Saturday, October 9, 2010

“ಕಣ್ಣರಳು”

“ಕಣ್ಣರಳು “ ಇದು “ನಾಕು ತಂತಿ” ಕವನಸಂಗ್ರಹದಲ್ಲಿಯ ಒಂದು ಗೀತೆ. ಬೇಂದ್ರೆಯವರು ಈ ಗೀತೆಯನ್ನು ಬೀಸುವ ಕಲ್ಲಿನ ಹಾಡಿನ ಧಾಟಿಯಲ್ಲಿ ಬರೆದಿದ್ದಾರೆ. ಕವನ ಇಲ್ಲಿದೆ:


ಕಲ್ಲರಳಿ ಹೂವಾಗಿ | ಕೆಮ್ಮಣ್ಣ ಮನೆ ತೊಳಗಿ
ನಮ್ಮ ನಿಮ್ಮನ್ನ ಬರಮಾಡಿ | ಮನಮನ
ಕಮ್ಮಗಿರಿಸ್ಯಾವ, ಕಲ್ಲರಳಿ ||


ಮಣ್ಣರಳಿ ಹೂವಾಗಿ | ನೂಲ ಬಟ್ಟೆಯಾಗಿ
ಮೈಮೈಗೆ ಧಾರದಾಧಾರಾ | ಗುಡಿಗುಡಿಗೆ
ಹೂಬತ್ತಿ, ಹೊತ್ತಿ, ಮಣ್ಣರಳಿ ||


ನೀರರಳಿ ತಾವರಿ | ಮಿನ ಮಿನ ಮೀನಕ್ಕ
ಬೆಳಕುಂಡು ಬಾಳಿರೆನತಾವ | ಹಗಲಿರುಳು
ಬೆಳಕನುಣಸ್ಯಾವ ನೀರರಳಿ ||


ದಿಕ್ಕರಳಿ ಬೆಳಕಾಗಿ | ನೆರಳರಳಿ ಇರುಳಾಗಿ
ನಿದ್ದಿ ಎಚ್ಚರಕು ತಿರುಳಾಗಿ | ಶ್ರೀಶೈಲಾ
ತಿರುಮಲೆಗೂ ಪಂಜು, ಬಾನರಳಿ ||


ಗಾಳಿಗಾಳಿಗು ಮಥನ | ಆ ಗಾನ ಈ ತಾನ
ಮನವರಳಿ ಮರಳು ಆಗ್ಯಾವ | ತದ್ಧ್ಯಾನಾ
ಸದ್ಧ್ಯಾನ, ಮುಕ್ತಿ ಮನವರಳಿ ||


ಜೀವರಳಿ ಜೀವಾಳ| ನಾವರಳಿ ನಮ್ಮ್ಯಾಳಾ
ನಾಚಿಕಿ ಅರಳಿ ನಗತಾವ | ತೊಟ್ಟಿಲಾ
ಕುಲಕ್ಯಾವ ಕೈಕೈ, ಜೀವರಳಿ ||


ಬೀಸಿದರ ಕಾಳರಳಿ | ಕಾಸಿದರ ಅನ್ನರಳಿ
ನುರಿಸಿ ನುರಿಸಿದರ ಕವಳರಳಿ | ಎದಿಯರಳಿ
ಹಾಲು ತೊರೆದಾವ, ಮಗುವರಳಿ ||


ಗರ್ಭಗುಡಿಯ ದೈವ | ದೀಪಕ್ಕ ಕಣ್ಣರಳಿ
ಹೊರಳಿ ನೋಡ್ಯಾವ ಒಳಗರಳಿ | ಕತ್ತಲೆಗು
ಹೌದೇನೋ, ಕಲ್ಲಿಗು ಕಣ್ಣು ಇರತಾವ ||


ಶುದ್ಧಬ್ರಹ್ಮವು ಅರಳಿ | ಶಬಲಬ್ರಹ್ಮದ ಸರಣಿ
ಸರಿಗಮಪಧನಿ ಅಂದಾವ, ಧನಿಯರಳಿ
ಅಂತರಂಗವೆ ಅರಳ್ಯಾವ, ಅರುಳರಳಿ ||

ಕವನ ಓದಿದ ತಕ್ಷಣ ತಮ್ಮ ಸುತ್ತಲಿನ ಪ್ರಕೃತಿಯೊಡನೆ ಪ್ರೀತಿಯಿಂದ ಬೆರೆತ ಕವಿಯ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ.

ಈ ಕವನ ಪ್ರಾರಂಭವಾಗುವದು ಸರ್ವಜ್ಞನ ತ್ರಿಪದಿಯೊಂದರ ಸಾಲುಗಳನ್ನು ಬಳಸಿಕೊಂಡು. ಸರ್ವಜ್ಞನ ತ್ರಿಪದಿ ಹೀಗಿದೆ:

“ಕಲ್ಲರಳಿ ಹೂವಾಗಿ, ಎಲ್ಲರಿಗು ಬೇಕಾಗಿ,
ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ,
ಬಲ್ಲವರು ಹೇಳಿ ಸರ್ವಜ್ಞ ||

ಸರ್ವಜ್ಞನ ಈ ಜನಪ್ರಿಯ ಒಗಟಿನ ಅರ್ಥ ಸುಣ್ಣದ ಕಲ್ಲು. ಸುಣ್ಣದ ಕಲ್ಲನ್ನು ನೀರಿನಲ್ಲಿ ಕಲಸಿದಾಗ ಅದು ಹೂವಿನಂತೆ ಅರಳಿ ಸುಣ್ಣವಾಗುತ್ತದೆ. ಈ ಸುಣ್ಣವನ್ನು ತಾಂಬೂಲದ ಜೊತೆಗೆ ಎಲ್ಲರೂ ಉಪಯೋಗಿಸುತ್ತಾರೆ. ದೇವರ ಗುಡಿಗೆ ಸುಣ್ಣವನ್ನು (Of course, ಮನೆಗಳಿಗೂ ಸಹ) ಗೋಡೆಗಳಿಗೆ ಹಚ್ಚಲು ಬಳಸುತ್ತಾರೆ.

ಬೇಂದ್ರೆಯವರು ತಮ್ಮ ತ್ರಿಪದಿಯಲ್ಲಿ ಈ ರೀತಿ ಬರೆಯುತ್ತಾರೆ:

“ಕಲ್ಲರಳಿ ಹೂವಾಗಿ | ಕೆಮ್ಮಣ್ಣ ಮನೆ ತೊಳಗಿ
ನಮ್ಮ ನಿಮ್ಮನ್ನ ಬರಮಾಡಿ | ಮನಮನ
ಕಮ್ಮಗಿರಿಸ್ಯಾವ, ಕಲ್ಲರಳಿ ||”

ಬೇಂದ್ರೆಯವರ ಕೆಮ್ಮಣ್ಣು ಹಾಗು ಸುಣ್ಣ, ಮನೆಯನ್ನು ಸ್ವಚ್ಛ ಮಾಡುವದಕ್ಕಷ್ಟೇ ಅಲ್ಲ, ಅದು ಅತಿಥಿಗಳನ್ನು ಸ್ವಾಗತಿಸಲಿಕ್ಕೂ ಹೌದು.
(ಬೇಂದ್ರೆಯವರಿಗೆ ಸದಾಕಾಲವೂ ಜನ ಬೇಕು. ಅವರ “ಬಾರೊ ಸಾಧನಕೇರಿಗೆ” ಕವನದಲ್ಲಿ “ಬೇಲಿಗೂ ಹೂಬೆರಳಿದೆ” ಎಂದು ಹಾಡಿದ್ದಾರೆ.)
ಬರಿ ಮನೆ ಸ್ವಚ್ಛವಾದರೆ ಸಾಕೆ? ಈ ಸ್ವಚ್ಛತೆ ಮನಸ್ಸನ್ನೂ ತುಂಬಬೇಕು, ನಮ್ಮೆಲ್ಲರನ್ನೂ ಕಮ್ಮಗೆ (=ಸುಖವಾಗಿ) ಇರಿಸಬೇಕು.
“ಸರ್ವೇ ಸಂತು ನಿರಾಮಯಾ:” ಇದು ಮೊದಲ ನುಡಿಯ ಆಶಯ. ಕಲ್ಲು ಅರಳುವ ಪರಿ ಇದು.

ಎರಡನೆಯ ನುಡಿ ಇಂತಿದೆ:

“ಮಣ್ಣರಳಿ ಹೂವಾಗಿ | ನೂಲ ಬಟ್ಟೆಯಾಗಿ
ಮೈಮೈಗೆ ಧಾರದಾಧಾರಾ | ಗುಡಿಗುಡಿಗೆ
ಹೂಬತ್ತಿ, ಹೊತ್ತಿ, ಮಣ್ಣರಳಿ ||”

ಮಣ್ಣಿನಲ್ಲಿ ಬಿತ್ತಿದ ಹತ್ತಿಯ ಬೀಜ, ಹತ್ತಿ ಹೂವಾಗಿ, ನೂಲ ಬಟ್ಟೆಯಾಗಿ, ಜನರಿಗೆಲ್ಲರಿಗೂ ಧಾರದ
(=of yarn) ಧಾರೆಯಾಗಿ ಉಪಯುಕ್ತವಾದರೆ, ಗುಡಿಯಲ್ಲಿ ದೇವರೆದುರಿಗೆ ದೀಪದ ಹೂಬತ್ತಿಯಾಗುವದು.
(ಬೇಂದ್ರೆಯವರ ಮತ್ತೊಂದು ಕವನದಲ್ಲಿಯ ಸುಂದರವಾದ ಸಾಲೊಂದು ಇಲ್ಲಿ ನೆನಪಾಗುವದು.
“ತಾ ಹೊತ್ತಲೆಂದು ಬಂದಂಥ ಬತ್ತಿ
ದೀಪಕ್ಕೆ ಬಾಗುವಂತೆ”.)
ಮಣ್ಣು ಅರಳಿದ ಪರಿಯಿದು. ಅರಳುವ ಅಂದರೆ evolve ಆಗುವ ಪರಿ ಎನ್ನುವ ಆಶಯವನ್ನು ಇಲ್ಲಿ ಕಾಣುತ್ತೇವೆ.
ಮಣ್ಣು ಎಂದರೆ ಪೃಥ್ವಿ. ಇದು ಪಂಚಮಹಾಭೂತಗಳಲ್ಲಿ ಮೊದಲನೆಯದು.

ಮೂರನೆಯ ನುಡಿಯಲ್ಲಿ ಪಂಚಮಹಾಭೂತಗಳಲ್ಲಿ ಎರಡನೆಯದಾದ ನೀರು(ಅಪ್) ಅರಳುವದನ್ನು ಕಾಣುತ್ತೇವೆ.

“ನೀರರಳಿ ತಾವರಿ | ಮಿನ ಮಿನ ಮೀನಕ್ಕ
ಬೆಳಕುಂಡು ಬಾಳಿರೆನತಾವ | ಹಗಲಿರುಳು
ಬೆಳಕನುಣಸ್ಯಾವ ನೀರರಳಿ ||”

ನೀರು ಅರಳಿ ಬೆಳ್ತಾವರೆಯಾಗಿ(!), ಮೀನುಗಳಿಗೆ ಹಗಲಿರಳು ಮಿಣ ಮಿಣ ಬೆಳಕು ನೀಡುತ್ತವೆ ಎನ್ನುವದು ಕವಿಸಮಯ. ಉತ್ಕ್ರಾಂತಿಯ ಪಥದಲ್ಲಿ ನೀರು(=ಅಪ್) ಎನ್ನುವ ಮಹಾಭೂತ ಅರಳಬೇಕಾದ ಪರಿಯನ್ನು ಬೇಂದ್ರೆ ಇಲ್ಲಿ ನೆನೆಯುತ್ತಾರೆ.

ತೇಜಸ್ಸು ಪಂಚಮಹಾಭೂತಗಳಲ್ಲಿ ಮೂರನೆಯದು. ಜಗತ್ತಿಗೆ ತೇಜಸ್ಸು ದೊರೆಯುವದು ಸೂರ್ಯನಿಂದ.
ಇದರ ವರ್ಣನೆ ನಾಲ್ಕನೆಯ ನುಡಿಯಲ್ಲಿದೆ:

“ದಿಕ್ಕರಳಿ ಬೆಳಕಾಗಿ | ನೆರಳರಳಿ ಇರುಳಾಗಿ
ನಿದ್ದಿ ಎಚ್ಚರಕು ತಿರುಳಾಗಿ | ಶ್ರೀಶೈಲಾ
ತಿರುಮಲೆಗೂ ಪಂಜು, ಬಾನರಳಿ ||”

ಬೇಂದ್ರೆಯವರಿಗೆ ಕಲ್ಪನೆ ಅತ್ಯಂತ ನಿರಾಯಾಸವಾದ ಸಿದ್ಧಿ. ಸೂರ್ಯೋದಯವನ್ನು ಅವರು ದಿಕ್ಕು ಅರಳುವದು ಎಂದು ಬಣ್ಣಿಸುತ್ತಾರೆ. ಅದರಂತೆ ನೆರಳೆ(=ಕತ್ತಲೆ) ಅರಳಿ ಇರುಳಾಗುತ್ತದೆ ಎಂದೂ ಹೇಳುತ್ತಾರೆ. ಶ್ರೀಶೈಲದಲ್ಲಿ ಇರುವವನು ಶಿವ; ತಿರುಮಲೆಯಲ್ಲಿ ಇರುವವನು ವೆಂಕಟೇಶ. ಆದರೆ ಶ್ರೀಶೈಲ ಹಾಗು ತಿರುಮಲೆ ಇವೆರಡರ ಅರ್ಥ ಒಂದೇ=The Holy Hill. ಈ ಎರಡೂ ಬೆಟ್ಟಗಳಿಗೆ ಪಂಜಿನ ಬೆಳಕು ಸಿಗುವದು ಬಾನು ಅರಳುವದರಿಂದ, ಅಂದರೆ ಚಂದ್ರ ಹಾಗು ತಾರೆಗಳ ಉದಯದಿಂದ. (ಯಾಕೆಂದರೆ, ಪಂಜನ್ನು ಉರಿಸುವದು ರಾತ್ರಿಯಲ್ಲಿ).
ಈ ರೀತಿಯಾಗಿ ತೇಜಸ್ ಎನ್ನುವ ಮೂರನೆಯ ಮಹಾಭೂತದ ಜೊತೆಗೆ ನಾಲ್ಕನೆಯ ಮಹಾಭೂತವಾದ ಆಕಾಶವನ್ನು ಸಹ ಬೇಂದ್ರೆ ಬಣ್ಣಿಸಿದ್ದಾರೆ.

ಐದನೆಯ ನುಡಿ ಈ ರೀತಿಯಾಗಿದೆ:

ಗಾಳಿಗಾಳಿಗು ಮಥನ | ಆ ಗಾನ ಈ ತಾನ
ಮನವರಳಿ ಮರಳು ಆಗ್ಯಾವ | ತದ್ಧ್ಯಾನಾ
ಸದ್ಧ್ಯಾನ, ಮುಕ್ತಿ ಮನವರಳಿ ||

ಈ ನುಡಿಯಲ್ಲಿ ಐದನೆಯ ಮಹಾಭೂತವಾದ ವಾಯುವಿನ ವರ್ಣನೆ ಇದೆ. ಶಬ್ದ ಅಥವಾ ನಾದ ಹುಟ್ಟುವದು ವಾಯು ಅನ್ನುವ ಮಾಧ್ಯಮದಲ್ಲಿ ತಾನೆ. ಆದುದರಿಂದ ಗಾಳಿಯ ಮಥನದಿಂದ ಹುಟ್ಟಿದ ಆ ಗಾನದಿಂದ (ಆ ನಾದದಿಂದ) ಮನಸ್ಸು ಅರಳಿ, ಮರಳಾಗಿದೆ. ಇದು “ತತ್” ಹಾಗು “ಸತ್” ಧ್ಯಾನದಲ್ಲಿ ಮನಸ್ಸನ್ನು ಮುಳುಗಿಸಿ, ಮುಕ್ತಿಯ ಕಡೆಗೆ ಕರೆದೊಯ್ಯುತ್ತದೆ.

ಈ ರೀತಿ ಪಂಚಮಹಾಭೂತಗಳಿಂದ ಜನ್ಮ ಪಡೆದ ಈ ಜೀವ, ತಾನೂ ಸಹ ಉತ್ಕ್ರಾಂತಿ ಪಥದಲ್ಲಿ ನಡೆಯುತ್ತದೆ. ಆದರೆ ಏಕಾಕಿಯಾಗಿ ಅಲ್ಲ; ಸಂಸಾರವನ್ನು ನಡೆಯಿಸುತ್ತ. ನಾವು ಅರಳುವದರಿಂದ ನಮ್ಮ ಮ್ಯಾಳ
(=ಗುಂಪು, team, ಜನಮದ ಜಾತ್ರಿ) ಅರಳುತ್ತದೆ. ತೊಟ್ಟಿಲದಲ್ಲಿ ಕೈಕೈ ಕುಲುಕುವ ಕೂಸು ಅರಳುತ್ತದೆ.

ಈ ಸಂಸಾರದ sustenance ಅನ್ನು ಬೇಂದ್ರೆ ಮುಂದಿನ ನುಡಿಯಲ್ಲಿ ನೀಡಿದ್ದಾರೆ.

ಬೀಸಿದರ ಕಾಳರಳಿ | ಕಾಸಿದರ ಅನ್ನರಳಿ
ನುರುಸಿ ನುರಿಸಿದರ ಕವಳರಳಿ | ಎದಿಯರಳಿ
ಹಾಲು ತೊರೆದಾವ, ಮಗುವರಳಿ ||

ಆದರೆ sustenanceಗೆ ಬೇಕಾಗಿರುವದು conflict ಅಲ್ಲ, harmony. ಬೀಸಿದಾಗ ಕಾಳು ಕೊರಗುವದಿಲ್ಲ, ಅರಳುತ್ತದೆ; ಕಾಸಿದಾಗ ಅನ್ನವಾಗುತ್ತದೆ. ಈ processನಲ್ಲಿ ಇರುವದು ಉತ್ಕ್ರಾಂತಿಯೇ ಹೊರತು ಹಿಂಸೆ ಅಲ್ಲ.
ಈ ರೀತಿಯಾಗಿ ತಯಾರಾದ ಅನ್ನವನ್ನು ನುರಿಸಿದರೆ ಅದು ಅರಳಿ ಕವಳ(=ತಾಂಬೂಲ ಅಥವಾ ಅನ್ನ)ವಾಗುತ್ತದೆ.
ಈ ಅರಳಿದ ಕವಳವು ಮಗುವಿಗೆ ಹಾಲಾಗಿ ಬರುತ್ತದೆ.

ಮುಂದಿನ ನುಡಿಯಲ್ಲಿ ಈ ಜೀವವು ಪಡೆಯಬೇಕಾದ ದೈವಶ್ರದ್ಧೆಯ ವರ್ಣನೆ ಇದೆ:

“ಗರ್ಭಗುಡಿಯ ದೈವ | ದೀಪಕ್ಕ ಕಣ್ಣರಳಿ
ಹೊರಳಿ ನೋಡ್ಯಾವ ಒಳಗರಳಿ | ಕತ್ತಲೆಗು
ಹೌದೇನೋ, ಕಲ್ಲಿಗು ಕಣ್ಣು ಇರತಾವ ||”

ಈ ಕಲ್ಲು ದೇವತಾಮೂರ್ತಿಯೂ ಹೌದು, ಭಕ್ತನೂ ಹೌದು. ಭಕ್ತನಲ್ಲಿ ಶ್ರದ್ಧೆ ಅರಳಿದರೆ, ದೇವತೆಯಲ್ಲಿ ಅನುಗ್ರಹ ಅರಳುತ್ತದೆ.
ಕೊನೆಯ ನುಡಿಯಲ್ಲಿ ಈ ದೈವತವು ಅಂತರಂಗದಲ್ಲಿ ಅರಳುವದನ್ನು ಹಾಡಲಾಗಿದೆ:

“ಶುದ್ಧಬ್ರಹ್ಮವು ಅರಳಿ | ಶಬಲಬ್ರಹ್ಮದ ಸರಣಿ
ಸರಿಗಮಪಧನಿ ಅಂದಾವ, ಧನಿಯರಳಿ
ಅಂತರಂಗವೆ ಅರಳ್ಯಾವ, ಅರುಳರಳಿ ||”

ಈ ಕೊನೆಯ ನುಡಿಯನ್ನು ಅರ್ಥೈಸಿಕೊಳ್ಳುವ ಮೊದಲು, ಬೇಂದ್ರೆಯವರು ಎರಡನೆಯ ನುಡಿಯಿಂದ ಐದನೆಯ ನುಡಿಯವರೆಗೆ ಮಾಡಿದ ವರ್ಣನೆಗಳ ಎರಡನೆಯ ಅರ್ಥವನ್ನು ಗಮನಿಸಬೇಕಾಗುತ್ತದೆ. ಮನುಷ್ಯನ ಸೂಕ್ಷ್ಮ ಶರಿರದಲ್ಲಿರುವ ಆರು ಚಕ್ರಗಳು ಹಾಗು ಅವು ಪ್ರತಿನಿಧಿಸುವ ಪಂಚಮಹಾಭೂತಗಳು ಈ ರೀತಿಯಾಗಿವೆ:

೧).ಮೂಲಾಧಾರ…ಪೃಥ್ವಿ
೨).ಸ್ವಾಧಿಷ್ಠಾನ…. ಅಗ್ನಿ(ತೇಜಸ್)
೩).ಮಣಿಪೂರ…….ಅಪ್
೪).ಅನಾಹತ………ವಾಯು
೫).ವಿಶುದ್ಧಿ………ಆಕಾಶ
೬).ಆಜ್ಞಾ…………ಮನಸ್ (ಇದು ಪಂಚಮಹಾಭೂತಗಳಿಂದ ಆದ ಜೀವದ ಮನಸ್ಸು!)

ಯೋಗಸಾಧಕನು ಮೂಲಾಧಾರದಲ್ಲಿರುವ ಕುಂಡಲಿನಿ ಚೈತನ್ಯವನ್ನು ಅರಳಿಸಿ, ಉತ್ಕ್ರಾಂತಿ ಪಥದಲ್ಲಿ ಮೇಲೊಯ್ದು, ಆಜ್ಞಾಚಕ್ರಕ್ಕೂ ಮೇಲಿರುವ ಸಹಸ್ರದಲ ಪದ್ಮದಲ್ಲಿ ಸ್ಥಾಪಿಸುತ್ತಾನೆ. ಅಲ್ಲಿರುವ ದೇವಿಯು ’ಸರ್ವವರ್ಣೋಪಶೋಭಿತಾ’! ಅಂದರೆ ಅವಳು ’ಶಬಲ(=ಅನೇಕ ವರ್ಣಗಳ)ಬ್ರಹ್ಮ’ಳು. ಇವಳು ನಾದಬ್ರಹ್ಮಳೂ ಹೌದು. ಅದಕ್ಕಾಗಿಯೇ , ಬೇಂದ್ರೆ ಇಲ್ಲಿ ಸಪ್ತಸ್ವರಗಳನ್ನು (ಸರಿಗಮಪಧನಿ) ಕೇಳುತ್ತಿದ್ದಾರೆ. ಆದರೆ ಇದಕ್ಕೂ ಮೇಲಿರುವದು ’ನಾದಬಿಂದುಕಲಾತೀತ’ವಾದ ಶುದ್ಧಬ್ರಹ್ಮ! (ಇದು ಅಲ್ಲಮಪ್ರಭು ಹೇಳುವ ನಿರ್ಬಯಲು!)

ಇದು ಸಾಧಕನು ಪರಬ್ರಹ್ಮದಲ್ಲಿ ಲೀನವಾಗುವ ಪರಿ.

ಈ ರೀತಿಯಾಗಿ ಬೇಂದ್ರೆಯವರು ಬ್ರಹ್ಮಾಂಡದ ಹಾಗು ಪಿಂಡಾಂಡದ ಉತ್ಕ್ರಾಂತಿಯನ್ನೂ, ಸಾಮರಸ್ಯವನ್ನೂ ಕವನಿಸಿದ್ದಾರೆ.
ಬೇಂದ್ರೆಯವರ ಕಲ್ಪನಾ ಸಾಮರ್ಥ್ಯ ಅಪಾರವಾದದ್ದು; ಅವರ ಪದಕೋಶ ಅನಂತವಾದದ್ದು. ಎಂತಹ ಸರಳ ಕವನದಲ್ಲಿ ಎಂತಹ ಮಹತ್ತತ್ವವನ್ನು ಅವರು ಬರೆಯಬಲ್ಲರು ಎನ್ನುವದನ್ನು ತಿಳಿದಾಗ, ನಮ್ಮಿಂದ ಹೊಮ್ಮುವ ಭಾವ ಇದೊಂದೇ:--
blessed blessed life is blessed one. .........   Neelanjana

No comments:

Post a Comment