Friday, September 24, 2010

ಅಕ್ಕನ ವಚನಗಳು - 101 ರಿಂದ 200 ರವರೆಗೆ


ಅಕ್ಕನ ವಚನಗಳು - 101 ರಿಂದ 200 ರವರೆಗೆ

೧೦೧.
ಕಂಗಳೊಳಗೆ ತೊಳಗಿ ಬೆಳಗುವ
ದಿವ್ಯರೂಪನ ಕಂಡು ಮೈಮರೆದೆನವ್ವ
ಮಣಿಮುಕುಟದ ಫಣಿ-ಕಂಕಣದ
ನಗೆಮೊಗದ ಸುಲಿಪಲ್ಲ ಸೊಬಗನ ಕಂಡು ಮನಸೋತೆನವ್ವ
ಇಂತಾಗಿ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ
ಆನು ಮದುವಣಿಗಿ ಕೇಳಾ ತಾಯೆ

೧೦೨.
ಮನಮನ ತಾರ್ಕಣೆಯ ಕಂಡು ಅನುಭವಿಸಲು
ನೆನಹೇ ಘನವಹುದಲ್ಲದೆ
ಅದು ಹವಣದಲ್ಲಿ ನಿಲ್ಲುವುದೇ?
ಎಲೆ ಅವ್ವ, ನೀನು ಮರುಳವ್ವೆ!
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಗೊಲಿದು
ಸಲೆ ಮಾರುವೋದೇನು
ನಿನ್ನ ತಾಯಿತನವನೊಲ್ಲೆ ಹೋಗೇ!

೧೦೩.
ಲಿಂಗವನೂ ಪುರಾತನರನೂ
ಅನ್ಯರ ಮನೆಯೊಳಯಿಂಕೆ ಹೋಗಿ ಹೊಗಳುವರು
ತಮ್ಮದೊಂದು ಉದರ ಕಾರಣ
ಲಿಂಗವೂ ಪುರಾತನರೂ ಅಲ್ಲಿಗೆ ಬರಬಲ್ಲರೆ?
ಅನ್ಯವನೆ ಮರೆದು, ನಿಮ್ಮ ನೆನೆವರ ಎನಗೊಮ್ಮೆ ತೋರಾ
ಚೆನ್ನಮಲ್ಲಿಕಾರ್ಜುನಯ್ಯ!

೧೦೪.
ಗುಣ-ದೋಷ ಸಂಪಾದನೆಯ ಮಾಡುವನ್ನಕ್ಕ
ಕಾಮದ ಒಡಲು ಕ್ರೋಧದ ಗೊತ್ತು
ಲೋಭದ ಇಕ್ಕೆ ಮೋಹದ ಮಣ್ದಿರ
ಮದದಾವರಣ ಮತ್ಸರದ ಹೊದಿಕೆ
ಆ ಭಾವವರತಲ್ಲದೆ
ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣ

೧೦೫.
ಕಡೆಗೆ ಮಾಡದ ಭಕ್ತಿ ಧೃಡವಿಲ್ಲದಾಳುತನ
ಮೃಡನೊಲಿಯ ಹೇಳಿದರೆ ಎಂತೊಲಿವನಯ್ಯ?
ಮಾಡಲಾಗದಳಿಮನವ ಮಾಡಿದರೆ ಮನದೊಡೆಯ ಬಲ್ಲನೈಸೆ
ವಿರಳವಿಲ್ಲದ ಮಣಿಯ ಪವಣಿಸಿಹೆನೆಂದೆಡೆ
ದುರುಳ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನಯ್ಯ

೧೦೬.
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಂಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾಜುನದೇವ ಕೇಳಯ್ಯ
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ-ನಿಂದೆಗಳು ಬಂದರೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು

೧೦೭.
ವೇದಶಾಸ್ತ್ರಾಗಮ ಪುರಾಣಗಳೆಂಬುವ
ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿ ಭೋ!
ಅವ ಕುಟ್ಟಲೇಕೆ?
ಅತ್ತಲಿತ್ತ ಹರಿವ ಮನದ ಶಿವನರಿಯಬಲ್ಲಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ

೧೦೮.
ಅಮೇಧ್ಯದ ಮಡಕೆ ಮೂತ್ರದ ಕುಡಿಕೆ
ಎಲುವಿನ ತಡಿಕೆ ಕೀವಿನ ಹಡಿಕೆ
ಸುಡಲೀ ದೇಹವ
ಒಡಲುವಿಡಿದು ಕೆಡದಿರು
ಚೆನ್ನಮಲ್ಲಿಕಾರ್ಜುನನರಿ ಮರುಳೇ!

೧೦೯.
ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ
ಹಲವು ಪ್ರಾಣಿಗಳ ಕೊಂದು ನಲಿದಾಡುವ
ತನ್ನ ಮನೆಯಲೊಂದು ಶಿಶು ಸತ್ತರೆ
ಅದಕೆ ಮರುಗುವಂತೆ ಅವಕೇಕೆ ಮರುಗನು?
ಸ್ವಾತ್ಮಾನಮಿತರಾಂಶ್ಚೈವ
ದೃಷ್ಟ್ವಾ ಧೃಷ್ಟ್ವಾ ನ ಭಿದ್ಯತೇ
ಸರ್ವಂ ಚಿಜ್ಜ್ಯೋತಿರೇವೇತಿ
ಯಃ ಪಶ್ಯತಿ ಸ ಪಶ್ಯತಿ
ಎಂದುದಾಗಿ-ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ
ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು
ಜೀವ-ಹಿಂಸೆಯ ಮಾಡುವ ಮಾದಿಗರನೇನೆಂಬೆನಯ್ಯ

೧೧೦.
ಶೀಲ! ಶೀಲ! ಎಂತೆಬಿರಯ್ಯ?
ಶೀಲದ ನೆಲೆಯ ಒಲ್ಲಡೆ ಹೇಳಿರೋ
ಅರಿಯದಿರ್ದೊಡೆ ಕೇಳಿರೋ
ಕಾಮ [ಒಂದನೇ] ಭವಿ, ಕ್ರೋಧ ಎರಡನೇ ಭವಿ
ಲೋಭ ಮೂರನೇ ಭವಿ, ಮೋಹ ನಾಲ್ಕನೇ ಭವಿ
ಮದ ಐದನೇ ಭವಿ, ಮತ್ಸರ ಆರನೇ ಭವಿ
ಆಮಿಷ ಏಳನೇ ಭವಿ
ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು
ಲಿಂಗವಿಲ್ಲದವರ ಭವಿ ಭವಿ ಎಂಬರು
ತಮ್ಮಂತರಂಗದಲ್ಲಿದ್ದ ಲಿಂಗಾಂಗದ ಸುದ್ದಿಯನ್ನರಿಯದೆ
ಅಚ್ಚಪ್ರಸಾದಿ-ನಿಚ್ಚಪ್ರಸಾದಿ-ಸಮಯಪ್ರಸಾದಿಗಳೆಂದು
ಜಲಕ್ಕೆ ಕನ್ನವನಿಕ್ಕಿ ಉದಕವ ತಂದು
ಲಿಂಗಮಜ್ಜನಕ್ಕೆರೆವ ಹಗಲುಗಳ್ಳರಿಗೆ ಮೆಚ್ಚುವನೆ
ಚೆನ್ನಮಲ್ಲಿಕಾರ್ಜುನ?

೧೧೧.
ಭವಿಸಂಗವಳಿದು ಶಿವಭಕ್ತನಾದ ಬಳಿಕ
ಭಕ್ತಂಗೆ ಭವಿಸಂಗವತಿ ಘೋರ ನರಕ
ಶರಣಸತಿ-ಲಿಂಗಪತಿಯಾದ ಬಳಿಕ
ಶರಣಂಗೆ ಸತಿಸಂಗವತಿಘೋರ ನರಕ
ಚೆನ್ನಮಲ್ಲಿಕಾರ್ಜುನ,
ಲಿಂಗೈಕ್ಯಂಗೆ ಪ್ರಾಣಗುಣವಳಿಯದವರ ಸಂಗವೇ ಭಂಗ

೧೧೨.
ಹೂವು ಕಂದಿದಲ್ಲಿ ಪರಿಮಳವನರಸುವರೇ?
[ಎನ್ನ ತಂದೆ] ಕಂದನಲ್ಲಿ ಕುಂದನರಸುವರೇ?
ಎಲೆ ದೇವ, ಸ್ನೇಹವಿದ್ದ ಠಾವಿನೊಳು
ದ್ರೋಹವಾದ ಬಳಿಕ ಮರಳಿ ಸದ್ಗುಣವನರಸುವರೇನಯ್ಯ?
ನೀ ಎನ್ನ ತಂದೆ, ಹೂವು ಕಂದಿದಲ್ಲಿ [ಪರಿಮಳವನರಸುವರೇ?]
ಕಂದನಲ್ಲಿ [ಕುಂದನರಸುವರೇ?]
ಎಲೆ ದೇವ, ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೇ?
ಗುರುವೇ ಹೂವು ಕಂದಿದಲ್ಲಿ [ಪರಿಮಳವನರಸುವರೇ?]
[ಕಂದನಲ್ಲಿ ಕುಂದನರಸುವರೇ?]
ಕೇಳಯ್ಯ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಹೊಳೆಯಳಿದ ಬಳಿಕ ಅಂಬಿಗಂಗೇನುಂಟು?
ಹೂವು ಕಂದಿದಲ್ಲಿ [ಪರಿಮಳವನರಸುವರೇ?]
[ಕಂದನಲ್ಲಿ ಕುಂದನರಸುವರೇ?]

೧೧೩.
ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕುಡೆಂತಹುದಯ್ಯ?
ಬೆಟ್ಟದ ತುದಿಯ ಮೆಟ್ಟಿಲೆಂದು ಹಳ್ಳಕೊಳ್ಳಂಗಳಲ್ಲಿ
ಇಳಿದೊಡೆಂತಹುದಯ್ಯ?
ನೀನಿಕ್ಕಿದ ಸಯಿದಾನವನೊಲ್ಲದೆ
ಬೇರೆ ಬಯಸಿದೊಡೆಂತಹುದಯ್ಯ?
ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು
ಕಿರುಕುಳಕ್ಕೆ ಸಂದೊಡೆಂತಹುದಯ್ಯ?

೧೧೪.
ಒಳಗಣ ಗಂಡನವ್ವಾ, ಹೊರಗಣ ಮಿಂಡನವ್ವಾ!
ಎರಡನೂ ನಡೆಸಲು [ಬಾರದವ್ವ]!
ಚೆನ್ನಮಲ್ಲಿಕಾರ್ಜುನಯ್ಯ,
ಬಿಲ್ಲು [ಬೆಳವಲಕಾಯನೊಂದಾಗಿ] ಹಿಡಿಯಲು ಬಾರದಯ್ಯ!!

೧೧೫.
ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ!
ಚಿನ್ನಕ್ಕರಿಸಿನವ ಕೊಳ್ಳಿರವ್ವ!
ನಮ್ಮ ನಲ್ಲನ ಮೈಯ್ಯ ಹತ್ತುವ ಅರಿಸಿನವ ಕೊಳ್ಳಿರವ್ವ
ಒಳಗುಂದದರಿಸಿನವ ಮಿಂದು
ಚೆನ್ನಮಲ್ಲಿಕಾರ್ಜುನನಪ್ಪಿರವ್ವ!

೧೧೬.
ಕಾಯ ಕರ್ರನೆ ಕುಂದಿದರೇನಯ್ಯ?
ಕಾಯ ಮಿರ್ರನೆ ಮಿಂಚಿದರೇನಯ್ಯ?
ಅಂತರಂಗ ಶುದ್ಧವಾದ ಬಳಿಕ
ಚೆನ್ನಮಲ್ಲಿಕಾರ್ಜುನನನೊಲಿದ ಕಾಯ
ಎಂತಾದಡೆಮಗೇನಯ್ಯ?

೧೧೭.
ಹಣ ಮೆದ್ದ ಬಳಿಕ, ಆ ಮರನ ಆರು ತರಿದರೇನು?
ಹೆಣ ಬಿಟ್ಟ ಬಳಿಕ, ಆಕೆಯನಾರು ಕೂಡಿಕೊಂಡರೇನು?
ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರುತ್ತರೇನು?
ಚೆನ್ನಮಲ್ಲಿಕಾರ್ಜುನನ ಅರಿದ ಬಳಿಕ
ಆ ಕಾಯವ ನಾಯಿ ತಿಂದರೇನು ನೀರ ಕುಡಿದರೇನು?

೧೧೮.
ಹಗಲು ನಾಲ್ಕು ಜಾವ ಆಶನಕ್ಕೆ ಕುದಿವರು
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು
ಅಸಗ ನೀರೊಳಗಿರ್ದುಬಾಯಾರಿ ಸತ್ತಂತೆ
ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನ

೧೧೯.
ನಾಳೆ ಬರುವುದು ನಮಗಿಂದೇ ಬರಲಿ
ಇಂದು ಬರುವುದು ನಮಗೀಗಲೇ ಬರಲಿ
ಆಗೀಗಲೆನ್ನದಿರೊ ಚೆನ್ನಮಲ್ಲಿಕಾರ್ಜುನ

೧೨೦.
ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯ?
ಕ್ಷಮೆ-ದಯೆ-ಶಾಂತಿ-ಸೈರಣೆಯಿರಲು ಸಮಾಧಿಯ ಹಂಗೇಕಯ್ಯ?
ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯ,
ಚೆನ್ನಮಲ್ಲಿಕಾರ್ಜುನ?

೧೨೧.
ಹಸಿವೇ ನೀನು ನಿಲ್ಲು, ನಿಲ್ಲು, ತೃಷೆಯೇ ನೀನು ನಿಲ್ಲು ನಿಲ್ಲು
ನಿದ್ರೆಯೇ ನೀನು ನಿಲ್ಲು ನಿಲ್ಲು, ಕಾಮವೇ ನೀನು ನಿಲ್ಲು ನಿಲ್ಲು
ಕ್ರೋಧವೇ ನೀನು ನಿಲ್ಲು ನಿಲ್ಲು, ಮೋಹವೇ ನೀನು ನಿಲ್ಲು ನಿಲ್ಲು
ಲೋಭವೇ ನೀನು ನಿಲ್ಲು ನಿಲ್ಲು, ಮದವೇ ನೀನು ನಿಲ್ಲು ನಿಲ್ಲು
ಮಚ್ಚರವೇ ನೀನು ನಿಲ್ಲು ನಿಲ್ಲು, ಸಚರಾಚರವೇ ನೀನು ನಿಲ್ಲು ನಿಲ್ಲು
ನಾನು ಚೆನ್ನಮಲ್ಲಿಕಾರ್ಜುನದೇವರ ಅವಸರದ
ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ

೧೨೨.
ಹೆದರದಿರು ಮನವೇ, ಬೆದರದಿರು ಮನವೇ
ನಿಜವನರಿತು ನಿಶ್ಚಿಂತವಾಗಿರು
ಫಲವಾದ ಮರನ ಇಡುವುದೊಂದು ಕೋಟಿ
ಎಲವದ ಮರನ ಇಡುವರೊಬ್ಬರ ಕಾಣೆ
ಭಕ್ತಿಯುಳ್ಳವರ ಬೈವರೊಂದು ಕೋಟಿ,
ಭಕ್ತಿಯಿಲ್ಲದವ ಬೈವರೊಬ್ಬರ ಕಾಣೆ
ನಿಮ್ಮ ಶರಣರ ನುಡಿಯೆ ಎನಗೆ ಗತಿಸೋಪಾನ, ಚೆನ್ನಮಲ್ಲಿಕಾರ್ಜುನ

೧೨೩.
ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದರೆ
ಕನ್ನ ಸವೆಯಲಿಲ್ಲ, ಕಳವು ದೊರೆಯಲಿಲ್ಲ!
ಬೊಬ್ಬುಲಿಯನೇರಿದ ಮರ್ಕಟನಂತೆ
ಹಣ್ಣ ಮೆಲಲಿಲ್ಲ, ಕುಳ್ಳಿರೆ ಠಾವಿಲ್ಲ!
ನಾನು ಸರ್ವಸಂಗಪರಿತ್ಯಾಗ ಮಾಡಿದವಳಲ್ಲ
ನಿಮ್ಮ ಕೂಡಿ ಕುಲವಳಿದವಳಲ್ಲ ಚೆನ್ನಮಲ್ಲಿಕಾರ್ಜುನ

೧೨೪.
ಕೈಸಿರಿಯ ದಂಡವ ಕೊಳಬಹುದಲ್ಲದೆ
ಮೈಸಿರಿಯ ದಂಡವ ಕೊಳಲುಂಟೆ?
ಉಟ್ಟಂತ ಉಡಿಗೆತೊಡಿಗೆಯನೆಲ್ಲ ಸೆಳೆದುಕೊಳಬಹುದಲ್ಲದೆ
ಮುಚ್ಚಿ ಮುಸುಕಿರ್ದ ನಿರ್ವಾಣವ ಸೆಳೆದುಲೊಳಬಹುದೇ?
ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡಿಗೆತೊಡಿಗೆಯ ಹಂಗೇಕೊ ಮರುಳೇ?

೧೨೫.
ಮರವಿದ್ದು ಫಲವೇನು? ನೆಳಲಿಲ್ಲದನ್ನಕ!
ಧನವಿದ್ದು ಫಲವೇನು ದಯವಿಲ್ಲದನ್ನಕ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ?
ಚೆನ್ನಮಲ್ಲಿಕಾರ್ಜುನ

೧೨೬.
ಕಟ್ಟಿಹಾದ ಬಿದಿರಿನಲ್ಲಿ ಮರಳಿ ಕಳಲೆ ಮೂಡಬಲ್ಲುದೆ?
ಸುಟ್ಟ ಮಡಕೆ ಮುನ್ನಿನಂತೆ ಮರಳಿ ಧರೆಯನಪ್ಪಬಲ್ಲುದೆ?
ತೊಟ್ಟು ಬಿಟ್ಟು ಬಿದ್ದ ಹಣ್ಣು ಮರಳಿ ತೊಟ್ಟನಪ್ಪಬಲ್ಲುದೆ?
ಕಷ್ಟಕರ್ಮಿ ಮನುಜರು ಕಾಣದೆ ಒಂದ ನುಡಿದರೆ
ನಿಷ್ಠೆಯುಳ್ಳ ಶರಣರು ಮರಳಿ ಮರ್ತ್ಯಕ್ಕೆ ಬಪ್ಪರೆ?
ಚೆನ್ನಮಲ್ಲಿಕಾರ್ಜುನ

೧೨೭.
ಪಂಚೇಂದ್ರಿಯಂಗಳೊಳಗೆ
ಒಂದಕ್ಕೆ ಪ್ರಿಯನಾದರೆ ಸಾಲದೆ?
ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದರೆ ಸಾಲದೆ?
ರತ್ನದ ಸಂಕೋಲೆಯಾದಡೇನು ಬಂಧನ ಬಿಡುವುದೆ?
ಚೆನ್ನಮಲ್ಲಿಕಾರ್ಜುನ

೧೨೮.
ಮರೆಯ ನೂಲು ಸರಿಯೆ
ನಾಚುವುದು ನೋಡಾ ಗಂಡು ಹೆಣ್ಣೆಂಬ ಜಾತಿ
ಪ್ರಾಣದೊಡೆಯ ನೀ ಜಗದಲ್ಲಿ
ತೆರಹಿಲ್ಲದೊಪ್ಪುಡೆ ನಾಚಲೆಡೆಯುಂಟೆ ಹೇಳಾ!
ಚೆನ್ನಮಲ್ಲಿಕಾರ್ಜುನಯ್ಯ ಜಗವೆಲ್ಲ ಕಣ್ಣಾಗಿ ನೋಡುತ್ತಿರೆ
ಮುಚ್ಚಿ ಮರೆಯಿಸುವೆನೆಂತು ಹೇಳಾ ಅಯ್ಯ

೧೨೯.
ತನುವಿಡಿದು ದಾಸೋಹವ ಮಾಡಿ, ಗುರುಪ್ರಸಾದಿಯಾದ ಬಸವಣ್ಣ
ಮನವಿಡಿದು ದಾಸೋಹವ ಮಾಡಿ ಲಿಂಗಪ್ರಸಾದಿಯಾದ ಬಸವಣ್ಣ
ಧನವಿಡಿದು ದಾಸೋಹವ ಮಾಡಿ, ಜಂಗಮಪ್ರಸಾದಿಯಾದ ಬಸವಣ್ಣ
ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ
ಸದ್ಗುರು ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣ ಬಸವಣ್ಣ ಸ್ವಯಂಪ್ರಸಾದಿಯಾದನಯ್ಯ

೧೩೦.
ಆತುರದ ಧ್ಯಾನದಿಂದ ಧಾವತಿಗೊಂಡೆ
ಜ್ಯೋತಿರ್ಲಿಂಗವ ಕಾಣಿಸಬಾರದು, ಮಾತಿನ ಮಾತಿಗೆ ಸಿಲುಕುವನಲ್ಲ
ಧಾತುಗೆಡಿಸಿ ಮನವ ನೋಡಿ ಕಾಡುವನು
ಆತುಮನಂತರ-ಪರವನರಿದಡೆ ಆತನೆ ಶಿವಯೋಗಿ
ಆತನ ಪಾದಕೆ ಶರಣು ಎಂಬೆನಯ್ಯ ಚೆನ್ನಮಲ್ಲಿಕಾರ್ಜುನ

೧೩೧.
ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ,
ವಾಯುವಿನ ಚಲನೆ, ತರುಗುಲ್ಮಲತಾದಿಗಳಲ್ಲಿಯ ತಳಿರು ಪುಷ್ಪ
ಷಡುವರ್ಣಂಗಳೆಲ್ಲ ಹಗಲಿನ [ಪೂಜೆ]
ಚಂದ್ರಪ್ರಕಾಶ, ನಕ್ಷತ್ರ, ಅಗ್ನಿ,
ವಿದ್ಯುದ್ ಆದಿಗಳು ದೀಪ್ತಿಮಯವೆನಿಸಿಪ್ಪುವುಗಳೆಲ್ಲ
ಇರುಳಿನ ಪೂಜೆ;
ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ

೧೩೨.
ಸಂಸಾರವ ನಿರ್ವಾಣವ ಮಾಡಿ,
ಮನವ ವಜ್ರತುರಗವ ಮಾಡಿ,
ಜೀವನ ರಾವುತನ ಮಾಡಿ,
ಮೇಲಕ್ಕುಪ್ಪುವಡಿಸಲೀಯದೆ,
ಮುಂದಕ್ಕೆ ಮುಗ್ಗರಿಸಲೀಯದೆ, ಈ ವಾರುವನ ದಳದ ಮೇಲೆ
ಅಟ್ಟಿ ಮುಟ್ಟಿ ಹಾರಿ ಬರಸೆಳೆದು ನಿಲಿಸಲರಿಯದೆ
ಪವನಬಣ್ಣದ ಕೇಸರಿಯ ತೊತ್ತಳದುಳಿವುತ್ತಿಪ್ಪುದಿದಾರಯ್ಯ?
ಅಂಗಡಿಯ ರಾಜಬೀದಿಯೋಳಗೆ ರತ್ನಶೆಟ್ಟಿಯ ಮಾಣಿಕ್ಯ ಬಿದ್ದರೆ
ಥಳಥಳನೆ ಹೊಳೆವ ಪ್ರಜ್ವಳಿತವ ಕಾಣದೆ
ಹಳಹಳನೆ ಹಳಚುತ್ತಿಪ್ಪುದಿದಾರಯ್ಯ?
ಹೃದಯಸ್ಥಾನದ ಧೂಪಗುಂಡಿಗೆಯಲ್ಲಿ
ಆಧಾರಸ್ಥಾನದಿಂಗಳ ಮತ್ತೊಂದು ಬಂದು,
ಪರಿಣಾಮವೆಂಬ ಧೂಪವನಿಕ್ಕಿ
ವಾಯುವಿನ ಸಂಬಂಧವರಿಯದೆ ವಾಯುವ ಮೇಲಕ್ಕೆತ್ತಲು
ಗಗನಕ್ಕೆ ತಾಗುವುದು,
ತಾಗಲಿಕೆ ಅಲ್ಲಿರ್ದ ಅಮೃತದ ಕೊಡನೊಡೆದು
ಕೆಳಗಣ ಹೃದಯಸ್ಥಾನದ ಮೇಲೆ ಬೀಳೆ,
ಮರೆಸಿದ ಮಾಣಿಕ್ಯವ ಕಾಣಬಹುದು,
ಇದನಾರು ಬಲ್ಲರೆಂದರೆ
ಹಮ್ಮಳಿದು ಇಹಪರವನರಿದು
ಪಂಚೇಂದ್ರಿಯದ ಇಂಗಿತವನರಿದ ಶರಣ ಬಸವಣ್ಣನಲ್ಲದೆ

ಈ ಪ್ರಾಣಘಾತವ ಮಾಡುವರೆತ್ತ ಬಲ್ಲರಯ್ಯ, ಚೆನ್ನಮಲ್ಲಿಕಾರ್ಜುನ

೧೩೩.
ಲಿಂಗಕ್ಕೆ ಶರಣೆಂದು ಪೂಜಿಸಬಹುದಲ್ಲದೆ
ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ ಶರಣೆನ್ನಬಾರದು ಎಲೆ ತಂದೆ
ಆಡಬಹುದು ಪಾಡಬಹುದಲ್ಲದೆ ನುಡಿದಂತೆ ನಡೆಯಲು ಬಾರದೆಲೆ ತಂದೆ
ಚೆನ್ನಮಲ್ಲಿಕಾರ್ಜುನದೇವ,
ನಿಮ್ಮ ಶರಣರು ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ

೧೩೪.
ಹಂದಿಯು ಮದಕರಿಯು ಒಂದೆ ದಾರಿಯಲ್ಲಿ
ಸಂಧಿಸಿದರೆ ಹಂದಿಗಂಜಿ ಮದಕರಿ ಕೆಲಸಕ್ಕೆ ಸಾರಿದರೆ,
ಹೀಹಂದಿಯದು ಕೇಸರಿಯಪ್ಪುದೇ
ಚೆನ್ನಮಲ್ಲಿಕಾರ್ಜುನ?

೧೩೫.
ಕಳನೇರಿ ಇಳಿವುದು ವೀರಂಗೆ ಮತವಲ್ಲ
ಶಿವಶರಣಂಗೆ ಹಿಮ್ಮೆಟ್ಟುವುದು ಪಥವಲ್ಲ
ಮನದೊಡೆಯ ಮನವನಿಂಬುಗೊಂಬನಯ್ಯ
ಏರಲಾಗದು ಶ್ರೀಪರ್ವತವ, ಏರಿ ಇಳಿದೊಡೆ ವ್ರತಕ್ಕೆ ಭಂಗ
ಕಳನೇರಿ ಕೈಮರೆದಡೆ ಮಾರಂಕ
ಚೆನ್ನಮಲ್ಲಿಕಾರ್ಜುನನಿಮ್ಮೈಗಾಣಲಿರಿವನು

೧೩೬.
ಬಯಲು ಲಿಂಗವೆಂಬೆನೆ ? ನಡೆದಲ್ಲಿಯೇ ಹೋಯಿತು
ಬೆಟ್ಟ ಲಿಂಗವೆಂಬೆನೆ ? ಮೆಟ್ಟಿನಡೆದಲ್ಲಿಯೇ ಹೋಯಿತು
ತರುಮರಾದಿಗಳು ಲಿಂಗವೆಂಬೆನೆ ? ತರಿದಲ್ಲಿಯೇ ಹೋಯಿತು
ಲಿಂಗಜಂಗಮದ ಪಾದವೇ ಗತಿಯೆಂದು ನಂಬಿದ
ಸಂಗನ ಬಸವಣ್ಣನ ಮಾತ ಕೇಳದೆ
ಕೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ

೧೩೭.
ಅರಿವು ಸಾಧ್ಯವಾಯಿತ್ತೆಂದು
ಗುರು-ಲಿಂಗ-ಜಂಗಮವ ಬಿಡಬಹುದೇ?
ಸಂದುಸಂಶಯವಳಿದಖಂಡಜ್ಞಾನವಾಯಿತ್ತೆಂದು
ಪರಧನ-ಪರಸ್ತ್ರೀಗಳುಪಬಹುದೇ?
ಯತ್ರ ಜೀವಸ್ತತ್ರ ಶಿವಃ ಎಂಬ ಅಭಿನ್ನಜ್ಞಾನವಾಯಿತ್ತೆಂದು
ಶುನಕು-ಸೂಕರ-ಕುಕ್ಕುಟ-ಮಾರ್ಜಾಲಂಗಳ ಕೂಡಿ ಭುಂಜಿಸಬಹುದೇ?
ಭಾವದಲ್ಲಿ ತನ್ನ ನಿಜ ನೆಲೆಯರಿಯನರಿವುತ್ತಿಹುದು
ಸುಜ್ಞಾನ-ಸತ್ಕ್ರಿಯಾ-ಸುನೀತಿ-ಸುಮಾರ್ಗದಲ್ಲಿ ವರ್ತಿಸುವುದು
ಹೀಂಗಲ್ಲದೆ ಜ್ಞಾನವಾಯಿತ್ತೆಂದು
ತನ್ನ ಮನಕ್ಕೆ ಬಂದ ಹಾಂಗೆ ಮೀರಿ ನುಡಿದು ನಡೆದೊಡೆ
ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯನು?

೧೩೮.
ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ
ಆಪ್ಯಾಯನ ಬಿಡದು
ಕಾಯವರ್ಪಿತವೆಂಬ ಹುಸಿಯ ನೋಡಾ
ನಾನು ಭಕ್ತನೆಂಬ ನಾಚಿಕೆಯ ನೋಡಾ
ನಾನು ಯುಕ್ತನೆಂಬ ಹೇಸಿಕೆಯ ನೋಡಾ
ಓಗರವಿನ್ನಾಗದು ಪ್ರಸಾದ ಮುನ್ನಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ, ಉಭಯವಡಗದನ್ನಕ

೧೩೯.
ಅಕ್ಕಿಯಿಲ್ಲದ ತುಷಕ್ಕೆ ಅಗ್ಘವಣಿಯನೆರೆದರೆ
ಅದೆಂದಿಗೆ ಬೆಳೆದು ಫಲವಪ್ಪುದಯ್ಯ?
ಅರಿವಿಲ್ಲದವರಿಗೆ ಆಚಾರವಿದ್ದರೆ
ಅರಕೆಗೆಟ್ಟು ಸುಖವೆಂದಪ್ಪುದಯ್ಯ?
ಹಾರದ ಪರಿಮಳವು ಸ್ಥಿರವಾಗಬಲ್ಲುದೇ?
ಎನ್ನ ದೇವ ಚೆನ್ನಮಲ್ಲಿಕಾರ್ಜುನನರಿಯದವರಿಗೆ
ಆಚಾರವಿಲ್ಲ ಕಾಣಿರಯ್ಯ

೧೪೦.
ಸಟೆ-ದಿಟವೆಂಬುವೆರಡುವಿಡಿದು
ನಡೆವುದೀ ಲೋಕವೆಲ್ಲವು
ಸಟೆ-ದಿಟವೆಂಬುವೆರಡುವಿಡಿದು
ನಡೆವನೇ ಲೋಕದೊಡನೆ ಶರಣನು?
ಗುರು-ಲಿಂಗ-ಜಂಗಮದಲ್ಲಿ ಸಟೆಯ ಬಳಸಿದಡೆ
ಆತನು ತ್ರಿವಿಧಕ್ಕೆ ದ್ರೋಹಿ, ಅಘೋರನರಕಿ,
ಉಂಬುದೆಲ್ಲ ಕಿಲ್ಪಿಷ, ತಿಂಬುದೆಲ್ಲ ಅಡಗು, ಕುಡಿವುದೆಲ್ಲ ಸುರೆ
ಹುಸಿಯೆಂಬುದೇ ಹೊಲೆ
ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯ?
ಹುಸಿಯನಾಡಿ ಲಿಂಗವ ಪೂಜಿಸಿದಡೆ
ಹೊಳ್ಳ ಬಿತ್ತಿ ಫಲವನರಸುವಂತೆ ಕಾಣಾ ಚೆನ್ನಮಲ್ಲಿಕಾರ್ಜುನ

೧೪೧.
ಐದು ಪರಿಯ ಬಣ್ಣವ ತಂದುಕೊಟ್ಟರೆ
ನಾಲ್ಕು ಮೊಲೆಯ ಹಸುವಾಯಿತ್ತು
ಹಸುವಿನ ಬಸರಲ್ಲಿ ಕರು ಹುಟ್ಟಿತ್ತು
ಕರುವ ಮುಟ್ಟಲೀಯದೆ ಹಾಲು ಕರೆದುಕೊಂಡರೆ
ಕರ ರುಚಿಯಾಗಿತ್ತು
ಮಧುರ ತಲೆಗೇರಿ, ಅರ್ಥ ನೀಗಾಡಿ
ಆ ಕರುವಿನ ಬೆಂಬಳಿವಿಡಿದು ಭವ ಹರಿಯಿತ್ತು
ಚೆನ್ನಮಲ್ಲಿಕಾರ್ಜುನ

೧೪೨.
ರವಿಯ ಕಾಳಗವ ಗೆಲಿದು
ಒಂಬತ್ತು ಬಾಗಿಲ ಮುರಿದು
ಅಷ್ಟಧವಳಾರಮಂ ಸುಟ್ಟು, ಮೇಲುಪ್ಪರಿಗೆಯ ಮೆಟ್ಟಿ
ಅಲ್ಲ-ಅಹುದು, ಉಂಟು-ಇಲ್ಲ, ಬೇಕು-ಬೇಡ ಎಂಬ
ಆರರತಾತನೇ ಗುರು
ಗುರು ತಾನೇ ಬೇರಿಲ್ಲ
ದ್ವಯಕಮಲದಲ್ಲಿ ಉದಯವಾದ ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣ ಸಂಗನ ಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು

೧೪೩.
ಹುಟ್ಟದ ಯೋನಿಯಲ್ಲಿ ಹುಟ್ಟಿಸಿ,
ಬಾರದ ಭವಂಗಳಲಿ ಬರಿಸಿ,
ಉಣ್ಣದ ಊಟವನುಣಿಸಿ ವಿಧಿಯೊಳಗಾಗಿಸುವ ಕೇಳಿರಣ್ಣ!
ತನ್ನವರೆಂದರೆ ಮನ್ನಿಸುವನೇ ಶಿವನು?
ಹತ್ತಿರಿದ್ದ ಭೃಂಗಿಯ ಚರ್ಮವ ಕಿತ್ತೀಡಾಡಿಸಿದನು
ಮತ್ತೆ ಕೆಲವರ ಬಲ್ಲನೇ?
ಇದನರಿದು ಬಿಡದಿರು ಚೆನ್ನಮಲ್ಲಿಕಾರ್ಜುನನಿಂತಹ ಸಿತಗನವ್ವ!

೧೪೪.
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ
ಐವರು ಮಕ್ಕಳು ಜನಿಸಿದರೆಂತೆಂಬೆ?!
ಒಬ್ಬ ಭಾವದರೂಪ, ಒಬ್ಬ ಪ್ರಾಣದರೂಪ,
ಒಬ್ಬನೈಮುಖನಾಗಿ ವಿಶ್ವಕ್ಕೆ ಕಾಯರೂಪಾದ
ಇಬ್ಬರು ಉತ್ಪತ್ತಿಸ್ಥಿತಿಗೆ ಕಾರಣರಾದರು
ಐಮುಗನರಮನೆ ಸುಖವಿಲ್ಲೆಂದರಿದವನಾಗಿ
ಇನ್ನು ಕೈಲಾಸವನು ಹೊಗೆ ಹೊಗೆ!
ಮರ್ತ್ಯಕ್ಕೆ ಅಡಿಯಿಡೆನು
ಚೆನ್ನಮಲ್ಲಿಕಾರ್ಜುನದೇವ ನೀನೆ ಸಾಕ್ಷಿ!

೧೪೫.
ಸುಖದ ಸುಖಿಗಳ ಸಂಭಾಷಣೆಯಿಂದ
ದುಃಖಕ್ಕೆ ವಿಶ್ರಾಮವಾಯಿತ್ತು
ಭಾವಕ್ಕೆ ಭಾವ ತಾರ್ಕಣೆಯಾದಲ್ಲಿ
ನೆನಹಕ್ಕೆ ವಿಶ್ರಾಮವಾಯಿತ್ತು
ಬೆಚ್ಚು ಬೆರೆಸಲೊಡನೆ ಮೆಚ್ಚು ಒಳಕೊಂಡಿತಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗದಿಂದ

೧೪೬.
ಅಂಗೈಯೊಳಗಣ ಲಿಂಗವ ಪೂಜಿಸುತ್ತ
ಮಂಗಳಾರತಿಗಳನು ತೊಳಗಿ ಬೆಳಗುತಲಿರ್ದೆ ನೋಡಯ್ಯ
ಕಂಗಳ ನೋಟ ಕರುವಿಟ್ಟ ಭಾವ,
ಹಿಂಗದ ಮೋಹ ತೆರಹಿಲ್ಲದಿರ್ದೆ ನೋಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮನಲಗದ ಪೂಜೆ ಅನುವಾಯಿತ್ತೆನಗೆ

೧೪೭.
ಪುರುಷರ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ ಕಾಡಿತ್ತು ನೋಡಾ!
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ!
ಲೋಕವೆಂಬ ಮಾಯೆಗೆ
ಶರಣಚಾರಿತ್ರ ಮರುಳಾಗಿ ತೋರುವುದು ನೋಡಾ!
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ
ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ

೧೪೮.
ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ,
ಬೆಳೆದನು ಅಸಂಖ್ಯಾತರ ಕರುಣದಲ್ಲಿ
ಸುಜ್ಞಾನವೆಂಬ ತುಪ್ಪ,
ಪರಮಾರ್ಥವೆಂಬ ಸಕ್ಕರೆಯನಿಕ್ಕಿದಿರಿ ನೋಡಾ!
ಇಂತಪ್ಪ ತ್ರಿವಿಧಾಮೃತವ ದಣಿಯಲೆರಡು ಸಲಹಿದಿರಿ
ಎನ್ನ ವಿವಾಹವ ಮಾಡಿದಿರಿ
ಸಯವಪ್ಪ ಗಂಡಂಗೆ ಕೊಟ್ಟಿರಿ
ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರು ನೆರೆದು ಬಂದಿರಿ
ಬಸವಣ್ಣ ಮೆಚ್ಚಲು ಒಗೆತನವ ಮಾಡುವೆ
ಚೆನ್ನಮಲ್ಲಿಕಾರ್ಜುನನ ಕೈವಿಡಿದು,
ನಿಮ್ಮ ಮಂಡೆಗೆ ಹೂವ ತಹೆವಲ್ಲದೆ ಹುಲ್ಲ ತಾರೆನು!
ಅವಥರಿಸಿ ನಿಮ್ಮಡಿಗಳೆಲ್ಲರು
ಮರಳಿ ಬಿಜಯಂಗೈವುದು ಶರಣು ಶರಣಾರ್ಥಿ

೧೪೯.
ಅಯ್ಯ, ನಿಮ್ಮ ಮಹಂತರ ಕೂಡಿದ
ಸುಖವನುಪಮೆಗೆ ತರಬಾರದಯ್ಯ
ಅಯ್ಯ, ನಿಮ್ಮ ಮಹಂತರ ಕೂಡಿಯಗಲುವ ಧಾವತಿಯಿಂದ
ಸಾವುದೇ ಕರ ಲೇಸು ಕಂಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮ ನಿಜವನರುಹಿದ ಮಹಿಮರನಗಲಿ ನಿಲಲಾರೆನಯ್ಯ

೧೫೦.
ಅಯ್ಯ, ನಿಮ್ಮ ಸದ್ಭಕ್ತರ ಕಂಡೆನಾಗಿ
ಎನ್ನ ಕಂಗಳ ಪಟಲ ಹರಿಯಿತ್ತು
ಅಯ್ಯ ನಿಮ್ಮ ಸಜ್ಜನ ಸದ್ಭಕ್ತರ ಶ್ರೀಚರಣಕ್ಕೆರಗಿದೆನಾಗಿ
ಎನ್ನ ಹಣೆಯ ಲಿಖಿತ ತೊಡೆಯಿತ್ತು
ಚೆನ್ನಮಲ್ಲಿಕಾರ್ಜುನದೇವ,
ನಿಮ್ಮ ಶರಣ ಸಂಗನಬಸವಣ್ಣನ ಕಂಡು
ಮಿಗೆ ಮಿಗೆ ನಮೋ ನಮೋ ಎನುತಿರ್ದೆನು

೧೫೧.
ಎನ್ನಂಗದಲಿ ಆಚಾರವ ತೋರಿದನಯ್ಯ ಬಸವಣ್ಣನು
[ಆ] ಆಚಾರವೇ ಲಿಂಗವೆಂದರುಹಿದನಯ್ಯ ಬಸವಣ್ಣನು
ಎನ್ನ ಪ್ರಾಣದಲ್ಲಿ ಅರುಹ ತೋರಿದನಯ್ಯ ಬಸವಣ್ಣನು
ಆ ಅರುಹೇ ಜಂಗಮವೆಂದರುಹಿದನಯ್ಯ ಬಸವಣ್ನನು
[ಚೆನ್ನಮಲ್ಲಿಕಾರ್ಜುನ] [ಎನ್ನ] ಹೆತ್ತ ತಂದೆ ಸಂಗಬಸವಣ್ನನು
ಎನಗೀ ಕ್ರಮವನರುಹಿದನಯ್ಯ

೧೫೨.
ಗಂಗೆಯೊಡನಾಡಿದ ಗಟ್ಟ-ಬೆಟ್ಟಂಗಳು
ಕೆಟ್ಟ ಕೇಡ ನೋಡಯ್ಯ
ಅಗ್ನಿಯೊಡನಾಡಿದ ಕಾಷ್ಟಂಗಳು ಕೆಟ್ಟ ಕೇಡ ನೋಡಯ್ಯ
ಜ್ಯೋತಿಯೊಡನಾಡಿದ ಕತ್ತಲೆ ಕೆಟ್ಟ ಕೇಡ ನೋಡಯ್ಯ
ಇಂತೀ ಪರಶಿವಮೂರ್ತಿ ಹರನೇ
ನಿಮ್ಮ ಜಂಗಮಲಿಂಗದೊಡನಾಡಿ ಎನ್ನ ಭವಾದಿಭವಂಗಳು
ಕೆಟ್ಟ ಕೇಡ ನೋಡಾ ಚೆನ್ನಮಲ್ಲಿಕಾರ್ಜುನ

೧೫೩.
ಮರ್ತ್ಯಲೋಕದ ಭಕ್ತರ ಮನವ ಬೆಳಗಲೆಂದು
ಇಳಿತಂದನಯ್ಯ ಶಿವನು
ಕತ್ತಲೆಯ ಪಾತಾಳವ ರವಿ ಹೊಕ್ಕಂತಾಯಿತಯ್ಯ
ಚಿತ್ತದ ಪ್ರವೃತ್ತಿಯ ಹಿಂಗಿಸಿ
ಮುಕ್ತಿಪಥವ ತೋರಿದನಲ್ಲಾ ಅಸಂಖ್ಯಾತರುಗಳಿಗೆ
ತನುವೆಲ್ಲ ಸ್ವಯಂಲಿಂಗ, ಮನವೆಲ್ಲ ಚರಲಿಂಗ
ಭಾವವೆಲ್ಲ ಮಹಾಘನದ ಬೆಳಗು
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣಸಮ್ಯಜ್ಞಾನಿ ಚೆನ್ನಬಸವಣ್ಣನ
ಶ್ರೀಪಾದಕ್ಕೆ ಶರಣೆಂದು
ಎನ್ನ ಭಾವಂ ನಾಸ್ತಿಯಾಯಿತ್ತಯ್ಯ ಪ್ರಭುವೇ

೧೫೪.
ಕಲ್ಯಾಣವೆಂಬುದಿನ್ನಾರಿಗೂ ಹೊಗಬಾರದು
ಆಶೆ-ಆಮಿಷವನಳಿದವಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು
ಒಳಗು-ಹೊರಗೂ ಶುದ್ಧವಾದಂಗಲ್ಲದೆ ಕಲ್ಯಾಣವ ಹೊಗಬಾರದು
ನಾನೆಂಬುದು ಹರಿದವಂಗಲ್ಲದೆ ಕಲ್ಯಾಣವ ಹೊಗಬಾರದು
ಒಳಗು ತಿಳಿದು ಚೆನ್ನಮಲ್ಲಿಕಾರ್ಜುನಂಗೊಲಿದು
ಉಭಯ ಲಜ್ಜೆಯಳಿದೆನಾಗಿ ಕಲ್ಯಾಣವ ಕಂಡು
ನಮೋ ನಮೋ ಎನುತಿರ್ದೆನು

೧೫೫.
ಅಯ್ಯಾ ನಿಮ್ಮಾನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು!
ಅಯ್ಯಾ ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಮನ ಶುದ್ಧವಾಯಿತ್ತು!
ಅಯ್ಯಾ ನಿಮ್ಮ ಅನುಭಾವಿಗಳು ಒರೆದೊರೆದು ಆಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನ, ನಿಮಗಾನು ತೊಡಿಗೆಯಾದೆನು

೧೫೬.
ಅರಸಿ ತೊಳಲಿದರಿಲ್ಲ ಹರಸಿ ಬಳಲಿದರಿಲ್ಲ
ಬಯಸಿ ಹೊಕ್ಕರಿಲ್ಲ ತಪಸ್ಸು ಮಾಡಿದರಿಲ್ಲ
ಅದು ತನ್ನ ತಾನಹ ಕಾಲಕ್ಕಲ್ಲದೆ ಸಾಧ್ಯವಾಗದು
ಶಿವನೊಲಿದಲ್ಲದೇ ಕೈಗೂಡದು
ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ
ನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು

೧೫೭.
ಹಾವಿನ ಬಾಯ ಹಲ್ಲ ಕಳೆದು
ಹಾವನಾಡಿಸಬಲ್ಲೆಡೆ
ಹಾವಿನ ಸಂಗವೆ ಲೇಸು ಕಂಡಯ್ಯ!
ಕಾಯದ ಸಂಗವ ವಿವರಿಸಬಲ್ಲಡೆ
ಕಾಯದ ಸಂಗವೇ ಲೇಸು ಕಂಡಯ್ಯ!
ತಾಯಿ ರಕ್ಕಸಿಯಾದಂತೆ ಕಾಯವಿಕಾರವು
ಚೆನ್ನಮಲ್ಲಿಕಾರ್ಜುನಯ್ಯ,
ನೀನೊಲಿದವರು ಕಾಯಗೊಂಡಿದ್ದರೆನಬೇಡ

೧೫೮.
ಅಂಗವಿಕಾರಸಂಗವ ಮರೆದು
ಲಿಂಗವನೊಡಗೂಡುತಿಪ್ಪರ ತೋರಾ ಎನಗೆ!
ಕಾಯವಿಕಾರ ಕತ್ತಲೆಯಳಿದು
ಭಕ್ತಿಯೇ ಪ್ರಾಣವಾಗಿಪ್ಪರ ತೋರಾ ಎನಗೆ!
ತ್ರಿಕರಣಶುದ್ಧವಾಗಿ ನಿಮ್ಮ ನೆರೆನಂಬಿದ ಸದ್ಭಕ್ತರ ತೋರಾ ಎನಗೆ
ಚೆನ್ನಮಲ್ಲಿಕಾರ್ಜುನ

೧೫೯.
ತುಂಬಿದುದು ತುಳುಕದು ನೋಡಾ
ನಂಬಿದುದು ಸಂದೇಹಿಸದು ನೋಡಾ
ಒಳಿದುದು ಓಸರಿಸದು ನೋಡಾ
ನೆರೆಯರಿದುದು ಮರೆಯದು ನೋಡಾ
ಚೆನ್ನಮಲ್ಲಿಕಾರ್ಜುನಯ್ಯ, ನೀನೊಲಿದ ಶರಣಂಗೆ
ನಿಸ್ಸೀಮ ಸುಖ ನೋಡಯ್ಯ!

೧೬೦.
ನೋಡಿ ನುಡಿಸಿ ಮಾತಾಡಿಸಿದಡೊಂದು ಸುಖ
ಏನ ಮಾಡದಯ್ಯ ನಿಮ್ಮ ಶರಣರ ಅನುಭಾವ?
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರ ಸದ್ಗೋಷ್ಠಿ ಏನ ಮಾಡಯ್ಯ?

೧೬೧.
ಆಯತ-ಸ್ವಾಯತ-ಅನುಭಾವವ ನಾನೆತ್ತ ಬಲ್ಲೆನಯ್ಯಾ
ಗುರು-ಲಿಂಗ-ಜಂಗಮಕ್ಕೆ ಅರ್ಥಪ್ರಾಣಾಭಿಮಾನಂಗಳನಿತ್ತ
ನಿನ್ನ ಭಕ್ತರ ಭೃತ್ಯರಿಗಾಳಾಗಿಪ್ಪೆನಯ್ಯಾ
ನಿಮ್ಮ ಶರಣರ ಸಂಗವನಲ್ಲದೆ ಬೇರೊಂದ ಬಯಸೆನಯ್ಯ
ಚೆನ್ನಮಲ್ಲಿಕಾರ್ಜುನ

೧೬೨.
ಅಷ್ಟದಳಕಮಲದ ಆತ್ಮನೊಳಗೆ ಸೃಷ್ಟಿ ಜನಿಸಿ
[ಕೂರುಮ ದಿಗುದಂತಿ] ದಿಗುವಳಯವ ನುಂಗಿ
ನಿಜ ಶೂನ್ಯ ತಾನಾದ ಬಳಿಕ
ತನ್ನ ತಾನರಿದ ನಿಜಪದ ಭಿನ್ನಯೋಗಕ್ಕೆ ಬರಬಹುದೇ?
ಕಂಗಳ ನೋಟದಲ್ಲಿ
ಮನ ಸೊಗಸಿನಲ್ಲಿ
ಅನಂಗನ ಧಾಳಿಯನಗಲಿದೆವಣ್ಣ
ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಗೊಳಗಹುದೇ?
ಎನ್ನ ದೇವ ಚೆನ್ನಮಲ್ಲಿಕಾರ್ಜುನನಲ್ಲದ
ಪರಪುರುಷರು ನಮಗಾಗದಣ್ಣ!

೧೬೩.
ನಮಗೆ ನಮ್ಮ ಲಿಂಗದ ಚಿಂತೆ
ನಮಗೆ ನಮ್ಮ ಭಕ್ತರ ಚಿಂತೆ, ಮನಗೆ ನಮ್ಮ ಆದ್ಯರ ಚಿಂತೆ
ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನನ ಚಿಂತೆಯಲ್ಲದೆ
ಲೋಕದ ಮಾತು ನಮಗೇಕಣ್ಣ?

೧೬೪.
ನಿಮ್ಮ ನಿಲುವಿಂಗೆ ನೀವು ನಾಚಬೇಡವೆ?
ಅನ್ಯರ ಕೈಲಿ ಅಲ್ಲ ಎನಿಸಿಕೊಂಬ ನಡೆ-ನುಡಿಯೇಕೆ?
ಅಲ್ಲ ಎನಿಸಿಕೊಂಬುದರಿಂದ, ಆ ಕ್ಷಣವೇ ಸಾವುದು ಲೇಸು ಕಾಣಾ
ಚೆನ್ನಮಲ್ಲಿಕಾರ್ಜುನ

೧೬೫.
ಶಿವಭಕ್ತರ ರೋಮ ನೊಂದರೆ
ಒಡನೆ ಶಿವನು ನೋವ ನೋಡಾ
ಶಿವಭಕ್ತರು ಪರಿಣಾಮಿಸಿದರೆ, ಒಡನೆ ಶಿವ ಪರಿಣಆಮಿಸುವ ನೋಡಾ !
ಭಕ್ತದೇಹಿಕ ದೇವ ಎಂಬ ಶ್ರುತಿ ಹೊಗಳುವ ಕಾರಣ
ಶಿವಭಕ್ತರ ಲೇಸು ಹೊಲ್ಲೆಹ ಶಿವನ ಮುಟ್ಟುವುದು
ತಾಯಿ ನೊಂದರೆ ಒಡಲ ಶಿಶು ನೋವ ತೆರನಂತೆ
ಚೆನ್ನಮಲ್ಲಿಕಾರ್ಜುನ-ತನ್ನ ಭಕ್ತರು ನೊಂದರೆ
ಒಡನೆ ತಾ ನೋವನು

೧೬೬.
ನೋಡುವ ಕಂಗಳಿಗೆ ರೂಪಿಂಬಾಗಿರಲು
ನೀವು ಮನ ನಾಚದೆ ಬಂದಿರಣ್ಣ!
ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣ!
ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣ!
ಮೂತ್ರವು ಬಿಂದು ಒಸರುವ ನಾಳವೆಂದು
ಕಂಗಾಣದೆ ಮುಂದುಗೆಟ್ಟು ಬಂದಿರಣ್ಣ!
ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ
ಹೋಗಲಾಡಿಸಿಕೊಂಡು
ಇದಾವ ಕಾರಣವೆಂದರಿಯದೆ, ನೀವು ನರಹೇತುವೆಂದರಿದೂ
ಮನ ಹೇಸದೆ ಬಂದಿರಣ್ಣ!
ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು
ಛೀ ಹೋಗಾ ಮರುಳೇ!

೧೬೭.
ಲೇಸು ಹಾಸು, ನೋಟವಾಭರಣ,
ಆಲಿಂಗನ ವಸ್ತ್ರ, ಚುಂಬನವಾರೋಗಣೆ,
ಲಲ್ಲೆವಾತು ತಾಂಬೂಲ, ಲವಲವಿಕೆಯೇ ಅನುಲೇಪನವೆನಗೆ
ಚೆನ್ನಮಲ್ಲಿಕಾರ್ಜುನನ ಕೂಟ ಪರಮಸುಖವವ್ವ!

೧೬೮.
ಆಡುವುದು, ಪಾಡುವುದು; ಕೇಳುವುದು, ಹೇಳುವುದು
ನಗೆ-ನುಡಿ ಸರಸ ಸಮ್ಮೇಳನವಾಗಿಪ್ಪುದು ಶರಣರೊಡನೆ
ಚೆನ್ನಮಲ್ಲಿಕಾರ್ಜುನ ಕೊಟ್ಟ ಆಯುಷ್ಯ ಉಳ್ಳನ್ನಕ್ಕರ
ಲಿಂಗಸುಖಿಗಳ ಸಂಗದಲ್ಲಿ ದಿನಂಗಳ ಕಳೆವುದು!

೧೬೯.
ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ!
ಜಂಗಮವೆನ್ನ ನಿಧಿನಿಧಾನ!
ಜಂಗಮವೆನ್ನ ಹರುಷದ ಮೇರೆ!
ಚೆನ್ನಮಲ್ಲಿಕಾರ್ಜುನ,
ಜಂಗಮದ ತಿಂಥಿಣಿಯಲ್ಲಿ ಓಲಾಡುವೆ

೧೭೦.
ಅರಿಯದವರೊಡನೆ ಸಂಗವ ಮಾಡಿದರೆ
ಕಲ್ಲು ಹೊಯ್ದು ಕಿಡಿಯ ತೆಗೆದುಕೊಂಬಂತೆ
ಬಲ್ಲವರೊಡನೆ ಸಂಗವ ಮಾಡಿದರೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ
ಕರ್ಪುರಗಿರಿಯ ಉರಿಯು ಕೊಂಡಂತೆ

೧೭೧.
ಮರ ಮರ ಮಥನಿಸಿ ಕಿಚ್ಚು ಹುಟ್ಟಿ
ಸುತ್ತಣ ತರುಮರಾದಿಗಳ ಸುಡಲಾಯಿತ್ತು
ಆತ್ಮವಾತ್ಮ ಮಥನಿಸಿ ಅನುಭಾವ ಹುಟ್ಟಿ
ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು
ಇಂತಪ್ಪ ಮಹಾನುಭಾವರ ಅನುಭಾವವ ತೋರಿ
ಎನ್ನನುಳುಹಿಕೊಳ್ಳಾ, ಚೆನ್ನ ಮಲ್ಲಿಕಾರ್ಜುನ

೧೭೨.
ಸಂಗದಿಂದಲ್ಲದೇ ಅಗ್ನಿ ಹುಟ್ಟದು
ಸಂಗದಿಂದಲ್ಲದೇ ಬೀಜ ಮೊಳೆದೋರದು
ಸಂಗದಿಂದಲ್ಲದೇ ದೇಹವಾಗದು
ಸಂಗದಿಂದಲ್ಲದೇ ಸರ್ವಸುಖದೋರದು
ಚೆನ್ನಮಲ್ಲಿಕಾರ್ಜುನದೇವಯ್ಯ,
ನಿಮ್ಮ ಶರಣರ ಅನುಭವದ ಸಂಗದಿಂದಾನು
ಪರಮಸುಖಿಯಯ್ಯಾ

೧೭೩.
ಶಿವಭಕ್ತನ ಮನೆಯಂಗಳ
ವಾರಣಾಸಿ ಎಂಬುದು ಹುಸಿಯೆ?
ಶಿವಭಕ್ತನ ಮನೆಯಂಗಳದಲ್ಲಿ
ಅಷ್ಟಷಷ್ಟಿ ತೀರ್ಥಂಗಳು ನೆಲಸಿಪ್ಪವಾಗಿ
ಸುತ್ತಿಬರಲು ಶ್ರೀಶೈಲ, ಕಲಬಲದಲ್ಲಿ ಕೇದಾರ,
ಅಲ್ಲಿಂದ ಹೊರಗೆ ಶ್ರೀ ವಾರಣಾಸಿ
ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ
ಎನ್ನ ದೇವ ಚೆನ್ನಮಲ್ಲಿಕಾರ್ಜುನ,
ನಿಮ್ಮ ಭಕ್ತನ ಮನೆಯಂಗಳ ವಾರಣಾಸಿಯಿಂದಧಿಕ ನೋಡಾ!

೧೭೪.
ಕಾಮನ ಗೆಲಿದೆನು, ಬಸವ, ನಿಮ್ಮ ದಯೆಯಿಂದ
ಸೋಮಧರನ ಹಿಡಿಪ್ಪೆತನು, ಬಸವ, ನಿಮ್ಮ ಕೃಪೆಯಿಂದ
ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು?
ಭಾವಿಸಲು ಗಂಡು-ರೂಪು, ಬಸವ, ನಿಮ್ಮ ದಯದಿಂದದ
ಅತಿಕಾಮಿ ಚೆನ್ನಮಲ್ಲಿಕಾರ್ಜುನಯ್ಯಂಗೆ ತೊಡರನಿಕ್ಕಿ
ಎರಡರಿಯೆದೆ ಕೂಡಿದೆನು, ಬಸವ, ನಿಮ್ಮ ಕೃಪೆಯಿಂದ

೧೭೫.
ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ
ಮನದ ಭಂಗವ ಅರಿವಿನ ಮುಖದಿಂದ ಗೆಲಿದೆ
ಜೀವದ ಭಂಗವ ಶಿವಾನುಭವದಿಂದ ಗೆಲಿದೆ
ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ
ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಗೆ ತೋರುವ
ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯ
ಚೆನ್ನಮಲ್ಲಿಕಾರ್ಜುನ ಕಾಮನ ಕೊಂದು
ಮನಸಿಜನಾಗುಳುಹಿದರೆ
ಮನಸಿಜನ ತಲೆಯ ಬರಹವ ತೊಡೆದೆನು

೧೭೬.
ಎಲ್ಲರ ಗಂಡರ ಶೃಂಗಾರದ ಪರಿಯಲ್ಲ
ಎನ್ನ ನಲ್ಲನ ಶೃಂಗಾರದ ಪರಿ ಬೇರೆ
ಕರದಲ್ಲಿ ಕಂಕಣ, ಉರದ ಮೇಲಂದುಗೆ, ಕಿವಿಯಲ್ಲಿ ಹಾವುಗೆ
ಉಭಯ-ಸಿರಿವಂತನ ಮೊಣಕಾಲಲ್ಲಿ ಝಳವಟ್ಟಿಗೆ
ಉಂಗುಷ್ಠದಲ್ಲಿ ಮೂಕುತಿ ಅದು ಜಾಣರಿಗೆ ಜಗುಳಿಕೆ
ಚೆನ್ನಮಲ್ಲಿಕಾರ್ಜುನಯ್ಯನ ಶೃಂಗಾರದ ಪರಿ ಬೇರೆ!

೧೭೭.
ದೃಷ್ಟಿವರಿದುದು, ಮನ ನೆಲೆಗೊಂಡುದಿದೇನೋ!
ಆವನೆಂದರಿಯೆ ಭಾವ ನೆಟ್ಟುದವ್ವ!
ಕಳಿಯರಿದು ಅಂಗ ಗಸಣಿಯಾದುದು
ಇನ್ನಾರೆಂದಡೆ ಬಿಡೆ ಚೆನ್ನಮಲ್ಲಿಕಾರ್ಜುನಲಿಂಗವ

೧೭೮.
ತಲೆಯಲ್ಲಿ ನಿರಿ, ಟೊಂಕದಲ್ಲಿ ಮುಡಿ,
ಮೊಣಕಾಲಲ್ಲಿ ಕಿವಿಯೋಲೆ ಕಂಡೆ!
ಹರವಸದ ಉಡೂಗೆ, ಚಿಣ್ಣಂಗೆ ಹರವಸನ ಉಡುಗೆ!
ಏಕಾಂತದಲ್ಲಿ ಕೂಡಿ, ಮುಖವ ಕಂಡು
ಕಾಣದ ಚೆನ್ನಮಲ್ಲಿಕಾರ್ಜುನನ ನೆರೆವ ಪರಿ ಕರ ಹೊಸತು

೧೭೯.
ಭಾವಿಸಿ ನೋಡಿದೆಡೆ ಅಂಗವಾಯಿತ್ತು!
ಅಂಗಗುಣವಳಿದ ಬಳಿಕ ನಿನಗಂಗವಾದೆ
ಭಿನ್ನರುಚಿಯ ಬಿಟ್ಟು ಲಿಂಗರುಚಿಯಾದ ಬಳಿಕ
ಚೆನ್ನಮಲ್ಲಿಕಾರ್ಜುನನ ಕೊಂದು ಸಾವ ಭಾಷೆ!

೧೮೦.
ಕಾಯದೊಳಗೆ ಅಕಾಯವಾಯಿತ್ತು
ಜೀವದೊಳಗೆ ನಿರ್ಜೀವವಾಯಿತ್ತು
ಭಾವದೊಳಗೆ ನಿರ್ಭಾವವಾಯಿತ್ತು
ಎನ್ನ ಮನದೊಳಗೆ ಘನ ನೆನಹಾಯಿತ್ತು
ಎನ್ನ ತಲೆ-ಮೊಲೆಯ ನೋಡಿ ಸಲಹಿದಿರಾಗಿ
ಚೆನ್ನಮಲ್ಲಿಕಾರ್ಜುನಯ್ಯನ ಧರ್ಮದವಳಾನು

೧೮೧.
ಗಟ್ಟಿದುಪ್ಪಕ್ಕೆ ತಿಳಿದುಪ್ಪಕ್ಕೆ ಭೇದವುಂಟೇ ಅಯ್ಯ?
ದೀಪಕ್ಕೆ ದೀಪ್ತಿಗೆ ಭೇದವುಂಟೇ ಅಯ್ಯ?
ಆತ್ಮಕ್ಕೆ ಅಂಗಕ್ಕೆ ಭೇದವುಂಟೇ ಅಯ್ಯ
ಎನ್ನಂಗವನು ಶ್ರೀಗುರು ಮಂತ್ರವ ಮಾಡಿ ತೋರಿದನಾಗಿ
ಸಾವಯವಕ್ಕೆ ನಿರವಯವಕ್ಕೆ ಭಿನ್ನವಿಲ್ಲವಯ್ಯ!
ಚೆನ್ನಮಲ್ಲಿಕಾರ್ಜುನದೇವರ ಬೆರೆಸಿ ಮತಿಗೆಟ್ಟವಳ
ಏನ ನುಡಿಸುವಿರಯ್ಯ?

೧೮೨.
ಕೆಂಡವ ಶವದಂತೆ
ಸೂತ್ರ ತಪ್ಪಿದ ಬೊಂಬೆಯಂತೆ
ಜಲವರತ ತಟಾಕದಂತೆ
ಬೆಂದ ನುಲಿಯಂತೆ-
ಮತ್ತೆ ಹಿಂದಣಂಗ ಉಂಟೇ ಅಣ್ಣ
ಚೆನ್ನಮಲ್ಲಿಕಾರ್ಜುನನಂಗವೇ ಆಶ್ರಯವಾದವಳಿಗೆ?!

೧೮೩.
ಫಲ ಒಳಗೆ ಪಕ್ವವಾಗಿಯಲ್ಲದೆ
ಹೊರಗಣ ಸಿಪ್ಪೆ ಒಪ್ಪಗೆಡದು
ಕಾಮನ ಮುದ್ರೆಯ ಕಂಡು ನಿಮಗೆ ನೋವಾದೀತೆಂದು
ಆ ಭಾವದಿಂದ ಮುಚ್ಚಿದೆ
ಇದಕೆ ನೋವೇಕೆ?
ಕಾಡದಿರಣ್ಣ ಚೆನ್ನಮಲ್ಲಿಕಾರ್ಜುನದೇವನ ಒಳಗಾದವಳ

೧೮೪.
ನಾಣ ಮರೆಯ ನೂಲು ಸಡಿಲೆ ನಾಚುವರು ನೋಡಾ
ಗಂಡು-ಹೆಣ್ಣೆಂಬ ಜಾತಿ
ಪ್ರಾಣದೊಡೆಯ ಜಗದೊಳಗೆ ಮುಳುಗುತ್ತ ತೆರಹಿಲ್ಲದಿರಲು
ದೇವರ ಮುಂದೆ ನಾಚಲುಂಟೆ?
ಚೆನ್ನಮಲ್ಲಿಕಾರ್ಜುನಂಗೆ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು
ಮುಚ್ಚಿ ಮೆರೆಸಬಹುದೆ ಹೇಳಯ್ಯ

೧೮೫.
ಎಲ್ಲಿ ಹೋದರೂ ಕಲಿಗೆ ಭಯವಿಲ್ಲ
ಹಂದೆಗೆ ಸುಖವಿಲ್ಲ ಕೇಳಿರಣ್ಣ!
ಈವಂಗವಗುಣವಿಲ್ಲ, ಕರುಣ ಉಳ್ಳವಂಗೆ ಪಾಪವಿಲ್ಲ
ಇನ್ನು ಪರಧನ-ಪರಸ್ತ್ರೀಯ ತೊರೆದಾತಂಗೆ
ಮುಂದೆ ಭವವಿಲ್ಲ, ಚೆನ್ನಮಲ್ಲಿಕಾರ್ಜುನ

೧೮೬.
ಸಿರಿಯಾಳಂಗೆ ಶಿವದಾಸಿಮಯ್ಯಂಗೆ ಬಸವಂಗೆ
ಆದ ರೇಖೆಯ ಬಿಟ್ಟು ಜೂಜನಾಡರೆ ನಮ್ಮವರಂದು?
ಒಬ್ಬಂಗೆ ಮಗನ ರಪಣ
ಒಬ್ಬಂಗೆ ಸೀರೆಯ ರಪಣ
ಒಬ್ಬಂಗೆ ತನು-ಮನ-ಧನ ರಪಣ
ಮೂವರೂ ಮೂದಲಿಸಿ ಮುಕ್ಕಣ್ಣನ ಗೆಲಿದರು
ಎನ್ನ ದೇವ ಚೆನ್ನಮಲ್ಲಿಕಾರ್ಜುನ

೧೮೭.
ಪ್ರಾಣಲಿಂಗವೆಂದರಿದ ಬಳಿಕ
ಪ್ರಾಣದಾಸೆ ಹಿಂಗಿತ್ತು
ಲಿಂಗಪ್ರಾಣವೆಂದರಿದ ಬಳಿಕ
ಅಂಗದಾಸೆ ಹಿಂಗಿತ್ತು
ಲಿಂಗಸೋಂಕಿನ ಸಂಗಿಗೆ-ಕಂಗಲೇ ಕರುವಾಗಿರ್ದವಯ್ಯ
ಚೆನ್ನಮಲ್ಲಿಕಾರ್ಜುನನ ಹಿಂಗದೆ ಅನಿಮಿಷವಾಗಿಹ ಶರಣಂಗೆ

೧೮೮.
ಕರಸ್ಥಲಕ್ಕೆ ಲಿಂಗಸ್ವಾಯತವಾದ ಬಳಿಕ
ಕಾಯಕ ನಿವೃತ್ತಿಯಾಗಬೇಕು
ಅಂಗದಲಳವಟ್ಟ ಲಿಂಗ ಲಿಂಗೈಕ್ಯಂಗೆ
ಅಂಗಸಂಗ ಮತ್ತೆಲ್ಲಿಯದು?
ಮಹಾಘನವನರಿದ ಮಹಂತರಿಗೆ
ಮಾಯವೆಲ್ಲಿಯದೋ ಚೆನ್ನಮಲ್ಲಿಕಾರ್ಜುನ?

೧೮೯.
ಕಟ್ಟಿದ ಕೆರೆಗೆ ಕೋಡಿ ಮಾಣದು
ಹುಟ್ಟಿದ ಪ್ರಾಣಿಗೆ ಪ್ರಳಯ ತಪ್ಪದಿನ್ನೆಂತಯ್ಯ
ಅರುಹಿರಿಯರೆಲ್ಲಾ ವೃಥಾ ಕೆಟ್ಟುಹೋದರಿನ್ನೆಂತಯ್ಯ
ಚೆನ್ನಮಲ್ಲಿಕಾರ್ಜುನದೇವನ
ಗೊತ್ತ ಮುಟ್ಟಿದವರೆಲ್ಲರೂ ನಿಶ್ಚಿಂತರಾದರು

೧೯೦.
ಊರ ನಡುವೆ ಒಂದು ಬೇಂಟೆ ಬಿದ್ದಿತ್ತು
ಆರು ಕಂಡವರು ಕೊಡಿರಯ್ಯಾ
ಊರಿಗೆ ದೂರುವೆನಗುಸೆಯನಿಕ್ಕುವೆ
ಅರಿತು ಅರಿಯದೆ ಒಂದು ಬೇಂಟೆಯನಾಡಿದೆನು
ಅರಸಿಕೊಡಯ್ಯ ಚೆನ್ನಮಲ್ಲಿಕಾರ್ಜುನ

೧೯೧.
ಆವ ವಿದ್ಯೆಯ ಕಲಿತಡೇನು
ಶವ ವಿದ್ಯೆ ಮಾಣದನ್ನಕ?
ಅಶನವ ತೊಡೆದಡೇನು? ವ್ಯಸನವ ಮರೆದೆಡೇನು?
ಉಸಿರಗಿಡಿದರೇನು? ಬಸಿರ ಕಟ್ಟಿದರೇನು?
ಚೆನ್ನಮಲ್ಲಿಕಾರ್ಜುನದೇವಯ್ಯ ನೆಲದಳವಾರನಾದಡೆ
ಕಳ್ಳನೆಲ್ಲಿ ಅಡಗುವ?

೧೯೨.
ಹಡೆವುದರಿದು ನರಜನ್ಮವ
ಹಡೆವುದರಿದು ಗುರುಕಾರುಣ್ಯವ
ಹಡೆವುದರಿದು ಲಿಂಗಜಂಗಮಸೇವೆಯ
ಚೆನ್ನಮಲ್ಲಿಕಾರ್ಜುನಯ್ಯನ ಶರಣ ಸಂಗದಲ್ಲಿ
ನಲಿದಾಡು ಕಂಡೆಯಾ ಎಲೆ ಮನವೇ

೧೯೩.
ಮಾಟಕೂಟ ಬಸವಣ್ಣಂಗಾಯಿತ್ತು
ನೋಟಕೂಟ ಪ್ರಭುದೇವರಿಗಾಯಿತ್ತು
ಭಾವಕೂಟ ಅಜಗಣ್ಣಂಗಾಯಿತ್ತು
ಸ್ನೇಹಕೂಟ ಬಾಚಿರಾಜಂಗಾಯಿತ್ತು
ಇವರೆಲ್ಲರ ಕೂಟ ಬಸವಣ್ಣಂಗಾಯಿತ್ತು
ಎನಗೆ ನಿಮ್ಮಲ್ಲಿ ಅವಿರಳದ ಕೂಟ ಚೆನ್ನಮಲ್ಲಿಕಾರ್ಜುನಯ್ಯ

೧೯೪.
ಮಾಟಕೂಟದಲ್ಲಿ ಬಸವಣ್ಣನಿಲ್ಲ
ನೋಟಕೂಟದಲ್ಲಿ ಪ್ರಭುದೇವರಿಲ್ಲ
ಭಾವಕೂಟದಲ್ಲಿ ಅಜಗಣ್ಣನಿಲ್ಲ
ಸ್ನೇಹಕೂಟದಲ್ಲಿ ಬಾಚಿರಾಜನಿಲ್ಲ
ಇವರೆಲ್ಲರ ಕೂಟದಲ್ಲಿ ಬಸವಣ್ಣನಿಲ್ಲ
ಎನಗಿನ್ನೇವೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ?

೧೯೫.
ಕದಳಿಯೆಂಬುದು ತನು! ಕದಳಿಯೆಂಬುದು ಮನ!
ಕದಳಿಯೆಂಬುದು ವಿಷಯಂಗಳು
ಕದಳಿಯೆಂಬುದು ಭವಘೋರಾರಣ್ಯ
ಕದಳಿಯೆಂಬುದ ಗೆದ್ದು ತವ ಬದುಕೆ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು
ಭವಗೆಟ್ಟು ಬಂದ ಮಗಳೆಂದು
ಕರುಣದಿಂ ತೆಗೆದು ಬಿಗಿಯಪ್ಪಿದರೆ
ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು

೧೯೬.
ಕರ್ಮವೆಂಬ ಕದಳಿಯೆನಗೆ, ಕಾಯವೆಂಬ ಕದಳಿ ನಿನಗೆ
ಮಾಟವೆಂಬ ಕದಳಿ ಚೆನ್ನಬಸವಣ್ಣಂಗೆ
ಬಂದ ಬಂದ ಭಾವ ಸೆಲೆ ಸಂದಿತ್ತು
ಎನ್ನಂಗದವಸಾನವ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ

೧೯೭.
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ,
ಅಜಗಣ್ಣ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ,
ಸಿದ್ಧರಾಮಯ್ಯನ ಸಮಾಧಿಸ್ಥಲ-
ಇಂತಿವರ ಕರುಣಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯ

೧೯೮.
ಬಸವಣ್ಣನ ಮನೆಯ ಮಗಳಾಗಿ ಬದುಕಿದೆನಾಗಿ
ತನ್ನ ಕರುಣ ಭಕ್ತಿ ಪ್ರಸಾದವ ಕೊಟ್ಟನು
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕ ಪ್ರಸಾದವ ಕೊಟ್ಟನು
ಪ್ರಭುದೇವರ ತೊತ್ತಿನ ತೊತ್ತಿನ ಮರುದೊತ್ತಿನ
ಮಗಳಾದ ಕಾರಣ
ಜ್ಞಾನ ಪ್ರಸಾದವ ಕೊಟ್ಟನು
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣ ಪ್ರಸಾದವ ಸಿದ್ಧಿಸಿ ಕೊಟ್ಟನು
ಮಡಿವಾಲಯ್ಯನ ಮನೆಮಗಳಾದ ಕಾರಣ
ನಿರ್ಮಳ ಪ್ರಸಾದವ ನಿಶ್ಚಯಿಸಿ ಕೊಟ್ಟನು
ಇಂತೀ ಅಸಂಖ್ಯಾತಗಣಂಗಳೆಲ್ಲರೂ
ತಮ್ಮ ಕರುಣದ ಕಂದನೆಂದು ತಲೆದಡವಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗ್ಯಳಾದೆನು

೧೯೯.
ಹಸಿವಾದರೆ ಊರೊಳಗೆ ಭಿಕ್ಷಾನ್ನಗಳುಂಟು
ತೃಷೆಯಾದರೆ ಕೆರೆ-ಭಾವಿ-ಹಳ್ಳಂಗಳುಂಟು
ಶಯನಕ್ಕೆ ಹಾಳುದೇಗುಲವುಂಟು
ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು

೨೦೦.
ಮನೆಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ
ಬೇಡಿದರೆ ಇಕ್ಕದಂತೆ ಮಾಡಯ್ಯ
ಇಕ್ಕಿದರೆ ನೆಲಕ್ಕೆ ಬೀಳುವಂತೆ ಮಾಡಯ್ಯ
ನೆಲಕ್ಕೆ ಬಿದ್ದರೆ ನಾನೆತ್ತಿಕೊಂಬುದಕೆ ಮುನ್ನವೇ
ಶುನಿ ಎತ್ತಿಕೊಂಬಂತೆ ಮಾಡು
ಚೆನ್ನಮಲ್ಲಿಕಾರ್ಜುನಯ್ಯ!

No comments:

Post a Comment