಲಿಂಗದ ಸಂದಣಿಯನಱಸಿ ಕಂಡೆ ನೋಡಿರೇ !
ಇಲ್ಲಿ ಐದಾನೆ ಶಿವನು !
ಬಲ್ಲಡೆ ಇರಿಸಿಕೊಳ್ಳಿರೇ ಕಾಯವಳಿಯದ ಮುನ್ನ !!
ನೋಡಬಲ್ಲಡೆ ಗುಹೇಶ್ವರಲಿಂಗಕ್ಕೆ ಬೇರೆ ಠಾವುಂಟೆ ಹೇಳಿರೇ.

೧೧೦.
ಪೂಜಿಸಿ ಕೆಳಯಿಂಕೆ ಇಳುಹಲದೇನೋ ?
ಅನಾಗತ ಪೂಜೆಯ ಮಾಡಲದೇನೋ ?
ದೇಹವೇ ಪಿಂಡಿಗೆ
ಜೀವವೇ ಲಿಂಗ-ಗುಹೇಶ್ವರ.

೧೧೧.
ಅಱಿದಱಿದು ಅಱಿವು ಬಱುದೊಱಿವೋಯಿತ್ತು !
"ಕುಱುಹ[ತೋಱ]ದಡೆಂತೂ ನಂಬರು,
ತೆಱಹಿಲ್ಲದ ಘನವ ನೆನೆದು
ಗುರುಶರಣೆಂಬುದಲ್ಲದೆ ಮಱಹು ಬಂದೀತೆಂ"ದು
ಗುರು ಕುಱುಹ ತೋಱಿದನಲ್ಲದೆ
ಬಲ್ಲಡೆ ಗುಹೇಶ್ವರಲಿಂಗವು ಹೃದಯದಲೈದಾನೆ.

೧೧೨.
ಉದಕ ಮೂರುತಿಯಾಗಿ
ಉದಯವಾಯಿತ್ತು ಪಿಂಡಿಗೆಯಲ್ಲಿ
ಮೂಲ ಸ್ಥಾನ ಸ್ಥಾಪ್ಯವಾಯಿತ್ತು
ಸ್ವದೇಹಶಿವಪುರದಲ್ಲಿ !
ವಾಯು ಪೂಜಾರಿಯಾಗಿ
ಪರಿಮಳದಿಂಡೆದಂಡೆಯ ಕಟ್ಟಿ
ಪೂಜಿಸುತ್ತಿರ್ದುದೋ ನವದ್ವಾರಶಿವಾಲಯದಾದಿಮಧ್ಯಸ್ಥಾನದಲ್ಲಿ
ಗುಹೇಶ್ವರನೆಂಬುದಲ್ಲಿಯೆ ನಿಂದಿತ್ತು.

೧೧೩.
ಕಾಲೇ ಕಂಭಗಳಾದವೆನ್ನ
ದೇಹವೇ ದೇಗುಲವಾದುವಯ್ಯ !
ಎನ್ನ ನಾಲಗೆಯೆ ಘಂಟೆ
ಶಿರ ಸುವರ್ಣದ ಕಳಸವಿದೇನಯ್ಯ !
ಸ್ವರವೇ ಲಿಂಗಕ್ಕೆ ಸಿಂಹಾಸನವಾಗಿರ್ದುದು !
ಗುಹೇಶ್ವರ,
ನಿಮ್ಮ ಪ್ರಾಣಲಿಂಗಪ್ರತಿಷ್ಠೆ ಪಲ್ಲಟವಾಗದಂತಿದ್ದೆನಯ್ಯ.

೧೧೪.
ಪ್ರಾಣಲಿಂಗಕ್ಕೆ ಕಾಯವೇ ಸೆಜ್ಜೆ
ಆಕಾಶಗಂಗೆಯಲ್ಲಿ ಮಜ್ಜನ
ಹೂವಿಲ್ಲದ ಪರಿಮಳದ ಪೂಜೆ
ಹೃದಯಕಮಲದಲ್ಲಿ ಶಿವಶಿವಾ ಎಂಬ ಶಬ್ದ
ಇದು ಅದ್ವೈತ ಕಾಣಾ ಗುಹೇಶ್ವರ.

೧೧೫.
ಹೊತ್ತಾರೆ ಪೂಜಿಸಲುಬೇಡ ಕಂಡಾ !
ಬೈಗೆ ಪೂಜಿಸಲುಬೇಡ ಕಂಡಾ !
ಇರುಳುವನೂ ಹಗಲುವನೂ ಕಳೆದು ಪೂಜಿಸಬೇಕು ಕಂಡಾ !
ಇಂತಪ್ಪ ಪೂಜೆಯ ಪೂಜಿಸುವರ
ಎನಗೆ ತೋಱಯ್ಯ ಗುಹೇಶ್ವರ.

೧೧೬.
ಅಂಗದಲ್ಲಿ ಮಾಡುವ ಸುಖವದು
ಲಿಂಗಕ್ಕೆ ಭೂಷಣವಾಯಿತ್ತು.
ಕಾಡುಗಿಚ್ಚಿನ ಕೈಯಲ್ಲಿ
ಕರಡವ ಕೊಯ್ಸುವಂತೆ-
ಹಿಂದೆ ಮೆದೆಯಿಲ್ಲ !
ಮುಂದೆ ಹುಲ್ಲಿಲ್ಲ !!
ಅಂಗ-ಲಿಂಗವೆಂಬನ್ನಕ್ಕರ ಫಲದಾಯಕ,
ಲಿಂಗೈಕ್ಯವದು ಬೇಱೆ ಗುಹೇಶ್ವರ.

೧೧೭.
ಎನ್ನ ಮನದ ಕೊನೆಯ ಮೊನೆಯ ಮೇಲೆ
ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವ !
ಆತನ ಕಂಡು ಬೆಱಗಾದೆನವ್ವ-
ಎನ್ನಂತರಂಗದ ಆತುಮನೊಳಗೆ
ಅನಿಮಿಷನಿಜೈಕ್ಯ ಗುಹೇಶ್ವರನ ಕಂಡು !

೧೧೮.
ಮನದ ಸುಖವ ಕಂಗಳಿಗೆ ತಂದರೆ
ಕಂಗಳ ಸುಖವ ಮನಕ್ಕೆ ತಂದರೆ
ನಾಚಿತ್ತು, ಮನ ನಾಚಿತ್ತು !
ಸ್ಥಾನಪಲ್ಲಟವಾದಡೆ
ವ್ರತಕ್ಕೆ ಭಂಗ ಗುಹೇಶ್ವರ.

೧೧೯.
ಎನಗೊಂದು ಲಿಂಗ
ನಿನಗೊಂದು ಲಿಂಗ
ಮನೆಗೊಂದು ಲಿಂಗವಾಯಿತ್ತು !
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
ಉಳಿ ಮುಟ್ಟಿದ ಲಿಂಗವ
ಮನ ಮುಟ್ಟಬಲ್ಲುದೇ ಗುಹೇಶ್ವರ ?

೧೨೦.
ಅರಳಿಯ ಮರದ ಮೇಲೆ
ಒಂದು ಹಂಸೆ ಗೂಡನಿಕ್ಕಿತ್ತ ಕಂಡೆ !
ಆ ಗೂಡಿನೊಳಗೊಬ್ಬ ಹೆಂಗೂಸು
ಉಯ್ಯಾಲೆಯಾಡುತ್ತಿದ್ದಳು.
ಉಯ್ಯಾಲೆ ಹಱಿದು
ಹೆಂಗೂಸು ನೆಲಕ್ಕೆ ಬಿದ್ದು ಸತ್ತಡೆ
ಪ್ರಾಣಲಿಂಗವ ಕಾಣಬಹುದು ಕಾಣಾ ಗುಹೇಶ್ವರ.

೧೨೧.
ಪೃಥ್ವಿಗೆ ಹುಟ್ಟಿದ ಶಿಲೆ
ಕಲ್ಲುಕುಟಿಕಂಗೆ ಹುಟ್ಟಿದ ಮೂರುತಿ
ಮಂತ್ರಕ್ಕೆ ಲಿಂಗವಾಯಿತ್ತಲ್ಲಾ !
ಆ ಮೂವರಿಗೆ ಹುಟ್ಟಿದ ಮಗನ
ಲಿಂಗವೆಂದು ಕೈವಿಡಿವ
ಅಚ್ಚವ್ರತಗೇಡಿಗಳನೇನೆಂಬೆ ಗುಹೇಶ್ವರ.

೧೨೨.
ಮೂಱು ಪುರದ ಹೆಬ್ಬಾಗಿಲೊಳಗೊಂದು
ಕೋಡಗ ಕಟ್ಟಿದುದ ಕಂಡೆ !
ಅದು ಕಂಡಕಂಡವರನೇಡಿಸುತ್ತಿದ್ದಿತು ನೋಡಾ !
ಪುರದರಸು ತನ್ನ ಪಾಯದಳ ಸಹಿತ ಬಂದರೆ
ಒಂದೇ ಬಾರಿ ಮುಱಿದು ನುಂಗಿತ್ತ ಕಂಡೆ !
ಆ ಕೋಡಗಕ್ಕೆ ಒಡಲುಂಟು, ತಲೆಯಿಲ್ಲ ;
ಕಾಲುಂಟು, ಹೆಜ್ಜೆಯಿಲ್ಲ ;
ಕೈಯುಂಟು, ಬೆರಳಿಲ್ಲ ;
ಇದು ಕರಚೋದ್ಯ ನೋಡಾ !
ತನ್ನ ಕರೆದವರ ಮುನ್ನವೇ ತಾ ಕರೆವುದು ಆ ಕೋಡಗ
ತನ್ನ ಬಸಿಱಲ್ಲಿ ಬಂದ ಮದಗಜದ ನೆತ್ತಿಯನೇಱಿ
ಗಾಳಿಯ ಧೂಳಿಯ ಕೂಡಿ ಓಲಾಡುತ್ತಿಹುದ ಕಂಡೆ !
ವಾಯದ ಗಗನದ ಮೇಲೆ
ತನ್ನ ಕಾಯವ ಪುಟನೆಗೆದು ತೋಱುತ್ತಿಹುದ ಕಂಡೆ !
ಹತ್ತು ಮುಖದ ಸರ್ಪನ
ತನ್ನ ಹೇಳಿಗೆಯೊಳಗಿಕ್ಕಿ ಆಡಿಸುತ್ತಿಹುದ ಕಂಡೆ !
ಐವರು ಕೊಡಗೂಸುಗಳ ಕಣ್ಣಿಂಗೆ
ಕಣ್ಣಡವ ಕಟ್ಟುತ್ತಿಹುದ ಕಂಡೆ !
ಹತ್ತು ಕೇರಿಗಳೊಳಗೆ ಸುಳಿವ ಹರಿಯ ನೆತ್ತಿಯ ಮೆಟ್ಟಿ
ಹುಬ್ಬನಾಡಿಸುವುದ ಕಂಡೆ !
ಆ ಕೋಡಗದ ಕೈಯಲ್ಲಿ ಮಾಣಿಕ್ಯವ ಕೊಟ್ಟಡೆ
ನೋಡುತ್ತ ನೋಡುತ್ತ ಬೆಱಗಾದುದು ಕಂಡೆ !
ಕೂಡಲಿಲ್ಲ ಕಳೆಯಲಿಲ್ಲ ! ಗುಹೇಶ್ವರನ ನಿಲುವು
ಪ್ರಾಣಲಿಂಗ ಸಂಬಂಧವಿಲ್ಲದವರಿಗೆ ಕಾಣಬಾರದು.

೧೨೩.
ಕಲ್ಲ ಮನೆಯ ಮಾಡಿ
ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ
ದೇವರೆತ್ತ ಹೋದರೋ?
ಲಿಂಗಪ್ರತಿಷ್ಠೆಯ ಮಾಡಿದವಂಗೆ
ನಾಯಕನರಕ ಗುಹೇಶ್ವರ.

೧೨೪.
ದೇಹವೇ ದೇವಾಲಯವಾಗಿದ್ದ ಮೇಲೆ
ಮತ್ತೆ ಬೇರೆ ದೇಗುಲಕ್ಕೆ ಎಡೆಯಾಡುವರಿಗೆ
ಏನ ಹೇಳುವೆನಯ್ಯ ?
ಗುಹೇಶ್ವರ, ನೀ ಕಲ್ಲಾದೆಡೆ ನಾನೇನಪ್ಪೆನು ?!

೧೨೫.
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದರಲ್ಲಾ !
ಅಂಗಸಂಗಿಗಳೆಲ್ಲಾ ಮಹಾಘನವನಱಿಯದೆ ನಿಂದರೊ !
ಹುಸಿಯನೆ ಕೊಯ್ದು
ಹುಸಿಯನೆ ಪೂಜಿಸಿ
ಗಸಣಿಗೊಳಗಾದರು ಗುಹೇಶ್ವರ.

ಅಕ್ಕನ ವಚನಗಳು - 301 ರಿಂದ 368 ರವರೆಗೆ

೩೦೧.
ಕಾಮನ ತಲೆಯ ಕೊರೆದು, ಕಾಲನ ಕಣ್ಣ ಕಳೆದು
ಸೋಮಸೂರ್ಯರ ಹರಿದು ಹುಡಿಮಾಡಿ ತಿಂಬವಳಿಂಗೆ
ನಾಮವನಿಡಬಲ್ಲವರಾರು ಹೇಳಿರೆ!
ನೀ ಮದುವಳಿಗನಾಗಿ
ನಾ ಮದುವಳಿಗಿತಿಯಾಗಿ
ಯವನ(=ಆನಲನ?) ಕೂಡುವ ಮರುತನಂತೆ (?) ನೋಡಾ,
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

೩೦೨.
ಬಸವನ ಭಕ್ತಿ ಕೊಟ್ಟಣದ ಮನೆ
ಸಿರಿಯಾಳನ ಭಕ್ತಿ ಕಸಬಗೇರಿ
ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ
ಉಳಿದಾದ[+ಟ}ಮಟ ಉದಾಸೀನ ದಾಸೋಹ
ಮಾಡುವವರ ದೈನ್ಯವೆಂಬ ಭೂತ ಸೋಂಕಿತು
ಮಣ್ಣಿನ ಮನೆಯ ಕಟ್ಟಿ
ಮಾಯಾಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ
ಮಾಡುವ ಮಾಟ
ಭಕ್ತನಲ್ಲಿ ಉಂಡು ಉದ್ದಂಡ ವೃತ್ತಿಯಲ್ಲಿ
ನಡೆದವರು ಶಿವನಲ್ಲ
ಇವರು ದೇವಲೋಕ ಮರ್ತ್ಯಲೋಕಕ್ಕೆ ಹೊರಗು
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ,
ನನ್ನ ಭಕ್ತಿ ನಿನ್ನೊಳಗೈಕ್ಯವಾಯಿತಾಗಿ
ನಿರ್ವಯಲಾದೆ ಕಾಣಾ!

೩೦೩.
ಅನ್ನವ ನೀಡುವವರಿಗೆ ಧಾನ್ಯವೆ [ಶಿವ]ಲೋಕ
ಅರ್ಥವ ಕೊಡುವವರಿಂಗೆ ಪಾಷಾಣವೆ [ಶಿವ]ಲೋಕ
ಹೆಣ್ಣು-ಹೊನ್ನು-ಮಣ್ಣು ಮೂರನೂ
ಕಣ್ಣಿನಲ್ಲಿ ನೋಡಿ, ಕಿವಿಯಲಿ ಕೇಳಿ
ಕೈ[ಯಲಿ] ಮುಟ್ಟಿ ಮಾಡುವ ಭಕ್ತಿ
ಸಣ್ಣವರ ಸಮಾರಾಧನೆಯಾಯಿತು
ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

೩೦೪.
ನಿತ್ಯ ತೃಪ್ತಂಗೆ ನೈವೇದ್ಯದ ಮಜ್ಜನದ ಹಂಗೇತಕ್ಕೆ?
ಸುರಾಳ-ನಿರಾಳಂಗೆ ಮಜ್ಜನದ ಹಂಗೇತಕ್ಕೆ?
ಸ್ವಯಂಜ್ಯೋತಿರ್ಮಯಂಗೆ ದೀಪಾರಾಧನೆಯ ಹಂಗೇತಕ್ಕೆ?
ಸುವಾಸನಸೂಕ್ಷ್ಮಗಂಧಕರ್ಪೂರಗೌರಂಗೆ
ಪುಷ್ಪದ ಹಂಗೇತಕ್ಕೆ?
ಮಾಟದಲಿ ಮನನಂಬುಗೆ ಇಲ್ಲದ
ಅಹಂಕಾರಕೀಡಾದ, ಭಕ್ತಿಯೆಂಬ ಪ್ರಸಾರವನಿಕ್ಕಿ
ಹೊಲೆ ಹದಿನೆಂಟು ಜನ್ಮವ ಹೊರೆವುದರಿಂದ
ಅಂಗೈಯಲೊರಿಸಿ ಮುಕ್ತಿಯ
ಮೂಲ ಶಿಖಿರಂಧ್ರದ (?) ಕಾಮನ ಸುಟ್ಟು
ಶುದ್ಧ ಸ್ಪಟಿಕ ಸ್ವಯಂಜ್ಯೋತಿಯನು
ಸುನ್ನಾಳ[=ಸುಷುಮ್ನಾನಾಳ?]ದಿಂದ
ಹರಿಕ್ಷಾಯ[=ಹಕ್ಷ?]ವೆಂಬೆರಡಕ್ಷರವ
ಸ್ವಯಾನುಭಾವ ಭಕ್ತಿನಿರ್ವಾಣವಾದ[+ವರ]ನೆನಗೊಮ್ಮೆ
ತೋರಿದೆ ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

೩೦೫.
ಮಾಟ ಮದುವೆಯ ಮನೆ
ದಾನ-ಧರ್ಮ ಸಂತೆಯ ಪಸಾರ
ಸಾಜ ಸಾಜೇಶ್ವರಿ ಸೂಳೆಗೇರಿಯ ಸೊಬಗು
ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ
ಭಕ್ತಿಯೆಂ[ಬುದು?] ಬಾಜಗಾರರಾಟ
ಬಸವಣಗೆ ತರ ನಾನರಿಯದೆ ಹುಟ್ಟಿದೆ (?)
ಹುಟ್ಟಿ ಹುಸಿಗೀಡಾದೆ
ಹುಸಿ ವಿಷಯದೊಳಡಗಿತ್ತು
ವಿಷಯ ಮಸಿಮಣ್ಣಾಯಿತ್ತು
ನಿನ್ನ ಗಸಣೆಯನೊಲ್ಲೆ
ಹೋಗಾ ಚೆನ್ನಮಲ್ಲಿಕಾರ್ಜುನ

೩೦೬.
ಚಿನ್ನದ ಸಂಕೋಲೆಯಾದಡೇನು, ಬಂಧನವಲ್ಲವೆ?
ಮುತ್ತಿನ ಬಲೆಯಾದಡೇನು, ತೊಡರಲ್ಲವೆ?
ನಚ್ಚುಮಚ್ಚಿನ ಭಕ್ತಿಯಲ್ಲಿ ಸಿಕ್ಕಿಕೊಂಡಿದ್ದರೆ
ಭವ ಹಿಂಗುವುದೇ ಚೆನ್ನಮಲ್ಲಿಕಾರ್ಜುನ?

೩೦೭.
ಕುಲಗಿರಿ ಶಿಖರದ ಮೇಲೆ ಬಾಳೆ [ಬೆಳೆವುದಯ್ಯ] ಎಂದಡೆ
ಬಾಳೆ [ಬೆಳೆವುದಯ್ಯ] ಎನ್ನಬೇಕು
ಓಲೆಕಲ[=ಓಲೆಕಲ್ಲ] ನುಗ್ಗುಕುಟ್ಟಿ ಮೆಲಬಹುದಯ್ಯ ಎಂದಡೆ
ಅದು ಅತ್ಯಂತ ಮೃದು
ಮೆಲಬಹುದಯ್ಯ ಎನಬೇಕು
ಸಿಕ್ಕಿದ ಠಾವಿನಲ್ಲಿ ಉಚಿತವೆ ನುಡಿವುದೆ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ,
ಮರ್ತ್ಯಕ್ಕೆ ಬಂದುದಕ್ಕಿದೇ ಗೆಲುವು

೩೦೮.
ಅಯ್ಯ ವಿರಕ್ತರೆಂದರೇನೋ?
ವಿರಕ್ತಿಯ ಮಾತಾಡುವರಲ್ಲದೆ,
ವಿರಕ್ತಿ ಎಲ್ಲರಿಗೆಲ್ಲಿಯದೋ?
ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ
ಬಾಯೊಳಗಣ ಮಾತು
ಪುಣ್ಯವಿಲ್ಲ; ಪಾಪವಿಲ್ಲ;
ಕರ್ಮವಿಲ್ಲ; ಧರ್ಮವಿಲ್ಲ,
ಸತ್ಯವಿಲ್ಲ, ಅಸತ್ಯವಿಲ್ಲವೆಂದು ಮಾತನಾಡುತ್ತಿಪ್ಪರು
ಅದೆಂತೆಂದಡೆ-
ಕಂಗಳ ನೋಟ ಹಿಂಗದನ್ನಕ
ಕೈಯೊಳಗಣ ಬೆರಟು ನಿಲ್ಲದನ್ನಕ
ಹೃದಯದ ಕಾಮ ಉಡುಗದೆನ್ನಕ
ವಿರಕ್ತಿಕೆ ಎಲ್ಲರಿಗೆಲ್ಲಿಯದೋ?
ಬಲ್ಲ ವಿರಕ್ತನ ಹೃದಯವು ಕಾಡೊಳಗಣ್ಣ
ಗುಂಡಿನಲ್ಲಿ ಮಾಣಿಕ್ಯದ ಪ್ರಭೆಯ ಕಂಡವರಾರೋ
[ಲಿಂಗವ] ಕಂಡಾತಂಗೆ
ಕಂಗಳಲ್ಲಿ ನೋಡಿದ ಸರ್ವವಸ್ತುಗಳು ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ಕರ್ಣದಲ್ಲಿ ಕೇಳಿದಾಗಮಪುರಾಣಂಗಳು ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ನಾಸಿಕದಲ್ಲಿ ಸೋಂಕಿದ ಪರಿಮಳದ್ರವ್ಯಂಗಳು ಆ ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ಜಿಹ್ವೆಯಲ್ಲಿ ರುಚಿಸಿದ ರುಚಿಪದಾರ್ಥಂಗಳು ಆ ಲಿಂಗಕರ್ಪಿತ
ಅದೆಂತೆಂದಡೆ-
ಅಂಗವು-ಲಿಂಗವು ಏಕೀಭವಿಸಿದಡೆ
ಅವಂಗೆ ಪುಣ್ಯವಿಲ್ಲ ಪಾಪವಿಲ್ಲ
ಕರ್ಮವಿಲ್ಲ ಧರ್ಮವಿಲ್ಲ
ಅದೆಂತೆಂದಡೆ-
ಬಂದುದ ಲಿಂಗಕ್ಕೆ ಕೊಟ್ಟನಾಗಿ, ಬಾರದುದ ಬಯಸನಾಗಿ
ಆಂಗನೆಯರು ಬಂದು ಕಾಮಿತಾರ್ಥದಿಂದ ತನ್ನನಪ್ಪಿದಡೆ
ತಾ ಮಹಾಲಿಂಗವನಪ್ಪುವನಾಗಿ
ಅವಂಗೆ ಮುಖ ಬೇರಲ್ಲದೆ ಆತ್ಮನೆಲ್ಲ ಒಂದೆ
ಅದಕ್ಕೆ ಜಗವು ಪಾಪ-ಪುಣ್ಯವೆಂದು ಮಾತಾಡುತ್ತಿಪ್ಪರು
ಅದೆಂತೆಂದಡೆ;
ಶಿವಂಗೆ ತಾಯಿಲ್ಲ
ಭುವನಕ್ಕೆ ಬೆಲೆ[=ನೆಲೆ?]ಯಿಲ್ಲ
ತರು-ಗಿರಿ-ಗಹ್ವರಕ್ಕೆ ಮನೆಯಿಲ್ಲ
ಲಿಂಗವನೊಡಗೂಡಿದ ವಿರಕ್ತಂಗೆ
ಪುಣ್ಯಪಾಪವಿಲ್ಲ ಕಾಣಾ ಚೆನ್ನಮಲ್ಲಿಕಾರ್ಜುನ

೩೦೯.
ವಿರಕ್ತಿ ವಿರಕ್ತಿಯೆಂಬರು
ವಿರಕ್ತಿ ಪರಿಯೆಂತುಂಟು ಹೇಳಿರಯ್ಯ
ಕಟ್ಟದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ?
ಹುಟ್ಟು ಕೆತ್ತುವ ಡೊಂಬನಂತೆ
ಬಿಟ್ಟ ಮಂಡೆಯ ಕೇಶವ ನುಣ್ಣಿಸಿ
ಎಣ್ಣೆಗಂಟ ಹಾಕಿದಡೆ ವಿರಕ್ತನೆ?
ಕಟ್ಟುಹರಿದಿಹ ಪಂಜಿನಂತೆ
ಬಿಟ್ಟ ಮಂಡೆಯ ಕಟ್ಟದಿದ್ದಡೆ ವಿರಕ್ತನೆ?
ಹರ[+ದ?]ನಂತೆ ಹೇಸಿಯಾಗಿದ್ದರೆ ವಿರಕ್ತನೆ?
ಮೂಗನಂತೆ ಮಾತಾಡದಿದ್ದರೆ ವಿರಕ್ತನೆ?
ಹೊನ್ನು-ಹೆಣ್ಣು-ಮಣ್ಣ ಬಿಟ್ಟು
ಅಡವಿ-ಅರಣ್ಯದಲ್ಲಿದ್ದರೆ ವಿರಕ್ತನೆ?
ಅಲ್ಲ!
ವಿರಕ್ತನಾ ಪರಿಯೆಂತೆಂದಡೆ-
ಒಡಲ ಹುಡಿಗುಟ್ಟಿ
ಮೃಡನೊಳು ಎಡೆದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪ
ಅಲ್ಲದಿರ್ದಡೆ ಮೈಲಾರಿಯ ಮಲ್ಲಿಗೊರವಿತಿಯಲ್ಲವೆ
ಮಲ್ಲಿಕಾರ್ಜುನ?

೩೧೦.
ಎಮ್ಮೆಗೊಂದು ಚಿಂತೆ! ಸಮ್ಮಗಾರನಿಗೊಂದು ಚಿಂತೆ!
ನನಗೆ ನನ್ನ ಚಿಂತೆ! ತನಗೆ ತನ್ನ ಕಾಮದ ಚಿಂತೆ!
ಒಲ್ಲೆ ಹೋಗು, ಸೆರಗ ಬಿಡು ಮರುಳೆ!
ನನಗೆ ಚೆನ್ನಮಲ್ಲಿಕಾಜುನದೇವರು
ಒಲಿವನೋ ಒಲಿಯನೋ ಎಂಬ ಚಿಂತೆ!

೩೧೧.
ನಾಳೆ ಬರುವುದು ನಮಗಿಂದೇ ಬರಲಿ
ಇಂದು ಬರುವುದು ನಮಗೀಗಲೇ ಬರಲಿ
ಆಗೀಗ ಎನ್ನದಿರು ಚೆನ್ನಮಲ್ಲಿಕಾರ್ಜುನ

೩೧೨.
ಕಿಡಿಕಿಡಿ ಕಾರಿದರೆನಗೆ
ಹಸಿವು ತೃಷೆ ಅಡಗಿತ್ತೆಂಬೆ
ಸಮುದ್ರ ಮೇರೆದಪ್ಪಿದರೆ
ಎನಗೆ ಮಜ್ಜನವ ನೀಡಿದರೆಂಬೆ
ಮುಗಿಲು ಹರಿದುಬಿದ್ದರೆ
ಎನಗೆ ಪುಷ್ಪದ ಅರಳೆಂಬೆ
ಶಿರ ಹೋದರೆ ಚೆನ್ನಮಲ್ಲಿಕಾರ್ಜುನದೇವಂಗೆ
ಅರ್ಪಿತವೆಂಬೆ

೩೧೩.
ಹಿಂಡನಗಲಿ ಹಿಡಿವಡೆದ ಕುಂಜರ
ತನ್ನ ವಿಂಧ್ಯವ ನೆನೆವಂತೆ ನೆನೆವೆನೆಯ್ಯ !
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನೆಯ್ಯ !
ಕಂದ, ನೀನಿತ್ತ ಬಾ ಎಂದು
ನೀವು ನಿಮ್ಮಂದವ ತೋರಯ್ಯ ಚೆನ್ನಮಲ್ಲಿಕಾರ್ಜುನ

೩೧೪.
ಉದಯದಲೆದ್ದು ನಿಮ್ಮ ನೆನೆವೆನಯ್ಯ
ನಿಮ್ಮ ಬರವ ಹಾರುತಿರ್ಪೆನಯ್ಯ
ಹಸೆ ಹಂದರವನಿಕ್ಕಿ ನಿಮ್ಮಡಿಗಳಿಗೆಡೆಮಾಡಿಕೊಂಡಿಪ್ಪೆನಯ್ಯಾ
ಚೆನ್ನಮಲ್ಲಿಕಾರ್ಜುನ, ನೀನಾವಾಗ ಬಂದಹೆಯೆಂದು

೩೧೫.
ಗಿರಿಯಲಲ್ಲದೆ
ಹುಲುಮೊರಡಿಯಲಾಡುವುದೇ ನವಿಲು?
[ಕೊಳನನಲ್ಲದೆ] ಕಿರುವಳ್ಳಕೆಳಸುವುದೇ ಹಂಸ?
ಮಾಮರ ತಳಿತಲ್ಲದೇ ಸ್ವರಗೈಯುವುದೇ ಕೋಗಿಲೆ?
ಪರಿಮಳವಿಲ್ಲದ ಪುಷ್ಪಕೆಳಸುವುದೇ ಭ್ರಮರ?
ಎನ್ನ ಜೀವ ಚೆನ್ನಮಲ್ಲಿಕಾರ್ಜುನಗಲ್ಲದೆ
ಅನ್ಯಕೆಳಸುವುದೇ ಎನ್ನ ಮನ ಕೇಳಿರೆ ಕೇಳದಿಯರಿರಾ!

೩೧೬.
ಪಂಚೇಂದ್ರಿಯದ ಉರುವಣೆಯಹುದು
ಮದಭರದ ಜವ್ವನದೊಡಲು ವೃಥಾ ಹೋಯಿತಲ್ಲ
ತುಂಬಿ ಪರಿಮಳವನೆ ಕೊಂಡು ಲಂಬಿಸುವ ತೆರನಂತೆ
ಎನ್ನೆಂದಿಗೆ ಒಳಗೊಂಬೆಯೋ ಅಯ್ಯ ಚೆನ್ನಮಲ್ಲಿಕಾರ್ಜುನಯ್ಯ?

೩೧೭.
ಇಂದ್ರನೀಲದ ಗಿರಿಯನೇರಿಕೊಂಡು
[ಚಂದ್ರಕಾಂತದ ಶಿಲೆಯ] ಮೆಟ್ಟಿಕೊಂಡು
ಕೊಂಬ ಬಾರಿಸುತ, ಹರನೇ
ಎನ್ನ ಕುಂಭಕುಚದ ಮೇಲೆ ನಿಮ್ಮನೆಂದಪ್ಪಿಕೊಂಬೆನಯ್ಯ?
ಅಂಗಭಂಗ-ಮನಭಂಗವಳಿದು
ನಿಮ್ಮನೆಂದಿಂಗೊಮ್ಮೆ ನೆರೆವೆನೋ ಚೆನ್ನಮಲ್ಲಿಕಾರ್ಜುನ?

೩೧೮.
ತಾನು ದಂಡಮಂಡಲಕ್ಕೆ ಹೋದನೆಂದರೆ
ನಾನು ಸುಮ್ಮನಿಹೆನು
ತಾನೆನ್ನ ಕೈಯೊಳಗಿದ್ದು, ಎನ್ನ ಮನದೊಳಗಿದ್ದು
ನುಡಿಯದಿದ್ದರಾನು ಎಂತು ಸೈರಿಸುವೆನವ್ವ?
ನೇಹವೆಂಬ ಕುಂಟಣಿ
ಚೆನ್ನಮಲ್ಲಿಕಾರ್ಜುನನ ನೆರಹದಿರ್ದಡೆ
ನಾನೇವೆ ಸಖಿಯೆ?

೩೧೯.
ಬಂಜೆ ಬೇನೆಯನರಿವಳೇ?
ಬಲದಾಯಿ ಮುದ್ದ ಬಲ್ಲಳೇ?
ನೊಂದ ನೋವ ನೋಯದವರೆತ್ತ ಬಲ್ಲರು?
[ಚೆನ್ನಮಲ್ಲಿಕಾರ್ಜುನನಿರಿದಲಗು] ಒಡಲಲ್ಲಿ ಮುರಿದು
ಹೊರಳುವೆನ್ನಳಲನು ನೀವೆತ್ತ ಬಲ್ಲಿರೇ, ಎಲೆ ತಾಯಿಗಳಿರಾ!

೩೨೦.
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು
ದೇವಾಂಗವನುಟ್ಟು ಪುರುಷ ಬಾರಾ, ಪುಣ್ಯರತ್ನವೇ ನೀ ಬಾ
ನಿನ್ನ ಬರವೆನ್ನಸುವಿನ ಬರವು ಬಾರಯ್ಯ
ಚೆನ್ನಮಲ್ಲಿಕಾರ್ಜುನಯ್ಯ ಬಂದಾನೆಂದು
ಬಟ್ಟೆಗಳ ನೋಡಿ ಬಾಯಾರುತ್ತಿಹೆನು

೩೨೧.
ಕಳವಳದ ಮನವು ತಲೆಕೆಳಗಾದುದವ್ವ
ಸುಳಿದು ಬೀಸುವ ಗಾಳಿ ಉರಿಯಾಯಿತವ್ವ
ಬೆಳದಿಂಗಳು ಬಿಸಿಲಾಯಿತ್ತು ಕೆಳದಿ
ಹೊಳಲ ಸುಂಕಿಗನಂತೆ ತೊಳಲುತಿದ್ದೆನವ್ವ
ತಿಳುಹೌ ಬುದ್ಧಿಯ ಹೇಳಿ ಕರೆತಾರೆಲೆಗವ್ವ
ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವ

೩೨೨.
ಇಂದೆನ್ನ ಮನೆಗೆ ಗಂಡ ಬಂದಹನೆಲೆಗವ್ವ
ನಿಮನಿಮಗೆಲ್ಲ ಶೃಂಗಾರವ ಮಾಡಿಕೊಳ್ಳಿ
ಚೆನ್ನಮಲ್ಲಿಕಾರ್ಜುನನೀಗಳೇ ಬಂದಹನು
ಇದಿರುಗೊಳ್ಳ ಬನ್ನಿರೇ ಅವ್ವಗಳಿರಾ!

೩೨೩.
ಬಂದಹನೆಂದು ಬಟ್ಟೆಯ ನೋಡಿ
ಬಾರದಿದ್ದರೆ ಕರಗಿ ಕೊರಗಿದೆನವ್ವ
ತಡವಾದರೆ ಬಡವಾದೆ ತಾಯೆ
ಚೆನ್ನಮಲ್ಲಿಕಾರ್ಜುನ ಒಂದಿರುಳಗಲಿದರೆ
ತೆಕ್ಕೆ ಸಡಿಲಿದ ಜಕ್ಕವಕ್ಕಿಯಂತಾದೆನವ್ವ

೩೨೪.
ಕೂಡಿ ಕೂಡುವ ಸುಖದಿಂದ
ಒಪ್ಪಚ್ಚಿ ಅಗಲಿ ಕೂಡುವ ಸುಖ ಲೇಸು ಕೆಳದಿ!
ಒಚ್ಚತ ಅಗಲಿರೆ, ಕಾಣದೆ ಇರಲಾರೆ,
ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಅಗಲಿ
ಅಗಲದ ಸುಖವೆಂದಪ್ಪುದೋ!

೩೨೫.
ಉರಿಯ [ಪಳಿಯನೆ] ಉಡಿಸಿ, ಊರಿಂದ ಹೊರಗಿರಿಸಿ
ಕರೆಯಲಟ್ಟಿದ ಸಖಿಯ ನೆರೆದ ನೋಡೆಲೆಗವ್ವ
ತುರ್ಯಾವಸ್ಥೆಯಲ್ಲಿ ತೂಗಿ ತೂಗಿ ನೋಡಿ
ಕರೆ ನೊಂದೆ ನೋಡವ್ವ
ಅವಸ್ಥೆಯಿಂದ ಹಿರಿದು ದುಃಖದಲ್ಲಿ ಬೆಂದೆ
ಕರಿ ಬೆಂದು, ಗಿರಿ ಬೆಂದು
ಹೊನ್ನರಳಿಯ ಮರವನುಳಿದು
ಹಿರಿಯತನಗೆಡಿಸಿ ನೆರೆವೆನು ಚೆನ್ನಮಲ್ಲಿಕಾರ್ಜುನ

೩೨೬.
ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು
ಕನಸಿನಲಿ ಕಳವಳಿಸಿ ಆನು ಬೆರಗಾದೆ
ಆವಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ
ಆಪತ್ತಿಗೆ ಸಖಿಯರ ನಾನಾರುವನು ಕಾಣೆ
ಅರಸಿ ಕಾಣದ ತನುವ, ಬೆರೆಸಿ ಕೂಡದ ಸುಖವ
ಎನಗೆ ನೀ ಕರುಣಿಸು ಚೆನ್ನಮಲ್ಲಿಕಾರ್ಜುನ

೩೨೭.
ಸಾವಿಲ್ಲದ ಸಹಜಂಗೆ, ರೂಹಿಲ್ಲದ ಚೆಲುವಂಗೆ
ಭವವಿಲ್ಲದ ಅಭವಂಗೆ, ಭಯವಿಲ್ಲದ ನಿರ್ಭಯ ಚೆಲುವಂಗೆ
ನಾನೊಲಿದೆನಯ್ಯ ಚೆನ್ನಮಲ್ಲಿಕಾರ್ಜುನ ಗಂಡನೆನಗೆ
ಮಿಕ್ಕಿದ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯ

೩೨೮.
ಅತ್ತೆ ಮಾಯೆ, ಮಾವ ಸಂಸಾರಿ
ಮೂವರು ಮೈದುನರು ಹುಲಿಯಂಥಾ ಅವದಿರು
ನಾಲುವರು ನಗೆವೆಣ್ಣು ಕೇಳು ಕೆಳದಿ
ಐವರು ಭಾವದಿರನೊಯ್ವ ದೈವವಿಲ್ಲ
ಆರು ಪ್ರಜೆಯತ್ತಿಗೆಯರ ಮೀರಲಾರೆನು ತಾಯೆ
ಹೇಳುವಡೆ ಏಳು ಪ್ರಜೆ ತೊತ್ತಿರ ಕಾವಲು
ಕರ್ಮವೆಂಬ ಗಂಡನ ಬಾಯ ಟೊಣೆದು
ಹಾದರವನಾಡುವೆನು ಹರನ ಕೂಡೆ
ಮನವೆಂಬ ಸಖಿಯ ಪ್ರಸಾದದಿಂದ
ಅನುಭಾವವ ಕಲಿತೆನು ಶಿವನೊಡನೆ
ಕರೆ ಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನ
ಸಜ್ಜನದ ಗಂಡನ ಮಾಡಿಕೊಂಬೆನು

೩೨೯.
ಕರಣ ಮೀಸಲಾಗಿ ನಿನಗರ್ಪಿತವಾಯಿತ್ತು
ಆನೊಂದರಿಯೆನಯ್ಯ
ಎನ್ನ ಗತಿ ನೀನಾಗಿ ಎನ್ನ ಮತಿ ನೀನಾಗಿ
ಪ್ರಾಣ ನಿಮಗರ್ಪಿತವಾಯಿತ್ತು
ನೀನಲ್ಲದ ಪೆರತೊಂದ ನೆನೆದೊಡೆ
ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ

೩೩೦.
ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ?
ಮನ ನಿಮ್ಮ ರೂಪಾದ ಬಳಿಕ ನಾನಾರ ನೆನೆವೆ?
ಪ್ರಾಣ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ?
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ನಾನಾರನರಿವೆ?
ಚೆನ್ನಮಲ್ಲಿಕಾರ್ಜುನಯ್ಯ,
[ನಿಮ್ಮಿಂದ ನೀವೆಯಾಗಿ ನಿಮ್ಮನೇ ಮರೆದೆ]

೩೩೧.
ಶಿವಗಣಂಗಳ ಮನೆಯಂಗಳ
ವಾರಣಾಸಿಯೆಂಬುದು ಹುಸಿಯೇ
ಪುರಾತನರ ಮನೆಯ ಅಂಗಳದಲ್ಲಿ
ಅಷ್ಟಾಷಷ್ಟಿತೀರ್ಥಂಗಳು ನೆಲೆಸಿಪ್ಪವಾಗಿ?
ಅದೆಂತೆಂದಡೆ:
ಕೇದಾರಸ್ಯೋದಕೇ ಪೀತೇ
ವಾರಣಸ್ಯಾಂ ಮೃತೇ ಸತಿ
ಶೀಶೈಲ ಶಿಖರೇ ದೃಷ್ಟೇ
ಪುನರ್ಜನ್ಮ ನ ವಿದ್ಯತೇ
ಎಂಬ ಶಬ್ದಕ್ಕಧಿಕವು
ಸುತ್ತಿಬರಲು ಶ್ರೀಶೈಲ, ಕೆಲಬಲದಲ್ಲಿ ಕೇದಾರ
ಅಲ್ಲಿಂದ ಹೊರಗೆ ವಾರಣಾಸಿ
ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ
ಎನ್ನ ದೇವ ಚೆನ್ನಮಲ್ಲಿಕಾರ್ಜುನ
ನಿಮ್ಮ ಭಕ್ತರ ಮನೆಯಂಗಳ ವಾರಣಾಸಿಯಿಂದ
ಗುಂಜಿಯಧಿಕ ನೋಡಾ!

೩೩೨.
ನಿನ್ನ ಅಂಗದಾಚಾರವ ಕಂಡು
ಎನಗೆ ಲಿಂಗಸಂಗವಾಯಿತ್ತಯ್ಯ, ಬಸವಣ್ಣ
ನಿನ್ನ ಮನದ ಸುಜ್ಞಾನವ ಕಂಡು
ಎನಗೆ ಜಂಗಮಸಂಬಂಧವಾಯಿತ್ತಯ್ಯ, ಬಸವಣ್ಣ
ನಿನ್ನ ಸದ್ಭಕ್ತಿಯ ತಿಳಿದು
ಎನಗೆ ನಿಜಸಾಧ್ಯವಾಯಿತ್ತಯ್ಯ, ಬಸವಣ್ಣ
ಚೆನ್ನಮಲ್ಲಿಕಾರ್ಜುನನ ಹೆಸರಿಟ್ಟ
ಗುರು ನೀನಾದ ಕಾರಣ
ನಾನೆಂಬುದಿಲ್ಲವಯ್ಯ ಬಸವಣ್ಣ

೩೩೩.
ಅಯ್ಯ, ನಿಮ್ಮಾನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು!
ಅಯ್ಯ, ನಿಮ್ಮ ಅನುಭಾವಿಗಳು
ಎನ್ನನೊರೆದೊರೆದು, ಕಡಿಕಡಿದು, ಅರೆದರೆದು
ಅನುಮಾಡಿದ ಕಾರಣ
ಎನ್ನ ಮನ ಶುದ್ಧವಾಯಿತ್ತು!
ಎನ್ನ ಸರ್ವಭೋಗಾದಿ ಭೋಗಂಗಳೆಲ್ಲ
ನಿಮ್ಮ ಶರಣರಿಗರ್ಪಿತವಾಗಿ
ಎನ್ನ ಪ್ರಾಣ ಶುದ್ಧವಾಯಿತ್ತು!
ಎನ್ನ ಸರ್ವೇಂದ್ರಿಯಗಳೆಲ್ಲವು
ನಿಮ್ಮ ಶರಣರ ಪ್ರಸಾದವ ಕೊಂಡ ಕಾರಣ
ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯ!
ನಿಮ್ಮ ಶರಣರಿಂತು ಎನ್ನನಾಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರಿಗೆ ತೊಡಿಗೆಯಾದೆನಯ್ಯ ಪ್ರಭುವೆ!

೩೩೪.
ಬಸವಣ್ಣನ ಮನೆಯ ಮಗಳಾಗಿ ಬದುಕಿದೆನಾಗಿ
ತನ್ನ ಕರುಣ ಭಕ್ತಿ ಪ್ರಸಾದವ ಕೊಟ್ಟನು
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕ ಪ್ರಸಾದವ ಕೊಟ್ಟನು
ಪ್ರಭುದೇವರ ತೊತ್ತಿನ ಮಗಳಾದ ಕಾರಣ
ಜ್ಞಾನಪ್ರಸಾದವ ಕೊಟ್ಟನು
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣಪ್ರಸಾದವ ಸಾಧಿಸಿ ಕೊಟ್ಟನು
ಮಡಿವಾಳ ಮಾಚಿ ತಂದೆಯ ಮನೆಯ ಮಗಳಾದ ಕಾರಣ
ನಿರ್ಮಳ ಪ್ರಸಾದವ ನಿಶ್ಚಯಿಸಿ ಕೊಟ್ಟನು
ಇಂತೀ ಅಸಂಖ್ಯಾತಗಣಂಗಳೆಲ್ಲರೂ ತಮ್ಮ ಕರುಣದ ಕಂದನೆಂದು
ತಲೆದಡಹಿ ರಕ್ಷಿಸಿದ ಕಾರಣ
ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ಯೋಗ್ಯಳಾದೆನು

೩೩೫.
ತನು ಮೀಸಲಾಗೆ ಭಾವವಚ್ಚುಗೊಂಡಿಪ್ಪುವುದವ್ವ
ಅಚ್ಚುಗದ ಸ್ನೇಹ, ನಿಚ್ಚಟದ ಮೆಚ್ಚುಗೆ,
ಬೆಚ್ಚು ಬೇರಾಗದ ಭಾವವಾಗೆ
ಚೆನ್ನಮಲ್ಲಿಕಾರ್ಜುನಯ್ಯ ಒಳಗೆ ಗಟ್ಟಿಗೊಂಡನವ್ವ

೩೩೬. ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ
ಎಚ್ಚರೆ ಗರಿದೋರದಂತೆ ನಡಬೇಕು
ಅಪ್ಪಿದರೆ ಅಸ್ಠಿಗಳು ನುಗ್ಗುನುರಿಯಾಗಬೇಕು
ಬೆಚ್ಚರೆ ಬೆಸುಗೆಯರಿಯದಂತಿರಬೇಜು
ಮಚ್ಚು ಒಪ್ಪಿತ್ತು ಚೆನ್ನಮಲ್ಲಿಕಾರ್ಜುನಯ್ಯನ ಸ್ನೇಹ

೩೩೭.
ನಡೆಯದ ನುಡಿಗಡಣ, ಮಾಡದ ಕಲಿತನ
ಚಿತ್ರದ ಸತಿಯ ಶೃಂಗಾರವದೇತಕ್ಕೆ ಪ್ರಯೋಜನ?
ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು,
ಗುಣಿಯಲ್ಲದವಗುಣಿಯ ಸಂಗವದೇತಕ್ಕೆ ಪ್ರಯೋಜನ?
ದಯವಿಲ್ಲದ ಧರ್ಮವು, ಭಯವಿಲ್ಲದ ಭಕ್ತಿಯು,
ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ?
ಎನ್ನ ದೇವ ಚೆನ್ನಮಲ್ಲಿಕಾರ್ಜುನ, ಲಿಂಗೈಕ್ಯವು
ಪ್ರಾಣಗುಣವರಿಯದವರ ಕೂಡೆ ಪ್ರಸಂಗವೇತಕ್ಕೆ?

೩೩೮.
ಪ್ರಾಣ ಹೊಲಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ
ದೇವದಾನವಮಾನವರೆಲ್ಲಾ ಜೋಳವಾಳಿಯಲೈದಾರೆ
ಜಾಣ ಕಲುಕುಟಿಕನನಗಲದೆ ಹೂವನೆ ಕೊಯ್ದು
ಕಲಿಯುಗ ಕರಸ್ಥಲದೇವಪೂಜೆ ಘನ
ಮೇರುವಿನ ಕುದುರೆ ನಲಿದಾಡಲದು
ಭೂತರಾಜ ರಾಜರಂಗಳಿಗಳ[?] ಜಗಳ ಮೇಳಾವ
ಮರುಪತ್ತದ ಮಾತು ನಗೆ ಹಗರಣ
ಕ್ಷೀರಸಾಗರದಲ್ಲಿ ದಾರಿಯಳವಡದಯ್ಯ
ನೀ ಹೇಳಬೇಕು ಭಕ್ತರೆಂತಪ್ಪರೋ
ಪಂಚವರ್ಣದ ಬಣ್ಣ ಸಂಧೆವರದಾಟವು[?]
ಚೆನ್ನಮಲ್ಲಿಕಾರ್ಜುನಯ್ಯ,

ತ್ರಿಭುವನದ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು

೩೩೯.
ಹಸಿದ ಹಸುಳೆಗೆರೆದೆಯಾಹ
ವಿಷವ, ರಾಜಹಂಸೆಗುಕ್ಕು
ರಸವನೀಂಟಿಸಿದೆ, ಮಹೇಶ, ನೋಳ್ಪ ಕಣ್ಣೊಳು
ಕಸವ ಕವಿದೆ, ಕರ್ಣಗಳಿಗೆ
ದಸಿಯ ಬಡಿದೆ; ಕರುಣವಿಲ್ಲ-
ದಸಮಪಾತಕವನು ಎನಗೆ ಕೇಳಿಸಿಂದು ನೀ ||೧||
ಹರನೆ, ಕಣ್ಣೊಳುರಿಯನ್ನಿಟ್ಟ
ದುರುಳ, ನಂಜುಗೊರಲ, ಸರ್ಪ
ಧರ ತ್ರಿಶೂಲಿ! ನಿನ್ನ ನಂಬಿದವರನಸಿಯೊಳು
ಅರೆದು ಸಣ್ಣಿಸುವುದೆ ನಿನ್ನ
ಕರುಣವಲ್ಲದದೆಲ್ಲರಂತೆ
ಕರುಣಿಯೆಂಬ ಮರುಳನಾವ ?! ಮಗನ ಕೊಲಿಸಿರೇ? ||೨||
ಯತಿಯ ರಸಿಕನೆನಿಸಿ, ಪತಿ-
ವ್ರತೆಯ ಸಿತಗೆಯೆನಿಸಿ, ದಿವ್ಯ-
ಮತಿಗೆ ಸಟೆಯ ಬಿತ್ತಿ, ದಾನಿ-
ಗತಿದರಿದ್ರದೆಡರನೀವ
ಮತವೆ ನಿನ್ನದುತ್ತಮಿಕೆಯ ನೆರೆವ ತಪ್ಪೆಯ? ||೩||
ಅರಗಿಲೆರೆದ ಬೊಂಬೆಗುರಿಯ
ಭರಣವನ್ನು ತೊಡಿಸಲಹುದೆ?!
ಹರನೆ ನಿನ್ನ ಸ್ತೋತ್ರವಲ್ಲದನ್ಯವರಿಯದ
ತರಳೆಯೆನ್ನ ಕಿವಿಯೊಳೆನ್ನ
ಪುರುಷವಚನವನ್ನು ತುಂಬೆ
ಕರುಣವಿಲ್ಲಲಾ ಕಪರ್ದಿ... ||೪||
ಗಂಡನುಳ್ಳ ಹೆಣ್ಣನಾವ
ಗಂಡು ಬಯಸಿ ಕೇಳ್ದಡವನ
ತುಂಡುಗಡಿಯದಿಹನೆಯವಳ ಗಂಡನೆನ್ನಯ
ಗಂಡ ನೀನಿರಲ್ಕೆ ಕೇಳ್ದೊ
ಡಂಡುಗೊಂಡು ಸುಮ್ಮನಿಹೆ! ಶಿ-
ಖಂಡಿಯೆಂಬ ನಾಮ ಸಾಮ್ಯವಾದುದಿಂದಲಿ ||೫||

೩೪೦.
ಪತಿಯೆ ಗತಿಯೆನಿಪ್ಪ ಸತಿಗೆ
ಪತಿವ್ರತಾಭಿಧಾನ ಸೆಲ್ವು
ದಿತರ ಪತಿಯ ರತಿಯೊಳಿರ್ಪ ಸತಿಯ ಕ್ಷಿತಿಯೊಳು
ಸಿತಗೆಯೆನ್ನದಿಹರೆ? ದಿಟದ
ಪತಿಯದೊರ್ವ, ಸತಿಗೆ ಸಟೆಯ
ಪತಿಯದೊರ್ವನುಂಟೆ ತಳರಿ ತಳುವದೆ?!

೩೪೧.
ಮದನನೆಸುಗೆಯಿಂದ ಮುನ್ನ ಚೆನ್ನಮಲ್ಲನ
ಮದನಗಿತ್ತಿಯಾದೆ! ಮಿಕ್ಕಿ
ನಧಮರೇತಕವ್ವಗಳಿರ?
ಮದುವೆಯಹರೆ ಮಗುಳೆ ಕಂಡ ಕಂಡ ಗಂಡರ? ||೧||
ಸಾವು ಸಂಕಟಳಿವುಪಳಿವು
ನೋವು ದುಃಖ ದುರಿತರಕ್ತ
ಮಾವುಸಸ್ಠಿ ಬಾಲಜಾಡ್ಯ ಜರೆ ರುಜಾನಿಶಂ
ಬೇವಸಂಗಳಿಲ್ಲದುರೆ ಸ-
ದಾ ವಯಸ್ಸಿನಿಂದಲೆಸವ
ಕೋವಿದಂಗೆ ಪೆತ್ತರಿತ್ತರೆನ್ನ ||೨||
ಮಾತೆ ಮುಕುತಿದೆರಹನಾಂತು,
ರೀತಿಗೊಲ್ಲು ತಂದೆ, ಬಂಧು-
ವ್ರಾತವವನ ಕುಲವನೊಪ್ಪಿ ಕೊಟ್ಟರೆನ್ನನು
ಆತಗೊಲ್ಲು ಮದುವೆಯಾದೆ
ನಾ ತಳೋದರಿಯರಿರೆಲೆಲೆ
ಆತನರಸುತನದ ಘನದ ಬಿನದವೆಂತೆನೆ ||೩||
ಆಳುವವನಿಯವನಿಗಿದೀ
ರೇಳು ಲೋಕ, ದುರ್ಗ-ರಜತ
ಶೈಳ, ಹರಿವಿರಿಂಚಿ ಸುರಪ ಮುಖವಜೀರರು,
ಆಳು ದುನುಜ ಮನುಜ ದಿವಿಜ
ವ್ಯಾಳರುಗ್ಘಡಿಸುವ ಭಟ್ಟ
ಜಾಳಿ ಚಂಡಕೀರ್ತಿಗಳ್, ಪ್ರಧಾನಿ ಸುರಗುರು ||೪||
ಮಿತ್ರ ಧನದರಾಪ್ತರೇ
ಮಿತ್ರ ಗಾತ್ರ ಪ್ರಮಥರತಿ ಕ-
ಳತ್ರವೇ ಭವಾನಿ, ರಾಜವಾಜಿ ನಿಗಮವು
ಪತ್ರಿರಥ-ಗಣೇಶರೆಸೆವ
ಪುತ್ರರಧಿಕಶೈವಧರ್ಮ
ಗಾತ್ರ ಲಿಂಗವೀವನಾವ ಪದವನೆಳಸಲು ||೫||
ದಶಭುಜಂಗಳೈದು ವಕ್ತ್ರ
ವಸವವಖಿಳ ಕಕುಭ, ಮುಡಿವ
ಕುಸುಮ ತಾರೆ, ತುಂಬುರಾದಿಗಳ್ ಸುಗಾಯಕರ್,
ಎಸೆವ ಜಗದ ವಾರ್ತೆಗಳನು
ಬೆಸಸುವಾತ ನಾರದ ಶ್ರಿ-
ದಶವಧೂಕದಂಬ ಓಲಯಿಸುವರಾತನ ||೬||
ಹಸನಿಸುವನೆ ಭೃಂಗಿಯೂರು-
ವಸಿ ತಿಲೋತ್ತಮಾದಿ ದಿವಿಜ
ಕುಸುಮಗಂಧಿನಿಯರೆ ನಚ್ಚಣಿಯರು, ಪಿಡಿವಡೆ
ತಿಸುಳ ಸಬಳ, ಚಾಪ ತ್ರಿದಶ
ರೆಸವ ನಿಳಯ, ನಾರಿ ಭುಜಗ,
ವಿಶಿಖ ವಿಷ್ಣುವಿಂದು ಭಾಸ್ಕರಾಗ್ನಿ ನೇತ್ರವೂ ||೭||
ಮಲೆವ ಕಾಲ ಕಾಮದನುಜ
ಕುಲವನಟ್ಟಿ ಕುಟ್ಟಿ ಭಕ್ತ
ರೊಲವನೀವ ಸಕಲದೇವ ಚಕ್ರವರ್ತಿಗೆ
ಒಳಿದೆನೊಲಿವೆನೆಂತು ಪೇಳಿ
ರೆಲೆಲೆಯಕ್ಕಗಳಿರ ಬದ್ಧ
ಮಲಮಯಾಂಗಿಯಾದ ಹೀನಮಾನಸಾತ್ಮಗೆ? ||೮||
ಗಿರಿಯ ತೊರೆದು ಬಱಿ ಪುಲ್ಲ
ಮೊರಡಿಗೆಳಸಿ ಬಹುದೆ? ಅಂಚೆ
ಸರಸಿಯನ್ನು ಸಡಿಲಿ ಪಲ್ವಲಕ್ಕೆ ಪಾಯ್ವುದೇ?
ಎರಪದೇ ಪರಾಗವಿಲ್ಲ-
ದರಳಿಗಲಿ? ಮಹೇಶಗೊಲ್ದು
ನರಕಿಗೊಲಿಯ ಬಲ್ಲುದೇ ಮದೀಯ ಚಿತ್ತವು? ||೯||
ಮೇರುಗಿರಿಯಿರಲ್ಕೆ ರಜವ[=ಜರಗ?]
ತೂರಲೇಕೆ? ಕ್ಷ್ರೀರವಾರ್ಧಿ
ಸಾರಿರಲ್ಕೆ [ಓರೆಪಶುವದೇಕೆ]? ತತ್ತದ
ದಾರಿಗಳಲಲೇಕೆ ಗುರುವ
ಸಾರಿ ಸುಪ್ರಸಿದ್ಧವಿದ್ದು?
ಹಾರಲೇಕೆ ಪದವೆ ಲಿಂಗ ಕರದೊಳಿರುತಿರೆ? ||೧೦||
ಆವ ಚಿಂತೆಯೇಕೆ ಮನದ
ದಾವತಿಯನು ತೀರ್ಚುವೆನ್ನ
ಜೀವದೆರೆಯ ಚೆನ್ನಮಲ್ಲಿಕಾರ್ಜುನಯ್ಯನ
ಭಾವೆಯಾನು! ಬಳಿಕ ನರಕಿ
ಜೀವಿಗೆನ್ನ ಕೇಳ್ದರಿನ್ನು
ನೋವಿರಿ.... ||೧೧||

೩೪೨.
ಎನಗೆ ಬಂದ ಬವರಕೇಕೆ ನಿಮಗೆ ಬಂಧನ? ||ಪಲ್ಲವ||
ಆರಿಗಿಟ್ಟ ಬಡಿಣದನ್ನ | ವಾರು ಕೊಂಬರೆನಗೆ ಬಂದ
ಮಾರಿಗಾಗಿ ಶಿವನ ಭಕ್ತರಳಲಲೆನ್ನಸು
ಹಾರುತಿದೆ-ಮದೀಯ ತನುವ | ನೂರುನುಚ್ಚುಮಾಡೆ ನಿಮಗಿ
ದೂರ ಪೇಳ್ದೊಡಾಣೆ ಚೆನ್ನಮಲ್ಲಿಕಾಜುನ ||೧||
ಇಹದೆ ಶರಣರೊಲಿಯದಲ್ಲ | ದಹುದೆ ಮುಕ್ತಿಯವರ ಭಂಗಿ
ಸಹಿತರಿಂದಲಾವ ಗತಿಯ ಪಡೆವೆನಿನಿತಕೆ
ದಹನನೇತ್ರನಿಟ್ಟ ನೆಲೆಯೊಳಿಹೆ[ನೆನ್ನುತ್ತ ಗೀತವನ್ನು
ಸಹಜಭರಿತೆ ಪಾಡಿದಳ್ ಮನೋನುರಾಗದಿ] ||೨||
ವಾತ-ವಹ್ನಿ-ಸಲಿಲ-ಸುರ | ಭೂತಳಾದಿ ತತ್ವವನಿಶ
ರೀತಿದಪ್ಪದಿಪ್ಪವಯ್ಯ ನಿನನುಜ್ಞೆಯ-
ನಾತು; ಮಿಕ್ಕಡೆನ್ನನೊಪ್ಪ | ನಾತ ಮಲ್ಲಿನಾಥ
..................................... ||೩||

೩೪೩.
ಬೇನೆಯಿಂ ಬೇವ ಬೇವದಸದಳ ಬಲ್ಲರೆ
ಬೇನೆಯಿಲ್ಲದರಂತೆ ನೀವೆಂತರಿವಿರೆನ್ನ
ಬೇನೆಯ ಬಗೆಯವನ್ನಗಳಿರಾ ಮಚ್ಚೆನ್ನ ಮಲ್ಲೇಶನಿರಿದಲಗು ಮುರಿದ
ಬೇನೆಯಿಂ ಬೇವಳಾನೇ ಬಲ್ಲೆನೀ ನೋವು
ಬೇನೆ ಮಚ್ಚಿತ್ತದೆರೆಯನ ತಾಗದಿರದು

೩೪೪.
ವಿಷಯಸುಖ ವಿಷವೆಂದು ತಿಳಿಯದಜ್ಞಾನಿ ಬಿಡು
ವಿಷಯಸುಖ ನಿರವಯವೆಂದರಿಯದರಿಮರುಳೆ ಬಿಡು
ವಿಷಯಸುಖ ಭವದ ಬಿತ್ತೆಂದು ಭಾವಿಸದಧಮಜೀವಿ ಬಿಡು ಬಿಡು ಸೆರಗನು
ವಿಷಯದಣು ಮಾತ್ರ ಬಿಂದುಗಳಲ್ ಭೂಧರದೊ
ಲೆಸೆವುದೆಂದೋದುವಾಗಮವ ಕೇಳ್ದೆಚ್ಚರದ
ಪಶುವೆ ಕೇಳ್ದರಿಯ ವಿಷಯದೊಳು ಮುಂಗೆಟ್ಟ ನರಸುರರ ವಿಧಿಗಳ ||೧||
ಪುಲ್ಲಶರನೆಸುಗೆಗಳವಳಿದಳುಪಿದಂಗನೆಯ
ನೊಲ್ಲದೊಲ್ಲದ ಪೆಣ್ಣನೊಲಿಸುವವನತ್ಯಧಮ
ನಲ್ಲವೆ? ಪೆರತೊರ್ವಗೊಲ್ದವಳನಪ್ಪಲಳ್ತಿಯೆ ಮನಕ್ಕಾನು ಚೆನ್ನ
ಮಲ್ಲಿಕಾರ್ಜುನಗೊಲ್ದಳೆನ್ನನಪ್ಪಿದಡೆ ಕ
ಗ್ಗಲ್ಲನಪ್ಪಿದ ಮಾಳ್ಕೆಯಂತಿರದೆ ಹೋಗೆಲವೊ
ಖುಲ್ಲ ||೨||

೩೪೫.
[ತೊಡರಿ ಬಿಡದಂಡೆಲೆವ ಮಾಯೆಯ
ತೊಡಕನಾರೈದಲಿಸಿ ಗೀತವ
ತೊಡಗಿದಳ್] ಅಸಂಖ್ಯಾತಲಕ್ಷಭವಾಂಬುರಾಶಿಯೊಳು
ಕಡೆದು ಮನುಜತ್ವಂಬಡೆಯೆ ಬೆಂ-
ಬಿಡದು ನಿಮ್ಮಯ ಮಾಯೆ, ಮಾಯೆಯ
ಬಿಡುಗಡೆಗೆ ತೆರಪಿಲ್ಲಾ ಗುರುಚೆನ್ನಮಲ್ಲೇಶ ||೧||
ಒಡಲಿನೊಳ್ ಮಲಮಾಸಿನುಬ್ಬಸ
ವಡೆದುದಿಸಲಜ್ಞಾನ ರುಜೆಗಳ
ತೊಡಕು, ಕಾವನ ಕಾಟ ಜವ್ವನದೊಳ್, ಜರೆಗಶಕ್ತಿಯ
ಜಡತೆಯಲ್ಲದೆ ಜಗಕೆ ನಿಮ್ಮಡಿ
ವಿಡಿಯಲೆಲ್ಲಿಯ ಬಿಡೆಯ ಮಾಯೆಯ ಸೆಡಕಿನೊಳು ಸಿಲುಕಿ ||೨||
ಹರಿಯಜೇಂದ್ರಾದ್ಯಖಿಳ ದಿವಿಜರ
ಶಿರವನರಿದಹಿದನುಜಮನುಜರ
ನರೆದು ಸಣ್ಣಿಸಿ ನುಂಗಿ, ನುಸುಳುವ ಮನುಮುನಿಗಳಧಟ
ಪರಿದು ಸಚರಾಚರವ ನೆರೆ ನಿ
ಟ್ಟೊರಸುವುದು ಗಡ ಮಾಯೆ ನಿಮ್ಮಯ
ಶರಣರಡಿವಿಡಿದಾಂ ಬದುಕಿರ್ದೆನೆಂದು ಪಾಡಿದಳು ||೩||

೩೪೬.
ತನುವು ಕಟ್ಟನೆ ಕರಗೆರೆದು ಮ
ಜ್ಜನವ, ನಿಜಮನವಲರ್ದು ಕುಸುಮವ,
ವಿನುತ ಹದುಳಿಗತನದಿ ಗಂಧಾಕ್ಷತೆಯನರು ಹಿಂದೆ
ಮಿನುಗುವಾರ್ತಿಯ, ನೆನಹುಶುದ್ಧದಿ
ಘನಸುಧೂಪವ, ಹರುಷರಸ ಸಂ
ಜನಿತ ನೈವೇದ್ಯವ ಸಮರ್ಪಿಸಿ, ಜ್ಞಾನಸತ್ಕ್ರಿಯದಿ ||೧||
ತಾಂ ಬೆಳೆರ್ವೆತ್ತಲೆಯನಿತ್ತು ಕ-
ರಾಂಜುಜದ ಬೊಮ್ಮವನು ನಿಜ ಹರು
ಷಾಂಬುಕಣ ಸಂಪಾತದೊಡನಿಟ್ಟಿಸುತೆ ಕ್ರಿಯೆಗಳವು
ಬೆಂಬಳಿಯೊಳಿರ್ದರಿಯದರ್ಚಿಪೆ
ನೆಂಬೆನೆಂತಾ ನಾದ ಬಿಂದುಗ
ಳೆಂಬರಿಯವು ನಿಮ್ಮ ನುತಿಸುವೆನೆಂತು ಶಶಿಮೌಳಿ ||೨||

೩೪೭.
ಅನುಭವವೆ ಭವಬಂಧಮೋಚನ
ವನುಭವವೆ ದುರಿತಾಚಲಶನಿ
ಯನುಭವವೆ ತನುಗುಣಾಭ್ರ ಪ್ರಕರಪವಮಾನ
ಅನುಭವವೆ ಭಕ್ತಿಯೆ ಸುಧಾನಿಧಿ
ಅನುಭವವೆ ಮುಕ್ತಿಯ ತವರ್ಮನೆ ಶರಣಸಂತತಿಯ ||೧||

೩೪೮.
ಭಾಷೆಯ ಮೀಸಲ್ಗೆಡಿಸಿ ಬಳಿಯಲಿ-
ನ್ನೇಸೊಂದಾಚರಣೆಯನಾಚರಿಸಲ್
ದೋಷಂ ಪರಿಯದವಂಗವನೊಳ್ ಪುದುವಾಳ್ವರ್ ತದ್ದೋಷಾ
ವಾಸಿಗಳೆನಿಪರ್, ತೊಲತೊಲಗಿನ್ನೆ
ನ್ನಾಸೆಯನುಳಿದು

೩೪೯.
ಪೂತ ಶ್ರೀಗುರುವರ ಪೇಳ್ದೊಲ್ ದು
ರ್ನೀತಿಯ, ಭೀತರ ಕಾಯ್ವಂ ತಾನೆ
ಬೂತಾದೊಲ್, ಪತಿಪತ್ನೀತ್ವವನರಹುವಳಭಿಸಾರಿಕೆಯ
ರೀತಿಯನೊರೆವೊಲ್, ಪೇಳ್ದಿರಿ ನೀವೆ
ನ್ನಾತುಮದಜ್ಞನತೆಯಂ ತೆವರದೆ ದು
ರ್ನೀತಿಯನಾ ಶಿವಭಕ್ತರ್ ಸಹಭವಗುರುತಂದೆಗಳೆನಗೆ ||೧||
ಮದ್ಗುರು ತಂದೆ ಮಹಾವೈಭವದೊಳ್
ಚಿದ್ಘನಲಿಂಗಕ್ಕೊಲಿದೆನ್ನುವನೆಸೆ
ದುದ್ಗಮ ಶರನೆಸೆಯದ ಬಳಿಕುದ್ವಾಹವೆನೆಸಗಿದ ಬಳಿಕ
ತದ್ ಘನಲಿಂಗದ ಸತಿಯಂ ಪಡೆದು ವಿ
ಯದ್ ಗಂಗಾಮೌಲಿಯ ಭಕ್ತಂಗಿ
ತ್ತುದ್ಗಮ ಶರನ ವಿಕಾರದೋಳಿಹುದಂ ನೋಳ್ದಪೆವೆಂಬರಕೆ ||೨||
ಈ ಪಾಪವನೊಂದಿಸಲೆಳಸುವರೇಂ
ಕೂಪರೆ ಪೆರದೊಲಗು

೩೫೦.
ಕ್ಷಿತಿಯ ಚರಿತ್ರವನತಿಗಳೆದೆನ್ನುವನೆಳಸಿದಿರೆಂತೆನಲು
ಹುತಹವನುಂಡ ಹಿಮಂ ಬೆರೆವುದೆ? ಸ
ನ್ನುತ ಸೌರಭ್ಯಕದಂಬವನಂಬರ
ಗತಿವೇಗದಿನಡರಿದ ಹೊಗೆ ಮನೆಗಳ್ತಪ್ಪುದೆ ಮಡಮುರಿದು?
ಓಡೊಡೆ ಗಾಜುಗಳುಂ ಮೃತ್ತಿಕೆಯೊಳ್
ಮೂಡಿ ಗಡಾ ಮೃತ್ತಿಕೆಯೊಳ್ ಮಗುಳೊಡ
ಗೂಡವೆನಲ್ಕವರಿಂದಿಳಿಕೆಯೆ ಶಿವಶರಣರ ಚಾರಿತ್ರ?
ರೂಢಿಯೊಳೆಗೆದಾ ರೂಢಿಯೆ ಜಡದೊಳ್
ಕೂಡದ ವೃಷಭಾರೂಢನೊಳೊಡನೊಡ
ಗೂಡಿದ ಶರಣರ ಕೂಡಿದಳಾನೆನ್ನಾಸೆಯ ಮಾಣು

೩೫೧.
.....ಲಾಲಿಸೆ
ನ್ನೊಡೆಯ ಬಸವೇಶನರ್ಧಾಂಗಿ ಸನ್ನುತ ಕೃಪಾಂಗಿ ಸರ್ವಾಂಗಲಿಂಗಿ ನೀನು
ಮೃಡಶರಣರಾದವರ ಮನೆಯ ದಾಸಿಯು ಮೆಟ್ಟು
ವಡಿಗೆರ್ಪನಾಂತವಳ್ಗೊರೆಯಲ್ಲವಾನೆನ್ನ
ನಡಿಗಡಿಗೆ ನೀವಿಂತು ಬಣ್ಣಿಸಲ್ ತಕ್ಕಳಲ್ಲದಳ ನುತಿಗೆ ||೧||
ಚಿರಭಕ್ತಿ ಭಿಕ್ಷಮಂ ನಿಮ್ಮಲ್ಲಿ, ಸತತ ಸ
ದ್ಗುರುಭಕ್ತಿ ಭಿಕ್ಷಮಂ ವೀರಮ್ಮನಲಿ, ಲಿಂಗ
ದುರುಭಕ್ತಿ ಭಿಕ್ಷಮಂ ಕಮಳವ್ವೆಯಲಿ, ಶಿವಧ್ಯಾನದಮಂತ್ರದ ಭಿಕ್ಷವ
ಪರಮಗುರುತಾಯಿ ಶಿವನಮ್ಮನಲಿ, ಸುಜ್ಞಾನ
ದರುಹಿನ ಸುಭಿಕ್ಷಮಂ ವಿಮಳವ್ವೆಯಲ್ಲೆಲ್ಲ
ಶರಣ ಸತಿಯರೊಳು ವೈರಾಗ್ಯಭಿಕ್ಷವ ಬೇಡಿ ಬಂದ ಭಿಕ್ಷಾಂದೇಹಿಯಾಂ ||೨||
ಕಾರುಣ್ಯದಿಂದೆನ್ನ ಮನದರಕೆಯನ್ನಿತ್ತು
ಪಾರವೈದಿಸುವುದು.......

೩೫೨.
ಇಕ್ಕದಿರ್ ತಂದೆ ಬ[=ಮ]ನ್ನಣೆಯ ಬಸಿಶೂಲಕ್ಕೆ,
ತಕ್ಕಳಲ್ಲಾ ನುತಿಗೆ; ಗುರುಶಿಷ್ಯರಂ, ಪೆತ್ತ
ಮಕ್ಕಳಂ ಪೆತ್ತರೊರೆದೊರೆದು ನೋಡದೆ ನೋಳ್ಪರಾರ್?
ಕುಂದೆಯವರು ನೋಡೆ? ||೧||
ತೂಕದಿಂದೊರೆಯಿಂದೆ ನೋಟದಿಂ ಚೆಂಬೊನ್ನ
ಜೋಕೆಗೈದರಮನೆಗೆ ಸಲಿಸುವನೊಲೆನ್ನುವಂ
ನೀ ಕರುಣದಿಂ ನೋಡಿ ರುದ್ರಂಗೆ ಸಲ್ವೊಲೆಸಗಿರ್ದು ಸಂದೆಯವದೇಕೆ
ಮೇಕೆಯೊಂದರ ದೆಸೆಯೊಳಳಿದ ಭಟನಸುವ ಧರ
ಣೀಕಾಂತ ಪ್ರಮುಖ ಭೂಭುಜರ ಹರಣವ ಹರನ
ವಾಕಿನಿಂ ಮುನ್ನ ಉಳುಹಿದ ದುಷ್ಟನಿಗ್ರಹ ಶಿಷ್ಟಪ್ರತಿಷ್ಠೆಯೆಂದೆ ||೨||
ಎನ್ನ ಸೋದರವೆ ಎನ್ನ ತಂದೆ ಮದ್ಗುರುವೆ
ಕಿನ್ನರಿಯ ಬ್ರಹ್ಮಯ್ಯ ಬಿಡು ಮನದ
ಖಿನ್ನತೆಯ ಬಿಡದೊಡಾಂ ನಿನ್ನ ಸೋದರಿಯಲ್ಲ ||೩||

೩೫೩.
ಪರಮಗುರು ತಂದೆ ಕಿನ್ನರಿಯ ಬ್ರಹ್ಮಯ್ಯ, ತವ
ಕರುಣಾಂಜನದಿ ಬಗ್ಗನಗ್ಗಳದ ಬಗ್ಗೆನಿಪ
ಶರಣಾಳಿಯಂ ಕಂಡು ಗೆಲುವಾದೆ, ಬಲವಾದೆ,
ಛಲವಂತೆಯಾದೆ ಮದದ
ಕರುವಾದೆ, ಕರುಣಗುಣಕಾರಿಯಾದೆ, ಭವವಲ್ಲರಿ
ಗರಿಗಿತ್ತಿಯಾದೆ, ಸನ್ಮೂರ್ತಿ ಸಾಮ್ರಾಜ್ಯಕ್ಕೆ
ಸಿರಿದೇವಿಯಾದೆ, ನನ್ನೊಲು ಧನ್ಯರಾರ್

೩೫೪.
ಹಂಬುಹರಿದುರುಳ್ವ ನರಗಿರದೆ ತಿಂಥಿಣಿಯ ಪೆ
ರ್ಗೊಂಬು ಕೈಬಸಮಾದೊಲಂಬುಧಿಯೊಳಾಳ್ವಗೊದ
ಗಿಂ ಬೈತುರಂ ಬಂದೊಲರಿಗಳರೆಯುಟ್ಟಿ ಬಪ್ಪಡೆಗಭಯಕರದೊಳೆಸೆವ
ಬೆಂಬಲಂಗೂಡಿದೊಲ್, ದಿಕ್ಕಿಲ್ಲದಳುವೆಳಕ
ಗಂ ಬೆಸಲೆಯಾದಳಳ್ತಂದೆತ್ತಿದಂದಾದು
ದಂಬಕತ್ರಯ ನಿಮ್ಮ ಶರಣರಡಿಗಾಣುತೆನಗೆ ||೧||
ಇನ್ನು ನೋಡೆದೆನ್ನಧಟ ಕಾಮಾದಿವರ್ಗಗಳ
ಬೆನ್ನ ಬಾರಂಗಳೆವೆನೆಂಟು ಮದಗಳ ಗಂಟ
ಲಂ ನಿಟಿಲೆನಲ್ ಮುರಿವೆಕರಣೇಂದ್ರಿಯಗಳ ಕಲಕುವೆನುಳಿದ ದುಃಖಕರ್ಮವ
ಛಿನ್ನ ಭಿನ್ನಂಗಡಿವೆ ||೨||

೩೫೫.
ತಂದೆತಾಯೆನಗೆ ಶ್ರೀಗುರುನಾಥ, ತೆತ್ತಿಗರ್
ಕಂದುಗೊರಲನ ಶರಣಸಂದೋಹ, ಗಂಡನಾ
ನಂಡಿವಾಹನ ಚೆನ್ನಮಲ್ಲಿಕಾರ್ಜುನನಿದಕ್ಕಿಲ್ಲ ಸಂದೆಯ ತಿಲಾಂಶ
ಎಂದೆಂದು ಪ್ರಭುವೆ ನಿಮ್ಮಯ ಮನೆಯೊಳೆನ್ನ ನಡೆ
ವಂದಮಂ ನೆಗಳಿದನುಮತದಿಂದ ಮುಳಿಯಲೇಕೆ? ||೧||

೩೫೬.
....ಅಯ್ಯ ತನು-ಜೀವ-ಭಾವಂಗೆಳೆನಗಿರ್ದೊಡೇಂ
ತತ್ತ್ರಿವಿಧವು |
ಇಲ್ಲದಾ ಘನವೆ ಮನವಾದ ದೂಸರ್ನೀವೆ
ಬಲ್ಲಿರಲ್ಲದೆಯಿತರಾರ್ ಬಲ್ಲರಹುದು ಮರ
ಹಿಲ್ಲದಿರ್ಪೆನ್ನನುವನು....

೩೫೭.
....ಬಸವಬ್ಬ ನಿಮ್ಮೊಲ್ಮೆಯಿಂ ಕಾಮಾರಿಯ |
ಅಪ್ಪಿ ಪೆರತರಿಯೆ | ನೋಟಕ್ಕೆ ನಾಮದಲ್ಲಿ ಪೆ
ಣ್ಣಪ್ಪೆನಲ್ಲದೆ ಭಾವಿಸಲ್ಗಂಡುರೂಪು ಬಿಡ
ದರ್ಪಿರ್ಪುನ್ನನೆಂಬುದ ನಿಮ್ಮ ಲಿಂಗವೆ ಬಲ್ಲುದು

೩೫೮.
ಎನ್ನ ಭಕ್ತಿಯು ನಿಮ್ಮ ಧರ್ಮ ಪ್ರಭುವಿನ ಧರ್ಮ
ವೆನ್ನ ಸುಜ್ಞಾನವೆನ್ನ ಪರಿಣಾಮವೇ
ಚೆನ್ನಬಸವೇಶ್ವರನ ಧರ್ಮವೆಲ್ಲಾ ಪುರಾತನರ ಧರ್ಮವೆನ್ನ ವಿರತಿ |
ಎನ್ನಳವದೇಂ ದೇವ ನಿಮ್ಮ ಸೊಮ್ಮ ನಿಮ್ಮ
ಪನ್ನಳಿನಕಪ್ಪೈಸಿ ಪರಿಶುದ್ಧಳಪ್ಪವ
ಳ್ಗಿಂನ್ನುಂಟೆ ಪರಮಸ್ವತಂತ್ರತ್ವ

೩೫೯.
ನಂಬಿದೆ ಗುರುವೇ ನಂಬಿದೆ, ನಂಬಿದೆ ಸ್ವಾಮಿ
ನಂಬಿದೆ ಅಂಬಿಕಾರಮಣ ನೀನಂಬಿಗ ||೧||
ಹೊಳೆಯ ಬರವ ನೋಡಂಬಿಗ
ಸೆಳಹು ಬಹಳ ಕಾಣಂಬಿಗ
ಸುಳುಹಿನೊಳಗೆ ಬಿದ್ದೆನಂಬಿಗ
ಸೆಳೆದುಕೊಳ್ಳೋ ನೀನಂಬಿಗ ||೧||
ಆರು ತೆರೆಯ ನೋಡಂಬಿಗ! ಬಲು
ಮೀರಿ ಬರುತಲಿವೆ ಅಂಬಿಗ!
ಹಾರಲೊದೆದು, ಎನ್ನ ತಡಿಗೆ ಶೆರಿಸು, ನೀ
ದೂರ ಮಾಡದಿರು ಅಂಬಿಗ ||೨||
ತುಂಬಿದ ಹರಿಗೋಲಂಬಿಗ ಅದ
ಕೊಂಬತ್ತು ಛಿದ್ರ ನೋಡಂಬಿಗ
ಸಂಭ್ರಮವನು ನೋಡಂಬಿಗ ಇದ
ರಿಂಬನರಿದು ತೆಗೆಯಂಬಿಗ ||೩||
ಹತ್ತು ಹತ್ತು ನೋಡಂಬಿಗ
ಹತ್ತಿದರೈವರು ಅಂಬಿಗ
ಮುತ್ತಿಗೆಗೊಳಗಾದೆನಂಬಿಗ, ಎನ್ನ
ನೆತ್ತಿಕೊಳ್ಳೋ ನೀನಂಬಿಗ ||೪||
ಸತ್ಯವೆಂಬ ಹುಟ್ಟಂಬಿಗ ಸದ್
ಭಕ್ತಿಯೆಂಬ ಪಥವಂಬಿಗ
ನಿತ್ಯಮುಕ್ತ ನಮ್ಮ ಚೆನ್ನಮಲ್ಲಿಕಾರ್ಜುನನ
ಮುಕ್ತಿಮಂಟಪಕೊಯ್ಯೋ ಅಂಬಿಗ ||೫||

೫೬೦.
ಕರಕರೆ ಕರಕರೆ ಘನವಯ್ಯೋ
ಕರೆದು ಹೇಳಿ ಎಮ್ಮವರಿಗೆ ಸುದ್ದಿಯ ||ಪಲ್ಲವ||
ಅತ್ತೆಯ ಮಾತುಗಳೆ ಚಿತ್ತವ ಕಲಕಿವೆ
ಮತ್ತೆ ಮಾವನೊಳ್ಳಿದನಲ್ಲ; ಎನ್ನ
ಚಿತ್ತವಲ್ಲಭನಿಂದಾದ ಭಂಡ ನಾ
ವಿಸ್ತರಿಸಲಾರೆ, ಹೇಳಿ, ಎಮ್ಮವರಿಗೆ ||೧||
ಮುನ್ನ ಹುಟ್ಟಿದ ಮೂರು ಮಕ್ಕಳ ಕಾಟ
ಕನ್ನೆಯರೈವರ ಕೂಡಿಕೊಂಡು
ಮನ್ನಣೆಯನಿತಿಲ್ಲ ಮೈದುನರೈವರ
ಇನ್ನಿರಲಾರೆ ಹೇಳಿ ಎಮ್ಮವರಿಗೆ ||೨||
ನಾರಿಯರೈವರ ಕೂಡಿಕೊಂಡು ನಾ
ದಾರಿ ಸಂಗಡವಾಗಿ ಬರುತಿರಲು
ಭೋರನೆ ಶ್ರೀಶೈಲ ಚೆನ್ನಮಲ್ಲೇಶಂಗೆ
ಓರಂತೆ ಮನಸೋತೆ ಸಾರಿತ್ತ ಬಾರೆನೆ ತಾಯಿ ||೩||

೫೬೧.
ಒಲ್ಲೆನೊಕತನವ ಒಲ್ಲೆ, ನಾನಾರೆ
ಕೊಲ್ಲ ಬಂದಾನೆನೆ ಕೋಪದಲಿ ನಲ್ಲ ||ಪಲ್ಲವ||
ಮಾವನೆಂಬುವ ನನ ಮನವ ನೋಯಿಸಿದನೆ
ಆವಾಗ ನಮ್ಮತ್ತೆ ಅಣಕವಾಡುವಳು
ಭಾವನೆಂಬವ ಕೆಂಡ, ಬಲು ಬಾಧಿಸುತಿಹ
ಬೇವುತಲಿರ್ದೆನು ಮತ್ತಿನ್ನಾರಿಗೆ ಹೇಳುವೆ ||೧||
ಮನೆಯಾತನ ಕೊಂದು, ಮಾವನ ಹಳ್ಳವ ಕೂಡಿ
ಬಿನುಗು ಭಾವದಿರನು ಬೀದಿಪಾಲು ಮಾಡಿ
ನನಗೆ ವೈರಿಯಾದ ಅತ್ತೆನೆ ಕೊಂದು
ಮನಸು ಬಂದಲ್ಲಿ ನಾನಿಪ್ಪೆನೆಲೆ ತಾಯಿ ||೨||
ಮುನ್ನಿನ ಪ್ರಮಥಗಣಂಗಳೆನ್ನ ಬಂಧುಬಳಗ
ಉನ್ಮನಿಯ ಜ್ಯೋತಿ ಬ್ರಹ್ಮರಂಧ್ರದ ಮೇಲಿಪ್ಪ
ಚೆನ್ನಮಲ್ಲಿಕಾರ್ಜುನನೆನ್ನನೊಲಿದಡೆ
ಇನ್ನಿತ್ತ ಬಾರೆ ನಾನೆಲೆ ತಾಯೆ ||೩||

೩೬೨.
ನಿಬ್ಬಣಕ್ಕೆ ಹೋಗುತೈದೇನೆ, ನೋಡಕ್ಕಯ್ಯ!
ನಿಬ್ಬಣಕೆ ಹೋದಡೆ, ಮರಳಿ ಬಾರನಕ್ಕಯ್ಯ! ||ಪಲ್ಲವ||
ಧನವು ಧಾನ್ಯ ಮನೆಯೊಳುಂಟು;
ಘನವು ಎನ್ನ ಮನೆಯೊಳಿಲ್ಲ
ಮನೆಯ ಗಂಡ ಮುನಿಯಲೆನ್ನ ಮಂಡೆ ಬೋಳಾಗದು ||೧||
ಮಂಡೆದುರುಬ-ಮಿಂಡತನದಿ
ದಿಬ್ಬಣಕ್ಕೆ ನಾ ಹೋದಡೆ
ಮಂಡೆ ಬೋಳಾಗದನಕವಪ್ಪುದೆನಗೆ ನಿಬ್ಬಣ? ||೨||
ಗಂಡನುಳ್ಳ ಗರತಿ ನಾನು
ರಂಡೆಯಾದನಯ್ಯೊ; ಇನ್ನು
ಕೊಂಡೊಯ್ಯೊ, ಶಿವನೆ, ಎನ್ನ ಹುಟ್ಟಿದೈವರು ಮಕ್ಕಳ ||೩||
ಕಾಮವೆಂಬ ಹೊಲನ ದಾಂಟಿ
ಸೀಮೆಯೆಂಬ ಹೊಲಬನರಿದು
ಹೇಮಗಿರಿಯ ಹೊಕ್ಕ ಬಳಿಕ ಮರಳಿ ಬಾರೆನಕ್ಕಯ್ಯ ||೪||
ಸಾಗಿ ಬೇಗದಿಂದ
ಹೋಗಿ ನೆರೆಯದಿದ್ದರೆ,
ಚೆನ್ನಮಲ್ಲಿಕಾರ್ಜುನಯ್ಯ ಮುನಿವ ಕಾಣಕ್ಕಯ್ಯ ||೫||

೩೬೩.
ಮುಕುತಿ ಹೋಯಿತು ಮುರುಕಿಸುವನಕ
ಮೂಕುತಿ ಹೋಯಿತು ||ಪಲ್ಲವ||
ಅಣಕವನಾಡುತ್ತ ಐವರ ಕೂಡೆ
ಸೆಣಸುತ ನಾಲ್ವರ ಕೈವಿಡಿದು,
ಮಣಕದಿಂದಲಿ ಆರು ಮಂದಿಯ ಕೂಡೆ,
ಉಣ ಕುಳಿತಲ್ಲಿ ಮೈಮರೆದೆನಕ್ಕ ||೧||
ಅಕ್ಕರಿಂದಲಿ ಹತ್ತು ಮಂದಿಯ ಕೂಡಿ
ನಕ್ಕರು, ಕೆಲೆದರು ತಮತಮಗೆ
ಮಕ್ಕಳಾಟಿಕೆಯ ನಾನಾಡುವ ಹೊತ್ತಿಗೆ
ಇಕ್ಕುತಲಿ ಮೈಮರೆದೆನಕ್ಕ ||೨||
ಅತ್ತ ಮಾರುದ್ದರುವೆಯ ಕೂಡಲಾಗಿ
ಸುತ್ತೇಳು ಕೇರಿಯರು ಸೆಣಸುವರು
ಚಿತ್ತವಲ್ಲಭ ಚೆನ್ನಮಲ್ಲೇಶ ಕೂಡಿ
ಮುತ್ತೈದೆಯಾಗೆನ್ನನಿರಗೊಡಕ್ಕ ||೩||

೩೬೪.
ಕಣ್ಣಾರೆ ನಾ ಕಂಡೆ ಕನಸಿನ ಸುಖವ
ಉಣ್ಣದೂಟವನುಂಡು ಊರ ಸುಡುವುದ ||ಪಲ್ಲವ||
ಮಾಣದಚ್ಚ ಜಲದೊಳೆಂದು ಆಣಿಯಾದ ಮುತ್ತು ಹುಟ್ಟಿ
ಕೋಣೆಯೆಂಟರೊಳಗೆ ತಾನೆ ತಿರುಗುವುದು
ಆಣಿಕಾರರು ಹಂಡು, ಆ ಮುತ್ತ ಬೆಲೆ ಮಾಡಿ,
ಜಾಣತನದಲ್ಲಿ ಕೊಂಡೊಯ್ದರದನು ||೧||
ಇಂಬಪ್ಪ ಗಿರಿಯಲಿ ಕೊಂಭೆರಡನೆ ಕಂಡು
ಶಂಭುನಾರಿಯ ನೋಡಿ ಮಾತಾಡೆ
ಮುಂಬರಿದಾಡುವ ಮಾವತಿಗನ ಕೊಂದು
ಸಂಭ್ರಮಿಸಿ ಉಂಬ ಶಿವಶರಣರೆಲ್ಲರನು ||೨||
ಮುಪ್ಪಿಲ್ಲದ ಸರ್ಪನೊಪ್ಪವಿಲ್ಲದೆ ಕೊಂದು
ಒಪ್ಪುವ ಆತ್ಮಕನ ನೋಟಕರ
ಉಪ್ಪರಿಗೆಯ ಮೇಲೆ ಉರಿವ ಲಿಂಗವನು ಕಂಡು
ಒಪ್ಪದ ಚೀಟಿ ಸುಟ್ಟುಹಿದ ಮಹಿಮರ ||೩||
ಜಗಕೆ ಎಚ್ಚರುವಾಗಿ ಅಘಹರರೂಪಾಗಿ
ಅಗಣಿತವಹ ಘನಮಹಿಮರನು
ಬೆಗೆಗೊಳ್ಳದೆ ಭಾವೆನ್ನರ ಸಂಗವ
ನೊಗೆದು ಈಡಾಡುವ ಓಜೆವಂತರನು ||೪||
ಮನಕ್ಕೆ ಗೋಚರವಾಗಿ ತನುಮನ ರೂಪಾಗಿ
ಅನುವಿನ ವಿವರವ ಬಲ್ಲವರ
ನೆನೆವರಿಗೆ ಸಿಲ್ಕಿ ನೇಮವ ಕೋರುವ
ಘನ ಚೆನ್ನಮಲ್ಲನೆಂಬಿನಿಯನನು ||೫||

೩೬೫.
ಕೈಯ ತೋರೆಯಮ್ಮ, ಕೈಯ ನೋಡುವೆನು
ಬಯ್ಯಾಪುರದಿಂದಲಿಳಿದು ಬಂದೆ ನಾನು
ಮೈಯೊಳಗಿರ್ದ ವಸ್ತುವ ಹೇಳುವೆನು ||ಪಲ್ಲವ||
ವಚನ:
ಚೆಲುವೆತ್ತ ಭಾವದ ಲಕ್ಷಣವ ಹೇಳುವೆ ತೋರೆಯಮ್ಮ
ಅರಿವಿನ ಬಗೆ ಯಾವುದೆ ಕೊರವಿ? ನಿನ್ನ ನಾಮ ಸೀಮೆ ಯಾವುದು! ಎಲ್ಲಿಂದ ಬಂದೆಯಮ್ಮ?
ಉತ್ತರೋತ್ತರ ಬಯ್ಯಾಪುರದ ಮಾಹಾದೇವಿಯ ವರವೆ; ಮಹಾದೇವನ ಒಲವೆ;
ಅಲ್ಲಿಂದ ಇಳಿದು ಬಂದೆನಮ್ಮ! ನಿನ್ನ ತನುವಿನೊಳಗಿರ್ದ ನಿತ್ಯಾನಿತ್ಯವ ವಿವರಿಸಿ
ಹೇಳುವೆ ನಂಬು ನಂಬೆಯಮ್ಮ

ಪದ:
ಎಂಟು ಮಂದಿ ನಂಟರು ನಿಮಗಮ್ಮ
ಉಂಟಾದ ಹತ್ತು ದಿಕ್ಕಿನಲ್ಲಿ ಬಳಗವಮ್ಮ
ಗಂಟಲ ಮೆಟ್ಟಿಕೊಂಡೈದರೆ ನಿಮ್ಮ,
ಸುಂಟರಗಾಳಿಯಂತೆ ತಿರುಗುವೆಯಮ್ಮ
ಕಂಟಕ ಬಿಡಿಸುವೆ ಕರುಣದಿ ನಿಮ್ಮ, ನೀಲ
ಕಂಠನಂಘ್ರಿಯ ಬಿಡದೆ ಪಿಡಿಯಮ್ಮ ||೧||

ವಚನ:
ನಂಬುವುದಕೊಂದು ಕುರುಹುಂಟೆ ತಾಯಿ?
ಭೂದೇವಿ ಮೊದಲಾದ ಅಷ್ಟತತ್ವಾಧಿಕರು ನಿನ್ನ ಸಾಕ್ಷಿಬಂಧುಗಳಮ್ಮ, ದಶಮುಖ
ಪವನಸಂಕುಳವೆ ನಿನ್ನ ಇಷ್ಟರುಗಳಮ್ಮ! ಅನ್ಯರು ಸೇರರು; ನಿನ್ನವರು ನಿನಗೆ ವೈರಿಗಳಮ್ಮ
ಕಂಟಕವಾಗಿ ಕಾಡುವುದಮ್ಮ

ಅಹುದಹುದು ಅದೆಂಥ ಕಂಟಕವೆ ತಾಯಿ!

ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳಲ್ಲಿ ಸತ್ತು ಸತ್ತು ಹುಟ್ಟಿದೆಯಮ್ಮ. ಬಾರದ
ಭವದಲ್ಲಿ ಬಂದೆಯಮ್ಮ. ತೊಡದ ಚೋಹವ ತೊಟ್ಟೆಯಮ್ಮ. ಕಾಣದ ಕರ್ಮವ
ಕಂಡೆಯಮ್ಮ. ಉಣ್ಣದಾಹಾರವನುಂಡೆಯಮ್ಮ. ಇಲ್ಲಿಗೆ ಈ ಮನೆಗೆ ಬಂದೆಯಮ್ಮ.
ಇದು ನಿನ್ನ ಪುಣ್ಯದ ಫಲವಮ್ಮ. ಈ ಕಂಟಕಕ್ಕಂಜಿ ಕಳವಳಿಸದಿರಮ್ಮ. ನಿರಂಜನನ
ಪಾದವ ಭಕ್ತಿಯಿಂ ಧೃಡವಿಡಿಯಮ್ಮ

ಪದ:
ಒಡನೆ ಹುಟ್ಟಿದೈವರು ನಿನಗಮ್ಮ;
ಕೆಡಹಿಯಾರು ಮಂದಿ ಕೊಲುತಿಹರಮ್ಮ;
ಪಿಡಿದರೆ ತಾಯಿ-ಮಕ್ಕಳು ಬಯ್ವರಮ್ಮ;
ತೊಡರಿಕೆ ನಾಲ್ವರು ಹೆದರಿದಿರಮ್ಮ
ಪೊಡವೀಶನಡಿಯ ಬಿಡದೆ ಪಿಡಿಯಮ್ಮ;
ಒಡಲ ಕಿಚ್ಚಿನ ಕೊರವಿಯು ನಾನಲ್ಲಮ್ಮ ||೨||

ವಚನ:
ಚಿಂತೆಯ ಬಿಡಿಸುವ ನಿಶ್ಚಿಂತ ಪದವಾವುದೆ ತಾಯಿ?
ನಿನ್ನೊಡನೆ ಜನಿಸಿದ ಪಂಚಭೂತಂಗಳು ನಿನಗೆ ಸಂಗವಾಗಿ ಹಿತಶತ್ರುತನದಿ ಭವ
ದತ್ತ ಕೆಡಹುವರಮ್ಮ, ಅವರೊಡೆಯರು ನಿನ್ನನಾಳಿಗೊಂಡು ಕಾಡುವರಮ್ಮ
ಇದ ವಿವರಿಸಿ ಪೇಳೆ ತಾಯಿ!

ಚತುರ್ಮುಖಬ್ರಹ್ಮ ಹೊಡೆದಾಳುತೈದಾನೆಯಮ್ಮ ವಿಷ್ಣು ವಿಧಿಪಾಶದಿಂ ಬಿಗಿಯೆ
ರುದ್ರನ ಹೊಡೆ ನಿಚ್ಚ ಹೊಯ್ಯುತಿದೆಯಮ್ಮ. ಈಶ್ವರನಂತುರದಲ್ಲಿ ಸದಾಶಿವ ಸೈಗೆಡೆದನಮ್ಮ.
ಒಳಹೊರಗೆ ನಿನಗೈವರ ಕಟ್ಟು-ಕಾವಲು ಘನವಮ್ಮ. ಮತ್ತೊಮ್ಮೆ ಕಾಮ
ಕಾತರಿಸಿ, ಕ್ರೋಧವಿರೋಧಿಸಿ, ಮದವಹಂಕರಿಸಿ ಮಚ್ಚರ ಕೆಚ್ಚು ಬಲಿದು, ಹೊಯ್ದು-
ಬಯ್ದು-ಕೊಯ್ದು-ಕೊರೆದು, ಚಿತ್ರಿಸಿ, ಚಿರಣಿಸುವರಮ್ಮ. ಮತ್ತೊಮ್ಮೆ ಏಳು ಮಕ್ಕಳ
ತಾಯಿ ಹಿಡಿದು ಹೀರಿಹಿಪ್ಪೆಯ ಮಾಡುವಳಮ್ಮ. ಆ ಮಕ್ಕಳ ಜನನ ಏಳಕೇಳು ದಿನವಮ್ಮ.
ಅಳುಕಿಸಿ-ನಡುಕಿಸಿ ಕಳವಳಿಸಿ-ಹೆದರಿಸಿ, ಎತ್ತರತತ್ತರ ಮರುಳು ಮಾಡಿ ಕನಸು-
ಕಳವಳ-ಒತ್ತರಮಂ ಒತ್ತರಿಸಿ ನಡೆದು ಬುದ್ಧಿಯರಿದಂತೆ ಕಂಪಿಸಿ ಕಳವಳಿಸಿ ನುಡಿವ
ರಮ್ಮ. ಮತ್ತೊಮ್ಮೆ ಮನಬಂದಂತೆ ನಡೆದು ಬುದ್ಧಿಯರಿಯದಂತೆ ಸ್ಥಿರಕರಿಸಿ ಚಿತ್ತಬಂದಂತೆ
ಅವಧರಿಸಿ, ಅಹಂಕಾರ ತೋರಿದಂತೆ ಬಿರಿಪಿಡಿದಲೆವುತ್ತಿಪುದಮ್ಮ. ಒಮ್ಮೆ ಮರನಾಗುವೆಯಮ್ಮ,
ಒಮ್ಮೆ ಮನುಷ್ಯಳಾಗುವೆಯಮ್ಮ. ಇದರೊಳು ಸಿಲ್ಕಿದೆನೆಂದು ಚಿಂತಿಸದಿರಮ್ಮ.
ಈ ಚಿಂತನೆಯ ಮಂತ್ರದಿಂ ಕಳೆದು ನಿಶ್ಚಿಂತದೋರಿಸುವೆ. ಎನ್ನೊಡೆಯ
ಜಗದೀಶ ಆದಿಲಿಂಗನ ಪಾದವನನುದಿನ ಅಗಲದೆ ನಂಬಿ ನಚ್ಚಿ ಭಜಿಸಮ್ಮ.

ಅದು ಎಂಥ ಉಪದೇಶದ ನೋಂಪಿಯಮ್ಮ?

ಮಂಗಳವಾರದ ದಿನ ಮನೆಯ ಸಾರಿಸೆಯಮ್ಮ, ಕಟ್ಟುಮುಟ್ಟು ಹೊರಯಿಕೆ ಬಿಸಾಡೆಯಮ್ಮ.
ರಂಗಮಂಟಪವ ರಚಿಸಿ ಚೌಕವಲಂಕರಿಸೆಯಮ್ಮ. ರಂಗದಕ್ಕಿಯಮೇಲೆ ಕಳಶವನ್ನಿಟ್ಟು
ಐವರು ಅಚ್ಚ ಮುತ್ತೈದೆಯರ ಕುಳ್ಳಿರಿಸೆಯಮ್ಮ. ತೂ[=ತಾ]ಳಮೇಳದವರ ಕರೆ
ತಂದು ಶುಭವಾದ್ಯವ ಮೊಳಗಿಸೆಯಮ್ಮ. ಮನೆಯ ದೇವರ ಜ್ಯೋತಿಯ ತುಂಬಿ, ಕಪ್ಪುರದ
ಮಂಗಳಾರತಿಯ ತಂದಿಸಿಸೆಯಮ್ಮ, ಸುಚಿತ್ತೆಯಾಗಿ ಸಮ್ಮುಖದಲ್ಲಿ ಕುಳ್ಳಿರೆಯಮ್ಮ.
ತಲೆಗೈಯನಿಕ್ಕಿ, ವಿಭೂತಿಯ ಹಣೆಗಿಟ್ಟು, ಕಿವಿಯೊಳು ಮಂತ್ರವನುಸುರಿದನಮ್ಮ;
ನೆತ್ತಿಯ ಲಿಂಗವ ಹಸ್ತಕೆ ಕೊಟ್ಟು, ಕರ್ತೃ ಅಲ್ಲಯ್ಯ ಸಾಕ್ಷಿಯಾಗಿ! ಉಪಾಯದಿಂ
ಉದರವ ಹೊರೆವ ಉಪಾಧಿ ಕೊರವಿಯಲ್ಲ. ಪರವ ತೋರುವ ಪರಮದೀಕ್ಷಾ ಕೊರವಿ ನಾನಮ್ಮ.

ಪದ:
ಈಶಮಹೇಶನೆ ಮನೆದೈವವಮ್ಮ
ಬೇಸರು ಮಾಡಿ, ರಾಶಿದೈವವ ಹಿಡಿಯೆ
ಕಾಸಿಂಗೆ ಬಾರದ ಕಸನಪ್ಪೆಯಮ್ಮ,
ಹೇಸಿ ದೈವವ ಬಿಡು, ಪಿಡಿಯೀಶನಡಿಯ,
ಮೀಸಲ ಹಿಡಿಯಮ್ಮ ಸೂಸದ ಮನವ
ನಾಸಿಕಾಗ್ರದೊಳು ಗಮಿಸಿ ನಿಲ್ಲಮ್ಮ! ||೩||

ವಚನ:
ಇಂತೀ ದೇವರಿಗೆ ನಿಷ್ಠೆಯಿಂದ ನೇಮವ ಮಾಡಬೇಕಮ್ಮ!
ಅದೆಂಥಾ ನೇಮವೇ ತಾಯಿ?

ಪೊಡವಿಗೊಡೆಯ ಮೃಡನೊಬ್ಬನೆ ನಿಮ್ಮ ಮನದ ದೈವವಮ್ಮ. ಈ ದೇವರ ನೋತು
ಫಲವೇನೂ ಕಾಣೆಂದಲಸದಿರಮ್ಮ. ನಾಡ ಹಿಡಿದಾಡುವ ಕೇಡಿಗ ದೈವವ ಬಗೆಯದಿರಮ್ಮ.
ಅವು ನಿಮ್ಮ ಕಾಡುವವಮ್ಮ. ಕರಕಷ್ಟಬದ್ಧಭವಿಯಾಗುವೆಯಮ್ಮ. ಲಜ್ಜೆಗೆಟ್ಟು
ಕಿರುಕುಳ ನೀಚದೈವಂಗಳ ಸಂಗ ಬೇಡಮ್ಮ. ಎಲ್ಲ ದೇವರೊಡೆಯ ಲಿಂಗದೇವನೆ
ನಿನ್ನ ಮನದೈವ ಕುಲದೈವವಮ್ಮ. ಮನದಲ್ಲಿ ನಂಬಿ ನಚ್ಚಿ ಗುಡಿಗಟ್ಟೆಯಮ್ಮ. ಏಳು ಮಂದಿ
ಅಚ್ಚಮುತ್ತೈದೆಯರನೊಂದು ಹೊತ್ತನಿರಿಸೆಯಮ್ಮ. ಶುದ್ಧಪದ್ಮಾಸನವನಿಕ್ಕೆಯಮ್ಮ.
ನಾಭಿ ಪವನವನೆತ್ತೆಯಮ್ಮ. ನಾಸಿಕಾಗ್ರದಿ ನಿಲ್ಲೆಯಮ್ಮ. ರವಿಶಶಿಗಳಾಟವ
ನೋಡೆಯಮ್ಮ. ತಾಳಮದ್ದಲೆಯ ಬಾರಿಸೆಯಮ್ಮ. ಓಂ ನಮಶ್ಶಿವಾಯವೆಂದು ಓಲಗವ ಮಾಡೆಯಮ್ಮ

ಪದ:
ಕುಂಭಿನಿದೈವವ ಹಿಡಿಯೆ ನೀ ಕೆಟ್ಟೆ!
ಶಂಭುಲಿಂಗನ ಕೈಯ ಬಿಡಲು ನೀ ಭ್ರಷ್ಟೆ!
ಇಂಬುಗೊಡಲು ಬೇಡ, ಇದಿರಿಟ್ಟವೆಲ್ಲ!
ಹಂಬಲು ಬಿಡು ಭ್ರಷ್ಟದೈವವನೆಲ್ಲ
ನಂಬಿ ಶುದ್ಧವಾಗೆ ನಿಜಲಿಂಗದಲಿ
ಮುಂಬಾಗಿಲೊಳು ಪೊಕ್ಕು ಲಾಲಿಸು ಸೊಲ್ಲ! ||೪||

ವಚನ:
ಇಂತೀ ನಿಷ್ಠೆ ನಿರ್ಧರವಾಗಬೇಕೆಯಮ್ಮ!
ಅದೆಂಥಾ ಧೃಢಭಾವವೆ ತಾಯಿ?

ನಾಡಾಡಿ ದೈವವ ನೋತಡೆ ಕೇಡಲ್ಲದೆ ಸುಖವಿಲ್ಲವಮ್ಮ. ಏಕಲಿಂಗನಿಷ್ಠೆ ಇಲ್ಲದಡೆ
ಕಾಕಪ್ಪೆಯಮ್ಮ. ಕಂಡಕಂಡ ದೈವಂಗಳ ಕೊಂಡೆಸಗಲು ಮುಡುಹಂ ಸುಟ್ಟು ನೀರು
ಮುಳುಗಿ, ಸುತ್ತಿ, ತಲೆಯಂ ತರಿದು, ಬತ್ತಲೆ ಬಳಸಿ, ಕುರುಳು ಬೆರಳು ಮುಂಬಲ್ಲು
ಹೋಗಿ, ಕೆಟ್ಟು, ಡೊಣೆಯಲಿ ತಿಂದು, ನಾಯಾಗಿ ಬೊಗುಳಿ, ಲಜ್ಜೆಗೆಟ್ಟು ಚೀಮಾರಿಯಪ್ಪೆಯಮ್ಮ.
ನೆನೆದು-ಬಿರಿದು-ಉಲಿದು, ಕರಗಿ ಕರಿಮುರುಯಪ್ಪೆ. ಬಿನುಗುಭಿಕಾರ
ದೈವಂಗಳ ನೆನೆಯದಿರಮ್ಮ. ಪ್ತತಿಪೂಜೆ ಮಾಡದೆ ಆಚಾರದಲ್ಲಿ ನಿಂದುದೆ ನಿಷ್ಠೆಯಮ್ಮ.
ನಿಷ್ಠೆಯಿಲ್ಲದ ಪೂಜೆ ಎಷ್ಟು ಕಾಲ ಮಾಡಿದರೂ ನಷ್ಟವಲ್ಲದೆ ದೃಷ್ಟವುಂಟೆ? ಆದಿಲಿಂಗನ
ಭಜಿಸೆಯಮ್ಮ. ಆತ್ಮಲಿಂಗವ ಧ್ಯಾನಿಸಮ್ಮ. ಚಿತ್ತ ಶುದ್ಧವಾಗಿರಲಮ್ಮ.

ಅದೆಂಥಾ ಸುಯಿಧಾನವೆ ತಾಯಿ?

ಒಂಬತ್ತು ಬಾಗಿಲ ಕದವನಿಕ್ಕಿ ಒಳಯಿಕೆ ಒಬ್ಬ್ರನು ಬಿಡದಿರೆ, ಸುಮ್ಮನೆ ಕಳುಹೆ.
ಒಮ್ಮನವ ಮಾಡೆ, ಗಮ್ಮನೆ ನಡೆಯೆ, ಘಳಿಲೆಂದು ಪೋಗೆ, ದಿಗಿಲೆಂದು ಹತ್ತೆ, ಎಡ
ಬಲನಂ ಮುರಿಯೆ, ಬೀಗವಂ ಕೊಳ್ಳೆ, ಕುಂಭಿನಿಯ ಬಾಗಿಲ ಕದವ ತಳ್ಳೆ, ಒಳಪೊಕ್ಕು
ಒಂದಾಗಿ ನೋಡೆ, ಸೋಹವೆಂಬ ಬ್ರಹ್ಮನಾದವನಾಲಿಸಮ್ಮ. ಪರತತ್ವದೊಳು ಉರಿ
ಕರ್ಪೂರದಂತಾಗಮ್ಮ. ಇಂತೀ ನಿಷ್ಠೆಗೆ ನಮೋ ನಮೋ ಎಂಬೆನಮ್ಮ ಬೋಸರಿಗತನದ
ಲೇಸಿನವಳು ನಾನಲ್ಲಮ್ಮ.

ಪದ:
ಆದಿಯನರಿಯೆನಮ್ಮ ಭೇದಿಸಿ ಮುನ್ನ!
ಮೇದಿನಿಯೊಳು ಬಂದು ಮರೆದೆಯಲ್ಲಮ್ಮ!
ತಂದೆ ಹಬ್ಬೆಯನೆತ್ತಿ ಹೇಳುವೆ ನಿಮ್ಮ
ಬಂದ ಮಾರ್ಗದಲ್ಲಿ ಗಮಿಸಿ ನಿಲ್ಲಮ್ಮ
ಭ್ರೂಮಧ್ಯದ ಮನೆಯೊಳಗಿರ್ದು ಕಾಣಮ್ಮ
ಮುಂದಣ ಕೋಣೆಯೊಳೆ ಜೀವಿಸು ನೀನಮ್ಮ ||೫||

ವಚನ:
ಮುನ್ನೊಮ್ಮೆ ಆದಿಯ ಲೀಲೆಯಿಂದ ಮೇದಿನಿಗಿಳಿದು ಆಗುಚೇಗೆಗೊಳಗಾಗಿ ನಿನ್ನ
ನಿಜವನರಿಯದ ಪರಿಯ ತಿಳಿದು ನೋಡಮ್ಮ.

ಅದೆಂಥ ದೇವರ ಲೀಲೆಯೆ ತಾಯಿ?

ನಾದ-ಬಿಂದು-ಕಳೆ-ಆದಿಯನಾಗಿ ತತ್ವಂಗಳಾವುವುವಿಲ್ಲದಂದು, ತಂದೆ ತಾನೆ
ತಾನಾಗಿರ್ದನಮ್ಮ. ಆತನ ಸತಿಯಾನೆಯಮ್ಮ. ತನಗೆ ಮಖ್ಖಳು ಬೇಕಾಗಿ ನೆನೆದಡೆ
ನಾದ-ಬಿಂದು-ಕಳಾಯುಕ್ತವಾದ ಓಂಕಾರವಾಯಿತಮ್ಮ. ಆ ಓಂಕಾರವೆ ಆದಿಯ ಶರಣನಮ್ಮ.
ಆ ಶರಣನ ಶಕ್ತಿಯ ಹೆಸರು ನೀನೆಯಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಪರಸತಿಯೆಂದು ಸದಾಶಿವಂಗೆ ಕೈಗೂಡಿಸಿದನಮ್ಮಾ. ನಿನ್ನೊಡನೊಬ್ಬಳು ಹುಟ್ಟಿದಳು.
ಆದಿಶಕ್ತಿಯೆಂದು ಈಶ್ವರಂಗೆ ಸಂಬಂಧಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಇಚ್ಛಾಶಕ್ತಿಯೆಂದು ರುದ್ರಂಗೆ ಪಟ್ಟವ ಕಟ್ಟಿದೆನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಜ್ಞಾನಶಕ್ತಿಯೆಂದು ವಿಷ್ಣುವಿಂಗೆ ಕೈಗೂಡಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಕ್ರಿಯಾಶಕ್ತಿಯೆಂದು ಬ್ರಹ್ಮಂಗೆ ಧಾರೆಯನೆರೆದನಮ್ಮ. ಇವರು ನಿನ್ನಿಂದ ಹುಟ್ಟಿದ ಪಂಚ
ಕೃತ್ಯಂಗಳಿಗೊಳಗಾದರು. ಇದರೊಳು ಪೊಕ್ಕು ಬಳಸಿದೆಯಾಗಿ ನನ್ನ ನೀ ಮರೆದೆಯಮ್ಮ;
ಇನ್ನಾದರೂ ಎಚ್ಚೆತ್ತು ನಡೆಯೆ.

ನಡೆವ ಗತಿ ಪಥವಾವುದೆ ತಾಯಿ?

ಇವರು ನಿನ್ನೊಳಗಿರ್ಪರಮ್ಮ. ಪಂಚಭೂತಂಗಳಿಗೊಡೆಯರಮ್ಮ. ಪಂಚ ಚಕ್ರಗಳಧಿಕಾರಿಗಳಮ್ಮ.
ಮೊದಲಿವರ ನಿನ್ನ ವಶವ ಮಾಡಿಕೊಳ್ಳಮ್ಮ. ಇವರ ಸಂಗವನಗಲಿ,
ಹುಟ್ಟಿದ ಮಾರ್ಗವೆರಸಿ ಹುಬ್ಬಳ್ಳಿಗೆ ನಡೆಯಮ್ಮ. ಅಲ್ಲಿ ನಿರ್ಮಲ ಲಿಂಗ ಉಂಟಮ್ಮ.
ಪತಿಭಕ್ತಿಯ ಮಾಡಮ್ಮ ನಿನ್ನ ಗಂಡನೊಲಿವನಮ್ಮ. ಮೂಮ್ದಣ ಬಾಗಿಲ ತೆಗೆಯಮ್ಮ.
ಮೇಲಣ ಕೋಣೆಯ ಪೌಳಿಯ ಬಳಸಿ ನೋಡೆಯಮ್ಮ. ಥಳಥಳಿಸುವ ಪರುಷದ ಪೀಠದಲ್ಲಿ
ಪರಂಜ್ಯೋತಿ ಲಿಂಗವಿಪ್ಪುದಮ್ಮ. ನಿನ್ನ ಹೆಯ್ಯತ್ತನೆಂದು, ಹತ್ತಿರ ಬಂದು ನಮಿಸಮ್ಮ.
ಅಮೃತಕೂಪವ ಮೊಗೆಯಮ್ಮ. ತುಂಬಿದ ಕೊಡನ ಘೃತವಂ ಶಂಭುಲಿಂಗನ
ಮಂಡೆಗೆರೆಯಮ್ಮ. ಕೂಪದೊಳಗಣ ಕಮಲವ ಪಿಡಿಯಮ್ಮ. ಮಸ್ತಕದೊಳು ಮಡಗಮ್ಮ.
ಧೂಪಾರತಿಯ ಬೆಳಗಮ್ಮ. ಅಮೃತಾರೋಗಣೆಯ ಮಾಡಿಸಮ್ಮ. ಕರ್ಪೂರ
ವೀಳ್ಯವ ಸಲಿಸಮ್ಮ. ಗೀತವಾದ್ಯ ನೃತ್ಯಂಗಳಿಂ ಮೆಚ್ಚಿಸಮ್ಮ. ಸಂಭ್ರಮದ ಪೂಜೆಯೊಳು
ಸೈವೆರಗಾಗಮ್ಮ. ಇಂತೀ ಅವಿರಳ ಭಾವಪೂಜೆ ನಮೋ ನಮೋ ಎಂಬೆಯಮ್ಮ.

ಪದ:
ನಾಗರ ಕಾಟಕ್ಕೆ ನವೆದೆಯಲ್ಲಮ್ಮ
ನಾಗಲೋಕದಿಂ ಹಿಡಿಯಿತು ನಿಮ್ಮ.
ಜಗವನೆಲ್ಲವ ನುಂಗಿ ಜಾಳಿಸುತೈತೆ.
ಗಂಗಾಧರನ ಕಾಟದ ಸರ್ಪವಮ್ಮ.
ಬೇಗದಿಂದ ತ್ರಿಗಗನಕೊಗೆಯಮ್ಮ
ಈಗಲೆ ಪರಶಿವನೊಲವಿದೆಯಮ್ಮ ||೬||

ವಚನ:
ಆಧಾರಕುಂಡಲಿಯ ಸರ್ಪನ ವೇದನೆಯಿಂ ಭವರುಜೆಯಕ್ಕೀಡಾಗಿ ಬಳಲುತಿರ್ದೆಯಮ್ಮ.

ಅದು ಎಂಥ ಶೇಷನೆ ತಾಯಿ?

ಒಂಬತ್ತು ಹೋರಿನ ಹುತ್ತದಲ್ಲಿ ಸ್ಥಾನವಾಗಿರ್ಪುದಮ್ಮ, ಐದು ಮುಖದ ಅಜ್ಞಾನ ಸರ್ಪ!
ಪೂರ್ವಕ್ಕೊಂದು ಮುಖ, ಪಶ್ಚಿಮಕ್ಕೊಂದು ಮುಖ; ಉತ್ತರಕ್ಕೊಂದು ಮುಖ;
ದಕ್ಷಿಣಕ್ಕೊಂದು ಮುಖ; ಅಧೋದ್ವಾರಕ್ಕೊಂದು ಮುಖ; ಪಂಚವರ್ಣದ ಪ್ರಳಯ
ಕಾಳೋರಗನೆಯಮ್ಮ. ಅಲ್ಲಿಂದ ಬಂದು ನಿನ್ನನಲೆವುತ್ತಿದೆಯಮ್ಮ. ಅದರ ವಿಷದ ಹೊಗೆ
ತಾಗಿ ಅಜನ ಸೃಷ್ಟಿಯಲಿ ಅಲಿಪರಿದೆಯಮ್ಮ ನಿನ್ನ ಮಾತೇನು, ಈರೇಳು ಲೋಕವನೆಲ್ಲವ
ಕಚ್ಚಿ ಕೆಡವುತ್ತಿದೆಯಮ್ಮ. ಅದು ಪರಮೇಶ್ವರನ ಆಜ್ಞಾಶಕ್ತಿ ತಾನೆಯಮ್ಮ.

ಇಂಥಾ ಶೇಷನ ಹಿಡಿದುಕೊಂಡು ಪ್ರಸಾದವ ಕೊಂಬ ಪರಿಯಾವುದೆ ತಾಯಿ?

ಅಡಿಯ ಮಡದಿಂದೊತ್ತೆಯಮ್ಮ. ಹುತ್ತದ ಒಂಭತ್ತು ಹೋರನೆ ಮುಚ್ಚೆಯಮ್ಮ.
ಅಧೋಪವನವನೂರ್ಧ್ವಕೆತ್ತೆಯಮ್ಮ. ಮೂಲಾಗ್ನಿಯ ಪಟುವ ಮಾಡೆಯಮ್ಮ. ಆಧಾರ
ಕುಂಡಲಿಯನಂಡಲೆದಭಿಮುಖವ ಮಾಡೆಯಮ್ಮ. ನಾಗಸ್ವರದ ಶೃತಿಯ ನಖದ ಕೊನೆಯಲ್ಲಿ
ಹೆಚ್ಚಿಸೆಯಮ್ಮ. ಕಂಠಝೇಂಕಾರ ಸಪ್ತಸ್ವರದಂತಿರುಹೆಯಮ್ಮ. ಅದು ನಾದದ
ನಾದವ ಕೇಳುತ್ತ ನಾಭಿಮಂಡಲದಿಂದೆದ್ದು ಉಸುರ ಉನ್ಮನಿಯಲ್ಲಿ ಬಿಡುತ್ತ ಒಂದೆ ನಾಳದಲ್ಲಿ
ಗಮನಿಸುವುದಮ್ಮ ಮೇಲಣ ಕೋಣೆಯೊಳಗಿರ್ಪ ಕಪ್ಪೆ ಒತ್ತೆಯ ನುಂಗುವುದಮ್ಮ.
ಅಲ್ಲಿ ಸತ್ತ ಸರ್ಪನ ನೆತ್ತಿಯಲ್ಲಿ ಮಾಣಿಕವಿಪ್ಪುದಮ್ಮ, ಅದ ಸೆಳೆದುಕೊಳ್ಳಮ್ಮ.
ಅಪ್ರಶಿಖಾಮಂಡಲದ ಅಮೃತಾಹಾರವ ಸವಿಯಮ್ಮ. ಗಗನಾಂಬರ ಆತ್ಮನಿರತೆಯಾಗಿರಮ್ಮ,
ಪರಮೇಶ್ವರನಲ್ಲಿ ಪ್ರಸನ್ನಮುಖ ತಪ್ಪದಮ್ಮ. ಇಂಥ ಶೇಷನ ಪ್ರಸಾದಕ್ಕೆ ನಮೋ
ನಮೋ ಎಂಬೆನಮ್ಮ.

ಪದ:
ಎಲ್ಲವ ಹೇಳುವೆ ಎಲ್ಲಿಪ್ಪೆ ಕೊರವಿ?
ಕಲ್ಯಾಣದ ಚೆಲುವೈಕುಂಠವಮ್ಮ.
ಅಲ್ಲಿಂದನೆಲ್ಲವ ಪೇಳಿದೆ ನಿಮ್ಮ
ವೇಳೆಯನರಿತು ಹೋಗೆ ಎಡೆಮಾಡಿ ತಾರೆ
ಮೊದಲಾದ ಪಂಚಭಿಕ್ಷವ ಕೊಂಡುಬಾರೆ
ಚೆನ್ನಮಲ್ಲಿಕಾರ್ಜುನನ ವರವೆನಗುಂಟೆ ||೭||

ವಚನ:
ಮನಸಿನ ಕನಸಿನ ಕೋರಿಕೆಯೆಲ್ಲವ ಕಂಡಂತೆ ಪೇಳಿದೆ ನಿನ್ನ ಸ್ಥಲ-ನೆಲೆ ಯಾವುದೆ ತಾಯಿ?

ಕಲ್ಯಾಣವೆನ್ನ ತವರೂರಮ್ಮ. ವೈಕುಂಠವೆನ್ನ ಗಂಡನೂರೆಯಮ್ಮ. ಅಲ್ಲಿಂದ
ಬಂದು ನಿನ್ನ ಮನಕ್ಕೆ ಮಂಗಳವಪ್ಪಂತೆ ಪೇಳಿದೆನಮ್ಮ. ಅರಿವಿನ ಅಚ್ಚಕೊರವಿತಿ
ನಾನಮ್ಮ. ಎನಗೆ ದೇವರ ಒಲವರವುಂಟಮ್ಮ.

ಅದೆಂಥ ದೇವರುಗಳ ವರದಿಂದ ಪೇಳಿದೆಯಮ್ಮ?

ನೆಲದುರ್ಗದ ಭ್ರಾಂತದೇವಿ, ಸೊನ್ನಲಪುರದ ಲಕ್ಷ್ಮಿದೇವಿ, ಅನಲಾಪುರದ ಕ್ರಿಯ
ಮಹಂಕಾಳಿ, ಅಮೃತಾಪುರದ ಈಶಮಹೇಶ್ವರಿ, ಗಗನಾಪುರದ ನಾನಾ ಮಹಂತಿ, ಅಂಬಾಪುರದ
ಕ್ರಿಯಾಮಹೇಶ್ವರಿಯ ವರವೆಯಮ್ಮ ಮತ್ತು ಭೂಮಿಯೊಳಗಿರ್ಪ ಬ್ರಹ್ಮ
ದೇವರು, ಸಲಿಲದೊಳಗಿರ್ಪ ವಿಷ್ಣುದೇವರು, ಅಗ್ನಿಯೊಳಗಿರ್ಪ ರುದ್ರದೇವರು, ಪವನದೊಳಗಿರ್ಪ
ಈಶ್ವರದೇವರು, ಗಗನದೊಳಗಿರ್ಪ ಸದಾಶಿವರು, ಅಂಬರದೊಳಗಿರ್ಪ ಪರಶಿವದೇವರ
ವರವೆಯಮ್ಮ. ಮತ್ತಂ ಸದ್ಯೋಜಾತಮುಖದ ಆಚಾರಲಿಂಗ ದೇವರು ವಾಮದೇವಮುಖದ ಶಿವಲಿಂಗದೇವರು,
ತತ್ಪುರುಷಮುಖದ ಚರಲಿಂಗದೇವರು, ಈಶಾನಮುಖದ ಪ್ರಸಾದಲಿಂಗದೇವರು,
ಗಂಭೀರಮುಖದ ಘನಲಿಂಗದೇವರ ವರವೆಯಮ್ಮ. ಇಂತಿ ಒಂದೆ, ಎರಡೆ, ಮೂರೆ, ನಾಲ್ಕೆ,
ಐದೆ, ಆರೆ! ಮೀರೆ ಏಕನಾದವೆಂಬ ಎಕ್ಕೆಯ ಬೆನವನ ವರದಿಂ ಎಡೆದೆರಹಿಲ್ಲದೆ ಪರಿಪೂರ್ಣವಾದ
ಸಂದ ಶಂಕೆಯಳಿದು ಪೇಳಿದೆಯಮ್ಮ. ಇನ್ನೀತತ್ವ-ಸ್ಥಳ-ಕುಳಭೇದವನರಿದು ಅರ್ಪಿತಾವಧಾನ
ಮುಖಂಗಳ ವಿವರಿಸಿ ಸಕಲಪದಾರ್ಥಂಗಳ ನನಗೆಯು ದೇವರಿಗೆಯುಣಬಡಿಸಬೇಕಮ್ಮ.

ಅರ್ಪಿಸುವ ಸಾವಧಾನವಾವುದಮ್ಮ?

ಸದ್ಭಕ್ತಿಯಿಂದ ಭಕ್ತನನರಿದು, ಸುಚಿತ್ತಹಸ್ತದಿಂ ಸುಗಂಧವ ಆಚಾರಲಿಂಗದೇವರಿ
ಗರ್ಪಿಸಬೇಕಮ್ಮ. ನೈಷ್ಠಿಕ ಭಕ್ತಿಯಿಂ ಮಾಹೇಶ್ವರನನರಿದು ಸುಬುದ್ಧಿ ಹಸ್ತದಿಂ ಸುರಸವ
ಗುರುಲಿಂಗದೇವರಿಗರ್ಪಿಸಬೇಕಮ್ಮ. ಅವಧಾನ ಭಕ್ತಿಯಿಂ ಪ್ರಸಾದವನರಿದು ನಿರಹಂಕಾರ
ಹಸ್ತದಿಂ ಸ್ವರೂಪವ ಶಿವಲಿಂಗದೇವರಿಗರ್ಪಿಸಬೇಕಮ್ಮ. ಅನುಭಾವ ಭಕ್ತಿಯಿಂ
ಪ್ರಾಣಲಿಂಗಿಯನರಿದು ಸುಮನ ಹಸ್ತದಿಂ ಸುಸ್ಪರ್ಶನವ ಚರಲಿಂಗದೇವರಿಗರ್ಪಿಸಬೇಕಮ್ಮ.
ಆನಂದಭಕ್ತಿಯಿಂ ಶರಣರನರಿದು ಸುಜ್ಞಾನದಿಂದ ಸುಶಬ್ದವ ಪ್ರಸಾದ
ಲಿಂಗದೇವರಿಗರ್ಪಿಸಬೇಕಮ್ಮ. ಸಮರಸ ಭಕ್ತಿಯಿಂ ಐಕ್ಯನನರಿದು ಸದ್ಭಾವ ಹಸ್ತದಿಂ
ಸಂತೃಪ್ತಿಯ ಮಹಾಲಿಂಗದೇವರಿಗರ್ಪಿಸಬೇಕಮ್ಮ. ಮೀರಿದ ಸುಖವ ಪರತತ್ವದೊಳೊಡಗೂಡಿ
ಪ್ರಸಾದವ ಪಡೆದು ಪರಿಣಾಮಿಯಾಗಿರಮ್ಮ. ಇದು ನಿನಗೆ ಪರಾಪರಮುಕ್ತಿ
ಪರಶಿವಲಿಂಗದೊಲವಮ್ಮ.

೩೬೬.
ತೂಗಿದೆನು ನಿಜದುಯ್ಯಾಲೆ ನಾ
ಬೀಗಿದೆನು ನೆನವು ನಿಶ್ಚಲದಲ್ಲಿಗೆ ||ಪಲ್ಲವ||
ನಿಲ್ಲದೆ ಧರೆಯ ಮೇಲೆ ನೆಟ್ಟವರ
ಡಾಲಿಕಲ್ಲಿನ ಕಂಭವು
ಮೇಲೆ ಮಾಣಿಕದ ತೊಲೆ
ಕೀಲಿಟ್ಟು ಜಾಣನಾಡಿದೆನುಯ್ಯಲ ||೧||
ಸರವು ನಾಲ್ವರ ಹತಿಯೊಳು ಭರದಿಂದ
ಅರಿತ ಮಣೆಯಾರ ನಿಲಿಸಿ
ಅರಿದ ತೊಲೆಯ ಕಟ್ಟಲು ಆ ಉಯ್ಯಾಲೆ
ಹರಿಯುತೊದೆಯಿತು ಮುಂದಕ್ಕೆ ||೨||
ನಾದದ ಕಲ್ಲ ಕಟ್ಟಿಯದರೊಳಗೆ
ಭೇದಿಸುವ ಬಿಂದುಜಲವು
ಆಧಾರದ ಕಳೆಮೊಳೆಯೊಳು ಕೊಳವನದ
ಆದಿಲಿಂಗನ ಪಾಡುತ ||೩||
ಮುತ್ತುಮಾಣಿಕ್ಯದ ರತ್ನದ ತೊಡಿಗೆಯನು
ಸತ್ಯಮುಖಿಯರು ತೊಟ್ಟರು
ಅರ್ತಿಯಿಂ ರಾಗ ಮಾಡಿ ಪಾಡಿದರು
ಸತ್ಯಜ್ಞಾನದ ಶೃತಿಯೊಳು ||೪||
ಕೊಳಲು ಕಹಳೆಯ ಡೋಲಿನ ರವಸಕ್ಕೆ
ನಲಿದು ಒಡೆಯಿತು ಮುಂದಕ್ಕೆ
ಹೊಳೆವ ವಜ್ರದ ಕಂಭದ ಬೆಳಗಿನ
ಒಳಗೆ ಆಡಿದೆನುಯ್ಯಲ ||೫||
ಈಡಾಪಿಂಗಳನಾಳದ ಬೆಳಗಿನೊಳ
ಗಾಡಲೊದೆಯಿತು ಮುಂದಕ್ಕೆ
ನಾಡು-ದೇಶವು ನೋಡಲಾ ಉಯ್ಯಾಲೆ
ಗಾಡಿ ಸುಷುಮ್ನೆಯ ಕೂಡಿತು ||೬||
ಆರು ಚಕ್ರವನು ದಾಂಟಿ ಆರು ಉಯ್ಯಾಲೆ
ಹೋರ ಒದೆಯಿತು ಮುಂದಕ್ಕೆ
ಮೀರಿದ ಸ್ಥಲದಿ ನಿಂದು ಚೆನ್ನಮಲ್ಲನೊಳು
ಬೆರೆದು ಆಡಿದೆನುಯ್ಯಾಲೆ ||೭||

೩೬೭.
ಅರುಹಿಂದ ಆಚರಿಸಬೇಕು
ಮರಹಿಲ್ಲದೆ ತಾನಿರಬೇಕು
ರೆತೆಯ ಮರೆಯ ಕುರುಹರಿಯಬೇಕು
ಪರಬ್ರಹ್ಮದೊಳಗೆ ತಾ ನೆರೆಯಬೇಕು ||ಪಲ್ಲವ||
ಪಟ್ಟಣವನೆಲ್ಲ ಸುಟ್ಟು ಮಡಿಯಬೇಕು | ದೊಡ್ಡ
ಸೆಟ್ಟಿಕಾತಿಯ ಪಟ್ಟವಳಿಯಬೇಕು
ಪಟ್ಟದ ರಾಣೀಯೊಳು ನುಡಿಯಬೇಕು | ಅಲ್ಲಿ
ಬಿಟ್ಟ ಮಂಡೆಯೊಳು ತಾ ನಡೆಯಬೇಕು ||೧||
ಚಿಕ್ಕತಂಗಿಯೊಳೊಪ್ಪಿಯಾಡಬೇಕು | ತ
ಮ್ಮಕ್ಕನ ಬಿಗಿಬಿಗಿದಪ್ಪಬೇಕು
ಕುಕ್ಕುಟ ದನಿದೋರಿ ಕೂಗಬೇಕು | ನೆರೆ
ಸೊಕ್ಕಿದವರು ಮುರಿದೋಡಬೇಕು ||೨||
ಚಿಕ್ಕುಟು ಕಣ್ಣೆರೆದುಕ್ಕಬೇಕು |
ಬೆಕ್ಕಿನ ದೃಕ್ಕನು ಕುಕ್ಕಬೇಕು
ಹಕ್ಕಿಯ ಪಕ್ಕವ ಹಿಕ್ಕಬೇಕು | ಬಹು
ರಕ್ಕಸರುಗಳೊಕ್ಕಲಿಕ್ಕಬೇಕು ||೩||
ತಂದೆಯಂಗನೆಯೊಳಗಾಡಬೇಕು | ತನ್ನ
ಕಂದನ ತಾ ಬಂದು ಕೂಡಬೇಕು
ಹಿಂದುಮುಂದಾಗಿ ಮತ್ತೆ ನಡೆಯಬೇಕು | ನಿಜ
ಮಂದಿರದಿಂದುವ ಸುಡಬೇಕು ||೪||
ಹರಿಯ ಮನೆಯ ಮೆಟ್ಟಿ ಮರೆಯಬೇಕು
ಕರಿಗಳೆಲ್ಲವ ಕೊಂದುರಿಯಬೇಕು
ಕರಿಯ ಬೇದನ ಶಿರವನರಿಯಬೇಕು | ತನ್ನ
ಬರಿಯ ಮನೆಯ ಹೊಕ್ಕು ನೆರೆಯಬೇಕು ||೫||
ಮಂಜಿನ ಕೊಡನೊಡೆರೆದರಿಯಬೇಕು | ಅದ
ರಂಜಿಪ ಬಂಜೆಯು ಪರಿಯಬೇಕು
ಮುಂಜೂರಲಮೃತ ಕರೆಯಬೇಕು | ಬೇಗ
ನಂಜದೆ ಸುರಿದು ಮೈಮರೆಯಬೇಕು ||೬||
ಹುಲ್ಲೆಯ ತಲ್ಲಣವಡಗಬೇಕು | ಅಲ್ಲಿ
ಮೆಲ್ಲನೆ ಬಿಲ್ಲುಗಾರ ಸೋಲಬೇಕು
ಸೊ(ಬಿ?)ಲ್ಲುಗಾರನ ಬಿಲ್ಲು ಮೆಲ್ಲಬೇಕು | ಚೆನ್ನ
ಮಲ್ಲಿಕಾರ್ಜುನನಲ್ಲಿ ನಿಲ್ಲಬೇಕು ||೭||

೩೬೮.
ಏನೋ ನಮ್ಮ ನಲ್ಲ ನೀ ಮನೆಗೇಕೆ ಬಾರೆ
ನಾನೇನು ತಪ್ಪನು ಮಾಡಿದುದಿಲ್ಲ ||ಪಲ್ಲವ||
ಕೂಸಿನ ತಾಯಿಗೆ ಹೇಸದೊತ್ತೆಯ ಕೊಟ್ಟು
ಕೂಸತ್ತೆನ್ನಯ ನಲ್ಲ ಬೇಸತ್ತು ಹೋದೆ ||ಅನುಪಲ್ಲವ||
ಮನವುಳ್ಳ ಭಾವಕಿಗನುವಾಗಿ ನಮ್ಮ ನಲ್ಲ
ಮನ ಸಂಚಲವಾಗಲನುವಾದುದಿಲ್ಲ ||೧||
ಒತ್ತೆಯ ನಲ್ಲನ ತೋಳ ಮೇಲೊರಗಿದೆ
ಚಿತ್ತದ ನಲ್ಲನ ಕನಸಿನಲಿ ಕಂಡೆ ||೨||
ಕೇಳಯ್ಯ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನೀನು ಮಾತಾಡಿದುದುಂಟು ಕೂಡಿದುದಿಲ್ಲ ||೩||

 

ಅಕ್ಕನ ವಚನಗಳು - 201 ರಿಂದ 300 ರವರೆಗೆ

೨೦೧.
ಭಕ್ತೆ ಏನಪ್ಪೆನಯ್ಯ ಕರ್ತೃ-ಭೃತ್ಯತ್ವವ ನಾನರಿಯೆ
ಮಾಹೇಶ್ವರಿ ಏನಪ್ಪೆನಯ್ಯ? ವ್ರತ-ನೇಮ-ಛಲವ ನಾನರಿಯೆ
ಪ್ರಸಾದಿ ಏನಪ್ಪೆನಯ್ಯ?
ಅರ್ಪಿತಾನರ್ಪಿತವೆಂಬ ಭೇದವ ನಾನರಿಯೆ
ಪ್ರಾಣಲಿಂಗಿ ಏನಪ್ಪೆನಯ್ಯ?
ಅನುಭಾವದ ಗಮನವ ನಾನರಿಯೆ
ಶರಣೆ ಏನೆಪ್ಪೆನಯ್ಯ?
ಶರಣಸತಿ-ಲಿಂಗಪತಿಯೆಂಬ ಭಾವವ ನಾನರಿಯೆ
ಐಕ್ಯೆ ಏನೆಪ್ಪೆನಯ್ಯ?
ಬೆರಸಿದ ಭೇದವ ನಾನರಿಯೆ
ಚೆನ್ನಮಲ್ಲಿಕಾರ್ಜುನಯ್ಯ,
ಷಟ್ಸ್ಥಲದಲ್ಲಿ ನಿಸ್ಥಲವಾಗಿಪ್ಪೆನು

೨೦೨.
ಬಸವಣ್ಣ, ಎನ್ನ ಭಕ್ತಿ ನಿಮ್ಮ ಧರ್ಮ
ಎನ್ನ ಜ್ಞಾನ ಪ್ರಭುದೇವರ ಧರ್ಮ
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ
ಇಂತೀ ಮೂವರೂ ಒಂದೊಂದ ಕೊಟ್ಟ ಕಾರಣ
ಎನಗೆ ಮೂರು ಭಾವವಾಯಿತ್ತು
ಆ ಮೂರು ಭಾವವ ನಿಮ್ಮಲ್ಲಿ ಸಮರ್ಪಿಸಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ ನೆನಹಾದಲ್ಲಿ
ನಿಮ್ಮ ಕರುಣದ ಕಂದನು ಕಾಣಾ ಚೆನ್ನಬಸವಣ್ಣ

೨೦೩.
ಸಂಗನ ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ನಾಸ್ತಿಯಾಯಿತ್ತು
ಪ್ರಭುವೇ ! ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನಗೆ ಅರಿವು ಸ್ವಯವಾಯಿತ್ತು
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗಾವ ಜಂಜಡವಿಲ್ಲವಯ್ಯ ಪ್ರಭುವೇ

೨೦೪.
ಬಸವಣ್ಣನೇ ಗುರು, ಪ್ರಭುದೇವರೇ ಲಿಂಗ
ಸಿದ್ಧರಾಮಯ್ಯನೇ ಜಂಗಮ
ಮಡಿವಾಳಯ್ಯನೇ ತಂದೆ, ಚೆನ್ನಬಸವಣ್ಣನೇ ಎನ್ನ ಪರಮಾರಾಧ್ಯರು
ಇನ್ನು ಶುದ್ಧವಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ

೨೦೫.
ಬಸವಣ್ಣ ನಿಮ್ಮಂಗದಾಚಾರವ ಕಂಡು ಎನಗೆ
ಲಿಂಗಸ್ವಾಯತವಾಯಿತಯ್ಯ
ಬಸವಣ್ಣ ನಿಮ್ಮ ಮನದ ಸುಜ್ಞಾನವ ಕಂಡು ಎನಗೆ
ಜಂಗಮಸಂಬಂಧವಾಯಿತ್ತಯ್ಯ
ಬಸವಣ್ಣ ನಿಮ್ಮ ಸದ್ಭಕ್ತಿಯ ತಿಳಿದೆನಗೆ
ನಿಜವು ಸಾಧ್ಯವಾಯಿತ್ತಯ್ಯ
ಚೆನ್ನಮಲ್ಲಿಕಾರ್ಜುನಯ್ಯ ಹೆಸರಿಟ್ಟ ಗುರು ನೀವಾದ ಕಾರಣ
ನಿಮ್ಮ ಶ್ರೀಪಾದಕ್ಕೆ
ನಮೋ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣ

೨೦೬.
ದೇವಲೋಕದವರಿಗೂ ಬಸವಣ್ಣನೇ ದೇವರು
ನಾಗಲೋಕದವರಿಗೂ ಬಸವಣ್ಣನೇ ದೇವರು
ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು
ಮೇರುಗಿರಿ-ಮಂದರಗಿರಿ ಮೊದಲಾದವೆಲ್ಲಕ್ಕು ಬಸವಣ್ಣನೇ ದೇವರು
ಚೆನ್ನಮಲ್ಲಿಕಾರ್ಜುನಯ್ಯ, ನಿಮಗೂ ಎನಗೂ ಎಮ್ಮ ಶರಣರಿಗೂ
ಬಸವಣ್ಣನೇ ದೇವರು

೨೦೭.
ಆದಿ-ಅನಾದಿಗಳಿಂದತ್ತಲಯ್ಯ ಬಸವಣ್ಣ
ಮೂಲದೇವರ ಮೂಲಸ್ಥಾನವಯ್ಯ ಬಸವಣ್ಣ
ನಾದ-ಬಿಂದು-ಕಳಾತೀತ ಆದಿನಿರಂಜನನಯ್ಯ ಬಸವಣ್ಣ
ಅನಾದಿಸ್ವರೂಪವೇ ಬಸವಣ್ಣನಾದ ಕಾರಣ
ಆ ಬಸವನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ

೨೦೮.
ಶಿವಶಿವಾ ಆದಿಅನಾದಿಯೆಂಬೆರಡೂ ಇಲ್ಲದೆ
ನಿರವಯವಾಗಿಪ್ಪ ಶಿವನೇ, ನಿಮ್ಮ ನಿಜವನಾರು ಬಲ್ಲರಯ್ಯ?
ವೇದಂಗಳಿಗಭೇದ್ಯನು, ಶಾಸ್ತ್ರಂಗಳಿಗಸಾಧ್ಯನು,
ಪುರಾಣಕ್ಕಗಮ್ಯನು, ಆಗಮಕ್ಕಗೋಚರನು, ತರ್ಕಕ್ಕತರ್ಕ್ಯನು
ವಾಙ್ಮನಕ್ಕತೀತವೆನಿಪ ಪರಶಿವಲಿಂಗನು
ಕೆಲಬರು ಸಕಲನೆಂಬರು, ಕೆಲಬರು ನಿಷ್ಕಲನೆಂಬರು
ಕೆಲವರು ಸೂಕ್ಷ್ಮನೆಂಬರು, ಕೆಲವರು ಸ್ಥೂಲನೆಂಬರು
ಈ ಬಗೆಯ ಭಾವದಿಂ ಹರಿ-ಬ್ರಹ್ಮ-ಇಂದ್ರ-ಚಂದ್ರ
ರವಿ-ಕಾಲ-ಕಾಮ-ದಕ್ಷ-ದೇವ-ದಾನವ-ಮಾನವರೊಳಗಾದವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾಗಿ ಹೋದರು
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು
ನಮ್ಮ ಬಸವಣ್ಣನು ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಬಂದು
ವೀರಶೈವಮಾರ್ಗವರಿಪುವುದಕ್ಕೆ
ಬಾವನ್ನ ವಿವರವನೊಳಕೊಂಡು ಚರಿಸಿದನು ಅದೆಂತೆಂದಡೆ
ಗುರುಕಾರುಣ್ಯವೇದ್ಯನು, ವಿಭೂತಿರುದ್ರಾಕ್ಷಿಧಾರಕನು
ಪಂಚಾಕ್ಷರಿಭಾಷಾಸಮೇತನು, ಲಿಂಗಾಂಗಸಂಬಂಧಿ,
ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ,
ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,
ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು,
ಶರಣ ಸಂಗಮೇಶ್ವರನು, ತ್ರಿವಿಧದಲ್ಲಿ ಆಯತನು,
ತ್ರಿಕರಣಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ,
ಅನ್ಯದೈವಸ್ಮರಣೆಯ ಹೊದ್ದ
ಭವಿಸಂಗವ ಮಾಡ, ಭವಪಾಶವ ಕೊಳ್ಳ,
ಪರಸತಿಯ ಬೆರೆಸ, ಪರಧನವನೊಲ್ಲ,
ಪರನಿಂದೆಯನಾಡ, ಅನೃತವ ನುಡಿಯ, ಹಿಂಸೆಯ ಮಾಡ,
ತಾಮಸಭಕ್ತಸಂಗವ ಮಾಡ,
ಅರ್ಥ-ಪ್ರಾಣಾಭಿಮಾನ ಮುಂತಾಗಿ ಗುರುಲಿಂಗಜಂಗಮಕ್ಕೆ ಅರ್ಪಿಸಿ
ಪ್ರಸಾದ ಮುಂತಾಗಿ ಭೋಗಿಸುವ,
ಜಂಗಮನಿಂದೆಯ ಸೈರಿಸ, ಪ್ರಸಾದನಿಂದೆಯ ಕೇಳ,
ಅನ್ಯರನಾಶೆಗೈಯ್ಯ ಪಾತ್ರಾಪಾತ್ರವನರಿದೀವ
ಚತುರ್ವಿಧ ಪದವಿಯ ಹಾರ, ಅರಿಷಡ್ವರ್ಗಕ್ಕಳುಕ
ಕುಲಾದಿ ಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ
ಸಂಕಲ್ಪ ವಿಕಲ್ಪವ ಮಾದುವನಲ್ಲ, ಕಾಲೋಚಿತವ ಬಲ್ಲ,
ಕ್ರಮಯುಕ್ತವಾಗಿ ಷಟ್ಝಲಭರಿತ,
ಸರ್ವಾಂಗಲಿಂಗಿ, ದಾಸೋಹಸಂಪನ್ನ-
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆವ ನಮ್ಮ ಬಸವಣ್ಣನು
ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ
ನಮೋ ನಮೋ ಎಂದು ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನ

೨೦೯.
ಅಂಗದಲ್ಲಿ ಆಚಾರವ ತೋರಿದ
ಆ ಆಚಾರವೇ ಲಿಂಗವೆಂದರುಹಿದ
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ
ಆ ಅರಿವೆ ಲಿಂಗಜಂಗಮವೆಂದು ತೋರಿದ
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ

೨೧೦.
ಅಂಗ ಕ್ರಿಯಾಲಿಂಗವ ವೇದಿಸಿ
ಅಂಗ ಲಿಂಗದೊಳಗಾಯಿತು
ಮನ ಅರಿವ ಬೆರೆಸಿ, ಜಂಗಮಸೇವೆಯ ಮಾಡಿ
ಮನ ಜಂಗಮಲಿಂಗದೊಳಗಾಯಿತು
ಭಾವ ಗುರುಲಿಂಗದೊಳಗೆ ಬೆರೆಸಿ, ಮಹಾಪ್ರಸಾದವ ಭೋಗಿಸಿ
ಭಾವ ಗುರುಲಿಂಗದೊಳಗಾಯಿತು
ಚೆನ್ನಮಲ್ಲಿಕಾರ್ಜುನ ನಿಮ್ಮ ಒಲುಮೆಯಿಂದ
ಸಂದಳಿದು ಸ್ವಯಲಿಂಗವಾದೆನಯ್ಯ ಪ್ರಭುವೆ

೨೧೧.
ಅಂಗಸಂಗಿಯಾಗಿ ಸಂಬಂಧಿಯಲ್ಲ
ಲಿಂಗದೊಳಗಾಪ್ಯಾಯಿನಿಯಾಗಿ ಇತರ ಸು-
ಖಂಗಳ ಬಿಟ್ಟು ಕಳೆದು ಸಮನ ಸಾರಾಯನಾದ ಶರಣನು ||ಪಲ್ಲವ||
ಗುರುಕರುಣಸಂಗದಿಂದ ಶಿಷ್ಯನಿಂತು ಕರದಲ್ಲಿ ಹುಟ್ಟಿದನು
ಕರಣಸಹಿತ ಅವಗ್ರಾಹಿಯಾಗಿ ಘಾಳಿ ಸುಳುಹಡಗಿದ ಶರಣನು ||೧||
ಆಸೆಯೆಂಬ ಹದನುಳುಹಾಗಿ ಹಿಡಿದ ಛಲ ಬಿಡದೆಂಬ ಬೇರೂರಿ
ಸಂಕಲ್ಪವಿಕಲ್ಪಗಳೆರಡೂ ಇಲ್ಲದೆ ನಿಃಕಳಂಕನಾದನು ಶರಣನು ||೨||
ಮಾಡುವವರ ಕಂಡು ಮಾಡುವವನಲ್ಲ
ಮಾಡದವರ ಕಂಡು ಮಾಡದವನಲ್ಲ
ತಾ ಮಾಡುವ ಮಾಟಕೆ ತವಕಿಗನಾಗಿಪ್ಪ
ಹಿಂದುಮುಂದರಿಯದ ಶರಣನು ||೩||
ಎಲ್ಲವು ತಾನೆಂಬ ಕರುಣಾಕರನಲ್ಲ
ನಿಃಕರುಣಿಯಾಗಿ ಜಡದೇಹಿಯಲ್ಲ
ಭೋಗಿಪ ಭೋಗಂಗಳಾಮಿಷ
ತಾಮಸ ವಿಷಯವಿರಹಿತನು ಶರಣನು ||೪||
ಘನವನಿಂಬುಗೊಂಡ ಮನದ ಬೆಂಬಳಿವಿಡಿದುಳೆದಲ್ಲಿ
ನಿಜವಾಗಿ ನಿಂದನು ತಾನೆಂಬುದಿಲ್ಲ
ನಿರಂತರ ಸದ್ಗುರು ಚೆನ್ನಮಲ್ಲಿಕಾರ್ಜುನ
ನಿಮ್ಮ ಶರಣ ಬಸವಣ್ಣನು ||೫||

೨೧೨.
ಅಂಗದಲ್ಲಿ ಲಿಂಗಸಂಗ
ಲಿಂಗದಲ್ಲಿ ಅಂಗಸಂಗ ಮಾಡಿದನೆಂದರೆ
ಎನ್ನಗಾವ ಜಂಜಡವಿಲ್ಲ
ಚೆನ್ನಮಲ್ಲಿಕಾರ್ಜುನನ ಸ್ನೇಹದಲ್ಲಿ
ನಿನ್ನ ಕರುಣದ ಶಿಶು ನಾನು ಕಾಣ
ಸಂಗನಬಸವಣ್ಣ

೨೧೩.
ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ
ಇಂಗಿತವೇನೆಂದು ಬೆಸಗೊಂಬಿರಯ್ಯ?
ಅವರ ನಡೆಯೇ ಆಗಮ, ಅವರ ನುಡಿಯೇ ವೇದ
ಅವರ ಲೋಕದ ಮಾನವರೆನ್ನಬಹುದೇ?
ಆದೆಂತೆಂದೊಡೆ
"ಬೀಜಾದ್ಭವತಿ ವೃಕ್ಷಂ ತು
ಬೀಜೇ ತು ಲೀಯತೇ ಪುನಃ
ರುದ್ರಲೋಕಂ ಪರಿತ್ಯಕ್ತ್ವಾ
ಶಿವಲೋಕೇ ಭವಿಷ್ಯತಿ"
ಎಂಬುದಾಗಿ ಅಂಕೋಲೆಯ ಬೀಜದಿಂದಾಯಿತ್ತು ವೃಕ್ಷವು
ಆ ವೃಕ್ಷವು ಮರಳಿ ಆ ಬೀಜದೊಳಡಗಿತ್ತು
ಆ ಪ್ರಾಕಾರದಿಂ
ಆ ಲಿಂಗದೊಳಗಿದ್ದ ಪುರಾತನರು
ಆ ಲಿಂಗದೊಳಗೆ ಬೆರೆಸಿದರು ನೋಡಿರಯ್ಯ
ಇಂತಪ್ಪ ಪುರಾತನರಿಗೆ ನಾನು ಶರಣೆಂದು
ಹುಟ್ಟುಗೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ

೨೧೪.
ಲಿಂಗಕ್ಕೆ ರೂಪ ಸಲಿಸುವೆ
ಜಂಗಮಕ್ಕೆ ರುಚಿಯ ಸಲಿಸುವೆ
ಕಾಯಕ್ಕೆ ಶುದ್ಧಪ್ರಸಾದವ ಕೊಂಬೆ
ಪ್ರಾಣಕ್ಕೆ ಸಿದ್ಧಪ್ರಸಾದವ ಕೊಂಬೆ
ನಿಮ್ಮ ಪ್ರಸಾದದಿಂದ ಧನ್ಯಳಾದೆನು ಚೆನ್ನಮಲ್ಲಿಕಾರ್ಜುನಯ್ಯ

೨೧೫.
ನಾನು ಮಜ್ಜನವ ಮಾಡುವುದಕ್ಕೆ ಮುನ್ನವೇ
ಜಂಗಮಕ್ಕೆ ಮಜ್ಜನ ಮಾಡಿಸುವೆ
ನಾನು ಸೀರೆಯನುಡುವುದಕ್ಕೆ ಮುನ್ನವೇ
ಜಂಗಮಕ್ಕೆ ದೇವಾಂಗವನುಡಿಸುವೆ
ನಾನು ಪರಿಮಳವ ಲೇಪಿಸುವುದಕ್ಕೆ ಮುನ್ನವೇ
ಜಂಗಮಕ್ಕೆ ಸುಗಂಧದ್ರವ್ಯಗಳ ಲೇಪಿಸುವೆ
ನಾನು ಅಕ್ಷತೆಯನಿಡುವುದಕ್ಕೆ ಮುನ್ನವೇ
ಜಂಗಮಕ್ಕೆ ಅಕ್ಷತೆಯನಿಡುವೆ
ನಾನು ಧೂಪವಾಸನೆಯ ಕೊಳುವುದಕ್ಕೆ ಮುನ್ನವೇ
ಜಂಗಮಕ್ಕೆ ಧೂಪವಾಸನೆಯ ಕೊಡುವೆ
ನಾನು ಧೂಪಾರತಿಯ ನೋಡುವುದಕ್ಕೆ ಮುನ್ನವೇ
ಜಂಗಮಕ್ಕೆ ಆರತಿಯ ನೋಡಿಸುವೆ
ನಾನು ಸಕಲ ಪದಾರ್ಥವ ಸ್ವೀಕರಿಸುವುದಕ್ಕೆ ಮುನ್ನವೇ
ಜಂಗಮಕ್ಕೆ ಮಿಷ್ಟಾನ್ನವ ನೀಡುವೆ
ನಾನು ಪಾನಂಗಳ ಕೊಳುವುದಕ್ಕೆ ಮುನ್ನವೇ
ಜಂಗಮಕ್ಕೆ ಅಮೃತಪಾನಂಗಳ ಕೊಡುವೆ
ನಾನು ಕೈಯ ತೊಳೆವುದಕ್ಕೆ ಮುನ್ನವೇ
ಜಂಗಮಕ್ಕೆ ಹಸ್ತಪ್ರಕ್ಷಾಲನವ ಮಾಡಿಸುವೆ
ನಾನು ವೀಳೆಯಂ ಮಡಿವುದಕ್ಕೆ ಮುನ್ನವೇ
ಜಂಗಮಕ್ಕೆ ತಾಂಬೂಲವ ಕೊಡುವೆ
ನಾನು ಗದ್ದಿಗೆಯ ಮೇಲೆ ಕುಳ್ಳಿರುವುದಕ್ಕೆ ಮುನ್ನವೇ
ಜಂಗಮಕ್ಕೆ ಉನ್ನತಾಸನವನಿಕ್ಕುವೆ
ನಾನು ಸುನಾದಗಳ ಕೇಳುವ ಮುನ್ನವೇ
ಜಂಗಮಕ್ಕೆ ಸಂಗೀತವಾದ್ಯಂಗಳ ಕೇಳಿಸುವೆ
ನಾನು ಭೂಷಣಂಗಳ ತೊಡುವುದಕ್ಕೆ ಮುನ್ನವೇ
ಜಂಗಮಕ್ಕೆ ಆಭರಣಂಗಳ ತೊಡಿಸುವೆ
ನಾನು ವಾಹನಂಗಳನೇರುವುದಕ್ಕೆ ಮುನ್ನವೇ
ಜಂಗಮಕ್ಕೆ ವಾಹನವನೇರಿಸುವೆ
ನಾನು ಮನೆಯೊಳಗಿರುವುದಕ್ಕೆ ಮುನ್ನವೇ
ಜಂಗಮಕ್ಕೆ ಗೃಹವ ಕೊಡುವೆ
ಇಂತೀ ಹದಿನಾರು ತೆರನ ಭಕ್ತಿಯ ಚರಲಿಂಗಕ್ಕೆ ಕೊಟ್ಟು
ಆ ಚಿರಲಿಂಗಮೂರ್ತಿ ಭೋಗಿಸಿದ ಬಳಿಕ
ನಾನು ಪ್ರಸಾದವ ಮುಂತಾಗಿ ಭೋಗಿಸುವೆನಲ್ಲದೆ
ಜಂಗಮನಿಲ್ಲದೆ ಇನಿತರೊಳಗೊಂದು
ಭೋಗವನಾದರೂ ನಾನು ಭೋಗಿಸಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಇಂತೀ ಕ್ರಮವಲ್ಲಿ ನಡೆದಾತಂಗೆ
ಗುರುವುಂಟು, ಲಿಂಗವುಂಟು, ಜಂಗಮವುಂಟು,
ಪಾದೋದಕವುಂಟು, ಪ್ರಸಾದವುಂಟು,
ಆಚಾರವುಂಟು, ಭಕ್ತಿಯುಂಟು
ಈ ಕ್ರಮದಲ್ಲಿ ನಡೆಯದಾತಂಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕವಿಲ್ಲ, ಪ್ರಸಾದವಿಲ್ಲ,
ಆಚಾರವಿಲ್ಲ, ಸದ್ಭಕ್ತಿಯಿಲ್ಲ
ಅವನ ಬಾಳುವೆ ಹಂದಿಯ ಬಾಳುವೆ
ಅವನ ಬಾಳುವೆ ಕತ್ತೆಯ ಬಾಳುವೆ
ಅವನು ಸುರೆ-ಮಾಂಸ ಭುಂಜಕನು
ಅವನು ಸರ್ವಚಂಡಾಲನಯ್ಯ ಚೆನ್ನಮಲ್ಲಿಕಾರ್ಜುನ

೨೧೬.
ಅಯ್ಯ ಸದಾಚಾರ-ಸದ್ಭಕ್ತಿ-ಸತ್ಕ್ರಿಯೆ-ಸಮ್ಯಜ್ಞಾನ
ಸದ್ವರ್ತನೆ-ಸಗುಣ-ನಿರ್‍ಗುಣ-ನಿಜಗುಣ-ಸಚ್ಚರಿತ-ಸದ್ಭಾವ
ಅಕ್ರೋಧ-ಸತ್ಯವಚನ-ಕ್ಷಮೆ-ದಯೆ-ಭವಿಭಕ್ತಭೇದ
ಸತ್ಪಾತ್ರದ್ರವ್ಯಾರ್ಪಣ-ಗೌರವಬುದ್ಧಿ-ಲಿಂಗಲೀಯ
ಜಂಗಮಾನುಭಾವ-ದಶವಿಧ ಪಾದೋದಕ-ಏಕಾದಶಪ್ರಸಾದ
ಷೋಡಶ ಭಕ್ತಿನಿರ್ವಾಹ
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಚನೆ
ತ್ರಿವಿಧ ಷಡ್ವಿಧ ನವವಿಧ ಜಪ
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಪಿತ
ಚಿದ್ವಿಭೂತಿ ಸ್ನಾನ ಧೂಳನ ಧಾರಣ
ಸರ್ವಾಂಗದಲ್ಲಿ ಚಿದ್ರುದ್ರಾಕ್ಷಿ ಧಾರವ
ತಾ ಮಾಡುವ ಸತ್ಯಕಾಯಕ
ತಾ ಬೇಡುವ ಸದ್ಭಕ್ತಿ ಭಿಕ್ಷ
ತಾ ಕೊಟ್ಟು ಕೊಂಬ ಭೇದ
ತಾನಾಚರಿಸುವ ಸತ್ಯ ನಡೆನುಡಿ
ತಾ ನಿಂದ ನಿರ್ವಾಣಪದ-
ಇಂತೀ ಮುವ್ವತ್ತೆರಡು ಕಲೆಗಳ ಸದ್ಗುರುಮುಖದಿಂದರಿದ
ಬಸವ ಮೊದಲಾದ ಸಮಸ್ತ ಪ್ರಮಥ ಗಣಂಗಳೆಲ್ಲ
ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದರೂ ನೋಡಾ!
ಇಂತು ಪ್ರಮಥಗಣಂಗಳಾಚರಿಸಿದ ಸತ್ಯಸನ್ಮಾರ್ಗವನರಿಯದ
ಮೂಢ ಅಧಮರನೆಂತು
ಶಿವಶಕ್ತಿ-ಶಿವಭಕ್ತಿ-ಶಿವಜಂಗಮವೆಂಬೆನಯ್ಯ
ಚೆನ್ನಮಲ್ಲಿಕಾರ್ಜುನ

೨೧೭.
ಸಪ್ತಕೋಟಿಮಹಾಮಂತ್ರಂಗಳಿಗೆ
ಉಪಮಂತ್ರಂಗಳುಂಟು
ಆ ಉಪಮಂತ್ರಂಗಳಿಂಗೆ ಲೆಕ್ಕವಿಲ್ಲ
ಆ ಜಾಳು ಮಂತ್ರಂಗಳಿಗೆ ಭ್ರಮಿಸಿ
ಚಿತ್ತವ್ಯಾಕುಲವಾಗಿ ಕೆಟ್ಟುಹೋಗದಿರು ಮನವೇ
ಶಿವಶಿವಾ ಎಂದೆಡೆ ಸಾಲದ್?
ಒಂದು ಕೋಟಿ ಮಹಾಪಾತಕ ಪರಿಹಾರವಕ್ಕು
ಆದೆಂತೆಂದಡೆ ಶಿವಧರ್ಮೇ
ಶಿವೇತಿ ಮಂಗಲಂ ನಾಮ
ಯಸ್ಯ ವಾಚಿ ಪ್ರವರ್ತತೇ
ಭಸ್ಮೀಭವಂತಿ ತಸ್ಯಾಶು
ಮಹಾಪಾತಕಕೋಟಯಃ
ಎಂದುದಾಗಿ, ಸದ್ಗುರು ಚೆನ್ನಮಲ್ಲಿಕಾರ್ಜುನ ತೋರಿದ
ಸಹಜಮಂತ್ರವೆನಗಿದೇ ಪರಮತತ್ವವಯ್ಯ

೨೧೮.
ಒಪ್ಪುವ ಶ್ರೀವಿಭೂತಿಯ ನೊಸಲಲ್ಲಿ ಧರಿಸಿ
ದೃಷ್ಟಿವಾರೆ ನಿಮ್ಮ ನೋಡಲೊಡನೆ
ಬೆಟ್ಟದಷ್ಟು ತಪ್ಪುಳ್ಳಡೆಯೂ ಮುಟ್ಟಲಮ್ಮವು ನೋಡಾ
ದುರಿತವ ಪರಿಹರಿಸಬಲ್ಲಡೆ
ಓಂ ನಮಶ್ಶಿವಾಯ ಶರಣೆಂಬುದೇ ಮಂತ್ರ
ಓಂ ನಮಶ್ಶಿವಾಯೇತಿ ಮಂತ್ರಂ
ಯಃ ಕರೋತಿ ತ್ರಿಪುಂಡ್ರಕಂ
ಸಪ್ತ ಜನ್ಮಕೃತಂ ಪಾಪಂ
ತತ್ ಕ್ಷಣಾದೇವ ವಿನಶ್ಯತಿ
ಎಂದುದಾಗಿ ಸಿಂಹದ ಮರಿಯ ಸೀಳುನಾಯಿ ತಿಂಬಡೆ
ಭಂಗವಿನ್ನಾರದು ಚೆನ್ನಮಲ್ಲಿಕಾರ್ಜುನ?

೨೧೯.
ಹಿತವಿದೇ, ಸಕಲಲೋಕದ ಜನಕ್ಕೆ ಮತವಿದೇ
ಶೃತಿ-ಪುರಾಣಾಗಮದ ಗತಿಯಿದೇ
ಭಕುತಿಯ ಬೆಳಗಿನ ಉನ್ನತಿಯಿದೇ
ಇಂತಪ್ಪ ಶ್ರೀವಿಭೂತಿಯ ಧರಿಸಿರೆ
ಭವವ ಪರಿವುದು, ದುರಿತಸಂಕುಳವನೊರೆಸುವುದು
ನಿರುತವಿದು ನಂಬು ಮನುಜ! ಜವನ ಭೀತಿಯೀ ವಿಭೂತಿ
ಮರಣಭಯದಿಂದ ಅಗಸ್ತ್ಯ-ಕಶ್ಯಪ-ಜಮದಗ್ನಿಗಳು
ಧರಿಸಿದರಂದು ನೋಡಾ
ಶ್ರೀಶೈಲಚೆನ್ನಮಲ್ಲಿಕಾರ್ಜುನನೊಲಿಸುವ ವಿಭೂತಿ

೨೨೦.
ಹಾಲು ಹಿಡಿದು ಬೆಣ್ಣೆಯನರಸಲುಂಟೆ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ?
ಲಿಂಗದ ಪಾದತೀರ್ಥಪ್ರಸಾದವ ಕೊಂಡು
ಅನ್ನಬೋಧೆ-ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದರೆ
ತಡೆಯದೇ ಹುಟ್ಟಿಸುವ ಶ್ವಾನಗರ್ಭದಲ್ಲಿ
ಆದೆಂತೆಂದಡೆ-ಶಿವಧರ್ಮಪುರಾಣೇ
ಇಷ್ಟಲಿಂಗಮವಿಶ್ವಸ್ಯ
ತೀರ್ಥಲಿಂಗಂ ನಮಸ್ಕೃತಃ
ಶ್ವಾನಯೋನಿಶತಂ ಗತ್ವಾ
ಚಂಡಾಲಗೃಹಮಾಚರೇತ್
ಎಂದುದಾಗಿ-ಇದನರಿದು
ಗುರು ಕೊಟ್ಟ ಲಿಂಗದಲ್ಲಿಯೇ
ಎಲ್ಲಾ ತೀರ್ಥಂಗಳು, ಎಲ್ಲಾ ಕ್ಷೇತ್ರಂಗಳು
ಇಹವೆಂದು ಭಾವಿಸಿ ಮುಕ್ತರಪ್ಪುವುದಯ್ಯ
ಇಂತಲ್ಲದೆ-ಗುರು ಕೊಟ್ಟ ಲಿಂಗವ ಕಿರಿದು ಮಾಡಿ
ತೀರ್ಥಲಿಂಗವ ಹಿರಿದು ಮಾಡಿ ಹೋದಾತಂಗೆ
ಅಘೋರನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನ

೨೨೧.
ಸದ್ಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತತ್ ಶಿಷ್ಯನ ಮಸ್ತಕದ ಮೇಲೆ ತನ್ನ ಶ್ರೀಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯ
ಒಪ್ಪುವ ಶ್ರೀವಿಭೂತಿಯ ನೊಸಲಿಂಗೆ ಪಟ್ಟವ ಕಟ್ಟಿದಡೆ
ಮುಕ್ತಿಸಾಮ್ರಾಜ್ಯದೊಡೆತನಕ್ಕೆ ಪಟ್ಟವ ಕಟ್ಟಿದಂತಾಯಿತ್ತಯ್ಯ
ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ
ಪಂಚಕಲಶದ ಅಭಿಷೇಕವ ಮಾಡಿಸಲು
ಶಿವನ ಕಾರುಣ್ಯಾಮೃತದ ಸೋನೆ ಸುರಿದಂತಾಯಿತ್ತಯ್ಯ
ನೆರೆದ ಶಿವಂಗಳ ಮಧ್ಯದಲ್ಲಿ
ಮಹಾಲಿಂಗವನು ಕರಸ್ಥಲಾಮಲಕವಾಗಿ
ಶಿಷ್ಯನ ಕರಸ್ಥಲಕ್ಕೆ ಇಟ್ಟು, ಅಂಗದಲ್ಲಿ ಪ್ರತಿಷ್ಠಿಸಿ
ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ
ಕಂಕಣವ ಕಟ್ಟಿದಲ್ಲಿ ಕಾಯವೇ ಕೈಲಾಸವಾಯಿತ್ತು
ಪ್ರಾಣವೇ ಪಂಚಬ್ರಹ್ಮಮಯ ಲಿಂಗವಾಯಿತ್ತು
ಇಂದು ಮುಂದ ತೋರಿ ಹಿಂದ ಬಿಡಿಸಿದ
ಶ್ರೀಗುರುವಿನ ಸಾನಿದ್ಧ್ಯದಿಂದಾನು
ಬದುಕಿದೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ

೨೨೨.
ನಮ್ಮ ಮನೆಯಲಿಂದು ಹಬ್ಬ
ನಮಗೆ ಸಂದಣಿ ಬಹಳ
ಒಮ್ಮೆ ನುಡಿಸ ಹೊತ್ತಿಲ್ಲ
ಹೋಗಿ ವಿಷಯಗಳಿರಾ
ತನುವೆಂಬ ಮನೆಯೊಳಗೆ ನೆಲಸಿಪ್ಪ ಪರಮಾತ್ಮ
ಮನೆಯ ದೇವರ ಹಬ್ಬ! ಆ ಹಬ್ಬಕಿಂದು
ನೆನೆಯದೆ ಮಿಂದು ನಡೆಯದೆ ಹೋಗಿ ಬಲಗೊಂಡು
ನೆನಹಿನಮೃತಾನ್ನದುಪಹಾರವಿಡಬೇಕು
ನೆರಹುಗುಡದೆ ಏಕಾಂತದೊಳಗಿರಬೇಕು
ನೆರಹಬೇಕಮಲಗುಣ ಪರವಸ್ತುಗಳನು
ಪರಿಹರಿಸಿ ಕಳೆಯಬೇಕಯ್ಯ ವಿಷಯಗಳನು
ಎರಡಿಲ್ಲದೊಂದು ಮನದಲ್ಲಿ ಭಜಿಸಬೇಕು
ನೋಡದೆ ಕಂಡು, ನುಡಿಸದೆ ಹೊಗಳಿ ಭಕ್ತಿಯಿಂ
ಬೇಡದೆ ಪರಮಪದವಿಯ ಪಡೆಯಬೇಕು
ನಾಡಾಡಿ ದೈವದಂತಲ್ಲವಿದು ಅಸಮಾಕ್ಷ
ರೂಢಿಯೊಳು ಚೆನ್ನಮಲ್ಲನ ಭಜಿಸಬೇಕು

೨೨೩.
ಕಂಗಳ ನೋಟವು, ಕಾಯದ ಕರದಲಿ
ಲಿಂಗದ ಕೂಟವು ಶಿವಶಿವ ಚೆಲುವನು
ಮಂಗಳ ಮೂರುತಿ ಮಲೆಗಳ ದೇವಂಗೆತ್ತುವೆನಾರತಿಯ ||ಪಲ್ಲವ||
ಜಗವಂದ್ಯಗೆ ಬೇಟವ ಮಾಡಿದೆ, ನಾ
ಹಗೆಯಾದೆನು ಸಂಸಾರಕೆಲ್ಲ
ನಗುತೈದರೆ ಲಜ್ಜೆ ನಾಚಿಕೆಯೆಲ್ಲವ ತೊರೆದವಳೆಂದೆನ್ನ
ಗಗನಗಿರಿಯ ಮೇಲಿರ್ದಹನೆಂದೆಡೆ
ಲಗುನಿಯಾಗಿ ನಾನರುಸುತ ಬಂದೆನು
ಅಘಹರ ಕರುಣಿಸು ನಿಮಗಾನೊಲಿದೆನು ಮಿಗೆ ಒಲಿದಾರತಿಯ ||೧||
ಭಕುತಿರತಿಯ ಸಂಭಾಷಣೆಯಿಂದವೆ
ಯುಕುತಿಯ ಮರೆದೆನು, ಕಾಯದ ಜೀವದ
ಪ್ರಕೃತಿಯ ತೊರೆದೆನು, ಸುತ್ತಿದ ಮಾಯಾಪಾಶವ ಹರಿದೆನಲಾ
ಸುಕೃತಿಯಾಯಿತು ನಿಮ್ಮಯ ನೆನಹಿಂದವೆ
ಮುಕುತಿಯ ಫಲಗಳ ದಾಂಟಿಯೆ ಬಂದೆನು
ಸಕುತಿಯಾದೆ ನಾ ಪ್ರಾಣಲಿಂಗಕೆ ಮನವೊಲಿದಾರತಿಯ ||೨||
ಮೆಚ್ಚಿ ಒಲಿದು ಮನವಗಲದ ಭಾವವು
ಬಿಚ್ಚದೆ ಬೇರೊಂದೆನಿಸದೆ, ಪ್ರಾಣವು
ಬೆಚ್ಚಂತಿರ್ದುದು, ಅಚ್ಚೊತ್ತಿದಾ ಮಹಘನ ತಾ ನೆಲೆಗೊಂಡು
ಪಶ್ಚಿಮ ಮುಖದಲಿ ಬೆಳಗು ಪ್ರಕಾಶವು
ನಿಚ್ಚನಿರಂಜನ ಚೆನ್ನಮಲ್ಲಿಕಾರ್ಜುನ
ಗೆತ್ತುವೆನಾರತಿ ಈ ರತಿಯಿಂದವೆ ಮನವೊಲಿದಾರತಿಯ ||೩||

೨೨೪.
ಅಯ್ಯ, ಸರ್ವಮೂಲಾಹಂಕಾರವಿಡಿದು
ಕುಲಭ್ರಮೆ! ಬಲಭ್ರಮೆ! ಜಾತಿಭ್ರಮೆ!
ನಾಮ-ವರ್ಣ-ಆಶ್ರಮ-ಮತ-ಶಾಸ್ತ್ರಭ್ರಮೆ! ರಾಜ್ಯಭ್ರಮೆ!
ಧನ-ಧಾನ್ಯ-ಪುತ್ರ-ಮಿತ್ರ-ಐಶ್ವರ್ಯ-ತ್ಯಾಗ-ಯೋಗಭ್ರಮೆ!
ಕಾಯ-ಕರಣ-ವಿಷಯಭ್ರಮೆ!
ವಾಯು-ಮನ-ಭಾವ-ಜೀವ-ಮೋಹಭ್ರಮೆ!
ನಾಹಂ-ಕೋಹಂ ಭ್ರಮೆ! ಶಿವೋಹಂ ಭ್ರಮೆ ಮಾಯಾಭ್ರಮೆ!
ಮೊದಲಾದ ಮೂವತ್ತೆರಡು ಪಾಶಭ್ರಮಿತರಾಗಿ ತೊಳಲುವ
ವೇಷಧಾರಿಗಳ ಕಂಡು-
ಶಿವಭಕ್ತಿ-ಶಿವಭಕ್ತ-ಶಿವಪ್ರಸಾದಿ-ಶಿವಶರಣ-
ಶಿವೈಕ್ಯ-ಶಿವಜಂಗಮವೆಂದು
ನುಡಿಯಲಾರದೆ ಎನ್ನ ಮನ ನಾಚಿ
ನಿಮ್ಮಡಿಗಳಿಗಭಿಮುಖವಾಯಿತ್ತಯ್ಯ, ಚೆನ್ನಮಲ್ಲಿಕಾರ್ಜುನ

೨೨೫.
ಅಯ್ಯ ಚಿದಂಗ-ಚಿದ್ರನಲಿಂಗ-
ಶಿವ-ಭಕ್ತಿ-ಹಸ್ತ-ಮುಖ-ಪದಾರ್ಥ-ಪ್ರಸಾದ
ಎಂಬಿವಾದಿಯಾದ ಸಮಸ್ತಸಕೀಲಂಗಳ ನೆಲೆಕಲೆಯನರಿಯದೆ
ಜಿಹ್ವಾಲಂಪಟಕ್ಕೆ ಆಹ್ವಾನಿಸಿ
ಗುಹ್ಯಲಂಪಟದಲ್ಲಿ ವಿಸರ್ಜಿಸಿ
ಸಕಲೇಂದ್ರಿಯ ಮುಖದಲ್ಲಿ ಮೋಹಿಯಾಗಿ
ಸದ್ಗುರು ಕರುಣಾಮೃತರಸ ತಾನೆಂದರಿಯದೆ
ಬರಿದೆ, ಭಕ್ತ-ಮಾಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ
ಗುರು-ಚರ-ಪರವೆಂದು ಬೊಗಳುವ ಕುನ್ನಿಗಳ ನೋಡಿ
ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯ
ಚೆನ್ನಮಲ್ಲಿಕಾರ್ಜುನ

೨೨೬.
ಹಸಿವಿಂಗೆ ಭಿಕ್ಷವುಂಟು
ತೃಷೆಗೆ ಹಳ್ಳದಲ್ಲಿ ಸುಚಿತ್ತವಾದ ಅಗ್ರವಣಿಯುಂಟು
ಕಟ್ಟಿಕೊಂಬೆಡೆ ತಿಪ್ಪೆಯ ಮೇಲೆ ಅರಿವೆಯುಂಟು
ಶಯನಕ್ಕೆ ಹಾಳುದೇಗುಲವುಂಟು
ನಮ್ಮ ಸಮಸುಖಿಯಾಗಿ ನಿಮ್ಮ ಜ್ಞಾನವುಂಟು
ಚೆನ್ನಮಲ್ಲಿಕಾರ್ಜುನ

೨೨೭.
ಯೋಗಿಗೆ ಯೋಗಿಣಿಯಾಗಿಹಳು ಮಾಯೆ
ಜೋಗಿಗೆ ಜೋಗಿಣಿಯಾಗಿಹಳು ಮಾಯೆ
ಶ್ರವಣಗೆ ಕಂತಿಯಾದಳು ಮಾಯೆ
ಯತಿಗೆ ಪರಾರ್ಥ [=ಪರಾಕಿ]ವಾದಳು ಮಾಯೆ
ಹೆಣ್ಣಿಗೆ ಗಂಡು ಮಾಯೆ
ಗಂಡಿಗೆ ಹೆಣ್ಣು ಮಾಯೆ
ನಿಮ್ಮ ಮಾಯೆಗೆ ನಾನಂಜುವವಳಲ್ಲ ಚೆನ್ನಮಲ್ಲಿಕಾರ್ಜುನ

೨೨೮.
ಕಲ್ಯಾಣ-ಕೈಲಾಸವೆಂಬ ನುಡಿ ಹಸನಾಯಿತ್ತು
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ
ಇದರಂತುವನಾರು ಬಲ್ಲರೈಯ್ಯಾ ?
ನಿಮ್ಮ ಸತ್ಯಶರಣರ ಸುಳುಹು ತೋರುತ್ತಿದೆಯಯ್ಯಾ
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು
ಕೇಳಾ ಚೆನ್ನಮಲ್ಲಿಕಾರ್ಜುನ

೨೨೯.
ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ
ಗಂಡು ಗಂಡಾದೊಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದೊಡೆ
ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ?
ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನೆಂಬ
ಗರುವಂಗೆ ಜಗವೆಲ್ಲ ಹೆಣ್ಣು ನೋಡಾ!

೨೩೦.
ಲೋಕವಿಡಿದು ಲೋಕದ ಸಂಗದಿಂದಿಪ್ಪೆನು
ಆಕಾರವಿಡಿದು ಸಾಕಾರಸಹಿತ ನಡೆವೆನು
ಹೊರಗೆ ಬಳಸಿ ಒಳಗೆ ಮೈಮರೆದಿಪ್ಪೆನು
ಬೆಂದ ನುಲಿಯಂತೆ ಹುರಿಗುಂದದಿಪ್ಪೆನು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ,
ಹತ್ತರೊಳಗೆ ಹನ್ನೊಂದಾಗಿ ನೀರ ತಾವರೆಯಂತಿಪ್ಪೆನು

೨೩೧.
ತನುವ ಮೀರಿತ್ತು, ಮನವ ಮೀರಿತ್ತು
ಮಹವ ಮೀರಿತ್ತು
ಅಲ್ಲಿಂದತ್ತ ಭಾವಿಸುವ ಭಾವಕರಿಲ್ಲಾಗಿ ತಾರ್ಕಣೆಯಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ ಬೆರಸಲಿಲ್ಲದ ನಿಜತತ್ವವು

೨೩೨.
ಆಧಾರ-ಸ್ವಾಧಿಷ್ಠಾನ-ಮಣಿಪೂರಕ-
ಅನಾಹುತ-ವಿಶುದ್ಧಿ-ಆಜ್ಞೇಯವ ನುಡಿದರೇನು?
ಆದಿಯನಾದಿಯ [ಸುದ್ದಿಯ] ಕೇಳಿದಡೇನು, ಹೇಳಿದಡೇನು
ತನ್ನಲ್ಲಿದ್ದುದ ತಾನರಿಯದನ್ನಕ್ಕರ
ಉನ್ಮನಿರಭಸದ ಮನ ಪವನದ ಮೇಲೆ
ಚೆನ್ನಮಲ್ಲಿಕಾರ್ಜುನಯ್ಯನ ಭೇದಿಸಲಯದವರು?

೨೩೩.
ನಿತ್ಯವೆಂಬ ನಿಜಪದವೆನ್ನ ಹತ್ತೆ ಸಾರ್ದುದ ಕಂಡ ಬಳಿಕ
ಚಿತ್ತ ಕರಗಿ ಮನ ಕೊರಗಿ
ಹೃದಯವರಳಿತು ನೋಡಯ್ಯ
ಒತ್ತಿ ಬಿಗಿದ ಸೆರೆಯೊಳಗೆ ಅತ್ತಿತ್ತಲೆಂದರಿಯದೆ
ಚೆನ್ನಮಲ್ಲಿಕಾರ್ಜುನನ ಪಾದದಲ್ಲಿ
ಮರೆದೊರಗಿದೆ ನೋಡಯ್ಯ

೨೩೪.
ಆಶೆಯಾಮಿಷವಳಿದು
ಹುಸಿ ವಿಷಯಂಗಳೆಲ್ಲಾ ಹಿಂಗಿ
ಸಂಶಯಸಂಬಂಧ ವಿಸಂಬಂಧವಾಯಿತ್ತು ನೋಡಾ
ಎನ್ನ ಮನದೊಳಗೆ ಘನಪರಿಣಾಮವ ಕಂಡು
ಮನ ಮಗ್ನವಾಯಿತ್ತಯ್ಯ
ಚೆನ್ನಮಲ್ಲಿಕಾರ್ಜುನ,
ನಿಮ್ಮ ಶರಣ ಪ್ರಭುದೇವರ ಕರುಣದಿಂದ ಬದುಕಿದೆನಯ್ಯ

೨೩೫.
ಆದಿಅನಾದಿಯ ನಿತ್ಯಾನಿತ್ಯವ ತಿಳಿಯಲರಿಯದೆ
ವಾಯಕ್ಕೆ ಪರಬ್ರಹ್ಮವ ನುಡಿವ
ವಾಯುಪ್ರಾಣಿಗಳವರೆತ್ತ ಬಲ್ಲರೋ ಆ ಪರಬ್ರಹ್ಮದ ನಿಲವ?
ಅದೆಂತೆಂದಡೆ
ಆದಿಯೇ ದೇಹ, ಅನಾದಿಯೇ ನಿರ್ದೇಹ
ಆದಿಯೇ ಸಕಲ, ಅನಾದಿಯೇ ನಿಷ್ಕಲ
ಆದಿಯೇ ಜಡ, ಅನಾದಿಯೇ ಅಜಡ
ಆದಿಯೇ ಕಾಯ, ಅನಾದಿಯೇ ಪ್ರಾಣ
ಈ ಎರಡರ ಯೋಗವ ಭೇದಿಸಿ
ತನ್ನಿಂದ ತಾ ತಿಳಿದು ನೋಡಲು
ಆದಿಸಂಬಂಧಮಪ್ಪ ಭೂತಂಗಳೂ ನಾನಲ್ಲ,
ದಶೇಂದ್ರಿಯಗಳೂ ನಾನಲ್ಲ,
ಅಷ್ಟಮದಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು
ಷಡ್ಭಾವವಿಕಾರಂಗಳು ಷಟ್ಕರ್ಮಂಗಳು, ಷಡ್ಧಾತುಗಳು
ಸಪ್ತವ್ಯಸನಂಗಳು, ತನುತ್ರಯಂಗಳು, ಜೀವತ್ರಯಂಗಳು,
ಮನತ್ರಯಂಗಳು, ಮಲತ್ರಯಂಗಳು, ಗುಣತ್ರಯಂಗಳು,
ಭಾವತ್ರಯಂಗಳು, ತಾಪತ್ರಯಂಗಳು, ಷಟ್ಕರಣಂಗಳು,
ಇಂತಿವು ಆದಿಯಾಗಿ ತೋರುವ ತೋರಿಕೆಯೆ ನಾನಲ್ಲ
ಎನ್ನವೇ ಅಲ್ಲ!
ಎನ್ನ ಅಧೀನವಾಗಿರ್ಪವು, ನಾನಿವರ ಅಧೀನವಲ್ಲ
ಎನ್ನ ತುರ್ಯಾತುರ್ಯತೀತವಪ್ಪ ಸಚ್ಚಿದಾನಂದ,
ನಿತ್ಯಪರಿಪೂರ್ಣವೇ ತನ್ನಿರವೆಂದು ತಿಳಿಯೆ-
ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದಾ ಬೆಸುಗೆ ಬಿಟ್ಟು
ನಿರಾಳದಲ್ಲಿ ನಿರವಯವನೆಯ್ದಲರಿಯದೆ
ಮತ್ತೆಯೂ ಭೌತಿಕಸಂಬಂಧಿಯಾಗಿ ಇರುತಿರಲು
ಈ ತತ್ವದಾದಿ ತಾನೆಂತೆನಲು
ಆ ಪರಬ್ರಹ್ಮವಪ್ಪ-ನಿತ್ಯನಿರಾಳ ನಿಶ್ಶೂನ್ಯಲಿಂಗವೇ
ತನ್ನ ಲೀಲಾವಿಲಾಸದಿಂದ ತಾನೇ ಸುನಾದ-ಬಿಂದು-ಪ್ರಕಾಶ
ತೇಜೋಮೂರ್ತಿಯಾಗಿ ನಿಂದು
ಆ ಮಹಾಲಿಂಗವೆನಿಸಿತ್ತು
ಆ ಪಂಚಸಾದಾಖ್ಯವೇ ಪಂಚಲಿಂಗಪ್ರಕಾಶವೆನಿಸಿತ್ತು
ಆ ಪಂಚಲಿಂಗಪ್ರಕಾಶವೇ ಪಂಚಮುಖವೆನಿಸಿತ್ತು

ಆ ಪಂಚಮುಖದಿಂದವೇ ಪಂಚಾಕ್ಷರಿ ಉತ್ಪತ್ತಿ
ಆ ಪಂಚಾಕ್ಷರಿಯಿಂದವೇ ಪಂಚಕಲೆಗಳುತ್ಪತ್ತಿ
ಆ ಪಂಚಕಲೆಗಳಿಂದಲೇ ಪಂಚಶಕ್ತಿಗಳುತ್ಪತ್ತಿ
ಆ ಪಂಚಶಕ್ತಿಗಳಿಂದವೇ
ಜ್ಞಾನ-ಮನ-ಬುದ್ಧಿ-ಚಿತ್ತ-ಅಹಂಕಾರಗಳ ಜನನ
ಆ ಜ್ಞಾನ-ಮನ-ಬುದ್ಧಿ-ಅಹಂಕಾರಗಳಿಂದವೇ
ಪಂಚತನ್ಮಾತ್ರೆಗಳುತ್ಪತ್ತಿ
ಆ ಪಂಚತನ್ಮಾತ್ರೆಗಳಿಂದವೇ ಪಂಚಭೂತಂಗಳುತ್ಪತ್ತಿ
ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು
ಆ ಅಂಗಕ್ಕೆ ಜ್ಞಾನೇಂದ್ರಿಯಗಳು ಕರ್ಮೇಂದ್ರಿಯಗಳು
ಪ್ರತ್ಯಂಗವೆನಿಸಿತ್ತು
ಇಂತೀ ದೇಹಸಂಬಂಧಮಂ
ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ
ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು
ಎಲ್ಲಿ ಆಯಿತು ಅಲ್ಲೇ ಅಡಗಿಸಿ
ಆ ಕಾಯದ ಪೂರ್ವಾಶ್ರಯವನಳಿದು
ಮಹಾಘನಲಿಂಗವ ವೇಧಿಸಿ [ಕೊಟ್ಟು]
ಶಿವ ತಾನೆ ಗುರುವಾಗಿ ಬಂದು
ಆ ಗುರು ತಾನೆ ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿಯೆಂತೆಂದೆಡೆ
ಆತ್ಮಗೂಡಿ ಪಂಚಭೂತಂಗಳನೆ ಷಡಂಗವೆಂದೆನಿಸಿ
ಆ ಅಂಗಕ್ಕೆ ಕಲೆಗಳನೆ ಷಡ್ವಿಧಭಕ್ತಿಗಳೆಂದೆನಿಸಿ
ಆ ಶಕ್ತಿಗಳಿಗೆ ಷಡ್ವಿಧಭಕ್ತಿಯನಳವಡಿಸಿ
ಆ ಭಕ್ತಿಗಳಿಗೆ ಭಾವ-ಜ್ಞಾನ-ಮನ-ಬುದ್ಧಿ-ಚಿತ್ತ-ಅಹಂಕಾರಗಳನೆ
ಷಡ್ವಿಧ ಹಸ್ತಂಗಳೆನಿಸಿ
ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ
ಷಡ್ವಿಧ ಲಿಂಗಗಳೆಂದೆನಿಸಿ
ಆ ಲಿಂಗಂಗಳಿಗೆ ಷಡಕ್ಷರಿಯನೇ ಷಡ್ವಿಧ ಮಂತ್ರವೆಂದೆನಿಸಿ
ಆ ಮಂತ್ರಲಿಂಗಂಗಳಿಗೆ ಹೃದಯವೊಂದುಗೂಡಿ
ಆ ಪಂಚೇಂದ್ರಿಯಂಗಳನೆ ಷಡ್ವಿಧಮುಖಂಗಳೆಂದೆನಿಸಿ
ಆ ಮುಖಂಗಳಿಗೆ ತನ್ಮಾತ್ರೆಗಳನೆ ದ್ರವ್ಯಪದಾರ್ಥಂಗಳೆನಿಸಿ
ಆ ದ್ರವ್ಯಪದಾರ್ಥಂಗಳನು ಆಯಾಯಾ ಮುಖದ ಲಿಂಗಂಗಳಲ್ಲಿ
ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ
ಅಂಗಸ್ಥಲಂಗಳಡಗಿ ತ್ರಿವಿಧಲಿಂಗಸ್ಥಲಂಗಳುಳಿದು
ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ
ಗುರುವಿನಲ್ಲಿ ಶುದ್ಧ ಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ
ಜಂಗಮದಲ್ಲಿ ಪ್ರಸಿದ್ಧಪ್ರಸಾದ
ಇಂತೀ ತ್ರಿವಿಧಪ್ರಸಾದ ಏಕಾರ್ಥವಾಗಿ
ಮಹಾಘನ ಪರಿಪೂರ್ಣ ಪ್ರಸಾದವಳವಟ್ಟ ಶರಣನು
ಜ್ಞಾನಿ ಅಲ್ಲ, ಅಜ್ಞಾನಿ ಮುನ್ನವೇ ಅಲ್ಲ
ಶೂನ್ಯನಲ್ಲ, ನಿಶ್ಶೂನ್ಯನಲ್ಲ
ದ್ವೈತಿಯಲ್ಲ, ಅದ್ವೈತಿಯಲ್ಲ
ಇಂತೀ ಉಭಯಾತ್ಮಕ ತಾನೆಯಾಗಿ
ಇದು ಕಾರಣ-
ಅದರ ಆಗು-ಹೋಗು ಸಕೀಲಸಂಬಂಧವ
ಚೆನ್ನಮಲ್ಲಿಕಾರ್ಜುನ ನಿಮ್ಮ ಶರಣರೇಬಲ್ಲರು

೨೩೬.
ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ
ಏಕೆ?
ಆತನ ಧನಕ್ಕೆ ತಂದೆಯಾದನಲ್ಲದೆ
ಆತನ ಮನಕ್ಕೆ ತಂದೆಯಾದನೆ?
ಏಕೆ?
ಆತನ ಮನವನರಿಯನಾಗಿ
ಆತನ ಧನಕ್ಕೆ ತಂದೆಯಾದನು
ತಮ್ಮಲ್ಲಿರ್ದ ಭಕ್ತಿಯ ಮಾರಿಕೊಂಡುಂಬವರು
ನಿಮ್ಮ ನಿಜಭಕ್ತರಲ್ಲಯ್ಯ ಚೆನ್ನಮಲ್ಲಿಕಾರ್ಜುನ

೨೩೭.
ಅರ್ಥ ಸಂನ್ಯಾಸಿಯಾದಡೇನಯ್ಯಾ,
ಆವಂಗದಿಂದ ಬಂದಡೆಯೂ ಕೊಳ್ಳದಿರಬೇಕು
ರುಚಿ ಸನ್ಯಾಸಿಯಾದಡೇನಯ್ಯಾ
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು
ಸ್ತ್ರೀ-ಸನ್ಯಾಸಿಯಾದಡೇನಯ್ಯಾ
ಜಾಗ್ರತ್-ಸ್ವಪ್ನ-ಸುಷುಪ್ತಿಯಲ್ಲಿ ತಪ್ಪಿಲ್ಲದಿರಬೇಕು
ದಿಗಂಬರಿಯಾದಡೇನಯ್ಯಾ
ಮನ ಬತ್ತಲೆಯಿರಬೇಕು
ಇಂತೀ ಚತುರ್ವಿಧ ಹೊಲಬನರಿಯದೆ
ವೃಥಾ ಕೆಟ್ಟರು ಕಾಣಾ ಚೆನ್ನಮಲ್ಲಿಕಾರ್ಜುನಾ

೨೩೮.
ಸದ್ಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತಚ್ಛಿಷ್ಯನ ಮಸ್ತಕದ ಮೇಲೆ ತನ್ನ ಶ್ರೀಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯ
ಒಪ್ಪುವ ಶ್ರೀವಿಭೂತಿಯ ನೊಸಲಿಂಗೆ ಪಟ್ಟವ ಕಟ್ಟಿದೊಡೆ
ಮುಕ್ತಿರಾಜ್ಯದೊಡೆತನಕ್ಕೆ ಪಟ್ಟವ ಕಟ್ಟಿದಂತಾಯಿತ್ತಯ್ಯ
ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ
ಪಂಚಕಳಶದ ಅಭಿಷೇಕವ ಮಾಡಿಸಲು
ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯ
ನೆರೆದ ಶಿವಗಣಂಗಳ ಮಧ್ಯದಲ್ಲಿ
ಮಹಾಲಿಂಗವನು ಕರತಳಾಮಳಕವಾಗಿ
ಶಿಷ್ಯನ ಕರಸ್ಥಲಕ್ಕೆ ಇತ್ತು ಪ್ರತಿಷ್ಠಿಸಿ
ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ
ಕಂಕಣವ ಕಟ್ಟಿದಲ್ಲಿ
ಕಾಯವೇ ಕೈಲಾಸವಾಯಿತ್ತು
ಪ್ರಾಣವೇ ಪಂಚಬ್ರಹ್ಮಮಯ ಲಿಂಗವಾಯಿತ್ತು
ಇಂತು ಮುಂದ ತೋರಿಸಿ ಹಿಂದೆ ಬಿಡಿಸಿದ
ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ

೨೩೯.
ಧನದ ಮೇಲೆ ಬಂದವರೆಲ್ಲ ಅನುಸಾರಿಗಳಲ್ಲದೆ
ಅನುವ ಮಾಡಬಂದವರಲ್ಲ
ಮನದ ಮೇಲೆ ಬಂದು ನಿಂದು ಜರಿದು ನುಡಿದು
ಪಥವ ತೋರಬಲ್ಲಡಾತನೇ ಸಂಬಂಧಿ
ಹೀಂಗಲ್ಲದೆ, ಅವರಿಚ್ಛೆಯ ನುಡಿದು ತನ್ನುದರವ ಹೊರೆವನಕ
ಬಚ್ಚಣಿಗಳ ಮೆಚ್ಚುವನೆ ಚೆನ್ನಮಲ್ಲಿಕಾರ್ಜುನ

೨೪೦.
ಸೆಜ್ಜೆ ಉಪ್ಪರಿಸಿ, ಶಿವಲಿಂಗ ಕರಸ್ಥಲಕ್ಕೆ ಬರೆ,
ಪ್ರಜ್ವಲಿಸಿ ತೊಳಗಿ ಬೆಳಗುತ್ತಿಹ ಕಾಂತಿಯಲ್ಲಿ
ಜಜ್ಜರಿಸಿ ತನು-ಮನ, ದೃಷ್ಟಿನಟ್ಟು
ನಟ್ಟದೃಷ್ಟಿಯೊಳು ಒಜ್ಜರಿಸಿ ಹರಿವ
ಶಿವಸುಖರಸದೊಳೋಲಾಡುತೆಂದಿಪ್ಪೆನೊ
ನಿಮ್ಮ ಸಜ್ಜನಿಕೆ-ಸದ್ಭಕ್ತಿಯ ತಲೆಯೊತ್ತಿ ಕೂಡಿ ಆಡಿ ಲಜ್ಜೆಗೆಟ್ಟು
ನಿಮ್ಮನೆಂದಿಗೆ ನೆರೆವೆ ಚೆನ್ನಮಲ್ಲಿಕಾರ್ಜುನ

೨೪೧.
ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ ಕಂಡೆನ್ನ
ಮನ ಶುದ್ಧವಾಯಿತ್ತು ಅಸಂಖ್ಯಾತರ ನೆನೆದೆನ್ನ
ಕಂಗಳು ಶುದ್ಧವಾಯಿತ್ತು ಸಕಲಗಣಂಗಳ ನೋಡಿಯೆನ್ನ
ಶ್ರೋತ್ರ ಶುದ್ಧವಾಯಿತ್ತು
ಅವರ ಕೀರ್ತಿಯ ಕೇಳಿಯೆನ್ನ
ಘ್ರಾಣ ಶುದ್ಧವಾಯಿತ್ತು
ನಿಮ್ಮ ಪಾದಾರ್ಪಿತ ಪರಿಮಳವ ವಾಸಿಸಿಯೆನ್ನ
ಜಿಹ್ವೆ ಶುದ್ಧವಾಯಿತ್ತು ನಿಮ್ಮ ಶರಣರೊಕ್ಕುದ ಕೊಂಡೆನಾಗಿ
ಭಾವನೆಯೆನಗಿದು ಜೀವನ ಕೇಳಾ ಲಿಂಗ ತಂದೆ
ನೆಟ್ಟನೆ ನಿಮ್ಮ ಮನ ಮುಟ್ಟಿ ಪೂಜಿಸಿ
ಭವಗೆಟ್ಟೆ ನಾನು ಚೆನ್ನಮಲ್ಲಿಕಾರ್ಜುನ

೨೪೨.
ಕುಲಮದವೆಂಬುದಿಲ್ಲ ಅಯೋನಿಸಂಭವನಾಗಿ
ಛಲಮದವೆಂಬುದಿಲ್ಲ ಪ್ರತಿದೂರನಾಗಿ
ಧನಮದವೆಂಬುದಿಲ್ಲ ತ್ರಿಕರಣಶುದ್ಧನಾಗಿ
ವಿದ್ಯಾಮದವೆಂಬುದಿಲ್ಲ ಅಸಾಧ್ಯವ ಸಾಧಿಸಿದೆನಾಗಿ
ಮತ್ತಾವ ಮದವಿಲ್ಲ ನೀನವಗವಿಸಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣ ಅಕಾಯಚರಿತ್ರನಾಗಿ

೨೪೩.
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿಯ ಅಳೆದು ತೀರದ ಮುನ್ನ
ಶಿವನ ನೆನೆಯಿರೇ! ಶಿವನ ನೆನೆಯಿರೇ!
ಈ ಜನ್ಮ ಬಳಿಕಿಲ್ಲ
ಚೆನ್ನಮಲ್ಲಿಕಾರ್ಜುನದೇವರ ದೇವ
ಪಂಚಮಹಾಪಾತಕರೆಲ್ಲ ಮುಕ್ತಿವಡೆದರು

೨೪೪.
ಕರುವಿನ ರೂಹು ಅರಗಿಳಿಯನೋದಿಸುವಂತೆ
ಓದಿಸುವುದಕೆ ಜೀವವಿಲ್ಲ
ಕೇಳುವುದಕ್ಕೆ ಜ್ಞಾನವಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮನರಿಯದವನ ಭಕ್ತಿ
ಕರುವಿನ ರೂಹು ಅರಗಿಳಿಯ ನೋದಿಸುವಂತೆ

೨೪೫.
ಪ್ರಥಮದಲಾದ ಮೋಹ ಸಾತ್ವಿಕವಾದಡೆ ಕಿತವೇಕಯ್ಯ?
ಹೆರರನೊಲ್ಲದೆ ಬೇಟಕ್ಕೆ ಕಿತವೇಕಯ್ಯ?
ಚೆನ್ನಮಲ್ಲಿಕಾರ್ಜುನದೇವರ ದೇವನೊಂದಿಗೆ
ಬಿಡದ ನೇಹಕ್ಕೆ ಕಿತವೇಕೆ?

೨೪೬.
ಮುತ್ತೂ ನೀರಲಾಯಿತ್ತು
ವಾರಿಕಲ್ಲೂ ನೀರಲಾಯಿತ್ತು
ಉಪ್ಪೂ ನೀರಲಾಯಿತ್ತು
ಉಪ್ಪು ಕರಗಿತ್ತು, ವಾರಿಕಲ್ಲೂ ಕರಗಿತ್ತು
ಮತ್ತು ಕರಗಿದುದನಾರೂ ಕಂಡವರಿಲ್ಲ
ಈ ಸಂಸಾರಿಮಾನವರು ಲಿಂಗವ ಮುಟ್ಟಿ
ಭವಭಾರಿಗಳಾದರು
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ

೨೪೭.
ಬೋಳೆಯನೆಂದು ನಂಬಬೇಡ
ಡಾಳಕನವನು, ಜಗದ ಬಿನ್ನಾಣಿ
ಬಾಣ-ಮಯೂರ-ಕಾಳಿದಾಸ-ಓಹಿಲನುದ್ಭಟ
ಮಲುಹಣನವರಿಗಿತ್ತ ಪರಿ ಬೇರೆ
ಮುಕ್ತಿ-ಭುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬನು
ಚೆನ್ನಮಲ್ಲಿಕಾರ್ಜುನನು

೨೪೮.
ಜಾತಿಶೈವ-ಅಜಾತಿಶೈವವೆಂದೆರಡು
ಪ್ರಕಾರವಾಗಿಹುದಯ್ಯ
ಜಾತಿಶೈವರೆಂಬವರು ಶಿವಂಗೆ ಭೋಗಸ್ತ್ರೀಯರಯ್ಯ
ಅಜಾತಿಶೈವರೆಂಬವರು ಶಿವಂಗೆ ಕುಲಸ್ತ್ರೀಯರಯ್ಯ
ಜಾತಿಶೈವರೆಂಬವರು ಸರ್ವಭೋಗಂಗಳ ಬಯಸಿ ಮಾಡುವರಾಗಿ
ಯದ್ದ್ವಾರೇ ಮತ್ತ ಮಾತಂಗಾಃ ವಾಯುವೇಗಾಸ್ತುರಂಗಮಾಃ
ಪೂರ್ಣೇಂದುವದನಾ ನಾರ್ಯಃ ಶಿವಪೂಜಾವಿಧೇ ಫಲಂ
ಎಂದುದಾಗಿ-ಇದು ಜಾತಿಶೈವರಿಗೆ ಕೊಟ್ಟ ಭೋಗಂಗಳಯ್ಯ
ಅಜಾತಿಶೈವರು ಗುರುಲಿಂಗಕ್ಕೆ ತನುಮನಧನವ ನಿವೇದಿಸಿ
ಸರ್ವಸೂತಕರಹಿತವಾಗಿಹರಯ್ಯ
ಅಹಂ ಮಾಹೇಶ್ವರಪ್ರಾಣೋ ಮಾಹೇಶ್ವರೋ ಮಮ ಪ್ರಾಣಃ
ತಥೈವೈಕ್ಯಂ ತು ನಿಷ್ಕ್ರಿಯಂ ಅಚ್ಚಲಿಂಗೈಕ್ಯಮೇವ ಚ
ಇದು ಕಾರಣ ಸರ್ವೇಶ್ವರ ಚೆನ್ನಮಲ್ಲಿಕಾರ್ಜುನಯ್ಯನು
ಭಕ್ತಿ ಕಾಯವೆಂಬೈಕ್ಯಪದವನು
ಅಜಾತಿಶೈವರಿಗೆ ಕೊಡುವನಯ್ಯ

೨೪೯.
ಸತ್ತ ಹೆಣ ಕೂಗಿದುದುಂಟು
ಬೈಚಿಟ್ಟ ಬಯಕೆ ಕರೆದುದುಂಟು
ಹೆಪ್ಪಿಟ್ಟ ಹಾಲು ಗಟ್ಟಿಗೊಂಡು ಸಿಹಿಯಾದುದುಂಟು
ಇದು ನಿಶ್ಚಯಿಸಿ ನೋಡಿ ಚೆನ್ನಮಲ್ಲಿಕಾರ್ಜುನದೇವನಲ್ಲಿ

೨೫೦.
ಮರೆದೊರಗಿ ಕನಸ ಕಂಡೇಳುವಲ್ಲಿ
ಸತ್ತ ಹೆಣ ಎದ್ದಿತ್ತು
ತನ್ನ ಋಣನಿಧಾನ ಎದ್ದು ಕರೆಯಿತ್ತು
ಹೆಪ್ಪಿಟ್ಟ ಹಾಲು ಘಟ್ಟಿ ತುಪ್ಪವಾಗಿ ಸಿಹಿಯಾಯಿತ್ತು
ಇದಕ್ಕೆ ತಪ್ಪ ಸಾಧಿಸಲೇಕೆ?
ಚೆನ್ನಮಲ್ಲಿಕಾರ್ಜುನದೇವನ ಅಣ್ಣಗಳಿರಾ

೨೫೧.
ಎನಗೇಕಯ್ಯ? ಸಾವ ಪ್ರಪಂಚಿನ ಪುತ್ಥಳಿ
ಮಾಯಿಕದ ಮಲಭಾಂಡ ಆತುರದ ಭವನಿಳಯ
ಜಲಕುಂಭದ ಒಡೆಯಲ್ಲಿ ಒಸರುವ ನೆಲೆಮನೆ ಎನಗೇಕಯ್ಯ?
ಬೆರಳು ತಾಳ ಹಣ್ಣ ಹಿಸಿದಡೆ ಮೆಲಲುಂಟೆ
ಎನ್ನ ತಪ್ಪನೊಪ್ಪಗುಳ್ಳಾ ಚೆನ್ನಮಲ್ಲಿಕಾರ್ಜುನದೇವ

೨೫೨.
ಊಡಿದಡುಣ್ಣದು, ನೀಡಿದಡರಿಯದು
ಕಾಣದು ಬೇಡದು, ಒಲಿಯದು ನೋಡಾ
ಊಡಿದರುಂಡು ನೀಡೀದಡೊಲಿದು
ಬೇಡಿದ ವರವ ಕೊಡುವ ಜಂಗಮಲಿಂಗದ ಪಾದವ
ಹಿಡಿದು ಬದುಕಿದೆ ಕಾಣಾ ಚೆನ್ನಮಲ್ಲಿಕಾರ್ಜುನ

೨೫೩.
ಕಾಯ ಪ್ರಸಾದವೆನ್ನ ಮನ ಪ್ರಸಾದವೆನ್ನ
ಪ್ರಾಣ ಪ್ರಸಾದವೆನ್ನ ಭಾವ ಪ್ರಸಾದವೆನ್ನ
ಸೈಧಾನ ಪ್ರಸಾದವೆನ್ನ ಸಮಭೋಗ ಪ್ರಸಾದವೆನ್ನ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಪ್ರಸಾದವ ಹಾಸಿ ಹೊದಿಸಿಕೊಂಡಿಪ್ಪೆ

೨೫೪.
ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ
ಅಸ್ತಮಾನದಿಂದ ಮೇಲೆ ಜಿತೇಂದ್ರಿಯರಿಲ್ಲ
ವಿಧಿಯ ಮೀರುವ ಅಮರರಿಲ್ಲ
ಕ್ಷುಧೆ-ವ್ಯಸನ-ವಿಧಿಗಂಜಿ ನಾ ನಿಮ್ಮ ಮರೆವೊಕ್ಕು
ಚೆನ್ನಮಲ್ಲಿಕಾರ್ಜುನ ಬದುಕಿದೆ

೨೫೫.
ಅರಿದೆನೆಂದೆಡೆ ಅರಿಯಬಾರದು ನೋಡಾ
ಘನಕ್ಕೆ ಘನ ತಾನೆ ನೋಡಾ
ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ ಸೋತೆನು

೨೫೬.
ಎನ್ನಂತೆ ಪುಣ್ಯಂಗೆಯ್ದವರುಂಟೆ?
ಎನ್ನಂತೆ ಭಾಗ್ಯಂಗೆಯ್ದವರುಂಟೆ?
ಕಿನ್ನರನಂತಪ್ಪ ಸೋದರನೆನಗೆ
ಏಳೇಳು ಜನ್ಮದಲ್ಲಿ ಶಿವಭಕ್ತರೇ ಬಂಧುಗಳೆನಗೆ
ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ

೨೫೭.
ಅಯ್ಯಾ ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯ
ಅಯ್ಯಾ ನಿಮ್ಮ ಶರಣರು ಇದ್ದ ಪುರವೇ ಕೈಲಾಸಪುರವಯ್ಯ
ಅಯ್ಯಾ ನಿಮ್ಮ ಶರಣರು ನಿಂದುದೇ ನಿಜನಿವಾಸವಯ್ಯಾ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ
ಆನು ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು

೨೫೮.
ಗುರುವೆ ತೆತ್ತಿಗನಾದ
ಲಿಂಗವೆ ಮದವಳಿಗನಾದ
ನಾನು ಮದವಳಿಗೆಯಾದೆನು
ಈ ಭುವನವೆಲ್ಲರಿಯಲು
ಅಸಂಖ್ಯಾತರೆನಗೆ ತಾಯಿತಂದೆಗಳು
ಕೊಟ್ಟರು ಪ್ರಭುವಿನ ಮನೆಗೆ
ಸಾದೃಶ್ಯವಪ್ಪ ವರನ ನೋಡಿ
ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನಾದ ಬಳಿಕ
ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯ

೨೫೯.
ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ಬಯಲಾಯಿತ್ತು
ಪ್ರುಭುವೆ ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನ್ನ ಅರಿವು ಸ್ವಯವಾಯಿತ್ತು
ಚೆನ್ನಮಲ್ಲಿಕಾರ್ಜುನದೇವಯ್ಯ,
ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗೆ ಮತ್ತಾವುದಿಲ್ಲವಯ್ಯ ಪ್ರಭುವೆ

೨೬೦.
ಅಂಗಸಂಗದಲ್ಲಿ ಲಿಂಗಸಂಗಿಯಾದೆ
ಲಿಂಗಸಂಗದಲ್ಲಿ ಅಂಗಸಂಗಿಯಾದೆ
ಉಭಯಸಂಗವನರಿಯದೆ ಪರಿಣಾಮಿಯಾದೆನು
ನುಡಿಯ ಗಡಣವ ಮರೆದು ತೆರಹಿಲ್ಲದಿದ್ದರೇನು
ಎನ್ನ ದೇಹ ಚೆನ್ನಮಲ್ಲಿಕಾರ್ಜುನನ ಬೆರೆಸಿದ ಬಳಿಕ
ಇನ್ನು ನಾನು ಏನೆಂದೂ ಅರಿಯೆನಯ್ಯ

೨೬೧.
ಅಂಗದೊಳಗೆ ಅಂಗವಾಗಿ ಅಂಗಲಿಂಗೈಕ್ಯವ ಮಾಡಿದೆ
ಮನದೊಳಗೆ ಮನವಾಗಿ ಮನ ಲಿಂಗೈಕ್ಯವ ಮಾಡಿದೆ
ಭಾವದೊಳಗೆ ಭಾವವಾಗಿ ಭಾವಲಿಂಗೈಕ್ಯವ ಮಾಡಿದೆ
ಅರಿವಿನೊಳಗೆ ಅರಿವಾಗಿ ಜ್ಞಾನಲಿಂಗೈಕ್ಯವ ಮಾಡಿದೆ
ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ
ನಿವೃತ್ತಿಲಿಂಗೈಕ್ಯವ ಮಾಡಿದೆ
ನಾನೆಂಬುದ ನಿಲಿಸಿ ನೀನೆಂಬುದ ಕೆಡಿಸಿ
ಉಭಯಲಿಂಗೈಕ್ಯವ ಮಾಡಿದೆ
ಚೆನ್ನಮಲ್ಲಿಕಾರ್ಜುನನೊಳಗೆ ನಾನಳಿದೆನಾಗಿ
ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು [=ಉಳಿಯಿತ್ತು?]
ಕಾಣಾ ಸಂಗನಬಸವಣ್ಣ

೨೬೨.
ಎನ್ನ ಭಕ್ತಿ ನಿಮ್ಮ ಧರ್ಮ
ಎನ್ನ ಜ್ಞಾನ ಪ್ರಭುದೇವರ ಧರ್ಮ
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ
ಈ ಮೂವರೂ ಒಂದೊಂದ ಕೊಟ್ಟರೆನಗೆ-
ಮೂರು ಭಾವವಾಯಿತ್ತು
ಈ ಮೂರನು ನಿನ್ನಲ್ಲಿ ಸಮರ್ಪಿಸಿದ ಬಳಿಕ
ಎನಗಾವ ಜಂಜಡವಿಲ್ಲ
ಚೆನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ
ನಿನ್ನ ಕರುಣದ ಶಿಶು ನಾನು ಕಾಣಾ ಸಂಗನಬಸವಣ್ಣ

೨೬೩.
ಲಿಂಗ ಸುಖಸಂಗದಲ್ಲಿ ಮನ ವೇದ್ಯವಾಯಿತ್ತು
ಇನ್ನೆಲ್ಲಿಯದಯ್ಯ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯದಯ್ಯ ನಿಮ್ಮಲ್ಲಿ ಕೂಡುವುದು?
ಪರಮಸುಖಪರಿಣಾಮ ಮನ ಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ

೨೬೪.
ಮೂಲದ್ವಾರದ ಬೇರ ಮೆಟ್ಟಿ ಭೂಮಂಡಲವನೇರಿದೆ
ಆಚಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ
ವೈರಾಗ್ಯದ ಸೋಪಾನದಿಂದ ಶ್ರೀಗಿರಿಯನೇರಿದೆ
ಕೈವಿಡಿದು ತೆಗೆದುಕೊಳ್ಳಾ ಚೆನ್ನಮಲ್ಲಿಕಾರ್ಜುನ

೨೬೫.
ಬಯಲು ಲಿಂಗವೆಂಬೆನೆ? ಬಗಿದು ನಡೆದಲ್ಲಿ ಹೋಯಿತ್ತು
ಬೆಟ್ಟ ಲಿಂಗವೆಂಬೆನೆ? ಮೆಟ್ಟಿ ನಿಂದಲ್ಲಿ ಹೋಯಿತ್ತು
ತರುಮರಾದಿಗಳು ಲಿಂಗವೆಂಬೆನೆ! ತರಿದಲ್ಲಿ ಹೋಯಿತ್ತು
ಲಿಂಗ-ಜಂಗಮದ ಪಾದವೆ ಗತಿಯೆಂದು ನಂಬಿದ ಸಂಗನ ಬಸವಣ್ಣನ
ಮಾತು ಕೇಳದೆ ಕೆಟ್ಟೆನಯ್ಯ, ಚೆನ್ನಮಲ್ಲಿಕಾರ್ಜುನ

೨೬೬.
ನೋಡಿಹೆನೆಂದಡೆ ದೃಷ್ಟಿ ಮರೆಯಾಯಿತ್ತು
ಕೂಡಿಹೆನೆಂದೊಡೆ ಭಾವ ಮರೆಯಾಯಿತ್ತು
ಏನೆಂಬೆನೆಂತೆಂಬೆನಯ್ಯ?
ಅರಿದಿ[ದ=?]ಹೆನೆಂದೊಡೆ ಮರಹು ಮರೆಯಾಯಿತ್ತು
ನಿನ್ನ ಮಾಯೆಯನತಿಗಳೆವೊಡೆ ಎನ್ನಳವೇ
ಕಾಯಯ್ಯ ಚೆನ್ನಮಲ್ಲಿಕಾರ್ಜುನ

೨೬೭.
ಭಾವ ಬೀಸರವಾಯಿತ್ತು
ಮನ ಮೃತ್ಯುವನಪ್ಪಿತ್ತು, ಆನೇವೆನಯ್ಯ?
ಅಳಿತನದ ಮನ ತಲೆಕೆಳಗಾಯಿತ್ತು, ಆನೇವೆನಯ್ಯ?
ಬಿಚ್ಚಿ ಬೇರಾಗದ ಭಾವವಾಗಿ ಬೆರೆದೊಪ್ಪಚ್ಚಿ
ನಿನ್ನ ನಿತ್ಯಸುಖದೊಳಗಾನೆಂದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ

೨೬೮.
ಹಗಲೆನ್ನೆ, ಇರುಳೆನ್ನೆ!
ಉದಯವೆನ್ನೆ, ಅಸ್ತಮಾನವೆನ್ನೆ! ಹಿಂದೆನ್ನೆ, ಮುಂದೆನ್ನೆ!
ನೀನಲ್ಲದೆ ಪರತೊಂದಹುದೆನ್ನೆ! ಮನ ಘನವಾದುದಿಲ್ಲಯ್ಯ!
ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯ!
ನಿಮ್ಮ ಶರಣ ಬಸವಣ್ಣನ ತೇಜದೊಳಗಲ್ಲದೆ
ಆನೆನ್ನ [=ಆಂ ನಿನ್ನ?]ನೆಂತು ಕಾಂಬೆನು ಹೇಳಾ
ಚೆನ್ನಮಲ್ಲಿಕಾರ್ಜುನ

೨೬೯.
ಕಾಯದ ಕಾರ್ಪಣ್ಯವರತಿತ್ತು
ಕರಣಂಗಳ ಕಳವಳವಳಿದಿತ್ತು
ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು
ಇನ್ನೇವೆನಿನ್ನೇವೆನಯ್ಯ?
ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ
ಬಯಕೆ ಬಯಲಾಗದು!
ಇನ್ನೇವೆನಿನ್ನೇವೆನಯ್ಯ ಚೆನ್ನಮಲ್ಲಿಕಾರ್ಜುನ

೨೭೦.
ಅಯ್ಯ ಕತ್ತಲೆಯ ಕಳೆದುಳಿದ
ಸತ್ಯ ಶರಣರ ಪರಿಯನೇನೆಂಬೆನಯ್ಯ!
ಘನವನೊಳಕೊಂಡ ಮನದ ಮಹಾನುಭಾವಿಗಳ
ಬಳಿವಿಡಿದು ಬದುಕುವೆನಯ್ಯ
ಅಯ್ಯ, ನಿನ್ನಲ್ಲಿ ಬೇರೊಂದರಿಯದ ಲಿಂಗಸುಖಿಗಳ ಸಂಗದಲ್ಲಿ
ದಿನವ ಕಳೆಯಿಸಯ್ಯ, ಚೆನ್ನಮಲ್ಲಿಕಾರ್ಜುನ

೨೭೧.
ತನು ಶುದ್ಧ, ಮನ ಶುದ್ಧ,
ಭಾವಶುದ್ಧವಾದವರನೆನಗೊಮ್ಮೆ ತೋರಾ!
ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ,
ನಿತ್ಯಶುದ್ಧರಾದವರನೆನಗೊಮ್ಮೆ ತೋರಾ!
ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ
ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ

೨೭೨.
ನಡೆ ಶುಚಿ, ನುಡಿ ಶುಚಿ, ತನು ಶುಚಿ,
ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು
ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ
ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ

೨೭೩.
ಪಡೆವುದರಿದು ನರಜನ್ಮವ,
ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ,
ಪಡೆವುದರಿದು ಸತ್ಯಶರಣರನುಭಾವವ!
ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ
ನಲಿನಲಿದಾಡು ಕಂಡೆಯಾ ಎಲೆ ಮನವೇ!

೨೭೪.
ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ!
ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ!
ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ!
ಎಡರುವ ಹರಳೆಲ್ಲ ಚಿಂತಾಮಣಿ!
ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ
ನೋಡುತ ಬಂದು, ಕದಳಿಯ ಬನವ ಕಂಡೆ ನಾನು

೨೭೫.
ತನುವೆಲ್ಲ ಜರಿದು, ಮನವ ನಿಮ್ಮೊಳಗಿರಿಸಿ
ಘನಸುಖದಲೋಲಾಡುವ ಪರಿಯ ತೋರಯ್ಯ ಎನಗೆ
ಭಾವವಿಲ್ಲದ ಬಯಲ ಸುಖವು ಭಾವಿಸಿದಡೆಂತಹುದು
ಬಹುಮುಖರುಗಳಿಗೆ
ಕೇಳಯ್ಯ, ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವ
ನಾನಳಿದು ನೀನುಳಿದ ಪರಿಯ ತೋರಯ್ಯ ಪ್ರಭುವೆ

೨೭೬.
ಲಿಂಗಾಂಗಸಂಗ ಸಮರದ ಸುಖದಲ್ಲಿ
ಮನ ವೇದ್ಯವಾಯಿತು
ನಿಮ್ಮ ಶರಣರ ಅನುಭಾವಸಂಗದಿಂದ
ಎನ್ನ ತನು-ಮನ-ಪ್ರಾಣಪದಾರ್ಥವ
ಗುರು-ಲಿಂಗ-ಜಂಗಮಕಿತ್ತು
ಶುದ್ಧ-ಸಿದ್ಧ-ಪ್ರಸಿದ್ಧ ಪ್ರಸಾದಿಯಾದೆನು
ಆ ಮಹಪ್ರಸಾದದ ರೂಪ-ರುಚಿ-ತೃಪ್ತಿಯ
ಇಷ್ಟ-ಪ್ರಾಣ-ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ
ಮಹಾಘನಪ್ರಸಾದಿಯಾದೆನು
ಇಂತೀ ಸರ್ವಾಚಾರಸಂಪತ್ತು
ಎನ್ನ ತನು-ಮನವೇದ್ಯವಾಯಿತು
ಇನ್ನೆಲ್ಲಿಯಯ್ಯ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯಯ್ಯ ನಿಮಗೆ ಕೂಡುವುದು?
ಪರಮಸುಖದ ಪರಿಣಾಮ ಮನಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ
ಚೆನ್ನಮಲ್ಲಿಕಾರ್ಜುನ ಪ್ರಭುವೆ

೨೭೭.
ಹೋದೆನೂರಿಗೆ ಇದ್ದೆ ನಾನಿಲ್ಲಿ
ಹೋದರೆ ಮರಳಿ ಇತ್ತ ಬಾರೆನವ್ವ
ಐವರು ಭಾವದಿರು, ಐವರು ನಗೆವೆಣ್ಣು
ಐವರು ಕೂಡಿ ಎನ್ನ ಕಾಡುವರು
ಬೈವರು, ಹೊಯ್ವರು, ಮಿಗೆ ಕೆಡೆನುಡಿವರು
ಅವರೈವರ ಕಾಟಕ್ಕೆ ನಾನಿನ್ನಾರೆ ಕಂಡವ್ವಾ
ಅತ್ತೆ ಮಾವನು ಮೈದುನ ನಗೆವೆಣ್ಣು
ಚಿತ್ತವನೊರೆದು ನೋಡುವ ಗಂಡ
ಕತ್ತಲೆಯಾದರೆ ಕರೆದನ್ನವ ನೀಡಳವ್ವ
ಅತ್ತಿಗೆ ಹತ್ತೆಂಟು ನುಡಿವಳಮ್ಮಯ್ಯ ತಾಯೆ
ಉಪಮಾತೀತರು ರುದ್ರಗಣಂಗಳು
ಅವರೆನ್ನ ಬಂಧುಬಳಗಂಗಳು ಸಯಸಿ (?)
ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದರೆ
ಮರಳಿ ಬಾರೆನಮ್ಮ ತಾಯೆ

೨೭೮.
ಲಿಂಗವೆನ್ನೆ ಲಿಂಗೈಕ್ಯವೆನ್ನೆ!
ಸಂಗವೆನ್ನೆ ನಿಸ್ಸಂಗವೆನ್ನೆ!
ಆಯಿತ್ತೆನ್ನೆ ಆಗದೆನ್ನೆ!
ನಾನೆನ್ನೆ ನೀನೆನ್ನೆ!
ಚೆನ್ನಮಲ್ಲಿಕಾರ್ಜುನಲಿಂಗದಲ್ಲಿ
ಘನಲಿಂಗೈಕ್ಯವಾದ ಬಳಿಕ ಏನೂ ಎನ್ನೆ!

೨೭೯.
ಕಾಯ ಮುಟ್ಟುವೊಡೆ ಕಾಣಬಾರದ ಘನ
ನಿಮ್ಮನೆಂತು ಕರಸ್ಥಲದಲ್ಲಿ ಧರಿಸುವೆನಯ್ಯ?
ಕ್ರೀಗಳು ಮುಟ್ಟಲರಿಯವು
ನಿಮ್ಮನೆಂತು ಪೂಜಿಸುವೆನಯ್ಯ?
ನಾದಬಿಂದುಗಳು ಮುಟ್ಟಲರಿಯವು
ನಿಮ್ಮನೆಂತು ಪಾಡುವೆನಯ್ಯ?
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ನೋಡಿ ನೋಡಿ ಸೈವೆರಗಾಗುತಿಪ್ಪೆನಯ್ಯ

೨೮೦.
ಕ್ರೀಡೆ ತುಂಬಿಯ ಹಂಬಲದಿಂದ ತುಂಬಿಯಾಗಿ
ತನ್ನ ಬಿಡಲುಂಟೇ ಅಯ್ಯ?
ಆನು ನಿಮ್ಮ ನೆನೆದು, ಎನ್ನ ಕರ ತುಂಬಿ,
ಎನ್ನ ಮನ ತುಂಬಿ, ಎನ್ನ ಭಾವ ತುಂಬಿ
ಮತ್ತಿಲ್ಲದೆ ನಿನ್ನ ಕೂಟದ ಸವಿಗಲೆಯನೆಂತು ಕಾಣುವೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ

೨೮೧.
ಕಲ್ಲಹೊತ್ತು ಕಡಲೊಳಗೆ ಮುಳುಗಿದೊಡೆ
ಎಡರಿಂಗೆ ಕಡೆಯುಂಟೇ ಅವ್ವ?
ಉಂಡು ಹಸಿವಾಯಿತ್ತೆಂದೊಡೆ ಭಂಗವೆಂಬೆ
ಕಂಡ ಕಂಡ ಠಾವಿನಲ್ಲಿ ಮನ ಬೆಂದೊಡೆ
ಗಂಡ ಮಲ್ಲಿಕಾರ್ಜುನಯ್ಯನೆಂತೊಲಿವೆನಯ್ಯ

೨೮೨.
ಉಡುವೆ ನಾನು ಲಿಂಗಕ್ಕೆಂದು
ತೊಡುವೆ ನಾನು ಲಿಂಗಕ್ಕೆಂದು
ಮಾಡುವೆ ನಾನು ಲಿಂಗಕ್ಕೆಂದು
ನೋಡುವೆ ನಾನು ಲಿಂಗಕ್ಕೆಂದು
ಎನ್ನಂತರಂಗ ಬಹಿರಂಗಗಳು
ಲಿಂಗಕ್ಕಾಗಿ ಮಾಡಿಯೂ ಮಾಡದಂತಿಪ್ಪೆ ನೋಡಾ!
ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ
ಹತ್ತರೊಳಗೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವ?

೨೮೩.
ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗಾನೊಲಿದೆನವ್ವ
ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆ
ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ
ಇದುಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ
ಈ ಸಾವ ಕೆಡುವ ಗಂಡರನೊಯ್ದು [ಒಲೆಯೊಳಗಿಕ್ಕು ತಾಯೆ]

೨೮೪.
ಅಯ್ಯ, ಪರಾತ್ಪರ ಸತ್ಯಸದಾಚಾರ ಗುರುಲಿಂಗ-
ಜಂಗಮದ ಶ್ರೀಚರಣವನ್ನು
ಹಿಂದೆ ಹೇಳದ ಅಚ್ಚಪ್ರಸಾದಿಯೋಪಾದಿಯಲ್ಲಿ
ನಿರ್ವಂಚಕತ್ವದಿಂದ
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಸಮರ್ಪಿಸಿ
ಒಪ್ಪೊತ್ತು ಅಷ್ಟವಿಧಾರ್ಚನೆಯ ಷೋಡಶೋಪಚಾರದಿಂದ
ಪಾದಾರ್ಚನೆಯ ಮಾಡಿ
ಪಾದೋದಕ ಪ್ರಸಾದವನ್ನು ತನ್ನ ಸರ್ವಾಂಗದಲ್ಲಿ ನೆಲೆಸಿರ್ಪ
ಇಷ್ಟ ಮಹಾಲಿಂಗದೇವನ ತ್ರಿವಿಧ ಸ್ಥಾನದಲ್ಲಿ
ಬಸವಣ್ಣ-ಚೆನ್ನಬಸವಣ್ಣ-ಅಲ್ಲಮ[+ಹಾ?]ಪ್ರಭು
ಎಂಬ ತ್ರಿವಿಧನಾಮಸ್ವರೂಪವಾದ
ಷೋಡಶಾಕ್ಷರಂಗಳೇ ಷೋಡಶವರ್ಣವಾಗಿ
ನೆಲಸಿರ್ಪರು ನೋಡಾ!
ಇಂತು ಷೋಡಶಕಲಾಸ್ವರೂಪವಾದ ಚಿದ್ರನ ಮಹಾಲಿಂಗದೇವನ
ನಿರಂಜನ ಜಂಗಮದೋಪಾದಿಯಲ್ಲಿ
ಸುಗುಣ-ನಿರ್ಗುಣ ಪೂಜೆಗಳ ಮಾಡಿ
ಜಂಗಮಚರಣ ಸೋಂಕಿನಿಂ ಬಂದ
ಗುರುಪಾದೋದಕವನಾದರೂ ಸರಿಯೆ
ಒಂದು ಭಾಜನದಲ್ಲಿ ಸೂಕ್ಷ್ಮವಾಗಿ ರಚಿಸಿ
ಆ ಉದಕದೊಳಗೆ ಹಸ್ತೋದಕ ಮಂತ್ರೋದಕವ ಮಾಡಿ
ಆಮೇಲೆ ಅನಾದಿಪ್ರಣಮವ ಪ್ರಸಾದ ಪ್ರಣಮದೊಳಗೆ
ಅಖಂಡ ಮಹಾಜ್ಯೋತಿಪ್ರಣಮವ ಲಿಖಿತವ ಮಾಡಿ
ಶ್ರದ್ಧಾದಿಯಾದ ಪೂರ್ಣಭಕ್ತಿಯಿಂದ
ಮಹಾಚಿದ್ರನತೀರ್ಥವೆಂದು ಭಾವಿಸಿ
ಪಂಚಾಕ್ಷರ ಷಡಕ್ಷರ ಮಂತ್ರಧ್ಯಾನದಿಂದ
ಆನಿಮಿಷ ದೃಷ್ಟಿಯಿಂದ ನಿರೀಕ್ಷಿಸಿ
ಮೂರು ವೇಳೆ ಪ್ರದಕ್ಷಿಣೆಯ ಮಾಡಿ
ಆ ಚಿದ್ರನತೀರ್ಥವನ್ನು
ದ್ವಾದಶದಳಕಮಲದಲ್ಲಿ ನೆಲೆಸಿರುವ ಇಷ್ಟಮಹಾಲಿಂಗಜಂಗಮಕ್ಕೆ
ಅಷ್ಟವಿಧ ಮಂತ್ರ ಸಕೀಲಂಗಳಿಂದ
ಆಚಾರಾದಿ ಶೂನ್ಯಾಂತವಾದ ಅಷ್ಟವಿಧಲಿಂಗಧ್ಯಾನದಿಂದ
ಅಷ್ಟವಿಧ ಬಂಧಂಗಳಂ ಸಮರ್ಪಿಸಿದಲ್ಲಿಗೆ
ಅಷ್ಟವಿಧೋದಕವಾಗುವುದಯ್ಯ
ಆ ಇಷ್ಟ ಮಹಾಲಿಂಗ ಜಂಗಮವೇ
ಅಷ್ಟಾದಶ ಸ್ಮರಣೆಯಿಂದ ಮುಗಿದಲ್ಲಿಗೆ
ನವಮೋದಕವಾಗುವುದಯ್ಯ
ಉಳಿದುದಕವು ತ್ರಿವಿಧೋದಕವೆನಿಸುವುದಯ್ಯ
ಹೀಗೆ ಮಹಾಜ್ಞಾನ ಲಿಂಗಜಂಗಮಸ್ವರೂಪವಾದ
ತೀರ್ಥವ ಮುಗಿದಮೇಲೆ
ತಟ್ಟೆ-ಬಟ್ಟಲಲ್ಲಿ ಎಡೆಮಾಡಬೇಕಾದರೆ
ಗೃಹದಲ್ಲಿರ್ದ ಕ್ರಿಯಾಶಕ್ತಿಯರಿಗೆ ಧಾರಣವಿದ್ದರೆ
ತಾವು ಸಲಿಸಿದ ಪಾದೋದಕಪ್ರಸಾದವ ಕೊಡುವುದಯ್ಯ
ಸಹಜಲಿಂಗಭಕ್ತರಾದರೆ ಮುಖಮಜ್ಜನವ ಮಾಡಿಸಿ
ತಾವು ಧರಿಸುವ ವಿಭೂತಿಧಾರಣವ ಮಾಡಿಸಿ
ಶಿವಶಿವಾ ಹರಹರಾ ಬಸವಲಿಂಗ ಎಂದು ಬೋಧಿಸಿ
ಎಡೆಮಾಡಿಸಿಕೊಂಬುದಯ್ಯ
ಆಮೇಲೆ-ತಾನು ಸ್ಥೂಲ[=ಸ್ವಸ್ಥಲ?]ವಾದೊಡೆ ಸಂಬಂಧವಿಟ್ಟು
ಪರಸ್ಥಲವಾದೊಡೆ ಚಿದ್ರನ ಇಷ್ಟಮಹಾಲಿಂಗ-ಜಂಗಮನ
ಕರಸ್ಥಲದಲ್ಲಿ ಮೂರ್ತವ ಮಾಡಿಸಿಕೊಂಡು
ದಕ್ಷಿಣಹಸ್ತದಲ್ಲಿ ಗುರು-ಲಿಂಗ-ಜಂಗಮಸೂತ್ರವಿಡಿದು
ಬಂದ ಕ್ರಿಯಾಭಸಿತವ ಲೇಪಿಸಿ
ಮೂಲಪ್ರಮಾಣವ ಪ್ರಸಾದಪ್ರಣವದೊಳಗೆ
ಗೋಳಕಪ್ರಣವ-ಅಖಂಡಗೋಳಕಪ್ರಣವ-
ಜ್ಯೋತಿಪ್ರಣವ ಧ್ಯಾನದಿಂದ
ದ್ವಾದಶಮಣಿಯ ಧ್ಯಾನಿಸಿ
ಪ್ರದಕ್ಷಿಣವ ಮಾಡಿ
ಮೂಲಮೂರ್ತಿ ಲಿಂಗಜಂಗಮದ ಮಸ್ತಕದ ಮೇಲೆ ಸ್ಪರ್ಶನವ ಮಾಡಿ
ಬಟ್ಟಲಿಗೆ ಮೂರು ವೇಳೆ ಸ್ಪರ್ಶನವ ಮಾಡಿ
ಪದಾರ್ಥದ ಪೂರ್ವಾಶ್ರಯವ ಕಳೆದು
ಶುದ್ಧಪ್ರಸಾದವೆಂದು ಭಾವಿಸಿ
ಇಷ್ಟಮಹಾಲಿಂಗ-ಜಂಗಮಕ್ಕೆ

ಅಷ್ಟಾದಶಸ್ಮರಣೆಯಿಂದ ಮೂರು ವೇಳೆ ರೂಪನರ್ಪಿಸಿ
ಎರಡು ವೇಳೆ ರೂಪವ ತೋರಿ
ಸುರುಚಿ ಪ್ರಾಣಲಿಂಗ ಮಂತ್ರಜಿಹ್ವೆಯಲ್ಲಿಟ್ಟು
ಆರನೆಯ ವೇಳೆ ಭೋಜನವ
ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ
ಷಡ್ವಿಧಲಿಂಗಲೋಲುಪ್ತಿಯಿಂದ ಆಚರಿಸಿದಾತನೇ
ಗುರುಭಕ್ತನಾದ ನಿಚ್ಚಪ್ರಸಾದಿ ಎಂಬೆ
ಚೆನ್ನಮಲ್ಲಿಕಾರ್ಜುನ

೨೮೫.
ಒಲ್ಲೆ ಗಂಡನ ಕೂಟ ಒಗೆತನವ
ಅಕ್ಕಟ ಗಂಡನ ಮನೆಯ ಬಿರಿಸಯ್ಯಯ್ಯೋ! ||ಪಲ್ಲವ||
ಒಡಕು ಗಂಗಳದಲ್ಲಿ ನೀರಂಬಲಿಯ ನೀಡಿ
ಹೊಡೆದಳು ನಮ್ಮತ್ತೆ ಮೊರದಲ್ಲಿ
ಕಡುದುಃಖದಿಂದ ನಾ ಒಲೆಯ ಮುಂದೆ ಕುಳಿತಿರೆ
ಕೊಡಿತನದಿ ಬಂದು ಒದ್ದಳಯ್ಯಯ್ಯೋ! ||೧||
ನೆತ್ತಿಗೆಣ್ಣೆಯಿಲ್ಲದೆ ತಲೆ ಬತ್ತಿಗಟ್ಟಿತು
ವೃತ್ತಜವ್ವನ ಬಾಡಿಹೋದವಲ್ಲ!
ಅತ್ತೆಯಾಸೆಯಿಲ್ಲ ಮಾವನ ಲೇಸಿಲ್ಲ
ಚಿತ್ತವಲ್ಲಭನಲ್ಲಿ ಗಣವಿಲ್ಲವಯ್ಯಯ್ಯೋ! ||೨||
ಹೇಳಿ ಕಳುಹುವೆ ನಾನವ್ವೆಗಳೂರಿಗೆ
ಕೇಳಯ್ಯ ಶ್ರೀಶೈಲ ಮಲ್ಲಿಕಾರ್ಜುನ
ಭಾಳಪಾಪಿಗಳಲ್ಲಿ ಕೊಟ್ಟರಯ್ಯಯ್ಯೋ! ||೩||

೨೮೬.
ಆಪತ್ತಿಗೊಳಗಾದೆನಮ್ಮಯ್ಯ, ನಾ
ನಾಪತ್ತಿಗೊಳಗಾದೆ ||ಪಲ್ಲವ||
ಪಡುವಣ ದೇಶದಿ ಹುಟ್ಟಿದೆನಮ್ಮ
ಬಡಗಣ ದೇಶದಿ ಬೆಳೆದೆ
ಆಗರದ ನಾಡಿಗೆ ಇತ್ತರೆನ್ನನು
ದೂರದ ನೀರ ನಾ ಹೊರಲಾರೆನಮ್ಮ ||೧||
ಕೂಳಿಲ್ಲ ಹೊಟ್ತೆಗೆ, ತಲೆ ಬತ್ತಿಗಟ್ಟಿತು
ಬಲ್ಮೊಲೆಗಳು ಬತ್ತಿ ಬಡವಾದೆ
ಒಲ್ಲದ ಗಂಡನ ಒಲಿಸಿಹೆನೆಂದಡೆ
ಬಲ್ಲವರೊಂದು ಮದ್ದ ಹೇಳಿರಮ್ಮ ||೨||
ಆರೂ ಬಾರದ ತವರೂರ ದಾರಿಯಲಿ
ಬಾರದ ಭವದಲಿ ಬಂದೆನು
ಊರ ಕಡೆಗೆ ನೋಡಿ ಕಣ್ಣೆಲ್ಲ ಕೆಟ್ಟವು
ನೀರ ಹೊಳೆಗೆ ಹೋಗಿ ಅತ್ತೆನಮ್ಮ ||೩||
ಅತ್ತೆಯ ಲೇಸುಂಟೆ? ಮಾವನ ಲೇಸುಂಟೆ?
ಗಂಡನ ಲೇಸುಂಟೆಂಬುದನರಿಯೆ
ಆಸತ್ತು ಬೇಸತ್ತು ಒಲೆಯ ಮುಂದೆ ಕುಳಿತರೆ
ಪಾಪಿ ಗಂಡ ಕಾಲೊಳೊದ್ದನಮ್ಮ ||೪||
ಉನ್ನತ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನಿನ್ನ ನಂಬಿದ ಭಕ್ತೆ ನಾನೆಯಲ್ಲಾ!
ಮುನ್ನಿನ ಶರಣರ ಸಲಹಿದಂದದಿ ಬೇಗ
ಎನ್ನ ಸಲಹೊ ದೇವರ ದೇವ ||೫||

೨೮೭.
ಏನೇನೆಂಬೆ ಎನ್ನೊಗೆತನವ ಅಭಿ-
ಮಾನಭಂಗವ ಮಾಡಿದ ಮನೆಯಾತ ||ಪಲ್ಲವ||
ಒಡಕು ಮಡಕೆಯೊಳುದಕವ ತುಂಬಿಟ್ಟು
ಹುಡುಕಿ ತಂದೆನು ನಾನೊಮ್ಮ ನವ
ಅಡುಗೆಯ ಮಾಡುವಾಗಳುವ ಮಕ್ಕಳ ಕಾಟ
ಬಿಡದೆ ಮನೆಯಾತನ ಬಿರುನುಡಿ ಘನವಮ್ಮ ||೧||
ಮೊಸರ ಕಡೆದು ಬೆಣ್ಣೆಯ ನೆಲುವಿನ ಮೇಲಿಕ್ಕಿ
ಶಿಶುವಿಗೆ ನಾ ಮೊಲೆಯ ಕೊಡುತಿರಲು
ಅಸಿಯ ಕಲ್ಲಿನ ಮೇಲೆ ಮಸಿಯನರೆದು ಚೆಲ್ಲಿ
ಹಸಿಯ ಬೆಣ್ಣೆಯ ತಿಂಬ ಹಂಡಿಗತನವ ||೨||
ಉಟ್ಟುದ ಸೆಳೆಕೊಂಡೊಂದರುವೆಯನೆ ಕೊಟ್ಟು
ಹುಟ್ಟು ಮುರಿದು ಬಟ್ಟಬಯಲನಿತ್ತ
ಸೃಷ್ಟಿಗೆ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಬಿಟ್ಟಿಯಿಂದಲಿ ಕಟಕವ ಕಂಡ ತರನು ||೩||

೨೮೮.
ಕರಕರೆ ಕರಕನೆ ಘನವಯ್ಯೋ
ಕರೆದು ಹೇಳಿ ಎಮ್ಮವರಿಗೆ ಸುದ್ದಿಯ ||ಪಲ್ಲವ||
ಅತ್ತೆಯ ಮಾತುಗಳೆ ಚಿತ್ತವ ಕಲಕಿವೆ
ಮತ್ತೆ ಮಾವನೊಳ್ಳಿದನಲ್ಲ; ಎನ್ನ
ಚಿತ್ತವಲ್ಲಭನಿಂದಾದ ಭಂಡ ನಾ
ವಿಸ್ತರಿಸಲಾರೆ, ಹೇಳಿ, ಎಮ್ಮವರಿಗೆ ||೧||
ಮುನ್ನ ಹುಟ್ಟಿದ ಮೂರು ಮಕ್ಕಳ ಕಾಟ
ಕನ್ನೆಯರೈವರ ಕೂಡಿಕೊಂಡು
ಮನ್ನಣೆಯನಿತಿಲ್ಲ ಮೈದುನರೈವರ
ಇನ್ನಿರಲಾರೆ ಹೇಳಿ ಎಮ್ಮವರಿಗೆ ||೨||
ನಾರಿಯರೈವರ ಕೂಡಿಕೊಂಡು ನಾ
ದಾರಿ ಸಂಗಡವಾಗಿ ಬರುತಿರಲು
ಭೋರನೆ ಶ್ರೀಶೈಲ ಚೆನ್ನಮಲ್ಲೇಶಂಗೆ
ಓರಂತೆ ಮನಸೋತೆ ಸಾರಿತ್ತ ಬಾರೆನೆ ತಾಯಿ ||೩||

೨೮೯.
ಎಲ್ಲ ಎಲ್ಲವನರಿದು ಫಲವೇನು
ಮತ್ತೆ ಎಲ್ಲ ಎಲ್ಲವನರಿದು ಫಲವೇನು?
ತನ್ನ ತಾನರಿಯದನ್ನಕ್ಕ?
ತನ್ನರಿವು ಕರಿಗೊಂಡ ಬಳಿಕ ಇದಿರಿಟ್ಟು ಕೇಳಲುಂಟ?
ನಿಮ್ಮರಿವು ತಲೆದೋರಿದ ಕಾರಣ
ನನ್ನ ನಾನರಿದೆ ಚೆನ್ನಮಲ್ಲಿಕಾರ್ಜುನ

೨೯೦.
ಅಯ್ಯ, ನಿಮ್ಮ ಮುಟ್ಟಿ ಮುಟ್ಟದೆನ್ನ ಮನ ನೊಡಾ!
ಬಿಚ್ಚಿ ಬೀಸರವಾಯಿತ್ತೆನ್ನ ಮನ
ಹೊಳಲ ಸುಂಕಿಗನಂತೆ ಹೊದಕುಳಿಗೊಂಡಿತ್ತೆನ್ನ ಮನ
ಎರಡೆಂಬುದ ಮರೆದು ಬರಡಾಗದೆನ್ನ ಮನ
ನೀನು ಆನಪ್ಪ ಪರಿಯೆಂತು ಹೇಳಾ ಚೆನ್ನಮಲ್ಲಿಕಾರ್ಜುನ

೨೯೧.
ಹುಟ್ಟು-ಹೊರೆಯ ಕಟ್ಟಳೆಯ ಕಳೆದನವ್ವ
ಹೊನ್ನು-ಮಣ್ಣಿನ ಮಾಯೆಯ ಮಾಣಿಸಿದನವ್ವ
ಎನ್ನ ತನುವಿನ ಲಜ್ಜೆಯನಿಳುಹಿ
ಎನ್ನ ಮನದ ಕತ್ತಲೆಯ ಕಳೆದ
ಚೆನ್ನಮಲ್ಲಿಕಾರ್ಜುನಯ್ಯನ
ಒಳಗಾದವಳನೇನೆಂದು ನುಡಿಯಿಸುವಿರವ್ವ

೨೯೨.
ಕಾಯದ ಕಳವಳವ ಕೆಡಿಸಿ
ಮನದ ಮಾಯೆಯ ಮಾಣಿಸಿ
ಎನ್ನ ಹರಣವ ಮೇಲೆತ್ತಿ ಸಲಹಿದೆಯಯ್ಯ
ಶಿವಶಿವಾ ಎನ್ನ ಬಂಧನವ ಬಿಡಿಸಿ
ನಿಮ್ಮತ್ತ ತೋರಿದ ಘನವನುಪಮಿಸಬಾರದಯ್ಯ
ಇರುಳೋಸರಿಸದ ಜಕ್ಕವಕ್ಕಿಯಂತೆ ನಾನಿಂದು
ನಿಮ್ಮ ಶ್ರೀಪಾದವನಿಂಬುಗೊಂಡು
ಸುಖದೊಳಗೋಲಾಡುವೆನಯ್ಯ ಚೆನ್ನಮಲ್ಲಿಕಾರ್ಜುನ

೨೯೩.
ಅಯ್ಯ, ನೀನೆನ್ನ ಮೊರೆಯನಾಲಿಸಿದೊಡಾಲಿಸು
ಆಲಿಸದಿರ್ದೊಡೆ ಮಾಣು
ಅಯ್ಯ, ನೀನೆನ್ನ ದುಃಖವ ನೋಡಿದೊಡೆ ನೋಡು
ನೋಡದಿರ್ದೊಡೆ ಮಾಣು
ಎನಗಿದು ವಿಧಿಯೆ?!
ನೀನೊಲ್ಲದೊಡೆ ನಾನೊಲಿಸುವ ಪರಿಯೆಂತಯ್ಯ?
ಮಾನವಳಿಸಿ ಮಾರುವೋಗಿ ಮರೆವೊಕ್ಕೊಡೆ
ಕೊಂಬ ಪರಿಯೆಂತಯ್ಯ ಚೆನ್ನಮಲ್ಲಿಕಾರ್ಜುನ

೨೯೪.
ಮುಡಿ ಬಿಟ್ಟು ಮೊಗ ಬಾಡಿ ತನು ಕರಗಿದವಳ
ಎನ್ನನೇಕೆ ನುಡಿಸುವಿರಿ ಎಲೆ ಅಣ್ಣಗಳಿರಾ?
ಎನ್ನನೇಕೆ ಕಾಡುವಿರಿ ಎಲೆ ತಂದೆಗಳಿರಾ?
ಬಲುಹಳಿದು, ಭವಗೆಟ್ಟು ಛಲವಳಿದು
ಭಕ್ತೆಯಾಗಿ ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದವಳ

೨೯೫.
ಬಟ್ಟಿಹ ಮೊಲೆಯ, ಭರದ ಜವ್ವನವ
ಚೆಲುವ ಕಂಡು ಬಂದಿರಣ್ಣಾ
ಅಣ್ಣಾ, ನಾನು ಹೆಂಗೂಸಲ್ಲ
ಅಣ್ಣ, ನಾನು ಸೂಳೆಯಲ್ಲ
ಅಣ್ಣಾ, ಮತ್ತೆ ನನ್ನ ಕಂಡು ಕಂಡು
ಆರೆಂದು ಬಂದಿರಣ್ಣ?
ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿದ ಪುರುಷನು
ನಮಗಾಗದ ಮೋರೆ ನೋಡಣ್ಣ

೨೯೬.
ಎಲೆ ಅಣ್ಣಾ, ಎಲೆ ಅಣ್ಣಾ, ನೀವು ಮರುಳಲ್ಲ
ಅಣ್ಣಾ, ಎನ್ನ ನಿನ್ನಳವೆ?
ಹದಿನಾಲ್ಕು ಲೋಕವ ನುಂಗಿದ
ಕಾಮನ ಬಾಣದ ಗುಣ ಎನ್ನನಿನ್ನಳವೆ?
ವಾರುವ ಮುಗ್ಗಿದೊಡೆ [ಮಿಣಿ ಹರಿಯ] ಹೊಯ್ವರೆ?
ಮುಗ್ಗಿದ ಭಂಗವ ಮುಂದೆ ರಣದಲ್ಲಿ ತಿಳಿವುದು
ನಿನ್ನ ನೀ ಸಂಹರಿಸಿ ಕೈದುವ ಕೊಳ್ಳಿರಣ್ಣ
ಚೆನ್ನಮಲ್ಲಿಕಾರ್ಜುನನೆಂಬ ಹಗೆಗೆ ಬೆಂಗೊಡದಿರಣ್ಣ

೨೯೭.
ಒಬ್ಬಂಗೆ ಇಹವುಂಟು, ಒಬ್ಬಂಗೆ ಪರವುಂಟು
ಒಬ್ಬಂಗೆ ಇಹಪರವೆರಡೂ ಇಲ್ಲ
ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ
ಇಹಪರವೆರಡೂ ಉಂಟು

೨೯೮. ಆಕಾರವಲ್ಲದ ನಿರಾಕಾರಲಿಂಗವ ಕೈಯಲ್ಲಿ ಹಿಡಿದು
ಕೊರಳಲ್ಲಿ ಕಟ್ಟಿದೆವೆಂಬರು ನರಕಜೀವಿಗಳು
ಹರಿಬ್ರಹ್ಮರು, ವೇದಶಾಸ್ತ್ರಂಗಳು ಅರಸಿ ಕಾಣದ ಲಿಂಗ
ಭಕ್ತಿಗೆ ಫಲಪದಂಗಳಲ್ಲದೆ ಲಿಂಗವಿಲ್ಲ
ಕರ್ಮಕ್ಕೆ ನರಕ[ನಾಕ?]ವಲ್ಲದೆ ಲಿಂಗವಿಲ್ಲ
ವೈರಾಗ್ಯಕ್ಕೆ ಮುಕ್ತಿಯಲ್ಲದೆ ಲಿಂಗವಿಲ್ಲ
ಜ್ಞಾನಕ್ಕೆ ಪರಿಭ್ರಮಣವಲ್ಲದೆ ಲಿಂಗವಿಲ್ಲ
ಇದುಕಾರಣ; ಅದ್ವೈತದಿಂದ ತನ್ನ ತಾನರಿದು ತಾನಾದರೆ
ಚೆನ್ನಮಲ್ಲಿಕಾರ್ಜುನಲಿಂಗ ತಾನೆ ಬೇರಿಲ್ಲ

೨೯೯.
ಕಂಗಳ ಕಳೆದು, ಕರುಳುಗಳ ಕಿತ್ತು
ಕಾಮದ ಮೂಗ ಕೊಯ್ದು
ಭಂಗದ ಬಟ್ಟೆಯ ಭವ ಗೆಲಿಯದಳಿಗಂಗವೆಲ್ಲಿಯದು ಹೇಳಾ!
ಶೃಂಗಾರವೆಂಬ ಹಂಚಿಗೆ ಹಲ್ಲ ತೆರೆದರೇನುಂಟು
ಅಂಗವೆ ಲಿಂಗವಹ ಪರಿಯೆನಗೆ ಹೇಳಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

೩೦೦.
ಮೊಲೆ-ಮುಡಿಯಿದ್ದರೇನು
ಮೂಗಿಲ್ಲದವಳಿಂಗೆ?
ತಲೆಯ ಮೇಲೆ ಸೆರಗೇತಕ್ಕೆ
ಸಹಜಸಂಕಲ್ಪವಿಲ್ಲದವಳಿಂಗೆ?
ಜಲದೊಳಗೆ ಹುಟ್ಟಿಗುಳೆ[ಗುಳ್ಳೆ?]
ಜಾತಿಸ್ಮರತ್ವವರಿದಿತ್ತು
ಹಲವರ ಹಾದಿಯೊಳು
ಹರಿಸುರರು ನಿಮ್ಮ ನೆಲೆಯಂ ತೋರಿದೆ [ತೋರರೇ?]
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ