Wednesday, September 1, 2010

Saint Shisuvinal Shariff ( ಶರೀಫರ ರಚನೆ)



ಸೋರುತಿಹುದು ಮನೆಯ ಮಾಳಿಗಿ
ಅಜ್ನಾನದಿಂದ
ಸೋರುತಿಹುದು ಮನೆಯ ಮಾಳಿಗಿ.
ದಾರು ಗಟ್ಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ.
ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೇರುಗಿಂಡಿ
ಮೇಲಕೇರಿ ಹೋಗಲಾರೆ.
ಕರಕಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೆ ಮಣ್ಣು
ಒಳಗೆ ಹೊರಗೆ ಏಕವಾಗಿ.
ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬು ಮಳೆಯು
ಎಂತೊ ಶಿಶುನಾಳಧೀಶನ ತಾನು
ನಿಂತು ಪೊರೆವನು ಎಂದು ನಂಬಿದೆ.
ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವ ಸಾಧಕರು, ತಾವು ಈ ದರ್ಶನಕ್ಕೆ ಅರ್ಹರೊ ಎಂದು ತಮ್ಮನ್ನೆ ಪರೀಕ್ಷಿಸಿಕೊಳ್ಳುವದು ಸಹಜ. ಕನ್ನಡ ನಾಡಿನಲ್ಲಿ ಬಾಳಿದ, ಇಲ್ಲಿಯ ನಾಡಿಗರ ಮನಸ್ಸನ್ನು ಬೆಳಗಿದ ಇಬ್ಬರು ಅನುಭಾವಿಗಳಾದ ಬಸವಣ್ಣ ಹಾಗೂ ಶರೀಫರು ಇಂತಹ ಭಾವನೆಗಳನ್ನು ತಮ್ಮ ವಚನ ಹಾಗೂ ಹಾಡಿನಲ್ಲಿ ವ್ಯಕ್ತಪಡಿಸಿದ್ದಾರೆ.

ಇವರಲ್ಲಿ ಮೊದಲಿಗರಾದ ಬಸವಣ್ಣನವರ ವಚನವನ್ನೇ ಗಮನಿಸಿರಿ:
“ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲಾ
ಕೂಡಲಸಂಗಮ ದೇವಾ!”
ಬಸವಣ್ಣನವರು ತಮ್ಮ ತನು ಹಾಗೂ ಮನವನ್ನು ಮನೆಗೆ ಹೋಲಿಸಿ, ಈ ಮನೆಯಲ್ಲಿ ಕೇವಲ ಕಸ ಕಡ್ಡಿ ತುಂಬಿಕೊಂಡಿದೆ; ಈ ಮನೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಒಡೆಯನು ಇಲ್ಲವಲ್ಲ ಎಂದು ವಿಷಾದಿಸುತ್ತಾರೆ. ಮನೆಯನ್ನು ಸ್ವಚ್ಛಗೊಳಿಸುವ ಒಡೆಯ ಅಂದರೆ ತಿಳಿವನ್ನು ಪಡೆದ ಆತ್ಮ ಅಥವಾ ಪರಮಾತ್ಮ.
ಇದರಂತೆಯೆ, ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಬಾಳಿದ ಶರೀಫರು ಸಹ ಮನೆಯನ್ನು ಮನಸ್ಸಿಗೆ ಅಥವಾ Selfಗೆ ಹೋಲಿಸಿ ಹಾಡಿದ್ದಾರೆ.
ಶರೀಫರ ಹಾಡು ಹೀಗಿದೆ:
ಸೋರುತಿಹದು ಮನಿಯ ಮಾಳಿಗಿ, ಅಜ್ಞಾನದಿಂದ
ಸೋರುತಿಹದು ಮನಿಯ ಮಾಳಿಗಿ ||ಪಲ್ಲ||
ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ ||೧||
ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ ||೨||
ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ ||೩||
ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ ||೪||
ಶರೀಫರು ಜೀವಿಸಿದ್ದ ಬೆಳವಲ ನಾಡಿನಲ್ಲಿ ಮಳೆ ಕಡಿಮೆ. ಆದುದರಿಂದ ಮನೆಯ ಮೇಲ್ಭಾಗವು (roof) ಮಣ್ಣಿನದಾಗಿರುತ್ತಿತ್ತು. ಇದಕ್ಕೆ ಮೇಲ್ಮುದ್ದಿಯ ಮನೆ ಎಂದು ಹೇಳುತ್ತಾರೆ. ಈ ಮೇಲ್ಮುದ್ದಿಗೆ ಆಧಾರ ಎಂದು ಕೆಳಭಾಗದಲ್ಲಿ ಕಟ್ಟಿಗೆಯ ತೊಲೆ ಹಾಗೂ ಜಂತಿಗಳನ್ನು ಬಳಸಿರುತ್ತಾರೆ.
ಮಣ್ಣಿನ ಮೇಲ್ಮುದ್ದಿಯಾಗಿರುವದರಿಂದ, ಇಲ್ಲಿ ಹುಲ್ಲು ಬೆಳೆಯುವದು ಸ್ವಾಭಾವಿಕ. ತೇವಾಂಶದಿಂದಾಗಿ ತೊಲೆ ಹಾಗೂ ಜಂತಿಗಳು ಕೆಡುವದೂ ಸಹ ಸ್ವಾಭಾವಿಕ. ಇದರಿಂದಾಗಿ ಮನೆಯ ಮಾಳಿಗೆ ಸೋರಲು ಪ್ರಾರಂಭವಾಗುತ್ತದೆ.
ಈ ಮೇಲ್ಮುದ್ದಿಯನ್ನು ಮಳೆಗಾಲಕ್ಕಿಂತ ಮೊದಲೇ ದುರಸ್ತು ಮಾಡಬೇಕಾಗುತ್ತದೆ.
ಈ ಹಾಡಿನಲ್ಲಿ ಶರೀಫರು ತಮ್ಮ self ಅಥವಾ ಮನಸ್ಸನ್ನು ಒಂದು ಮನೆಗೆ ಹೋಲಿಸಿ ಹಾಡಿದ್ದಾರೆ. ಈ ಮನೆಯ ಮಾಳಿಗೆ ಗಟ್ಟಿಯಾಗಿ ಉಳಿದಿಲ್ಲ, ಅದೀಗ ಸೋರುತ್ತಿದೆ. ಸೋರುವಿಕೆಗೆ ಅಜ್ಞಾನವೇ ಕಾರಣವೆಂದು ಶರೀಫರು ಮೊದಲಿನಲ್ಲಿಯೇ ಸಾರಿ ಬಿಡುತ್ತಾರೆ. ಈ ಅಜ್ಞಾನದ ಸ್ವರೂಪವೇನು? ಆತ್ಮಜ್ಞಾನವಿಲ್ಲದಿರುವದೇ ಅಜ್ಞಾನ! ಸೋರುವಿಕೆ ಎಂದರೇನು? ಮನೆಯನ್ನು ಸ್ವಚ್ಛವಾಗಿರಿಸಲು ಸಾಧ್ಯವಿಲ್ಲದಂತೆ, ಹೊರಗಿನ ಕಸಕಡ್ಡಿ, ಹುಳಹುಪ್ಪಡಿ ಇವೆಲ್ಲ ಮನೆಯ ಒಳಗೆ ಪ್ರವೇಶ ಪಡೆಯುವದು ಅಂದರೆ ವಿಕಾರಗಳು ಮನಸ್ಸನ್ನು ಪ್ರವೇಸಿಸುವದು.
ಹಾಗಾದರೆ, ಈ ಮಾಳಿಗೆಯನ್ನು ಸರಿಪಡಿಸಲು ಶರೀಫರಿಗೆ ಇರುವ ತೊಂದರೆ ಏನು? ಈ ಹಾಡಿನ ಮೊದಲನೆಯ ನುಡಿಯಲ್ಲಿ ಶರೀಫರು ತಮ್ಮ ಅಸಹಾಯಕತೆಯನ್ನು ವಿವರಿಸಿದ್ದಾರೆ:
ಸೋರುತಿಹದು ಮನಿಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಮೆಟ್ಟಲಾರೆ ||
ಸೋರುತ್ತಿರುವ ಮನೆಯ ಮಾಳಿಗೆಯ ದಾರು(=ಮರ=timber)ಅನ್ನು ಗಟ್ಟಿ ಮಾಡುವವರು ಯಾರೂ ಇಲ್ಲ. ಮನೆಯನ್ನು ಕಾಳಕತ್ತಲೆಯು ಆವರಿಸಿರುವದರಿಂದ, ಮೆಟ್ಟಲು ಹತ್ತಿ, ಮಾಳಿಗೆಯನ್ನು ಏರಲು ಶರೀಫರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಹೊತ್ತಿನಲ್ಲಿ ಇವರು ಮೇಲೆ ಏರುವದು ಹೇಗೆ? ಮೇಲ್ಮುದ್ದಿಯ ತೊಲೆ ಹಾಗೂ ಜಂತಿಗಳನ್ನು ಸರಿಪಡಿಸುವದು ಹೇಗೆ?
ಎರಡನೆಯ ನುಡಿಯಲ್ಲಿ ಶರೀಫರು ಈ ಮಾಳಿಗೆಯು ಎಷ್ಟರಮಟ್ಟಿಗೆ ನಾದುರಸ್ತ ಆಗಿದೆ ಎನ್ನುವದನ್ನು ವರ್ಣಿಸಿದ್ದಾರೆ:
ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರಕ ಚಪ್ಪರ ಜೇರು ಗಿಂಡಿ
ಮೇಲಕೇರಿ ಮೆಟ್ಟಲಾರೆ ||
ಈ ಮನೆಯ ಮಾಳಿಗೆಯ ತೊಲೆ ಮುರಿದಿದೆ; ಜಂತಿಗೆ ಹುಳುಕು ಹತ್ತಿದೆ; ಹುಳ ಕೊರೆದದ್ದರಿಂದ ಜಂತಿ ಹಾಗೂ ತೊಲೆಗಳನ್ನು ಜೋಡಿಸುವ ಕೀಲಗಳು ಸಡಿಲುಗೊಂಡಿವೆ.ಅವುಗಳ ಮೇಲೆ ಹೊದಿಸಿದ ಚಪ್ಪರ ಹರಿದಿದೆ. ಬೆಳಕು ಬರಲೆಂದು ನಿರ್ಮಿಸಲಾದ ಜೀರುಗಿಂಡಿಯು (=ಸಣ್ಣ ಬೆಳಕಿಂಡಿಯು) ಹಾಳಾಗಿ ಹೋಗಿದೆ. ಅರ್ಥಾತ್ ಮಾಳಿಗೆ ಪೂರ್ಣವಾಗಿ ನಾದುರಸ್ತ ಆಗಿದೆ.
ಮಾಳಿಗೆಯ ಸಂಕೇತದ ಮೂಲಕ ಶರೀಫರು ತಮ್ಮ ಮನಸ್ಸೂ ಸಹ ಈ ಮಾಳಿಗೆಯಂತೆ ನಾದುರಸ್ತ ಆಗಿದೆ. ತಮ್ಮ ಮನಸ್ಸಿಗೆ ಬೆಳಕನ್ನು ಕೊಡುವ ಬೆಳಕಿಂಡಿ ಹಾಳಾಗಿ ಹೋಗಿದ್ದರಿಂದ ಒಳಗೆಲ್ಲ ಕತ್ತಲೆ ಕವಿದಿದೆ ಎಂದು ಹೇಳುತ್ತಿದ್ದಾರೆ. ಆದರೇನು, ಶರೀಫರಿಗೆ ದುರಸ್ತಿಗಾಗಿ ಮೇಲಕ್ಕೆ ಹತ್ತುವದೇ ಅಸಾಧ್ಯವಾಗಿದೆ.
ಈ ರೀತಿಯಾಗಿ ಮಾಳಿಗೆಯು ನಾದುರಸ್ತ ಆಗಿದ್ದರ ಪರಿಣಾಮವೇನು ಎನ್ನುವದನ್ನು ಶರೀಫರು ಮೂರನೆಯ ನುಡಿಯಲ್ಲಿ ಹೀಗೆ ವರ್ಣಿಸಿದ್ದಾರೆ:
ಕರಕಿ ಹುಲ್ಲು ಕಸವು ಹತ್ತಿ
ದುರಿತ ಭವದಿ ಇರಬಿ ಮುತ್ತಿ
ಜಲದಿ ಭರದಿ ತಿಳಿಯ ಮಣ್ಣು
ಒಳಗೆ ಹೊರಗೆ ಏಕವಾಗಿ ||
ಮೇಲ್ಮುದ್ದಿಯು ಕೆಟ್ಟು ಹೋಗಿ, ತೇವಾಂಶ ಜಾಸ್ತಿಯಾಗಿದ್ದರಿಂದ ಅಲ್ಲಿ ಕರಕಿ ಹುಲ್ಲು ಬೆಳೆದು ಬಿಟ್ಟಿದೆ. ಕರಕಿಯು ಬಹಳ ಗಟ್ಟಿಯಾದ ಹುಲ್ಲಿನ ಜಾತಿ. ಎಷ್ಟು ಕಿತ್ತಿ ಒಗೆದರೂ ನಿರ್ಮೂಲವಾಗುವದಿಲ್ಲ. ಅದೇ ರೀತಿಯಾಗಿ, ಶರೀಫರ ಮನಸ್ಸಿನಲ್ಲಿಯೂ ಸಹ ವಿಷಯಗಳೆಂಬ ವಿಕಾರಗಳು ಕರಕಿ ಹುಲ್ಲಿನಂತೆ ಗಟ್ಟಿಯಾಗಿ ಬೆಳೆದು ನಿಂತಿವೆ. (‘ಕಸವು ಹತ್ತಿ’ ಎನ್ನುವದನ್ನು ‘ಗಟ್ಟಿಯಾಗಿ’ ಅಥವಾ ‘ಕಸಕಡ್ಡಿ ಬೆಳೆದು’ ಎನ್ನುವ ಎರಡೂ ಅರ್ಥಗಳಲ್ಲಿ ತಿಳಿಯಬಹುದು.) ಇಂತಹ ವಿಕಾರಗಳು ಇದ್ದಲ್ಲಿ ಈ ಭವದ ದುರಿತಗಳು ಅಂದರೆ ಸಂಸಾರದ ಕೇಡುಗಳು, ಇರುವೆಗಳು ಮುತ್ತಿಕೊಳ್ಳುವಂತೆ ಮುತ್ತಿಕೊಳ್ಳುತ್ತವೆ. ಕಸವನ್ನು ತೆಗೆದು ಹಾಕದ ಹೊರತು, ಇರುವೆಗಳು ಹೋಗುವದಿಲ್ಲ. ಇರುವೆಗಳು ಮುತ್ತಿದ್ದರಿಂದ ಮೇಲ್ಮುದ್ದಿಯ ಮಣ್ಣೆಲ್ಲ ಏಕರೂಪವಾಗಿ ಬಿಟ್ಟಿದೆ. ಅದೇ ರೀತಿಯಾಗಿ, ಸಂಸಾರದ ಕೇಡುಗಳಿಂದ ಶರೀಫರ ಮನೋದ್ರವ್ಯವೆಲ್ಲ ಏಕರೂಪವಾಗಿ ವಿಕಾರಗೊಂಡಿದೆ.
ಆದರೆ, ಶರಿಫರು ಎದೆಗುಂದಿಲ್ಲ. ಅವರಿಗೆ ಗುರುಕರುಣೆಯು ಲಭಿಸುವ ಧೈರ್ಯವಿದೆ. ತಮ್ಮ ಗೆಳೆತಿಗೆ ಶರೀಫರು ಈ ಭರವಸೆಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ.
ಕಾಂತೆ ಕೇಳೆ ಕರುಣದಿಂದ
ಬಂತೆ ಕಾಣೆ ಹುಬ್ಬಿ ಮಳೆಯು
ಈಗ ಶಿಶುವಿನಾಳ ಗ್ರಾಮಕ
ಮೇಘರಾಜ ಒಲಿದು ಬಂದ ||
ಶರೀಫರು ಯಾರಿಗೆ ‘ಕಾಂತೆ’ ಎಂದು ಹೇಳುತ್ತಿದ್ದಾರೆ? ಅವರ ಅನೇಕ ಕವನಗಳು ಈ ಕಾಂತೆಗೆ ಸಂಬೋಧಿತವಾಗಿವೆ. ಕಾಂತೆ ಎಂದರೆ ಆಪ್ತ ಗೆಳತಿ ಎಂದು ತಿಳಿಯಬಹುದು. ತಮ್ಮ ಮನದ ಮಾತುಗಳನ್ನು ಯಾರಿಗೆ ಹೇಳಬಹುದೊ ಅಂತಹ confidante ಈ ಕಾಂತೆ. ತಮ್ಮ ಅಂತರಾತ್ಮಕ್ಕೇ ಶರೀಫರು ಕಾಂತೆ ಎಂದು ಕರೆಯುತ್ತಿದ್ದಾರೆ ಎನ್ನಬಹುದು.
ಹುಬ್ಬಿ ಮಳೆಯು ಶ್ರಾವಣ ಮಾಸದಲ್ಲಿ ಬರುತ್ತದೆ. ಶ್ರಾವಣ ಮಾಸವೆಂದರೆ ಮಳೆ ಧೋಧೋ ಎಂದು ಸುರಿಯುವ ಕಾಲ. ಗುರುಕಾರುಣ್ಯವೂ ಸಹ ಶರೀಫರಿಗೆ ಪೂರ್ಣವಾಗಿ ಒಲಿದು ಬರಲಿದೆ ಎನ್ನುವದರ ಸೂಚನೆಯನ್ನು ಶರೀಫರು ಇಲ್ಲಿ ನೀಡುತ್ತಿದ್ದಾರೆ. ಅದರ ಪೂರ್ವಸೂಚನೆಯಾಗಿ ಶಿಶುವಿನಾಳ ಗ್ರಾಮಕ್ಕೆ ಮೋಡಗಳು ಒಲಿದು ಬಂದಿವೆ ಎಂದು ಶರೀಫರು ಹೇಳುತ್ತಿದ್ದಾರೆ.
.ತರವಲ್ಲ ತಗಿ ನಿನ್ನ ತಂಬೂರಿ.
ತರವಲ್ಲ ತಗಿ ನಿನ್ನ ತಂಬೂರಿ - ಸ್ವರ
ಬರದೆ ಬಾರಿಸದಿರು ತಂಬೂರಿ ;
ಸರಸ ಸಂಗೀತದ ಕುರುಹುಗಳರಿಯದೆ
ಬರದೆ ಬಾರಿಸದಿರು ತಂಬೂರಿ.
ಮದ್ದಲಿ ದನಿಯೊಳು ತಂಬೂರಿ - ಅದ
ತಿದ್ದಿ ನುಡಿಸಬೇಕೊ ತಂಬೂರಿ ;
ಸಿದ್ದ ಸಧಕರ ಸುವಿದ್ಯೆಗೆ ಒದಗುವ
ಬುದ್ದಿವಂತಗೆ ತಕ್ಕ ತಂಬೂರಿ.
ಬಾಳಬಲ್ಲವರಿಗೆ ತಂಬೂರಿ - ದೇವ
ಭಾಳಾಕ್ಷ ರಚಿಸಿದ ತಂಬೂರಿ ;
ಹೇಳಲಿ ಏನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ.
ಸತ್ಯ ಶರಧಿಯೊಳು ತಂಬೂರಿ - ನಿತ್ಯ
ಉತ್ತಮರಾಡುವ ತಂಬೂರಿ ;
ಬತ್ತೀಸರಾಗದ ಬಗೆಯನರಿಯದಂಥ
ಕತ್ತಿಗಿನ್ಯಾತಕೆ ತಂಬೂರಿ.
ಹಸನಾದ ಮ್ಯಾಳಕೆ ತಂಬೂರಿ - ಇದು
ಕುಶಲರಿಗೊಪ್ಪುವ ತಂಬೂರಿ.
ಶಿಶುನಾಳಧೀಶನ ಓದುಪುರಾಣದಿ
ಹಸನಾಗಿ ಬಾರಿಸೊ ತಂಬೂರಿ.
ಕೋಡಗನ್ನ ಕೋಳಿ ನುಂಗಿತ.
‘ಕೋಡಗನ್ನ ಕೋಳಿ ನುಂಗಿತ’ ಇದು ಶರೀಫರ ಒಡಪಿನ ಅಥವಾ ಬೆಡಗಿನ ಹಾಡು.
ಇಂತಹ ಹಾಡುಗಳನ್ನು ಶರೀಫರಲ್ಲದೆ, ಕನಕದಾಸರು ಹಾಗೂ ಪುರಂದರದಾಸರೂ ಸಹ ರಚಿಸಿದ್ದಾರೆ.
‘ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಿನ್ನ ಒಳಗೊ’ ಎನ್ನುವ ಕನಕದಾಸರ ಹಾಡನ್ನು ಉದಾಹರಣೆಗೆ ನೋಡಬಹುದು.
ಅದರಂತೆ ಪುರಂದರದಾಸರ ಈ ರಚನೆ ಸಹ ಪ್ರಸಿದ್ಧವಿದೆ:
“ಸುಳ್ಳು ನಮ್ಮಲ್ಲಿಲ್ಲವಯ್ಯಾ
ಸುಳ್ಳೆ ನಮ್ಮನಿ ದೇವರು”.
ಕೋಡಗನ್ನ ಕೋಳಿ ನುಂಗಿತ’ ಎನ್ನುವ ಪದದಲ್ಲಿ ಶರಿಫರು ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಕೋಳಿಗೆ ಹೋಲಿಸಿ ಹಾಡಿದ್ದಾರೆ. ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ.
ಕೋಳಿಯ ಕೂಗು ಬೆಳಗಿನ ಸೂಚನೆ. ಶರೀಫರ ಹಾಡಿನಲ್ಲಿ ಇದು ಆಧ್ಯಾತ್ಮಿಕ ಬೆಳಗನ್ನು ಸೂಚಿಸುವ ಕೋಳಿ. ಆಧ್ಯಾತ್ಮಿಕ ಜ್ಞಾನೋದಯವು ಕೋಡಗದಂತಿರುವ ಮನಸ್ಸನ್ನು ನುಂಗಿ ಹಾಕುತ್ತದೆ ಎಂದು ಶರೀಫರು ಹೇಳುತ್ತಾರೆ.
ಪುರಂದರದಾಸರೂ ಸಹ ತಮ್ಮ ಒಂದು ರಚನೆಯಲ್ಲಿ ಮರ್ಕಟದಂತಿರುವ ಮನಸ್ಸನ್ನು ಡೊಂಕು ಬಾಲದ ನಾಯಿಗೆ ಹೋಲಿಸಿದ್ದಾರೆ. ತಿದ್ದಲು ಎಷ್ಟೇ ಪ್ರಯತ್ನಿಸಿದರೂ ಸಹ ಈ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಉಳಿಯುತ್ತದೆ. ಅರ್ಥಾತ್ ಈ ಮನಸ್ಸಿಗೆ ಜ್ಞಾನೋದಯವಿನ್ನೂ ಆಗಿಲ್ಲ. ಪುರಂದರದಾಸರ ಈ ಹಾಡಿನಲ್ಲಿ ಒಂದು ವಿಶೇಷತೆ ಇದೆ. ಹಾಡಿನ ಪಲ್ಲವನ್ನು ನೋಡೋಣ:
“ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?” ||ಪಲ್ಲ||
ಡೊಂಕು ಬಾಲದ ನಾಯಕರು ಎಂದರೆ ‘ನಾಯಿ’ ಎನ್ನುವದು ತಿಳಿದ ವಿಷಯವೇ.
ಆದರೆ ‘ನಾಯಕರು’ ಎನ್ನುವಲ್ಲಿ ಒಂದು ಹೆಚ್ಚಿನ ಅರ್ಥವಿದೆ.
ಪುರಂದರದಾಸರ ಪೂರ್ವಾಶ್ರಮದ ಹೆಸರು: ಶ್ರೀನಿವಾಸ ನಾಯಕ.
ದಾಸರು “ಡೊಂಕು ಬಾಲದ ನಾಯಕರೆ” ಎನ್ನುವಾಗ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿದ್ದಾರೆ !
ಶರೀಫರ ರಚನೆಯ ಪೂರ್ತಿ ಪಾಠ ಹೀಗಿದೆ:
ಕೋಡಗನ್ನ ಕೋಳಿ ನುಂಗಿತ
ನೋಡವ್ವ ತಂಗಿ ||ಪಲ್ಲ||
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||
ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ ||೩||
ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ ||೪||
ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ ||೫||ಶರೀಫರು ಆಧುನಿಕ ಕಾಲದ ಕವಿಗಳಂತೆ, ಮುಚ್ಚಿದ ಕೋಣೆಯಲ್ಲಿ ಕುಳಿತು, ಪೆನ್ನು ಅಥವಾ ಪೆನ್ಸಿಲಿನಿಂದ ಕವನ ಬರೆಯುವ ಕವಿ ಅಲ್ಲ. ತಮ್ಮ ಸುತ್ತ ನೆರೆದಿರುವ ಜನಸಮುದಾಯದ ಎದುರಿಗೆ ಸ್ಫೂರ್ತಿಯುತವಾಗಿ ಕವನ ಹಾಡುವದು ಅವರ ಪದ್ಧತಿ. ಜನಸಮುದಾಯಕ್ಕೆ ಜ್ಞಾನದ ಬೆಳಕು ಸಿಗಲಿ ಎನ್ನುವದು ಅದರ ಉದ್ದೇಶ.
ಹೀಗಾಗಿ ಇವರ ಕವನಗಳ ರಚನೆಯನ್ನು ಗಮನಿಸಿದಾಗ, ಕೆಲವೊಂದು ಕವನದ ಸಾಲುಗಳಲ್ಲಿ repetitiveness ಕಾಣುವದು ಸಹಜ.
ಕೋಡಗನ್ನ ಕೋಳಿ ನುಂಗಿತ’ ಕವನದ ಎಲ್ಲಾ ನುಡಿಗಳಲ್ಲಿ ಕಂಡು ಬರುವದು ಒಂದೇ ಅರ್ಥ.
ಮೊದಲ ನುಡಿಯ ನಂತರ, ಕವನ ಮುಂದೆ ಸಾಗಿದಂತೆ ಅರ್ಥದ ಬೆಳವಣಿಗೆ ಸಾಗುವದಿಲ್ಲ.
ಆದರೆ ಆ ಕಾರಣಕ್ಕಾಗಿ ಕವನದ ಸೌಂದರ್ಯವೇನೂ ಕಡಿಮೆಯಾಗಿಲ್ಲ.
ಕವನದ ಪಲ್ಲದಲ್ಲಿ ಕವಿಯು ‘ಕೋಳಿ ಅಂದರೆ ಆಧ್ಯಾತ್ಮಿಕ ಜ್ಞಾನೋದಯವು ಕೋಡಗವನ್ನು ಅಂದರೆ ಮಂಗನಂತಿರುವ ಮನಸ್ಸನ್ನು ತಿಂದು ಹಾಕಿದೆ’ ಎಂದು ಹೇಳುತ್ತಾರೆ. ಇದೇ ಮಾತನ್ನು ಮುಂದಿನ ನುಡಿಯಲ್ಲಿ, ವಿಭಿನ್ನ ರೂಪಕಗಳ ಮೂಲಕ ಮತ್ತೆ ಮತ್ತೆ ಸ್ಪಷ್ಟ ಪಡಿಸುತ್ತಾರೆ:
ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||
ಆಡು ಅಂದರೆ ಜ್ಞಾನ. ಇದು ಸಣ್ಣದು . ಸಂಸಾರದ ಆಸೆಗಳಿಗೋ ಆನೆಯ ಬಲ.
ಇಂತಹ ಆನೆಯನ್ನು ಆಡಿನಂತಿರುವ ಜ್ಞಾನ ತಿಂದು ಹಾಕಿಬಿಡುತ್ತದೆ ಎಂದು ಶರೀಫರು ಹಾಡುತ್ತಾರೆ.
(ಈ ಸಂದರ್ಭದಲ್ಲಿ ಬಸವಣ್ಣನವರ ವಚನವೊಂದನ್ನು ನೆನಪಿಸಿಕೊಳ್ಳಬಹುದು:
“ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?” )
ಗೋಡೆ ಎಂದರೆ ಮನಸ್ಸಿನ ಭಿತ್ತಿ. ಜ್ಞಾನೋದಯದ ನಂತರ, ಈ ಗೋಡೆಯ ಮೇಲೆ, ಎಷ್ಟೇ ಸುಣ್ಣ ಹಚ್ಚಲಿ, ಯಾವುದೇ ಬಣ್ಣ ಹಚ್ಚಲಿ, ಅದನ್ನು ಗೋಡೆಯೇ ತಿಂದು ಹಾಕಿ ಬಿಡುತ್ತದೆ. ಗೋಡೆಯ surface ಮತ್ತೂ ನಿರ್ವರ್ಣವಾಗಿ, ಶುಭ್ರವಾಗಿಯೇ ಉಳಿಯುತ್ತದೆ.
ಆಡಲು ಬಂದ ಪಾತರದವಳು ಅಂದರೆ ಕುಣಿಯಲು ಬಂದ ನರ್ತಕಿ, ಅರ್ಥಾತ್ ಸಂಸಾರದಲ್ಲಿ ಆಡಲು ಬಂದ ಜೀವಾತ್ಮ. ಮದ್ದಲೆ ಅಂದರೆ ಪರಮಾತ್ಮ ಬಾರಿಸುತ್ತಿರುವ ಜ್ಞಾನದ ಮದ್ದಲೆ.
ಈ ರೂಪಕಕ್ಕೆ ಒಂದು ವಿಶಿಷ್ಟ ಹಿನ್ನೆಲೆ ಇದೆ. ಚಾಮರಸ ಬರೆದ ‘ಪ್ರಭುಲಿಂಗ ಲೀಲೆ’ ಕಾವ್ಯದಲ್ಲಿ ಅಲ್ಲಮನಿಗೂ, ಮಾಯಾದೇವಿಗೂ ಸ್ಪರ್ಧೆ ಏರ್ಪಡುತ್ತದೆ. ಅಲ್ಲಮ ಮದ್ದಲೆ ಬಾರಿಸುತ್ತಿದ್ದಂತೆ, ಅದರ ತಾಳಕ್ಕೆ ತಕ್ಕಂತೆ ಕುಣಿಯಲು ಮಾಯಾದೇವಿಗೆ ಸಾಧ್ಯವಾಗುವದಿಲ್ಲ. ಅವಳು ಸೋಲೊಪ್ಪಿಕೊಳ್ಳುತ್ತಾಳೆ.
‘ಪ್ರಭುಲಿಂಗ ಲೀಲೆ’ ಶರೀಫರಿಗೆ ಪ್ರಿಯವಾದ ಕಾವ್ಯ.
ತಾವೇ ಮಾಡಿಕೊಂಡ ಇದರ ಹಸ್ತಪ್ರತಿಯೊಂದನ್ನು ಅವರು ಯಾವಾಗಲೂ ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರಂತೆ.
ಎರಡನೆಯ ನುಡಿಯಲ್ಲಿ ಶರೀಫರು ಸಂಸಾರದಲ್ಲಿರುವ ಸಾಧಕನ ಪ್ರಗತಿಯ ರೀತಿಯನ್ನು ವರ್ಣಿಸಿದ್ದಾರೆ:
ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||
ಒಳ್ಳು ಹಾಗೂ ಬೀಸುವ ಕಲ್ಲುಗಳನ್ನು ಶರೀಫರು ಸಂಸಾರಕ್ಕೂ, ಒನಕೆ ಹಾಗೂ ಬೀಸುವ ಕಲ್ಲಿನ ಗೂಟವನ್ನು ಸಾಧಕನ ಕರ್ಮಗಳಿಗೂ ಹೋಲಿಸಿದ್ದಾರೆ. ಕುಟ್ಟಲಿಕೆ ಬಂದ ಮುದುಕಿ ಅಂದರೆ ಈ ಸಂಸಾರದಲ್ಲಿ ಬಂದು, ಕರ್ಮಗಳಿಂದ ಪಕ್ವವಾದ ಜೀವಾತ್ಮ.
ಈ ಜೀವಾತ್ಮ is hammered on the anvil of life.
ಆದರೆ ಆತ ಪಕ್ವವಾದಾಗ, ಆತನ ಕರ್ಮಗಳು ಕರಗಿ ಹೋಗುತ್ತವೆ.
ಇಂತಹ ಜೀವಾತ್ಮನನ್ನು ನೊಣದಷ್ಟು ಸಣ್ಣಗಿನ ಜ್ಞಾನ ತಿಂದು ಹಾಕುತ್ತದೆ.
ಮೂರನೆಯ ನುಡಿಯಲ್ಲಿ ಶರೀಫರು ಸಂಸಾರ ಹಾಗೂ ಕರ್ಮಗಳನ್ನು ಬೇರೊಂದು ರೀತಿಯಲ್ಲಿ ವರ್ಣಿಸುತ್ತಾರೆ:
ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ
ಮಗ್ಗವೆಂದರೆ ಸಂಸಾರ. ಮಗ್ಗವನ್ನು ಕಟ್ಟಿರುವ ಹಗ್ಗವೆಂದರೆ ಸಂಸಾರಕ್ಕೆ ಜೋತು ಬೀಳುವ ಮನಸ್ಸು.
ಮಗ್ಗದಲ್ಲಿ ಒಮ್ಮೆ ಅತ್ತ(=ಒಳ್ಳೆಯದರತ್ತ) ಒಮ್ಮೆ ಇತ್ತ(=ಕೆಡುಕಿನತ್ತ) ಸರಿಯುವ ಲಾಳಿ ಎಂದರೆ ಜೀವಾತ್ಮನೆಸಗುವ ಕರ್ಮಗಳು.
ಜ್ಞಾನವನ್ನು ಬಯಸುವ ಸಾಧಕನು ಈ ಸಂಸಾರದಲ್ಲಿ ಸಿಲುಕಲಾರ.
ಆತನ ಮನಸ್ಸು ಈ ಸಂಸಾರವನ್ನು ತಿಂದು ಹಾಕುತ್ತದೆ ಅಂದರೆ ನಾಶ ಮಾಡುತ್ತದೆ ಎಂದು ಶರೀಫರು ಹೇಳುತ್ತಾರೆ.
ಇದಾದ ಮೇಲೆ ಸಂಸಾರವೆನ್ನುವ ಮಗ್ಗದಲ್ಲಿ ನೇಯಲು ಕುಳಿತ ಅಣ್ಣನನ್ನು ಅಂದರೆ ಜೀವಾತ್ಮನನ್ನು ಮಗ್ಗದ ಕೆಳಗಿರುವ ಕುಣಿ (=space excavated below the loom for footwork) ನುಂಗಿ ಹಾಕುತ್ತದೆ.
ಅಂದರೆ ಆತನಿಗೆ ಜ್ಞಾನೋದಯವಾಗುತ್ತದೆ !
ನಾಲ್ಕನೆಯ ನುಡಿಯಲ್ಲಿಯೂ ಸಹ ಇದೇ ವಿಷಯವನ್ನು ಶರೀಫರು ಬೇರೆ ರೂಪಕಗಳ ಮೂಲಕ ವಿವರಿಸುತ್ತಾರೆ:
ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ
ಹೊಲವನ್ನು ಊಳಲು ಎತ್ತಿನ ಕೊರಳಿಗೆ ಜತ್ತಗಿ (=ನೊಗಕ್ಕೆ ಹಾಗು ಎತ್ತಿನ ಕೊರಳಿಗೆ ಕಟ್ಟುವ ಪಟ್ಟಿ) ಕಟ್ಟಿರುತ್ತಾರೆ.
ಸಂಸಾರವೆಂಬ ಹೊಲವನ್ನು ಊಳಲು ಬಂದ ಎತ್ತು ಇದು.
ಇದು ತನ್ನನ್ನು ನೊಗಕ್ಕೆ ಅಂದರೆ ಕರ್ಮಗಳಿಗೆ ಬಂಧಿಸಿದ ಜತ್ತಗಿ ಅಂದರೆ ಕರ್ಮಪಾಶವನ್ನೆ ತಿಂದು ಹಾಕಿದೆ. (ಸಾಧನೆಯ ಸಹಾಯದಿಂದ).
ಬಾನ ಅಂದರೆ ದೇವರೆದುರಿಗೆ ಇಟ್ಟ ಎಡಿ, ನೈವೇದ್ಯ.
ಹೊಲದಲ್ಲಿ ದೇವರ ಎದುರಿಗೆ ಇಡಲಾದ ಈ ನೈವೇದ್ಯದ ಅನ್ನವನ್ನು ಬತ್ತವೇ ತಿಂದು ಹಾಕಿದೆ.
ಅರ್ಥಾತ್ ಈ ಸಾಧಕನ ಕರ್ಮಪಾಕಗಳು ಶಿಥಿಲವಾಗುತ್ತಿವೆ.
ಈ ಸಾಧಕನು ಮುಕ್ಕಟೆಯಾಗಿ (ಬೇಗ ಬೇಗನೇ), ಹೊಲವನ್ನು ಊಳುತ್ತಿದ್ದಾನೆ. ಅವನನ್ನು ಮೇಳಿ (=?) ನುಂಗಿ ಹಾಕಿದೆ. ಮೇಳಿ ಅಂದರೆ ಒಕ್ಕಲುತನದ ಸಾಧನವಿರಬಹುದು.
ಐದನೆಯ ನುಡಿಯಲ್ಲಿ ಶರೀಫರು ಸಾಧಕನು ಆಧ್ಯಾತ್ಮದ ಕೊನೆ ಮುಟ್ಟಿದ್ದನ್ನು ವಿವರಿಸಿದ್ದಾರೆ:
ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ
ಬಹುಶ: ಗುಡ್ಡ ಎಂದರೆ ಅನಾದಿ-ಅನಂತನಾದ ಚಿತ್ ಸ್ವರೂಪನಾದ ಪರಮಾತ್ಮ.
ಈ ಪರಮಾತ್ಮನು ಗುಡ್ಡದಲ್ಲಿಯೆ ಇರುವ ಗಂವ್ಹರವನ್ನು (=ಗವಿಯನ್ನು) ಅಂದರೆ ಅನಾದಿ-ಅನಂತವಾದ ಸಂಸಾರವನ್ನು ನುಂಗಿದ್ದಾನೆ.
ಈ ಸಂಸಾರವು ತನ್ನಲ್ಲಿರುವ ಇರಿವೆಯನ್ನು ಅಂದರೆ ಕಾಲ ದೇಶದಿಂದ ಬಂಧಿತನಾದ ಅಸ್ತಿತ್ವವನ್ನು ಅಂದರೆ ಜೀವಾತ್ಮನನ್ನು ನುಂಗಿ ಹಾಕಿದೆ.
ಇದರರ್ಥವೆಂದರೆ ಪರಮಾತ್ಮನಲ್ಲಿ ಜೀವಾತ್ಮ ಲೀನವಾಗಿದೆ.
ಇದೇ ಮಾತನ್ನು ಶರೀಫರು ಹೀಗೂ ಹೇಳಿದ್ದಾರೆ:
‘ಗುರುಗೋವಿಂದನ ಪಾದ ಆತ್ಮ ನುಂಗಿತ ’.
ಶರೀಫರ ಈ ಒಡಪಿನ ಗೀತೆಯಲ್ಲಿರುವ ಒಂದು ರಚನಾವೈಶಿಷ್ಟ್ಯವನ್ನು ಗಮನಿಸಬೇಕು.
ಪ್ರತಿಯೊಂದು ನುಡಿಯಲ್ಲಿ ಮೊದಲ ಎರಡು ಸಾಲುಗಳು ನಿರ್ಜೀವ ಉಪಕರಣಗಳನ್ನು ಬಣ್ಣಿಸುತ್ತವೆ.
ಉದಾ: ಒಳ್ಳು, ಒನಕೆ, ಬಿಸುವ ಕಲ್ಲು. ಗೋಡೆ, ಹಗ್ಗ, ಮಗ್ಗ ಇತ್ಯಾದಿ.
ಪ್ರತಿ ನುಡಿಯ ಕೊನೆಯ ಸಾಲಿನಲ್ಲಿ ಜೀವಾತ್ಮನ ವರ್ಣನೆ ಇದೆ;
ಉದಾ: ಪಾತರದವಳು, ಮುದಕಿ, ಅಣ್ಣ ಹಾಗು ಆತ್ಮ .
ಈ ರೀತಿಯಾಗಿ, ಸಂಸಾರದಲ್ಲಿಳಿದ ಸಾಧಕನ ಜ್ಞಾನೋದಯವಾಗುತ್ತಿರುವ ಘಟ್ಟದಿಂದ ಪ್ರಾರಂಭಿಸಿ, ಆತ ಪರಮಾತ್ಮನಲ್ಲಿ ಲೀನವಾಗುವ ಘಟ್ಟದವರೆಗಿನ ವರ್ಣನೆ ಇಲ್ಲಿದೆ.
ಆದರೆ, ಕವನದಲ್ಲಿ ಸಾಧಕನ ಹಂತಹಂತದ ಬೆಳವಣಿಗೆಯನ್ನು ತೋರಿಸಿಲ್ಲ.
ವಿಭಿನ್ನ ರೂಪಕಗಳನ್ನು ಉಪಯೋಗಿಸುತ್ತ, ಅದೇ ಸಾರವನ್ನು ಶರೀಫರು ಮತ್ತೆ ಮತ್ತೆ ಹೇಳಿದ್ದಾರೆ.
ಇದರಲ್ಲಿ ತಪ್ಪೇನೂ ಇಲ್ಲ.
ಏಕೆಂದರೆ ಇದು ಕೋಣೆಯಲ್ಲಿ ಕುಳಿತು ರಚಿಸಿದ ಕವನವಲ್ಲ .
ತಮ್ಮ ಎದುರಿಗೆ ನೆರೆದು ನಿಂತಿರುವ ಸಾಮಾನ್ಯ ಹಳ್ಳಿಗರನ್ನು ಉದ್ದೇಶಿಸಿ, ಸ್ಫೂರ್ತಿ ಉಕ್ಕಿದಾಗ ಹಾಡಿದ ಹಾಡಿದು.
ಹಾಡು ಕೇಳುತ್ತಿರುವ ಸಾಮಾನ್ಯ ಹಳ್ಳಿಗನಿಗಾಗಿ ಅವನ ಹೃದಯಕ್ಕೆ ಅರ್ಥವಾಗುವಂತಹ ಭಾಷೆಯಲ್ಲಿ ಹಾಡಿದ ಹಾಡಿದು.
All the poems sung by sheriff have background around us that is uniqueness of his poems and Philosophy
Enjoy the song with rhythm---Neelanjana

No comments:

Post a Comment