Monday, November 1, 2010

ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ?=====ಜಿ.ಎಸ್.ಶಿವರುದ್ರಪ್ಪ


ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?



ತಕ್ಕಡಿಯಿಂದ ತಂಬೂರಿಯ ತನಕ
ಸಹಧರ್ಮಿಣಿಯ ಮೂಗುತಿಯ ಮಿನುಗು,
ತಂಬೂರಿಯಿಂದ ತುಂಬುವತನಕ
ಹಾಡಿನ ಮೊಳಗು.

ತಕ್ಕಡಿಯಲ್ಲಿ ತೂಗಿದನು
ಇಹದ ಸರುಕೆಲ್ಲವನು
ಈ ವ್ಯಾಪಾರಿ.
ಗೊತ್ತಾಗಲಿಲ್ಲ ವೈಕುಂಠಕೆ ದಾರಿ.
‘ದಾರಿ ಯಾವುದಯ್ಯಾ ವೈಕುಂಠಕೆ?’
ಪ್ರಶ್ನೆಗುತ್ತರವಾಗಿ ಮೊಳಗಿತ್ತು ಒಳಗಿಂದಲೇ
ಮರುಪ್ರಶ್ನೆ ; ‘ಯಾರು ಹಿತವರು ನಿನಗೆ
ಈ ಮೂವರೊಳಗೆ
ನಾರಿಯೋ? ಧಾರಿಣಿಯೋ? ಬಲುಧನದ ಸಿರಿಯೋ?’

ಉತ್ತರದ ಬೆಳಕನ್ನು ಕಂಡ ; ಹೆಗಲಿಗೇರಿತ್ತು ತಂಬೂರಿ
ಉದ್ದಕ್ಕೂ ತೆರೆದ ಹಾಡಿನ ದಾರಿ
ಪಲ್ಲವಿ ಅನುಪಲ್ಲವಿಗಳಲಿ ಚಲಿಸಿತು ಚರಣ,
ಕನ್ನಡದ ಜನಮನದ ಹೊಸ್ತಿಲಿನಲಿ
ರಾಗದ ಕಿರಣ
ಊರೂರು ಕೇರಿಕೇರಿಗಳಲ್ಲಿ
ದೇವರನಾಮದನುರಣನ.
ಅಂದಿನಿಂದ ಇಂದಿನತನಕ ಕೇಳುತಿದೆ ಅದೇ
ತಂಬೂರಿಯೋಂಕಾರ
ವಿಟ್ಠಲನ ಚರಣದ ಸುತ್ತ ಝೇಂಗುಡುವ
ಭ್ರಮರ
ಕೃಷ್ಣಮಹಿಮೆಯ ಕಥೆಗೆ ಬರೆದ ನಾದದ ಭಾಷ್ಯ
ಈ ಪುರಂದರ.

ಕವನ - ಜಡೆ

ಲಲನೆಯರ ಬೆನ್ನೆನೆಡೆ
ಹಾವಿನೊಲು ಜೋಲ್ವ ಜಡೆ
ಕಾಳಿಂದಿಯಂತಿಳಿದು, ಕೊರಳೆಡೆಗೆ ಕವಲೊಡೆದು
ಅತ್ತಿತ್ತ ಹರಿದ ಜಡೆ!
ಚೇಳ್ ಕೊಂಡಿಯಂಥ ಜಡೆ,
ಮೋಟು ಜಡೆ, ಚೋಟು ಜಡೆ,
ಚಿಕ್ಕವರ ಚಿನ್ನ ಜಡೆ !
ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ
ಗಂಟು ಜಡೆ!
ಅಕ್ಕ ತಂಗಿಯ ಮುಡಿಯ
ಹಿಡಿದು ನಾನೆಳೆದಂಥ
ಮಲ್ಲಿಗೆಯ ಕೆಂಪು ಜಡೆ
ಕೇದಗೆಯ ಹೆಣೆದ ಜಡೆ
ಮಾತೃ ಮಮತಾವೃಕ್ಷ ಬಿಟ್ಟ ಬೀಳಲಿನಂತೆ
ಹರಡಿರುವ ತಾಯ ಜಡೆ !
“ಕುರುಕುಲ ಜೀವಾಕರ್ಷಣ ಪರಿಣತ” - ಆ
ಪಾಂಚಾಲಿಯ ಜಡೆ!
ಸೀತೆಯ ಕಣ್ಣೀರೊಳು ಮಿಂದ ಜಡೆ
ಓ ಓ ಈ ಜಡೆಗೆಲ್ಲಿ ಕಡೆ !

ಸಂಜೆಯಲಿ ಹಗಲು ಕೆದರುವ ಕತ್ತಲೆಯ
ಕಾಳ ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ
ಬೆಳಕು ಜಡೆ
ಒಮ್ಮೊಮ್ಮೆ ಮುಗಿಲಲ್ಲಿ ತೇಲುತ್ತ ಬರುವಂಥ
ಬೆಳ್ಳಕ್ಕಿಗಳ ಜಡೆ
ಕೊಂಚೆಗಳ ಜಡೆ
ಮರ ಮರದಿ ಬಳಕುತಿಹ ಹೂಬಿಟ್ಟ ಬಳ್ಳಿ ಜಡೆ !
ಕಾಡ ಬಯಲಿನ ಹಸುರು ಹಸರದಲಿ ಹರಿ ಹರಿದು
ಮುನ್ನಡೆವ ಹೊಳೆಯ ಜಡೆ !
ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ !
ಗಿರಿ ಶಿವನ ಶಿರದಿಂದ ಹಬ್ಬಿ ಹಸರಿಸಿ ನಿಂದ
ಕಾನನದ ಹಸುರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ
ಹರಡಿರುವ ಮಳೆಯ ಜಡೆ !
ಚಂದ್ರಚೂಡನ
ವ್ಯೋಮಕೇಶನ
ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ ಕಾವ್ಯಗಳ ಶಿಲ್ಪಗಳ ಕಲೆಯ ಜಡೆ
ಎಲ್ಲವೂ ರಮ್ಯವೆಲ್ಲ !
ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ
ಕಾಣದಲ್ಲ !


ಕವನ - ಮಲ್ಲಿಗೆ

ನೋಡು ಇದೋ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ
ಇಷ್ಟು ಹಚ್ಚನೆ ಹಸುರ ಗಿಡದಿಂ-
ದೆಂತು ಮೂಡಿತೋ ಬೆಳ್ಳಗೆ !

ಮೇಲೆ ನಭದಲಿ ನೂರು ತಾರೆಗ-
ಳರಳಿ ಮಿರುಗುವ ಮುನ್ನವೆ
ಬೆಳ್ಳಿಯೊಂದೇ ಬೆಳಗುವವಂದದಿ
ಗಿಡದೊಳೊಂದೇ ಹೂವಿದೆ

ಸತ್ವಶೀಲನ ಧ್ಯಾನ ಮೌನವೆ
ಅರಳಿ ಬಂದೊಲು ತೋರಿದೆ !
ಒಲವು ತುಂಬಿದ ಮುಗುದೆಯೆದೆಯಿಂ-
ದೊಗೆದ ನಲ್ನುಡಿಯಂತಿದೆ

ಕವಿಯ ಮನದಿಂದುಸಿ ಮೆಲ್ಲನೆ
ಅರಳಿ ಬರುವೊಲು ಕಲ್ಪನೆ,
ಎಂಥ ನವುರಿನ ಕುಶಲ ಕಲೆಯಿದು
ತನಗೆ ತಾನೇ ಮೂಡಿದೆ.

ಮೌನದಲಿ ಮೊಳೆಯುತ್ತ ಮೆಲ್ಲನೆ
ತನಗೆ ತಾನೇ ತಿಳಿಯದೆ
ಮೊಗ್ಗಿನಲಿ ಮಲಗಿದ್ದ ಚೆಲುವಿದು
ಇಂದು ಕಣ್ಣನು ತೆರೆದಿದೆ

ಎನಿತು ನವುರಾಗಿಹವು ದಳಗಳು
ಹಸುಳೆ ಕಾಣುವ ಕನಸೊಲು !
ಏನು ಇಂಪಿನ ಕಂಪು ಇದರದು
ಆ ಮಹಾತ್ಮರ ಮನದೊಲು

ಹರಿವ ಮನವನು ಹಿಡಿದು ಒಂದೆಡೆ
ನಿಲಿಸಿ ತೊಳೆದಿದೆ ಹೂವಿದು
ಚೆಲುವು ಬಾಳನು ಹಸುನುಗೊಳಿಸುವ
ಅಚ್ಚರಿಯ ಪರಿ ಎಂಥದು!----ಸಮಕಾಲಿನ ಕವಿಗಳಲ್ಲಿ Neelanjana

1 comment:

  1. ಸರ್ ಕವಿಗಳ ಪ್ರಕಾರ ಆಕಾಶದಲ್ಲಿ ತಾರೆಗಳಿಗಿಂತ ಮೊದಲು ಬೆಳಗುವುದು ಯಾವುದು?

    ReplyDelete