Sunday, September 26, 2010

ಕೋಡಗನ್ನ ಕೋಳಿ ನುಂಗಿತ’ ಇದು ಶರೀಫರ ಬೆಡಗಿನ ಹಾಡು.

ಕೋಡಗನ್ನ ಕೋಳಿ ನುಂಗಿತ.
 
‘ಕೋಡಗನ್ನ ಕೋಳಿ ನುಂಗಿತ’ ಇದು ಶರೀಫರ ಒಡಪಿನ ಅಥವಾ ಬೆಡಗಿನ ಹಾಡು.
ಇಂತಹ ಹಾಡುಗಳನ್ನು ಶರೀಫರಲ್ಲದೆ, ಕನಕದಾಸರು ಹಾಗೂ ಪುರಂದರದಾಸರೂ ಸಹ ರಚಿಸಿದ್ದಾರೆ.
‘ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಿನ್ನ ಒಳಗೊ’ ಎನ್ನುವ ಕನಕದಾಸರ ಹಾಡನ್ನು ಉದಾಹರಣೆಗೆ ನೋಡಬಹುದು.

ಅದರಂತೆ ಪುರಂದರದಾಸರ ಈ ರಚನೆ ಸಹ ಪ್ರಸಿದ್ಧವಿದೆ:
“ಸುಳ್ಳು ನಮ್ಮಲ್ಲಿಲ್ಲವಯ್ಯಾ
ಸುಳ್ಳೆ ನಮ್ಮನಿ ದೇವರು”.
………………………………………………………….
‘ಕೋಡಗನ್ನ ಕೋಳಿ ನುಂಗಿತ’ ಎನ್ನುವ ಪದದಲ್ಲಿ ಶರಿಫರು ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಕೋಳಿಗೆ ಹೋಲಿಸಿ ಹಾಡಿದ್ದಾರೆ. ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ.
ಕೋಳಿಯ ಕೂಗು ಬೆಳಗಿನ ಸೂಚನೆ. ಶರೀಫರ ಹಾಡಿನಲ್ಲಿ ಇದು ಆಧ್ಯಾತ್ಮಿಕ ಬೆಳಗನ್ನು ಸೂಚಿಸುವ ಕೋಳಿ. ಆಧ್ಯಾತ್ಮಿಕ ಜ್ಞಾನೋದಯವು ಕೋಡಗದಂತಿರುವ ಮನಸ್ಸನ್ನು ನುಂಗಿ ಹಾಕುತ್ತದೆ ಎಂದು ಶರೀಫರು ಹೇಳುತ್ತಾರೆ.

ಪುರಂದರದಾಸರೂ ಸಹ ತಮ್ಮ ಒಂದು ರಚನೆಯಲ್ಲಿ ಮರ್ಕಟದಂತಿರುವ ಮನಸ್ಸನ್ನು ಡೊಂಕು ಬಾಲದ ನಾಯಿಗೆ ಹೋಲಿಸಿದ್ದಾರೆ. ತಿದ್ದಲು ಎಷ್ಟೇ ಪ್ರಯತ್ನಿಸಿದರೂ ಸಹ ಈ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಉಳಿಯುತ್ತದೆ. ಅರ್ಥಾತ್ ಈ ಮನಸ್ಸಿಗೆ ಜ್ಞಾನೋದಯವಿನ್ನೂ ಆಗಿಲ್ಲ. ಪುರಂದರದಾಸರ ಈ ಹಾಡಿನಲ್ಲಿ ಒಂದು ವಿಶೇಷತೆ ಇದೆ. ಹಾಡಿನ ಪಲ್ಲವನ್ನು ನೋಡೋಣ:

“ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?” ||ಪಲ್ಲ||

ಡೊಂಕು ಬಾಲದ ನಾಯಕರು ಎಂದರೆ ‘ನಾಯಿ’ ಎನ್ನುವದು ತಿಳಿದ ವಿಷಯವೇ.
ಆದರೆ ‘ನಾಯಕರು’ ಎನ್ನುವಲ್ಲಿ ಒಂದು ಹೆಚ್ಚಿನ ಅರ್ಥವಿದೆ.
ಪುರಂದರದಾಸರ ಪೂರ್ವಾಶ್ರಮದ ಹೆಸರು: ಶ್ರೀನಿವಾಸ ನಾಯಕ.
ದಾಸರು “ಡೊಂಕು ಬಾಲದ ನಾಯಕರೆ” ಎನ್ನುವಾಗ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿದ್ದಾರೆ !
. . .. .. . . . . . . .. . . . . . . . . . .. . . . . . . .
 ರಚನೆಯ ಪೂರ್ತಿ ಪಾಠ ಹೀಗಿದೆ:

ಕೋಡಗನ್ನ ಕೋಳಿ ನುಂಗಿತ
ನೋಡವ್ವ ತಂಗಿ ||ಪಲ್ಲ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ ||೩||

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ ||೪||

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ ||೫||
. . .. . . . . .. . . . . . . .. . . . . . . . .. . .

ಶರೀಫರು ಆಧುನಿಕ ಕಾಲದ ಕವಿಗಳಂತೆ, ಮುಚ್ಚಿದ ಕೋಣೆಯಲ್ಲಿ ಕುಳಿತು, ಪೆನ್ನು ಅಥವಾ ಪೆನ್ಸಿಲಿನಿಂದ ಕವನ ಬರೆಯುವ ಕವಿ ಅಲ್ಲ. ತಮ್ಮ ಸುತ್ತ ನೆರೆದಿರುವ ಜನಸಮುದಾಯದ ಎದುರಿಗೆ ಸ್ಫೂರ್ತಿಯುತವಾಗಿ ಕವನ ಹಾಡುವದು ಅವರ ಪದ್ಧತಿ. ಜನಸಮುದಾಯಕ್ಕೆ ಜ್ಞಾನದ ಬೆಳಕು ಸಿಗಲಿ ಎನ್ನುವದು ಅದರ ಉದ್ದೇಶ.
ಹೀಗಾಗಿ ಇವರ ಕವನಗಳ ರಚನೆಯನ್ನು ಗಮನಿಸಿದಾಗ, ಕೆಲವೊಂದು ಕವನದ ಸಾಲುಗಳಲ್ಲಿ repetitiveness ಕಾಣುವದು ಸಹಜ.

‘ಕೋಡಗನ್ನ ಕೋಳಿ ನುಂಗಿತ’ ಕವನದ ಎಲ್ಲಾ ನುಡಿಗಳಲ್ಲಿ ಕಂಡು ಬರುವದು ಒಂದೇ ಅರ್ಥ.
ಮೊದಲ ನುಡಿಯ ನಂತರ, ಕವನ ಮುಂದೆ ಸಾಗಿದಂತೆ ಅರ್ಥದ ಬೆಳವಣಿಗೆ ಸಾಗುವದಿಲ್ಲ.
ಆದರೆ ಆ ಕಾರಣಕ್ಕಾಗಿ ಕವನದ ಸೌಂದರ್ಯವೇನೂ ಕಡಿಮೆಯಾಗಿಲ್ಲ.

ಕವನದ ಪಲ್ಲದಲ್ಲಿ ಕವಿಯು ‘ಕೋಳಿ ಅಂದರೆ ಆಧ್ಯಾತ್ಮಿಕ ಜ್ಞಾನೋದಯವು ಕೋಡಗವನ್ನು ಅಂದರೆ ಮಂಗನಂತಿರುವ ಮನಸ್ಸನ್ನು ತಿಂದು ಹಾಕಿದೆ’ ಎಂದು ಹೇಳುತ್ತಾರೆ. ಇದೇ ಮಾತನ್ನು ಮುಂದಿನ ನುಡಿಯಲ್ಲಿ, ವಿಭಿನ್ನ ರೂಪಕಗಳ ಮೂಲಕ ಮತ್ತೆ ಮತ್ತೆ ಸ್ಪಷ್ಟ ಪಡಿಸುತ್ತಾರೆ:

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||

ಆಡು ಅಂದರೆ ಜ್ಞಾನ. ಇದು ಸಣ್ಣದು . ಸಂಸಾರದ ಆಸೆಗಳಿಗೋ ಆನೆಯ ಬಲ.
ಇಂತಹ ಆನೆಯನ್ನು ಆಡಿನಂತಿರುವ ಜ್ಞಾನ ತಿಂದು ಹಾಕಿಬಿಡುತ್ತದೆ ಎಂದು ಶರೀಫರು ಹಾಡುತ್ತಾರೆ.

(ಈ ಸಂದರ್ಭದಲ್ಲಿ ಬಸವಣ್ಣನವರ ವಚನವೊಂದನ್ನು ನೆನಪಿಸಿಕೊಳ್ಳಬಹುದು:
“ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?” )

ಗೋಡೆ ಎಂದರೆ ಮನಸ್ಸಿನ ಭಿತ್ತಿ. ಜ್ಞಾನೋದಯದ ನಂತರ, ಈ ಗೋಡೆಯ ಮೇಲೆ, ಎಷ್ಟೇ ಸುಣ್ಣ ಹಚ್ಚಲಿ, ಯಾವುದೇ ಬಣ್ಣ ಹಚ್ಚಲಿ, ಅದನ್ನು ಗೋಡೆಯೇ ತಿಂದು ಹಾಕಿ ಬಿಡುತ್ತದೆ. ಗೋಡೆಯ surface ಮತ್ತೂ ನಿರ್ವರ್ಣವಾಗಿ, ಶುಭ್ರವಾಗಿಯೇ ಉಳಿಯುತ್ತದೆ.

ಆಡಲು ಬಂದ ಪಾತರದವಳು ಅಂದರೆ ಕುಣಿಯಲು ಬಂದ ನರ್ತಕಿ, ಅರ್ಥಾತ್ ಸಂಸಾರದಲ್ಲಿ ಆಡಲು ಬಂದ ಜೀವಾತ್ಮ. ಮದ್ದಲೆ ಅಂದರೆ ಪರಮಾತ್ಮ ಬಾರಿಸುತ್ತಿರುವ ಜ್ಞಾನದ ಮದ್ದಲೆ.

ಈ ರೂಪಕಕ್ಕೆ ಒಂದು ವಿಶಿಷ್ಟ ಹಿನ್ನೆಲೆ ಇದೆ. ಚಾಮರಸ ಬರೆದ ‘ಪ್ರಭುಲಿಂಗ ಲೀಲೆ’ ಕಾವ್ಯದಲ್ಲಿ ಅಲ್ಲಮನಿಗೂ, ಮಾಯಾದೇವಿಗೂ ಸ್ಪರ್ಧೆ ಏರ್ಪಡುತ್ತದೆ. ಅಲ್ಲಮ ಮದ್ದಲೆ ಬಾರಿಸುತ್ತಿದ್ದಂತೆ, ಅದರ ತಾಳಕ್ಕೆ ತಕ್ಕಂತೆ ಕುಣಿಯಲು ಮಾಯಾದೇವಿಗೆ ಸಾಧ್ಯವಾಗುವದಿಲ್ಲ. ಅವಳು ಸೋಲೊಪ್ಪಿಕೊಳ್ಳುತ್ತಾಳೆ.

‘ಪ್ರಭುಲಿಂಗ ಲೀಲೆ’ ಶರೀಫರಿಗೆ ಪ್ರಿಯವಾದ ಕಾವ್ಯ.
ತಾವೇ ಮಾಡಿಕೊಂಡ ಇದರ ಹಸ್ತಪ್ರತಿಯೊಂದನ್ನು ಅವರು ಯಾವಾಗಲೂ ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರಂತೆ.

ಎರಡನೆಯ ನುಡಿಯಲ್ಲಿ ಶರೀಫರು ಸಂಸಾರದಲ್ಲಿರುವ ಸಾಧಕನ ಪ್ರಗತಿಯ ರೀತಿಯನ್ನು ವರ್ಣಿಸಿದ್ದಾರೆ:

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||

ಒಳ್ಳು ಹಾಗೂ ಬೀಸುವ ಕಲ್ಲುಗಳನ್ನು ಶರೀಫರು ಸಂಸಾರಕ್ಕೂ, ಒನಕೆ ಹಾಗೂ ಬೀಸುವ ಕಲ್ಲಿನ ಗೂಟವನ್ನು ಸಾಧಕನ ಕರ್ಮಗಳಿಗೂ ಹೋಲಿಸಿದ್ದಾರೆ. ಕುಟ್ಟಲಿಕೆ ಬಂದ ಮುದುಕಿ ಅಂದರೆ ಈ ಸಂಸಾರದಲ್ಲಿ ಬಂದು, ಕರ್ಮಗಳಿಂದ ಪಕ್ವವಾದ ಜೀವಾತ್ಮ.
ಈ ಜೀವಾತ್ಮ is hammered on the anvil of life.
ಆದರೆ ಆತ ಪಕ್ವವಾದಾಗ, ಆತನ ಕರ್ಮಗಳು ಕರಗಿ ಹೋಗುತ್ತವೆ.
ಇಂತಹ ಜೀವಾತ್ಮನನ್ನು ನೊಣದಷ್ಟು ಸಣ್ಣಗಿನ ಜ್ಞಾನ ತಿಂದು ಹಾಕುತ್ತದೆ.

ಮೂರನೆಯ ನುಡಿಯಲ್ಲಿ ಶರೀಫರು ಸಂಸಾರ ಹಾಗೂ ಕರ್ಮಗಳನ್ನು ಬೇರೊಂದು ರೀತಿಯಲ್ಲಿ ವರ್ಣಿಸುತ್ತಾರೆ:

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ

ಮಗ್ಗವೆಂದರೆ ಸಂಸಾರ. ಮಗ್ಗವನ್ನು ಕಟ್ಟಿರುವ ಹಗ್ಗವೆಂದರೆ ಸಂಸಾರಕ್ಕೆ ಜೋತು ಬೀಳುವ ಮನಸ್ಸು.
ಮಗ್ಗದಲ್ಲಿ ಒಮ್ಮೆ ಅತ್ತ(=ಒಳ್ಳೆಯದರತ್ತ) ಒಮ್ಮೆ ಇತ್ತ(=ಕೆಡುಕಿನತ್ತ) ಸರಿಯುವ ಲಾಳಿ ಎಂದರೆ ಜೀವಾತ್ಮನೆಸಗುವ ಕರ್ಮಗಳು.
ಜ್ಞಾನವನ್ನು ಬಯಸುವ ಸಾಧಕನು ಈ ಸಂಸಾರದಲ್ಲಿ ಸಿಲುಕಲಾರ.
ಆತನ ಮನಸ್ಸು ಈ ಸಂಸಾರವನ್ನು ತಿಂದು ಹಾಕುತ್ತದೆ ಅಂದರೆ ನಾಶ ಮಾಡುತ್ತದೆ ಎಂದು ಶರೀಫರು ಹೇಳುತ್ತಾರೆ.
ಇದಾದ ಮೇಲೆ ಸಂಸಾರವೆನ್ನುವ ಮಗ್ಗದಲ್ಲಿ ನೇಯಲು ಕುಳಿತ ಅಣ್ಣನನ್ನು ಅಂದರೆ ಜೀವಾತ್ಮನನ್ನು ಮಗ್ಗದ ಕೆಳಗಿರುವ ಕುಣಿ (=space excavated below the loom for footwork) ನುಂಗಿ ಹಾಕುತ್ತದೆ.
ಅಂದರೆ ಆತನಿಗೆ ಜ್ಞಾನೋದಯವಾಗುತ್ತದೆ !

ನಾಲ್ಕನೆಯ ನುಡಿಯಲ್ಲಿಯೂ ಸಹ ಇದೇ ವಿಷಯವನ್ನು ಶರೀಫರು ಬೇರೆ ರೂಪಕಗಳ ಮೂಲಕ ವಿವರಿಸುತ್ತಾರೆ:

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ

ಹೊಲವನ್ನು ಊಳಲು ಎತ್ತಿನ ಕೊರಳಿಗೆ ಜತ್ತಗಿ (=ನೊಗಕ್ಕೆ ಹಾಗು ಎತ್ತಿನ ಕೊರಳಿಗೆ ಕಟ್ಟುವ ಪಟ್ಟಿ) ಕಟ್ಟಿರುತ್ತಾರೆ.
ಸಂಸಾರವೆಂಬ ಹೊಲವನ್ನು ಊಳಲು ಬಂದ ಎತ್ತು ಇದು.
ಇದು ತನ್ನನ್ನು ನೊಗಕ್ಕೆ ಅಂದರೆ ಕರ್ಮಗಳಿಗೆ ಬಂಧಿಸಿದ ಜತ್ತಗಿ ಅಂದರೆ ಕರ್ಮಪಾಶವನ್ನೆ ತಿಂದು ಹಾಕಿದೆ. (ಸಾಧನೆಯ ಸಹಾಯದಿಂದ).

ಬಾನ ಅಂದರೆ ದೇವರೆದುರಿಗೆ ಇಟ್ಟ ಎಡಿ, ನೈವೇದ್ಯ.
ಹೊಲದಲ್ಲಿ ದೇವರ ಎದುರಿಗೆ ಇಡಲಾದ ಈ ನೈವೇದ್ಯದ ಅನ್ನವನ್ನು ಬತ್ತವೇ ತಿಂದು ಹಾಕಿದೆ.
ಅರ್ಥಾತ್ ಈ ಸಾಧಕನ ಕರ್ಮಪಾಕಗಳು ಶಿಥಿಲವಾಗುತ್ತಿವೆ.
ಈ ಸಾಧಕನು ಮುಕ್ಕಟೆಯಾಗಿ (ಬೇಗ ಬೇಗನೇ), ಹೊಲವನ್ನು ಊಳುತ್ತಿದ್ದಾನೆ. ಅವನನ್ನು ಮೇಳಿ (=?) ನುಂಗಿ ಹಾಕಿದೆ. ಮೇಳಿ ಅಂದರೆ ಒಕ್ಕಲುತನದ ಸಾಧನವಿರಬಹುದು.

ಐದನೆಯ ನುಡಿಯಲ್ಲಿ ಶರೀಫರು ಸಾಧಕನು ಆಧ್ಯಾತ್ಮದ ಕೊನೆ ಮುಟ್ಟಿದ್ದನ್ನು ವಿವರಿಸಿದ್ದಾರೆ:

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ

ಬಹುಶ: ಗುಡ್ಡ ಎಂದರೆ ಅನಾದಿ-ಅನಂತನಾದ ಚಿತ್ ಸ್ವರೂಪನಾದ ಪರಮಾತ್ಮ.
ಈ ಪರಮಾತ್ಮನು ಗುಡ್ಡದಲ್ಲಿಯೆ ಇರುವ ಗಂವ್ಹರವನ್ನು (=ಗವಿಯನ್ನು) ಅಂದರೆ ಅನಾದಿ-ಅನಂತವಾದ ಸಂಸಾರವನ್ನು ನುಂಗಿದ್ದಾನೆ.
ಈ ಸಂಸಾರವು ತನ್ನಲ್ಲಿರುವ ಇರಿವೆಯನ್ನು ಅಂದರೆ ಕಾಲ ದೇಶದಿಂದ ಬಂಧಿತನಾದ ಅಸ್ತಿತ್ವವನ್ನು ಅಂದರೆ ಜೀವಾತ್ಮನನ್ನು ನುಂಗಿ ಹಾಕಿದೆ.
ಇದರರ್ಥವೆಂದರೆ ಪರಮಾತ್ಮನಲ್ಲಿ ಜೀವಾತ್ಮ ಲೀನವಾಗಿದೆ.
ಇದೇ ಮಾತನ್ನು ಶರೀಫರು ಹೀಗೂ ಹೇಳಿದ್ದಾರೆ:
‘ಗುರುಗೋವಿಂದನ ಪಾದ ಆತ್ಮ ನುಂಗಿತ ’.

ಶರೀಫರ ಈ ಒಡಪಿನ ಗೀತೆಯಲ್ಲಿರುವ ಒಂದು ರಚನಾವೈಶಿಷ್ಟ್ಯವನ್ನು ಗಮನಿಸಬೇಕು.
ಪ್ರತಿಯೊಂದು ನುಡಿಯಲ್ಲಿ ಮೊದಲ ಎರಡು ಸಾಲುಗಳು ನಿರ್ಜೀವ ಉಪಕರಣಗಳನ್ನು ಬಣ್ಣಿಸುತ್ತವೆ.
ಉದಾ: ಒಳ್ಳು, ಒನಕೆ, ಬಿಸುವ ಕಲ್ಲು. ಗೋಡೆ, ಹಗ್ಗ, ಮಗ್ಗ ಇತ್ಯಾದಿ.
ಪ್ರತಿ ನುಡಿಯ ಕೊನೆಯ ಸಾಲಿನಲ್ಲಿ ಜೀವಾತ್ಮನ ವರ್ಣನೆ ಇದೆ;
ಉದಾ: ಪಾತರದವಳು, ಮುದಕಿ, ಅಣ್ಣ ಹಾಗು ಆತ್ಮ .

ಈ ರೀತಿಯಾಗಿ, ಸಂಸಾರದಲ್ಲಿಳಿದ ಸಾಧಕನ ಜ್ಞಾನೋದಯವಾಗುತ್ತಿರುವ ಘಟ್ಟದಿಂದ ಪ್ರಾರಂಭಿಸಿ, ಆತ ಪರಮಾತ್ಮನಲ್ಲಿ ಲೀನವಾಗುವ ಘಟ್ಟದವರೆಗಿನ ವರ್ಣನೆ ಇಲ್ಲಿದೆ.
ಆದರೆ, ಕವನದಲ್ಲಿ ಸಾಧಕನ ಹಂತಹಂತದ ಬೆಳವಣಿಗೆಯನ್ನು ತೋರಿಸಿಲ್ಲ.
ವಿಭಿನ್ನ ರೂಪಕಗಳನ್ನು ಉಪಯೋಗಿಸುತ್ತ, ಅದೇ ಸಾರವನ್ನು ಶರೀಫರು ಮತ್ತೆ ಮತ್ತೆ ಹೇಳಿದ್ದಾರೆ.
ಇದರಲ್ಲಿ ತಪ್ಪೇನೂ ಇಲ್ಲ.
ಏಕೆಂದರೆ ಇದು ಕೋಣೆಯಲ್ಲಿ ಕುಳಿತು ರಚಿಸಿದ ಕವನವಲ್ಲ .
ತಮ್ಮ ಎದುರಿಗೆ ನೆರೆದು ನಿಂತಿರುವ ಸಾಮಾನ್ಯ ಹಳ್ಳಿಗರನ್ನು ಉದ್ದೇಶಿಸಿ, ಸ್ಫೂರ್ತಿ ಉಕ್ಕಿದಾಗ ಹಾಡಿದ ಹಾಡಿದು.
ಹಾಡು ಕೇಳುತ್ತಿರುವ ಸಾಮಾನ್ಯ ಹಳ್ಳಿಗನಿಗಾಗಿ ಅವನ ಹೃದಯಕ್ಕೆ ಅರ್ಥವಾಗುವಂತಹ ಭಾಷೆಯಲ್ಲಿ ಹಾಡಿದ ಹಾಡಿದು.
..............................Neelanjan
 

ಸೋರುತಿಹದು ಮನಿಯ ಮಾಳಿಗಿ, ಅಜ್ಞಾನದಿಂದ ಸೋರುತಿಹದು ಮನಿಯ ಮಾಳಿಗಿ......ಶರೀಫರು

ಸೋರುತಿಹುದು ಮನೆಯ ಮಾಳಿಗಿ.
ಸೋರುತಿಹುದು ಮನೆಯ ಮಾಳಿಗಿ
ಅಜ್ನಾನದಿಂದ

ಸೋರುತಿಹುದು ಮನೆಯ ಮಾಳಿಗಿ.



ಸೋರುತಿಹುದು ಮನೆಯ ಮಾಳಿಗಿ

ದಾರು ಗಟ್ಟಿ ಮಾಳ್ಪರಿಲ್ಲ

ಕಾಳ ಕತ್ತಲೆಯೊಳಗೆ ನಾನು

ಮೇಲಕೇರಿ ಹೋಗಲಾರೆ.



ಮುರುಕು ತೊಲೆಯು ಹುಳುಕು ಜಂತಿ

ಕೊರೆದು ಸರಿದು ಕೀಲ ಸಡಲಿ

ಹರುಕು ಚಪ್ಪರ ಜೇರುಗಿಂಡಿ

ಮೇಲಕೇರಿ ಹೋಗಲಾರೆ.



ಕರಕಿ ಹುಲ್ಲು ಕಸವು ಹತ್ತಿ

ಹರಿದು ಸಾಲು ಇರಬಿ ಮುತ್ತಿ

ಜಲದ ಭರದಿ ಸರಿಯೆ ಮಣ್ಣು

ಒಳಗೆ ಹೊರಗೆ ಏಕವಾಗಿ.



ಕಾಂತೆ ಕೇಳೆ ಕರುಣದಿಂದ

ಬಂತು ಕಾಣೆ ಹುಬ್ಬು ಮಳೆಯು

ಎಂತೊ ಶಿಶುನಾಳಧೀಶನ ತಾನು

ನಿಂತು ಪೊರೆವನು ಎಂದು ನಂಬಿದೆ.


ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ ಸಾಧಕರು, ತಾವು ಈ ದರ್ಶನಕ್ಕೆ ಅರ್ಹರೊ ಎಂದು ತಮ್ಮನ್ನೆ ಪರೀಕ್ಷಿಸಿಕೊಳ್ಳುವದು ಸಹಜ. ಕನ್ನಡ ನಾಡಿನಲ್ಲಿ ಬಾಳಿದ, ಇಲ್ಲಿಯ ನಾಡಿಗರ ಮನಸ್ಸನ್ನು ಬೆಳಗಿದ ಇಬ್ಬರು ಅನುಭಾವಿಗಳಾದ ಬಸವಣ್ಣ ಹಾಗೂ ಶರೀಫರು ಇಂತಹ ಭಾವನೆಗಳನ್ನು ತಮ್ಮ ವಚನ ಹಾಗೂ ಹಾಡಿನಲ್ಲಿ ವ್ಯಕ್ತಪಡಿಸಿದ್ದಾರೆ.

ಇವರಲ್ಲಿ ಮೊದಲಿಗರಾದ ಬಸವಣ್ಣನವರ ವಚನವನ್ನೇ ಗಮನಿಸಿರಿ:

“ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲಾ
ಕೂಡಲಸಂಗಮ ದೇವಾ!”

ಬಸವಣ್ಣನವರು ತಮ್ಮ ತನು ಹಾಗೂ ಮನವನ್ನು ಮನೆಗೆ ಹೋಲಿಸಿ, ಈ ಮನೆಯಲ್ಲಿ ಕೇವಲ ಕಸ ಕಡ್ಡಿ ತುಂಬಿಕೊಂಡಿದೆ; ಈ ಮನೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಒಡೆಯನು ಇಲ್ಲವಲ್ಲ ಎಂದು ವಿಷಾದಿಸುತ್ತಾರೆ. ಮನೆಯನ್ನು ಸ್ವಚ್ಛಗೊಳಿಸುವ ಒಡೆಯ ಅಂದರೆ ತಿಳಿವನ್ನು ಪಡೆದ ಆತ್ಮ ಅಥವಾ ಪರಮಾತ್ಮ.

ಇದರಂತೆಯೆ, ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಬಾಳಿದ ಶರೀಫರು ಸಹ ಮನೆಯನ್ನು ಮನಸ್ಸಿಗೆ ಅಥವಾ Selfಗೆ ಹೋಲಿಸಿ ಹಾಡಿದ್ದಾರೆ. ಶರೀಫರ ಹಾಡು ಹೀಗಿದೆ:

ಸೋರುತಿಹದು ಮನಿಯ ಮಾಳಿಗಿ, ಅಜ್ಞಾನದಿಂದ
ಸೋರುತಿಹದು ಮನಿಯ ಮಾಳಿಗಿ ||ಪಲ್ಲ||

ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ ||೧||

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ ||೨||

ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ ||೩||

ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ ||೪||

ಶರೀಫರು ಜೀವಿಸಿದ್ದ ಬೆಳವಲ ನಾಡಿನಲ್ಲಿ ಮಳೆ ಕಡಿಮೆ. ಆದುದರಿಂದ ಮನೆಯ ಮೇಲ್ಭಾಗವು (roof) ಮಣ್ಣಿನದಾಗಿರುತ್ತಿತ್ತು. ಇದಕ್ಕೆ ಮೇಲ್ಮುದ್ದಿಯ ಮನೆ ಎಂದು ಹೇಳುತ್ತಾರೆ. ಈ ಮೇಲ್ಮುದ್ದಿಗೆ ಆಧಾರ ಎಂದು ಕೆಳಭಾಗದಲ್ಲಿ ಕಟ್ಟಿಗೆಯ ತೊಲೆ ಹಾಗೂ ಜಂತಿಗಳನ್ನು ಬಳಸಿರುತ್ತಾರೆ.
ಮಣ್ಣಿನ ಮೇಲ್ಮುದ್ದಿಯಾಗಿರುವದರಿಂದ, ಇಲ್ಲಿ ಹುಲ್ಲು ಬೆಳೆಯುವದು ಸ್ವಾಭಾವಿಕ. ತೇವಾಂಶದಿಂದಾಗಿ ತೊಲೆ ಹಾಗೂ ಜಂತಿಗಳು ಕೆಡುವದೂ ಸಹ ಸ್ವಾಭಾವಿಕ. ಇದರಿಂದಾಗಿ ಮನೆಯ ಮಾಳಿಗೆ ಸೋರಲು ಪ್ರಾರಂಭವಾಗುತ್ತದೆ.
ಈ ಮೇಲ್ಮುದ್ದಿಯನ್ನು ಮಳೆಗಾಲಕ್ಕಿಂತ ಮೊದಲೇ ದುರಸ್ತು ಮಾಡಬೇಕಾಗುತ್ತದೆ.

ಈ ಹಾಡಿನಲ್ಲಿ ಶರೀಫರು ತಮ್ಮ self ಅಥವಾ ಮನಸ್ಸನ್ನು ಒಂದು ಮನೆಗೆ ಹೋಲಿಸಿ ಹಾಡಿದ್ದಾರೆ. ಈ ಮನೆಯ ಮಾಳಿಗೆ ಗಟ್ಟಿಯಾಗಿ ಉಳಿದಿಲ್ಲ, ಅದೀಗ ಸೋರುತ್ತಿದೆ. ಸೋರುವಿಕೆಗೆ ಅಜ್ಞಾನವೇ ಕಾರಣವೆಂದು ಶರೀಫರು ಮೊದಲಿನಲ್ಲಿಯೇ ಸಾರಿ ಬಿಡುತ್ತಾರೆ. ಈ ಅಜ್ಞಾನದ ಸ್ವರೂಪವೇನು? ಆತ್ಮಜ್ಞಾನವಿಲ್ಲದಿರುವದೇ ಅಜ್ಞಾನ! ಸೋರುವಿಕೆ ಎಂದರೇನು? ಮನೆಯನ್ನು ಸ್ವಚ್ಛವಾಗಿರಿಸಲು ಸಾಧ್ಯವಿಲ್ಲದಂತೆ, ಹೊರಗಿನ ಕಸಕಡ್ಡಿ, ಹುಳಹುಪ್ಪಡಿ ಇವೆಲ್ಲ ಮನೆಯ ಒಳಗೆ ಪ್ರವೇಶ ಪಡೆಯುವದು ಅಂದರೆ ವಿಕಾರಗಳು ಮನಸ್ಸನ್ನು ಪ್ರವೇಸಿಸುವದು.

ಹಾಗಾದರೆ, ಈ ಮಾಳಿಗೆಯನ್ನು ಸರಿಪಡಿಸಲು ಶರೀಫರಿಗೆ ಇರುವ ತೊಂದರೆ ಏನು? ಈ ಹಾಡಿನ ಮೊದಲನೆಯ ನುಡಿಯಲ್ಲಿ ಶರೀಫರು ತಮ್ಮ ಅಸಹಾಯಕತೆಯನ್ನು ವಿವರಿಸಿದ್ದಾರೆ:

ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ ||

ಸೋರುತ್ತಿರುವ ಮನೆಯ ಮಾಳಿಗೆಯ ದಾರು(=ಮರ=timber)ಅನ್ನು ಗಟ್ಟಿ ಮಾಡುವವರು ಯಾರೂ ಇಲ್ಲ. ಮನೆಯನ್ನು ಕಾಳಕತ್ತಲೆಯು ಆವರಿಸಿರುವದರಿಂದ, ಮೆಟ್ಟಲು ಹತ್ತಿ, ಮಾಳಿಗೆಯನ್ನು ಏರಲು ಶರೀಫರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಇವರು ಮೇಲೆ ಏರುವದು ಹೇಗೆ? ಮೇಲ್ಮುದ್ದಿಯ ತೊಲೆ ಹಾಗೂ ಜಂತಿಗಳನ್ನು ಸರಿಪಡಿಸುವದು ಹೇಗೆ?

ಎರಡನೆಯ ನುಡಿಯಲ್ಲಿ ಶರೀಫರು ಈ ಮಾಳಿಗೆಯು ಎಷ್ಟರಮಟ್ಟಿಗೆ ನಾದುರಸ್ತ ಆಗಿದೆ ಎನ್ನುವದನ್ನು ವರ್ಣಿಸಿದ್ದಾರೆ:

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ ||

ಈ ಮನೆಯ ಮಾಳಿಗೆಯ ತೊಲೆ ಮುರಿದಿದೆ; ಜಂತಿಗೆ ಹುಳುಕು ಹತ್ತಿದೆ; ಹುಳ ಕೊರೆದದ್ದರಿಂದ ಜಂತಿ ಹಾಗೂ ತೊಲೆಗಳನ್ನು ಜೋಡಿಸುವ ಕೀಲಗಳು ಸಡಿಲುಗೊಂಡಿವೆ.ಅವುಗಳ ಮೇಲೆ ಹೊದಿಸಿದ ಚಪ್ಪರ ಹರಿದಿದೆ. ಬೆಳಕು ಬರಲೆಂದು ನಿರ್ಮಿಸಲಾದ ಜೀರುಗಿಂಡಿಯು (=ಸಣ್ಣ ಬೆಳಕಿಂಡಿಯು) ಹಾಳಾಗಿ ಹೋಗಿದೆ. ಅರ್ಥಾತ್ ಮಾಳಿಗೆ ಪೂರ್ಣವಾಗಿ ನಾದುರಸ್ತ ಆಗಿದೆ.
ಮಾಳಿಗೆಯ ಸಂಕೇತದ ಮೂಲಕ ಶರೀಫರು ತಮ್ಮ ಮನಸ್ಸೂ ಸಹ ಈ ಮಾಳಿಗೆಯಂತೆ ನಾದುರಸ್ತ ಆಗಿದೆ. ತಮ್ಮ ಮನಸ್ಸಿಗೆ ಬೆಳಕನ್ನು ಕೊಡುವ ಬೆಳಕಿಂಡಿ ಹಾಳಾಗಿ ಹೋಗಿದ್ದರಿಂದ ಒಳಗೆಲ್ಲ ಕತ್ತಲೆ ಕವಿದಿದೆ ಎಂದು ಹೇಳುತ್ತಿದ್ದಾರೆ. ಆದರೇನು, ಶರೀಫರಿಗೆ ದುರಸ್ತಿಗಾಗಿ ಮೇಲಕ್ಕೆ ಹತ್ತುವದೇ ಅಸಾಧ್ಯವಾಗಿದೆ.
ಈ ರೀತಿಯಾಗಿ ಮಾಳಿಗೆಯು ನಾದುರಸ್ತ ಆಗಿದ್ದರ ಪರಿಣಾಮವೇನು ಎನ್ನುವದನ್ನು ಶರೀಫರು ಮೂರನೆಯ ನುಡಿಯಲ್ಲಿ ಹೀಗೆ ವರ್ಣಿಸಿದ್ದಾರೆ:

ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ ||

ಮೇಲ್ಮುದ್ದಿಯು ಕೆಟ್ಟು ಹೋಗಿ, ತೇವಾಂಶ ಜಾಸ್ತಿಯಾಗಿದ್ದರಿಂದ ಅಲ್ಲಿ ಕರಕಿ ಹುಲ್ಲು ಬೆಳೆದು ಬಿಟ್ಟಿದೆ. ಕರಕಿಯು ಬಹಳ ಗಟ್ಟಿಯಾದ ಹುಲ್ಲಿನ ಜಾತಿ. ಎಷ್ಟು ಕಿತ್ತಿ ಒಗೆದರೂ ನಿರ್ಮೂಲವಾಗುವದಿಲ್ಲ. ಅದೇ ರೀತಿಯಾಗಿ, ಶರೀಫರ ಮನಸ್ಸಿನಲ್ಲಿಯೂ ಸಹ ವಿಷಯಗಳೆಂಬ ವಿಕಾರಗಳು ಕರಕಿ ಹುಲ್ಲಿನಂತೆ ಗಟ್ಟಿಯಾಗಿ ಬೆಳೆದು ನಿಂತಿವೆ. (‘ಕಸವು ಹತ್ತಿ’ ಎನ್ನುವದನ್ನು ‘ಗಟ್ಟಿಯಾಗಿ’ ಅಥವಾ ‘ಕಸಕಡ್ಡಿ ಬೆಳೆದು’ ಎನ್ನುವ ಎರಡೂ ಅರ್ಥಗಳಲ್ಲಿ ತಿಳಿಯಬಹುದು.) ಇಂತಹ ವಿಕಾರಗಳು ಇದ್ದಲ್ಲಿ ಈ ಭವದ ದುರಿತಗಳು ಅಂದರೆ ಸಂಸಾರದ ಕೇಡುಗಳು, ಇರುವೆಗಳು ಮುತ್ತಿಕೊಳ್ಳುವಂತೆ ಮುತ್ತಿಕೊಳ್ಳುತ್ತವೆ. ಕಸವನ್ನು ತೆಗೆದು ಹಾಕದ ಹೊರತು, ಇರುವೆಗಳು ಹೋಗುವದಿಲ್ಲ. ಇರುವೆಗಳು ಮುತ್ತಿದ್ದರಿಂದ ಮೇಲ್ಮುದ್ದಿಯ ಮಣ್ಣೆಲ್ಲ ಏಕರೂಪವಾಗಿ ಬಿಟ್ಟಿದೆ. ಅದೇ ರೀತಿಯಾಗಿ, ಸಂಸಾರದ ಕೇಡುಗಳಿಂದ ಶರೀಫರ ಮನೋದ್ರವ್ಯವೆಲ್ಲ ಏಕರೂಪವಾಗಿ ವಿಕಾರಗೊಂಡಿದೆ.

ಆದರೆ, ಶರಿಫರು ಎದೆಗುಂದಿಲ್ಲ. ಅವರಿಗೆ ಗುರುಕರುಣೆಯು ಲಭಿಸುವ ಧೈರ್ಯವಿದೆ. ತಮ್ಮ ಗೆಳೆತಿಗೆ ಶರೀಫರು ಈ ಭರವಸೆಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ.

ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ ||

ಶರೀಫರು ಯಾರಿಗೆ ‘ಕಾಂತೆ’ ಎಂದು ಹೇಳುತ್ತಿದ್ದಾರೆ? ಅವರ ಅನೇಕ ಕವನಗಳು ಈ ಕಾಂತೆಗೆ ಸಂಬೋಧಿತವಾಗಿವೆ. ಕಾಂತೆ ಎಂದರೆ ಆಪ್ತ ಗೆಳತಿ ಎಂದು ತಿಳಿಯಬಹುದು. ತಮ್ಮ ಮನದ ಮಾತುಗಳನ್ನು ಯಾರಿಗೆ ಹೇಳಬಹುದೊ ಅಂತಹ confidante ಈ ಕಾಂತೆ. ತಮ್ಮ ಅಂತರಾತ್ಮಕ್ಕೇ ಶರೀಫರು ಕಾಂತೆ ಎಂದು ಕರೆಯುತ್ತಿದ್ದಾರೆ ಎನ್ನಬಹುದು.
ಹುಬ್ಬಿ ಮಳೆಯು ಶ್ರಾವಣ ಮಾಸದಲ್ಲಿ ಬರುತ್ತದೆ. ಶ್ರಾವಣ ಮಾಸವೆಂದರೆ ಮಳೆ ಧೋಧೋ ಎಂದು ಸುರಿಯುವ ಕಾಲ. ಗುರುಕಾರುಣ್ಯವೂ ಸಹ ಶರೀಫರಿಗೆ ಪೂರ್ಣವಾಗಿ ಒಲಿದು ಬರಲಿದೆ ಎನ್ನುವದರ ಸೂಚನೆಯನ್ನು ಶರೀಫರು ಇಲ್ಲಿ ನೀಡುತ್ತಿದ್ದಾರೆ. ಅದರ ಪೂರ್ವಸೂಚನೆಯಾಗಿ ಶಿಶುವಿನಾಳ ಗ್ರಾಮಕ್ಕೆ ಮೋಡಗಳು ಒಲಿದು ಬಂದಿವೆ ಎಂದು ಶರೀಫರು ಹೇಳುತ್ತಿದ್ದಾರೆ.

“ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,....ಬೇಂದ್ರೆ

‘ಹೃದಯಸಮುದ್ರ’
“ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,
ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟಪೂರಾ,
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ,
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.

ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,
ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.
ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ.

ಇದು ಉಪ್ಪು ನೀರ ಕಡಲಲ್ಲೊ; ನಮ್ಮ ಒಡಲಲ್ಲೆ ಇದರ ನೆಲೆಯು.
ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವದು ಇದರ ಸೆಲೆಯು,
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.

ಬಂದವರ ಬಳಿಗೆ ಬಂದsದ ಮತ್ತು ನಿಂದವರ ನೆರೆಗು
ಬಂದsದೋ ಬಂದsದ,
ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದsದೋ ಅಂದsದ.”
…………………………………………..
ಕವಿಯು ಆಧ್ಯಾತ್ಮ ಸಾಧಕನ ಹೃದಯವನ್ನೇ ಒಂದು ಸಮುದ್ರಕ್ಕೆ ಹೋಲಿಸಿ ಕವನವನ್ನು ಪ್ರಾರಂಭಿಸಿದ್ದಾರೆ.
ಆದರೆ ಈ ಸಮುದ್ರವು ಸದ್-ಭಾವನೆಗಳಿಂದ ತುಂಬಿದ ಹೃದಯಸಮುದ್ರ. ಅಂತೆಯೇ ಇದು ಬಂಗಾರ ನೀರಿನ ಸಮುದ್ರ.

“ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,
ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟಪೂರಾ,
ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ,
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.”

ಅನಂತ ದೂರದಲ್ಲಿರುವ ಆಕಾಶದ ಬಣ್ಣ ನೀಲಿ. ಈ ಸಮುದ್ರದ ತೀರಗಳ ಬಣ್ಣವೂ ನೀಲಿಯೇ. ಯಾಕೆಂದರೆ ದೈವಿಭಾವದ ಈ ಸಮುದ್ರವೂ ಸಹ ಅನಂತವಾಗಿದೆ. ಇದರ ತೀರವು ‘ತೀರ’ದಂತಹದು, ಇದಕ್ಕೆ ಅಂತವಿಲ್ಲ.
ಈ ಸಮುದ್ರದಲ್ಲಿ ಏಳುವ ಸತ್-ಭಾವನೆಯ ತೆರೆಗಳು ಎಂತಹವು? ಅವು ಮಿಂಚಿನ ಬಳಗ!
ಮಿಂಚು ಪ್ರಕಾಶಮಾನವಾಗಿರುತ್ತದೆ. ಅದರ ಕಣ್ಣು ಕೋರೈಸುವ ಬೆಳಕು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಆದರೆ ಕೊನೆಯಿಲ್ಲದ ಮಿಂಚಿನ ಬಳಗ? ಅದು ಅಪೂರ್ವ ಸಿದ್ಧಿಯ ಮಾನಸಿಕ ಸ್ಥಿತಿಯಾಗಿದೆ.

[ಶಂಕರಾಚಾರ್ಯರು ತಮ್ಮ ‘ಸೌಂದರ್ಯಲಹರಿ’ಯಲ್ಲಿ ತಪಸ್ವಿಗಳು ದೇವಿಯನ್ನು ಕಾಣುವ ಬಗೆಯನ್ನೂ ಇದೇ ರೀತಿಯಾಗಿ ಬಣ್ಣಿಸಿದ್ದಾರೆ.

“ ತಟಿಲ್ಲೇಖಾ ತನ್ವೀಂ, ತಪನಶಶಿವೈಶ್ವಾನರಮಯೀಮ್
ನಿಷಣ್ಣಾಂ ಷಣ್ಣಾಂ ಅಪ್ಯುಪರಿ ಕಮಲಾನಾಂ ತವ ಕಲಾಮ್
ಮಹಾಪದ್ಮಾಟವ್ಯಾಂ ಮೃದಿತಮಲಮಾಯೇನ ಮನಸಾ
ಮಹಾಂತಃ ಪಶ್ಯಂತಃ ದಧತಿ ಪರಮಾಹ್ಲಾದ ಲಹರೀಮ್ .”

(ಹೇ ದೇವಿ, ಷಟ್ಚಕ್ರಗಳ ಮೇಲಿರುವ ಸಹಸ್ರದಳಕಮಲದಲ್ಲಿರುವ , ಮಿಂಚಿನ ಬಳ್ಳಿಯಂತಹ ರೂಪವುಳ್ಳ, ಸೂರ್ಯ, ಚಂದ್ರ ಹಾಗು ಅಗ್ನಿ ಸ್ವರೂಪಳಾದ ನಿನ್ನನ್ನು ವಿಮಲ ಮನಸ್ಸಿನ ತಪಸ್ವಿಗಳು ನೋಡುತ್ತಾರೆ.)]

ಈ ಮಾನಸಸಮುದ್ರವು ಬೇಂದ್ರೆಯವರಿಗೆ ವೈಯುಕ್ತಿಕ ಸ್ವರೂಪದ್ದಲ್ಲ. (ಅವರ ಕವಿತೆ ಯಾವಾಗಲೂ ಸಹೃದಯನಿಗೆ ಉದ್ದೇಶಿತವಾದದ್ದು.) ಅಂತೆಯೇ ಈ ತಮ್ಮ ಸಮುದ್ರದಲ್ಲಿ ಅವರು ಎಲ್ಲ ಸಹಯಾತ್ರಿಕರ ನೆಲೆಗಳನ್ನು ಕಾಣುತ್ತಾರೆ.
“ ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ.
ಅದರೊಳಗೆ ನಾವು, ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರಾ.”

ಊರಿದರೆ ಮಾತ್ರ ಊರು ಸಿಗುವದು. ಊರುವದು ಧೀರನಿಗೇ ಸಾಧ್ಯ. ಧೀರನೆಂದರೆ ಸಾಧಕನೇ ಸೈ. ಎಲ್ಲಾ ಸಾಧಕರ ಮಾನಸಸಮುದ್ರ ಒಂದೇ. ಅದು ಭಗವಂತನು ವಾಸಿಸುವ ಹಾಲ್ಗಡಲು.
ಈ ಹಾಲ್ಗಡಲ ವಾಸವನ್ನು ನೆನಸಿಕೊಂಡೇ ಪುರಂದರದಾಸರು ಹಾಡಿದರಲ್ಲವೆ?
“ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ!”

ಅಂತಹ ಮಾನಸಸಮುದ್ರದಲ್ಲಿ ‘ನಾವು’ ಅಂದರೆ ಸಾಧಕರು ಇದ್ದೇವೆ ; ನಮ್ಮೊಳಗೆ ‘ತಾವು’ ಅಂದರೆ ಭಗವಂತ ಇದ್ದಾನೆ.

ಬೇಂದ್ರೆಯವರ ಅನೇಕಾರ್ಥ ಪದ ಬಳಕೆ ಇಲ್ಲಿಯೂ ಕಾಣುತ್ತದೆ. ‘ನಾವು’ ಪದದ ಮತ್ತೊಂದು ಅರ್ಥ ಡೋಣಿ ; ‘ತಾವು’ ಅಂದರೆ ಠಾವು, i.e.ಬಂದರು,port. ‘ಅದು ಇಲ್ಲವಣ್ಣ ದೂರಾ.’
ನೀಲ ಕ್ಷಿತಿಜದಷ್ಟು ದೂರವಾಗಿ ಕಾಣುವ ಈ ತೀರ ಸಾಧಕನಿಗೆ ದೂರವಲ್ಲ ಎಂದು ಬೇಂದ್ರೆ ಹೇಳುತ್ತಾರೆ. ಅಥವಾ ಈ ಬಂದರು ದೂರವಿಲ್ಲ; ಅದು ನಮ್ಮಲ್ಲಿಯೇ ಇದೆ ಎಂದೂ ಅವರು ವಿಶೇಷಾರ್ಥ ನೀಡುತ್ತಾರೆ.
ಇದೇ ಅರ್ಥವನ್ನು ಪುರಂದರದಾಸರೂ ಸಹ ತಮ್ಮ ಹಾಡಿನಲ್ಲಿ ಹೇಳಿದ್ದಾರೆ:
“ಒಂದೇ ಕೂಗಳತೆ ಕಾಣೊ ವೈಕುಂಠಕೆ”.

ಇಂತಹ ಮಾನಸಸಮುದ್ರದಲ್ಲಿರುವ ಸಾಧಕನ ಮುಂದಿನ ಘಟ್ಟವೇನು ಎನ್ನುವದನ್ನು ಕವನದ ಎರಡನೆಯ ನುಡಿಯಲ್ಲಿ ಬೇಂದ್ರೆ ಈ ರೀತಿಯಾಗಿ ವರ್ಣಿಸಿದ್ದಾರೆ:

“ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ,
ಹರಿತsದ ಭಾವ, ಬೆರಿತsದ ಜೀವ ಅದರೊಳಗೆ ಒಳಗೆ ಒಳಗೆ.
ಇದೆ ಸಮಯವಣ್ಣ ಇದೆ ಸಮಯ ತಮ್ಮ ನಮ್‌ನಿಮ್ಮ ಆತ್ಮಗಳಿಗೆ.
ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ.”

This is the moment of Divine Call. ದೇವರು ಕರೆ ಕೊಟ್ಟ ಗಳಿಗೆ; ಇದು ದಿವ್ಯಗಳಿಗೆ. ಈ ಕರೆ ಎಷ್ಟು ಉತ್ಕಟವಾದದ್ದೆಂದರೆ ಇದು ಸಮುದ್ರದ ತೆರೆಗಳಂತೆ ಬಂದು ನಮ್ಮನ್ನು ತನ್ನಲ್ಲಿ ಮುಳುಗಿಸುತ್ತದೆ. (ನೆರೆ ಎನ್ನುವ ಪದಕ್ಕೆ ಸೇರು ಎನ್ನುವ ಅರ್ಥವೂ ಇರುವದರಿಂದ ತೆರೆಗಳು ಎಂದು ಬಹುವಚನ ಉಪಯೋಗಿಸಲಾಗಿದೆ.) ಇದು ನೆರೆ ಅಂದರೆ ಮಹಾಪೂರದಂತೆ ಬಂದು ನಮ್ಮನ್ನು ಕೊಚ್ಚಿಕೊಂಡು ಹೋಗುತ್ತದೆ. ಈ ಕರೆಯ ತೆರೆಯತ್ತ ನಮ್ಮ ಭಾವ ಹರಿಯುತ್ತದೆ. (‘ನೆರೆ’ ಎನ್ನುವ ಪದಕ್ಕೆ mature ಎನ್ನುವ ಅರ್ಥವೂ ಇದೆ.)
‘ಹರಿತsದ ಭಾವ’; ನಮ್ಮ ಜೀವಭಾವವು ಈ ಕರೆಯತ್ತ, ಕರೆ ಕೊಡುವವನತ್ತ ಹರಿಯುತ್ತದೆ; ‘ಹರಿತsದ’ ಅಂದರೆ ಹರಿತವಾಗುತ್ತದೆ, sharp ಆಗುತ್ತದೆ ಎಂದೂ ಬೇಂದ್ರೆ ಹೇಳುತ್ತಾರೆ. ಭಗವಂತನ ಈ ಕರೆಯೊಳಗೆ ನಮ್ಮ ಜೀವ ಬೆರತು ಹೋಗುತ್ತದೆ. ನಮಗೆ ಸ್ವತಂತ್ರ ಆತ್ಮಭಾವ ಉಳಿಯುವದೇ ಇಲ್ಲ. ನಮ್ಮ ಆತ್ಮಗಳಿಗೆಲ್ಲ ಇದೇ ಸಮಯ, the moment of merger. ‘ಆತ್ಮಗಳಿಗೆ’ ಎಂದರೆ ಆತ್ಮದ ‘ಗಳಿಗೆ’=our moment ಎಂದೂ ಅರ್ಥೈಸಬಹುದು.
ನಾವು ಈ ಪ್ರಕ್ರಿಯೆಯಲ್ಲಿ ಸಂಶಯ ಪಡುವ ಕಾರಣವೇ ಇಲ್ಲ. ಯಾಕೆಂದರೆ ಈ ಪ್ರಕ್ರಿಯೆಯ ಕಾರಣಪುರುಷನು ನಮ್ಮನ್ನು ಸಾಗರ ದಾಟಿಸುವ ಅಂಬಿಗ; ನಾವು ನಂಬಬಹುದಾದ, ನಂಬಲೇಬೇಕಾದ ನಂಬಿಗ.
ದಾಸರು ಹೇಳುವಂತೆ: “ಅಂಬಿಗ, ನಾ ನಿನ್ನ ನಂಬಿದೆ; ಜಗದಂಬಾರಮಣ ನಿನ್ನ ನಂಬಿದೆ.”

ಮೂರನೆಯ ನುಡಿಯಲ್ಲಿ ಬೇಂದ್ರೆ ಈ ಸಮುದ್ರವು ಲೌಕಿಕ ಸಾಗರವಲ್ಲ, ಅಲೌಕಿಕ ಸಾಗರ ; ಅರ್ಥಾತ್ ಕ್ಷುದ್ರ ಭಾವನೆಗಳ ಸಾಗರವಲ್ಲ , ದೈವೀ ಭಾವನೆಗಳ ಸಾಗರ ಎನ್ನುವದನ್ನು ಸ್ಪಷ್ಟಪಡಿಸುತ್ತಾರೆ.

“ಇದು ಉಪ್ಪು ನೀರ ಕಡಲಲ್ಲೊ ; ನಮ್ಮ ಒಡಲಲ್ಲೆ ಇದರ ನೆಲೆಯು.
ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು.
ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲಿ ಮಾತ್ರ ಒಡೆಯುವದು ಇದರ ಸೆಲೆಯು,
ಕಣ್ಣರಳಿದಾಗ ಕಣ್ ಹೊರಳಿದಾಗ ಹೊಳೆಯುವದು ಇದರ ಕಳೆಯು.”

ನಮ್ಮ ಒಡಲು ಅಂದರೆ ನಮ್ಮ ಅಂತಃಕರಣದಲ್ಲಿಯೇ ಈ ಕಡಲಿನ ನೆಲೆ ಇದೆ. ಈ ನೆಲೆಯೇ ಈ ಕಡಲಿನ ಸೆಲೆಯು. ಕಂಡಕಂಡವರಿಗೆ ಇದರ ಬೆಲೆ ಗೊತ್ತಾಗದು. ಒಳಗಣ್ಣಿನಿಂದ ಕಂಡವರಿಗಷ್ಟೇ ಇದರ ಮೌಲ್ಯದ ಅರಿವಾಗುವದು. ಸಿಕ್ಕಸಿಕ್ಕಲ್ಲಿ ಈ ಸೆಲೆ ಒಡೆಯಲಾರದು. ಸಾಧನೆಯಿಂದ ಪವಿತ್ರಗೊಂಡ ತಾಣದಲ್ಲಿ ಮಾತ್ರ ಈ ಸೆಲೆ ಚಿಮ್ಮುವದು. ಯಾಕೆಂದರೆ ಇದು ತೀರ್ಥಕ್ಷೇತ್ರವಿದ್ದಂತೆ. (ತಲಕಾವೇರಿಯಂತೆ ಎನ್ನೋಣವೆ?) ಇದರ ಕಾಂತಿ ನಮಗೆ ಹೊಳೆಯಬೇಕಾದರೆ ನಮ್ಮ ಕಣ್ಣು ಅರಳಿರಬೇಕು. ಈ ಅರಳಿದ ಕಣ್ಣು ಈ ದಿವ್ಯತೀರ್ಥದ ಕಡೆಗೆ ಹೊರಳಬೇಕು. ಆಗ ಮಾತ್ರ ದಿವ್ಯಪ್ರಭೆಯ ಈ ಕಾರಂಜಿ ನಮ್ಮ ಕಣ್ಣಿಗೆ ಹೊಳೆಯುವದು.

ಈ ಸಾಕ್ಷಾತ್ಕಾರವು ಕವಿಯನ್ನು ಆನಂದದಿಂದ ತುಂಬಿದೆ. ಅಂತೆಲೇ ಆತ ಉದ್ಘೋಷಿಸುತ್ತಿದ್ದಾನೆ:

“ಬಂದವರ ಬಳಿಗೆ ಬಂದsದ ಮತ್ತು ನಿಂದವರ ನೆರೆಗು
ಬಂದsದೋ ಬಂದsದ,
ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದsದೋ ಅಂದsದ.”

‘ಯಾರು ಬಂದಿದ್ದಾರೆಯೋ, ಅಂದರೆ ದಿವ್ಯಕರೆಯನ್ನು ಕೇಳಿ ಬಂದಿದ್ದಾರೆಯೊ’ ಅವರ ಬಳಿಗೆ ಈ ಮಹಾಪ್ರವಾಹ ಬಂದಿದೆ. ಯಾರು ಇಲ್ಲಿ ಬಂದು ನಿಂತಿದ್ದಾರೊ ಅವರ ಪಕ್ಕದಲ್ಲಿಯೆ(=ನೆರೆಗು) ಬಂದಿದೆ. ಅವರ ನೆರೆಗೆ (ಅಂದರೆ ಅವರನ್ನು mature ಮಾಡುವ ಸಲುವಾಗಿ, ಪಕ್ವಗೊಳಿಸುವ ಸಲುವಾಗಿ) ನಿಂತುಕೊಂಡಿದೆ. ನಿಂದವರ ನೆರೆಗೆ ಅನ್ನುವದಕ್ಕೆ ಮತ್ತೊಂದು ಅರ್ಥವನ್ನು ಹೇಳಬಹುದು. ಯಾರು ಬಾರದೆ ಅಲ್ಲಿಯೇ ನಿಂತಿದ್ದಾರೆಯೋ ಅವರ ಪಕ್ಕಕ್ಕೂ ಸಹ ಈ ನೆರೆ ಬಂದು ನಿಂತಿದೆ.

ಈ ‘ಕರೆ’ ಸಾಧಕನಿಗೆ ಏನು ಹೇಳುತ್ತಿದೆ?
“ನವಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ
ಅಂದsದೋ ಅಂದsದ.”

ನವಮನುವು ಬಂದಿರುವನು ಎನ್ನುವ ಈ ಘೋಷಣೆ ಶ್ರೀ ಅರವಿಂದರ ಕಾಣ್ಕೆಯ ವಿವರಣೆ.
ಅರವಿಂದರು ಮಾನವನ ಉತ್ಕ್ರಾಂತಿಯಲ್ಲಿ ನಂಬಿಗೆ ಇಟ್ಟವರು. ಮನುಷ್ಯನು ತನ್ನ ಕೆಳಮಟ್ಟದ ಮಾನಸಿಕ ಸ್ಥಿತಿಯಿಂದ ಮೇಲೆದ್ದು ಸುಪ್ರಮಾನಸ (supramental, supermind) ಸ್ಥಿತಿಯನ್ನು ತಲುಪಬೇಕು, ತಲುಪಿಯೇ ತೀರುತ್ತಾನೆ ಎನ್ನುವದು ಅವರ ಕಾಣ್ಕೆ. ಬೇಂದ್ರೆಯವರು ಅದನ್ನೇ ನವಮನುವಿನ ರೂಪಕದ ಮೂಲಕ ಹೇಳುತ್ತಿದ್ದಾರೆ.

ಶ್ರೀ ಅರವಿಂದರನ್ನು ಮಾನಸಿಕವಾಗಿ ತಮ್ಮ ಗುರುವಾಗಿ ಸ್ವೀಕರಿಸಿದ ಬೇಂದ್ರೆಯವರು, ಶಿಷ್ಯರ ಸಾಧನೆ ಹಾಗು ಗುರುವಿನ ಅನುಗ್ರಹವನ್ನು ‘ಹೃದಯಸಮುದ್ರ’ ಕವನದ ಮೂಲಕ ಚಿತ್ರಿಸಿದ್ದಾರೆ.

[ಬೇಂದ್ರೆಯವರ assimilation ಪ್ರತಿಭೆಯ ಒಂದು ಝಳಕನ್ನು ಈ ಕವನದಲ್ಲಿ ಸಹ ನೋಡಬಹುದು. ಬೇಂದ್ರೆಯವರು ಕನ್ನಡ, ಮರಾಠಿ, ಸಂಸ್ಕೃತ ಹಾಗು ಇಂಗ್ಲೀಶಿನಲ್ಲಿಯ ಪ್ರಾಚೀನ ಹಾಗು ಅರ್ವಾಚೀನ ಜ್ಞಾನವನ್ನು ಕುಡಿದವರು. ಕನ್ನಡದ ಜಾನಪದ ಸಂಪತ್ತನ್ನು ಅರಗಿಸಿಕೊಂಡವರು. ಇದೆಲ್ಲ ಅವರ ಪ್ರತಿಭೆಯ ಮೂಸೆಯಲ್ಲಿ ಅವರದೇ ಕವನವಾಗಿ ಬರುವದನ್ನು ‘ಅಂಬಿಗನು ಬಂದ, ನಂಬಿಗನು ಬಂದ ಬಂದsದ ದಿವ್ಯಗಳಿಗೆ’ ಎನ್ನುವ ಸಾಲಿನಲ್ಲಿ ನೋಡಬಹುದು. ಪುರಂದರದಾಸರ “ಅಂಬಿಗ, ನಾ ನಿನ್ನ ನಂಬಿದೆ; ಜಗದಂಬಾರಮಣ ನಿನ್ನ ನಂಬಿದೆ ” ಎನ್ನುವ ಸಾಲು ಬೇಂದ್ರೆಯವರ ಈ ಕವಿತೆಯಲ್ಲಿ ಅವರದೇ ಪಾಕವಾಗಿ ಬಂದಿದೆ.

ಇದರಂತೆ ಶೇಕ್ಸಪಿಯರನ ನಾಟಕವೊಂದರಲ್ಲಿಯ ಹಾಡೊಂದನ್ನು ಗಮನಿಸಿರಿ:
Under the greenwood tree
Who wants to lie with me
Here shall he see no enemy
But winter and rough weather.

ಈ ಹಾಡಿನ ಪ್ರಭಾವವನ್ನು ಬೇಂದ್ರೆಯವರ ಈ ಕವನದಲ್ಲಿ ಗುರುತಿಸಬಹುದು:
“ ಮಳೆ ಬರಲಿ, ಚಳಿ ಇರಲಿ, ಬಿಸಿಲು ಕುದಿಸುತಲಿರಲಿ, ಮಂಜು ಸುರಿಯುತಲಿರಲಿ,
ಮುಮ್ಮುಖದ ಋತಮಾನ ಹೇಗು ಇರಲಿ, ನಗುತ ಒಲಿವೆವು ನಾವು, ನಗುತ ಒಲಿಸುವೆವು.”

ಪಾಕಪ್ರವೀಣನೊಬ್ಬನು ಬೇರೆಯವರು ಉಪಯೋಗಿಸುವ ಪದಾರ್ಥಗಳನ್ನೇ ಉಪಯೋಗಿಸಿ, ಅಪೂರ್ವ ಅಡುಗೆಯನ್ನು ಸಿದ್ಧಪಡಿಸುತ್ತಾನೆ. ಇದರಂತೆ ಬೇಂದ್ರೆಯವರ ಪ್ರತಿಭಾ ಕೌಶಲ್ಯ.]

ಹಾಗಿದ್ದರೆ, ಬೇಂದ್ರೆಯವರ ಈ ಕವನ “ಹೃದಯಸಮುದ್ರ” ಎಷ್ಟರ ಮಟ್ಟಿಗೆ ಸಫಲವಾದ ಕವನವೆನ್ನಬಹುದು?
ಇದಕ್ಕೆ ಉತ್ತರ ಮಾತ್ರ ಆಶಾದಾಯಕವಿಲ್ಲ. “ಗಂಗಾವತರಣ” ಕವನಸಂಕಲನದ ಬಳಿಕ ಬಂದ ಬೇಂದ್ರೆಯವರ ಬಹುತೇಕ ಕವನಗಳು ಒಳಮುಖವಾದ ಕವನಗಳು. ಬೇಂದ್ರೆಯವರ ಮೊದಲಿನ ಕವನಗಳಿಗೂ, ನಂತರದ ಈ ಕವನಗಳಿಗೂ ಒಂದು ಪ್ರಮುಖ ವ್ಯತ್ಯಾಸವನ್ನು ಕಾಣಬಹುದು. ಅದನ್ನೊಂದು ರೂಪಕದ ಮುಖಾಂತರ ಸ್ಪಷ್ಟಪಡಿಸಿಕೊಳ್ಳೋಣ:

ಬೇಲೂರಿನ ಶಿಲ್ಪಕಲೆಯಲ್ಲಿ ಕುಸುರಿಕೆಲಸಕ್ಕೆ ಪ್ರಾಧಾನ್ಯ. ಬೇಂದ್ರೆಯವರ ಮೊದಲಿನ ಕಾವ್ಯವನ್ನು ಇಲ್ಲಿಯ ಶಿಲಾಬಾಲಿಕೆಯರ ಚೆಲುವಿಗೆ ಹೋಲಿಸಬಹುದು. ‘ಗಂಗಾವತರಣ’ದ ನಂತರದ ಅವರ ಕಾವ್ಯವನ್ನು ಗೊಮ್ಮಟೇಶ್ವರನಿಗೆ ಹೋಲಿಸಬಹುದು. ಭವ್ಯತೆಯೇ ಇಲ್ಲಿ ಪ್ರಾಧಾನ್ಯ ; ಕುಸುರಿ ಕೆಲಸವಲ್ಲ.
ಹಾಗಿದ್ದರೆ, ಬೇಂದ್ರೆಯವರ ಅನೇಕ ಅನುಭಾವದ ಕವನಗಳಲ್ಲಿ ಶ್ರವಣಬೆಳಗೊಳದ ಗೊಮ್ಮಟನ ಭವ್ಯತೆ ಬಂದಿದೆಯೇ?
Sorry, sir.
ಶ್ರವಣಬೆಳಗೊಳದ ಗೊಮ್ಮಟನ ಭವ್ಯತೆ ಹಾಗು ದೈವೀ ಪ್ರಸನ್ನ ಕಳೆಯು ಕಾರ್ಕಳ ಅಥವಾ ಧರ್ಮಸ್ಥಳದ ಗೊಮ್ಮಟರ ಶಿಲ್ಪದಲ್ಲಿ ಇಲ್ಲ. ಅದರಂತೆಯೇ ಬೇಂದ್ರೆಯವರ ಅನುಭಾವ ಕಾವ್ಯದಲ್ಲಿ ಸಹ ಈ ಕೊರತೆ ತೋರಿಬರುತ್ತದೆ.

“ಹೃದಯಸಮುದ್ರ” ಕವನದಲ್ಲಿ ಬೇಂದ್ರೆಯವರ patent ಎನ್ನಿಸುವ ಅನೇಕಾರ್ಥ ಪದಗಳಿವೆ. ಅವರ ಎಲ್ಲ ಕವನಗಳಲ್ಲಿರುವ ಕ್ರಮಬದ್ಧತೆ, ವಾಸ್ತವಿಕ ನಿರೂಪಣೆ ಇಲ್ಲಿಯೂ ಇದೆ. ಆದರೂ ಸಹ ಓದುಗನ ಹೃದಯಕ್ಕೆ ತಟ್ಟುವಂತೆ ಸಾಧಕನ ಮನಃಸ್ಥಿತಿಯನ್ನು ಬಿಂಬಿಸುವದರಲ್ಲಿ ಕವನ ಸೋತಿದೆ ಎನ್ನಬಹುದು.
ಕನ್ನಡದ ಬೇರೆ ಕೆಲವು ಗೀತೆಗಳು ಎಷ್ಟು ಸಮರ್ಥವಾಗಿ ಈ ಕಾರ್ಯವನ್ನು ಮಾಡಿವೆ ಎನ್ನುವದಕ್ಕೆ ಕೆಲವು ಉದಾಹರಣೆಗಳನ್ನು ಕೊಡಬಹುದು:

(೧) ಮಧುರಚೆನ್ನರು ಸಾಧಕನ ಹಂಬಲವನ್ನು ಹೀಗೆ ವರ್ಣಿಸುತ್ತಾರೆ:
“ ನಿಲ್ಲು ನಿಲ್ಲೆಲೆ ನವಿಲೆ, ನಿನ್ನ ಕಣ್ಣುಗಳೇಸು
ಕಣ್ಣ ಬಣ್ಣಗಳೇಸು ಎಣಿಸಲಾರೆ!
ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ,
ತಾಳಲಾರದು ಜೀವ, ಹೇಳಬಾರೆ!”

(೨) ಅಕ್ಕ ಮಹಾದೇವಿಯ ವಚನವಂತೂ ಪ್ರಸಿದ್ಧವಿದೆ.
ಈ ವಚನದಲ್ಲಿ ಸಾಕ್ಷಾತ್ಕಾರ ಪಡೆದ ಸಾಧಕನ ಚಿತ್ರವಿದೆ:
“ ಅಕ್ಕ ಕೇಳವ್ವ, ನಾನೊಂದ ಕನಸ ಕಂಡೆ
ಅಕ್ಕ ಅಡಕೆ ಓಲೆ ತೆಂಗಿನಕಾಯಿ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು……”

ಇದರ ಕಾರಣ ಸ್ಪಷ್ಟ. ಅನುಭಾವದ ಸಾಕ್ಷಾತ್ ಅನುಭವವಿಲ್ಲದೆ, ಅನುಭಾವ-ಕವನ ರಚಿಸಲಾಗದು. ಬೇಂದ್ರೆಯವರ ಮಾತಿನಲ್ಲಿಯೇ ಹೇಳುವದಾದರೆ:
“ ಕಟ್ಟೋರೆಲ್ಲ ಕವಿಗಳಲ್ಲಾ, ಹುಟ್ಟೋರೆಲ್ಲಾ ಭವಿಗಳಲ್ಲಾ,
ಕರು ಕೂಡ ಕಟ್ಟಿದ್ದುಂಟು, ಬಸವಣ್ಣನೂ ಹುಟ್ಟಿದ್ದುಂಟು.”

ಕನ್ನಡಕ್ಕೆ ಶ್ರೇಷ್ಠ ಕಾವ್ಯವನ್ನು ನೀಡಿದ ವರಕವಿಗಳು, ತಮ್ಮ ಕಾವ್ಯಜೀವನಕ್ಕೆ ತಿರುವು ಬಂದಾಗ, ಸಂಪೂರ್ಣವಾಗಿ ಸಫಲರಾಗಲಿಲ್ಲ. ಆದರೆ ಕನ್ನಡದ ಮತ್ತೊಬ್ಬ ಉದ್ದಾಮ ಕವಿಯಾದ ಗೋಪಾಲಕೃಷ್ಣ ಅಡಿಗರು ತಮ್ಮ ಕಾವ್ಯಜೀವನದ ಎಲ್ಲಾ ಘಟ್ಟಗಳಲ್ಲಿಯೂ ಸಫಲರಾದವರು.
Here I experience that there is no difference between philosopher and poet-Neelanjan

ಇಳಿದು ಬಾ ..........ತಾಯಿ ಇಳಿದು ಬಾ.............ಬೇಂದ್ರೆ


ಇಳಿದು ಬಾ ತಾಯಿ
ಇಳಿದು ಬಾ
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ
ನುಗ್ಗಿ ಬಾ
ಕಣ್ಣ ಕಣ ತೊಳಿಸಿ
ಉಸಿರ ಎಳೆ ಎಳಸಿ
ನುಡಿಯ ಸಸಿ ಮೊಳೆಸಿ
ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನೆಲಿಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ಹೊಲದಲ್ಲಿ ನೆಲಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ
ಮತ್ತೆ ಹೊಡೆಮರಳಿ ಹೊರಳಿ ಬಾ
ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ
ಕರೆಕರೆವ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ
ಶಿವಶುಭ್ರ ಕರುಣೆ
ಅತಿಕಿಂಚಿದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳು ಹೊಲ್ಲ ಬಾ
ಹೀಗೆ ಮಾಡದಿರು , ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ
ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಚ್ಚತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ
ಸಿರಿವಾರಿಜಾತ ವರಪಾರಿಜಾತ
ತಾರಾ-ಕುಸುಮದಿಂದೆ.

ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ
ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ?
ಅವತಾರವೆಂದೆ ಎಂದಾರೆ ತಾಯಿ, ಈ ಅಧ:ಪಾತವನ್ನೇ
ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್‌ದುಮ್ ಎಂದಂತೆ
ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ
ದುಡುಕಿ ಬಾ.

ಹರಣ ಹೊಸದಾಗೆ ಹೊಳೆದು ಬಾ
ಬಾಳು ಬೆಳಕಾಗೆ ಬೆಳೆದು ಬಾ
ಮೈ ತಳೆದು ಬಾ
ಕೈ ತೊಳೆದು ಬಾ
ಇಳೆಗಿಳಿದು ಬಾ ತಾಯೀ
ಇಳಿದು ಬಾ ತಾಯಿ
ಇಳಿದು ಬಾ.

ಶಂಭು-ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯದತ್ತನತ್ತೆ ಬಾ
ಇಳಿದು ಬಾ ತಾಯಿ
ಇಳಿದು ಬಾ.
……………………………………………………………………

ಗಂಗಾನದಿ ಹುಟ್ಟಿದ್ದು ಹರಿಯ ಪಾದಗಳಲ್ಲಿ. ಆದರೆ ‘ಗಂಗಾ’ ಎಂದೊಡನೆ ನಮಗೆಲ್ಲರಿಗೂ ನೆನಪಾಗುವದು ಶಿವ-ಜಟಾ-ಬಂಧನ. ಇದೊಂದು ರೋಮಾಂಚಕ ಪ್ರಸಂಗ. ಪ್ರಳಯದೇವಿಯಂತೆ ಧುಮ್ಮಿಕ್ಕುತ್ತಿರುವ ಗಂಗೆಯನ್ನು ಶಿವ ತನ್ನ ಜಟೆಯಲ್ಲಿ ಬಂಧಿಸಿ ಇಟ್ಟ ಬಳಿಕ, ಭಗೀರಥ ಶಿವನನ್ನು ಮತ್ತೆ ಪ್ರಾರ್ಥಿಸಿ ಅವಳನ್ನು ಬಿಡುಗಡೆಗೊಳಿಸುತ್ತಾನೆ.
ಅವಳು ಆರು ಚಿಕ್ಕ ಧಾರೆಗಳಲ್ಲಿ ಹರಿಯುತ್ತ ಮುಂದುವರೆಯುತ್ತಾಳೆ. ತನ್ನ ಕುಟೀರದತ್ತ ಧಾವಿಸುತ್ತಿರುವ ಈ ಗಂಗೆಯನ್ನು ಜಹ್ನು ಋಷಿ ಆಪೋಶನ ತೆಗೆದುಕೊಳ್ಳುತ್ತಾನೆ. ಭಗೀರಥ ಮತ್ತೆ ಪ್ರಾರ್ಥಿಸಿದ ಬಳಿಕ, ಆತ ಗಂಗಾನದಿಯನ್ನು ತನ್ನ ತೊಡೆಯ ಮೂಲಕ ಹೊರಬಿಡುತ್ತಾನೆ. ಹೀಗಾಗಿ ಗಂಗಾನದಿ ಜಹ್ನು ಋಷಿಯ ಮಗಳಾದಳು ; ‘ಜಾಹ್ನವಿ’ ಎನ್ನುವ ಹೆಸರು ಪಡೆದಳು.
ಸಕಲ ಜೀವಿಗಳಿಗೆ ಪೋಷಣೆ ಕೊಡುವ ಇವಳು ನಮ್ಮೆಲ್ಲರ ತಾಯಿ.
ಅಂತೆಯೇ ಬೇಂದ್ರೆಯವರು ಈ ಮಾತೃರೂಪಿಣಿಯನ್ನು ಧರೆಗಿಳಿಯಲು ಭಕ್ತಿಯಿಂದ ಪ್ರಾರ್ಥಿಸುತ್ತಾರೆ :

ಇಳಿದು ಬಾ ತಾಯಿ
ಇಳಿದು ಬಾ
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
………………………………………….
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

‘ಸುರನದಿಯಾದ ನೀನು ದೇವತೆಗಳ ಬಾಯಾರಿಕೆಯನ್ನೂ ತಣಿಸಿ ಬಾ’. ಎಂದು ಬೇಂದ್ರೆ ಗಂಗೆಯನ್ನು ಕೇಳಿಕೊಳ್ಳುತ್ತಾರೆ. ದೇವತೆಗಳಿಗೆಂತಹ ಬಾಯಾರಿಕೆ ಎನ್ನುವ ಸಂದೇಹ ನಮ್ಮಲ್ಲಿ ಮೂಡಬಹುದು. ಭಗವಚ್ಚಿಂತನೆಯೊಂದೇ ದೇವತೆಗಳಿಗಿರುವ ಬಾಯಾರಿಕೆ. ಹರಿಯ ಅಡಿಯಲ್ಲಿ ಜನಿಸಿದ ಗಂಗೆಯ ತೀರ್ಥವನ್ನು ಬಾಯಲ್ಲಿ ಹಾಕಿಕೊಂಡಾಗ, ದೇವತೆಗಳಲ್ಲಿರುವ ಭಗವಚ್ಚಿಂತನೆಯ ಬಾಯಾರಿಕೆಯು ತಣಿಯುವದು ಸಹಜವೇ. (ಮರಣಸಮಯದಲ್ಲಿ,ಗಂಗೋದಕವನ್ನು ಬಾಯಲ್ಲಿ ಹಾಕುವದು ಇದೇ ಕಾರಣಕ್ಕಾಗಿ ; ಮರಣಾಸನ್ನನಿಗೆ ಭಗವಂತನ ಸನ್ನಿಧಿಯು ದೊರೆಯಲು.)

ಸ್ವರ್ಗದಿಂದ ಕೆಳಗಿಳಿಯುತ್ತಿರುವಾಗ, ಈ ವ್ಯೋಮವ್ಯಾಪಿ ಗಂಗಾ ಅಷ್ಟದಿಕ್ಕುಗಳಿಗೆ ನೀರಿನ ಸೇಚನೆ ಮಾಡದಿರುವಳೆ? ಅದು ಮಳೆಯ ರೂಪದಲ್ಲೂ ಇರಬಹುದು. ಈ ಸೇಚನೆಯಿಂದಾಗಿ ಸಕಲ ಪ್ರಕೃತಿಯು ನೀರುಣ್ಣುವದು. ಬೇಂದ್ರೆಯವರು ಹೇಳುತ್ತಿರುವದು ಸಲಹೆ-ಸೂಚನೆ ಅಲ್ಲ. ಅದು ಗಂಗೆಯ ಕಾರ್ಯ, her mission. ಅದನ್ನೆ ಅವರು ‘ಚರಾಚರಗಳಿಗೆ ಉಣಿಸಿ ಬಾ’ ಎಂದು ಬಣ್ಣಿಸುತ್ತಿದ್ದಾರೆ.

ಸಕಲ ಚರಾಚರಗಳಲ್ಲಿ ಈ ಕವಿಯೂ ಇದ್ದಾರೆ. ಗಂಗೆಯ ದೈವಿಕತೆ ಇವರಿಗೆ ಗೊತ್ತು. ಅದಕ್ಕೇ ಇವರು ಧರೆಗಿಳಿಯುತ್ತಿರುವ ಈ ಗಂಗೆಯನ್ನು ಪೊಡಮಟ್ಟು ಅಂದರೆ ಸಾಷ್ಟಾಂಗ ನಮಸ್ಕಾರದೊಂದಿಗೆ ಬರಮಾಡಿಕೊಳ್ಳುತ್ತಾರೆ.
ಈ ಗಂಗೆಯನ್ನೇ ತಮ್ಮ ಉಡುಗೆಯನ್ನಾಗಿ ಮಾಡಿಕೊಳ್ಳಲು ಅವರು ಬಯಸುತ್ತಾರೆ. ಏನು ಹಾಗೆಂದರೆ?
ಓರ್ವ ಮನುಷ್ಯನ ಬೆಲೆಯನ್ನು ಕಟ್ಟುವದು ಅವನ ಉಡುಗೆಯಿಂದ. ಆದರೆ ಕವಿಗೆ ಇಂತಹ false dressing ಬೇಕಾಗಿಲ್ಲ. ಲೌಕಿಕದ ಈ ವಸ್ತ್ರವಿಲಾಸವನ್ನು ಬಿಸಾಕಿ, ಅವರು ಗಂಗೆಯಲ್ಲಿ ಮೀಯಬಯಸುತ್ತಾರೆ. ಪವಿತ್ರ ಗಂಗೆಯನ್ನೇ ತನ್ನ ಉಡುಗೆಯನ್ನಾಗಿ ಮಾಡಬಯಸುತ್ತಾರೆ.

ತನ್ನ ವ್ಯಕ್ತಿತ್ವವನ್ನು ಆವರಿಸುವ ಉಡುಗೆ ಶುದ್ಧವಾಗಿರಲಿ, ನಿಷ್ಕಲ್ಮಶವಾಗಿರಲಿ, ಪುಣ್ಯಕರವಾಗಿರಲಿ ಎನ್ನುವದು ಅವರ ಬಯಕೆ. ಯಾಕೆಂದರೆ ಇಂತಹ ನಿರ್ಮಲ ವ್ಯಕ್ತಿಯೇ ತಾನಾಗಲು ಅವರು ಬಯಸುತ್ತಾರೆ.
ಇದು ‘ಗಂಗಾಂಬರ’ವೆನ್ನುವ ‘ಪುಣ್ಯಾಂಬರ’ವನ್ನು ಉಟ್ಟುಕೊಳ್ಳಲು ಬಯಸುವ ಬೇಂದ್ರೆಯವರ ಒಳಮನದ ಹಾರೈಕೆ.
ಅದಕ್ಕೇ ಬೇಂದ್ರೆ ಹೇಳುತ್ತಾರೆ :

ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ

ಅವಳು ಉದಾರಳಾಗಿ ತನ್ನ ಮೇಲೆ ಸುರಿಯಲಿ, ಈ ಚರಾಚರ ಪ್ರಕೃತಿಯ ಯಾವುದೇ ಕಣವೂ ಅವಳಿಂದ deprive ಆಗದಿರಲಿ ಎನ್ನುವ ಉದ್ದೇಶದಿಂದ ಕವಿ ಹೇಳುತ್ತಾರೆ :

ಏಕೆ ಎಡೆತಡೆವೆ
ಸುರಿದು ಬಾ

ಕವಿ ಇರುವದು ಭೂಮಿಯ ಮೇಲೆ. ಆ ಸುರನದಿ ಗಂಗಾದೇವಿ ಭೂಮಿಗೆ ಬಂದಾಳೆ? ಕವಿಯನ್ನು oblige ಮಾಡಿಯಾಳೆ? ಹೀಗೆಂದು ಅವನೇನೂ ಸಂಶಯ ಪಡುತ್ತಿಲ್ಲ. ಆದರೂ ಸಹ ಮೇಲ್ಮಟ್ಟದಲ್ಲಿರುವ ಪುಣ್ಯಗಂಗೆಯನ್ನು ಕೆಳಮಟ್ಟದಲ್ಲಿರುವ ನಮ್ಮ ಉದ್ಧಾರಕ್ಕೆ ಇಳಿ ಎಂದು ಹೇಳಬೇಕಾದರೆ, implore ಮಾಡುವ ಅವಶ್ಯಕತೆ ಇದೆ, ಅಲ್ಲವೆ? ಅದಕ್ಕೆ ಕವಿ ಹೇಳುತ್ತಾರೆ :

ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

(ಸ್ವರ್ಗಲೋಕವನ್ನು ತೊರೆದ ಮೇಲೆ ಅವಳು ಬಯಲಲ್ಲಿ ಅಂದರೆ ಅವಕಾಶದಲ್ಲಿ ಜರೆಯ(=slip)ಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಅವಳ ಅವತರಣಕ್ಕೆ ಯಾವುದೇ ಘರ್ಷಣೆ ಇರುವದಿಲ್ಲ. ನೆಲವನ್ನು ತಲುಪಿದ ಬಳಿಕ ಅವಳು ಹರಿಯಬೇಕಾಗುತ್ತದೆ.
ಜರೆ ಎನ್ನುವ ಪದಕ್ಕೆ ನಿಂದಿಸು ಎನ್ನುವ ಅರ್ಥವೂ ಇದೆ. ಸ್ವರ್ಗವನ್ನೇ ತೊರೆದ ಗಂಗೆ, ಆಕಾಶದಲ್ಲಿ ನಿಂತಾಳೆಯೆ? ಧರೆಯೇ ಅವಳ ಗಮ್ಯ. ಆದುದರಿಂದ ಆಕಾಶವನ್ನು ಜರೆದು ಅಂದರೆ ತಿರಸ್ಕರಿಸಿ ಅವಳು ಭೂಮಿಗಿಳಿಯುವಳು ಎನ್ನುವ implication ಸಹ ಇಲ್ಲಿದೆ.)

ಇಲ್ಲಿಯವರೆಗೆ ಗಂಗಾದೇವಿಯನ್ನು ಭೌತಿಕರೂಪದಲ್ಲಿ, ಪ್ರವಾಹರೂಪದಲ್ಲಿ ಆಹ್ವಾನಿಸಿದ ಕವಿ, ಈಗ ಅವಳ ಅಂತರ್-ರೂಪವನ್ನು ನೋಡುತ್ತಿದ್ದಾನೆ. ಅವಳು ಜ್ಞಾನಗಂಗೆಯೂ ಹೌದು, ಆಧ್ಯಾತ್ಮಗಂಗೆಯೂ ಹೌದು. ಅವಳಿಂದಲೇ ತನ್ನ ಉದ್ಧಾರ ಆಗಬೇಕು. ಬ್ರಹ್ಮಾಂಡದಲ್ಲಿ ಇಳಿದ ಅವಳು ಈಗ ಈ ಪಿಂಡಾಂಡದಲ್ಲಿ ಇಳಿಯಬೇಕು:

ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ
ನುಗ್ಗಿ ಬಾ
ಕಣ್ಣ ಕಣ ತೊಳಿಸಿ
ಉಸಿರ ಎಳೆ ಎಳಸಿ
ನುಡಿಯ ಸಸಿ ಮೊಳೆಸಿ
ಹಿಗ್ಗಿ ಬಾ

ತಾಯೆ, ಗಂಗಾದೇವಿ, ನಿನ್ನ ಎದುರಿಗೆ ನಾನು ತಲೆಬಾಗಿ ನಿಂತಿದ್ದೇನೆ. ನನ್ನ ತಲೆಯೊಳಗೆ ಅಂದರೆ ನನ್ನ ಚಿತ್ತದೊಳಗೆ, ನನ್ನ ಬುದ್ಧಿಯೊಳಗೆ ಇಳಿದು ಶುದ್ಧಗೊಳಿಸು. ಮಸ್ತಕದಿಂದ ಕೆಳಗಿಳಿದು, ನನ್ನ ಬೆನ್ನಹುರಿಯಲ್ಲಿ ಹರಿದು, ನನ್ನ ಒಳ್ಳೆಯ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲು. ನನ್ನ ಒಳಗೆ, ನನ್ನ ಕೆಳಗೆ ಇಳಿ. ಅಂದರೆ ನನ್ನ basic urgesಗಳನ್ನು, ನನ್ನ primitive urgesಗಳನ್ನು ತೊಳೆದು ಹಾಕು. ನನ್ನಲ್ಲಿ ಆಧ್ಯಾತ್ಮಿಕ ಬಯಕೆಗಳೇ ಉದ್ದೀಪನವಾಗಲಿ. ನನ್ನ ಕಣ್ಣ ಕಣವನ್ನು ತೊಳೆ ಅಂದರೆ ನನ್ನ ನೋಟವನ್ನು ಸ್ವಚ್ಛಗೊಳಿಸು, ನನ್ನ ಒಳ ಉಸಿರನ್ನು ಎಳೆದು ಪ್ರಾಣಾಯಾಮದಲ್ಲಿ ವಿಲೀನಗೊಳಿಸು. ನನ್ನಲ್ಲಿ ನುಡಿಯ ಅಂದರೆ ಓಂಕಾರದ ಸಸಿಯನ್ನು ನೀರುಣ್ಣಿಸಿ ಮೊಳೆಯಿಸು.
(ನುಡಿಯ ಸಸಿ ಅಂದರೆ ಕಾವ್ಯಸಸಿ ಎನ್ನುವ ಅರ್ಥವೂ ಬರುತ್ತದೆ.)

ಬೇಂದ್ರೆ ಇಲ್ಲಿ ಯೋಗದ ಪರಿಭಾಷೆಯನ್ನು ಉಪಯೋಗಿಸಿಕೊಂಡಿದ್ದಾರೆ.
‘ನನ್ನ ತಲೆಯೊಳಗೆ ಅಂದರೆ ಸಹಸ್ರಾರ ಚಕ್ರದೊಳಗೆ ;
ನನ್ನ ಬೆಂಬಳಿಗೆ ಅಂದರೆ ಸಹಸ್ರಾರ ಹಾಗು ಇತರ ಆರು ಚಕ್ರಗಳಲ್ಲಿ ಹಾಯ್ದು ಹೋಗುವ ಸುಷುಮ್ನಾ ನಾಡಿಯೊಳಗೆ ;
ನನ್ನ ಒಳಕೆಳಗೆ ಅಂದರೆ ಮೂಲಾಧಾರ ಚಕ್ರದೊಳಗೆ ;
ದೇವಗಂಗೆಯೆ ಅಂದರೆ ಕುಂಡಲಿನಿ ಶಕ್ತಿಯೆ ನುಗ್ಗಿ ಬಾ’ ಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ.
(ಬ್ರಹ್ಮಾಂಡದಲ್ಲಿರುವ ಚೈತನ್ಯ ಹಾಗೂ ಪಿಂಡಾಂಡದಲ್ಲಿರುವ ಚೈತನ್ಯ ಎರಡೂ ಒಂದೇ. ಆದುದರಿಂದ ಸುರಗಂಗೆ ಹಾಗು ಕುಂಡಲಿನಿ ಬೇರೆ ಬೇರೆ ಅಲ್ಲ.)
‘ಹಿಗ್ಗಿ ಬಾ’ ಅಂದರೆ ‘ದೈವೀ ಆನಂದವನ್ನು ನೀಡುತ್ತ ಬಾ’ ಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ.


ಎದೆಯ ನೆಲೆಯಲ್ಲಿ ನೆಲಿಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ಹೊಲದಲ್ಲಿ ನೆಲಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಯೋಗದ ಭಾಷೆಯಲ್ಲಿ ಎದೆಯ ನೆಲೆ ಅಂದರೆ ಅನಾಹತ ಚಕ್ರ,
ಜೀವಜಲ ಅಂದರೆ ಮಣಿಪೂರ ಚಕ್ರ ಹಾಗೂ
ಮೂಲಹೊಲ ಅಂದರೆ ಮೂಲಾಧಾರ ಚಕ್ರ ಎನ್ನುವ ಅರ್ಥವಾಗುತ್ತದೆ.
ಹೃದಯದಲ್ಲಿ ರವಿ ಇರುತ್ತಾನೆ. ಆದುದರಿಂದ ಎದೆ ಅಂದರೆ ತೇಜ, ಜೀವಜಲ ಅಂದರೆ ಅಪ್, ಮೂಲಹೊಲ ಅಂದರೆ ಪೃಥ್ವಿ ;
ಆದುದರಿಂದ ಪಂಚಮಹಾಭೂತಗಳಲ್ಲಿಯ ಮೂರು ಮಹಾಭೂತಗಳಾದ ಪೃಥ್ವಿ, ಅಪ್ ಹಾಗೂ ತೇಜಗಳನ್ನು ಇಲ್ಲಿ ನಿರ್ದೇಶಿಸಿ, ಪಿಂಡಾಂಡದಲ್ಲಿರುವ ಈ ಮೂರು ಮಹಾಭೂತಗಳನ್ನು (ಹಾಗು by indirect implication ಎಲ್ಲ ಪಂಚಮಹಾಭೂತಗಳನ್ನು) ಶುದ್ಧೀಕರಿಸು ಎಂದು ಕವಿ ಬಿನ್ನವಿಸುತ್ತಾನೆ.
ಅಲ್ಲದೆ, ಎದೆಯ ನೆಲೆ ಎನ್ನುವದು ಕವಿಯ ವೈಯಕ್ತಿಕ ಆಕಾಂಕ್ಷೆಗಳನ್ನು, ಜೀವ ಜಲ ಎನ್ನುವದು ಕವಿಯ primaeval ಆಕಾಂಕ್ಷೆಗಳನ್ನು ಹಾಗೂ ಮೂಲ ಹೊಲ ಎನ್ನುವದು ಕವಿಯ basic ಆಕಾಂಕ್ಷೆಗಳನ್ನು ಸೂಚಿಸುತ್ತವೆ.

ಒಮ್ಮೆ ಧರೆಗಿಳಿದ ಗಂಗೆ ನಿರಂತರವಾಗಿ ಪ್ರವಹಿಸುತ್ತಿರಲು ಏನು ಮಾಡಬೇಕು? ಅವಳೇ ಮೋಡವಾಗಿ, ಆಕಾಶಕ್ಕೇರಿ, ಮತ್ತೆ ಮಳೆಯ ರೂಪದಲ್ಲಿ ಧರೆಗಿಳಿಯಬೇಕಲ್ಲವೆ?
ಕವಿ ಅದನ್ನು ಹೀಗೆ ಬಣ್ಣಿಸುತ್ತಾರೆ :

ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ
ಮತ್ತೆ ಹೊಡೆಮರಳಿ ಹೊರಳಿ ಬಾ

ಕಂಚುಮಿಂಚಾಗಿ ಕಾಣುವದು ಅಂದರೆ to appear suddenly in a flash. ಗಂಗಾದೇವಿ ಮತ್ತೆ ಮತ್ತೆ ಈ hydrological cycle ಮೂಲಕ ಧರೆಯ ಮೇಲಿರುವ ಚರಾಚರಗಳನ್ನು ತಣಿಸುತ್ತಿರಬೇಕು. ಅವಳ ಕರುಣೆಯಿಲ್ಲದೇ ಹೋದರೆ, ಈ ಭೂಜೀವಿಗಳು ದಯೆಯನ್ನು ಕಾಣದ ದೀನರಾಗುವರು, ಪ್ರಾಯದ ಚೈತನ್ಯವಿಲ್ಲದ ಹೀನರಾಗುವರು, ನೀರಿಲ್ಲದ ಮೀನಿನಂತಾಗುವರು.

ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ
ಕರೆಕರೆವ ಬಾ
ಇಳಿದು ಬಾ ತಾಯಿ
ಇಳಿದು ಬಾ.

(ಈ ಕವನರಚನೆಯನ್ನು ಮಾಡುವ ಸಮಯದಲ್ಲಿ ಬೇಂದ್ರೆಯವರು ಮಧ್ಯವಯಸ್ಕರಾಗಿದ್ದರು. ಆ ಕಾರಣಕ್ಕಾಗಿಯೇ ಅವರು ಹರೆಯಳಿದ ಹೀನ ಎಂದು ತಮ್ಮನ್ನು ಬಣ್ಣಿಸಿಕೊಳ್ಳುತ್ತಾರೆ. ಅಲ್ಲದೆ, ಆ ಅವಧಿಯಲ್ಲಿ ಭಾರತೀಯರೂ ಸಹ, ಶಕ್ತಿಹೀನರಾಗಿ, ದಯೆಯನ್ನು ಅಪೇಕ್ಷಿಸುವ ದೀನರಾಗಿ ತೋರುತ್ತಿದ್ದರು. )

ತಮ್ಮ ಮರುಕದ ಸ್ಥಿತಿಯನ್ನು ಬಣ್ಣಿಸಿದ ಕವಿ, ಗಂಗಾದೇವಿಯ ಮಮತೆಯ ಘನತೆಯನ್ನು ಬಣ್ಣಿಸುತ್ತಾರೆ.
ತಾಯಿಗೆ ತನ್ನ ಮಕ್ಕಳ ಬಗೆಗಿನ ಮಾತೃವಾತ್ಸಲ್ಯದ ಬಗೆಗೆ ಸಂದೇಹವೇ ಬೇಡ :

ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ

ತಾನು ಸಲಹುವ ಜೀವಿಗಳ ಪೋಷಣೆ ಮಾಡುವಲ್ಲಿ, ಗಂಗಾದೇವಿಯು ವಹಿಸುವ ಮೂರು ಹಂತಗಳನ್ನು ಬೇಂದ್ರೆ ಸೂಚಿಸಿದ್ದಾರೆ. ಮೊದಲನೆಯ ಹಂತದಲ್ಲಿ ಅವಳು ತನ್ನ ಕರುವನ್ನು ಕಂಡ ಗೋವಿನಂತೆ ಅಂತಃಕರಣ ಪೂರಿತಳಾಗುವಳು.
ಎರಡನೆಯ ಹಂತದಲ್ಲಿ ಮಗುವಿನ ಮನಸ್ಸನ್ನು ತಿಳಿದು ಮಗುವಿಗೆ ಮುದ್ದು ಮಾಡುವ ಮರುಳ ತಾಯಿ ಅವಳು. ಮೂರನೆಯ ಹಂತದಲ್ಲಿ ಅವಳು ಉದ್ದಂಡ ಅರುಳೆ ; ಅಂದರೆ ಸ್ವತಃ ಪೂರ್ಣ ಜ್ಞಾನವನ್ನು ಹೊಂದಿದ, ಮಗುವಿಗೆ ಶಿಕ್ಷೆ ಕೊಡುತ್ತಲೇ ಶಿಕ್ಷಣ ನೀಡಬಲ್ಲ ಶಿಕ್ಷಕಿ.
ಈ ದೇವಿಯನ್ನು ಬೇಂದ್ರೆ ‘ಸುಳಿ ಸುಳಿದು ಬಾ’, ಅಂದರೆ ದೂರ ಹೋಗದಿರು, ಸುತ್ತಲೇ ಸುತ್ತುತ್ತ ಇರು ಎಂದು ಬೇಡಿಕೊಳ್ಳುತ್ತಾರೆ.

ಈ ರೀತಿಯಾಗಿ ಜೀವಿಗಳ ಉದ್ಧಾರ ಮಾಡುವ ಕೃಪಾಭಾವ ಗಂಗಾದೇವಿಗೆ ಇರುವ ಕಾರಣವೇನು? ಇಲ್ಲಿ ಗಂಗಾದೇವಿಯ ಪಾರಮಾರ್ಥಿಕ ಸ್ವರೂಪವನ್ನು ಬೇಂದ್ರೆ ಬಣ್ಣಿಸುತ್ತಾರೆ. ಅವಳು ಸಾಕ್ಷಾತ್ ಶಿವನ ಶುಭ್ರ ಕರುಣಾಭಾವ.
ಈ ಏಕೈಕ ಕರುಣಾಭಾವದಲ್ಲಿ ಬೇರೆ ಭಾವಗಳು ಎಳ್ಳಷ್ಟೂ ಮಿಳಿತವಾಗಿಲ್ಲ. ಅವಳು ವಾತ್ಸಲ್ಯಭಾವದಿಂದ ಮಾತ್ರ ಆವರಿಸಲ್ಪಟ್ಟವಳು.(ವಾತ್ಸಲ್ಯವರಣೆ). ಆದುದರಿಂದಲೇ ಅವಳು ಜೀವಿಗಳ ಉದ್ಧಾರದಲ್ಲಿ ತಾರತಮ್ಯವಿಲ್ಲದೇ ಸದಾ ಮಗ್ನಳಾಗಿರುವವಳು.

ಶಿವಶುಭ್ರ ಕರುಣೆ
ಅತಿಕಿಂಚಿದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.

[ಹಾಗಿದ್ದರೆ ಈ ಶುಭ್ರಕರುಣೆಯು ಕಿಂಚಿತ್ ಅರುಣೆಯಾಗಿ ಕಾಣುವದೇಕೆ? ಈ ಅತಿ ಸ್ವಲ್ಪ ಕೆಂಪು tinge ಎಲ್ಲಿಂದ ಬಂದಿತು? ಅದಕ್ಕೆ ಉತ್ತರವು ಶ್ರೀ ಶಂಕರಾಚಾರ್ಯರ “ಸೌಂದರ್ಯಲಹರಿ” ಯಲ್ಲಿದೆ.

ಶಿವನು ಕೇವಲ ಆತ್ಮಸ್ವರೂಪನು ; ಅವನಲ್ಲಿ ಯಾವುದೇ ಗುಣಗಳಿಲ್ಲ. ಆದರೆ ಅವನ ಶಕ್ತಿಯು ಸಕಲಗುಣಗಳನ್ನು ಒಳಗೊಂಡ ಅರುಣರೂಪದವಳು. ಅವನ ಕರುಣಾಭಾವವೂ ಅವಳೇ. ಆದುದರಿಂದ ಅವನ ಕರುಣಾಭಾವವೂ ಸಹ ಕೆಂಪು tinge ಹೊಂದಿರುವಂತೆ ಭಾಸವಾಗುತ್ತದೆ.
“ಜಗತ್ತ್ರಾತುಂ ಶಂಭೋರ್ಜಯತಿ ಕರುಣಾ ಕಾಚಿದರುಣಾ”]

ಇಂತಹ ಗಂಗಾದೇವಿಯನ್ನು ಬಿಟ್ಟರೆ ತಮ್ಮ ಉದ್ಧಾರಕರು ಬೇರೆ ಯಾರೂ ಇಲ್ಲ ಎಂದು ಬೇಂದ್ರೆ ಆಕೆಗೆ ಹೇಳುತ್ತಾರೆ :

ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳು ಹೊಲ್ಲ ಬಾ
ಹೀಗೆ ಮಾಡದಿರು , ಅಲ್ಲ ಬಾ

ತನ್ನಲ್ಲಿಯೇ ಆಗಲಿ, ತನ್ನ ನಾಡಿನಲ್ಲಿಯೇ ಆಗಲಿ, ಕೊಳೆಯನ್ನು ತೊಳೆಯುವವರು ಯಾರೂ ಇಲ್ಲ. ಭೌತಿಕ ಕೊಳೆಯೇ ಆಗಲಿ, ಅಜ್ಞಾನದ ಕೊಳೆಯೇ ಆಗಲಿ ಅಥವಾ ನೈತಿಕ ಕೊಳೆಯೇ ಆಗಲಿ, ಇವೆಲ್ಲವನ್ನು ತೊಳೆಯಲು ಗಂಗಾದೇವಿಗೆ ಮಾತ್ರ ಸಾಧ್ಯ. ಬೇರೆ ಶಕ್ತಿಗಳಿಂದ ಅದು ಸಾಧ್ಯವಿಲ್ಲ. ಏಕೆಂದರೆ, ಇತರ ಶಕ್ತಿಗಳೆಂದರೆ ಮಾನವ ಶಕ್ತಿಗಳು, ಉದಾಹರಣೆಗೆ ಧನಶಕ್ತಿ. ಈ ಇತರ ಶಕ್ತಿಗಳು ‘ಹೊಲ್ಲ’ ಅಂದರೆ ಮಲಿನಗೊಂಡ ಶಕ್ತಿಗಳು. ಆದುದರಿಂದ ಈ ನಿನ್ನ ಕರ್ತವ್ಯವನ್ನು ಮಾಡದಿರುವದು ನಿನಗೆ ತಕ್ಕದ್ದಲ್ಲ.

ಇಲ್ಲಿಯವರೆಗೆ ಮಾನವನ ವೈಯಕ್ತಿಕ ಉದ್ಧಾರವನ್ನು ಕೋರಿದ ಕವಿ ಈಗ ನಾಡಿನ ಉದ್ಧಾರಕ್ಕಾಗಿ ಪ್ರಾರ್ಥಿಸುತ್ತಾರೆ.

ನಾಡಿ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ

ನಮ್ಮ ನಾಡಿನಾಡಿಯಲ್ಲಿ ನಿನ್ನ ತುತ್ತನ್ನು ನೀಡು, ನಮ್ಮ ನಾಡನ್ನೆಲ್ಲ ಸುತ್ತಿ ನೀರುಣ್ಣಿಸು ಹಾಗು ಸತ್ತ ಜನರನ್ನು ಮೇಲೆತ್ತು. ನಿನ್ನ ಕರುಣೆಯಿಂದ ಈ ನಾಡು ಮತ್ತೆ ಹಸಿರು ಹಸಿರಾಗಲಿ, ಜನರಲ್ಲಿ ಮತ್ತೆ ಜೀವ ತುಂಬಲಿ ಎಂದು ಬೇಂದ್ರೆಯವರು ಗಂಗಾದೇವಿಯನ್ನು ಪ್ರಾರ್ಥಿಸುತ್ತಾರೆ. ಆದುದರಿಂದ ಗಂಗಾದೇವಿ ಕೇವಲ ಹಿಮಾಲಯದಿಂದ ಹರಿದು ಬಂಗಾಲ ಉಪಸಾಗರವನ್ನು ಸೇರುತ್ತಿರುವ ನದಿಯಾಗಿ ಉಳಿಯದೆ, ಭಾರತದಲ್ಲೆಲ್ಲ ಹರಿಯುವ ಪ್ರವಾಹಗಳ ಪ್ರತಿನಿಧಿಯಾಗುತ್ತಾಳೆ.

(ಭಾರತದಲ್ಲಿ ಹರಿಯುವ ನದಿಗಳೆಲ್ಲ ಭಾರತೀಯರ ಪಾಲಿಗೆ ಪುಣ್ಯನದಿಗಳೇ. ಗುರುಗ್ರಹವು ಪ್ರತಿ ಹದಿಮೂರು ತಿಂಗಳಿಗೊಮ್ಮೆ ರಾಶ್ಯಂತರ ಮಾಡುವಾಗ, ಗಂಗೆಯೂ ಸಹ ಒಂದೊಂದು ನದಿಯಲ್ಲಿ ಸಮಾವೇಶಗೊಳ್ಳುತ್ತಾಳೆ ಎನ್ನುವದು ಭಾರತೀಯರ ನಂಬಿಕೆ. ಉದಾಹರಣೆಗೆ, ಗುರು ಕನ್ಯಾ ರಾಶಿಯಲ್ಲಿ ಪ್ರವೇಶಿಸಿದಾಗ, ಗಂಗಾದೇವಿಯು ಕೃಷ್ಣಾ ನದಿಯಲ್ಲಿ ಸಮಾವಿಷ್ಟಳಾಗಿರುತ್ತಾಳೆ. ಆದುದರಿಂದ, ಆ ಕಾಲದಲ್ಲಿ ಪಿತೃಗಳಿಗೆ ಪಿಂಡಪ್ರದಾನವನ್ನು
ಕೃಷ್ಣಾನದಿಯಲ್ಲಿ ಮಾಡುವದು, ಗಂಗಾನದಿಯಲ್ಲಿ ಮಾಡುವಷ್ಟೇ ಫಲದಾಯಕವಾದದ್ದು.)

ಇಂತಹ ಪುಣ್ಯನದಿಯಾದ ಗಂಗಾದೇವಿಯ ಮನಸ್ಸಿನ ರೂಪವೆಂತಹದು? ದೇವತೆಗಳ ಕನಸುಗಳ ಪ್ರತಿಬಿಂಬವು ಈ ಸುರನದಿಯಲ್ಲಿ ಬಿದ್ದಿತಂತೆ. ಆ ದಿವ್ಯಸ್ವಪ್ನದಿಂದ ಶುದ್ಧಜ್ಞಾನ ಪಡೆದ ನೀರೆ ಈ ಗಂಗಾದೇವಿ. ಅವಳೀಗ ಆಕಾಶದುದ್ದವನ್ನು ತುಂಬಿಕೊಂಡು ಧರೆಗಿಳಿಯಲಿದ್ದಾಳೆ.

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಚ್ಚತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ
ಸಿರಿವಾರಿಜಾತ ವರಪಾರಿಜಾತ
ತಾರಾ-ಕುಸುಮದಿಂದೆ.

ಸಿರಿವಾರಿ ಅಂದರೆ ಗಂಗಾದೇವಿ; ಅವಳ ನೀರುಂಡು ಬೆಳೆದದ್ದು ಪಾರಿಜಾತ ವೃಕ್ಷ. ಪಾರಿಜಾತದಲ್ಲಿ ಹುಟ್ಟಿದ ಹೂವುಗಳೇ ಆಕಾಶವನ್ನು ತುಂಬಿಕೊಂಡ ತಾರೆಗಳು. ಈ ತಾರೆಗಳ ಮಧ್ಯದಿಂದ ಕೆಳಗಿಳಿದು ಬರುತ್ತಿದ್ದಾಳೆ ಗಂಗಾದೇವಿ.
ಈ ರೀತಿಯಾಗಿ ಆಕಾಶದಿಂದ ಇಳಿಯುತ್ತಿರುವ ಗಂಗಾದೇವಿಯನ್ನು ಕವಿ ಭಕ್ತಿಯಿಂದ ವಂದಿಸುತ್ತಾರೆ:

ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ
ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ?
ಅವತಾರವೆಂದೆ ಎಂದಾರೆ ತಾಯಿ, ಈ ಅಧ:ಪಾತವನ್ನೇ.

ವೃಂದಾರವೆಂದರೆ ವೃಂದಾಹಾರ (=ತುಳಸಿಮಾಲೆ). ತುಳಸಿ ಭೂಮಿಯ ಮೇಲೆ ಬೆಳೆಯುವ ಪವಿತ್ರ ಸಸ್ಯ. ಮಂದಾರವೆಂದರೆ ಸ್ವರ್ಗದಲ್ಲಿ ಬೆಳೆಯುವ ವೃಕ್ಷ. ಗಂಗಾದೇವಿಯು ಭೂಮಿಯಲ್ಲಿ ಪವಿತ್ರಸಸ್ಯ ತುಳಸಿಯಿಂದ ಪೂಜಿಸಲ್ಪಡಬೇಕಾದವಳು. ಸ್ವರ್ಗದಲ್ಲಿ ಮಂದಾರಪುಷ್ಪಗಳಿಂದ ಪೂಜಿತಳಾಗಿ, ಆ ಸುವಾಸನೆಯನ್ನು ಹೊಂದಿದವಳು. ಈ ರೀತಿಯಾಗಿ ಭೂಮಿ ಹಾಗು ಸ್ವರ್ಗದಲ್ಲಿ ನೀನು ಪೂಜಿತಳಾಗಿದ್ದೀಯೆ. ಈ ಮಕ್ಕಳನ್ನು ವಾತ್ಸಲ್ಯದಿಂದ ಪೋಷಿಸಬೇಕಾದ ತಾಯಿ ಹಾಗು ತಂದೆ ನೀನೇ ಎಂದು ಕವಿ ಹೇಳುತ್ತಾನೆ.

ಇಂತಹ ಗಂಗಾದೇವಿಯನ್ನು ಕವಿ ಭಕ್ತಿಯಿಂದಲೇ ಆಹ್ವಾನಿಸುತ್ತಿದ್ದಾನೆ.
‘ನೀನು ಭಗವಂತಹ ಆನಂದರಸದಲ್ಲಿ ಜನಿಸಿದವಳು; ಆದುದರಿಂದ ನೀನು ಸತ್-ಚಿತ್-ಆನಂದ ಬ್ರಹ್ಮನ ಕನ್ಯೆ. ನಾವೂ ಸಹ ಆ ಸಚ್ಚಿದಾನಂದ ಬ್ರಹ್ಮನ ಸೃಷ್ಟಿಯೇ. ಆದುದರಿಂದ ನೀನು ನನಗೆ ಬೇರೆಯವಳಾಗಲು ಹೇಗೆ ಸಾಧ್ಯ?’
‘ಒಂದೇ ಒಂದು ಸಲ ನೀನು ಕೆಳಗಿಳಿದು ಬಾ. ನಿನ್ನನ್ನು ಕಾಣುತ್ತಿರುವ ನನ್ನ ಆನಂದದ ಅಶ್ರುಧಾರೆಯನ್ನು ತಡೆಯಬೇಡ’ ಎಂದು ಅವಳಿಗೆ implore ಮಾಡುತ್ತಾನೆ.

“ನೀನು ಕೆಳಗಿಳಿದು ಬಾ ತಾಯಿ, ಇದು ಅಧ:ಪತನವಲ್ಲ, ಇದು ಅಧ:ಪಾತ, ಇದು ಅವತರಣ” ಎಂದು ಬೇಂದ್ರೆ ಹೇಳುತ್ತಾರೆ. ಪತನವೆಂದರೆ ಅಧೋಗತಿಗೆ ಇಳಿಯುವದು. ಆದುದರಿಂದ ಧಬಧಬೆಗೆ ಜಲಪತನವೆನ್ನುವದಿಲ್ಲ, ಜಲಪಾತವೆನ್ನುತ್ತಾರೆ.
ಅದೇ ರೀತಿಯಾಗಿ ಗಂಗೆ ಧರೆಗಿಳಿಯುವದು ಗಂಗಾಪತನವಲ್ಲ ; ಇದು ಗಂಗಾಪಾತ, ಇದು ಗಂಗಾವತರಣ !

ಇಲ್ಲಿ ಮತ್ತೊಂದು ಹೆಚ್ಚುಗಾರಿಕೆ ಇದೆ.
ಭಗವಂತನು ಭಕ್ತರ ಉದ್ಧಾರಕ್ಕಾಗಿ ಒಂಬತ್ತು ಅವತಾರಗಳನ್ನು ಎತ್ತಿದ್ದಾನೆ ಎಂದು ಹೇಳುತ್ತಾರೆ.
ಈ ಯಾವ ಅವತಾರಗಳಲ್ಲಿಯೂ ಆತ ತನ್ನ ಸ್ವಸ್ವರೂಪವನ್ನು ತೋರಿಸಿಲ್ಲ. ಮತ್ಸ್ಯ, ಕೂರ್ಮ, ವರಾಹ….ರಾಮ, ಕೃಷ್ಣ ಮೊದಲಾದ ರೂಪಗಳನ್ನು ಧರಿಸಿದ್ದಾನೆ.
ಆದರೆ ಗಂಗಾದೇವಿ ತನ್ನ ಸ್ವಸ್ವರೂಪದಲ್ಲಿಯೇ ಧರೆಗಿಳಿದಿದ್ದಾಳೆ. ಆದುದರಿಂದ ಇದು ಬರಿಯ ಅವತಾರವಲ್ಲ ; ಇದು ಸ್ವಸ್ವರೂಪದ ಅವತರಣ ! ಇದು ಗಂಗಾವತರಣ !

ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್‌ದುಮ್ ಎಂದಂತೆ
ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ
ದುಡುಕಿ ಬಾ.

ಬೇಂದ್ರೆಯವರದು ಏನಾದರೂ ವೈಯಕ್ತಿಕ ಹರಕೆ ಇತ್ತೊ ಗೊತ್ತಿಲ್ಲ. ಆದರೆ ಭಗೀರಥನಿಗೆ ತನ್ನ ಪೂರ್ವಜರನ್ನು ಪ್ರೇತಲೋಕದಿಂದ ಬಿಡಿಸಬೇಕಾಗಿತ್ತು. ಗಂಗಾವತರಣದಿಂದ ಆ ಹರಕೆ ಪೂರ್ಣವಾಯಿತು. ಮತ್ತೊಮ್ಮೆ ಇದೀಗ ಗಂಗಾದೇವಿ ಮಮತಾಪೂರದಲ್ಲಿ ಮಿಂದವಳಂತೆ, ಮಹಾಪೂರದಲ್ಲಿ ಮೈ ತುಂಬಿಕೊಂಡು , ತಡ ಮಾಡದಂತೆ ದುಡುಕುತ್ತ(=recklessly) ಮುನ್ನುಗ್ಗಬೇಕು. ತನ್ನ ಕಂದನ್ನ ಹುಡುಕಿಕೊಂಡು ಹೋಗಬೇಕು. ಇದು ಅವಳ ವಾತ್ಸಲ್ಯದ ಕರ್ತವ್ಯ!

ಅವಳು ಹರಿದಲ್ಲೆಲ್ಲ ಚರಾಚರಗಳು ಹೊಸವಾಗುತ್ತವೆ, ಹಸಿರಾಗುತ್ತವೆ. ಜೀವಕ್ಕಂಟಿಕೊಂಡ ಕಲ್ಮಶಗಳೆಲ್ಲ ತೊಳೆದು ಹೋಗಿ, ಬಾಳಿನಲ್ಲಿ ಹೊಸ ಬೆಳಕು ಮೂಡುತ್ತದೆ. ಆದುದರಿಂದ ‘ತಾಯಿ, ಮೈ ತುಂಬಿಕೊಂಡು ಬಾ’ ಎಂದು ಬೇಂದ್ರೆ ಪ್ರಾರ್ಥಿಸುತ್ತಾರೆ:

ಹರಣ ಹೊಸದಾಗೆ ಹೊಳೆದು ಬಾ
ಬಾಳು ಬೆಳಕಾಗೆ ಬೆಳೆದು ಬಾ
ಮೈ ತಳೆದು ಬಾ
ಕೈ ತೊಳೆದು ಬಾ
ಇಳೆಗಿಳಿದು ಬಾ ತಾಯೀ
ಇಳಿದು ಬಾ ತಾಯಿ
ಇಳಿದು ಬಾ.

ಶಂಭು-ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯದತ್ತನತ್ತೆ ಬಾ
ಇಳಿದು ಬಾ ತಾಯಿ
ಇಳಿದು ಬಾ.

ಶಿವನು ಕೇವಲ ಸತ್-ರೂಪನು ; ಶಕ್ತಿ ಅವನ ಚಿತ್-ರೂಪಳು. (ಬೇಂದ್ರೆಯವರು ಗಂಗಾದೇವಿಯನ್ನೆ ಶಕ್ತಿರೂಪೆಯಾಗಿ ಗ್ರಹಿಸಿ ಬರೆದಿದ್ದಾರೆ). ಆದುದರಿಂದ ಗಂಗೆಗೆ ಅವರು ಶಿವನ ಚಿತ್ತೆ ಎಂದು ಕರೆಯುತ್ತಾರೆ.
ಗಂಗಾದೇವಿಯು ದತ್ತ ನರಹರಿಗೆ ಮುತ್ತಜ್ಜಿಯಾಗಬೇಕು.
ಇಂತಹ ಗಂಗಾದೇವಿಯು ಅಂಬಿಕಾತನಯದತ್ತನತ್ತ ಬರಲಿ ಎಂದು ಕವಿ ಪ್ರಾರ್ಥಿಸುತ್ತಾರೆ.

ಬೇಂದ್ರೆಯವರು ಗಂಗಾದೇವಿಯನ್ನು ತಾವೊಬ್ಬರೇ ಪ್ರಾರ್ಥಿಸುತ್ತಿರುವಂತೆ ಕವನವನ್ನು ರಚಿಸಿದ್ದರೂ ಸಹ ಇದು ನಮ್ಮ ನಾಡಿನ ಕರೆ. ನಮ್ಮ ನಾಡು ಸಮೃದ್ಧವಾಗಬೇಕು, ಈ ನಾಡವರೆಲ್ಲರೂ ಜ್ಞಾನಸಂಪನ್ನರಾಗಬೇಕು, ಪವಿತ್ರರಾಗಬೇಕು ಎನ್ನುವದು ಈ ಕವನದ ಭಾವನೆ.

ಕವನವು ಬೆಳೆದ ಬಗೆಯನ್ನು ಓದುಗರು ಗಮನಿಸಬೇಕು:
ಕವನದ ಮೊದಲ ನಾಲ್ಕು ನುಡಿಗಳಲ್ಲಿ ಗಂಗಾನದಿಗೆ ಪ್ರಾರ್ಥನೆ ಇದೆ. ನಂತರದ ಎರಡು ನುಡಿಗಳಲ್ಲಿ ಗಂಗೆಯ ಮಮತೆಯ ವರ್ಣನೆ, ಅವಳ ಶಕ್ತಿವರ್ಣನೆ ಇವೆ. ಮೂರನೆಯ ನುಡಿಯಲ್ಲಿ ಅವಳ ದೈವತ್ವದ ವರ್ಣನೆ ಇದೆ. ಕೊನೆಯ ಎರಡು ನುಡಿಗಳಲ್ಲಿ ಗಂಗಾವತರಣದಿಂದ ಈ ಪ್ರಕೃತಿ ಹೊಸ ಜೀವದಿಂದ ತುಂಬಿಕೊಳ್ಳುವದೆನ್ನುವ ಭರವಸೆ ಇದೆ.
It is another face and mightiness of Bhendre poetic style-Neelanjan

ಏಲಾವನ ಲವಲೀಬನ ಲವಂಗ ಬನಗಳಲಿs------ಬೇಂದ್ರೆ

ಏಲಾವನ ಲವಲೀಬನ ಲವಂಗ ಬನಗಳಲಿs
ನಾಗಲತಾ ಸಂಕುಲ ಬನವಾಸಿಯ ಜನಗಳಲಿsss
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿss | ಏಲಾವನ

ಏಲಾಪದ ಲೀಲಾಪದ ಆಲಾಪದ ಸರಣಿs
ಸಖಸಖಿಯರ ಮೇಳಾಪದೆ ತೆರೆದಿರೆ ಎದೆ ಭರಣಿs
ಆಲಿಸುತಿವೆ ಮಾಲಿಸುತಿವೆ ಹರಿಣದ ಜತೆ ಹರಿಣಿs | ಏಲಾವನ

ಙಂ ಞಣನಮಾ, ಅಂ ಜ್ಞ ಓಂ, ಜಂ ಸಂ ಶಂ ಎಂಬಾ
ಅಂಬಾಗರೆವುದು ವಾಣಿಯ ವೀಣೆಯು ಬಾಯ್ತುಂಬಾ
ಬಾ ಅಮ್ಮಾ ಅಮ್ಮಾ ಬಾ ಬಾರೇ ಜಗದಂಬಾ. | ಏಲಾವನ

ಉಸಿರುಸಿರಲಿ ಸರಿವರಿದೂ ಊದೂದುತ ನಲಿದು
ದನಿಯೆ ನದಿಯೊಲು ಚಲಿಸಿತು ಕೊಂಕೊಂಕೆನೆ ಒಲೆದು
ಅಲೆಯಾಯಿತು ಬಲೆಯಾಯಿತು ಜಗದಗಲಕೆ ಸೆಲೆದು. | ಏಲಾವನ

ಕಿನ್ನರಕಿನ್ನರಿ ಮಿಥುನವು ಅರೆಅರೆ ಮೈಗೂಡಿ
ನುಡಿಯಲಿ ಹುದುಗಿದ ಹುರುಳೊಳು ಹದುಳದೊಳೊಡಮೂಡಿ
ನಾಲಿಗೆ ನಾಡಿಯನಾಡಿಸಿ ಸ್ವರಮೂರ್ತಿಯ ಮಾಡಿ. | ಏಲಾವನ

ನರಗಳಲಿಂಗಿಂಗೀ ನರನಾಳದೆ ತಂಗಿs
ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss
ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss. | ಏಲಾವನ

ನೆಲೆಗೆಡಿಸುವ ವಾಸನೆಗಳ ಎದೆಬೀಜವ ಸೀಳಿ
ರತಿರಮಣನ ನಿಜಜನಕನ ಎದೆಯಾಳವನಾಳಿ
ಹೃದಯಾಕೂತಿಯ ಅನುಪಮ ಲಾವಣ್ಯವ ತಾಳಿ. | ಏಲಾವನ

ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು
ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು
ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. | ಏಲಾವನ

ಯಾಳದ ಜತಿ, ಏಳೆಯ ಗತಿ ಏಳೇಳೇಳೆಂದು
ಎಬ್ಬಿಸಿ, ಮಬ್ಬನು ಚೆದರಿಸಿ ಬಾಳ್ ಬಾಳ್ ಬಾಳೆಂದು
ತಂತಿಯ ತಾಳಕೆ ಮಿಡಿದಿರೆ, ಎಲ್ಲಾಯಿತು ಒಂದು. | ಏಲಾವನ

ಏಳೆಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರ
ದನಿ ಪಡೆದಿತು, ತಿಳಿದೆದ್ದಿತು ಕಣ್ಬಡೆದು ವಿಚಿತ್ರ
ಆಕ್ಷಣವನು ಈಕ್ಷಣವನು ಮಾಡಿತು ಸುಪವಿತ್ರ. | ಏಲಾವನ
……………………………………………………..
…………………………………………………….
ಕಾವ್ಯೋದ್ಯೋಗವು ಅನೇಕ ಕವಿಗಳಿಗೆ ಶಬ್ದ-ಯೋಗ ; ಆದರೆ ಬೇಂದ್ರೆಯವರಿಗೆ ಅದು ನಾದ-ಯೋಗ. ನವ್ಯಕವಿಗಳಿಗಂತೂ ಅದು ಒಂದು intellectual exercise. ಶ್ರೀ ಏ.ಕೆ ರಾಮಾನುಜನ್ ಅವರು ಬರೆದ ಕವಿತೆಯ ಈ ಸಾಲುಗಳು ಇಂತಹ ಧೋರಣೆಗೆ ಒಳ್ಳೆಯ ಉದಾಹರಣೆ ಆಗಿವೆ:

“ಕವಿತೆ ಬರೆಯುವದು ಕಷ್ಟವೆ, ಸ್ವಾಮಿ?
ಬರೆಯದಿರುವದೆ ಕಷ್ಟ.”

ಕವಿತೆ ಇವರಿಗೆ ಕೇವಲ ’ಬರೆಯುವ’ ವಸ್ತುವಾಗಿದೆ. ಬೇಂದ್ರೆಯವರ ಮನಸ್ಸಿನಲ್ಲಿ ಕವನವು ಬಹುತೇಕವಾಗಿ ನಾದರೂಪದಿಂದ ಮೂಡುತ್ತಿತ್ತು ಎನ್ನುವ ಮಾತನ್ನು ಅವರು ತಮ್ಮ ಅನೇಕ ಕವನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ ’ಗಂಗಾವತರಣ’ ಕವನಸಂಕಲನದಲ್ಲಿಯ ’ “ಗಾಳಿಗಡಲಿನಲ್ಲಿ” ಕವನದ ಮೊದಲ ನುಡಿಯನ್ನು ನೋಡಿರಿ:

“ಗಾಳಿಗಡಲಿನಲ್ಲಿ ತೇಲಿ ಬರುತಲಿಹವು ನಾದಾ
ಭಂಡವಾಳದಂತೆ ತುಂಬಿ ವಿವಿಧ ಭಾವ ಮೋದಾ
ಯಾವ ಗೆಳೆಯ ಗುರುವಿನಿಂದ ಬಂದಿತೋ ಪ್ರಸಾದಾ
ಎನುವೆ ಹೈ ಹಸಾದಾ ||”

ಅಥವಾ ಅದೇ ಕವನಸಂಕಲನದ “ಕಣ್ಣ ಕಾಣಿಕೆ” ಕವನದ ಮೊದಲ ನುಡಿಯನ್ನು ನೋಡಿರಿ:

“ ಅಂತರಂಗದಾ ಮೃದಂಗ ಅಂತು ತೋಂ ತನಾನಾ |
ಚಿತ್ತ ತಾಳ ಬಾರಿಸುತ್ತಲಿತ್ತು ಝಂಝಣಾಣಾ |
ನೆನವು ತಂತಿ ಮೀಟುತಿತ್ತು ತಂತನನ ತಾನಾ ||
ಅಂತರಂಗದಾ……..”

‘ಏಲಾಗೀತ ’ ಸಹ ಕಾವ್ಯ-ಸೃಷ್ಟಿಯನ್ನು ವರ್ಣಿಸುವ ಒಂದು ಅದ್ಭುತವಾದ ಕವನ. ಕವನ ಪ್ರಾರಂಭವಾಗುವದು ಬನವಾಸಿಯ ವರ್ಣನೆಯಿಂದ. ಈ ಕವನಕ್ಕೆ ಬನವಾಸಿಯದೇನು relevance ಎನ್ನುವ ಪ್ರಶ್ನೆ ಬರಬಹುದು. ‘ಏಲಾಗೀತ’ವು ಎಲ್ಲಿಯೋ ಹುಟ್ಟುವಂತಹ ಕವನವಲ್ಲ. ಈ ಗೀತೆಗೆ ಮನೋಹರವಾದ ನಿಸರ್ಗ ಹಾಗು ಅಷ್ಟೇ ಧೀಮಂತರಾದ ಜನರು ಬೇಕು. ಇವರು ವನವಾಸಿ ಜನರು ಅನ್ನುವ ಒಂದು ಅರ್ಥಸಾಧ್ಯತೆ ಇದೆ. ಆದರೆ ಎಲೆ, ಲವಂಗ ಮೊದಲಾದ ಪದಾರ್ಥಗಳು ಬೆಳೆಯುವ ದೇಶವೆಂದರೆ ಘಟ್ಟದ ಪ್ರದೇಶವಾದ ಬನವಾಸಿ ಹಾಗು ನಮ್ಮ ಬನವಾಸಿಯಲ್ಲಿರುವ ಜನರು ಸಂಸ್ಕಾರಸಂಪನ್ನರೆಂದು ಕನ್ನಡದ ಆದಿಕವಿ ಪಂಪ ಪ್ರಮಾಣಪತ್ರವನ್ನೆ ಕೊಟ್ಟಿದ್ದಾನೆ.

“ಚಾಗದ ಭೋಗದಕ್ಕರದ ಗೇಯದ ಗೊಟ್ಟಿ
ಯಲಂಪಿನಿಂಪಿಗಳ್ಗಾರವಾದ ಮಾನಸರೆ ಮಾನಸರ್
…………………………..
……………………………
ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ
ಪುಟ್ಟುವದು ನಂದನದೊಳ್ ಬನವಾಸಿ ದೇಶದೊಳ್”
…………………………………………….
…………………………………………..
‘ಏಲಾಗೀತ’ ಕವನದ ಮೊದಲನೆಯ ನುಡಿಯನ್ನು ನೋಡಿರಿ:

“ಏಲಾವನ ಲವಲೀಬನ ಲವಂಗ ಬನಗಳಲಿs
ನಾಗಲತಾ ಸಂಕುಲ ಬನವಾಸಿಯ ಜನಗಳಲಿsss
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿss | ಏಲಾವನ”

ಏಲಾ ಇದು ವಿರಳವಾಗಿ ದೊರೆಯುವ ಒಂದು ಆಯುರ್ವೇದೀಯ ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು: mimosa octandra. ಸಂಸ್ಕೃತದಲ್ಲಿ ಇದಕ್ಕೆ ‘ರಸ್ನಾ’ ಎಂದೂ ಅನ್ನುತ್ತಾರೆ. ಇದರ ಇತರ ಭಾರತೀಯ ಹೆಸರುಗಳು ವಲ್ಲಗ ಹಾಗೂ ಬದರಾ. ಲವಲೀವನ ಅಂದರೆ ಅರೆನೆಲ್ಲಿಯ ವನ; ಲವಂಗವಂತೂ ನಮಗೆಲ್ಲರಿಗೂ ಗೊತ್ತಿದ್ದದ್ದೆ. ನಾಗಲತೆ ಅಂದರೆ ಒಂದು ಜಾತಿಯ ವೀಳ್ಯದೆಲೆ.

ಇಂತಹ ಸಸ್ಯಗಳಿಂದ ತುಂಬಿರುವ ಬನವಾಸಿಯ ತೋಟಗಳಲ್ಲಿ ಹೆಣ್ಣು ಮಕ್ಕಳು ಉಯ್ಯಾಲೆಗಳಲ್ಲಿ (=ದೋಲಾ) ನಿರಾಯಾಸ ಕ್ರಮದಲ್ಲಿ (=ಲೀಲಾಂದೋಲಿತ), ತಮ್ಮನ್ನು ತೂಗಿಕೊಳ್ಳುತ್ತ, ಗೆಳೆಯ ಗೆಳೆತಿಯರ ಜೊತೆಗೆ ಹಾಡುತ್ತ ಕಾಲ ಕಳೆಯುವರು. ಗೆಳೆಯ- ಗೆಳತಿಯರ ಗೀತಾಲಾಪನೆಯ ವರ್ಣನೆ ಈ ಮುಂದಿನ ನುಡಿಯಲ್ಲಿದೆ:

“ಏಲಾಪದ ಲೀಲಾಪದ ಆಲಾಪದ ಸರಣಿs
ಸಖಸಖಿಯರ ಮೇಳಾಪದೆ ತೆರೆದಿರೆ ಎದೆ ಭರಣಿs
ಆಲಿಸುತಿವೆ ಮಾಲಿಸುತಿವೆ ಹರಿಣದ ಜತೆ ಹರಿಣಿs | ಏಲಾವನ ”

ಸಖ ಸಖಿಯರು ಜೊತೆಗೂಡಿ (=ಮೇಳಾಪಿಸಿ), ಪರಸ್ಪರ ಸ್ನೇಹದಲ್ಲಿ ಅವರು ಮುಕ್ತಮನಸ್ಕರಾದಾಗ (=ತೆರೆದಿರೆ ಎದೆ ಭರಣಿ), ಹಾಡುವ ಗೀತೆಗಳನ್ನು ಗಂಡು ಹಾಗು ಹೆಣ್ಣು ಚಿಗರೆಗಳು ಆಲಿಸುತ್ತ ಹಾಗು ಪರಸ್ಪರರನ್ನು ತಿಕ್ಕುತ್ತ (ಮಾಲಿಸು=bend), ಆನಂದಭರಿತವಾಗಿ ನಿಂತುಕೊಂಡಿವೆ. ಅಂದರೆ ತೋಟಗಳಲ್ಲಿ ಗೆಳೆಯ ಗೆಳತಿಯರು ತೂಗಿಕೊಳ್ಳುತ್ತ ಗೀತೆಗಳನ್ನು ಹಾಡುತ್ತಿದ್ದರೆ, ಮೃಗಗಳೂ ಸಹ ಈ ಗೀತೆಗಳನ್ನು ಕೇಳುತ್ತಿವೆ. ಅಷ್ಟು ಸಮ್ಮೋಹಕವಾದ ಗಾಯನವಿದು. ಅಂತಹ ಯಾವ ಗೀತೆ ಅಥವಾ ಸಂಗೀತವಿರಬಹುದು ಇದು ಎನ್ನುವ ಪ್ರಶ್ನೆಗೆ ಉತ್ತರ ಈ ನುಡಿಯ ಮೊದಲ ಸಾಲಿನಲ್ಲಿಯೇ ಇದೆ: “ಏಲಾಪದ ಲೀಲಾಪದ ಆಲಾಪದ ಸರಣಿs”

ಈ ’ಏಲಾಪದ’ ಅಂದರೆ ಏನು? ಏಲಾಪದ= ಏಲಾ+ಪದ. ಕನ್ನಡದಲ್ಲಿ ಏಲಾ ಅನ್ನುವ ತ್ರಿಪದಿ ವರ್ಗದ ಒಂದು ಛಂದಸ್ಸಿದೆ. ಆ ಛಂದಸ್ಸಿನ, ತ್ರಿಪದಿವರ್ಗದ ಗೀತೆಗಳನ್ನು ಸಹಜ ಸರಳತೆಯಿಂದ (=ಲೀಲಾ-ಪದ) ಇವರು ಆಲಾಪಿಸುತ್ತಿದ್ದಾರೆ. ಗೀತೆಗಳು ಸಹಜವಾಗಿ ನಿರಾಯಾಸವಾಗಿ ಬರುತ್ತಿರುವದರಿಂದ ಅವು ಲೀಲಾ-ಪದಗಳ ಸರಣಿಯಾಗಿವೆ.


“ ಕಿನ್ನರಕಿನ್ನರಿ ಮಿಥುನವು ಅರೆಅರೆ ಮೈಗೂಡಿ
ನುಡಿಯಲಿ ಹುದುಗಿದ ಹುರುಳೊಳು ಹದುಳದೊಳೊಡಮೂಡಿ
ನಾಲಿಗೆ ನಾಡಿಯನಾಡಿಸಿ ಸ್ವರಮೂರ್ತಿಯ ಮಾಡಿ. | ಏಲಾವನ”

ಬೇಂದ್ರೆಯವರು ಇಲ್ಲಿ ಮತ್ತೊಂದು ವಿಷಯವನ್ನು ಈಗ ಸೇರಿಸಿದ್ದಾರೆ. ಸ್ವರಮೂರ್ತಿಯಂದರೆ ಒಂದು ಶರೀರ ತಾನೆ? ಈ ಶರೀರಕ್ಕೆ ಹಾಗು ಅದರ ಜೀವಕ್ಕೆ (= ಹುರುಳಿಗೆ =ಅರ್ಥಕ್ಕೆ) ಇರುವದು ಅನ್ಯೋನ್ಯ ಸಂಬಂಧ. ಅದು ಬಹು ಚೆನ್ನಾಗಿ (=ಹದುಳದೊಳು) ಅಭಿವ್ಯಕ್ತವಾಗುತ್ತಿದೆ (=ಒಡಮೂಡಿ). ಇಲ್ಲಿ ಕವಿ ಕಾಳಿದಾಸನ ವಿಖ್ಯಾತ ಲಕ್ಷಣಕಾವ್ಯವನ್ನು ಬೇಂದ್ರೆ ಕನ್ನಡಿಸಿ ಬಳಸಿಕೊಂಡಿದ್ದಾರೆ:

“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೆ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ”.

ಈ ಶ್ಲೋಕದಲ್ಲಿರುವ “ವಾಗರ್ಥಾವಿವ ಸಂಪೃಕ್ತೌ” ಇದು “ನುಡಿಯಲಿ ಹುದುಗಿದ ಹುರುಳು” ಆಗಿದೆ.

ನಾಲಿಗೆಯ ನಾಡಿಯಲ್ಲಿ ಹುಟ್ಟಿದ ಈ ಸ್ವರವು ನರನರಗಳಲಿ ಪೂರ್ಣವಾಗಿ ಇಂಗಿ, ನರಗಳ ನಾಳದಲ್ಲಿ ಸ್ಥಾಯಿಯಾಗುವದೆಂದು (=ತಂಗು) ಬೇಂದ್ರೆ ಮುಂದಿನ ನುಡಿಯಲ್ಲಿ ಹೇಳುತ್ತಾರೆ:

“ ನರಗಳಲಿಂಗಿಂಗೀ ನರನಾಳದೆ ತಂಗಿs
ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss
ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss. | ಏಲಾವನ ”

ಈ ಸ್ವರವು ನಾಡಿಗಳಲ್ಲಿ ಸಂಚರಿಸುವ ಭಂಗಿಯು ಹೇಗಿದೆಯೆಂದರೆ:
“ಲಾಸ್ಯದಿ ಹಾಸ್ಯವ ಮಿಂಚಿಸಿ ಪರಶಿವನರ್ಧಾಂಗಿss
ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿss.”

ಪರಶಿವನ ನೃತ್ಯಕ್ಕೆ ’ತಾಂಡವ ನೃತ್ಯ’ ಎನ್ನುತ್ತಾರೆ. ಪಾರ್ವತಿಯದು ‘ಲಾಸ್ಯ ನೃತ್ಯ’, ಅಂದರೆ ಸುಕೋಮಲ ನೃತ್ಯ. ಈ ಲಾಸ್ಯದಲ್ಲಿ ಹಾಸ್ಯವನ್ನು ಅಂದರೆ ಆಹ್ಲಾದದ ನಗುವನ್ನು ಮಿಂಚಿಸಿದಂತೆ ಹಾಗು ಕಾಲವೇ ತಾಲವನ್ನು ಹಾಕುತ್ತಿರುವಂತೆ ( ಸೊಲ್ಲಿಸು=ಧ್ವನಿಗೈಯು), ಈ ಸ್ವರಸಂಚಾರದಿಂದ ಭಾಸವಾಗುತ್ತಿದೆ.

ಇಂತಹ ದೈವಿಕ ಸಂಗೀತದ ಸ್ವರಸಂಚಾರದ ಪರಿಣಾಮವನ್ನು ಹೇಳಬೇಕಷ್ಟೆ. ಅದು ಮುಂದಿನ ನುಡಿಯಲ್ಲಿದೆ:

“ ನೆಲೆಗೆಡಿಸುವ ವಾಸನೆಗಳ ಎದೆಬೀಜವ ಸೀಳಿ
ರತಿರಮಣನ ನಿಜಜನಕನ ಎದೆಯಾಳವನಾಳಿ
ಹೃದಯಾಕೂತಿಯ ಅನುಪಮ ಲಾವಣ್ಯವ ತಾಳಿ. | ಏಲಾವನ ”

ನೆಲೆಯನ್ನು ಅಂದರೆ ಮನುಷ್ಯನ ಅಂತರಂಗವನ್ನು ಕೆಡಿಸುವಂತಹ ವಾಸನೆಗಳ (=ಕಾಮ, ಕ್ರೋಧ ಇತ್ಯಾದಿ) ಹುಟ್ಟನ್ನು ಸೀಳಿ ಒಗೆಯುವದು ಈ ದೈವಿ ಸಂಗೀತದ ಮೊದಲ ಪರಿಣಾಮ. ಅದರ ನಂತರ, ರತಿರಮಣನ ಅಂದರೆ ಕಾಮದೇವನ ತಂದೆಯಾದ ವಿಷ್ಣುವಿನ (=ನಿಜಜನಕನ) ಎದೆಯ ಆಳವನ್ನು ಆಳುವದು ಅಂದರೆ ಆ ವಿಶ್ವಚೈತನ್ಯನಲ್ಲಿ ಭಕ್ತಿಯನ್ನು ಹುಟ್ಟಿಸುವದು ಇದರ ಮುಂದಿನ ಪರಿಣಾಮ. ಇದು ಸಾಧಿಸಿದಾಗ ಹೃದಯಾಕೂತಿಯು ಅನುಪಮ ಲಾವಣ್ಯವನ್ನು ತಾಳುವದು. ಆಕೂತಿ ಎಂದರೆ ಉದ್ದೇಶ. ಹೃದಯಾಕೂತಿ ಎಂದರೆ ಅಂತರಂಗದ ಹಂಬಲ. ಋಗ್ವೇದದಲ್ಲಿ ಈ ರೀತಿಯಾಗಿ ಹೇಳಲಾಗಿದೆ:

“ ಸಮಾನೀವ ಆಕೂತಿ ಸಮಾನಾ ಹೃದಯಾನಿವ” (=ನಿಮ್ಮ ಉದ್ದೇಶಗಳು ಒಂದೇ ಆಗಿರಲಿ, ನಿಮ್ಮ ಮನಸ್ಸು ಒಂದುಗೂಡಿರಲಿ).

‘ಆಕೂತಿ’ ಪದಕ್ಕೆ ಮತ್ತೂ ಒಂದು ಅರ್ಥವಿದೆ:
ಆಕೂತಿ ಇವಳು ಸ್ವಯಂಭೂ ಮನು ಹಾಗು ಶತರೂಪಾ ಇವರ ಮಗಳು; ರುಚಿಪ್ರಜಾಪತಿಯನ್ನು ಮದುವೆಯಾದವಳು. ಇವರೆಲ್ಲ ದೇವರಿಂದ ಆದಿಷ್ಟರಾಗಿ ಪ್ರಜೋತ್ಪತ್ತಿಯನ್ನು ಮಾಡುವವರು ತಾನೆ? ಆ ಪ್ರಕಾರವಾಗಿ ಈ ಸಂಗೀತವೂ ಸಹ ದೇವೋದ್ದೇಶಕ್ಕಾಗಿ ಅನುಪಮ ಲಾವಣ್ಯವನ್ನು ತಳೆದಿದೆ.

ಸೂಕ್ಷ್ಮ ಶರೀರದಲ್ಲಿರುವ ಈ ಸುಮಧುರ ನಾದ ಹೊರಬರಬೇಕಲ್ಲವೆ? (ಅನಾಹತ ಚಕ್ರದಲ್ಲಿರುವದು ಪರಾ ನಾದ. ಅದು ಪಶ್ಯಂತಿಯಾಗಿ ಬದಲಾಗಿ, ಕೊನೆಗೆ ವೈಖರೀ ರೂಪದಲ್ಲಿ ಹೊರಬರುವದು.) ಅದನ್ನು ಹೇಗೆ ಸಾವಧಾನವಾಗಿ ಹೊರಗೆಳೆಯಬೇಕೆಂದು ಮುಂದಿನ ನುಡಿಯಲ್ಲಿ ಬೇಂದ್ರೆ ವರ್ಣಿಸುತ್ತಾರೆ:

“ ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು
ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು
ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. | ಏಲಾವನ “

ಸ್ವಾದಪೂರ್ಣವಾದ ನಾದದ ಸಂತೋಷದ ಗರ್ಭವನ್ನು ಬಗೆದು, ಅದರಲ್ಲಿರುವ ಹುಂಕಾರವನ್ನು ನೂಲಿನಂತೆ ಎಳೆಯಬೇಕು. ತಕಲಿಯಿಂದ ಅಥವಾ ರಾಟಿಯಿಂದ ನೂಲು ತೆಗೆದ ಅಭ್ಯಾಸ ಬಹುಶಃ ನಮಗಾರಿಗೂ ಇರಲಿಕ್ಕಿಲ್ಲ. ಹಾಗಾದರೆ, ರಾಟಿಯಿಂದ ನೂಲು ತೆಗೆಯುತ್ತಿರುವ ಮಹಾತ್ಮಾ ಗಾಂಧೀಜಿಯವರ ಚಿತ್ರವನ್ನು ನೋಡಿರಿ. ನೂಲು ತೆಗೆಯುವದರಲ್ಲಿ ಅವರು ತನ್ಮಯರಾಗಿರುವದನ್ನು ಕಾಣುವಿರಿ. ಅಂತಹ ತನ್ಮಯತೆ ಹಾಗು ತಾಳ್ಮೆಯಿಂದ ಈ ಸ್ವರದ ಒಳನೂಲನ್ನು ಮೆಲ್ಲನೆ ಹೊರತೆಗೆಯಬೇಕಾಗುತ್ತದೆ. ಆ ಸ್ವರವು ಕೊನೆಗೊಳ್ಳುವದು ‘ತನಿಮೌನದಲ್ಲಿ’ (=sweet silence). ಈ ತನಿಮೌನವೇ ಮುಂದೆ ಮೂಡುವ ಶಬ್ದಕ್ಕೆ ಹಾಸಿಗೆ.

(ಈ ಸಂದರ್ಭದಲ್ಲಿ ಬೇಂದ್ರೆಯವರು ತಮ್ಮ ಅತ್ಯಂತ ಪ್ರೀತಿಯ ಗೆಳೆಯರಾದ ಮಧುರಚೆನ್ನರನ್ನು (=ಹಲಸಂಗಿ ಚೆನ್ನಮಲ್ಲಪ್ಪನವರನ್ನು) ಉದ್ದೇಶಿಸಿ ಬರೆದ ಕವನವೊಂದನ್ನು ನೆನಸಿಕೊಳ್ಳಬಹುದು:

“ಮಾತಾಡೊ ಮಾತಾಡೊ ಲಿಂಗವೇ |ನೀ|
ಮಾತಾಡಲೊಲ್ಲೇಕೊ ಲಿಂಗವೇ ||
ಮಾತಿನ ತಾಯಾದ ಮೌನದ ಬಸುರಲಿ |
ಹೂತೆಯೊ ಹೇ ಚೆನ್ನಲಿಂಗವೇ .” )

So, ಈ ತನಿಮೌನದ ಶಯ್ಯೆಯಲ್ಲಿ ಪವಡಿಸಿರುವ ಗೀತೆಯನ್ನು ಏಳಿಸುವದು ಹೇಗೆ? ಆ ಕ್ರಿಯೆ ಮುಂದಿನ ನುಡಿಯಲ್ಲಿದೆ:


“ ಯಾಳದ ಜತಿ, ಏಳೆಯ ಗತಿ ಏಳೇಳೇಳೆಂದು
ಎಬ್ಬಿಸಿ, ಮಬ್ಬನು ಚೆದರಿಸಿ ಬಾಳ್ ಬಾಳ್ ಬಾಳೆಂದು
ತಂತಿಯ ತಾಳಕೆ ಮಿಡಿದಿರೆ, ಎಲ್ಲಾಯಿತು ಒಂದು. | ಏಲಾವನ “

‘ಯಾಳ’ ಅಂದರೆ ಒಂದು ಬಗೆಯ ವಾದ್ಯ. ಈ ವಾದ್ಯದ ಜೊತೆಗೆ ಏಳೆಯ ಅಂದರೆ ಈ ತ್ರಿಪದಿ ಛಂದಸ್ಸಿನ ಗೀತೆಯ ಗತಿಯನ್ನು ಸೇರಿಸುವದು ಒಂದು ಅರ್ಥ. ಸಂಗೀತದಲ್ಲಿ ’ಜತಿ’ ಎನ್ನುವದಕ್ಕೆ ಒಂದು ವಿಶಿಷ್ಟ ಅರ್ಥವಿದೆ. ಆ ಜತಿಯಲ್ಲಿ ಏಳಾ ಛಂದಸ್ಸಿನ ಗತಿಯನ್ನು (=ಸಂಚಲನ ವೇಗವನ್ನು) ಸೇರಿಸುವದು ಇನ್ನೊಂದು ಅರ್ಥ. ಈ ಜತಿ-ಗತಿ ಸೇರಿದಾಗ , ಅದು ಹೇಳುವದು : ಏಳ್, ಏಳ್ ಎಂದು. ಅಲ್ಲದೆ ಇದು ಸಪ್ತಸ್ವರಗಳನ್ನೂ ಸೂಚಿಸಬಹುದು. ಈ ರೀತಿಯಾಗಿ ಸ್ವರಗಳನ್ನು ಎಬ್ಬಿಸಿ, ಕೇಳುಗರ ಮಬ್ಬನ್ನು ಚೆದುರಿಸಿ, ಅವರಿಗೆ “ ಬಾಳ್ ” ಎನ್ನುವ ಒಸಗೆಯನ್ನು ಕೊಡುವದು ಈ ಏಲಾಗೀತೆ. ಈ ಸಂದೇಶದೊಡನೆ, ಈ ಗೀತೆ ಈ ರೀತಿಯಾಗಿ ಹೊಮ್ಮುತ್ತಿರಲು “ಎಲ್ಲಾಯಿತು ಒಂದು” ! ಅಂದರೆ, ಬನವಾಸಿಯ ಗೆಳೆಯ ಗೆಳೆತಿಯರು, ಅಲ್ಲಿಯ ಹರಿಣ ಮಿಥುನಗಳು, ಕಿನ್ನರ ಲೋಕದ ಕಿನ್ನರಕಿನ್ನರಿಯರು ,ದೇವಲೋಕದಲ್ಲಿರುವ ಸರಸ್ವತಿಯ ವೀಣೆ, ವೀಣಾನಾದ , ನಾದದ ಸುಖ ಎಲ್ಲವೂ ಒಂದಾದವು ಎನ್ನುತ್ತಾರೆ ಬೇಂದ್ರೆ.

ಕೊನೆಯ ನುಡಿ ಹೀಗಿದೆ:

“ಏಳೆಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರ
ದನಿ ಪಡೆದಿತು, ತಿಳಿದೆದ್ದಿತು ಕಣ್ಬಡೆದು ವಿಚಿತ್ರ
ಆಕ್ಷಣವನು ಈಕ್ಷಣವನು ಮಾಡಿತು ಸುಪವಿತ್ರ. | ಏಲಾವನ”

ಈ ರೀತಿಯಾಗಿ ಏಲಾಛಂದಸ್ಸಿನ ಬಗೆಗಿರುವ ಗೀತೆಯೊಂದು ಬೇಂದ್ರೆಯವರ ಮನದಲ್ಲಿ ಮೂಡಿ ದನಿ ಪಡೆದು, ಕಣ್ಣು ಪಡೆದು ಕವನವಾಗಿದ್ದು ಒಂದು ವಿಚಿತ್ರವೆನ್ನುತ್ತಾರೆ ಬೇಂದ್ರೆ. ಈ ಕವನವು ಸಹ ಏಲಾ ಛಂದಸ್ಸಿನಲ್ಲಿಯೇ ಇರುವ ತ್ರಿಪದಿಯಾಗಿರಬಹುದು. ಆದರೆ ಕನ್ನಡ ಛಂದಸ್ಸಿನ ಜ್ಞಾನವಿಲ್ಲದ ನಾನು ‘ಇದಮಿತ್ಥಮ್ ’ ಎಂದು ಹೇಳುಲಾರೆ.

ಕನ್ನಡದ ಒಂದು ತ್ರಿಪದಿ ಛಂದಸ್ಸನ್ನು ಧ್ಯಾನಿಸಿ, ಅದರ ನಾದವನ್ನು ಮನದಲ್ಲಿ ಅನುಭವಿಸಿ, ವರಕವಿಗಳು ಒಂದು ಗೀತೆಗೆ ಜನ್ಮ ನೀಡಿದ್ದಾರೆ. ಈ ಅನುಭವವು ತಮ್ಮಲ್ಲಿ ಪವಿತ್ರ ಭಾವನೆಯನ್ನು ಮೂಡಿಸಿತು ಎಂದು ಬೇಂದ್ರೆ ಹೇಳುತ್ತಾರೆ.
ಆಶ್ಚರ್ಯವಲ್ಲ ; ನಾದ-ಕಾವ್ಯ-ಯೋಗಿಗೆ ನಾದವೇ ಅನುಭಾವವಾಗುತ್ತದೆ.
Be with space which accured after reading this poem--Neelanjan

Saturday, September 25, 2010

ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs.-ಬೇಂದ್ರೆ

’ಜೋಗಿ’ ಕವನವು ಅಧ್ಯಾತ್ಮ ಸಾಧಕನ ಸಾಧನಾಪಥದಲ್ಲಿಯ ಒಂದು ವಿಶೇಷ ಘಟ್ಟದಲ್ಲಿ,
ಆತನ ಮನೋಸ್ಥಿತಿಯನ್ನು ವರ್ಣಿಸುವ ಕವಿತೆ.

ಬೇಂದ್ರೆಯವರ ತಾಯಿಯೂ ಸಹ ಗುರೂಪದೇಶ ಪಡೆದವರು. ಈ ಕವನವನ್ನು ಅವರ ಬಗೆಗೆ ಬರೆಯಲಾಗಿದೆ ಎಂದು ಸ್ವತಃ ಬೇಂದ್ರೆಯವರೇ ಹೇಳಿದ್ದಾರೆ. ಆದರೆ ಯಾವುದೇ ಸಾಧಕನ ಜೀವನದಲ್ಲಿಯೂ ಇಲ್ಲಿ ವರ್ಣಿಸಲಾದಂತಹ ಘಟ್ಟ ಬರಬಹುದು.

ಕವನದ ಪೂರ್ತಿಪಾಠವನ್ನು ಕೆಳಗೆ ಕೊಡಲಾಗಿದೆ:

ಊರ ತುದಿಯ ಆ ಮೂರ ಬಟ್ಟೆ ಮುಗಿದಲ್ಲಿ ಕೊಳ್ಳವೆಲ್ಲಿ
ಹಳ್ಳ ಅಲ್ಲಿ ಹರಿದಲ್ಲಿ, ತುಡುಗು-ದನ ತೊಂಡು ಮೇಯುವಲ್ಲಿ
ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ
ಇರುಳು ಅಂತನs ಹಗಲs ಗೂಗತಾವ ಅಲ್ಲಿ ಜೋಡಗೂಗಿ.

ಅದನ ದಾಟಿ ಆ ಮಸಣವಾಟಿ, ಎಡಕಾಗಿ ಅದರ ಆಚಿ
ಕಾಮ ತನ್ನ ಹಚ್ಚಂಗಿ ಹಾಸಿಧಾಂಗೆಲ್ಲಿ ನೀರ ಪಾಚಿ
ಹೊಚ್ಚಿ ಹೊಂಡವನು ಮೆಚ್ಚ ಮಾಡತಾವೊ ಕಂಡ ಕಣ್ಣುಗಳಿಗೆ.
ಪಾಚಿ ಸರಿಸಿದಾಗ ಕಪ್ಪು ನೀರು ಕರಿತಾವ ಒಳಗ ಬಳಿಗೆ.

ಅದರ ಮುಂದ ಗವಿಗುಡ್ಡ ಅಡ್ಡ ಬರತsದ ನಮ್ಮ ಬಲಕ
ಅತ್ತತ್ತ ಹರುಹಿ ಹತ್ತೊತ್ತಿ ಬಂದ ಕಾಳಮ್ಮಗಿರುವ ಹೊಲಕ
ಆ ಹೊಲದ ನಟ್ಟ ನಡುವಿರುವ ಹುಣಸಿಮರ ಏರಿ ನೋಡಿದಾಗ
ಹತ್ತ ಗಿಡದ ಗುಂಪೊಂದು ಕಾಣತದ ಸಣ್ಣ ಏರಿ ಮ್ಯಾಗ.

ಅಲ್ಲಿ ತೊಗಲಬಾವಲೀ ಚೀರತಾವ ಭರತಿ ಹಗಲಿನೊಳಗ
ಹಿಂಡು ಪಾರಿವಾಳ ಹೊಕ್ಕ ಹೊರಡತಾವ ಮತ್ತ ಒಳಗ ಹೊರಗ
ಅಲ್ಲಿ ಹಬ್ಬಿ ಹರುಹ್ಯsದ ಬೇವಿಗೇ ಸುತ್ತ ಅಮೃತಬಳ್ಳಿ
ಹಾಲ ಸುರವತಾವ ಆಲ ಅಲ್ಲಿ ಅಲ್ಲಾಡತಾವ ಅಳ್ಳಿ.

ಅತ್ತಿ ಗಿಡಕ ಹತ್ಯಾವ ಹಲಸಿನ್ಹಂಗ ಬುಡುಕು ಕೆಂಪು ಹಣ್ಣು
ಜೇನು ತುಂಬಿ ತೊಟಗುಟ್ಟತಾವ ಅದ ಬಯಸತಾವ ಕಣ್ಣು
ಈ ತೋಪಿನ್ಯಾಗ ಬೆಳೆದsದ ಹ್ಯಾಂಗೋ ಮೂಲ್ಯಾಗ ತಪ್ಪಿ ಮಾವು
ಅದರಡಿಗೆ ಹುತ್ತ ಅದರಾಗ ಐತೆ ಒಂದೇಳ ಹೆಡೆಯ ಹಾವು.

ಆ ಮಾವಿನೊಳಗ ಈ ಸುಗ್ಗಿಯೊಳಗ ಬಂದsದ ಕೋಗಿಲೊಂದು
ತನ್ನ ಜೋಡಿ ಕರೆಧಾಂಗ ಕರಿತsದ ನನ್ನ ಬಾರs ಅಂದು
ಕೂಗೇ ಕೂಗತದ ಕೂಗೇ ಕೂಗತsದ ಗಿರಣಿ ಕರೆಯೊ ಹಾಂಗ
ತೆರಪು ಇಲ್ಲ ಒಂದಳತಿ ಕೂಗತsದ ಬ್ಯಾಸರಿಲ್ಲಧಾಂಗ.

ತಿಳಿಯದಾವದೋ ಕಂಪು ಎಳೀತsದ ತುಂಬಿ ಹುಚ್ಚು ಆಗಿ
ಎಚ್ಚರಿಲ್ಲದs ಎತ್ತೊ ತಿರಗತಾವ ದಿಕ್ಕು ತೋರದಾಗಿ
ಬಂತು ಸುಗ್ಗಿ ಬಂದsದ ಸುಗ್ಗಿ ಬರತsದ ಸುಗ್ಗಿ ಎಂದು
ಕುಹೂ ಅನ್ನತದ ಕುಹೂ ಅನ್ನತದ ಕುಹುಕ್ಕುಹೂ ಅಂದು.

ತಾರ ಪಂಚಮದಾಗ ಕೋಗಿಲಾ ಕೂಗತsದೊ ಜೋಗಿ
ಯಾವ ಬಣ್ಣ ಅದಕಾವ ಕಣ್ಣು ನಾ ನೋಡಲೇನು ಹೋಗಿ?
ತೋಟವೆಲ್ಲ ಹೂವಾಗಿ ನಿಂತು ತೊಂಗೆಲ್ಲ ಗೊಂಚಲಾಗಿ
ಪಾಡು ಆಗತಾವ, ಹಣ್ಣು ಆಗತಾವ ಅದರ ಲಯಕೆ ತೂಗಿ.

ಮುಂಜಾವತೊಟ್ಟು ಇರು ಹಂಗು ಬಿಟ್ಟು ಬರಿ ಹಾಂಗ ತೂಗತsದೋ
ತಲಿ ಕಾವಿನೊಳಗ ಇಮ್ಮಾವಿನೊಳಗ ಬಿಸಿಗಾಲ ನೂಗತsದೋ
ಕೊಳಲ ನುಡಿಸಿಧಾಂಗ ಕುಹೂಹುಹೂಹೂ ಉಲಿತsದೊ ಜೋಗಿ
ಬೇರೆ ಕೆಲಸದಾಗ ಮನಸು ತೊಡಗದೊ ನೋಡಲೇನು ಹೋಗಿ?

ಬಂದೆ ಜೋಗಿ ಬಾ, ಬಾರೊ ಜೋಗಿ ಬಾ, ಏನು ಹೊತ್ತು ಬಂದಿ
ನೀನೆ ಹೇಳಿದಾ ನಾಮ ಜಪಿಸುವಾಗ ಬಂತೊ ಸುಗ್ಗಿ ಸಂಧಿ.
ತಲೆಯ ಯಾವುದೊ ನಾಡಿಯೊಳಗ ಸುರುವಾತು ಸುಗ್ಗಿ ಸೊಲ್ಲು
ಮುಂದೆ ಕೇಳಿದರ ಅದs ತುಂಬಿತೋ ಮೂಲೆ ಮೂಲೆಯಲ್ಲು.

ಗುಡಿಗೆ ನಾನು ಹೊರಟಾಗ ಕರೀತದ ಕುಹುಕ್ಕುಹೂ ಎಂದು
ಮನದ ಜಪದ ನಡುನಡುವೆ ನಡೀsತsದ ಓಂ ಕುಹೂ ಎಂದು
ಕನಸಿನೊಳಗ ನಾ ಸ್ವರಾ ಕೇಳಿ ಮಾಮರಾ ಆಗತೇನೊ
ಅಂತ ಭ್ರಮಾ ಆಗ್ಯsದ ಮನಕ ನೀ ಬಂದೆ ಜೋಗಿ ಏನೋ!

ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೊ ಏನೋ
ಯಾಕ ಹಿಂಗ ಅಸರಂತ ಕೂಗತದ ಏನು ಇದಕೆ ಬ್ಯಾನ್ಯೊ
ಸುತ್ತು ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕs
ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs.
**************************************************************************************************************************************************************************
ಈ ಕವನ ಪ್ರಾರಂಭವಾಗುವದು ಊರ ಹೊರವಲಯದ ಕಾಡಿನ ವರ್ಣನೆಯಿಂದ.

“ಊರ ತುದಿಯ ಆ ಮೂರ ಬಟ್ಟೆ ಮುಗಿದಲ್ಲಿ ಕೊಳ್ಳವೆಲ್ಲಿ
ಹಳ್ಳ ಅಲ್ಲಿ ಹರಿದಲ್ಲಿ, ತುಡುಗು-ದನ ತೊಂಡು ಮೇಯುವಲ್ಲಿ
ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ
ಇರುಳು ಅಂತನs ಹಗಲs ಗೂಗತಾವ ಅಲ್ಲಿ ಜೋಡಗೂಗಿ.”

ವಸ್ತುತಃ ಇದು ಆ ಕಾಲದಲ್ಲಿ ಧಾರವಾಡದ ಆಗ್ನೇಯ ದಿಕ್ಕಿನ ಕಾಡಿನಲ್ಲಿದ್ದ ಸೋಮೇಶ್ವರ ಗುಡಿಗೆ ಹೋಗುವ ದಾರಿಯ ವರ್ಣನೆ. (ಈ ಪ್ರದೇಶದಲ್ಲಿ ಈಗ ಭವ್ಯವಾದ ’ಶ್ರೀ ಧರ್ಮಸ್ಥಳ ಮಂಜುನಾಥ ತಾಂತ್ರಿಕ ಮಹಾವಿದ್ಯಾಲಯ’ ತಲೆ ಎತ್ತಿ ನಿಂತಿದೆ.) ಧಾರವಾಡದಲ್ಲಿಯ ಕಾಮನಕಟ್ಟಿಯಿಂದ ಕಾಲುದಾರಿಯಲ್ಲಿ ಸಾಗಿದಾಗ, ಹುಬ್ಬಳ್ಳಿಗೆ ಹೋಗುವ ರಸ್ತೆ, ಕಲಘಟಗಿಗೆ ಹೋಗುವ ರಸ್ತೆ ಹಾಗು ಸೋಮೇಶ್ವರಕ್ಕೆ ಟಿಸಿಲು ಒಡೆಯುವ ದಾರಿ ಈ ರೀತಿಯಾಗಿ ಮೂರು ದಾರಿಗಳು (=ಬಟ್ಟೆಗಳು) ಸಿಗುವವು. ಇವು ಮುಗಿಯುವಲ್ಲಿ ಅತ್ತಿಕೊಳ್ಳವೆಂಬ ಕೊಳ್ಳವು ಪ್ರಾರಂಭವಾಗುತ್ತದೆ. ಅಲ್ಲಿ ಶಾಲ್ಮಲಾ ನದಿ ಗುಪ್ತಗಾಮಿನಿಯಾಗಿ ಹರಿದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇಡ್ತಿ ಹಳ್ಳ ಹಾಗು ಗಂಗಾವಳಿ ನದಿ ಎಂದು ಕರೆಯಿಸಿಕೊಳ್ಳುತ್ತಾಳೆ. ಗೌಳಿ ಜನರು ದನ ಮೇಯಿಸಲೆಂದು ಈ ಸೀಮೆಯವರೆಗೆ ಬರುತ್ತಿದ್ದರು. ಆದರೆ ಅದೇ ಅವರ limit ! ಯಾಕೆಂದರೆ, ಅಲ್ಲಿಂದ ಮುಂದೆ ಹೋದರೆ, ’ದಿಕ್ಕು ತಪ್ಪತಾರ ತಪ್ಪಿ ಹೊಕ್ಕರs ಕಕ್ಕಾವಿಕ್ಕಿಯಾಗಿ’. ಅಲ್ಲಿರುವ ಕಾಡಿನಲ್ಲಿ ಹಗಲಿನಲ್ಲಿಯೂ ಸಹ ಸೂರ್ಯಕಿರಣಗಳಿಗೆ ಪ್ರವೇಶ ಸಿಗುತ್ತಿರಲಿಲ್ಲ. ಅಲ್ಲಿ ದಿನವೂ ಸಹ ರಾತ್ರಿಯಂತೆ ಭಾಸವಾಗುತ್ತದೆ. ಹೀಗಾಗಿ ಅಲ್ಲಿ ಹಗಲಿನಲ್ಲಿಯೂ ಸಹ ಗೂಗಿಗಳು ಕೂಗುತ್ತವೆ.

ಆದರೆ ಇದು ಕೇವಲ ನಿಸರ್ಗವರ್ಣನೆಯಾಗಿರದೆ, ಸಾಧಕನ ಯೋಗಸಾಧನೆಯ ಪ್ರಾರಂಭಾವಸ್ಥೆಯನ್ನು ಸೂಚಿಸುವ ವರ್ಣನೆಯೂ ಆಗಿದೆ. ಇಲ್ಲಿ ಬರುವ ಪ್ರತಿಮೆಗಳೆಲ್ಲ ಅಧ್ಯಾತ್ಮಿಕ ಪ್ರತಿಮೆಗಳೇ. ಮೂರು ಬಟ್ಟೆ ಎಂದರೆ ಮೂರು ಅವಸ್ಥೆಗಳು: ಜಾಗೃತ, ಸುಷುಪ್ತ, ಸ್ವಪ್ನಾವಸ್ಥೆ ಎಂದು ಭಾವಿಸಬಹುದು. ಈ ಮೂರು ಅವಸ್ಥೆಗಳನ್ನು ದಾಟಿ, ಮುಂದಿನ ಅವಸ್ಥೆಯಲ್ಲಿ ಹೋಗುವ ಸಾಧಕನು, ಗುರುವಿನ ಸಹಾಯವಿಲ್ಲದಿದ್ದಾಗ ಕಕ್ಕಾವಿಕ್ಕಿಯಾಗುತ್ತಾನೆ. ಅಲ್ಲಿ ತುಡುಗು ದನ ಅಂದರೆ ಮರೆಮಾಚಿ ಮುನ್ನುಗ್ಗುವ ಇಂದ್ರಿಯಗಳು, ತೊಂಡು ಮೇಯುವಲ್ಲಿ ಅಂದರೆ, ಎಷ್ಟು ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬರದೆ ವಿಷಯಭೋಗದಲ್ಲಿ ತೊಡುಗುತ್ತವೆ. ಇರುಳಲ್ಲಿ ಕೂಗಬೇಕಾದ ಜೋಡುಗೂಗಿಗಳು ಅಲ್ಲಿ ಹಗಲೇ ಗೂಗುತ್ತವೆ.
(ಬೇಂದ್ರೆಯವರ ಅರ್ಥಸಾಧನ ಇಲ್ಲಿ ಕಾಣುತ್ತದೆ. ’ಕೂಗುತ್ತವೆ’ ಅನ್ನುವದರ ಬದಲಾಗಿ ಅವರು ಗೂಗುತ್ತವೆ ಎಂದು ಬರೆಯುತ್ತಾರೆ).
ಈಗ ಭಗವದ್ಗೀತೆಯಲ್ಲಿ ಬರುವ ಸಾಲುಗಳನ್ನು ನೆನಪಿಸಿಕೊಳ್ಳಿ: ’ಯಾ ನಿಶಾ ಸರ್ವಭೂತಾನಾಮ್, ತಸ್ಯಾಮ್ ಜಾಗರ್ತಿ ಸಂಯಮೀ’.
(ಜೋಡು ಗೂಗಿಗಳು ಬಹುಶಃ, ಹಗಲು ಮತ್ತು ರಾತ್ರಿಯನ್ನು ಪ್ರತಿನಿಧಿಸುತ್ತಿವೆಯೆ?)

ಇದರ ಮುಂದಿನ ನುಡಿಯಲ್ಲಿ ಭೀತಿ ಹುಟ್ಟಿಸುವ ನಿಸರ್ಗ ವರ್ಣನೆಯಿದೆ.

“ಅದನ ದಾಟಿ ಆ ಮಸಣವಾಟಿ, ಎಡಕಾಗಿ ಅದರ ಆಚಿ
ಕಾಮ ತನ್ನ ಹಚ್ಚಂಗಿ ಹಾಸಿಧಾಂಗೆಲ್ಲಿ ನೀರ ಪಾಚಿ
ಹೊಚ್ಚಿ ಹೊಂಡವನು ಮೆಚ್ಚ ಮಾಡತಾವೊ ಕಂಡ ಕಣ್ಣುಗಳಿಗೆ.
ಪಾಚಿ ಸರಿಸಿದಾಗ ಕಪ್ಪು ನೀರು ಕರಿತಾವ ಒಳಗ ಬಳಿಗೆ.”

ಇಲ್ಲಿ ಸಾಧಕನಿಗೆ ಮೊದಲು ಸಿಗುವದು ಸ್ಮಶಾನಭೂಮಿ. ಅಲ್ಲಿ ಆತ ತನ್ನ ವಿಷಯವಾಸನೆಗಳನ್ನು ಸುಟ್ಟು ಮುಂದುವರಿಯಬೇಕು. ಆದರೆ ಕಾಮ ಇಲ್ಲಿ ತನ್ನ ಹಚ್ಚಂಗಿ(=ಹಸಿರು ಅಂಗಿ)ಯನ್ನು ಹಾಸಿ ನೀರ ಹೊಂಡಗಳನ್ನು ಮುಚ್ಚಿಹಾಕಿದ್ದಾನೆ. ಆದುದರಿಂದ ಈ ನೀರಹೊಂಡ ಕಣ್ಣಿಗೆ ರಮಣೀಯವಾಗಿ ಕಾಣುವದು. ಹಾಗೆಂದು ತೃಷಿತರು(=ವಿಷಯಾಸಕ್ತರು) ನೀರು ಕುಡಿಯಲು ಮುಂದುವರೆದರೆ, ಅವರನ್ನು ಈ ಕಪ್ಪು ನೀರಿನ (=deep waters=) ಪಾತಾಳವು ಮಾಯೆಯಿಂದ ಒಳಗೆ ಸೆಳೆದುಕೊಳ್ಳುವದು. (=ಕಪ್ಪು ನೀರು ಕರಿತಾವ ಒಳಗ ಬಳಿಗೆ).

ಈ trap ಅನ್ನು ದಾಟಿ ಸಾಧಕನು ಮುಂದುವರೆದರೆ, ಅಲ್ಲಿ ಅವನಿಗೆ ಕ್ಷೇತ್ರದೇವತೆಗೆ(=ಕಾಳಮ್ಮನಿಗೆ) ಬಿಟ್ಟ ಹೊಲವೊಂದು ಕಾಣಿಸುವದು. (ದೇಹವೇ ಒಂದು ಕ್ಷೇತ್ರ.) ಅಲ್ಲಿರುವ ಕೈಮರವನ್ನು ಹತ್ತಿ ನೋಡಿದರೆ, ಅವನಿಗೆ ಭಯಂಕರವಾದ ನೋಟವೊಂದು ಕಾಣುವದು.

“ಅದರ ಮುಂದ ಗವಿಗುಡ್ಡ ಅಡ್ಡ ಬರತsದ ನಮ್ಮ ಬಲಕ
ಅತ್ತತ್ತ ಹರುಹಿ ಹತ್ತೊತ್ತಿ ಬಂದ ಕಾಳಮ್ಮಗಿರುವ ಹೊಲಕ
ಆ ಹೊಲದ ನಟ್ಟ ನಡುವಿರುವ ಹುಣಸಿಮರ ಏರಿ ನೋಡಿದಾಗ
ಹತ್ತ ಗಿಡದ ಗುಂಪೊಂದು ಕಾಣತದ ಸಣ್ಣ ಏರಿ ಮ್ಯಾಗ.”

ಈ ಹತ್ತು ಗಿಡಗಳ ಗುಂಪೆಂದರೆ ಪಂಚ ಕರ್ಮೇಂದ್ರಿಯಗಳ ಹಾಗು ಪಂಚ ಜ್ಞಾನೇಂದ್ರಿಯಗಳ ಸಮೂಹ. ಈ ಇಂದ್ರಿಯಸಂಕುಲವೇ ನಮ್ಮನ್ನು ಕೊನೆಯಿಲ್ಲದ ಸಂಸಾರದಲ್ಲಿ ಸಿಲುಕಿಸುವ mechanism.

ಅಲ್ಲಿ ಅವನಿಗೆ ಮೃತ್ಯು ಹಾಗು ಜೀವನಗಳ ಸಂಕೇತಗಳಾದ ತೊಗಲಬಾವಲಿ ಹಾಗೂ ಪಾರಿವಾಳಗಳ ಎಡಬಿಡದ ಗಮನಾಗಮನ ಕಾಣುತ್ತದೆ.

“ಅಲ್ಲಿ ತೊಗಲಬಾವಲೀ ಚೀರತಾವ ಭರತಿ ಹಗಲಿನೊಳಗ
ಹಿಂಡು ಪಾರಿವಾಳ ಹೊಕ್ಕ ಹೊರಡತಾವ ಮತ್ತ ಒಳಗ ಹೊರಗ
ಅಲ್ಲಿ ಹಬ್ಬಿ ಹರುಹ್ಯsದ ಬೇವಿಗೇ ಸುತ್ತ ಅಮೃತಬಳ್ಳಿ
ಹಾಲ ಸುರವತಾವ ಆಲ ಅಲ್ಲಿ ಅಲ್ಲಾಡತಾವ ಅಳ್ಳಿ.”

ಆಲದ ಮರವೆಂದರೆ ಜ್ಞಾನೋದಯವನ್ನು ಸಂಕೇತಿಸುವ ಮರ. ಆಲದ ಮರದ ಕೆಳಗೆ ಬುದ್ಧನಿಗೆ ಜ್ಞಾನೋದಯವಾಯಿತು. ಅದು ಸುರಿಸುವ ಹಾಲು ಜೀವನಕ್ಷೀರ. ಆದರೆ ಅರಳಿ ಮರದಲ್ಲಿ ಬ್ರಹ್ಮರಾಕ್ಷಸವಿರುವದೆಂಬುದು ಪೌರಾಣಿಕ ಪ್ರತೀತಿ. ಜೊತೆಜೊತೆಗೇ ಸಂಸಾರವನ್ನು ಪ್ರತಿನಿಧಿಸುವ ಬೇವಿನ ಮರ ಹಾಗು ಅತ್ತಿ ಮರಗಳು ಅಲ್ಲಿ ಕಾಣಿಸುತ್ತವೆ. ಬೇವಿನ ಮರದ ಹಣ್ಣು ಕಹಿಯಾದರೂ ಅದರ ಸುತ್ತಲೂ ಹಬ್ಬಿರುವದು ಅಮೃತದ ಬಳ್ಳಿ.

“ಅತ್ತಿ ಗಿಡಕ ಹತ್ಯಾವ ಹಲಸಿನ್ಹಂಗ ಬುಡುಕು ಕೆಂಪು ಹಣ್ಣು
ಜೇನು ತುಂಬಿ ತೊಟಗುಟ್ಟತಾವ ಅದ ಬಯಸತಾವ ಕಣ್ಣು”

ಹಲಸಿನ ಮರಕ್ಕೆ ಕೈಗೆ ಸಿಲುಕುವ ಎತ್ತರದಲ್ಲಿಯೇ ಹಣ್ಣುಗಳು ಬಿಡುವಂತೆ, ಇಲ್ಲಿರುವ ಅತ್ತಿಯ ಮರಕ್ಕೂ ಸಹ ಕೈಗೆಟುಕುವಂತೆ, ಬುಡದಲ್ಲಿಯೇ ಮನಸ್ಸು ಸೆಳೆಯುವ ಹಣ್ಣುಗಳಾಗಿವೆ. (ಆದರೆ ಅತ್ತಿಯ ಹಣ್ಣುಗಳು ನೋಡಲಿಕ್ಕಷ್ಟೇ ಚಂದ, ತಿನ್ನಲು ಅಲ್ಲ.) ಅಲ್ಲಿ ಜೇನು ತುಂಬಿ ತೊಟ್ಟಿಕ್ಕುತ್ತಿರುತ್ತದೆ. ಅದನ್ನು ಸವಿಯುವ ಬಯಕೆಯನ್ನು ತಪ್ಪಿಸುವದು ಸಾಧಕನಿಗೆ ಸಾಧ್ಯವಾದೀತೆ?

ಈ ಸಂದರ್ಭದಲ್ಲಿ ಇದೇ ಅರ್ಥವನ್ನು ಸೂಚಿಸುವ ಸಾಮತಿಯೊಂದನ್ನು ನೆನಪಿಸಿಕೊಳ್ಳಬಹುದು. ಸಂಸಾರದಲ್ಲಿ ಸಿಲುಕಿದ ಮನುಷ್ಯನೆಂದರೆ, ಹಾಳು ಬಾವಿಯಲ್ಲಿರುವ ಮುಳ್ಳಿನ ಮರಕ್ಕೆ ಜೋತಾಡುತ್ತ, ಆ ಮುಳ್ಳಿನ ಕೊನೆಯಿಂದ ತೊಟಕುವ ಜೇನಹನಿಯನ್ನು ತಿನ್ನಲು ಬಯಸುವ ಮನುಷ್ಯನಂತೆ. ಈ ಮರದ ಟೊಂಗೆಗೆ ಹಾವು ಸುತ್ತಿಕೊಂಡಿದೆಯಂತೆ ಹಾಗು ಬಾವಿಯ ಕೆಳಗೆ ಹುಲಿ ಬಾಯಿ ತೆಗೆದುಕೊಂಡು ನಿಂತಿದೆಯಂತೆ.(ಈ ಸಾಮತಿ ’ಭಾಗವತ’ದಲ್ಲಿ ಇದೆಯೆ?)

ಆದರೆ ಈ ತೋಪಿನ ಮೂಲೆಯಲ್ಲಿ ಬೆಳೆದ ಮಾವಿನ ಮರವೊಂದನ್ನು ಕಂಡು ಸಾಧಕನಿಗೆ ಅಚ್ಚರಿಯಾಗುತ್ತದೆ.

“ಈ ತೋಪಿನ್ಯಾಗ ಬೆಳೆದsದ ಹ್ಯಾಂಗೋ ಮೂಲ್ಯಾಗ ತಪ್ಪಿ ಮಾವು
ಅದರಡಿಗೆ ಹುತ್ತ ಅದರಾಗ ಐತೆ ಒಂದೇಳ ಹೆಡೆಯ ಹಾವು.”

ಇಲ್ಲಿಯವರೆಗಿನ ಭಯಾನಕ ನೋಟ ಈಗ ಬದಲಾಗುತ್ತದೆ. ಈ ಮಾವಿನ ಮರ ಮನಸ್ಸಿಗೆ ಚೈತನ್ಯ ಕೊಡುವ ಪರಮಾರ್ಥದ ಸಂಕೇತವಾಗಿ ತೋರುತ್ತದೆ. ಯಾಕೆಂದರೆ ಇದರ ಅಡಿಯಲ್ಲಿರುವದು ಏಳು ಹೆಡೆಯ ಹಾವು (=ಕುಂಡಲಿನಿ ಶಕ್ತಿ.)

(ಟಿಪ್ಪಣಿ: ವಿಷಯಾಂತರವಾದರೂ ಸಹ ಇಲ್ಲಿ ಒಂದು ಮಾತನ್ನು ಹೇಳಲೇ ಬೇಕು. ಭಾರತೀಯ ಸಂಪ್ರದಾಯವು ಸರ್ಪವನ್ನು ಮೂಲಾಧಾರದಲ್ಲಿ ನಿದ್ರಿಸುತ್ತಿರುವ ಕುಂಡಲಿನಿ ಶಕ್ತಿಗೆ ಹೋಲಿಸುತ್ತ ಬಂದಿದೆ. ಆದರೆ, ಈ ಹೋಲಿಕೆಗೆ ತದ್ವಿರುದ್ಧವಾದ ಹೋಲಿಕೆಯನ್ನು ನೀಡಿದವರು ನಮ್ಮವರೇ ಆದ ಬಸವೇಶ್ವರರು. ಇವರದು ಧೈರ್ಯ ಹಾಗು ಕಲ್ಪನಾಶಕ್ತಿಯ ಉಚ್ಚ ಉದಾಹರಣೆ.

“ಹುತ್ತವ ಬಡಿದರೆ ಹಾವು ಸಾಯಬಲ್ಲುದೆ ಅಯ್ಯಾ?”

ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾಗಿ ಮೊದಲ ಬಾರಿಗೆ, ಹಾವನ್ನು ಕಾಮನೆಗಳ ಪ್ರತೀಕವಾಗಿ(Freudian Lust ಆಗಿ) ಬಸವಣ್ಣನವರು ವರ್ಣಿಸಿದರು. ಹುತ್ತವೆಂದರೆ ದೇಹ. ಕೇವಲ ದೇಹದಂಡನೆಯಿಂದ ಕಾಮವನ್ನು ಗೆಲ್ಲುವದು ಅಸಾಧ್ಯ ಎನ್ನುತ್ತಾರೆ ಬಸವಣ್ಣನವರು).

ಕೋಗಿಲೆ ಕನ್ನಡದ ಅನುಭಾವಿಗಳಿಗೆ ನೆಚ್ಚಿನ ಪ್ರತಿಮೆ. ಕೋಗಿಲೆ ಹಾಡುವದೇ ಮಾವಿನ ಮರದಲ್ಲಿ. ನಿಜಗುಣಿ ಶಿವಯೋಗಿಗಳು ’ಕೋಗಿಲೆ’ಯನ್ನು ಮನಸ್ಸಿಗೆ ಹೋಲಿಸಿ ಬರೆದ ಗೀತೆ ಹೀಗಿದೆ:
(’ಕೋಗಿಲೆ, ಚೆಲ್ವ ಕೋಗಿಲೆ,
ಮುದ್ದು ಕೋಗಿಲೆ, ಜಾಣ ಕೋಗಿಲೆ’).

ಬೇಂದ್ರೆಯವರೂ ಸಹ ಅದೇ ಪಲ್ಲವನ್ನು ಬಳಸಿ, ಅದೇ ಧಾಟಿಯಲ್ಲಿ ಕವನವೊಂದನ್ನು ರಚಿಸಿದ್ದಾರೆ. (’ಗರಿ’ ಕವನಸಂಕಲನ). ನಿಜಗುಣಿ ಶಿವಯೋಗಿಗಳ ಈ ಗೀತೆ ಬೇಂದ್ರೆಯವರ ’ಕೋಗಿಲೆ’ ಕವನಕ್ಕೆ form model ಆಗಿದೆ.
ಆದರೆ, ನಿಜಗುಣಿ ಶಿವಯೋಗಿಗಳು ರಚಿಸಿದ ಮತ್ತೊಂದು ಗೀತೆಯಲ್ಲಿ ಬರುವ ಮಾಮರ ಹಾಗು ಕೋಗಿಲೆ ಇವು, ಬೇಂದ್ರೆಯವರ ’ಜೋಗಿ’ ಕವನದಲ್ಲಿರುವ ಮಾಮರ ಹಾಗು ಕೋಗಿಲೆಗೆ concept-model ಆಗಿವೆ ಎನ್ನಬಹುದು.

(ನಿಜಗುಣಿ ಶಿವಯೋಗಿಗಳ ಆ ಗೀತೆಯ ಕೆಲವು ಸಾಲು ಈ ರೀತಿಯಾಗಿವೆ:

“ಸುಳಿವ ಸರಸ್ವತಿ ಗಂಗೆ ಯಮುನೆಯೆಂದೆಂಬ ನದಿ-
ಗಳ ನಡುವೆ ಚೌಕ ಮಧ್ಯದಲಿ| ಕೋಗಿಲೆ||
ನಳನಳಿಸಿ ಬೆಳೆದು ಬೆಳಗುವ ಬಿಂದುವೆಂಬನಿದು
ದಳೆವ ಮಾಮರದ ಮೇಲಿರ್ದು| ಕೋಗಿಲೆ||)

(Incidentally, ನವ್ಯಕವಿ ನಿಸಾರ್ ಅಹಮದ್ ಅವರು ’ಕಾಗೆ’ಯನ್ನು ಕೋಗಿಲೆಗೆ counterಪ್ರತಿಮೆಯಾಗಿ ಬಳಸಿ, ’ಕಾಗೆ ಕೂಗದ ಮುನ್ನ ಏನಿತ್ತಣ್ಣ ಇಲ್ಲಿ?’ ಎಂದು ಕೇಳಿದ್ದಾರೆ.)

ಈ ಮಾವಿನ ಮರದ ಮೇಲೆ ಕೋಗಿಲೆಯೊಂದು ಬಂದು ಕೂತಿದೆ. ಕೋಗಿಲೆ ಮಾವಿನ ಮರಕ್ಕೆ ಬರುವದು ಸುಗ್ಗಿಯ ಕಾಲದಲ್ಲಿ ಮಾತ್ರ. ಕೋಗಿಲೆಯ ಪ್ರತಿಮೆ ಏನನ್ನು ಸೂಚಿಸುತ್ತದೆ? ಇದು ದೈವಿ ಚೈತನ್ಯದ ಪ್ರತೀಕ; ಸಾಧಕನ ಆಧ್ಯಾತ್ಮಿಕ ಸುಗ್ಗಿಯ ಕಾಲದ ಸೂಚನೆಯಾಗಿ ಈ ಕೋಗಿಲೆ ಬಂದಿದೆ. (ಸಾಧಕನಿಗೆ ಈಗಲೇ ಇದರ ಸ್ಪಷ್ಟ ಕಲ್ಪನೆ ಇಲ್ಲ.) ಹಾಗು ಈ ಸಾಧಕನನ್ನು ತನ್ನ ಜೋಡಿಹಕ್ಕಿಯನ್ನು ಕರೆದಂತೆ ಈ ಕೋಗಿಲೆ ಕರೆಯುತ್ತಿದೆ. (’ತನ್ನ ಜೋಡಿ ಕರೆಧಾಂಗ ಕರಿತsದ ನನ್ನ ಬಾರs ಅಂದು’). ಇದರ ದನಿ ಎಷ್ಟು ಜೋರಾಗಿದೆಯೆಂದರೆ ಅದು ಗಿರಣಿಯ ದನಿಯಂತಿದೆ. (ವಿದ್ಯುತ್ ಗಿರಣಿಗಳು ಬರುವದಕ್ಕೂ ಮೊದಲು ಇದ್ದ ಗಿರಣಿಗಳು ಡೀಜೆಲ್(?) ಬಳಸುತ್ತಿದ್ದವು. ಅವು ಪ್ರಾರಂಭವಾಗುವಾಗ ಬಹಳ ಹೊತ್ತಿನವರೆಗೆ ಜೋರಾದ ಸೀಟಿಯನ್ನು ಹೊಡೆಯುತ್ತಿದ್ದವು.)

ಈ ಕೋಗಿಲೆ ಸಾಧಕನನ್ನು ಕರೆಯುವದನ್ನು ನಿಲ್ಲಿಸುತ್ತಲೇ ಇಲ್ಲ(=’ತೆರಪು ಇಲ್ಲ ಒಂದಳತಿ ಕೂಗತsದ’).

“ಆ ಮಾವಿನೊಳಗ ಈ ಸುಗ್ಗಿಯೊಳಗ ಬಂದsದ ಕೋಗಿಲೊಂದು
ತನ್ನ ಜೋಡಿ ಕರೆಧಾಂಗ ಕರಿತsದ ನನ್ನ ಬಾರs ಅಂದು
ಕೂಗೇ ಕೂಗತದ ಕೂಗೇ ಕೂಗತsದ ಗಿರಣಿ ಕರೆಯೊ ಹಾಂಗ
ತೆರಪು ಇಲ್ಲ ಒಂದಳತಿ ಕೂಗತsದ ಬ್ಯಾಸರಿಲ್ಲಧಾಂಗ.”

ಇನ್ನು ಸಾಧಕನ ಮನೋಸ್ಥಿತಿ ಹೇಗಿದೆ?

“ತಿಳಿಯದಾವದೋ ಕಂಪು ಎಳೀತsದ ತುಂಬಿ ಹುಚ್ಚು ಆಗಿ
ಎಚ್ಚರಿಲ್ಲದs ಎತ್ತೊ ತಿರಗತಾವ ದಿಕ್ಕು ತೋರದಾಗಿ
ಬಂತು ಸುಗ್ಗಿ ಬಂದsದ ಸುಗ್ಗಿ ಬರತsದ ಸುಗ್ಗಿ ಎಂದು
ಕುಹೂ ಅನ್ನತದ ಕುಹೂ ಅನ್ನತದ ಕುಹುಕ್ಕುಹೂ ಅಂದು.”

ತುಂಬಿಯನ್ನು ಹುಚ್ಚು ಮಾಡುವಂತಹ ಕಂಪು ವಾತಾವರಣದಲ್ಲಿ ತುಂಬಿದೆ. ಅದು ಎಂತಹ ಕಂಪು ಅನ್ನುವದು ಸಾಧಕನಿಗೆ ತಿಳಿಯದು. ಇಲ್ಲಿಯವರೆಗೂ ಅವನು ಅಂತಹ ಕಂಪನ್ನು ಮೂಸಿಲ್ಲ. ಅವನಿಗೆ ಎಚ್ಚರ ತಪ್ಪಿದಂತಾಗಿದೆ, ದಿಕ್ಕು ತೋರದಂತಾಗಿದೆ. ಅದರ ಜೊತೆಗೇ ಕೋಗಿಲೆಯ ಹಾಡು ಬೇರೆ: ’ಬಂತು ಸುಗ್ಗಿ, ಬಂದsದ ಸುಗ್ಗಿ, ಬರತsದ ಸುಗ್ಗಿ’ ಎಂದು.

ಅಂದರೆ ಇಂತಹ ಸುಗ್ಗಿ ಈ ಮೊದಲೂ ಬಂದಿತ್ತು, ಈಗ ಇಲ್ಲಿ ಬಂದಿದೆ ಹಾಗೂ ಭವಿಷ್ಯದಲ್ಲೂ ಬರುವದು ಎಂದು ಈ ಕೋಗಿಲೆಯ ಕರೆ ಸೂಚಿಸುತ್ತಿದೆ. (ಅರ್ಥಾತ್, ಸುಗ್ಗಿಯೇ ನಿರಂತರ; ಸಂಸಾರವೆಂಬ ಬವಣೆ ತಾತ್ಪೂರ್ತಿಕ. ಈ ಮಾತು ಸಾಧಕನಿಗೆ ನಿಸ್ಸಂಶಯವಾಗಿ ಹೊಳೆದಿದೆ.)

ಈಗ ಮೊದಲ ಬಾರಿ ಸಾಧಕನು ತನ್ನ ಗುರುವಿನ(=ಜೋಗಿಯ) ನೆರವನ್ನು ಬಯಸುತ್ತಾನೆ. ಅವನಿಗೆ ತಾರ ಪಂಚಮದಲ್ಲಿ ಕರೆ ನೀಡುತ್ತಿರುವ ಈ ಕೋಗಿಲೆಯನ್ನು ನೋಡಬಹುದೊ, ಬೇಡವೊ ಎನ್ನುವ ಅನುಮಾನವಿದೆ. ಸಾಧಕನಿಗೆ ಸಿದ್ಧಿಗಳು ಬರುವ ಕಾಲ ಗಂಡಾಂತರದ ಕಾಲ. ಅವು ಅವನ ಹಾದಿಯನ್ನು ತಪ್ಪಿಸಬಹುದು, ಅಥವಾ ಉನ್ನತಿಗೆ ಕರೆದೊಯ್ಯಬಹುದು. ಈ ಕೋಗಿಲೆಯ ಸ್ವರಕ್ಕೆ ಸೋತು, ಅದರಲ್ಲಿ ಲಯವಾಗಿ (ಸಾಧಕನ ಮನಸ್ಸೆಂಬ) ತೋಟವೆಲ್ಲ ಹೂವಾಗಿದೆ, ಹಣ್ಣಾಗಿದೆ. ಬೇರೆ ಕೆಲಸದಲ್ಲಿ ಸಾಧಕನಿಗೆ ಮನಸ್ಸು ತೊಡಗದಂತಾಗಿದೆ. ಕೊಳಲು ನುಡಿಸಿಧಾಂಗ ಕೋಗಿಲೆ ಉಲಿಯುತ್ತದೆ ಎಂದು ಹೇಳುವಲ್ಲಿ, ಈ ಕೋಗಿಲೆಯು ದೈವಿ ಚೈತನ್ಯವೆನ್ನುವ ಸೂಚನೆಯನ್ನು ಬೇಂದ್ರೆ ನೀಡುತ್ತಿದ್ದಾರೆ.

“ತಾರ ಪಂಚಮದಾಗ ಕೋಗಿಲಾ ಕೂಗತsದೊ ಜೋಗಿ
ಯಾವ ಬಣ್ಣ ಅದಕಾವ ಕಣ್ಣು ನಾ ನೋಡಲೇನು ಹೋಗಿ?
ತೋಟವೆಲ್ಲ ಹೂವಾಗಿ ನಿಂತು ತೊಂಗೆಲ್ಲ ಗೊಂಚಲಾಗಿ
ಪಾಡು ಆಗತಾವ, ಹಣ್ಣು ಆಗತಾವ ಅದರ ಲಯಕೆ ತೂಗಿ.”

ಇನ್ನು ಕೋಗಿಲೆಯ ಸ್ಥಿತಿ? ಸಾಧಕನನ್ನು ಕರೆಯುವ ಭರದಲ್ಲಿ ಅದು ಮುಂಜಾವತೊಟ್ಟನ್ನು ಅಂದರೆ ಮುಂಜಾವಿನಲ್ಲಿ ಮೂಡುವ ನೀರತೊಟ್ಟನ್ನು, ಅರ್ಥಾತ್ ಇಬ್ಬನಿಯನ್ನು ಕುಡಿಯುವದನ್ನು (--ಇದು ಕವಿ ಸಮಯ--) ಬಿಟ್ಟುಕೊಟ್ಟು, ತನ್ನ ಕರೆಯ ಸ್ವರವನ್ನು ತೂಗುತ್ತಿದೆ. (ಉಯ್ಯಾಲೆಯಾಡುತ್ತಿರುವ ಸ್ವರ! Pulsating Tune ಎನ್ನಬಹುದೆ?)

“ಮುಂಜಾವತೊಟ್ಟು ಇರು ಹಂಗು ಬಿಟ್ಟು ಬರಿ ಹಾಂಗ ತೂಗತsದೋ
ತಲಿ ಕಾವಿನೊಳಗ ಇಮ್ಮಾವಿನೊಳಗ ಬಿಸಿಗಾಲ ನೂಗತsದೋ
ಕೊಳಲ ನುಡಿಸಿಧಾಂಗ ಕುಹೂಹುಹೂಹೂ ಉಲಿತsದೊ ಜೋಗಿ
ಬೇರೆ ಕೆಲಸದಾಗ ಮನಸು ತೊಡಗದೊ ನೋಡಲೇನು ಹೋಗಿ?”

ಸಿಹಿಯಾದ ಮಾವಿನ ಹಣ್ಣು(ಇಮ್ಮಾವು=ಇನಿದು ಮಾವು) ಅಲ್ಲಿದ್ದರೂ ಸಹ ಅದು ತನ್ನ ತಲೆಯ ಕಾವಿನಲ್ಲಿಯೇ (=ತನ್ನ ಉದ್ದೇಶದಲ್ಲಿಯೇ ಲಕ್ಷವಿಟ್ಟು), ಬಿಸಿಲು ಕಾಲವನ್ನು (in fact ವಸಂತ ಮಾಸವನ್ನು) ಕಳೆಯುತ್ತಿದೆ.

ಈ ಸಮಯದಲ್ಲಿ ತನ್ನ ಶಿಷ್ಯನಿಗೆ ಆಲಂಬನ ನೀಡಲು ಗುರು ಬಂದಿದ್ದಾನೆ. (’ಬಂದೆ ಜೋಗಿ ಬಾ, ಬಾರೊ ಜೋಗಿ ಬಾ, ಏನು ಹೊತ್ತು ಬಂದಿ’, ಅರ್ಥಾತ್ ಅತಿ ಒಳ್ಳೆ ಸಮಯದಲ್ಲಿ ಬಂದಿ. ಏಕೆಂದರೆ), ನೀನು ಉಪದೇಶಿಸಿದ ನಾಮವನ್ನು ಜಪಿಸುವಾಗ ಈ ಸುಗ್ಗಿ ಪ್ರಾರಂಭವಾಗಿದೆ. ತಲೆಯ ಯಾವುದೊ ನಾಡಿಯಲ್ಲಿ ನಾಮದ ಈ ನಾದ ತುಂಬಿ ಮೈಯ ಮೂಲೆ ಮೂಲೆಯನ್ನು ಇದು ಈಗ ವ್ಯಾಪಿಸಿದೆ. ಅರ್ಥಾತ್, ಸಾಧಕನ ಮನಸ್ಸೇ ತೋಟ; ಅಲ್ಲಿಯೇ ದೈವಿ ಸುಗ್ಗಿ ಪ್ರಾರಂಭವಾಗಿದೆ. ಅದರ ಸೂಚನೆಯಾಗಿ ಕೋಗಿಲೆ ಬಂದಿದೆ. ಅದರ ದನಿಯು ಸಾಧಕನ ಮನಸ್ಸನ್ನೆಲ್ಲ ತುಂಬಿ ಬಿಟ್ಟಿದೆ. (ಬೇಂದ್ರೆಯವರ ಮತ್ತೊಂದು ಕವನವನ್ನು ನೆನಪಿಸಿಕೊಳ್ಳಿರಿ:
“ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಂಬಿ ಬಂದಿತ್ತs”)

“ಬಂದೆ ಜೋಗಿ ಬಾ, ಬಾರೊ ಜೋಗಿ ಬಾ, ಏನು ಹೊತ್ತು ಬಂದಿ
ನೀನೆ ಹೇಳಿದಾ ನಾಮ ಜಪಿಸುವಾಗ ಬಂತೊ ಸುಗ್ಗಿ ಸಂಧಿ.
ತಲೆಯ ಯಾವುದೊ ನಾಡಿಯೊಳಗ ಸುರುವಾತು ಸುಗ್ಗಿ ಸೊಲ್ಲು
ಮುಂದೆ ಕೇಳಿದರ ಅದs ತುಂಬಿತೋ ಮೂಲೆ ಮೂಲೆಯಲ್ಲು.”

ಬೇಂದ್ರೆಯವರು ಯೋಗಶಾಸ್ತ್ರದ ಅಭ್ಯಾಸಿಗಳು. ಇಡಾ, ಪಿಂಗಲಾ ಮತ್ತು ಸುಷುಮ್ನಾ ನಾಡಿಗಳಲ್ಲಿ ಶಕ್ತಿಸಂಚಲನೆಯಾಗುವದನ್ನು ಬಲ್ಲವರು. ಅವರು “ಗುರು ನೆನೆದರೆ” ಎನ್ನುವ ತಮ್ಮ ಕವಿತೆಯೊಂದರಲ್ಲಿ ಈ ಶಕ್ತಿ ಸಂಚಲನೆಯನ್ನು “ಅಮೃತಾನಾಡಿಯ ಸೂತ್ರಕೆ ಕುಣಿಯುವ ನಿನ್ನಡಿಗೊ” ಎಂದು ಬಣ್ಣಿಸಿದ್ದಾರೆ.

ಸಾಧಕ ಪ್ರಾಪಂಚಿಕ ಮೋಹಕ್ಕಾಗಲೀ, ಸಿದ್ಧಿಗಳ ಹಿಂದೆ ಆಗಲೀ ಬಿದ್ದವನಲ್ಲ. ಅವನಿಗೆ ಕೋಗಿಲೆಯ ಪರಮಾರ್ಥ ಸ್ವರೂಪ ತಿಳಿದಿದೆ. ಅಂತಲೇ, “ಗುಡಿಗೆ ನಾನು ಹೊರಟಾಗ ಕರೀತದ ಕುಹುಕ್ಕುಹೂ ಎಂದು, ಮನದ ಜಪದ ನಡುನಡುವೆ ನಡೀsತsದ ಓಂ ಕುಹೂ ಎಂದು” ಎಂದು ಸಾಧಕ ಹೇಳುತ್ತಾನೆ. ಈ ಕೋಗಿಲೆಯ ಆವಾಸಸ್ಥಾನವಾಗಲು ತಾನೇ ಮಾಮರವಾಗಿ ಬಿಡುವೆನೇನೊ ಎಂದು ಸಾಧಕನಿಗೆ ಭಾಸವಾಗುತ್ತದೆ. ಈ ತನ್ನ ಭ್ರಮೆಯ ಸಂದರ್ಭದಲ್ಲಿ ತನಗೆ ದಾರಿ ತೋರಬಲ್ಲವನಾದ ಗುರು ಬಂದಿರುವದು ಸಾಧಕನನ್ನು ನಿರಾಳನನ್ನಾಗಿ ಮಾಡಿದೆ.

“ಗುಡಿಗೆ ನಾನು ಹೊರಟಾಗ ಕರೀತದ ಕುಹುಕ್ಕುಹೂ ಎಂದು
ಮನದ ಜಪದ ನಡುನಡುವೆ ನಡೀsತsದ ಓಂ ಕುಹೂ ಎಂದು
ಕನಸಿನೊಳಗ ನಾ ಸ್ವರಾ ಕೇಳಿ ಮಾಮರಾ ಆಗತೇನೊ
ಅಂತ ಭ್ರಮಾ ಆಗ್ಯsದ ಮನಕ ನೀ ಬಂದೆ ಜೋಗಿ ಏನೋ!”

ಅಂತೆಯೇ, ತನ್ನ ಸಂಶಯವನ್ನು ಗುರುವಿನ ಮುಂದಿಟ್ಟು ಸಾಧಕ ಬೆಳಕನ್ನು ಬಯಸುತ್ತಾನೆ. ತನ್ನನ್ನು ಸೆಳೆಯುತ್ತಿರುವ ಈ ಕೋಗಿಲೆ ಪರಮಾರ್ಥ ಸಾಧನೆಗೆ ಸಹಾಯಕವಾಗಿದೆಯೆ? ತನ್ನನ್ನು ಇದು ಯಾಕೆ ಬಿಡದಂತೆ ಕರೆಯುತ್ತಿದೆ. ಯಾವ ಬಾಧೆ(=ಬ್ಯಾನಿ) ಇದನ್ನು ಈ ರೀತಿಯಾಗಿ ಪೀಡಿಸುತ್ತಿದೆ? ಇವು ಸಾಧಕನನ್ನು ಕೊರೆಯುತ್ತಿರುವ ವಿಚಾರಗಳು. ಇದರ ಕರೆಯನ್ನು ಕೇಳಿ ಸುತ್ತಲಿನ ಗುಡ್ಡಗಳು ನುಗ್ಗಾಗಿ ಹೋದವು; ಅಂದರೆ, ಪ್ರಕೃತಿ ಕೋಗಿಲೆಯ ದನಿಗೆ ಸ್ಪಂದಿಸುತ್ತದೆ ಎಂದರ್ಥ.

“ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೊ ಏನೋ
ಯಾಕ ಹಿಂಗ ಅಸರಂತ ಕೂಗತದ ಏನು ಇದಕೆ ಬ್ಯಾನ್ಯೊ
ಸುತ್ತು ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕs
ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs.”


ಇಂತಹ ಎಲ್ಲ ಭ್ರಮೆಗಳ ನಡುವೆಯೂ ಸಾಧಕನ ಮನಸ್ಸಿನಲ್ಲಿ ಒಂದು ಸಂಗತಿ ನಿಚ್ಚಳವಾಗಿ ಕಾಣುತ್ತದೆ. ಅದಕ್ಕೆಂತಲೇ ಆತ ಹೇಳುತ್ತಾನೆ:

“ಬಿಸಿಲು ಕುಣಿದು ಬೆವತsದ ಈಗ ಬಂದsದ ಮಳಿಯ ಹದಕs’.

ಭೂಮಿಯು ಮಳೆಯನ್ನು ಪಡೆಯಲು ಹದವಾಗಿದೆ. ಅದರಂತೆ ತನ್ನ ಮನೋಭೂಮಿಕೆ ಸಹ ಮುಂದಿನ ಸಾಧನೆಗಾಗಿ ಹದವಾಗಿದೆ.

ಕವನ ಇಲ್ಲಿಗೆ ಮುಕ್ತಾಯವಾಗುತ್ತದೆ. ಸಾಧಕನು ಬಹುಶಃ ತನ್ನ ಸಾಧನಾಪಥದಲ್ಲಿ ಮುಂದುವರೆಯುವಬಹುದೆಂದು ಭಾಸವಾಗುತ್ತದೆ.

ಈ ಕವನದಲ್ಲಿ ಮೂರು ಭಾಗಗಳಿರುವದನ್ನು ಕಾಣಬಹುದು. ಮೊದಲನೆಯ ಭಾಗದಲ್ಲಿ ಸಾಧಕನಿಗೆ ಎದುರಾಗುವ ಭಯಂಕರ ಆಮಿಶಗಳು. (ಬುದ್ಧನ ಕತೆಗಳಲ್ಲಿಯೂ ಸಹ, ಆತನು ಜ್ಞಾನೋದಯದ ಸಮಯದಲ್ಲಿ ’ಮಾರ’ನೊಡನೆ ಹೋರಾಡಿದ ವರ್ಣನೆ ಬರುತ್ತದೆ). ಎರಡನೆಯ ಭಾಗದಲ್ಲಿ ಕೋಗಿಲೆಯ ಆಗಮನದಿಂದಾಗುವ ಬದಲಾಗುವ ವಾತಾವರಣ. ಮೂರನೆಯ ಭಾಗದಲ್ಲಿ ಸಾಧಕನ ತಿಳಿಯಾಗುತ್ತಿರುವ ಮನಸ್ಸು. ಈ ಅಲೌಕಿಕ ವ್ಯಾಪಾರವರ್ಣನೆಯನ್ನು, ಬೇಂದ್ರೆ ಲೌಕಿಕ ಪ್ರತಿಮೆಗಳ ಮೂಲಕ ಸಮರ್ಥವಾಗಿ ಚಿತ್ರಿಸಿದ್ದಾರೆ. ಇಷ್ಟು ದಟ್ಟವಾದ ವಾತಾವರಣದ ಸೃಷ್ಟಿಯನ್ನು ಮಾಡಿದ ಕವಿತೆಗಳು ವಿರಳ. ಬಹುಶ: ಬೇಂದ್ರೆಯವರದೇ ಇನ್ನೆರಡು ಕವಿತೆಗಳು (’ಸಣ್ಣ ಸೋಮವಾರ’ ಹಾಗು ’ದೇಮವ್ವನ ಮೆರವಣಿಗೆ’) ಇಂತಹ ಯಶ ಪಡೆದ ಕವಿತೆಗಳು.

ಬೇಂದ್ರೆಯವರು ಈ ಕವಿತೆಗೆ ’ಜೋಗಿ’ ಎನ್ನುವ ಶೀರ್ಷಿಕೆಯನ್ನು ಯಾಕೆ ಕೊಟ್ಟಿರಬಹುದು? In fact, ಜೋಗಿ ಇಲ್ಲಿ ಅಪ್ರತ್ಯಕ್ಷನಾಗಿ ಇದ್ದಾನೆ. ಸಾಧಕನ ತಳಮಳ, ಕೋಗಿಲೆಯ ಮೋಹಕ ಕರೆ, ಕೋಗಿಲೆಯ ಬಗೆಗೆ ಅವನಿಗೆ ಇರುವ ಪ್ರಾಥಮಿಕ ಸಂಶಯ ಹಾಗು ತನ್ನಂತರದ ಭರವಸೆ ಇವೇ ಈ ಕವನದಲ್ಲಿಯ ಪ್ರತ್ಯಕ್ಷ ವಿಷಯಗಳು.

ಜೋಗಿ ಇಲ್ಲದಿದ್ದರೆ, ಇವು ಯಾವೂ ಇರುತ್ತಲೆ ಇರಲಿಲ್ಲ; ಸಾಧಕನಿಗೆ ಜೋಗಿ ಕೊಟ್ಟ ನಾಮದೀಕ್ಷೆಯಿಂದಲೇ ಇದೆಲ್ಲ ಪ್ರಾರಂಭವಾಯಿತು ಎನ್ನುವ ಕಾರಣಕ್ಕಾಗಿ ಈ ಶೀರ್ಷಿಕೆ ಕೊಟ್ಟಿರಬಹುದೆ?
This is one of best poem of Bhendre  which  always looks new to Me Neelanjan

ನಾಕುತಂತಿ .‎ವರಕವಿ ದ.ರಾ.ಬೇಂದ್ರೆ.‎ > ‎

  

೧.ನಾಕು ತಂತಿ
ಮರದಲ್ಲಿರುವ ಹಣ್ಣು ಪಕ್ವವಾಗಬೇಕಾದರೆ ಅದು ಬಿಸಿಲನ್ನು ಉಣ್ಣಬೇಕು. ಗುರುದೇವ ರವೀಂದ್ರನಾಥ ಠಾಕೂರರನ್ನು ಉದ್ದೇಶಿಸಿ ಬರೆದ ಕವನದಲ್ಲಿ, ಬೇಂದ್ರೆ ಇದನ್ನೇ “ ಬಿಸಿಲ್ಹಣ್ಣು ಉಂಡೀದಿ” ಎಂದು ಬಣ್ಣಿಸಿದ್ದಾರೆ
. ಬೇಂದ್ರೆ ಸಹ ಬಾಳಿನಲ್ಲಿ ಸಾಕಷ್ಟು ಬಿಸಿಲ್ಹಣ್ಣು ಉಂಡು ಮಾಗಿದವರು.
ಪ್ರೌಢ ಬೇಂದ್ರೆ ಬರೆದ ಕಾವ್ಯಕ್ಕೂ ’ಮಾಗಿದ’
ಬೇಂದ್ರೆ ಬರೆದ ಕಾವ್ಯಕ್ಕೂ ಇರುವ ವ್ಯತ್ಯಾಸ ಈ ಬಿಸಿಲ್ಹಣ್ಣಿನ ಫಲ
. ’ಅರಳು ಮರಳು’ ಕಾವ್ಯಸಂಗ್ರಹ ಪ್ರಕಟವಾದಾಗ ಬೇಂದ್ರೆಯವರಿಗೆ ೬೦ ವರ್ಷ ವಯಸ್ಸು.
ಅಲ್ಲಿಯವರೆಗಿನ ಅವರ ಕಾವ್ಯದಲ್ಲಿ ಅತ್ಯುಚ್ಚ ಮಟ್ಟದ ಕಲಾಕೌಶಲ್ಯವನ್ನು ಹಾಗು ಕುಸುರಿ ಕೆಲಸವನ್ನು ಕಾಣಬಹುದು.
 ಆನಂತರದ ಕಾವ್ಯದಲ್ಲಿ ಕುಸುರಿ ಕೆಲಸದ ಸ್ಥಾನವನ್ನು ’ಬಯಲ ಭವ್ಯತೆ’ ಆಕ್ರಮಿಸಿಕೊಂಡಿದೆ.
 ಬೇಲೂರು ಶಿಲಾಬಾಲಿಕೆಯ ಮೋಹಕ
ಚೆಲುವಿನ ಬದಲಾಗಿ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಭವ್ಯತೆ ಅವರ ಕಾವ್ಯದಲ್ಲಿ ವ್ಯಕ್ತವಾಗುತ್ತದೆ.
“ನಾಕು ತಂತಿ” ಕಾವ್ಯಸಂಗ್ರಹದಲ್ಲಂತೂ ಅವರ ಕಾವ್ಯ ಬೇರೊಂದು ರೂಪವನ್ನೇ ಪಡೆದಿದೆ.
 ಇದಕ್ಕೆ ಕಾರಣ ಬೇಂದ್ರೆಯವರ ವ್ಯಕ್ತಿತ್ವದ “ಸಂತ-ಈಕರಣ”.
 ಹೀಗಾಗಿ ಅವರ ಮುಂದಿನ ಕವನಗಳಲ್ಲಿ ಮಾತನಾಡುವನು ಕೇವಲ ಕವಿಯಲ್ಲ;
ಕವಿಯ ರೂಪದ ಸಂತ.

ಕೆಲವೊಂದು ದೇವಾಲಯಗಳ ಪೂಜಾರಿಗಳು ವರ್ಷಕ್ಕೊಮ್ಮೆ ನಡೆಯುವ ’ಜಾತ್ರೆ’ಯಲ್ಲಿ ಆ ವರ್ಷದ ’ಕಾರ್ಣಿಕ’
 ಹೇಳುತ್ತಾರೆ. ದೇವರ ಪೂಜೆ ಮುಗಿದ ಬಳಿಕ ಮೈಯಲ್ಲಿ ಆವೇಶ ತುಂಬಿದ ಪೂಜಾರಿ ಒಡನುಡಿಯುತ್ತಾನೆ.
ಅದು ಹೀಗಿರಬಹುದು: “ ಮುತ್ತು ಸುರಿಯುತಾವಲೆ!”.
ಅಥವಾ ಹೀಗೂ ಇರಬಹುದು: “ಕೆಂಡ ಸುರಿಯುತಾವಲೆ!”.
ನೆರೆದ ಭಕ್ತರು ಈ ಕಾರ್ಣಿಕದ ಅರ್ಥವನ್ನು ’
ಈ ವರ್ಷ ಬೆಳೆ ಚೆನ್ನಾಗಿ ಬರುತ್ತದೆ’ ಅಥವಾ ’ಬರುವದಿಲ್ಲ’
ಎಂದೆಲ್ಲ ಮಾಡಿಕೊಳ್ಳುತ್ತಾರೆ.

’ಸಂತ-ಈಕರಣ’ವಾದ ಬೇಂದ್ರೆಯವರ ’
ನಾಕು ತಂತಿ’ ಕವನ ಕಾರ್ಣಿಕದ ಒಡಪಿನ ರೂಪದಲ್ಲಿದೆ.
ಬೇಂದ್ರೆಮಾಸ್ತರ ಬರೆದ ಅಡಿಟಿಪ್ಪಣಿಯ ಮೂಲಕ ’ಅಂಬಿಕಾತನದತ್ತ’ನ
 ಒಡನುಡಿಯ ಒಗಟನ್ನು ಬಿಡಿಸಲು ಪ್ರಯತ್ನಪಡಬೇಕು. ಆದರೂ ನಮಗೆ ಕಾಣುವದು
ನಮ್ಮ ಕಣ್ಣಿನ ಪರಿಮಿತಿಗೊಳಪಟ್ಟು.
’ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿತsದ ಇದರ ನೆಲೆಯು’!

’ನಾಕು ತಂತಿ’ ಕವನದಲ್ಲಿ ನಾಲ್ಕು ಭಾಗಗಳಿವೆ.
ಅವರೇ ಹೇಳುವಂತೆ ಇವು ಒಂದೇ ಭಾಗದ ನಾಲ್ಕು ಮಗ್ಗಲುಗಳು.
 ಮೊದಲನೆಯ ಭಾಗದಲ್ಲಿ ಧ್ವನಿ ಪ್ರಬಲವಾಗಿದ್ದರೆ
, ಎರಡನೆಯ ಭಾಗದಲ್ಲಿ ಪ್ರತಿಮೆಗಳ ಸಾಲಿವೆ.
 ಮೂರನೆಯ ಭಾಗದಲ್ಲಿ ಒಂದು ’ಸವಾಲ್-ಜವಾಬ್’ ಇದೆ.
 ನಾಲ್ಕನೆಯ ಭಾಗ ಮೊದಲನೆಯದರ ಧ್ವನಿಯನ್ನು ಒಡದೇ ಹೇಳುತ್ತದೆ.

(ಭಾಗ-೧)

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾs

ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾs

ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
-ರಸ್ವನಾ

ಹತವೊ ಹಿತವೊ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ

ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ

(ಭಾಗ-೨)

ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡು ನಡುಗಿ;

ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;

ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ
ಸೊಲ್ಲಿನಲಿ;

ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;

ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವದೊ
ನಾ ತಿಳಿಯೆ.

ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.

(ಭಾಗ-೩)

’ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ’

’ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.’

(ಭಾಗ-೪)

’ನಾನು’ ’ನೀನು’
’ಆನು’ ’ತಾನು’
ನಾಕೆ ನಾಕು ತಂತಿ,

ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

ಈಗ ಕವನದ ಮೊದಲನೆಯ ಭಾಗದ ಮೊದಲ ನುಡಿಯನ್ನು ನೋಡಿರಿ:

ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾs

ಆವು ಅಂದರೆ ಗೋವು(=ಕಾಮಧೇನು). (ಆವಿನ ಬಹುವಚನವೆ ಆವುಗಳು=ಆಕಳು). ಆವು ಈಯುತ್ತಿದೆ, ಅಂದರೆ ಏನನ್ನು ಈಯುತ್ತಿದೆ (ಪ್ರಸವಿಸುತ್ತಿದೆ)?

ಆವು ಈಯುತ್ತಿರುವದು:-’ ನಾನು ಹಾಗು ನೀನು ಜೊತೆಯಾಗಿ ಸೃಷ್ಟಿಸಿದ ’ಆನು’ವನ್ನು.
’ಆನು’(= ಈ ಸೃಷ್ಟಿ) ಇದು ’ತಾನು’ವಿನ(=ದೇವರ) ತನನನಾ(=ಸಂತೋಷ).

ಈ ಸರ್ವನಾಮಗಳು ಏನನ್ನು ಸೂಚಿಸುತ್ತಿವೆ? ನಾನು ಹಾಗು ನೀನು ಎಂದರೆ ಗಂಡ, ಹೆಂಡತಿ; ಆನು ಎಂದರೆ ಅವರ ಕೂಸು; ತಾನು ಎಂದರೆ ಅವರೆಲ್ಲರೂ ತಾನೇ ಆದ ದೇವಚೈತನ್ಯ. ಈ ಗಂಡ, ಹೆಂಡತಿ ಎಂದರೆ ಲೌಕಿಕ ಗಂಡ, ಹೆಂಡಿರಾಗಬಹುದು ಇಲ್ಲವೆ ದೈವಿಕ ಮಿಥುನವಾಗಬಹುದು. ನಾನು ಎಂದರೆ ಆತ್ಮಾ . ನೀನು ಎಂದರೆ ಪ್ರಕೃತಿ. ಇವರ ಕೂಸೇ ಈ ಸೃಷ್ಟಿ. ತಾನು ಎಂದರೆ ಇದನ್ನೆಲ್ಲ ಒಳಗೊಂಡ ದೈವಿ ಚೈತನ್ಯ. ಇನ್ನೂ ಒಂದು relevant ಅರ್ಥ ಇಲ್ಲಿದೆ. ನಾನು ಎಂದರೆ ಕವಿ; ನೀನು ಎಂದರೆ ಕಾವ್ಯಪ್ರಜ್ಞೆ. ಕವನ ಇವರೀರ್ವರ ’ಆನು=ಸೃಷ್ಟಿ’. ಆನು ಎನ್ನುವ ಕಾವ್ಯಸೃಷ್ಟಿಯ ’ತಾನ’ ಅಂದರೆ ಸಂಗೀತದ, ತನನನಾs ಎಂದರೆ ಆನಂದಲಹರಿ.


ಎರಡನೆಯ ನುಡಿ ಈ ರೀತಿಯಾಗಿದೆ:

ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾs

ಈ ಸಾಲುಗಳನ್ನು ಈ ರೀತಿಯಾಗಿ ಅರ್ಥೈಸಬಹುದು. ನಾನು ಹಾಗು ನೀನು ಇವುಗಳಿಂದ ಸೃಷ್ಟಿಯಾದ ಈ ನೀ+ನಾ+ಆನಿಗೆ, ಯಾವ ಬೇನೆ (=ಪ್ರಸವವೇದನೆ) ಬೇಕು ಎನ್ನುವದನ್ನು ನಾನು (ಜಾಣಿ=ಜ್ಞಾನಿ) ತಿಳಿದಿದ್ದೇನೆ. ಈನ್ ಎನ್ನುವದಕ್ಕೆ ಸೂರ್ಯ ಎನ್ನುವ ಅರ್ಥವೂ ಇದೆ. ಆದುದರಿಂದ ಕವಿ ಹಾಗು ಕಾವ್ಯಪ್ರಜ್ಞೆ ಸೃಷ್ಟಿಸುತ್ತಿರುವ ಈ ಕಾವ್ಯ ತೇಜಸ್ವಿಯಾಗಿದೆ ಎನ್ನುವ ಅರ್ಥ ಹೊಮ್ಮುತ್ತದೆ.

ಈ ಕಾವ್ಯಸೃಷ್ಟಿಯ ಲಕ್ಷಣಗಳನ್ನು ಬೇಂದ್ರೆ ಮೂರನೆಯ ನುಡಿಯಲ್ಲಿ ನೀಡಿದ್ದಾರೆ:

ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
ರಸ್ವನಾ

ಚಾರು ಅಂದರೆ ನಾಲ್ಕು ಎನ್ನುವ ಅರ್ಥವೂ ಆಗುತ್ತದೆ; ಸುಂದರವಾದ ಎನ್ನುವ ಅರ್ಥವೂ ಆಗುತ್ತದೆ. ಸುಂದರವಾದ, ನಾಲ್ಕು ತಂತ್ರಗಳನ್ನು ಹೊಂದಿದ ಈ ಕಾವ್ಯಸೃಷ್ಟಿಯ ಪ್ರತಿ ಚರಣದಲ್ಲೂ ಹೊಮ್ಮುವ ನಾದ ಯಾವ ರೀತಿಯದಾಗಿದೆ? ಅದು ಮೋಡಗಳು (=ಘನ) ಡಿಕ್ಕಿ ಹೊಡೆಯುವ ಗರ್ಜನೆಯಂತಿದೆ.
(ಶ್ರಾವಣ ಮಾಸದ ಮೋಡಗಳು ಡಿಕ್ಕಿ ಹೊಡೆಯುವಾಗ ಬೇಂದ್ರೆಯವರಿಗೆ ಕೇಳಿಸುವದು ’ಓಂಕಾರ’. ಅವರ ಮತ್ತೊಂದು ಕವನದಲ್ಲಿ ಈ ತರಹದ ಸಾಲೊಂದಿದೆ:
’ಗುಡುಗುಡು ಗುಡುಗುಡು ಗುಡುಗಾಡುತ್ತಿದೆ
ಪ್ರಣವಪ್ರವೀಣನ ನಾದಸ್ಥಂಬ.”).
ಚತುರಸ್ವನಾ ಎನ್ನುವಲ್ಲಿಯೂ ಸಹ ನಾಲ್ಕು ಧ್ವನಿಗಳು ಎನ್ನುವ ಅರ್ಥ ಹಾಗು ಚತುರವಾದ ಎನ್ನುವ ಅರ್ಥ ಕೂಡಿವೆ. ಈ ಚತುರಸ್ವನಗಳು ಯಾವವು? ಅವು ’ನಾನು, ನೀನು, ಆನು, ತಾನು’ ಆಗಿರಬಹುದು ಮತ್ತೂ ಪರಾ, ಪ್ರತ್ಯಕ್, ಪಶ್ಯಂತೀ, ವೈಖರೀ ಆಗಿರಬಹುದು.

(ಅವುಗಳ ಸ್ವರೂಪ ಈ ರೀತಿಯಾಗಿದೆ:
ಮೂಲಾಧಾರ ಚಕ್ರದಲ್ಲಿರುವ ನಿಷ್ಪಂದ ಶಬ್ದಬ್ರಹ್ಮಕ್ಕೆ ’ಪರಾವಾಕ್’ ಎಂದು ಹೇಳಲಾಗುತ್ತದೆ. ಅದು ವಾಯುವಿನ ಜೊತೆಗೂಡಿ, ನಾಭಿಯವರೆಗೆ ಹೋಗಿ (ಸ್ವಾಧಿಷ್ಠಾನ ಚಕ್ರದಲ್ಲಿ), ವಿಮರ್ಶರೂಪದಲ್ಲಿರುವ ಮನಸ್ಸಿನ ಜೊತೆಗೂಡಿ, ’ಪಶ್ಯಂತೀ ವಾಕ್’ ಎನಿಸುತ್ತದೆ.
ಆ ಶಬ್ದಬ್ರಹ್ಮವು ಹೃದಯದವರೆಗೆ ಹೋಗಿ (ಅನಾಹತ ಚಕ್ರದಲ್ಲಿ) ನಾದಮಯವಾಗಿ ’ಮಧ್ಯಮಾ ವಾಕ್’ ಎಂದಾಗುತ್ತದೆ.
ಕಂಠಪ್ರದೇಶದಲ್ಲಿ (ವಿಶುದ್ಧಿ ಚಕ್ರದಲ್ಲಿ) ಅದು ಕೇಳಲು ಯೋಗ್ಯವಾದ ’ವೈಖರೀ ವಾಕ್’ ಆಗುತ್ತದೆ.)

ನಾಲ್ಕು ತಂತ್ರಗಳು ಯಾವವು? ಬಹುಶ: ಇವು ನಾನು, ನೀನು, ಆನು, ತಾನು ಆಗಿರಬಹುದು. ಅಲ್ಲದೇ ಅರವಿಂದ ಮಹರ್ಷಿಗಳು ಸೂಚಿಸಿದ, ಸೌಂದರ್ಯದ ನಾಲ್ಕು ವಿಧಗಳಾಗಿರಬಹುದು( Sensuous Beauty, Intellectual Beauty, Emotional Beauty, Spiritual Beauty). ಈ ನಾಲ್ಕು ತಂತ್ರಗಳೇ ನಾಲ್ಕು ತಂತಿಗಳಾಗಿವೆ.

ನಾಲ್ಕನೆಯ ನುಡಿ ಈ ರೀತಿಯಾಗಿದೆ:

“ಹತವೊ ಹಿತವೊ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ”

ಕಾವ್ಯವು ನಾದರೂಪದಲ್ಲಿ ಹೊಮ್ಮಿದಾಗ ಅದರ ಪಥವೇನೆಂದು ಮೆಲೆ ಚರ್ಚಿಸಲಾಗಿದೆ. (ಬೇಂದ್ರೆ ಕಾವ್ಯವು ’ನಾದಲೀಲೆ’ ಎನ್ನುವದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.) ಅನಾಹತಚಕ್ರದಲ್ಲಿ ಹೊಮ್ಮುವ ನಾದಕ್ಕೆ ಯಾವುದೇ ’ಆಹತ(=ತಾಡನ)’ ಬೇಕಾಗಿಲ್ಲ. ಆ ಕಾರಣದಿಂದಲೇ ಇದಕ್ಕೆ ’ಅನಾಹತ ಚಕ್ರ’ವೆನ್ನುವ ಹೆಸರಿದೆ.

ಅನಾಹತ ಚಕ್ರದಿಂದ ಹೊಮ್ಮುವ, ನಾದಶರೀರಿಯಾದ ಈ ಕಾವ್ಯವು ಹತವೊ, ಹಿತವೊ ಬಲ್ಲವರಾರು? ಏನೇ ಆದರೂ ತನ್ನ ಪ್ರತಿ ಮಿತಿಯಲ್ಲಿಯೂ ಅದು ಸ್ವಾತ್ಮಸಂತೋಷವನ್ನು (=ನನನನಾ) ಹೊಮ್ಮಿಸುತ್ತಿದೆ.

ಐದನೆಯ ನುಡಿ ಈ ರೀತಿಯಾಗಿದೆ:

ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ

ಜನನದ ಧ್ಯಾನವೇ(=ಜಾನಿಕೆ) ಬೆನ್ನಿಗೆ ಆನಿಕೆ(=ಆಧಾರ)ಯಾಗಿದೆ. ಕಾವ್ಯದ ಮನನವೇ ಸ-ಹಿತ-ಸ್ತನಾ ಆಗಿದೆ. ಕಾವ್ಯಶಿಶುವಿಗೆ ಹಿತವಾದ ಸ್ತನ್ಯಪಾನ ಮಾಡಿಸಲು, ಅದರ ಮನನವೇ ಸಾಧನವಾಗಿದೆ.

ಕವಿಯ ಮನಸ್ಸಿನಲ್ಲಿ ಕಾವ್ಯ ಸೃಷ್ಟಿಯಾಗುವ ಹಾಗು ಅದು ಹೊರಬರಲು ತವಕಿಸುವ ವರ್ಣನೆ ಮೊದಲ ಭಾಗದಲ್ಲಿ ಈ ರೀತಿಯಾಗಿ ಬಂದಿದೆ.
ಇನ್ನೂ ಅನೇಕ ಅರ್ಥಗಳು ಈ ಭಾಗಕ್ಕೆ ಇರಬಹುದು. ಇಲ್ಲಿ ’ಹೊಳೆ’ದದ್ದು ಒಂದು ಅರ್ಥ ಮಾತ್ರ.

’ನಾಕು ತಂತಿ’ಯ ಎರಡನೆಯ ಭಾಗದಲ್ಲಿ ೬ ನುಡಿಗಳಿವೆ:
ಈ ಭಾಗದಲ್ಲಿ ಅಮೂರ್ತ ಕಾವ್ಯದ ಮೂರ್ತೀಕರಣವಿದೆ.

ಮೊದಲನೆಯ ಭಾಗದಲ್ಲಿ ಆವು (ಅಂದರೆ ಕಾಮಧೇನು=ದೈವೀ ಅನುಗ್ರಹ) ಈಯುತ್ತಿದ್ದ ಅಮೂರ್ತ ಕಾವ್ಯದ ವರ್ಣನೆ ಇದೆ. ಎರಡನೆಯ ಭಾಗದಲ್ಲಿ ಕಾವ್ಯಕನ್ನೆ ಕವಿಯ ಮನಸ್ಸಿನಲ್ಲಿ ಮೂಡಿದ್ದಾಳೆ. ಅವಳ ವ್ಯಕ್ತರೂಪದ ವರ್ಣನೆ ಇಲ್ಲಿದೆ.
ಮೊದಲನೆಯ ನುಡಿ ಹೀಗಿದೆ:

ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡು ನಡುಗಿ;

ಈ ಕಾವ್ಯಕನ್ಯೆ ಗೋವಿನ ಅಂದರೆ ಮೊದಲ ಭಾಗದ ಮೊದಲ ನುಡಿಯಲ್ಲಿ ಬಂದ ’ಆವಿ’ನ ಕೊಡುಗೆ. ಇವಳು ಕವಿಯ ಹೃದಯಸಮುದ್ರದಲ್ಲಿ ನೌಕಾರೂಢಳಾಗಿ ಬರುತ್ತಿದ್ದಾಳೆ.
( ಬೇಂದ್ರೆಯವರ ’ಹೃದಯ ಸಮುದ್ರ’ ಕವನವನ್ನು ನೆನೆಪಿಸಿಕೊಳ್ಳಿರಿ:
“ಬಂಗಾರನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ
ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವದು ಪುಟ್ಟ ಪೂರಾ”).

ಕಾವ್ಯಕನ್ಯೆ ಬೆಡಗಿನಿಂದ ಬರುತ್ತಿದ್ದಾಳೆ. ಆದರೆ ನಡು ನಡುಗಿ ಏಕೆ ಬರುತ್ತಿದ್ದಾಳೆ? ಕಾತರದಿಂದಾಗಿ ನಡುಗುತ್ತಿದ್ದಾಳೆ ಎಂದು ಭಾವಿಸಬೇಕೆ? ಅಥವಾ ನಡು ಅಂದರೆ ಟೊಂಕವು ನಡುಗಿ ಎಂದರೆ ನರ್ತಿಸುತ್ತ ಎಂದು ಭಾವಿಸಬೇಕೆ? ಎರಡೂ ರೀತಿಯಲ್ಲಿ ಅರ್ಥೈಸಬಹುದು.

ಎರಡನೆಯ ನುಡಿ ಹೀಗಿದೆ:

ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;

ಇದೊಂದು ಅತ್ಯಂತ ಸುಂದರವಾದ ನುಡಿ. ಕವಿಗೆ ಹಾಗು ಕಾವ್ಯಕನ್ಯೆಗೆ ಇರುವ ಸಂಬಂಧವನ್ನು ಕವಿ ’ಸಲಿಗೆಯ ಸುಲಿಗೆ’ ಎಂದು ಬಣ್ಣಿಸುತ್ತಾನೆ. ಅವಳ ಉಡುಪಾದರೊ ಬಯಲಿನ ನೆಯ್ಗೆಯ ಸಿರಿಯುಳ್ಳದ್ದು. ಈ ಕಾವ್ಯಕನ್ಯೆಯಲ್ಲಿ ಕವಿಗಿರುವದು ಬಯಕೆಯ ಒಲುಮೆ.

ಮೂರನೆಯ ನುಡಿ ಹೀಗಿದೆ:

ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ
ಸೊಲ್ಲಿನಲಿ;

ಕಾವ್ಯಕನ್ಯೆಯ ನಡಿಗೆ ಕವಿಯ ನಾಡಿಸ್ಪಂದನಕ್ಕೆ ಅನುಸ್ಪಂದಿಯಾಗಿದೆ. ಅವಳ ’ವಾಕ್’ ಅನ್ನು ಕವಿ ನಲುವಿನ ನಾಲಿಗೆ ಅಂದರೆ ಆಹ್ಲಾದಕರವಾಗಿದೆ ಹಾಗೂ ಅದು ’ಸೋಲುವ(=ಮರಳಾಗುವ) ಸೊಲ್ಲಿನಲಿ’ ನೆನೆದಿದೆ ಎಂದು ಹೇಳುತ್ತಾನೆ.

ನಾಲ್ಕನೆಯ ನುಡಿ ಹಿಗಿದೆ:

ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;

ಇದುವರೆಗೂ ಯಾರೂ ಮುಟ್ಟದಂತಹ, (ಈವರೆಗೂ ಹುಟ್ಟಿರದಂತಹ) ಜೇನುಹುಟ್ಟಿನ (-ಜೇನು ಹುಟ್ಟು ಹುಟ್ಟಿರುವದಿಲ್ಲ; ಅದನ್ನು ಜೇನುಹುಳುಗಳು ಕಟ್ಟಿರುತ್ತವೆ-) ಜೇನನ್ನು , ಕಾವ್ಯಕನ್ಯೆ ಕವಿಯ ಸನಿಹದಲ್ಲಿ ಹನಿಸುತ್ತಾಳೆ. ಈ ಹನಿಯುವಿಕೆಯು ಜೇನಿನ ಮಳೆಯನ್ನೆ ಥಳಿ ಹೊಡೆದ ಹಾಗೆ ಸುಖಕರವಾಗಿದೆ. ( ’ಹನಿ’ ಎನ್ನುವಲ್ಲಿ drop ಹಾಗು ’honey’ ಎರಡೂ ಇರುವದು ಸ್ವಯಂವೇದ್ಯ).

ಐದನೆಯ ನುಡಿ ಹೀಗಿದೆ:

ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವದೊ
ನಾ ತಿಳಿಯೆ.

ಈ ಎಲ್ಲ ಕ್ರಿಯೆಯಲ್ಲಿ ವೆಚ್ಚವಾದದ್ದೇನು? ಕವಿಯ ಉದ್ವೇಗಸ್ಥಿತಿಯ catharsisಏ? ಈ ಭಾವನೆ ಕವಿಯನ್ನು ಬೆಚ್ಚಿಸುತ್ತದೆ.
(ವಾಲ್ಮೀಕಿಯ ಉದ್ವೇಗ ಕೊನೆಗೊಮ್ಮೆ ರಾಮಾಯಣದ ರಚನೆಯಲ್ಲಿ ಮುಕ್ತಿ ಪಡೆದದ್ದನ್ನು, ಗೋಪಾಲಕೃಷ್ಣ ಅಡಿಗರು ಬಣ್ಣಿಸುವದು ಹೀಗೆ:
“ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ, ರಾಮಾಯಣಶ್ಲೋಕ ರೇಶ್ಮೆದೊಗಲು”.)
ಕವಿಯ ಬಸರಿನಲ್ಲಿ ಕಾವ್ಯವಂತೂ ಮೊಳೆದಿದೆ. ಇನ್ನೂ ಏನು ಬಚ್ಚಿಕೊಂಡಿದೆ ಎನ್ನುವದು ಕವಿಗೆ ಗೂಢವಾಗಿದೆ.

ಆರನೆಯ ನುಡಿ ಹಿಗಿದೆ:

ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.

ಕವಿಯನ್ನು ಪ್ರೇರೇಪಿಸಿದ ಭಾವ ಈಗ ಹಳೆಯದಾಯಿತು. ಕವಿತೆ ಹುಟ್ಟಿದ್ದರಿಂದ ಹೊಸ ಬೆಳಗು (=ಜಾವ=ಯಾಮ) ಉದ್ಭವವಾಯಿತು. ಈ ನವಶಿಶುವಿಗೆ ಮೊಲೆ ಊಡಿಸುವಳು ಕವಿಯ ಪ್ರತಿಭೆ. ಅವಳು ಹೊಸ ಹೊಸ ಸ್ಫುರಣಗಳನ್ನು ಮಾಡುವ ಸಾಮರ್ಥ್ಯವುಳ್ಳವಳು(=ಪ್ರತಿಭಾ ನವನವೋನ್ಮೇಶಶಾಲಿನೀ).


ಮೂರನೆಯ ಭಾಗದಲ್ಲಿ ಎರಡೇ ನುಡಿಗಳಿವೆ:

ಮೂರನೆಯ ಭಾಗವು ಸವಾಲು-ಜವಾಬಿನ ರೂಪದಲ್ಲಿದೆ ಎಂದು ಬೇಂದ್ರೆ ಮಾಸ್ತರರ ಅಡಿಟಿಪ್ಪಣಿ ಹೇಳುತ್ತದೆ.
ಸವಾಲು ಮಾಡುವವರು ಇಬ್ಬರು. ಒಬ್ಬಳು ಸಾವೀ ಮಗಳು, ಮತ್ತೊಬ್ಬಳು ಭಾವೀ ಮಗಳು.

’ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿsಯೊ ಮಗನs
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ’

’ಕುರುಡು ಚಿತ್ತಿಯ ಮಳೆಗೆ ಚಿತ್ತವೇ ಕುರುಡಹುದು’ ಎಂದು ಬೇಂದ್ರೆ ತಮ್ಮ ಒಂದು ಕವನದಲ್ಲಿ ಉಸುರಿದ್ದಾರೆ. ಆದರೆ ಈ ಚಿತ್ತಿ ಮಳೆ ಸಹ ತತ್ತಿಯನ್ನು ಅಂದರೆ ಕಾವ್ಯಭಾವದ ತತ್ತಿಯನ್ನು ಇಡುತ್ತಿದೆ. ಈ ಎಲ್ಲ ತತ್ತಿಗಳೂ ಸಫಲವಾಗುವದಿಲ್ಲ. ಸ್ವಾತಿ ಮಳೆ, ಸಿಂಪಿನಲ್ಲಿ ಸೇರಿದಾಗ ಮಾತ್ರ ಮುತ್ತು ಹುಟ್ಟುತ್ತದೆ. ಅದಕ್ಕಾಗಿಯೇ ’ಸತ್ತಿsಯೊ ಮಗನs’ ಎಂದು ಸಾವೀ ಮಗಳು ಹಾಗು ಭಾವೀ ಮಗಳು ಕವಿಗೆ ಎಚ್ಚರಿಕೆ ನೀಡುತ್ತಾರೆ. ಈ ಸಾವೀ ಮಗಳು ಹಾಗು ಭಾವೀ ಮಗಳು ಯಾರು? ಭೂತ ಹಾಗು ಭವಿಷ್ಯದ ಪ್ರತಿನಿಧಿಗಳೆ? ಇರಬಹುದು. ಅಥವಾ ಅರವಿಂದರ ಮಹಾಕಾವ್ಯದ ’ಸಾವಿತ್ರಿ’ ಮತ್ತು ಅವರದೇ ಕೃತಿಯಾದ “The Future poetry” ಇರಬಹುದೆ?

ಮತ್ತೂ ಒಂದು ಅರ್ಥವು ಇಲ್ಲಿ ಹೊರಡುತ್ತದೆ:
ಚಿತ್ತಿ ಅಂದರೆ ’ಚಿತ್’. ಅದು ಸ್ವಾತಿಮುತ್ತಾಗಬೇಕಾದರೆ, ಅದು ’ಸತ್’ದೊಡನೆ ಸೇರಬೇಕು. ಈ ಎಚ್ಚರಿಕೆಯನ್ನು
ಸಾವೀ ಮಗಳು ಹಾಗು ಭಾವೀ ಮಗಳು ನೀಡುತ್ತಿದ್ದಾರೆಯೆ? ಬೇಂದ್ರೆಯವರ ಕವನದಲ್ಲಿ ಯಾವಾಗಲೂ ಅನೇಕ ಧ್ವನಿಗಳು ಹೊರಡುತ್ತವೆ.

ಈ ಸವಾಲಿಗೆ ಅಂಬಿಕಾತನಯದತ್ತರ ಜವಾಬು ಈ ರೀತಿಯಾಗಿದೆ:

’ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.’

“ಕರಗ್ರಾಹ್ಯಂ ಶಂಭೋರ್ಮುಖಮುಕುರವೃಂತಂ ಗಿರಿಸುತೇ,
ಕಥಂಕಾರಂ ಬ್ರೂಮಸ್ತವಚುಬುಕಮೌಪಮ್ಯರಹಿತಮ್||”
ಎಂದು ಶಂಕರಾಚಾರ್ಯರು ಪಾರ್ವತಿಯ ವದನವನ್ನು ಶಿವನ ಮುಖಕ್ಕೆ ಹಿಡಿದ ಕನ್ನಡಿ ಎಂದು ವರ್ಣಿಸಿದ್ದಾರೆ. ಅರ್ಥಾತ್ ಪಾರ್ವತಿಯ ಮುಖವೆಂಬ ಕನ್ನಡಿಯಲ್ಲಿ ಪ್ರತಿಬಿಂಬಿತವಾಗುವದು ಪರಮೇಶ್ವರನ ಮುಖವೇ. ಅಥವಾ ’ವಾಕ್’ನಲ್ಲಿ ಪ್ರತಿಫಲನವಾಗುವದು ’ಅರ್ಥ’. (’ವಾಗರ್ಥಾವಿವ ಸಂಪೃಕ್ತೌ’). ಅಂದರೆ ಅಮ್ಮನ ಮುಖದಲ್ಲಿ ಕಾಣುವದು ಅಪ್ಪನ ಮುಖ.
ಈ ತಾಯಿಯ ಭಾರ ಹೊತ್ತವನು ತಂದೆ. ಅದಕ್ಕಾಗಿಯೇ ಅವಳು ’ಭಾರ್ಯಾ’, ಅವನು ’ಭರ್ತಾ’. ಈ ಜಗತ್ತು ಈ ದೈವೀ ತಂದೆ-ತಾಯಿಗಳ ಕೂಸು(ಜಗತ: ಪಿತರೌ). ಈ ನುಡಿಯ ಮೊದಲಿನ ಮೂರು ಸಾಲುಗಳಲ್ಲಿ ಬೇಂದ್ರೆಯವರು, ಕಾಳಿದಾಸನು ತನ್ನ ’ಕುಮಾರಸಂಭವ’ ಕಾವ್ಯಕ್ಕೆ ಬರೆದ ನಾಂದೀಪದ್ಯವನ್ನು ನೆನಪಿಸುತ್ತಾರೆ:

“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ”

ಅಂಬಿಕಾತನಯದತ್ತನು ತಾನು ಈ ದೈವೀ ಮಿಥುನದ ಕಂದನೆಂದು ಹೇಳಿಕೊಳ್ಳುತ್ತಾನೆ. ದೈವಿ ಚೈತನ್ಯವನ್ನು ಅನುಭವಿಸುವವರಿಗಲ್ಲದೆ ಬೇರೆಯವರಿಗೆ ಈ ಘೋಷಣೆ ಅಸಾಧ್ಯ. ’ಶ್ರೀ ಗುರುದತ್ತ ಅಂದ’ ಅಂದರೆ ಶ್ರೀ ಗುರುದತ್ತನು ಈ ರೀತಿಯಾಗಿ ಹೇಳಿದನು ಎನ್ನುವ ಅರ್ಥದೊಡನೆಯೇ , ಗುರುದತ್ತನು ಅಂದವಾಗಿದ್ದಾನೆ ಎನ್ನುವ ಅರ್ಥವೂ ಸಹ ಸೇರಿಕೊಂಡಿದೆ.

ಕೊನೆಯದಾದ ನಾಲ್ಕನೆಯ ಭಾಗದಲ್ಲಿ ಎರಡು ನುಡಿಗಳಿವೆ:

’ನಾನು’ ’ನೀನು’
’ಆನು’ ’ತಾನು’
ನಾಕೆ ನಾಕು ತಂತಿ,

ಕವಿಯು ’ಸಂಸಾರದ ಅರ್ಥವಿರುವದು ಈ ನಾಲ್ಕೇ ತಂತಿಗಳಲ್ಲಿ (ನಾನು, ನೀನು, ಆನು, ತಾನು)’ ಎಂದು ಪುನರುಚ್ಚರಿಸುತ್ತಾನೆ. ತಂತಿ ಮಿಡಿಯುತ್ತಿರಲಿ ಅಥವಾ ನಿಲ್ಲಲಿ, ಈ ಚೌದಂಡಿಗೆಯ ಶ್ರಾವ್ಯ ಮತ್ತು ಶ್ರವಣಾತೀತ ಸ್ವರ ಉಸಿರುವದು ಒಂದೇ ರಾಗ: ’ಓಂ ದಂತಿ’ ಎಂದು.

ಸೊಲ್ಲಿಸಿದರು
ನಿಲ್ಲಿಸಿದರು
ಓಂ ಓಂ ದಂತಿ!
ಗಣನಾಯಕ
ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ
ಕುರಿಯ ಕಣ್ಣು
ಧಾತು ಮಾತು
ಕೂಡಿ.

ಇಲ್ಲಿಯವರೆಗೆ ನಾನು, ನೀನು, ಆನು ತಾನು ಮಾತ್ರ ಇದ್ದುದು ಈಗ ’ದಂತಿ’ಯ ಪ್ರವೇಶವಾಗುತ್ತದೆ. ದಂತಿ ಎಂದರೆ ಗಣಪತಿ. ಆ ಗಣನಾಯಕನೇ ಈ ’ಮೈ ಮಾಯಕ’ವನ್ನು ,ಕಾವ್ಯವನ್ನು (-ಯಾಕೆಂದರೆ ಕಾವ್ಯವೆಂದರೆ ಕವಿಯ ಮಾಯಾಶರೀರ -) ಸೈ ಸಾಯಕ ಮಾಡಿ (-ಸೈ=ಸರಿಯಾದ, ಸಾಯಕ=ಬಾಣ-) ಪ್ರಯೋಗಿಸಬೇಕು. ಈ ಪ್ರಯೋಗ ಹೇಗಿರಬೇಕೆಂದರೆ, ಅದು ಗುರಿಯ ತುಂಬಿ(=ಗುರಿಯ ಕಡೆಗೆ ಲಕ್ಷ್ಯ ತೊಟ್ಟು), ಕುರಿಯ ಕಣ್ಣು(ಕುರಿತು=ನಿರ್ದಿಷ್ಟವಾಗಿ ದೃಷ್ಟಿಸುತ್ತ) ಅಥವಾ bull’s eyeದಂತೆ ಇರಬೇಕು. ಇದರ ಫಲವೆಂದರೆ ಧಾತು (ಅರ್ಥ) ಮತ್ತು ಮಾತು( ವಾಕ್) ಕೂಡಿರಬೇಕು.

ಬೇಂದ್ರೆಯವರು ತಾವು ಬಳಸುವ ಪದಗಳಿಗೆ ಇತರ ಭಾಷೆಯಲ್ಲಿರುವ ಅರ್ಥಗಳನ್ನೂ ಜೋಡಿಸಿರುತ್ತಾರೆ. ಉದಾಹರಣೆಗೆ ’ಮೈ ಮಾಯಕ’ದಲ್ಲಿ ಮೈ ಪದವನ್ನು ಮೂರು ಅರ್ಥಗಳಲ್ಲಿ ಬೇಂದ್ರೆ ಬಳಸಿದ್ದಾರೆ.
(೧) ಮೈ= ಶರೀರ
(೨) ಮೈ= ಮಹಿಮೆ
(೩) ಮೈ= my
ಇದರಂತೆ ’ಸಾಯಕ’ಕ್ಕೆ ಬಾಣ ಹಾಗು ಸಹಾಯಕ ಎನ್ನುವ ಎರಡೂ ಅರ್ಥಗಳನ್ನು ಉಪಯೋಗಿಸಬಹುದು.
’ಕುರಿ’ ಎನ್ನುವ ಪದ ಕುರಿತು ಎಂದರೆ ನಿರ್ದಿಷ್ಟ ಎನ್ನುವ ಅರ್ಥ ಕೊಡುವಂತೆಯೇ ’ಗುರಿ’ ಎನ್ನುವ ಪದಕ್ಕೆ ಧ್ವನಿಸಂವಾದಿ ಪದವೂ ಆಗಿದೆ. ಇದಕ್ಕೆ ಉದಾಹರಣೆಯಾಗಿ ಅವರ ಬೇರೊಂದು ಕವನದ ಎರಡು ಸಾಲುಗಳನ್ನು ಇಲ್ಲಿ ಕೊಡುತ್ತೇನೆ:

“ಘುರ್ರೆ ಘುರ್ರೆ ಘೋಟಕಾ
ನಡೆ ಅಂತಃಸ್ಫೋಟಕಾ”.

ಘುರ್ರೆ ಅನ್ನುವದು ತೆಲುಗಿನ ಕುರ್ರಂ(=ಕುದುರೆ) ಅನ್ನುವ ಪದಕ್ಕೆ ಹಾಗು ಘೋಟಕಾ ಎನ್ನುವದು ಹಿಂದಿ ಭಾಷೆಯ ಘೋಡಾ(=ಕುದುರೆ) ಪದಕ್ಕೆ ಧ್ವನಿಸಂವಾದಿ ಪದಗಳಾಗಿರುವದನ್ನು ಗಮನಿಸಬೇಕು. ಇಂತಹ ಬಳಕೆ ಬೇಂದ್ರೆಯವರ ಕಾವ್ಯದಲ್ಲಿ ಸಾಮಾನ್ಯ.

ಓರ್ವ ಯುರೋಪಿಯನ್ ವಿಮರ್ಶಕನು ’ಒಂದು ಪದದ ಪ್ರಾಚೀನ, ಅರ್ವಾಚೀನ ಮೊದಲಾದ ಎಲ್ಲ ಅರ್ಥಗಳನ್ನು ಗ್ರಹಿಸಬಲ್ಲವನೆ ಕವಿ’ ಎಂದು ಹೇಳಿದ್ದಾನೆ. ಬೇಂದ್ರೆಯವರು ಒಂದು ಪದದ ಎಲ್ಲ ಅರ್ಥಗಳನ್ನು ತಮ್ಮ ಕವನಗಳಲ್ಲಿ ದುಡಿಸಿಕೊಳ್ಳುತ್ತಾರೆ. ಅವರ ಕವನಗಳಿಗೆ ಒಂದಕ್ಕಿಂತ ಹೆಚ್ಚು ಧ್ವನಿಗಳಿರುತ್ತವೆ.
I firmly believe that Bhendre saw the  attainment of life in is poetry--NEELANJAN